Tag: satishJarakiholi

  • ರಮೇಶ್ ಆಯ್ತು, ಈಗ ಸತೀಶ್ ಜೊತೆ ಲಕ್ಷ್ಮಿ ಹೆಬ್ಬಾಳ್ಕರ್ ಸೆಣಸು!

    ರಮೇಶ್ ಆಯ್ತು, ಈಗ ಸತೀಶ್ ಜೊತೆ ಲಕ್ಷ್ಮಿ ಹೆಬ್ಬಾಳ್ಕರ್ ಸೆಣಸು!

    ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿಯನ್ನೇ ಖತಂಗೊಳಿಸಿದ್ದ ಸಮಸ್ಯೆ ಮತ್ತೊಮ್ಮೆ ಸುಂಟರಗಾಳಿಯಂತೆ ತಲೆ ಎತ್ತುತ್ತಾ ಅನ್ನೋ ಪ್ರಶ್ನೆಯೊಂದು ರಾಜ್ಯ ರಾಜಕಾರಣದಲ್ಲಿ ಮೂಡಿದೆ.

    ಹೌದು. ಬೆಳಗಾವಿಯ ಜಾರಕಿಹೊಳಿ ಬ್ರದರ್ಸ್ ಗೆ ಸೆಡ್ಡು ಹೊಡೆಯಲು ಹೋದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಈಗ ಮತ್ತೆ ಕಾಂಗ್ರೆಸ್ಸಿನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ರಮೇಶ್ ಜಾತಕಿಹೊಳಿ ಹಾಗೂ ಲಕ್ಷ್ಮಿ ನಡುವಿನ ಕದನ ಸಮ್ಮಿಶ್ರ ಸರ್ಕಾರವನ್ನೇ ಪತನಗೊಳಿಸುವ ಹಂತಕ್ಕೆ ಬಂದಿತ್ತು. ಈಗ ಸತೀಶ್ ಜಾರಕಿಹೊಳಿ ಜೊತೆಗಿನ ಕದನದ ಬಿಸಿ ಕೈ ಪಾಳಯಕ್ಕೆ ತಟ್ಟತೊಡಗಿದೆ. ಗೋಕಾಕ್ ನಲ್ಲಿ ಅಶೋಕ್ ಪೂಜಾರಿಯನ್ನ ಕಾಂಗ್ರೆಸ್ ಅಭ್ಯರ್ಥಿ ಮಾಡಿಸಿ ಲಖನ್ ಜಾರಕಿಹೊಳಿಗೆ ಟಿಕೆಟ್ ತಪ್ಪಿಸುವ ಲಕ್ಷ್ಮಿ ಪ್ರಯತ್ನಕ್ಕೆ ಸತೀಶ್ ಜಾರಕಿಹೊಳಿ ಕೆಂಡ ಮಂಡಲರಾಗಿದ್ದಾರೆ. ಇದನ್ನೂ ಓದಿ: ಬೆಳಗಾವಿ ಬ್ರದರ್ಸ್‌ಗೆ ಮತ್ತೆ ಲಕ್ಷ್ಮಿ ಸವಾಲು?

    ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ತಮ್ಮ ಅಸಮಧಾನ ಹೊರ ಹಾಕಿರುವ ಸತೀಶ್, ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪಾಡಿಗೆ ಅವರಿದ್ದರೆ ಸರಿ ನಮ್ಮ ತಂಟೆಗೆ ಬರದಂತೆ ಹೇಳಿ ಎಂದಿದ್ದಾರೆ.

    ಕ್ಷೇತ್ರದಲ್ಲಿ ಶತಾಯಗತಾಯ ಗೆಲ್ಲಬೇಕು ಅಂತ ಕಳೆದ 2-3 ತಿಂಗಳಿನಿಂದ ನಾನು ಹಾಗೂ ಲಖನ್ ಓಡಾಡುತ್ತಿದ್ದೇವೆ. ಆದರೆ ಲಕ್ಷ್ಮಿ, ಸುಮ್ಮನೆ ಅಶೋಕ್ ಪೂಜಾರಿಯನ್ನ ಎಳೆದು ತರುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ನಾವು ಬೇರೆ ರೀತಿಯೇ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು ಎಲ್ಲವನ್ನು ಸರಿ ಪಡಿಸೋಣ ಸಮಾಧಾನದಿಂದಿರಿ ಎಂದು ಸತೀಶ್ ಜಾರಕಿಹೊಳಿಗೆ ಸಮಾಧಾನ ಪಡಿಸಿದ್ದಾರೆ.

    ಒಟ್ಟಿನಲ್ಲಿ ರಮೇಶ್ ಜೊತೆ ಗಲಾಟೆ ಮಾಡಿಕೊಂಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಈಗ ಸತೀಶ್ ಹಾಗೂ ಲಖನ್ ಜಾರಕಿಹೊಳಿ ವಿರುದ್ಧ ಗುಟುರು ಹಾಕುತ್ತಿದ್ದಾರೆ. ಲಕ್ಷ್ಮಿ ಹಾಗೂ ಜಾರಕಿಹೊಳಿ ಬ್ರದರ್ಸ್ ನಡುವಿನ ಈ ಜಟಾಪಟಿ ಈಗ ಕಾಂಗ್ರೆಸ್ ಪಾಲಿಗೆ ಹೊಸ ತಲೆನೋವು ತಂದಿಟ್ಟಿದೆ.

  • ಮನ್ಸೂರ್ ಖಾನ್ ಬಂಧಿಸುವುದು ದೊಡ್ಡ ವಿಷಯವಲ್ಲ- ಸತೀಶ್ ಜಾರಕಿಹೊಳಿ

    ಮನ್ಸೂರ್ ಖಾನ್ ಬಂಧಿಸುವುದು ದೊಡ್ಡ ವಿಷಯವಲ್ಲ- ಸತೀಶ್ ಜಾರಕಿಹೊಳಿ

    ಬೆಳಗಾವಿ: ಐಎಂಎ ಬಹುಕೋಟಿ ಹಗರಣ ಪ್ರಕರಣ ಸಂಬಂಧ ಇಚ್ಚಾಶಕ್ತಿ ಇದ್ದರೆ ಆರೋಪಿಯನ್ನ ಬಂಧಿಸುತ್ತಾರೆ. ಮನ್ಸೂರ್ ಖಾನ್ ಬಂಧಿಸುವುದು ದೊಡ್ಡ ವಿಷಯವಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಆರೋಪಿಯನ್ನ ಸಚಿವ ಜಮೀರ್ ಅಹ್ಮದ್ ಮನೆಯಲ್ಲಿ ಇಟ್ಟುಕೊಳ್ಳಲು ಹೇಗೆ ಸಾಧ್ಯ. ಸೌಹಾರ್ದ ಕಾಯ್ದೆ ಬಂದ ಮೇಲೆ ಕೋ ಆಪರೇಟಿವ್ ಸರ್ಕಾರ ನಿಯಂತ್ರಣ ಮಾಡಲು ಆಗುತ್ತಿಲ್ಲ. ಅವರು ಸ್ವತಂತ್ರ ಇದ್ದಾರೆ. ಈ ಕುರಿತು ಸರ್ಕಾರ ಮರು ಚಿಂತನೆ ಮಾಡುವುದು ಅಗತ್ಯವಿದೆ. ಐಎಂಎ ಹಗರಣದ ಕುರಿತು ಸರ್ಕಾರ ಗಮನ ಹರಿಸುವುದು ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

    ಎಸ್‍ಐಟಿಯವರು ಆರೋಪಿಯನ್ನು ಪತ್ತೆ ಹಚ್ಚುತ್ತಾರೆ. ಜಮೀರ್ ಮೇಲೆ ಆರೋಪ ಇದೆ. ಆದರೆ ಯಾವುದೂ ಪ್ರೂವ್ ಮಾಡಿಲ್ಲ. ಅವರಿಗೆ ರಾಜೀನಾಮೆ ಕೊಡು ಎನ್ನುವುದು ಸರಿಯಲ್ಲ. ಬಿಜೆಪಿಯವರದ್ದು ಎಲ್ಲವನ್ನೂ ವಿರೋಧ ಮಾಡುವ ಭಾವನೆ ಎಂದು ಕಿಡಿಕಾರಿದ್ದಾರೆ.

    ಇದೇ ವೇಳೆ ಜಿಂದಾಲ್ ಗೆ ಭೂಮಿ ಕೊಡುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಭೂಮಿಯನ್ನ ಯಾರ ಅವಧಿಯಲ್ಲಿ ನೀಡಿದ್ದಾರೆ. ಈ ಕುರಿತು ಟಿವಿಯಲ್ಲಿ ಬಿಜೆಪಿ ಕಾಂಗ್ರೆಸ್ ಎಲ್ಲರನ್ನೂ ಕುಡಿಸಿ ಪ್ಯಾನಲ್ ಡಿಸ್ಕಷನ್ ಮಾಡಲಿ. ಇದರ ನಿಯಮವೇನಿದೆ, ವಿರೋಧ ಪಕ್ಷದವರದ್ದು ಎಷ್ಟು ನಿಜಾಂಶ ಇದೆ ಎಂಬುದು ಜನರಿಗೆ ಗೊತ್ತಾಗಬೇಕು ಎಂದರು.

    ಬಿಜೆಪಿಯವರ ಪ್ರತಿಭಟನೆಯಲ್ಲಿ ಯಾವುದೇ ಅರ್ಥ ಇಲ್ಲ. ಅವರ ಅವಧಿಯಲ್ಲೇ ಜಮೀನು ಕೊಟ್ಟಿದ್ದು. ಈಗ ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ರಮೇಶ್ ಜಾರಕಿಹೊಳಿಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಅವರ ಕುರಿತು ನಾನೇನು ಹೇಳುವುದಿಲ್ಲ ಅಂದರು.

    ಆಡಳಿತ ಪಕ್ಷದಲ್ಲಿ ವಿರೋಧಗಳು ಹೆಚ್ಚಾಗುತ್ತಿದೆ ಎಂಬ ವಿಚಾರ ಸಂಬಂಧ ಮಾತನಾಡಿದ ಅವರು, ಸರ್ಕಾರದಲ್ಲಿ ಸಂಖ್ಯೆ ಕಡಿಮೆ ಇದೆ ಅದಕ್ಕೆ ಹೀಗಾಗುತ್ತಿದೆ. ಟ್ವೆಂಟಿ ಟ್ವೆಂಟಿ ಮ್ಯಾಚ್ ಇದ್ದಂಗೆ ಸ್ವಲ್ಪ ಸಮಸ್ಯೆ ಇರುತ್ತದೆ. ಶಾಸಕರು ಅವರ ಭಾವನೆಗಳನ್ನ ಹೇಳಿಕೊಳ್ಳುತ್ತಿದ್ದಾರೆ. ಅಂತಿಮವಾಗಿ ಸರ್ಕಾರ ಅದರ ಬಗ್ಗೆ ಗಮನ ಹರಿಸುತ್ತದೆ ಎಂದು ತಿಳಿಸಿದರು.