Tag: Sarvajanikarige Suvarnavakasha

  • ರಿಷಿಗೆ ಜೋಡಿಯಾಗಿ ಕನ್ನಡಕ್ಕಾಗಮಿಸಿದ ಧನ್ಯಾ ಅಪ್ಪಟ ಕನ್ನಡತಿ!

    ರಿಷಿಗೆ ಜೋಡಿಯಾಗಿ ಕನ್ನಡಕ್ಕಾಗಮಿಸಿದ ಧನ್ಯಾ ಅಪ್ಪಟ ಕನ್ನಡತಿ!

    ನೂಪ್ ರಾಮಸ್ವಾಮಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗಾಣುತ್ತಿದೆ. ಈಗಾಗಲೇ ಟ್ರೇಲರ್, ಹಾಡುಗಳೊಂದಿಗೆ ವ್ಯಾಪಕ ನಿರೀಕ್ಷೆ ಮತ್ತು ಕುತೂಹಲಕ್ಕೆ ಕಾರಣವಾಗಿರುವ ಈ ಸಿನಿಮಾದಲ್ಲಿ ಧನ್ಯಾ ಬಾಲಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ಅವರ ಪಾತ್ರದ ಚಹರೆಗಳು ಟ್ರೇಲರ್‍ನಲ್ಲಿ ಕಾಣಿಸಿವೆ. ಹಾಗೆ ಕಂಡಿದ್ದಕ್ಕಿಂತಲೂ ಭಿನ್ನವಾದ ಗುಣ ಲಕ್ಷಣಗಳಿರುವ ಸವಾಲಿನಂಥಾ ಪಾತ್ರದಲ್ಲಿ ಕಾಣಿಸಿಕೊಂಡಿರೋ ಧನ್ಯಾ ಪಾತ್ರ ಕೂಡ ಸಾರ್ವಜನಿಕರಿಗೆ ವಿನಂತಿ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಒಂದೆಂಬುದು ಚಿತ್ರ ತಂಡದ ಭರವಸೆ.

    ಧನ್ಯಾ ಬಾಲಕೃಷ್ಣ ಈಗಾಗಲೇ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವವರು. ಆ ಎರಡೂ ಭಾಷೆಗಳ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ಧನ್ಯಾ ಈಗಲೂ ಅಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಣ ಮಾಡಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದ ಮೂಲಕವೇ ಕನ್ನಡಕ್ಕೆ ಆಗಮಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ವರ್ಷಕ್ಕೆ ಹಲವಾರು ಪರಭಾಷಾ ನಟಿಯರ ಆಗಮನವಾಗೋದರಿಂದ ಧನ್ಯಾ ಕೂಡ ಆ ಸಾಲಿಗೇ ಸೇರಿಕೊಳ್ಳುತ್ತಾರೆಂದು ಅನೇಕರು ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ ಅದು ಶುದ್ಧ ಸುಳ್ಳು.

    ಈಗಾಗಲೇ ಧನ್ಯಾ ಪರಭಾಷಾ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ ಬಹುಭಾಷಾ ನಟಿಯಾಗಿದ್ದರೂ ಕೂಡ ಅವರು ಅಪ್ಪಟ ಕನ್ನಡತಿ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿರೋ ಧನ್ಯಾ ತುಂಬಾನೇ ಸ್ಫುಟವಾಗಿ ಕನ್ನಡ ಮಾತಾಡುತ್ತಾರೆ. ಆರಂಭದಿಂದಲೂ ನಟಿಯಾಗಬೇಕೆಂಬ ಆಕಾಂಕ್ಷೆ ಹೊಂದಿದ್ದ ಧನ್ಯಾಗೆ ಅವಕಾಶಗಳ ಹೆಬ್ಬಾಗಿಲು ತೆರೆದುಕೊಂಡಿದ್ದು ಪರಭಾಷೆಯಲ್ಲಿ. ಮೊದಲು ಕನ್ನಡ ಸಿನಿಮಾದಲ್ಲಿಯೇ ನಟಿಸಬೇಕೆಂಬಂಥಾ ಆಕಾಂಕ್ಷೆಯಾಚೆಗೂ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಧನ್ಯಾ ಇಲ್ಲಿ ಮೆಡಿಕಲ್ ಸ್ಟೂಡೆಂಟ್ ಆಗಿ, ಒಂದು ಗಂಭೀರ ಕಾಯಿಲೆಯಿರೋ ಹುಡುಗಿಯಾಗಿ, ರಿಷಿಯ ಸಖಿಯಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ತಮ್ಮ ತವರು ನೆಲದಲ್ಲಿಯೇ ನಾಯಕಿಯಾಗಿ ನೆಲೆ ಕಂಡುಕೊಳ್ಳುವ ನಿರೀಕ್ಷೆಯೂ ಧನ್ಯಾರಲ್ಲಿದೆ.

  • ಸಾರ್ವಜನಿಕರಿಗೆ ಮಜವಾದ ಟ್ರೇಲರ್ ನೋಡೋ ಸುವರ್ಣಾವಕಾಶ!

    ಸಾರ್ವಜನಿಕರಿಗೆ ಮಜವಾದ ಟ್ರೇಲರ್ ನೋಡೋ ಸುವರ್ಣಾವಕಾಶ!

    ಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ನಾಯಕನಾಗಿ ನಟಿಸಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಇತ್ತೀಚಿನ ದಿನಗಳಲ್ಲಿ ಭಿನ್ನಾತಿ ಭಿನ್ನ ಶೀರ್ಷಿಕೆಗಳ ಜಮಾನವೊಂದು ಶುರುವಾಗಿದೆಯಲ್ಲಾ? ಅದನ್ನು ಮತ್ತಷ್ಟು ಮಿರುಗಿಸುವಂಥಾ ಗುಣ ಲಕ್ಷಣಗಳನ್ನು ಈ ಚಿತ್ರ ದಟ್ಟವಾಗಿಯೇ ಹೊಮ್ಮಿಸುತ್ತಿದೆ. ಈಗಾಗಲೇ ಎಲ್ಲಾ ರೀತಿಯಿಂದಲೂ ಟಾಕ್ ಕ್ರಿಯೇಟ್ ಮಾಡಿರೋ ಈ ಸಿನಿಮಾ ತಂಡ ಇದೀಗ ಟ್ರೇಲರ್ ಲಾಂಚ್ ಮಾಡಿದೆ. ಈ ಮೂಲಕ ಮಜವಾದ ಟ್ರೇಲರ್ ಒಂದನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಸಾರ್ವಜನಿಕರಿಗೆ ಸಿಕ್ಕಂತಾಗಿದೆ.

    ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನ ಮಾಡಿರೋ ಈ ಸಿನಿಮಾದ ಟ್ರೇಲರ್ ನಿಜಕ್ಕೂ ಮಜವಾಗಿದೆ. ಅದಕ್ಕೆ ತಕ್ಕುದಾದ ಕಥಾ ಹಂದರದ ಸುಳಿವಿನೊಂದಿಗೆ ಪ್ರೇಕ್ಷಕರನ್ನೆಲ್ಲ ಖುಷಿಗೊಳಿಸಿದೆ. ಪ್ರೀತಿ, ಪ್ರೇಮ, ಭರ್ಜರಿ ಮನೋರಂಜನೆ, ಒಂದು ಕಾಯಿಲೆ, ಮತ್ಯಾವುದೋ ನಿಗೂಢ ಮತ್ತು ಖದರ್ ಹೊಂದಿರುವಂಥಾ ಮಾಸ್ ಸನ್ನಿವೇಶ. ಇಷ್ಟಿದ್ದು ಬಿಟ್ಟರೆ ಯಾವುದೇ ಸಿನಿಮಾವಾದರೂ ಪ್ರೇಕ್ಷಕರಿಗೆ ಇಷ್ಟವಾಗಲು ಮತ್ತೇನು ಬೇಕಿದ್ದೀತು? ಈಗ ಹೊರ ಬಂದಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಟ್ರೇಲರಿನಲ್ಲಿ ಅಷ್ಟೆಲ್ಲ ಅಂಶಗಳಿವೆ. ಈ ಕಾರಣದಿಂದಲೇ ಅದು ಪ್ರೇಕ್ಷಕರಿಗೆಲ್ಲ ಇಷ್ಟವಾಗಿದೆ.

    ಈ ಚಿತ್ರವನ್ನು ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಣ ಮಾಡಿದ್ದಾರೆ. ಇದನ್ನು ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನ ಮಾಡಿದ್ದಾರೆ. ಇದು ಹೊಸ ಅಲೆಯ ಚಿತ್ರಗಳ ಸಾಲಿನಲ್ಲಿಯೇ ಹೊಸಾ ಛಾಪು ಮೂಡಿಸುವಂಥಾ ಗುಣಲಕ್ಷಣಗಳನ್ನು ಒಳಗೊಂಡಿರುವ ಚಿತ್ರ. ಆರಂಭದಿಂದಲೇ ಸುದ್ದಿ ಮಾಡುತ್ತಾ ಬಂದಿದ್ದ ಈ ಸಿನಿಮಾದತ್ತ ಈಗಂತೂ ಎಲ್ಲರೂ ಆಕರ್ಷಿತರಾಗಿದ್ದಾರೆ. ಈ ಟ್ರೇಲರ್ ನೋಡಿದ ಮೇಲಂತೂ ಯಾರಿಗೇ ಆದರೂ ಆದಷ್ಟು ಬೇಗನೆ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಕಾತರ ಮೂಡಿಕೊಳ್ಳದಿರುವುದಿಲ್ಲ. ಪ್ರೇಕ್ಷಕರಲ್ಲಿಯೂ ಕೂಡಾ ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ಗಾಢವಾದ ನಂಬಿಕೆ ಹುಟ್ಟಿಕೊಂಡಿದೆ. ದತ್ತಣ್ಣ, ರಿಷಿ, ರಂಗಾಯಣ ರಘು, ಮಿತ್ರಾ ಸೇರಿದಂತೆ ಹಲವರ ಪಾತ್ರ ಪರಿಚಯ ಮಾಡಿಸುತ್ತಲೇ ಈ ಟ್ರೇಲರ್ ಸಖತ್ ಕ್ರೇಜ್ ಹುಟ್ಟುಹಾಕಿದೆ.

  • ಸಾರ್ವಜನಿಕರಿಗೆ ಅಪ್ಪು ಹಾಡಿದ ಉಪ್ಪಿನ ಸಾಂಗು ಕೇಳೋ ಸುವರ್ಣಾವಕಾಶ!

    ಸಾರ್ವಜನಿಕರಿಗೆ ಅಪ್ಪು ಹಾಡಿದ ಉಪ್ಪಿನ ಸಾಂಗು ಕೇಳೋ ಸುವರ್ಣಾವಕಾಶ!

    ಬೆಂಗಳೂರು: ಕನ್ನಡ ಚಿತ್ರರಂಗದ ಪಾಲಿಗೆ ಹೊಸ ಅಲೆಯ ಚಿತ್ರಗಳ ಹಬ್ಬದಂಥಾ ಕಾಲ. ಈ ಸಾಲಿನಲ್ಲಿಯೇ ಮೂಡಿ ಬಂದಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರವೀಗ ನಾನಾ ಥರದಲ್ಲಿ ಸುದ್ದಿ ಕೇಂದ್ರದಲ್ಲಿದೆ. ಇದೀಗ ಚಿತ್ರತಂಡ ಸಾರ್ವಜನಿಕರಿಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಡಿರುವ ಮಜವಾದ ಹಾಡೊಂದನ್ನು ಕೇಳೋ ಸುವರ್ಣಾವಕಾಶ ಕಲ್ಪಿಸಿದೆ. ಪ್ರೀತಿಯಲ್ಲಿ ಏಟು ತಿಂದ ಪಡ್ಡೆಗಳ ತಲೆಯಲ್ಲಿ ವಾಸ್ತವದ ವೇದಾಂತ ಗಿರಕಿ ಹೊಡೆಯುತ್ತದಲ್ಲಾ? ಅಂಥಾ ಭಾವಗಳನ್ನೇ ಬಸಿದುಕೊಂಡಂತಿರೋ ಸಾಹಿತ್ಯವಿರುವ ಈ ಹಾಡು ಇದೀಗ ಬಿಡುಗಡೆಯಾಗಿದೆ. ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳುತ್ತಾ ಮುಂದುವರೆಯುತ್ತಿರೋ ಈ ಹಾಡು ಇಷ್ಟರಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಲಕ್ಷಣಗಳೂ ದಟ್ಟವಾಗಿವೆ.

    ಏನು ಸ್ವಾಮಿ ಮಾಡೋಣ ಆಗಿಹೋಯ್ತು ಅದ್ವಾನ ಹಾಕಿ ಬಿಟ್ಲು ಕಿಟಕಿ ಬಾಗ್ಲನ್ನ ಅಂತ ಶುರುವಾಗೋ ಮಜವಾದ ಈ ಹಾಡು ಆ ನಂತರದಲ್ಲಿ ಬದುಕಿನ ವಾಸ್ತವವನ್ನು ಕೂಡಾ ಅಷ್ಟೇ ಮಜವಾಗಿ ತೆರೆದಿಡುತ್ತದೆ. ಮಿದುನ್ ಮುಕುಂದನ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಮೆಲೋಡಿ ಹಾಡುಗಳ ಮೂಲಕವೇ ಮನಗೆದ್ದಿರೋ ನಾಗೇಂದ್ರ ಪ್ರಸಾದರ ಪಾಂಡಿತ್ಯದ ಮತ್ತೊಂದು ಮಜಲು ಈ ಹಾಡಿನ ಮೂಲಕ ಅನಾವರಣಗೊಂಡಿದೆ. ಈ ಹಾಡು ಪನೀತ್ ರಾಜ್‍ಕುಮಾರ್ ಕಂಠಸಿರಿಯಲ್ಲಿ ಎಲ್ಲರಿಗೂ ಇಷ್ಟವಾಗುವಂತೆ ಮೂಡಿ ಬಂದಿದೆ.

    ಈ ಹಾಡಿನಲ್ಲಿ ನಾಯಕ ರಿಷಿಯಂತೂ ಪಡ್ಡೆ ಹುಡುಗರ ಭಾವಾವೇಷವನ್ನು ಆವಾಹಿಸಿಕೊಂಡವರಂತೆ ಹೆಜ್ಜೆ ಹಾಕಿದ್ದಾರೆ. ಅನೂಪ್ ರಾಮಸ್ವಾಮಿ ಕಶ್ಯಪ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಸೇರಿಕೊಂಡು ನಿರ್ಮಾಣ ಮಾಡಿದ್ದಾರೆ. ಸಿದ್ದು ಮೂಲಿಮನಿ, ರಂಗಾಯಣ ರಘು, ದತ್ತಣ್ಣ ಪ್ರಧಾನ ಪಾತ್ರಗಳನ್ನು ನಿರ್ವಹಿಸಿರೋ ಈ ಸಿನಿಮಾದಲ್ಲಿ ಧನ್ಯಾ ರಿಷಿಗೆ ಜೋಡಿಯಾಗಿ ನಟಿಸಿದ್ದಾರೆ. ಈ ಹಿಂದೆ ಕವಲು ದಾರಿ ಎಂಬ ಸಿನಿಮಾದಲ್ಲಿಯೂ ರಿಷಿಗೆ ಸಾಥ್ ಕೊಟ್ಟಿದ್ದ ಪುನೀತ್ ರಾಜ್ ಕುಮಾರ್ ಈ ಸಿನಿಮಾಗೆ ಹಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಸಂಪೂರ್ಣವಾಗಿ ಭಿನ್ನ ಕಥಾನಕ ಹೊಂದಿರೋ ಈ ಚಿತ್ರವೀಗ ಬಿಡುಗಡೆಯ ಹಾದಿಯಲ್ಲಿದೆ.