Tag: Satish

  • ಬಿಗ್‌ಬಾಸ್‌ನಿಂದ ಇದುವರೆಗೂ 1 ರೂಪಾಯಿ ಹಣ ಬಂದಿಲ್ಲ ಎಂದ ಕಂಟೆಸ್ಟೆಂಟ್‌ ಸತೀಶ್

    ಬಿಗ್‌ಬಾಸ್‌ನಿಂದ ಇದುವರೆಗೂ 1 ರೂಪಾಯಿ ಹಣ ಬಂದಿಲ್ಲ ಎಂದ ಕಂಟೆಸ್ಟೆಂಟ್‌ ಸತೀಶ್

    ಬಿಗ್‌ಬಾಸ್ (Bigg Boss Kannada 12) ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಹೋಗಿದ್ದ ಸತೀಶ್ (Satish) ಈಗ ಎಲಿಮಿನೇಶನ್ ಆಗುವ ಮೂಲಕ ಹೊರಬಂದಿದ್ದಾರೆ. ವೇದಿಕೆಯಲ್ಲೇ ಈ ಕಾರ್ಯಕ್ರಮಕ್ಕಾಗಿ 25 ಲಕ್ಷದ ಬಟ್ಟೆ ಖರೀದಿಸಿರುವುದಾಗಿ ಸತೀಶ್ ಹೇಳಿದ್ದರು. ಹಾಗಾದರೆ ಸ್ಪರ್ಧಿಯಾಗಿ ಒಳ ಹೋಗಲು ಅದೆಷ್ಟು ಸಂಭಾವನೆ ಪಡೆದಿರಬಹುದು ಅನ್ನೋ ಕುತೂಹಲ ಸಹಜ. ಆದರೆ, ‘ಪಬ್ಲಿಕ್ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಡಾಗ್ ಸತೀಶ್, ಬಿಗ್‌ಬಾಸ್ ತಮಗೆ ನೀಡಿರುವ ಸಂಭಾವನೆ ವಿಚಾರ ಬಿಚ್ಚಿಟ್ಟಿದ್ದಾರೆ. ಇದುವರೆಗೂ ಬಿಗ್‌ಬಾಸ್ ಕಾರ್ಯಕ್ರಮದಿಂದ ತಮಗೆ 1 ರೂಪಾಯಿ ಹಣ ತಮಗೆ ಬಂದಿಲ್ಲ ಅನ್ನೋದಾಗಿ ಹೇಳಿದ್ದಾರೆ.

    ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಹೋಗುವ ವೇಳೆ ಪ್ರತಿ ಸ್ಪರ್ಧಿಯೂ ಒಂದೊಂದು ಮೊತ್ತದ ಸಂಭಾವನೆ ಪಡೆದಿರುತ್ತಾರೆ. ಪ್ರತಿ ವಾರವೂ ಅವರಿಗೆ ಹಣ ಸಂದಾಯವಾಗುತ್ತದೆ. ಆದರೆ, ಕಾರ್ಯಕ್ರಮಕ್ಕೆ ಎಂಟ್ರಿ ಕೊಡುವ ಪೂರ್ವದಲ್ಲೂ ಅಡ್ವಾನ್ಸ್ ಹಣ ಹಾಗೂ ಬಳಿಕವೂ ತಮಗೆ ಹಣ ಬಂದಿಲ್ಲ ಎಂದಿದ್ದಾರೆ ಸತೀಶ್. ಇದನ್ನೂ ಓದಿ: 100 ಕೋಟಿ ನಾಯಿ ಲಾಂಚ್ ಮಾಡ್ತೀನಿ- ಸವಾಲೆಸೆದ ಬಿಗ್‌ಬಾಸ್ ಸ್ಪರ್ಧಿ ಸತೀಶ್

    ‘ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಆಗಿಲ್ಲ. ನಿಮಗೆ ಹಣ ಟ್ರಾನ್ಸ್‌ಫರ್‌ ಆಗುತ್ತಿಲ್ಲ ಎಂದು ಟೀಮ್ ಹೇಳಿತ್ತು. ಆಗ ನಾನು ಹಣವನ್ನ ಕೊಡಿ ಅಂತ ನಿಮ್ಮನ್ನು ಕೇಳಿದ್ನಾ ಎಂದೆ. ನನಗೆ ಹಣ ಮುಖ್ಯವಲ್ಲ, ನನ್ನ ಟರ್ನ್ವೋವರ್ ಚೆನ್ನಾಗಿದೆ. ನನಗೆ ಜನರ ಮುಂದೆ ಗುರುತಿಸಿಕೊಳ್ಳುವುದು ಮುಖ್ಯ. ವೇದಿಕೆ ಮುಖ್ಯವಾಗಿತ್ತು. ನಾನು ಒಂದು ಸಿನಿಮಾ ಕಾರ್ಯಕ್ರಮಕ್ಕೆ ನಾಯಿ ಹಿಡಿದುಕೊಂಡು ಹೋದ್ರೆ ಸಾಕು ಲಕ್ಷ ಲಕ್ಷ ಹಣ ಕೊಡ್ತಾರೆ. ಬಿಗ್‌ಬಾಸ್‌ ಮನೆಯಲ್ಲಿ ಇರೋವ್ರೆಲ್ಲ ಗೆಸ್ಟ್ ಆಗಿ ಹೋದ್ರೆ ಮೂವತ್ತೋ ನಲವತ್ತೋ ಸಾವಿರ ಕೊಡ್ತಾರಂತೆ’ ಎಂದಿದ್ದಾರೆ.

    ಈ ಮೂಲಕ ಬಿಗ್‌ಬಾಸ್ ಕಾರ್ಯಕ್ರಮದಿಂದ ಬರುವ ಹಣ ತಮಗೆ ಮುಖ್ಯವಲ್ಲ ಅಂತ ಸತೀಶ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಾಂತಾರ ಚಿತ್ರದ ಬಗ್ಗೆ ದೈವ ಯಾವುದೇ ಅಭಯ ನುಡಿ ನೀಡಿಲ್ಲ: ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಸ್ಪಷ್ಟನೆ

  • ವಿ.ಮನೋಹರ್ ಸಂಗೀತದ ಚುನಾವಣೆ ಹಾಡಿಗೆ ಉಪೇಂದ್ರ ಗಾಯಕ

    ವಿ.ಮನೋಹರ್ ಸಂಗೀತದ ಚುನಾವಣೆ ಹಾಡಿಗೆ ಉಪೇಂದ್ರ ಗಾಯಕ

    ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ  ರಾಜಕೀಯ ವಿಡಂಬನಾತ್ಮಕ ಕಥಾಹಂದರ ಹೊಂದಿರುವ ಚಿತ್ರ ದರ್ಬಾರ್ (Darbar). ಸತೀಶ್ ನಾಯಕನಾಗಿ ಕಾಣಿಸಿಕೊಂಡಿರುವ  ಈ ಚಿತ್ರಕ್ಕೆ  ವಿ.ಮನೋಹರ್ (V. Manohar) ಆಕ್ಷನ್ ಕಟ್ ಹೇಳಿದ್ದಾರೆ. ಈಚೆಗೆ ನಡೆದ  ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಉಪೇಂದ್ರ (Upendra)ದನಿಯಾಗಿರುವ ಚುನಾವಣೆ (Election) ಪ್ರಕ್ರಿಯೆಯನ್ನು ವಿಶ್ಲೇಶಿಸುವ ವಿಶೇಷ ಹಾಡಿನ (Song) ಲಿರಿಕಲ್ ವೀಡಿಯೋವನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮ ಹರೀಶ್ ರಿಲೀಸ್ ಮಾಡಿದರು.

    ಈ ವೇಳೆ ಮಾತನಾಡಿದ ನಟ ಸತೀಶ್ ‘ನಮ್ಮ  ಚಿತ್ರದಲ್ಲಿರುವ 3 ಹಾಡುಗಳೂ ವಿಶೇಷವಾಗಿವೆ. ಮೊದಲ ಹಾಡು ‘ಯಾರಿವ ಯಾರಿವ’ ನಾಯಕನ ಹಿನ್ನೆಲೆ ಹೇಳುವ ಸಾಂಗ್ ಆಗಿದ್ದು ಮನೋಹರ್ ಅವರೇ ಇದಕ್ಕೆ ಸಾಹಿತ್ಯ ಬರೆದಿದ್ದಾರೆ. 2ನೇ ಹಾಡು ಮೆಲೋಡಿ. ಇದಕ್ಕೆ ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ. ಇನ್ನು ಮೂರನೇ ಹಾಡು ಎಲೆಕ್ಷನ್ ರಾಜಕೀಯದ ಬಗ್ಗೆ ವಿವರಿಸುವುದಾಗಿದೆ. ಇದನ್ನು ನಾನೇ ಬರೆದಿದ್ದೇನೆ. ಅದರಲ್ಲಿ ತುಂಬಾನೇ ವಿಷಯಗಳು ಅಡಗಿವೆ.  ನಾನು ಪ್ರತಿ ಲೈನ್ ಬರೆದಾಗಲೂ ಮನೋಹರ್ ಅವರು ಚೆನ್ನಾಗಿದೆ ಎಂದು ಪ್ರೋತ್ಸಾಹಿಸುತ್ತಾ ಬಂದರು. ಇರುವ ಸಾಹಿತ್ಯಕ್ಕೆ ಟ್ಯೂನ್ ಹಾಕುವುದು ತುಂಬಾ  ಚಾಲೆಂಜಿಂಗ್ ಕೆಲಸ ಅಂತ ನನಗೂ ಗೊತ್ತು. ಅದನ್ನೆಲ್ಲ ಮನೋಹರ್ ಅವರು ನಿಭಾಯಿಸಿದ್ದಾರೆ,  ನಾನು ಹೊರಗಿನ ಸಿಂಗರ್ ಕರೆಸೋಣ ಎಂದಾಗ ಮನೋಹರ್ ಅವರು ಬೇಡ, ನಮ್ಮವರಿಂದಲೇ ಹಾಡಿಸೋಣವೆಂದು ಹೇಳಿದರು. ಉಪೇಂದ್ರ ಅವರ ಹಾಡಂತೂ ಅದ್ಭುತವಾಗಿ ಬಂದಿದೆ’ ಎಂದರು. ಇದನ್ನೂ ಓದಿ:‘ಕೆಜಿಎಫ್’ ರೈಟರ್ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಬೋಲ್ಡ್ ಬ್ಯೂಟಿ

    ನಾಯಕಿ ಜಾಹ್ನವಿ ಮಾತನಾಡಿ ‘ಈ ಚಿತ್ರದಲ್ಲಿ ನಾನು ಅಪ್ಪರ್ ಮಿಡಲ್ ಕ್ಲಾಸ್ ಹುಡುಗಿಯ ಪಾತ್ರ ಮಾಡಿದ್ದೇನೆ. ಆಕೆ ಸೈಕಾಲಜಿ ಸ್ಟೂಡೆಂಟ್. ರಜೆಗೆಂದು ಊರಿಗೆ ಬಂದಾಗ ಹೀರೋ ಜತೆ  ಸ್ನೇಹ ಆಗಿ ಪ್ರೀತಿ ಬೆಳೆಯುತ್ತದೆ. ಲೈಫ್ ಪಾರ್ಟ್ನರ್ ಆಗಿ ನಾಯಕನ ಗುರಿ ಸಾಧಿಸಲು ಬೆನ್ನೆಲುಬಾಗಿ ನಿಲ್ಲುತ್ತೇನೆ ‘ಎಂದರು.

    ನಿರ್ದೇಶಕ ವಿ.ಮನೋಹರ್ ಮಾತನಾಡಿ,  ‘ಸತೀಶ್ ತಮ್ಮ ಚಿತ್ರವೊಂದಕ್ಕೆ ಹಾಡು ಬರೆಸಲು ಬಂದಾಗ ಸ್ನೇಹಿತರಾದರು. ಇದಕ್ಕೂ  ಮುಂಚೆ ನಿರ್ದೇಶನದ ಪ್ರಯತ್ನಗಳು ನಡೆಯುತ್ತಲೇ ಇತ್ತು. ಆಗಲಿಲ್ಲ, ಇವತ್ತಿನ ರಾಜಕೀಯವನ್ನು ವ್ಯಂಗ್ಯವಾಗಿ ಹೇಳುವ ಕಥೆಯಿದು. ನನಗೂ ಹಳ್ಳಿ ರಾಜಕೀಯದ ಬಗ್ಗೆ  ಆಸಕ್ತಿಯಿತ್ತು. ಹಾಗಾಗಿ  ನಾನು ನಿರ್ದೇಶನ ಮಾಡಲು ಒಪ್ಪಿಕೊಂಡೆ. ಮದ್ದೂರು ಬಳಿಯ ಹಳ್ಳಿಯೊಂದರಲ್ಲಿ  ಈ ಚಿತ್ರಕ್ಕೆ  ಶೂಟ್ ಮಾಡಿದಾಗ ಅಲ್ಲಿನ ಜನರೂ ನಮಗೆ ತುಂಬಾ ಸಹಕಾರ ನೀಡಿದರು’ ಎಂದರು.

    ಹಿರಿಯ ಕಲಾವಿದರಾದ ಎಂ.ಎನ್.ಲಕ್ಷ್ಮಿದೇವಿ, ಅಶೋಕ್, ಸಾಧುಕೋಕಿಲ, ನವೀನ್ ಡಿ, ಪಡೀಲ್, ಹುಲಿ ಕಾರ್ತೀಕ್, ಕಾಮಿಡಿ ಸಂತು ಹಾಗೂ ತ್ರಿವೇಣಿ ಹೀಗೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ  ಅಭಿನಯಿಸಿದ್ದಾರೆ.  ಮಾಸ್ ಮಾದ, ವಿನೋದ್ ಅವರ ಸಾರಥ್ಯದ 3 ಸಾಹಸ ದೃಶ್ಯಗಳು ಈ ಚಿತ್ರದಲ್ಲಿವೆ. ಮಂಡ್ಯ, ಮದ್ದೂರು ಹಾಗೂ ಕೋಲಾರ ಸಮೀಪದ ಮಾಲೂರಿನಲ್ಲಿ  ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

  • 23 ವರ್ಷಗಳ ನಂತರ ನಿರ್ದೇಶನಕ್ಕಿಳಿದ ಸಂಗೀತ ನಿರ್ದೇಶಕ ಮನೋಹರ್

    23 ವರ್ಷಗಳ ನಂತರ ನಿರ್ದೇಶನಕ್ಕಿಳಿದ ಸಂಗೀತ ನಿರ್ದೇಶಕ ಮನೋಹರ್

    ಮೆಲೋಡಿ ಹಿಟ್ ಸಿನಿಮಾಗಳ ಸಂಗೀತ ನಿರ್ದೇಶಕ ವಿ.ಮನೋಹರ್ (V. Manohar) ಬಹಳ ದಿನಗಳ ನಂತರ ನಿರ್ದೇಶನ ಮಾಡಿರುವ ಚಿತ್ರ ದರ್ಬಾರ್ (Darbar), ಸತೀಶ್ (Satish) ಕಥೆ ಬರೆದು ನಿರ್ಮಾಣದ ಜೊತೆಗೆ ನಾಯಕನಾಗೂ ನಟಿಸಿರುವ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮಂಗಳವಾರ ಇದರ ಮೇಕಿಂಗ್ ವಿಡಿಯೋ ಪ್ರದರ್ಶನ  ಹಾಗೂ ಪತ್ರಿಕಾಗೋಷ್ಠಿ ಎಸ್.ಆರ್.ವಿ. ಥಿಯೇಟರಿನಲ್ಲಿ ನಡೆಯಿತು. ಇಲ್ಲಿ ಚಿತ್ರದ ವಿಶೇಷತೆಗಳ ಕುರಿತು ಚಿತ್ರತಂಡ ಮಾಹಿತಿಗಳನ್ನು ಹಂಚಿಕೊಂಡಿತು.

    ಈ ಸಂದರ್ಭದಲ್ಲಿ ಮಾತನಾಡಿದ ಮನೋಹರ್, ಸುಮಾರು 23 ವರ್ಷಗಳ ನಂತರ ನಾನು ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ಅದಕ್ಕೆ ಸತೀಶ್ ಅವರೇ ಕಾರಣ. ನಾನು ಇಂದ್ರಧನುಷ್ ಚಿತ್ರ ಮಾಡಿದ ನಂತರ ಏನೇನೋ ಆಯಿತು. ಅಲ್ಲದೆ ನಾನೂ ಸೀರಿಯಲ್, ಸಂಗೀತ ನಿರ್ದೇಶನ ಅಂತ ಬ್ಯುಸಿಯಾಗ್ತಾ ಹೋದೆ. ಸಿನಿಮಾ ಶುರು ಮಾದ್ಬೇಕಂತ ಬಂದವರು ನಂತರ ಮುಂದುವರಿಯುತ್ತಲೇ ಇರಲಿಲ್ಲ,  ಸಿನಿಮಾರಂಗಕ್ಕೆ ಬರೋಕೂ ಮುನ್ನ ನಾನು ಕೆಲ ದಿನಪತ್ರಿಕೆಗಳಿಗೆ ಕಾರ್ಟೂನ್ ಬರೆಯುತ್ತಿದ್ದೆ. ಆಗಿಂದಲೇ ನಾನು ರಾಜಕೀಯದ ಬಗ್ಗೆ  ತಿಳಿದುಕೊಂಡಿದ್ದೆ. ಇದೇ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂದುಕೊಡಿದ್ದೆ. ಸತೀಶ್ ಅವರು ನನಗೆ ಹಿಂದೆ ದಿಲ್ದಾರ್   ಟೈಮ್‌ನಲ್ಲಿ ಸ್ನೇಹಿತರಾಗಿದ್ದರು. ಮೊನ್ನೆ ಮತ್ತೆ ಸಿಕ್ಕಾಗ ಅವರೊಂದು ಕಥೆ ಹೇಳಿದರು. ಅದರಲ್ಲೂ ಪಾಲಿಟಿಕ್ಸ್ ಇತ್ತು. ತುಂಬಾ ಚೆನ್ನಾಗಿ ಕಥೆ ಮಾಡಿದ್ದರು. ಇವತ್ತಿನ ರಾಜಕೀಯವನ್ನು ವ್ಯಂಗ್ಯವಾಗಿ ಹೇಳುವ ಸಬ್ಜೆಕ್ಟ್  ಎಂದು ದರ್ಬಾರ್ ಚಿತ್ರವನ್ನು ಆರಂಭಿಸಲು ಸೃಷ್ಟಿಯಾದ ಸಂದರ್ಭವನ್ನು ನಿರ್ದೇಶಕ ವಿ. ಮನೋಹರ್ ವಿವರಿಸಿದರು. ಇದನ್ನೂ ಓದಿ: ʻಪೊನ್ನಿಯಿನ್ ಸೆಲ್ವನ್-2ʼ ಟ್ರೈಲರ್ ರಿಲೀಸ್: ಚೋಳಾ ಸಾಮ್ರಾಜ್ಯಕ್ಕಾಗಿ ಮುಂದುವರೆದ ಹೋರಾಟ

    ಮಾತು ಮುಂದುವರೆಸಿದ ಅವರು, ಚಿತ್ರವನ್ನು ಶುರು ಮಾಡುವ ವೇಳೆಗೆ ಕೋವಿಡ್ ಬಂತು. ಎರಡನೇ ಅಲೆಯ ನಂತರ ಚಿತ್ರವನ್ನು ಕಂಪ್ಲೀಟ್ ಮಾಡಿದೆವು. ಮದ್ದೂರು ಬಳಿಯ ಹಳ್ಳಿಯೊಂದರಲ್ಲಿ   ಚಿತ್ರದ ಬಹುತೇಕ ಶೂಟಿಂಗ್ ನಡೆದಿದೆ.‌ ಅಲ್ಲಿಯ ಜನರೂ ಅಷ್ಟೆ ಚೆನ್ನಾಗಿ ಸಹಕಾರ  ನೀಡಿದರು. ಹಿರಿಯ ಕಲಾವಿದರಾದ ಎಂ.ಎನ್.ಲಕ್ಷ್ಮಿದೇವಿ, ಅಶೋಕ್, ಸಾಧು ಕೋಕಿಲ, ನವೀನ್ ಡಿ, ಪಡೀಲ್, ಹುಲಿ ಕಾರ್ತೀಕ್ ಹೀಗೆ ಸಾಕಷ್ಟು ಜನ ಅಭಿನಯಿಸಿದ್ದಾರೆ. ಜಾಹ್ನವಿ ಈ ಚಿತ್ರದಲ್ಲಿ  ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಲ್ಲದೆ ೩ ಹಾಡುಗಳು ಚಿತ್ರದಲ್ಲಿದ್ದು, ಟೈಟಲ್ ಸಾಂಗನ್ನು ಚಂದನ್ ಶೆಟ್ಟಿ ಹಾಡಿದ್ದಾರೆ, ರಾಜಕೀಯ ವಿಡಂಬನೆಯ ಹಾಡನ್ನು ಉಪೇಂದ್ರ ಹಾಡಿದ್ದಾರೆ, ಇನ್ನು ಡ್ಯುಯೆಟ್ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ, ಚಿತ್ರವೀಗ ಡಿಟಿಎಸ್ ಹಂತದಲ್ಲಿದ್ದು, ಏಪ್ರಿಲ್ ವೇಳೆಗೆ ತೆರೆಗೆ ತರುವ ಯೋಜನೆಯಿದೆ ಎಂದು  ವಿವರಿಸಿದರು. ನಂತರ ಚಿತ್ರದ ನಾಯಕ, ನಿರ್ಮಾಪಕ, ಸತೀಶ್ ಮಾತನಾಡುತ್ತ.  2 ದಿನಗಳಲ್ಲಿ ಸೆನ್ಸಾರ್‌ಗೆ ಹೋಗ್ತಿದ್ದೇವೆ, ನಮ್ಮ ಚಿತ್ರವು ನಿಜವಾಗಿಯೂ ನಾವು ಹಾಕುವ ಮತ ಸರಿಯಾಗಿದೆಯೇ, ಸೂಕ್ತ ವ್ಯಕ್ತಿಗೆ ನಾವು ಹಾಕ್ತಿದ್ದೇವಾ ಎಂಬ ಚಿಂತನೆಗೆ ಹಚ್ಚುವ ಕೆಲಸ ಮಾಡುತ್ತದೆ.  ವಿ.ಮನೋಹರ್ ಅಂಥವರೊಂದಿಗೆ ಕೆಲಸ ಮಾಡಿದ್ದು ಅದೃಷ್ಟವೇ ಸರಿ. ನಾನು ಹೇಳಿದ್ದನ್ನು ಅವರು ಬರೆಯುತ್ತಿದ್ದುದು ನೋಡಿ  ನನಗೆ ಮುಜುಗರವಾಯಿತ್ತು. ಪ್ರತಿ ಪಾತ್ರಕ್ಕೆ ಇಂಥವರೇ ಬೇಕೆಂದು ಸೆಲೆಕ್ಟ್ ಮಾಡಿಕೊಂಡು ನೀವೇ ಮಾಡಿ ಎಂದು ಒತ್ತಾಯಿಸಿ ಮಾಡಿಸಿದ್ದಾರೆ. ಅವರ ಒತ್ತಾಯಕ್ಕೆ ಮಣಿದು ನಾನೂ ಅಭಿನಯಿಸಿದ್ದೇನೆ ಎಂದು ಹೇಳಿದರು.

    ನಾಯಕಿ ಜಾಹ್ನವಿ ಮಾತನಾಡಿ ಇದು ನನ್ನ ಮೊದಲ ಚಿತ್ರ. ಮದ್ಯಮ ವರ್ಗದ  ಸೈಕಾಲಜಿ ಸ್ಟೂಡೆಂಟ್, ರಜೆಗೆಂದು ಊರಿಗೆ ಬಂದಾಗ ನಾಯಕನ ಪರಿಚಯವಾಗುತ್ತದೆ. ನಂತರ ಆತನಿಗೆ ಸಪೋರ್ಟ್ ಮಾಡುತ್ತೇನೆ. ಮೊದಲ ಚಿತ್ರದಲ್ಲೇ ಇಂಥ ದೊಡ್ಡ ಡೈರೆಕ್ಟರ್ ಜೊತೆ ವರ್ಕ್ ಮಾಡೋ ಅವಕಾಶವಿತ್ತು ಎಂದು ಹೇಳಿದರು. ನಟ ಹುಲಿಕಾರ್ತೀಕ್ ಹಾಗೂ  ಛಾಯಾಗ್ರಾಹಕ ಸಾಮ್ರಾಟ್ ಎಸ್. ಚಿತ್ರದ ಕುರಿತಂತೆ ಮಾತನಾಡಿದರು.   ಹಳ್ಳಿಯೊಂದರಲ್ಲಿ  ನಡೆಯುವ  ರಾಜಕೀಯ, ಅಧಿಕಾರಕ್ಕಾಗಿ ಅಲ್ಲಿನ  ಮುಖಂಡರು ನಡೆಸುವ ಲಾಭಿ ಇದನ್ನೆಲ್ಲ  ದರ್ಬಾರ್ ಚಿತ್ರದಲ್ಲಿ  ಹೇಳಲಾಗಿದೆ.  ಈ ಚಿತ್ರಕ್ಕೆ ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ,  ಜನುಮದ ಜೋಡಿ, ಸೂರ್ಯವಂಶ, ಜೋಡಿಹಕ್ಕಿ ಸೇರಿದಂತೆ ಕನ್ನಡದ ಹಲವಾರು ಸೂಪರ್ ಹಿಟ್ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ವಿ. ಮನೋಹರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರವಿದು.  ಸತೀಶ್  ಕಥೆ, ಚಿತ್ರಕಥೆ ಹಾಗೂ  ಸಂಭಾಷಣೆ ಬರೆದಿದ್ದು, ದರ್ಬಾರ್ ಪ್ರೊಡಕ್ಷನ್ಸ್ ಮೂಲಕ  ಬಿ.ಎನ್. ಶಿಲ್ಪ ಅವರು  ನಿರ್ಮಾಣ ಮಾಡಿದ್ದಾರೆ. ಮಾಸ್ ಮಾದ, ವಿನೋದ್ ಸಾರಥ್ಯದ 3 ಸಾಹಸ ದೃಶ್ಯಗಳು  ಚಿತ್ರದಲ್ಲಿವೆ, ಮಂಡ್ಯ,  ಮದ್ದೂರು ಹಾಗೂ ಕೋಲಾರ ಸಮೀಪದ ಮಾಲೂರಿನಲ್ಲಿ  ಚಿತ್ರೀಕರಣ ನಡೆಸಲಾಗಿದೆ. ಉಳಿದ ತಾರಾಬಳಗದಲ್ಲಿ  ಸಾಧುಕೋಕಿಲ, ನವೀನ್ ಡಿ ಪಡೀಲ್, ಹುಲಿ ಕಾರ್ತೀಕ್, ಕಾಮಿಡಿ ಸಂತು ಹಾಗೂ ತ್ರಿವೇಣಿ  ನಟಿಸಿದ್ದಾರೆ.

  • ನಟ ಸತೀಶ್ ಹತ್ಯೆಯ ಬೆನ್ನಲ್ಲೇ ಇಬ್ಬರು ಬಾಮೈದುನರ ಬಂಧನ

    ನಟ ಸತೀಶ್ ಹತ್ಯೆಯ ಬೆನ್ನಲ್ಲೇ ಇಬ್ಬರು ಬಾಮೈದುನರ ಬಂಧನ

    ಸ್ಯಾಂಡಲ್‌ವುಡ್ ಯುವ ನಟ ಸತೀಶ್ ವಜ್ರ ಅವರನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಿರುವ ಘಟನೆಗೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಸತೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಬಂಧನವಾಗಿದೆ. ಬಾಮೈದರಿಂದಲೇ ಸ್ಯಾಂಡಲ್‌ವುಡ್ ನಟ ಸತೀಶ್ ಹತ್ಯೆಯಾಗಿದೆ.

    ಒಂದಿಷ್ಟು ಶಾರ್ಟ್ ಮೂವಿಯಲ್ಲಿ ಕೆಲಸ ಮಾಡುತ್ತಾ, ಜೊತೆಗೆ `ಲಗೋರಿ’ ಎಂಬ ಚಿತ್ರದಲ್ಲಿ ನಟನಾಗಿ ಬಣ್ಣಹಚ್ಚಿದ ಸತೀಶ್ ವಜ್ರ, ಅವರ ಮನೆಯಲ್ಲಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಿನ್ನೆ ರಾತ್ರಿ ಮನೆಯಲ್ಲಿರುವಾಗ ಆರೋಪಿಗಳಾದ ಸುದರ್ಶನ್ ಹಾಗೂ ನಾಗೇಂದ್ರ ಕೊಲೆ ಮಾಡಿ ಹೋಗಿದ್ದಾರೆ. ಸತೀಶ್‌ ಅವರನ್ನು ಆರ್.ಆರ್ ನಗರದ ನಿವಾಸದಲ್ಲಿ ಹತ್ಯೆ ಮಾಡಲಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದೀಗ ಆರ್.ಆರ್ ನಗರದ ಪೊಲೀಸರಿಂದ ಸುದರ್ಶನ್ ಹಾಗೂ ನಾಗೇಂದ್ರ ಬಂಧನವಾಗಿದೆ. ಇದನ್ನೂ ಓದಿ: ಬಾಮೈದನಿಂದಲೇ ಸ್ಯಾಂಡಲ್‌ವುಡ್ ನಟ ಸತೀಶ್ ಬರ್ಬರ ಹತ್ಯೆ?

    ಕೆಲ ತಿಂಗಳ ಹಿಂದಷ್ಟೇ ಓರ್ವ ಯುವತಿಯನ್ನು ಪ್ರೀತಿಸಿ ಸತೀಶ್ ಮದುವೆಯಾಗಿದ್ದ, ಆದರೆ ಮೂರು ತಿಂಗಳ ಹಿಂದಷ್ಟೇ ಸತೀಶ್ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಅಕ್ಕನಿಗೆ ಭಾವ ಸತೀಶ್‌ ಕಿರುಕುಳ ಕೊಟ್ಟಿದ್ದಾರೆ ಎಂದು ಶಂಕಿಸಿ ಭಾಮೈದನಿಂದಲೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಪೊಲೀಸರು ತನಿಖೆ ನಡೆಸಿದ್ದಾರೆ. ಬಾಮೈದ ಹಾಗೂ ಬಾಮೈದನ ಸಹೋದರ ಸುದರ್ಶನ್ ಹಾಗೂ ನಾಗೇಂದ್ರ ಆರೋಪಿಗಳ ಬಂಧಿಸಿದ್ದಾರೆ.

    Live Tv

  • PSI ನೇಮಕಾತಿಯಲ್ಲಿ ಅಕ್ರಮ – ಫಸ್ಟ್‌ ರ‍್ಯಾಂಕ್‌ ಅಭ್ಯರ್ಥಿ ಅರೆಸ್ಟ್

    PSI ನೇಮಕಾತಿಯಲ್ಲಿ ಅಕ್ರಮ – ಫಸ್ಟ್‌ ರ‍್ಯಾಂಕ್‌ ಅಭ್ಯರ್ಥಿ ಅರೆಸ್ಟ್

    ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಸೆಲೆಕ್ಷನ್ ಲಿಸ್ಟ್‌ನಲ್ಲಿ ಫಸ್ಟ್ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

    ಪಿಎಸ್‌ಐ ನೇಮಕಾತಿ ಪರೀಕ್ಷೆಯ ಆಯ್ಕೆ ಪಟ್ಟಿಯಲ್ಲಿ ಫಸ್ಟ್‌ ರ‍್ಯಾಂಕ್‌ ಬಂದಿದ್ದ ಮಾಗಡಿ ತಾಲ್ಲೂಕಿನ ನಿವಾಸಿ ಜೆ.ಕುಶಾಲ್‌ಕುಮಾರ್ ನನ್ನು ಪೊಲೀಸರು ಬಂಧಿಸಿದ್ದು, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭೆ ಫೈಟ್‍ನಲ್ಲಿ ಟ್ವಿಸ್ಟ್ – ಕಾಂಗ್ರೆಸ್, ಜೆಡಿಎಸ್ ಮಧ್ಯೆ ‘ಆತ್ಮಸಾಕ್ಷಿ’ ಫೈಟ್

    ಬಂಧಿತ ಆರೋಪಿ ಪ್ರಮುಖ ರಾಜಕಾರಣಿಯೊಬ್ಬರ ಮಗ ಎನ್ನಲಾಗಿದೆ. ಈತ 200 ಅಂಕಗಳಿಗೆ 168 ಅಂಕ ಪಡೆಯುವ ಮೂಲಕ 545 ಅಭ್ಯರ್ಥಿಗಳ ಆಯ್ಕೆಯಪಟ್ಟಿಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ. ಈತ ಪ್ರಮುಖ ಆರೋಪಿ ದರ್ಶನ್‌ಗೌಡ ಜೊತೆ ಸ್ನೇಹ ಹೊಂದಿದ್ದ. ಇಂದು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

    ಪಿಎಸ್‌ಐ ನೇಮಕಾತಿ ಪ್ರಕರಣದ ವಿಚಾರಣೆ ವೇಳೆ ಸಚಿವ ಅಶ್ವಥ್ ನಾರಾಯಣ್ ಹಾಗೂ ಅವರ ಸಹೋದರ ಸತೀಶ್ ಹೆಸರು ಹೇಳಿದ್ದ ದರ್ಶನ್ ಗೌಡನನ್ನು ಈಚೆಗಷ್ಟೇ ಪೊಲೀಸರು ಬಂಧಿದ್ದಾರೆ. ಜೊತೆಗೆ ಕೋರಮಂಗಲದಲ್ಲಿ ನೆಲಮಂಗಲ ಕಾನ್‌ಸ್ಟೇಬಲ್‌ ಮೋಹನ್ ಕುಮಾರ್ ಹಾಗೂ ರಾಮಮೂರ್ತಿನಗರ ಪೊಲೀಸರು ಹರೀಶ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 3 ನಂಬರ್‌ನಿಂದ ನನಗೆ ಕಿರಿಕಿರಿ, ಧಮ್ಕಿ, ಬೆದರಿಕೆ ಕರೆಗಳು ಬರುತ್ತಿದೆ: ಮುತಾಲಿಕ್

    ಪ್ರತ್ಯೇಕವಾಗಿ ಮೂರು ಕೇಸ್ ದಾಖಲಿಸಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬೆಂಗಳೂರಿನ ರಾಮಮೂರ್ತಿನಗರ, ಕೋರಮಂಗಲ ಠಾಣೆ, ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರತ್ಯೇಕ ಕೇಸ್ ದಾಖಲಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

  • ಪಿಎಸ್‍ಐ ಹಗರಣ – ಆರೋಪಿ ದರ್ಶನ್ ಗೌಡ ಅರೆಸ್ಟ್

    ಪಿಎಸ್‍ಐ ಹಗರಣ – ಆರೋಪಿ ದರ್ಶನ್ ಗೌಡ ಅರೆಸ್ಟ್

    ಬೆಂಗಳೂರು: ಪಿಎಸ್‍ಐ ನೇಮಕಾತಿ ಪ್ರಕರಣದಲ್ಲಿ ಭಾರೀ ಸದ್ದು ಮಾಡಿದ್ದ ಆರೋಪಿ ದರ್ಶನ್ ಗೌಡನನ್ನು ಸಿಐಡಿ ಬಂಧಿಸಿದೆ.

    ಪಿಎಸ್‍ಐ ನೇಮಕಾತಿ ಪ್ರಕರಣದ ವಿಚಾರಣೆ ವೇಳೆ ಸಚಿವ ಅಶ್ವಥ್ ನಾರಾಯಣ್ ಹಾಗೂ ಅವರ ಸಹೋದರ ಸತೀಶ್ ಹೆಸರು ಹೇಳಿದ್ದ ದರ್ಶನ್‍ಗೌಡನನ್ನು ನಿನ್ನೆ ವಶಕ್ಕೆ ಪಡೆದಿದ್ದ ಸಿಐಡಿ ಪೊಲೀಸರು ಇಂದು ಬಂಧಿಸಿರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ. ಜೊತೆಗೆ ಕೋರಮಂಗಲದಲ್ಲಿ ನೆಲಮಂಗಲ ಕಾನ್ಸ್‌ಸ್ಟೇಬಲ್‌ ಮೋಹನ್ ಕುಮಾರ್ ಹಾಗೂ ರಾಮಮೂರ್ತಿನಗರ ಪೊಲೀಸರು ಹರೀಶ್‍ನನ್ನು ಬಂಧಿಸಿದ್ದಾರೆ.

    ಪ್ರತ್ಯೇಕವಾಗಿ ಮೂರು ಕೇಸ್ ದಾಖಲಿಸಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬೆಂಗಳೂರಿನ ರಾಮಮೂರ್ತಿನಗರ, ಕೋರಮಂಗಲ ಠಾಣೆ, ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರತ್ಯೇಕ ಕೇಸ್ ದಾಖಲಿಸಿದ್ದಾರೆ. ಇದನ್ನೂ ಓದಿ:  PSI ಹಗರಣದಲ್ಲಿ ಸಚಿವರ ಹೆಸರು ಥಳಕು – 80 ಲಕ್ಷ ಲಂಚ ಪಡೆದಿದ್ರಾ ಅಶ್ವತ್ಥ್ ನಾರಾಯಣ್ ಸಹೋದರ?

    ಪರೀಕ್ಷೆಯಲ್ಲಿ 9ನೇ ರ‍್ಯಾಂಕ್ ಪಡೆದಿದ್ದ ದರ್ಶನ್ ಗೌಡ ಈ ಹಿಂದಿನ ವಿಚಾರಣೆಯಲ್ಲಿ ಸಚಿವ ಅಶ್ವಥ್ ನಾರಾಯಯಣ ಸಹೋದರ ಸತೀಶ್ ಅವರ ಹೆಸರನ್ನು ಹೇಳಿದ್ದ ಎಂದು ವರದಿಯಾಗಿತ್ತು. ಈ ವಿಚಾರ ಬೆಳಕಿಗೆ ಬಂದಂತೆ ಕಾಂಗ್ರೆಸ್ ನಾಯಕರು ಅಶ್ವಥ್ ನಾರಾಯಣ ಮೇಲೆ ಮುಗಿಬಿದ್ದು ಟೀಕೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಪಿಎಸ್‍ಐ ಅಕ್ರಮದಲ್ಲಿ ಅಶ್ವಥ್ ನಾರಾಯಣ ಸಹೋದರನಿಗೆ ಲಿಂಕ್ : ಉಗ್ರಪ್ಪ ಆರೋಪ

  • ನೀನಾಸಂ ಸತೀಶ್ ಫಸ್ಟ್ ಫೋಟೋ ಶೂಟ್ ಸ್ಟೋರಿ ವಿತ್ ಫೋಟೋ ಆಲ್ಬಂ

    ನೀನಾಸಂ ಸತೀಶ್ ಫಸ್ಟ್ ಫೋಟೋ ಶೂಟ್ ಸ್ಟೋರಿ ವಿತ್ ಫೋಟೋ ಆಲ್ಬಂ

    ಶಿವರಾಜ್ ಕುಮಾರ್ ನಟನೆಯ ಮಾದೇಶ ಸಿನಿಮಾದ ಚಿಕ್ಕದೊಂದು ಪಾತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದವರು ನೀನಾಸಂ ಸತೀಶ್. ನೀನಾಸಂನಲ್ಲಿ ನಾಟಕ ತರಬೇತಿ ಪಡೆದ ನಂತರ ಕಿರುತೆರೆಯಲ್ಲೂ ಕೆಲವು ಧಾರಾವಾಹಿಗಳಲ್ಲಿ ನಟಿಸಿದರು. ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು 2008ರಲ್ಲಿ ತೆರೆಕಂಡ ಮಾದೇಶ ಚಿತ್ರದ ಮೂಲಕ ಎನ್ನುವುದು ವಿಶೇಷ.

    ಸಿನಿಮಾ ರಂಗಕ್ಕೆ ಮತ್ತು ಕಿರುತೆರೆಗೆ ಪ್ರವೇಶ ಮಾಡಲು ಫೋಟೋ ಶೂಟ್ ಮಾಡಿಸಿ ಅಂತ ಗೆಳೆಯರು ಕೊಟ್ಟ ಸಲಹೆ ಮೇರೆಗೆ ಸಿನಿಮಾ  ಫೋಟೋ ಜರ್ನಲಿಸ್ಟ್ ಆದ ಡಿ.ಸಿ ನಾಗೇಶ್ ಅವರು ಮೊದಲ ಬಾರಿಗೆ ಸತೀಶ್ ಅವರ ಫೊಟೋ ಶೂಟ್ ಮಾಡಿ, ನಾನಾ ಬಗೆಯ  ಛಾಯಾಚಿತ್ರಗಳನ್ನು ಸೆರೆಹಿಡಿದು ಕೊಟ್ಟರು. ಈ ಫೋಟೋ ಶೂಟ್ ಗಾಗಿಯೇ ಸತೀಶ್ ಹಲವು ಬಗೆಯ ಕಾಸ್ಟ್ಯೂಮ್ ಕೂಡ ಕೊಂಡಿದ್ದರು. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

    ಮಾದೇಶ ನಂತರ ಮನಸಾರೆ, ಪಂಚರಂಗಿ, ಪರಮಾತ್ಮ, ಲೈಫು ಇಷ್ಟೆನೆ, ಪುಟ್ಟಕ್ಕನ ಹೈವೇ ಹೀಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್, ದಿಗಂತ್, ಶ್ರುತಿ ಸೇರಿದಂತೆ ಹಲವು ಕಲಾವಿದರ ಜತೆ ಹೀರೋ ಆಗುವ ಮುನ್ನ ನಟಿಸಿದ್ದಾರೆ. ಆದರೆ, ಸತೀಶ್ ಅವರು ಹೀರೋ ಆಗಿ ಲಾಂಚ್ ಆಗಿದ್ದು ಯೋಗರಾಜ್ ಭಟ್ ನಿರ್ದೇಶನದ ‘ಡ್ರಾಮಾ’ ಸಿನಿಮಾದ ಮೂಲಕ. ಈ ಚಿತ್ರದಲ್ಲಿ ಯಶ್ ಮತ್ತು ಸತೀಶ್ ಒಟ್ಟಿಗೆ ನಟಿಸಿ, ಚಿತ್ರದ ಗೆಲುವಿಗೆ ಕಾರಣರಾದರು.

    ನೀನಾಸಂ ಸತೀಶ್ ಅವರು ಸೋಲೋ ಹೀರೋ ಅಂತ ಆಗಿದ್ದು ಪವನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ಲೂಸಿಯಾ ಚಿತ್ರದ ಮೂಲಕ. ಈ ಚಿತ್ರದ ಪಾತ್ರಕ್ಕಾಗಿ ಅವರು ವಿವಿಧ ಸಿನಿಮಾ ರಂಗದಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂತು. ಈ ಸಿನಿಮಾಗಾಗಿ ಹತ್ತು ಹಲವು ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದವು. ವೃತ್ತಿ ಬದುಕಿಗೆ ತಿರುವು ನೀಡಿದಂತಹ ಸಿನಿಮಾವಿದು. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

    ಅಲ್ಲಿಂದ ಮತ್ತಷ್ಟು ಸಿನಿಮಾಗಳಲ್ಲಿ ಸತೀಶ್ ನಾಯಕನಾಗಿ ನಟಿಸಿದರು. ಕ್ವಾಟ್ಲೆ ಸತೀಶ್, ಲವ್ ಇನ್ ಮಂಡ್ಯ, ರಾಕೆಟ್, ಬ್ಯುಟಿಫುಲ್ ಮನಸ್ಸುಗಳು, ಟೈಗರ್ ಗಲ್ಲಿ ಹೀಗೆ ಒಂದರ ಹಿಂದೆ ಒಂದರಂತೆ ಸಿನಿಮಾ ಮಾಡುತ್ತಾ ಬಂದರು. ಅಯೋಗ್ಯ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯುವ ಮೂಲಕ ಸತೀಶ್ ಸ್ಟಾರ್ ನಟರಾಗಿ ಭಡ್ತಿ ಪಡೆದರು. ಅಲ್ಲಿಂದ ಸತೀಶ್ ದುನಿಯಾನೇ ಬದಲಾಯಿತು. ನಿರ್ಮಾಪಕರಾದರು, ಆಡಿಯೋ ಕಂಪೆನಿ ಮಾಲೀಕರು ಆದರು. ಇವರ ನಟನೆಗಾಗಿ ಸೈಮಾ, ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್

    ಸದ್ಯ ಐದಾರು ಚಿತ್ರಗಳಲ್ಲಿ ನಟಿಸುತ್ತಿರುವ ಸತೀಶ್ ಅವರ ಬದುಕಿಗೆ ಈ ಫೋಟೋ ಶೂಟ್ ಏನೆಲ್ಲ ತಿರುವು ನೀಡಿದೆ. ಈ ಸಂದರ್ಭದಲ್ಲಿ ಸತೀಶ್ ಆಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಮತ್ತು ಫೊಟೋ ಶೂಟ್ ಮಾಡಿದ ನಾಗೇಶ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

  • ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪರಿಸರ ಸ್ನೇಹಿ ಅರಿವು ಮೂಡಿಸಿದ ಪಬ್ಲಿಕ್ ಹೀರೋ

    ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪರಿಸರ ಸ್ನೇಹಿ ಅರಿವು ಮೂಡಿಸಿದ ಪಬ್ಲಿಕ್ ಹೀರೋ

    – ಪಟಾಕಿ ತ್ಯಜಿಸೋಣ, ಪುಸ್ತಕ ಕೊಳ್ಳೋಣ ಮತ್ತು ಓದೋಣ

    ಮಡಿಕೇರಿ: ದೀಪಾವಳಿ ಹಬ್ಬವನ್ನು ಪರಿಸರ ಪೂರಕವಾಗಿ ಎಲ್ಲರೂ ಅಚರಣೆ ಮಾಡಬೇಕು. ‘ಪಟಾಕಿ ತ್ಯಜಿಸೋಣ, ಪುಸ್ತಕ ಕೊಳ್ಳೋಣ ಮತ್ತು ಓದೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಪಬ್ಲಿಕ್ ಹೀರೊ ಕೊಡಗಿನ ಶಾಲಾ ಶಿಕ್ಷಕ ಸತೀಶ್ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಗಾರ ನಡೆಸಿದರು.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮುಳ್ಳೂರು ಗ್ರಾಮದ ಶಿಕ್ಷಕರಾದ ಸತೀಶ್ ಪಟಾಕಿಯ ಬದಲಾಗಿ ವಿದ್ಯಾರ್ಥಿಗಳಿಗೆ ಒಂದೊಂದು ಕನ್ನಡ ಪುಸ್ತಕವನ್ನು ಖರೀದಿಸಿ ಓದಲು ತಿಳಿಸಿದರಲ್ಲದೆ ಖರೀದಿಸಿದ ಅಷ್ಟೂ ಪುಸ್ತಕವನ್ನು ವಿದ್ಯಾರ್ಥಿಗಳು ಪರಸ್ಪರ ಹಂಚಿಕೊಂಡು ಓದಿದರೆ ಒಬ್ಬೊಬ್ಬ ವಿದ್ಯಾರ್ಥಿಯು 30ಕ್ಕೂ ಅಧಿಕ ಪುಸ್ತಕವನ್ನು ಓದಿದಂತಾಗಿ ಜ್ಞಾನ ಹೆಚ್ಚಾಗುತ್ತದೆ ಎಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿದರು. ಇದನ್ನೂ ಓದಿ: ದೀಪಾವಳಿ ಗಿಫ್ಟ್ ಅಲ್ಲ, ಪೆಟ್ರೋಲ್, ಡೀಸೆಲ್ ಬೆಲೆ ಇನ್ನೂ ಕಡಿಮೆಯಾಗಬೇಕು: ಸತೀಶ್ ಜಾರಕಿಹೊಳಿ

    ವಿದ್ಯಾರ್ಥಿಗಳು ವಿವಿಧ ಬಣ್ಣ ಬಣ್ಣದ ಬೆಳಕಿನ ದೀಪಗಳನ್ನು ಹಚ್ಚಿ ಆನಂದಿಸಿದರಲ್ಲದೆ, ಪಟಾಕಿ ರಹಿತ ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ಭರವಸೆಯನ್ನು ನೀಡಿದರು. ಪಟಾಕಿಯಿಂದ ಅಪಘಾತಕ್ಕೆ ಒಳಗಾಗುತ್ತಿರುವವರಲ್ಲಿ ಪುಟ್ಟ ಮಕ್ಕಳ ಸಂಖ್ಯೆಯೇ ಹೆಚ್ಚಾಗಿರುವುದರಿಂದ ಪಟಾಕಿಯಿಂದ ಆದಷ್ಟೂ ದೂರವಿರಲು ವಿದ್ಯಾರ್ಥಿಗಳಿಗೆ ತಿಳಿಸಿದರು.

    ಪಟಾಕಿಯ ಸದ್ದಿಗೆ ಮತ್ತು ಅದರ ಹೊಗೆಗೆ ಮನೆಯ ಮೂಕ ಜೀವಿ ನಾಯಿ, ಚಿಲಿಪಿಲಿಗುಟ್ಟುವ ಪಕ್ಷಿ, ಬಣ್ಣಬಣ್ಣದ ಪತಂಗಗಳು ಹೆದರಿ ಎಲ್ಲೋ ಮರೆಯಾಗುತ್ತದೆ. ಅಸ್ವಸ್ಥರು, ವೃದ್ಧರು ಹೃದ್ರೋಗಿಗಳು, ಬಾಣಂತಿಯರು ಯಾತನೆ ಪಡುತ್ತಾರೆ. ದೀಪಾವಳಿ ಬೆಳಕಿನ ಹಬ್ಬ ಬಣ್ಣಬಣ್ಣದ ಆಕಾಶ ಬುಟ್ಟಿಗಳನ್ನು ಮನೆಯಲ್ಲಿರಿಸಿ ಅಲಂಕರಿಸಿ ಆಸ್ವಾದಿಸುವ ಹಬ್ಬ. ಇದು ತ್ಯಾಗ ಬಲಿದಾನಗಳನ್ನು ನೆನಪಿಸಿಕೊಳ್ಳುವ ಪುರಾಣ ಇತಿಹಾಸಗಳ ಕತೆಯನ್ನು ಮೆಲುಕು ಹಾಕುವ ಹಬ್ಬವಾಗಬೇಕು ಎಂದು ಮಕ್ಕಳಿಗೆ ಸಂದೇಶವನ್ನು ನೀಡಿದರು. ಇದನ್ನೂ ಓದಿ: ಲಂಡನ್‍ನಿಂದ ಬರೋ ಉಡುಗೊರೆಗೆ ಆಸೆಪಟ್ಟು 4.49 ಲಕ್ಷ ರೂ. ಕಳ್ಕೊಂಡ್ರು!

    ಸಂಭ್ರಮ ಸಡಗರದಿಂದ ಸುರಕ್ಷಿತವಾಗಿ ದೀಪಾವಳಿ ಆಚರಿಸಿ ಪ್ರತಿ ಮನೆ-ಮನೆಯಲ್ಲೂ ಪಟಾಕಿ ಹೊಡೆಯುವುದಕ್ಕಿಂತ ಸಮುದಾಯಗಳು ಒಂದೆಡೆ ಸೇರಿ ಬಯಲಿನಲ್ಲಿ ಆಚರಿಸುವಂತಾದರೆ ಮಾಲಿನ್ಯದ ಪ್ರಮಾಣವನ್ನು ಕುಗ್ಗಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ರೀತಿ ಬೆಳಕಿನ ಹಬ್ಬ ಶಬ್ದ ರಹಿತ ಮತ್ತು ಮಾಲಿನ್ಯ ರಹಿತವಾದರೆ ನಿಜವಾಗಿಯೂ ಆಚರಣೆಗೊಂದು ಅರ್ಥ ಎಂದರು. ಶಬ್ದಕ್ಕಿಂತ ಬೆಳಕೆ ಮೌಲ್ಯಯುತ ಎಂಬುದನ್ನು ವಿದ್ಯಾರ್ಥಿಗಳಿಗೆ ಶಾಲೆಯಲ್ಲೇ ತೋರಿಸಿಕೊಟ್ಟರು.

  • ಹಾಸನ ಜಿಲ್ಲೆಯಲ್ಲಿಂದು 419 ಜನರಿಗೆ ಕೊರೊನಾ – 13 ಮಂದಿ ಸೋಂಕಿಗೆ ಬಲಿ

    ಹಾಸನ ಜಿಲ್ಲೆಯಲ್ಲಿಂದು 419 ಜನರಿಗೆ ಕೊರೊನಾ – 13 ಮಂದಿ ಸೋಂಕಿಗೆ ಬಲಿ

    – 14,687ಕ್ಕೆ ಏರಿಕೆಯಾಗಿದೆ ಸೋಂಕಿತರ ಸಂಖ್ಯೆ

    ಹಾಸನ: ಹಾಸನ ಜಿಲ್ಲೆಯಲ್ಲಿ ಇಂದು 419 ಕೊರೊನಾ ಹೊಸ ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14,687ಕ್ಕೆ ಏರಿಕೆಯಾಗಿದೆ.

    ಜಿಲ್ಲೆಯಲ್ಲಿಂದು 13 ಜನ ಕೊರೊನಾ ಸೋಂಕಿನಿಂದ ಮೃತರಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 289ಕ್ಕೆ ಏರಿಕೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 2,583 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 11,815 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 49 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು ಪತ್ತೆಯಾದ 419 ಕೊರೊನಾ ಪ್ರಕರಣಗಳಲ್ಲಿ 65 ಮಂದಿ ಅರಸೀಕೆರೆ ತಾಲೂಕಿನವರಾಗಿದ್ದು, 50 ಮಂದಿ ಚನ್ನರಾಯಪಟ್ಟಣ, ಆಲೂರು ತಾಲೂಕಿನಲ್ಲಿ 14 ಜನ, 186 ಮಂದಿ ಹಾಸನ ತಾಲೂಕು, 7 ಜನ ಹೊಳೆನರಸೀಪುರ ತಾಲೂಕು, 70 ಮಂದಿ ಅರಕಲಗೂಡು ತಾಲೂಕು, ಬೇಲೂರು ತಾಲೂಕಿನ 8 ಜನ, ಸಕಲೇಶಪುರ ತಾಲೂಕಿನಲ್ಲಿ 17 ಮಂದಿಗೆ ಹಾಗೂ ಹೊರ ಜಿಲ್ಲೆಯ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಅವರು ತಿಳಿಸಿದ್ದಾರೆ.