Tag: school

  • ಫ್ಲೋರಿಡಾ ಶಾಲೆಯಲ್ಲಿ ಗುಂಡಿನ ದಾಳಿ ಪ್ರಕರಣ- ಸಮಯಪ್ರಜ್ಞೆ ತೋರಿ ವಿದ್ಯಾರ್ಥಿಗಳ ಜೀವ ಉಳಿಸಿದ್ರು ಭಾರತೀಯ ಮೂಲದ ಶಿಕ್ಷಕಿ

    ಫ್ಲೋರಿಡಾ ಶಾಲೆಯಲ್ಲಿ ಗುಂಡಿನ ದಾಳಿ ಪ್ರಕರಣ- ಸಮಯಪ್ರಜ್ಞೆ ತೋರಿ ವಿದ್ಯಾರ್ಥಿಗಳ ಜೀವ ಉಳಿಸಿದ್ರು ಭಾರತೀಯ ಮೂಲದ ಶಿಕ್ಷಕಿ

    ವಾಷಿಂಗ್ಟನ್: ಕೆಲ ದಿನಗಳ ಹಿಂದೆ ಫ್ಲೋರಿಡಾದ ಶಾಲೆಯೊಂದರಲ್ಲಿ ಮಾಜಿ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿ ವೇಳೆ ಶಾಲೆಯ ಗಣಿತ ಶಿಕ್ಷಕಿ ಸಮಯಪ್ರಜ್ಞೆ ಪ್ರದರ್ಶಿಸಿ ಸಂಭವಿಸಬಹುದಾದ ಹೆಚ್ಚಿನ ಅನಾಹುತ ತಡೆದ ಘಟನೆ ವರದಿಯಾಗಿದೆ.

    ಶಾಲೆಯ ಗಣಿತ ಶಿಕ್ಷಕಿ ಭಾರತ ಮೂಲದ ಶಾಂತಿ ವಿಶ್ವನಾಥನ್ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಅವರನ್ನು ಶಾಲೆಯಲ್ಲಿ `ವಿ’ ಎಂದು ಕರೆಯಲಾಗುತ್ತಿತ್ತು ಎಂದು ತಿಳಿಸಿವೆ.

    ಅಂದು ಎಆರ್-15 ರೈಫಲ್ ನೊಂದಿಗೆ ಶಾಲೆ ಒಳಪ್ರವೇಶಿಸಿದ್ದ ಆರೋಪಿ ಕ್ಯಾಂಪಸ್‍ನಲ್ಲಿ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದ. ಈ ವೇಳೆ ಶಾಲೆಯ ಎಚ್ಚರಿಕೆ ಗಂಟೆ ಮೊಳಗುತ್ತಿದಂತೆ ಎಚ್ಚೆತ ಶಾಂತಿ ಅವರು ವಿದ್ಯಾರ್ಥಿಗಳನ್ನು ಕೊಠಡಿಯ ನೆಲದ ಮೇಲೆ ಮಲಗಲು ಸೂಚಿಸಿದ್ದರು. ಅಲ್ಲದೇ ಕೊಠಡಿಯ ಎಲ್ಲಾ ಕಿಟಕಿ, ಬಾಗಿಲು ಮುಚ್ಚಿ ಯಾರೂ ತರಗತಿಯ ಒಳಪ್ರವೇಶ ಮಾಡದಂತೆ ಮಾಡಿದ್ದರು. ಇದರಿಂದ ಆರೋಪಿಗೆ ತರಗತಿಯಲ್ಲಿ ವಿದ್ಯಾರ್ಥಿಗಳು ಇರುವ ಸಂಗತಿ ತಿಳಿಯದಂತೆ ಮಾಡಿದ್ದರು ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಿಲಾಗಿದೆ.

    ಈ ನಡುವೆ ಪೊಲೀಸ್ ತಂಡ ಬಂದು ತರಗತಿಯ ಬಾಗಿಲು ತೆರೆಯುವಂತೆ ಬಾಗಿಲು ಬಡಿದರೂ ಶಾಂತಿ ಅವರು ಬಾಗಿಲು ತೆರೆಯಲು ನಿರಾಕರಿಸಿದ್ದರು. ಆರೋಪಿಯೇ ಪೊಲೀಸರಂತೆ ನಟಿಸುತ್ತಿರಬಹುದು ಎಂದು ಹೆದರಿ, ಬಾಗಿಲು ಒಡೆಯಿರಿ ಅಥವಾ ಕೀ ಬಳಸಿ ಒಳಗೆ ಬನ್ನಿ. ಯಾವುದೇ ಕಾರಣಕ್ಕೂ ನಾನು ಬಾಗಿಲು ತೆರೆಯುವುದಿಲ್ಲ ಎಂದು ಶಿಕ್ಷಕಿ ಹೇಳಿದ್ದರು. ನಂತರ ಪೊಲೀಸ್ ತಂಡದಲ್ಲಿದ್ದವರೊಬ್ಬರು ಕಿಟಕಿ ಮುಖಾಂತರ ವಿದ್ಯಾರ್ಥಿಗಳನ್ನ ಹೊರಗೆ ಕರೆತಂದರು ಎಂದು ವಿದ್ಯಾಥಿಯೊಬ್ಬರು ಇಲ್ಲಿನ ಪತ್ರಿಕೆಗೆ ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಲಾ ವಿದ್ಯಾರ್ಥಿಗಳ ಪೋಷಕರು ಶಿಕ್ಷಕಿಯ ಧೈರ್ಯ ಹಾಗೂ ಬುದ್ಧಿವಂತಿಕೆಗೆ ಮೆಚ್ಚುಗೆ ಸೂಚಿಸಿದ್ದು, ಅವರು ಸಮಯಪ್ರಜ್ಞೆಯಿಂದ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಏನಿದು ಘಟನೆ: ಫ್ಲೋರಿಡಾದ ಪಾರ್ಕ್‍ಲ್ಯಾಂಡ್ ನಲ್ಲಿರುವ ಮಜಾರ್‍ಒರಿ ಸ್ಟೋನ್‍ಮ್ಯಾನ್ ಡೌಗ್ಲಾಸ್ ಹೈಸ್ಕೂಲ್‍ನ ಶಾಲೆಯ ಮಾಜಿ ವಿದ್ಯಾರ್ಥಿ ನಿಕೊಲಾಸ್ ಕ್ರೂಸ್(19) ಶಾಲೆಯ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿ 17 ವಿದ್ಯಾರ್ಥಿಗಳ ಸಾವಿಗೆ ಕಾರಣನಾಗಿದ್ದ. ಗುಂಡಿನ ದಾಳಿ ನಡೆದ ಕೆಲವು ಗಂಟೆಗಳಲ್ಲಿ ಆರೋಪಿ ನಿಕೊಲಾಸ್ ನನ್ನು ಪೊಲೀಸರು ಬಂಧಿಸಿದ್ದರು. ಈತನನ್ನು ಅಶಿಸ್ತಿನ ಕಾರಣ ಶಾಲೆಯಿಂದ ಹೊರಹಾಕಲಾಗಿತ್ತು. ನಿಕೊಲಾಸ್ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ವರದಿಯಾಗಿದೆ.

  • ಖಾಸಗಿ ಶಾಲೆಯಲ್ಲಿ 40 ಕ್ಕೂ ಅಧಿಕ ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದ ಹೆಜ್ಜೇನು

    ಖಾಸಗಿ ಶಾಲೆಯಲ್ಲಿ 40 ಕ್ಕೂ ಅಧಿಕ ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದ ಹೆಜ್ಜೇನು

    ಹಾವೇರಿ: ಬಿಸಿಲಿನ ತಾಪಮಾನ ಹೆಚ್ಚಳಗೊಂಡ ಪರಿಣಾಮ ಖಾಸಗಿ ಶಾಲೆಯಲ್ಲಿ ಮಕ್ಕಳ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ.

    ಹಾವೇರಿಯ ವಿದ್ಯಾನಗರದಲ್ಲಿರೋ ಕೆ.ಎಲ್.ಇ ಶಿಕ್ಷಣಸಂಸ್ಥೆಯ ಕಟ್ಟಡದಲ್ಲಿರೋ ಜೇನುಹುಳುಗಳು ದಾಳಿ ಮಾಡಿ 40 ಕ್ಕೂ ಅಧಿಕ ಮಕ್ಕಳು ಗಾಯಗೊಂಡಿದ್ದಾರೆ. ಒಂದು, ಎರಡು ಹಾಗೂ ಮೂರನೇ ತರಗತಿಯ ವಿದ್ಯಾರ್ಥಿಗಳ ಕೊಠಡಿ ಬಳಿ ಇರೋ ಹೆಜ್ಜೇನು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿವೆ.

    ಕೂಡಲೇ ವಿದ್ಯಾರ್ಥಿಗಳನ್ನ ಅಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ಪೋಷಕರಿಗೆ ತಿಳಿಯುತ್ತಿದ್ದಂತೆ ಶಾಲೆಯ ಮುಂದೆ ಪೋಷಕರು ಜಮಾವಣೆಗೊಂಡಿದ್ದಾರೆ. ನಗರಸಭೆಯ ಸಿಬ್ಬಂದಿ ಹೆಜ್ಜೇನು ಇರೋ ಕಡೆ ಫಾಗಿಂಗ್ ವ್ಯವಸ್ಥೆ ಮಾಡಿ ಹೆಜ್ಜೇನು ನಿಯಂತ್ರಣ ಮಾಡುವ ವ್ಯವಸ್ಥೆ ಮಾಡಿದ್ದಾರೆ.

    ಈ ಘಟನೆಯಲ್ಲಿ ಯಾವುದೇ ಮಕ್ಕಳಿಗೆ ಪ್ರಾಣಾಪಾಯವಾಗಿಲ್ಲ. ಕೆಲಕಾಲ ಪೋಷಕರು ಆತಂಕಕ್ಕೆ ಒಳಗಾಗಿ, ಮಕ್ಕಳನ್ನ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ.

  • ಶಾಲೆಯಿಂದ ಹೊರಹಾಕಲಾಗಿದ್ದ ವಿದ್ಯಾರ್ಥಿಯಿಂದ ಗುಂಡಿನ ದಾಳಿ- 17 ಮಂದಿ ಸಾವು

    ಶಾಲೆಯಿಂದ ಹೊರಹಾಕಲಾಗಿದ್ದ ವಿದ್ಯಾರ್ಥಿಯಿಂದ ಗುಂಡಿನ ದಾಳಿ- 17 ಮಂದಿ ಸಾವು

    ವಾಷಿಂಗ್ಟನ್: ಫ್ಲೋರಿಡಾದ ಶಾಲೆಯೊಂದರಲ್ಲಿ ಮಾಜಿ ವಿದ್ಯಾರ್ಥಿಯೊಬ್ಬ ಬುಧವಾರದಂದು ಗುಂಡಿನ ದಾಳಿ ನಡೆಸಿದ ಪರಿಣಾಮ 17 ಮಂದಿ ಸಾವನ್ನಪ್ಪಿದ್ದಾರೆ.

    ಎಆರ್-15 ರೈಫಲ್ ನೊಂದಿಗೆ ಬಂದಿದ್ದ ಆರೋಪಿ ಶಾಲೆಯ ಕ್ಯಾಂಪಸ್‍ನಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಇಲ್ಲಿನ ಪಾರ್ಕ್‍ಲ್ಯಾಂಡ್ ನಲಿರುವ ಮಜಾರ್ಒರಿ ಸ್ಟೋನ್‍ಮ್ಯಾನ್ ಡೌಗ್ಲಾಸ್ ಹೈಸ್ಕೂಲ್‍ನ ಶಾಲೆಯ ಮಾಜಿ ವಿದ್ಯಾರ್ಥಿ ನಿಕೊಲಾಸ್ ಕ್ರೂಸ್(19) ಈ ಕೃತ್ಯವೆಸಗಿದ್ದಾನೆ. ಈತನನ್ನು ಅಶಿಸ್ತಿನ ಕಾರಣ ಶಾಲೆಯಿಂದ ಹೊರಹಾಕಲಾಗಿತ್ತು ಎಂದು ವರದಿಯಾಗಿದೆ. ದಾಳಿಯಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಶಾಲೆಯ ಕುರ್ಚಿ, ಬೆಂಚ್‍ಗಳ ಕೆಳಗೆ ಅಡಗಿ ಸಹಾಯಕ್ಕಾಗಿ ಫೋನ್‍ನಲ್ಲಿ ಮೆಸೇಜ್ ಕೂಡ ಮಾಡಿದ್ದಾರೆ.

     

    ಆರೋಪಿ ಕ್ರೂಸ್‍ನನ್ನು ಕೋರಲ್ ಸ್ಪ್ರಿಂಗ್ಸ್ ಟೌನ್ ಬಳಿ ಬಂಧಿಸಲಾಗಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಾವು ಈಗಾಗಲೇ ಆತನ ವೆಬ್‍ಸೈಟ್‍ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಅಂಶಗಳನ್ನ ಪರಿಶೀಲಿಸುತ್ತಿದ್ದೇವೆ. ಕೆಲವು ಅಂಶಗಳು ತುಂಬಾ ಆತಂಕಕಾರಿಯಾಗಿದೆ ಎಂದು ಬ್ರೋವಾರ್ಡ್ ಕೌಂಟಿಯ ಶೆರಿಫ್ ಸ್ಕಾಟ್ ಇಸ್ರೇಲ್ ತಿಳಿಸಿದ್ದಾರೆ.

    ಘಟನೆಯಲ್ಲಿ ಗಾಯೊಗೊಂಡವರ ಸಂಖ್ಯೆ ಬಗ್ಗೆ ನಿರ್ದಿಷ್ಟವಾಗಿ ಗೊತ್ತಿಲ್ಲ. ಆದ್ರೆ ಕನಿಷ್ಟ 14 ಜನರನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಇಬ್ಬರು ಗಾಯಾಳುಗಳು ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

  • 13ರ ಬಾಲಕಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ- ಇಂದು ಕಿಸ್ ಡೇ ಎಂದು ಹೇಳಿ ಸ್ಟಾಫ್ ರೂಮ್ ಬಾಗಿಲು ಹಾಕ್ದ ಕಾಮುಕ

    13ರ ಬಾಲಕಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ- ಇಂದು ಕಿಸ್ ಡೇ ಎಂದು ಹೇಳಿ ಸ್ಟಾಫ್ ರೂಮ್ ಬಾಗಿಲು ಹಾಕ್ದ ಕಾಮುಕ

    ಗಾಂಧಿನಗರ: ಶಿಕ್ಷಕನೊಬ್ಬ ನೋಟ್ಸ್ ಚೆಕ್ ಮಾಡುವುದಾಗಿ ಹೇಳಿ ಸ್ಟಾಫ್ ರೂಮಿನಲ್ಲೇ 6ನೇ ಕ್ಲಾಸ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರೋ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಇಲ್ಲಿನ ವಲ್ಸದ್ ಜಿಲ್ಲೆಯ ಗಾಂಧಿವಾಡಿಯ ಸರಸ್ವತಿ ಹಿಂದಿ ಹೈಸ್ಕೂಲ್‍ನಲ್ಲಿ ಸೋಮವಾರದಂದು ಶಿಕ್ಷಕ ಈ ಕೃತ್ಯವೆಸಗಿದ್ದಾನೆ. ಇವತ್ತು ಕಿಸ್ ಡೇ ಎಂದು ಹೇಳಿ ಬಾಲಕಿಗೆ ಶಿಕ್ಷಕ ಚುಂಬಿಸಿದ್ದಾನೆ. ಈ ಬಗ್ಗೆ ಬಾಲಕಿ ಪೋಷಕರಿಗೆ ವಿಷಯ ತಿಳಿಸಿದ ಬಳಿಕ ಶಿಕ್ಷಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು, ಘಟನೆ ನಡೆದಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.

    ಬಾಲಕಿಯ ಪೋಷಕರು ಉಮರ್‍ಗಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 6ನೇ ಕ್ಲಾಸ್‍ನಲ್ಲಿ ಓದುತ್ತಿದ್ದ 13 ವರ್ಷದ ಬಾಲಕಿಯನ್ನ ವಿಜ್ಞಾನ ವಿಭಾಗದ ಶಿಕ್ಷಕ ಓಂ ಪ್ರಕಾಶ್ ಯಾದವ್ ಸೋಮವಾರ ಮಧ್ಯಾಹ್ನ 2.30ರ ವೇಳೆಯಲ್ಲಿ ಸ್ಟಾಫ್ ರೂಮಿಗೆ ಕರೆಸಿದ್ದ. ಕ್ಲಾಸ್ ನೋಟ್ಸ್‍ಗಳನ್ನ ಚೆಕ್ ಮಾಡ್ತೀನಿ, ಎಲ್ಲರೂ ನೋಟ್ ಪುಸ್ತಕಗಳನ್ನ ಕಳಿಸಬೇಕೆಂದು ಹೇಳುವಂತೆ ಮತ್ತೊಬ್ಬ ವಿದ್ಯಾರ್ಥಿಯನ್ನ ಕಳಿಸಿದ್ದ.

    ಬಾಲಕಿ ಎಲ್ಲರ ಪುಸ್ತಕಗಳನ್ನ ಸಂಗ್ರಹಿಸಿ ಸ್ಟಾಫ್ ರೂಮಿಗೆ ಹೋಗಿದ್ದಳು. ಈ ವೇಳೆ ಶಿಕ್ಷಕ ಓಂ ಪ್ರಕಾಶ್ ಎಲ್ಲಾ ಪುಸ್ತಕಗಳನ್ನ ನೋಡಲು ಸಾಧ್ಯವಿಲ್ಲ ಎಂದು ಹೇಳಿ ಬಾಗಿಲು ಹಾಕಿದ್ದ. ನಂತರ ಇಂದು ಕಿಸ್ ಡೇ ಎಂದು ಹೇಳಿ ಬಾಲಕಿಗೆ ಕಿಸ್ ಮಾಡಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬಾಲಕಿ ಮನೆಗೆ ಬಂದ ಬಳಿಕ ಪೋಷಕರಿಗೆ ವಿಷಯ ತಿಳಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ವಿಷಯ ತಿಳಿಯುತ್ತಿದ್ದಂತೆ ಹಲವಾರು ಪೋಷಕರು ಶಾಲೆಗೆ ಹೋಗಿ ಪ್ರಿನ್ಸಿಪಾಲ್‍ಗೆ ಈ ಬಗ್ಗೆ ತಿಳಿಸಿದ್ದಾರೆ. ನಂತರ ಕಾಮುಕ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಕ್ಲಾಸ್‍ನಲ್ಲಿ ಹುಡುಗಿಯನ್ನ ಗುರಾಯಿಸಿದನೆಂದು ಸಹಪಾಠಿಗಳಿಂದಲೇ 10ನೇ ತರಗತಿ ಬಾಲಕನ ಕೊಲೆ!

    ಕ್ಲಾಸ್‍ನಲ್ಲಿ ಹುಡುಗಿಯನ್ನ ಗುರಾಯಿಸಿದನೆಂದು ಸಹಪಾಠಿಗಳಿಂದಲೇ 10ನೇ ತರಗತಿ ಬಾಲಕನ ಕೊಲೆ!

    ಮುಂಬೈ: 10ನೇ ತರಗತಿ ಬಾಲಕನನ್ನು ಸಹಪಾಠಿಗಳೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಬುಧವಾರದಂದು ನಡೆದಿದೆ.

    ಮೃತ ಬಾಲಕನ ಸಹಪಾಠಿಗಳಾದ ಇಬ್ಬರು ವಿದ್ಯಾರ್ಥಿಗಳು ಕೃತ್ಯ ನಡೆದ ನಂತರ ಶಾಲೆಗೆ ಗೈರಾಗಿದ್ದರು. ಅವರಿಬ್ಬರನ್ನು ಬಂಧಿಸಿದ್ದು, ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪ್ರಾಥಮಿಕ ತನಿಖೆಯ ಪ್ರಕಾರ ಬಾಲಕ ತನ್ನ ತರಗತಿಯಲ್ಲಿ ಹುಡುಗಿಯೊಬ್ಬಳನ್ನ ಗುರಾಯಿಸಿದ್ದಕ್ಕೆ ಆರೋಪಿ ವಿದ್ಯಾಥಿಗಳು ವಿರೋಧಿಸಿದ್ದು, ಕುಡುಗೋಲಿನಿಂದ ದಾಳಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಆರೋಪಿಗಳಲ್ಲಿ ಒಬ್ಬ ಅಪ್ತಾಪ್ತನಾಗಿದ್ದು, ಮತ್ತೊಬ್ಬನಿಗೆ 20 ವರ್ಷ ವಯಸ್ಸು. ಶಾಲೆಯಲ್ಲಿ ಅಂದು 10ನೇ ತರಗತಿಯವರಿಗೆ ಪ್ರಾಕ್ಟಿಕಲ್ ಟೆಸ್ಟ್ ನಿಗದಿಯಾಗಿತ್ತು. ಆದ್ರೆ ಅದಕ್ಕೂ ಮುಂಚೆ ಶಾಲೆಯ ಕಂಪ್ಯೂಟರ್ ರೂಮಿನ ಬಳಿ ಆರೋಪಿಗಳಿಬ್ಬರೂ ಕುಡುಗೋಲಿನಿಂದ 16 ವರ್ಷದ ಬಾಲಕನ ಮೇಲೆ ದಾಳಿ ಮಾಡಿದ್ದಾರೆ. ಬಾಲಕನನ್ನು ಶಾಲೆಯವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದ ಎಂದು ಅವರು ಹೇಳಿದ್ದಾರೆ.

    ಘಟನೆ ನಡೆದ ದಿನದಿಂದ ಇಬ್ಬರು ಬಾಲಕರು ನಾಪತ್ತೆಯಾಗಿದ್ದರಿಂದ ಈ ಕೃತ್ಯದಲ್ಲಿ ಅವರ ಪಾತ್ರವಿರಬಹುದೆಂದು ಶಂಕಿಸಲಾಗಿತ್ತು. ಅವರಿಬ್ಬರೂ ಪ್ರಾಕ್ಟಿಕಲ್ ಪರೀಕ್ಷೆಗೂ ಹಾಜರಾಗಿರಲಿಲ್ಲ ಎಂದು ನಾಟೆಪುಟೆ ಪೊಲೀಸ್ ಠಾಣೆಯ ಇನ್ ಚಾರ್ಜ್ ರಾಜ್‍ಕುಮಾರ್ ಭುಜ್ಪಾಲ್ ಹೇಳಿದ್ದಾರೆ.

    ಹುಡುಗಿಯೊಬ್ಬಳನ್ನು ಗುರಾಯಿಸುತ್ತಿದ್ದ ಎಂದು ಆರೋಪಿಸಿದ ನಂತರ ಇಬ್ಬರು ಆರೋಪಿಗಳು ಹಾಗೂ 16ರ ಬಾಲಕನ ನಡುವೆ ಜಗಳ ನಡೆದಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

  • 1ನೇ ಕ್ಲಾಸ್ ವಿದ್ಯಾರ್ಥಿಗೆ ಮೂತ್ರ ಮಿಕ್ಸ್ ಮಾಡಿದ ಜ್ಯೂಸ್ ಕುಡಿಯುವ ಶಿಕ್ಷೆ ನೀಡಿದ ಶಿಕ್ಷಕ

    1ನೇ ಕ್ಲಾಸ್ ವಿದ್ಯಾರ್ಥಿಗೆ ಮೂತ್ರ ಮಿಕ್ಸ್ ಮಾಡಿದ ಜ್ಯೂಸ್ ಕುಡಿಯುವ ಶಿಕ್ಷೆ ನೀಡಿದ ಶಿಕ್ಷಕ

    ಹೈದರಾಬಾದ್: ಒಂದನೇ ತರಗತಿಯ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ಮೂತ್ರ ಮಿಶ್ರಿತ ಜ್ಯೂಸ್ ಕುಡಿಯುವಂತೆ ಅಮಾನವೀಯ ಶಿಕ್ಷೆ ನೀಡಿರುವ ಘಟನೆ ಆಂಧ್ರ ಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರ ವಿದ್ಯಾರ್ಥಿಗೆ ಅಮಾನವೀಯ ಶಿಕ್ಷೆ ನೀಡಿದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಎಸ್‍ಪಿಆರ್ ವಿದ್ಯಾ ಕಾನ್ಸಪ್ಟ್ ಶಾಲೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ಶಾಲೆಯ ದೈಹಿಕ ಶಿಕ್ಷಕ ವಿಜಯ್ ಕುಮಾರ್ ಬಂಧಿತ ಶಿಕ್ಷಕ.

    ಶಾಲೆಯಲ್ಲಿ ನಡೆದಿದ್ದೇನು?: ಒಂದನೇ ತರಗತಿಯ ವಿದ್ಯಾರ್ಥಿಯೊಬ್ಬ ತಮಾಷೆಗಾಗಿ ತನ್ನ ಸಹಪಾಠಿಯ ಹಣ್ಣಿನ ಜ್ಯೂಸ್‍ನಲ್ಲಿ ಮೂತ್ರವನ್ನು ಬೆರೆಸಿದ್ದಾನೆ. ತನ್ನ ಸಹಪಾಠಿ ಜ್ಯೂಸ್ ಕುಡಿಯುವಾಗ ಅದರಲ್ಲಿ ಮೂತ್ರ ಮಿಕ್ಸ್ ಆಗಿದೆ ಕುಡಿಯಬೇಡ ಅಂತಾ ಹೇಳಿದ್ದಾನೆ. ಕೂಡಲೇ ಜ್ಯೂಸ್ ತಂದಿದ್ದ ವಿದ್ಯಾರ್ಥಿನಿ ದೈಹಿಕ ಶಿಕ್ಷಕ ವಿಜಯ್ ಕುಮಾರ್‍ಗೆ ದೂರು ನೀಡಿದ್ದಾಳೆ.

    ವಿಷಯ ತಿಳಿದ ವಿಜಯ್ ಕುಮಾರ್ ಮೂತ್ರ ಮಿಕ್ಸ್ ಆಗಿದ್ದ ಜ್ಯೂಸ್ ಕುಡಿಯುವಂತೆ ಒತ್ತಾಯಿಸಿದ್ದಾರೆ. ವಿಷಯ ತಿಳಿದು ಶಾಲೆಗೆ ಬಂದ ಪೋಷಕರ ಮುಂದೆಯೂ ವಿಜಯ್ ಕುಮಾರ್ ತಾನು ನೀಡಿರುವ ಶಿಕ್ಷೆಯನ್ನು ಸಮರ್ಥಿಸಿಕೊಂಡಿದ್ದಾನೆ. ವಿಜಯ್ ಕುಮಾರ್ ವಿರುದ್ಧ ದೂರು ದಾಖಲಾದ ಬಳಿಕ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ.

    ಶಿಕ್ಷಕನನ್ನು ವಿಚಾರಣೆ ನಡೆಸಿದ ಬಳಿಕ ಐಪಿಸಿ ಸೆಕ್ಷನ್ 270 (ಜೀವಕ್ಕೆ ಅಪಾಯವಾಗುವಂತಹ ಹಾನಿಕಾರಕ ಕ್ರಿಯೆಗೆ ಪ್ರಚೋದನೆ) ಮತ್ತು ಸೆಕ್ಷನ್ 75 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಪಿ.ಎ.ಸೂರ್ಯನಾರಾಯಣ ರೆಡ್ಡಿ ಹೇಳಿದ್ದಾರೆ.

  • ಶಾಲೆಯಲ್ಲಿ ತಪ್ಪು ಮಾಡಿದ್ದಾಳೆಂದು 20 ವರ್ಷದಿಂದ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಪೋಷಕರು

    ಶಾಲೆಯಲ್ಲಿ ತಪ್ಪು ಮಾಡಿದ್ದಾಳೆಂದು 20 ವರ್ಷದಿಂದ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಪೋಷಕರು

    ಮಂಗಳೂರು: ಶಾಲೆಯಲ್ಲಿ ತಪ್ಪು ಮಾಡಿದಳೆಂಬ ಕಾರಣಕ್ಕಾಗಿ ಯುವತಿಯನ್ನು 20 ವರ್ಷದಿಂದ ಮನೆಯ ಕತ್ತಲೆ ಕೋಣೆಯೊಳಗೆ ಕೂಡಿ ಹಾಕಿ ಮನೆ ಮಂದಿ ಅಮಾನವೀಯತೆ ಮೆರೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪದಲ್ಲಿ ನಡೆದಿದೆ.

    ಮಲ್ಲಿಕಾ (35) ಕತ್ತಲೆ ಕೋಣೆಯಲ್ಲಿದ್ದ ಯುವತಿ. ಕಳೆದ 20 ವರ್ಷದ ಹಿಂದೆ ಶಾಲೆಯಲ್ಲಿ ತಪ್ಪು ಮಾಡಿದಳೆಂಬ ಕಾರಣಕ್ಕಾಗಿ ಮಲ್ಲಿಕಾ ತಂದೆ ಮನೆಯ ಕೋಣೆಯ ಒಳಗೆ ಕೂಡಿ ಹಾಕಿದ್ದು, ಅಂದಿನಿಂದ ಇಂದಿನವರೆಗೆ ಮನೆ ಒಳಗೆಯೇ ಇದ್ದಾಳೆ. ಮಲ್ಲಿಕಾ ಬೆಳಕು ಕಾಣದೆ 20 ವರ್ಷ ಆಗಿತ್ತು.

    ಮಲ್ಲಿಕಾ ಅಕ್ಕ ದಿನಕ್ಕೆ ಒಂದು ಬಾರಿ ಆಕೆಗೆ ಊಟ ಕೊಟ್ಟು ಬಾಗಿಲು ಹಾಕಿ ಹೋಗುತ್ತಿದ್ದರು. 20 ವರ್ಷದಿಂದ ಇದೇ ಪರಿಪಾಟ ನಡೆಯುತ್ತಿದೆ. ಭಾನುವಾರದಂದು ಸ್ಥಳೀಯರು ಮನೆ ಬಳಿ ಹೋದಾಗ ವಿಷಯ ಗೊತ್ತಾಗಿದೆ. ಮನೆ ಮಂದಿ ಕೇಳಿದರೆ ಇದು ಕೌಟುಂಬಿಕ ವಿಚಾರ ಎಂದು ಗದರಿಸಿದ್ದಾರೆ.

    ಸ್ಥಳೀಯರು ಇಂದು ಮತ್ತೆ ಮನೆ ಬಳಿ ಹೋದಾಗ ಮಲ್ಲಿಕಾಳನ್ನು ಒಬ್ಬಂಟಿಯಾಗಿ ಬಿಟ್ಟು ಬಾಗಿಲು ಹಾಕಿ ಹೋಗಿದ್ದಾರೆ. ಮಾನವ ಹಕ್ಕುಗಳ ಆಯೋಗಕ್ಕೆ ಸ್ಥಳೀಯರು ಮಾಹಿತಿ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

    ಮಲ್ಲಿಕಾ ತಂದೆ ತೀರಿ ಹೋಗಿದ್ದು, ತಾಯಿಗೆ ಹುಷಾರಿಲ್ಲದೇ ಮಗಳ ಮನೆ ಸೇರಿದ್ದಾರೆ.

  • ಮಕ್ಕಳಿಗೆ ಅನಧಿಕೃತ ರಜೆ ನೀಡಿ ಶಾಲೆಯ ಪಕ್ಕದಲ್ಲೇ ಮದ್ಯದ ಅಮಲಿನಲ್ಲಿ ತೇಲಾಡಿದ ಶಿಕ್ಷಕರು!

    ಮಕ್ಕಳಿಗೆ ಅನಧಿಕೃತ ರಜೆ ನೀಡಿ ಶಾಲೆಯ ಪಕ್ಕದಲ್ಲೇ ಮದ್ಯದ ಅಮಲಿನಲ್ಲಿ ತೇಲಾಡಿದ ಶಿಕ್ಷಕರು!

    ವಿಜಯಪುರ: ಶಾಲಾ ಅವಧಿಯಲ್ಲಿಯೇ ಮಕ್ಕಳಿಗೆ ರಜೆ ನೀಡಿ ಮುಖ್ಯೋಪಾಧ್ಯಾಯ ಹಾಗೂ ಸಹ ಶಿಕ್ಷಕರು ಗುಂಡು-ತುಂಡು ಪಾರ್ಟಿ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರಕ್ಕಸಗಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎ. ಹೆಚ್ ಬಿರಾದಾರ್ ಹಾಗೂ 4 ಜನ ಶಿಕ್ಷಕರು ಜಮೀನೊಂದರಲ್ಲಿ ಪಾರ್ಟಿ ಮಾಡಿದ್ದಾರೆ. ಈ ಘಟನೆ ಜನವರಿ 31 ರಂದು ನಡೆದಿದ್ದು, ಶಿಕ್ಷಕರ ಈ ಆಟಾಟೋಪಕ್ಕೆ ಆಕ್ರೋಶಗೊಂಡ ಸಾರ್ವಜನಿಕರು ಹಾಗೂ ಪಾಲಕರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ಈ ವೇಳೆ ನಾನು ಸುರಪೂರದ ದೊರೆ. ನನ್ನನ್ನು ಯಾರು ಕೇಳೋರು? ಎಂದು ಕುಡಿದ ಅಮಲಿನಲ್ಲಿ ಮುಖ್ಯೋಪಾಧ್ಯಾಯ ಬಿರಾದಾರ್ ಅವಾಜ್ ಹಾಕಿದ್ದಾನೆ.

    ಶಾಲೆ ಶಿಕ್ಷಕ ಆರ್.ಬಿ ಲಮಾಣಿ ಅವರು ನಿವೃತ್ತಿ ಆದ ಮೇಲೆ ಬಿರಾದಾರ್ ಹಾಗೂ ಸಹ ಶಿಕ್ಷಕರು ಸೇರಿ ಜನವರಿ 31 ರಂದು ಮಧ್ಯಾಹ್ನ ಮಕ್ಕಳಿಗೆ ಶಾಲೆಗೆ ಅನಧಿಕೃತವಾಗಿ ರಜೆ ನೀಡಿ ಎಲ್ಲರೂ ಶಾಲೆಯ ಪಕ್ಕದಲ್ಲೇ ಇದ್ದ ಜಮೀನಿನಲ್ಲೇ ಗುಂಡು-ತುಂಡಿನ ಬಾಡೂಟ ಮಾಡಿ ಮದ್ಯದ ಅಮಲಿನಲ್ಲಿ ತೇಲಿದ್ದಾರೆ. ಇದೇ ವೇಳೆ ಮಕ್ಕಳಿಂದ ಮಾಹಿತಿ ಪಡೆದು ಗುಂಡು ಪಾರ್ಟಿ ಮಾಡುತ್ತಿದ್ದ ಸ್ಥಳಕ್ಕೆ ಹೋದ ಸಾರ್ವಜನಿಕರಿಗೆ ಕುಡಿದ ಅಮಲಿನಲ್ಲಿ ಶಿಕ್ಷಕರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.

    ಬಿಇಓ ಗೆ ಹೇಳುತ್ತೇವೆ ಎಂದರೆ ಬಿಇಓ ಗೂ ಕೂಡ ನಿಂದಿಸಿದ್ದಾರೆ. ಕುಡುಕ ಶಿಕ್ಷಕರ ಆಟಾಟೋಪ ಮೊಬೈಲ್ ನಲ್ಲಿ ಸೆರೆಯಾಗಿದೆ. ಇನ್ನು ಪ್ರಕರಣ ಕುರಿತು ಶಾಸಕ ನಾಡಗೌಡ ಅಮಾನತ್ತಿಗೆ ಆದೇಶ ನೀಡಿದ್ದಾರೆ. ಅಲ್ಲದೇ ಬಿಇಓ ಎಸ್.ಡಿ ಗಂಜಿ, ಅಮಾನತ್ತಿಗೆ ಡಿಡಿಪಿಐಗೆ ಶಿಫಾರಸ್ಸು ಪತ್ರ ರವಾನಿಸಿದ್ದಾರೆ.

  • ಬಡಮಕ್ಕಳ ಬದುಕು ರೂಪಿಸಲು ಪಣ – ಬೆಳಗಿನ ಜಾವ 4 ಗಂಟೆಗೆ ಬಂದು ಮಕ್ಕಳನ್ನ ಓದಿಸೋ ಮೇಷ್ಟ್ರು

    ಬಡಮಕ್ಕಳ ಬದುಕು ರೂಪಿಸಲು ಪಣ – ಬೆಳಗಿನ ಜಾವ 4 ಗಂಟೆಗೆ ಬಂದು ಮಕ್ಕಳನ್ನ ಓದಿಸೋ ಮೇಷ್ಟ್ರು

    ರಾಯಚೂರು: ಸರ್ಕಾರಿ ಶಾಲೆ ಆರಂಭವಾದ್ರೂ ಸರಿಯಾದ ಟೈಮ್‍ಗೆ ಮೇಷ್ಟ್ರು ಬರಲ್ಲ ಎಂಬ ಮಾತುಗಳು ಕೇಳಿ ಬರುತ್ತವೆ. ಇದಕ್ಕೆ ಅಪವಾದ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಮೌನೇಶ್ ಮೇಷ್ಟ್ರು.

    ಮೌನೇಶ್ ಕುಂಬಾರ್ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಸರ್ಜಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತನ್ನಂತೆ ಬಡ ಮಕ್ಕಳು ವಿದ್ಯಾಭ್ಯಾಸದಿಂದ ಹಿಂದುಳಿಯಬಾರದು ಅಂತ ಶಪಥತೊಟ್ಟು ಶ್ರಮಿಸ್ತಿದ್ದಾರೆ. “ಎದ್ದೇಳು ಮಂಜುನಾಥ” ಅಂತ ಯೋಜನೆ ರೂಪಿಸಿ ಮುಂಜಾನೆಯೇ ಎದ್ದು ನಾಲ್ಕೈದು ಗಂಟೆಗೆ 5 ಕಿ.ಮೀ ದೂರದ ಲಿಂಗಸುಗೂರಿನಿಂದ ಸರ್ಜಾಪೂರಕ್ಕೆ ಬರುತ್ತಾರೆ. ಒಂದು ವೇಳೆ ಶಿಕ್ಷಕರು ಬರಲಿಲ್ಲ ಅಂದ್ರೆ ವಿದ್ಯಾರ್ಥಿಗಳೇ ತಾವು ಓದ್ತಿರೋ ಬಗ್ಗೆ ಮಿಸ್ ಕಾಲ್ ಕೊಡಬೇಕು.

    ಸರ್ಜಾಪೂರದ ಈ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆಯೇನಲ್ಲ. ವಿಜ್ಞಾನ, ಗಣಿತ ಹಾಗೂ ಭಾಷಾ ಪ್ರಯೋಗಾಲಯಗಳು ಇಡೀ ಜಿಲ್ಲೆಗೆ ಮಾದರಿಯಾಗಿವೆ. ಹೆಡ್‍ಮೇಷ್ಟ್ರು ಮೌನೇಶ್ ಅವರ ಈ ಕಾರ್ಯಕ್ಕೆ ಶಾಲೆಯ 8 ಜನ ಸಹ ಶಿಕ್ಷಕರು ಸಾಥ್ ನೀಡಿದ್ದಾರೆ.

    ಸರ್ಜಾಪೂರದ ಜೊತೆಗೆ ಕುಪ್ಪಿಗುಡ್ಡ ಗ್ರಾಮ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಅಧ್ಯಯನ ಮಾಡ್ತಿದ್ದು, ಇಲ್ಲಿನ ಪಾಠ ಪ್ರವಚನದ ಗುಣಮಟ್ಟ ಕಂಡು ಲಿಂಗಸುಗೂರು ತಾಲೂಕು ಕೇಂದ್ರದಿಂದಲೂ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ.

  • ಶಾಲೆಯ ಟಾಯ್ಲೆಟ್ ನಲ್ಲಿ 9ನೇ ಕ್ಲಾಸ್ ವಿದ್ಯಾರ್ಥಿ ಅನುಮಾನಾಸ್ಪದ ಸಾವು- ಕೊಲೆ ಎಂದು ಪೋಷಕರ ಆರೋಪ

    ಶಾಲೆಯ ಟಾಯ್ಲೆಟ್ ನಲ್ಲಿ 9ನೇ ಕ್ಲಾಸ್ ವಿದ್ಯಾರ್ಥಿ ಅನುಮಾನಾಸ್ಪದ ಸಾವು- ಕೊಲೆ ಎಂದು ಪೋಷಕರ ಆರೋಪ

    ನವದೆಹಲಿ: ಗುರ್ಗಾಂವ್‍ನ ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್‍ನ 2ನೇ ತರಗತಿಯ ಪ್ರದ್ಯೂಮ್ ಠಾಕೂರ್ ಹತ್ಯೆಯನ್ನು ನೆನಪಿಸುವಂತ ಮತ್ತೊಂದು ಪ್ರಕರಣ ದೆಹಲಿಯಲ್ಲಿ ನಡೆದಿದೆ. ಶಾಲೆಯ ಟಾಯ್ಲೆಟ್ ನಲ್ಲಿ 9ನೇ ಕ್ಲಾಸ್ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಈಶಾನ್ಯ ದೆಹಲಿಯ ಕರಾವಲ್ ನಗರದಲ್ಲಿ ನಡೆದಿದೆ.

    16 ವರ್ಷದ ತುಷಾರ್ ಕುಮಾರ್ ಮೃತಪಟ್ಟಿರುವ ವಿದ್ಯಾರ್ಥಿ. ಗುರುವಾರ ಶಾಲೆಯ ಶೌಚಾಲಯದಲ್ಲಿ ಪ್ರಜ್ಞಾಹೀನ ಸ್ಥಿತಿಯಿಲ್ಲಿ 9ನೇ ತರಗತಿಯ ವಿದ್ಯಾರ್ಥಿ ತುಷಾರ್ ಪತ್ತೆಯಾಗಿದ್ದ. ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ಆತನನ್ನು ಕರೆದೊಯ್ದಲಾಯ್ತು. ಆದರೆ ಅಷ್ಟರಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತುಷಾರ್ ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ಆತನಿಗೆ ಹೊಡೆದು ಶೌಚಾಯದಲ್ಲಿ ಸಾಯಲು ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

    ತುಷಾರ್ ನ ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಇರಲಿಲ್ಲ. ಆದರೆ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ತಿಳಿದು ಬರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರು ಅಪರಿಚಿತರ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ತುಷಾರ್ ಶೌಚಾಲಯದಲ್ಲಿ ಪ್ರಜ್ಞಾಹೀನನಾಗಿ ಬಿದ್ದಿರುವುದನ್ನು ಮೊದಲಿಗೆ ನೋಡಿದ ವಿದ್ಯಾರ್ಥಿಗಳು ಹಾಗೂ ಆತನ ಸಹಪಾಠಿಗಳನ್ನು ವಿಚಾರಣೆ ಮಾಡುತ್ತಿದ್ದಾರೆ.

    ತುಷಾರ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದನು ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಇದರಿಂದ ವಿದ್ಯಾರ್ಥಿಯ ಪೋಷಕರು ತಮ್ಮ ಮಗನನ್ನು ಕೊಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ತುಷಾರ್ ಕರಾವಲ್ ನಗರದಲ್ಲಿ ವಾಸಿಸುತ್ತಿದ್ದನು. ಈ ನಗರ ಶಾಲೆ ಇರುವ ಸ್ಥಳವಾಗಿದ್ದು, ವಿದ್ಯಾರ್ಥಿಯ ಕುಟುಂಬದ ಸದಸ್ಯರು ಮತ್ತು ಕೆಲವು ಸ್ಥಳೀಯರು ರಸ್ತೆಗಳಿದು ತುಷಾರ್ ಸಾವಿನ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ತುಷಾರ್ ಮೃತಪಟ್ಟ ಜಿಟಿಬಿ ಆಸ್ಪತ್ರೆಯ ಅಧಿಕಾರಿಗಳು ಮತ್ತು ಪೊಲೀಸರ ಜೊತೆ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿರುವುದಾಗಿ ಶಾಸಕ ಕಪಿಲ್ ಮಿಶ್ರಾ ಹೇಳಿದ್ದಾರೆ.

    2017ರ ಸೆಪ್ಟಂಬರ್ ನಲ್ಲಿ ಗುರಗಾಂವ್ ನ ರಯಾನ್ ಇಂಟರ್ ನ್ಯಾಷನಲ್ ಶಾಲೆಯ ಶೌಚಾಲಯದಲ್ಲಿ 2ನೇ ಕ್ಲಾಸ್ ಬಾಲಕ ಪ್ರದ್ಯುಮನ್ ನನ್ನು ಹತ್ಯೆ ಮಾಡಲಾಗಿತ್ತು. ಅದೇ ಶಾಲೆಯ ಹಿರಿಯ ವಿದ್ಯಾರ್ಥಿಯೊಬ್ಬ ಪರೀಕ್ಷೆಯನ್ನು ಮುಂದೂಡುವ ಸಲುವಾಗಿ ಈ ಕೃತ್ಯವೆಸಗಿದ್ದ ಎಂದು ಪೊಲೀಸರು ತಿಳಿಸಿದ್ದರು.