Tag: Sarjapur

  • ನಿಮ್ಮೊಂದಿಗೆ ನಾವಿದ್ದೇವೆ- ಸಾವನ್ನಪ್ಪಿದ್ದ ಪೊಲೀಸ್ ಕುಟುಂಬಕ್ಕೆ ಧೈರ್ಯ ತುಂಬಿದ ರವಿಚನ್ನಣ್ಣನವರ್

    ನಿಮ್ಮೊಂದಿಗೆ ನಾವಿದ್ದೇವೆ- ಸಾವನ್ನಪ್ಪಿದ್ದ ಪೊಲೀಸ್ ಕುಟುಂಬಕ್ಕೆ ಧೈರ್ಯ ತುಂಬಿದ ರವಿಚನ್ನಣ್ಣನವರ್

    ಬೆಂಗಳೂರು: ಎಎಸ್‍ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಅಕಾಲಿಕ ಮರಣ ಹೊಂದಿದ್ದು, ಬೆಂಗಳೂರು ಗ್ರಾಮಾಂತರ ಎಸ್.ಪಿ ರವಿ ಡಿ ಚನ್ನಣ್ಣನವರ್ ಹಾಗೂ ಸಿಬ್ಬಂದಿ ವರ್ಗದವರು ಶ್ರದ್ಧಾಂಜಲಿ ಸಲ್ಲಿಸಿದರು.

    ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಜಾಪುರ ಠಾಣೆಯಲ್ಲಿ ಎಎಸ್‍ಐ ಆಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅಶೋಕ್ ಅವರು ಇನ್ನೂ ಎರಡು ವರ್ಷ ವೃತ್ತಿ ಜೀವನ ಬಾಕಿ ಇರುವಾಗಲೇ ಸಾವನ್ನಪ್ಪಿದ್ದಾರೆ. ಸಹಜ ಕಾಯಿಲೆಗೆ ತುತ್ತಾಗಿ ಅಶೋಕ್ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

    ಇವರ ಸಾವಿನಿಂದ ಕುಟುಂಬ ವರ್ಗ ಹಾಗು ಪೊಲೀಸ್ ಸಿಬ್ಬಂದಿ ಸಂತಾಪ ಸೂಚಿಸಿದ್ದು, ಬೆಂಗಳೂರು ಗ್ರಾಮಾಂತರ ನೂತನ ಎಸ್.ಪಿ ರವಿ ಡಿ ಚನ್ನಣ್ಣನವರ್, ಅಶೋಕ್ ಅವರ ಅಂತಿಮ ದರ್ಶನ ಪಡೆದುಕೊಂಡರು. ಈ ವೇಳೆ ಮಾತನಾಡಿದ ಅವರು, ಅಶೋಕ್ ಅವರು ನಮ್ಮ ಜಿಲ್ಲೆಯಲ್ಲಿ 34 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ. ಅವರು ಇಂದು ಅಕಾಲಿಕ ಮರಣವೊಂದಿದ್ದಾರೆ, ಇಲಾಖೆಯೂ ಒಬ್ಬ ಒಳ್ಳೆಯ ಅಧಿಕಾರಿಯನ್ನು ಕಳೆದಿಕೊಂಡಿದೆ. ಅವರ ಕುಟುಂಬದೊಂದಿಗೆ ಸದಾ ನಾವು ಜೊತೆಗಿರುತ್ತೇವೆಂದು ತಿಳಿಸಿದರು.

  • ಪ್ರೀತ್ಸೇ ಅಂತಾ ಆಂಟಿ ಹಿಂದೆ ಬಿದ್ದಿದ್ದ..! – ನೋ ಅಂದಿದ್ದಕ್ಕೆ ಕೆರೆಗೆ ಹಾರಿ ಪ್ರಾಣಬಿಟ್ಟ?

    ಪ್ರೀತ್ಸೇ ಅಂತಾ ಆಂಟಿ ಹಿಂದೆ ಬಿದ್ದಿದ್ದ..! – ನೋ ಅಂದಿದ್ದಕ್ಕೆ ಕೆರೆಗೆ ಹಾರಿ ಪ್ರಾಣಬಿಟ್ಟ?

    ಬೆಂಗಳೂರು: ಪ್ರೀತ್ಸೇ, ಪ್ರೀತ್ಸೇ ಅಂತಾ ಮದುವೆಯಾದ ಯುವತಿ ಹಿಂದೆ ಬಿದ್ದ. ಆದರೆ ಆ ಯುವತಿ ಈತನ ಪ್ರೀತಿಯನ್ನು ಸ್ಪಷ್ಟವಾಗಿ ನಿರಾಕರಿಸಿದಳು. ಇದರಿಂದ ಮನನೊಂದಿದ್ದ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬೆಂಗಳೂರು ಹೊರವಲಯದ ಸರ್ಜಾಪುರ ಕೆರೆಯಲ್ಲಿ ನಡೆದಿದೆ.

    ಸರ್ಜಾಪುರ ನಿವಾಸಿ ವೆಂಕಟೇಶ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಬುಧವಾರದಿಂದ ವೆಂಕಟೇಶ್ ನಾಪತ್ತೆಯಾಗಿದ್ದ. ಬುಧವಾರ ಸಂಜೆ 5 ಗಂಟೆಗೆ ಮನೆಯವರು ಫೋನ್ ಮಾಡಿದಾಗ ವೆಂಕಟೇಶ್, ನಾನು ಸರ್ಜಾಪುರ ಕೆರೆ ಪಕ್ಕ ಇದ್ದೇನೆ. ಇನ್ನೆರಡು ಗಂಟೆಯಲ್ಲಿ ಮನೆಗೆ ವಾಪಸ್ ಬರುತ್ತೇನೆ ಎಂದು ಹೇಳಿದ್ದನಂತೆ. ಆದರೆ 2 ತಾಸು ಕಳೆದರೂ ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ವೆಂಕಟೇಶ್ ತಂದೆ, ತಾಯಿ ಹಾಗೂ ತಮ್ಮ ಕೆರೆ ಬಳಿ ಬಂದಿದ್ದಾರೆ. ಈ ವೇಳೆ ಹುಡುಕಾಟ ನಡೆಸುತ್ತಿದ್ದಾಗ ವೆಂಕಟೇಶ್ ಚಪ್ಪಲಿ ಕೆರೆಯಲ್ಲಿ ತೇಲುತ್ತಿರುವುದು ಗಮನಕ್ಕೆ ಬಂದಿದೆ. ನಂತರ ಪೋಷಕರು ಸರ್ಜಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈತ 6 ತಿಂಗಳ ಹಿಂದಷ್ಟೇ ಮದುವೆಯಾಗಿರೋ ಯುವತಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದ. ಆದರೆ ಆ ಯುವತಿ ಈತನ ಪ್ರೀತಿಗೆ ನೋ ಅಂದಿದ್ದಳು. ಇದರಿಂದ ಆತ ತುಂಬಾ ಮನನೊಂದಿದ್ದ. ಹೀಗಾಗಿ ಆತ ಈ ಕೃತ್ಯವೆಸಗಿರಬಹುದು ಎಂದು ವೆಂಕಟೇಶ್ ಸ್ನೇಹಿತರು ಮಾಹಿತಿ ನೀಡಿದ್ದಾರೆ.

    ನಿನ್ನೆ ದಿನಪೂರ್ತಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಆದರೆ ಇಂದು ಬೆಳಗ್ಗೆ 11.30ರ ವೇಳೆಗೆ ಮೃತದೇಹ ಕೆರೆಯಲ್ಲಿ ತೇಲಿ ಬಂದಿದೆ. ಈ ಕೆರೆ 15 ರಿಂದ 20 ಅಡಿ ಆಳವಿದೆ. ಪೊಲೀಸರು ಸದ್ಯ ವೆಂಕಟೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಪುತ್ರನನ್ನು ಕಳೆದುಕೊಂಡ ವೆಂಕಟೇಶ್ ಪೋಷಕರ ಆಕ್ರಂದನ ಸ್ಥಳದಲ್ಲಿ ಮುಗಿಲುಮುಟ್ಟಿತ್ತು. ಪ್ರಕರಣ ದಾಖಲಿಸಿರುವ ಸರ್ಜಾಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.