Tag: sapling

  • ಲಾಕ್‍ಡೌನ್ ಡ್ಯೂಟಿ ಮಧ್ಯೆ 20 ಸಾವಿರ ಸಸಿ ಬೆಳೆಸಿದ ರಾಯಚೂರು ಪೊಲೀಸರು

    ಲಾಕ್‍ಡೌನ್ ಡ್ಯೂಟಿ ಮಧ್ಯೆ 20 ಸಾವಿರ ಸಸಿ ಬೆಳೆಸಿದ ರಾಯಚೂರು ಪೊಲೀಸರು

    – ಪೊಲೀಸರಿಂದ ಸಾರ್ವಜನಿಕರಿಗೆ ಉಚಿತ ಉಡುಗೊರೆ

    ರಾಯಚೂರು: ಬಿಸಿಲನಾಡು ರಾಯಚೂರನ್ನು ಹಸಿರು ಜಿಲ್ಲೆಯನ್ನಾಗಿಸಲು ಜಿಲ್ಲಾ ಪೊಲೀಸ್ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ. ಕೊರೊನಾ ಲಾಕ್ ಡೌನ್ ಸಮಯದಲ್ಲೂ 20 ಸಾವಿರ ಸಸಿಗಳನ್ನು ಬೆಳೆಸಿದೆ.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಅವರು ಹಸಿರು ಜಿಲ್ಲೆಗಾಗಿ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರೊಂದಿಗೆ 5 ಲಕ್ಷ ಸಸಿಗಳನ್ನು ನೆಡುವ ಪ್ರತಿಜ್ಞೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ರಾಯಚೂರಿನ ನಾಗರಿಕರ ಸಹಕಾರದೊಂದಿಗೆ ಹಾಲಿನ ಪ್ಯಾಕೆಟ್ ಗಳನ್ನು ಸಂಗ್ರಹಿಸಿ ಅದರಲ್ಲಿ ವಿವಿಧ ರೀತಿಯ ಬೀಜಗಳನ್ನು ಹಾಕಿ ಸಸಿಗಳನ್ನು ಬೆಳೆಸಿ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಸುಮಾರು 20 ಸಾವಿರ ಪಪ್ಪಾಯ, ಸೀತಾಫಲಾ, ಮಾವು, ಪೇರಲ, ಹುಣಸೆ, ನುಗ್ಗೆಕಾಯಿ, ಹೊಂಗೆ, ಅಲೊವೇರಾ ಸೇರಿದಂತೆ ವಿವಿಧ ರೀತಿಯ ಸಸಿಗಳನ್ನು ಬೆಳೆಸಿದ್ದಾರೆ.

    ದಣಿವರಿಯದ ಕರೊನಾ ಲಾಕ್‍ಡೌನ್ ಕರ್ತವ್ಯದ ಮಧ್ಯೆ ಬಿಡುವಿನ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಸಸಿಗಳನ್ನು ನೆಡುವ ಕಾರ್ಯದ ಕಡೆ ಗಮನ ಹರಿಸಿ, ಅವುಗಳನ್ನು ಪೋಷಣೆ ಮಾಡುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ ಪರಿಶ್ರಮದಿಂದ ಸುಮಾರು 20 ಸಾವಿರ ಸಸಿಗಳು ಸಿದ್ಧವಾಗಿವೆ. ಆದ್ದರಿಂದ ರಾಯಚೂರು ಜಿಲ್ಲೆಯ ನಾಗರಿಕರು ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗುವಾಗ ಇತರೆ ಉಡುಗೊರೆ ನೀಡುವ ಬದಲಾಗಿ ಸಸಿಗಳನ್ನು ಉಡುಗೊರೆಯಾಗಿ ನೀಡಿ ಜಿಲ್ಲೆಯನ್ನು ಹಸಿರು ಜಿಲ್ಲೆಯಾಗಿಸಲು ಸಹಕರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಕೋರಿದ್ದಾರೆ.

    ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಸಸಿಗಳು ಬೇಕಾದಲ್ಲಿ ಮೊಬೈಲ್ ಸಂಖ್ಯೆ 9480803806 ಅಥವಾ 9480803840ಕ್ಕೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

  • ಮಗ್ಳ ಮದ್ವೆಗೆ ಅತಿಥಿಗಳಿಗೆ ಪರಿಸರವಾದಿಯಿಂದ 5,000ಕ್ಕೂ ಹೆಚ್ಚು ಸಸಿಗಳ ಉಡುಗೊರೆ

    ಮಗ್ಳ ಮದ್ವೆಗೆ ಅತಿಥಿಗಳಿಗೆ ಪರಿಸರವಾದಿಯಿಂದ 5,000ಕ್ಕೂ ಹೆಚ್ಚು ಸಸಿಗಳ ಉಡುಗೊರೆ

    ಚಾಮರಾಜನಗರ: ಸಾಮಾನ್ಯವಾಗಿ ಮದುವೆಯಲ್ಲಿ ಬಂದ ಅತಿಥಿಗಳಿಗೆ ತಾಂಬೂಲದ ಜೊತೆ ಉಡುಗೊರೆಗಳನ್ನು ಕೊಡುವುದು ವಾಡಿಕೆ. ಆದರೆ ಕೊಳ್ಳೇಗಾಲದಲ್ಲಿ ಮದುವೆಯಲ್ಲಿ ಬಂದ ಅತಿಥಿಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಗಿಡಗಳನ್ನು ಗಿಫ್ಟ್ ಆಗಿ ನೀಡುವ ಮೂಲಕ ಹಸಿರೇ ಉಸಿರು ಎನ್ನುವುದನ್ನು ಸಾಬೀತು ಮಾಡಿದ್ದಾರೆ.

    ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪರಿಸರವಾದಿ ಕೃಷ್ಣಮೂರ್ತಿ ಅವರು ಕಳೆದ ಒಂದು ದಶಕದಿಂದ ಪರಿಸರ ಸಂರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಮರಗಳ ಹನನ, ಅಕ್ರಮ ಮರಳು ಸಾಗಾಣಿಕೆ, ಪ್ರಾಣಿಗಳ ಬೇಟೆ, ಮರಗಳ್ಳತನ ವಿರುದ್ಧ ಹೋರಾಟ ನಡೆಸುತ್ತಿರುವ ಇವರು ತಮ್ಮ ಮಗಳ ಮದುವೆಯಲ್ಲೂ ಪರಿಸರ ಕಾಳಜಿ ಮೆರೆದಿದ್ದಾರೆ.

    ಕೃಷ್ಣಮೂರ್ತಿ ತಮ್ಮ ಮಗಳ ಮದುವೆಗೆ ಬಂದ ಅತಿಥಿಗಳಿಗೆ ಹಾಗು ಬಂಧು- ಬಾಂಧವರಿಗೆ ತಟ್ಟೆ, ಲೋಟ ಮತ್ತಿತರ ಉಡುಗೊರೆ ಬದಲಿಗೆ ಗಿಡಗಳನ್ನು ನೀಡಿದರೆ ಹೇಗೆ ಎಂದು ಚಿಂತಿಸಿ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

    ಕೊಳ್ಳೇಗಾಲದಲ್ಲಿ ನಡೆದ ತಮ್ಮ ಮಗಳು ಕಾವೇರಿಯ ಮದುವೆಗೆ ಬಂದ ಅತಿಥಿಗಳಿಗೆಲ್ಲಾ ಐದು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೀಡುವ ಮೂಲಕ ತಮ್ಮ ಪರಿಸರ ಕಾಳಜಿ ಮೆರೆದಿದ್ದಾರೆ. ಮಾವು, ಬೇವು, ನೇರಳೆ, ಸೀಬೆ, ನಿಂಬೆ, ಸಪೋಟ, ಹೊಂಗೆ ಮತ್ತಿತರ ಜಾತಿಯ ಗಿಡಗಳನ್ನು ಅತಿಥಿಗಳಿಗೆ ಉಡುಗೊರೆಯಾಗಿ ನೀಡಲಾಯಿತು.

    ಕೃಷ್ಣಮೂರ್ತಿ ಅವರ ಈ ಕಾಳಜಿಗೆ ಅರಣ್ಯ ಇಲಾಖೆಯೂ ಕೈಜೋಡಿಸಿತ್ತು. ಜೊತೆಗೆ ಮದುವೆಯಲ್ಲಿ ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ರೋಲ್ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳಿಗೆ ಕಡಿವಾಣ ಹಾಕಲಾಗಿತ್ತು. ಈ ವಿವಾಹ ಮಹೋತ್ಸವಕ್ಕೆ ಬಂದ ಪ್ರತಿಯೊಬ್ಬರಲ್ಲೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಇದೊಂದು ವಿಭಿನ್ನ ಪ್ರಯತ್ನವಾಗಿತ್ತು.

  • ಸಸಿ ನೆಟ್ಟು ರಂಜಾನ್ ಆಚರಿಸಿದ ರಾಯಚೂರಿನ ಜನತೆ

    ಸಸಿ ನೆಟ್ಟು ರಂಜಾನ್ ಆಚರಿಸಿದ ರಾಯಚೂರಿನ ಜನತೆ

    ರಾಯಚೂರು: ಇಂದು ಮುಸ್ಲಿಂ ಬಾಂಧವರು ಖುಷಿಯಿಂದ ಆಚರಿಸುವ ರಂಜಾನ್ ಹಬ್ಬದ ಜೊತೆಗೆ ವಿಶ್ವ ಪರಿಸರ ದಿನವೂ ಹೌದು. ಹೀಗಾಗಿ ಈ ವಿಶೇಷ ದಿನದಂದು ರಾಯಚೂರಿನ ಜನತೆ ಸಸಿಗಳನ್ನು ನೆಟ್ಟು ರಂಜಾನ್ ಹಬ್ಬವನ್ನು ಸಂಭ್ರಮಿಸುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.

    ದೇವದುರ್ಗದ ಜಾಲಹಳ್ಳಿಯಲ್ಲಿ ಸಸಿ ನೆಡುವ ಮೂಲಕ ಪವಿತ್ರ ರಂಜಾನ್ ಹಬ್ಬವನ್ನ ಆಚರಿಸಲಾಯಿತು. ಇಲ್ಲಿನ ಜಮೀಯಾ ಮಸೀದಿಯ ಮೌಲಾನ ಮುತ್ತಾಜ್ ರಾಹೀ ಅವರ ನೇತೃತ್ವದಲ್ಲಿ ಮುಸ್ಲಿಂ ಬಾಂಧವರು ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಯಾವ ರೀತಿ ಸಾಕಿ, ಸಾಲಹುತ್ತಾರೋ ಅದೇ ರೀತಿ ಮನೆಯ ಮುಂದೆ ಒಂದು ಗಿಡ ಬೆಳೆಸಬೇಕೆಂದು ನಿರ್ಧರಿಸಿದ್ದು, ಇಂದು ಸಾಂಕೇತಿಕವಾಗಿ ಸಸಿಗಳನ್ನ ನೆಟ್ಟು ಗಿಡ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

    ಕೇವಲ ಮುಸ್ಲಿಂ ಬಾಂಧವರಷ್ಟೇ ಅಲ್ಲದೆ ಹಿಂದೂಗಳು ಕೂಡ ಅವರ ಜೊತೆ ಕೈಜೋಡಿಸಿ ಪರಿಸರದ ಮೇಲಿರುವ ಕಾಳಜಿ ಮೆರೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಹಿಂದೂ-ಮುಸ್ಲಿಂ ಜೊತೆಗೂಡಿ ಪರಿಸರ ಕಾಳಜಿ ಮೆರೆದಿರುವುದು ವಿಶೇಷವಾಗಿತ್ತು.

    ಪವಿತ್ರ ರಂಜಾನ್ ಆಚರಣೆ ಹಿನ್ನೆಲೆ ಮುಸ್ಲಿಂ ಬಾಂಧವರು ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆ ಹಿನ್ನೆಲೆ ಮೈದಾನ ಸುತ್ತ ಪೋಲಿಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ವೇಳೆ ಪ್ರಾರ್ಥನೆಯಲ್ಲಿ ಜಿಲ್ಲಾಧಿಕಾರಿ ಬಿ.ಶರತ್, ಎಸ್‍ಪಿ ಡಿ.ಕಿಶೋರ್ ಬಾಬು ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದು, ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ರಂಜಾನ್ ಆಚರಿಸಲಾಗುತ್ತಿದೆ.

  • ಎಳನೀರು, ಗುಲಾಬಿ ಗಿಡಗಳನ್ನು ಮಾರಾಟ ಮಾಡಿ ಜೀವನ ನಡೆಸ್ತಿರೋ ಮಹಿಳೆಗೆ ಬೇಕಿದೆ ಸೂರು

    ಎಳನೀರು, ಗುಲಾಬಿ ಗಿಡಗಳನ್ನು ಮಾರಾಟ ಮಾಡಿ ಜೀವನ ನಡೆಸ್ತಿರೋ ಮಹಿಳೆಗೆ ಬೇಕಿದೆ ಸೂರು

    ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಎಳನೀರು ಹಾಗೂ ಗುಲಾಬಿ ಹೂಗಳ ಸಸಿಗಳನ್ನು ಮಾರಾಟ ಮಾಡುತ್ತಿರುವ ಈಕೆಯ ಹೆಸರು ಮಹಾದೇವಿ.

    ಮಳೆಗಾಲ ಬಂತೆಂದರೆ ಫಾರ್ಮ್ ನಲ್ಲಿ ಬೆಳೆದ ಬಗೆಬಗೆಯ ಹೂವಿನ ಗಿಡಗಳನ್ನು ಮಹಾದೇವಿಯವರು ದೂರದ ಊರುಗಳಾದ ಮಹಾರಾಷ್ಟ್ರದ ಕೋಲ್ಹಾಪುರ, ನಿಪ್ಪಾಣಿ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಬೆಳಗಾವಿ ಹೀಗೆ ಅನೇಕ ಕಡೆ ತಮ್ಮದೇ ಟಾಟಾ ಏಸ್ ವಾಹನದ ಮೂಲಕ ಸಾಗಿಸಿ ಮಾರಾಟ ಮಾಡುತ್ತಾರೆ. ಬೇಸಿಗೆಯಲ್ಲಿ ಎಳೆ ನೀರು ಮಾರಾಟ ಮಾಡುತ್ತಾರೆ. ನಿತ್ಯ ಡ್ರೈವ್ ಮಾಡಿಕೊಂಡು ಪಕ್ಕದ ಊರುಗಳಿಂದ ಎಳನೀರು ತಂದು ಮಾರಾಟ ಮಾಡಿ ಬಂದ ದುಡ್ಡಿನಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ಸದೃಢವಾಗಿರದ ಕಾರಣ ರಸ್ತೆ ಪಕ್ಕದಲ್ಲಿ ಕುಳಿತು ವ್ಯಾಪಾರ ಮಾಡಲು ಒಂದು ಸೂರು ನಿರ್ಮಿಸಿಕೊಡಿ ಎನ್ನುತ್ತಿದ್ದಾರೆ ಮಹಾದೇವಿ.

    ಮಹಾದೇವಿಯವರು ತಮ್ಮ ಜೀವನದಲ್ಲಾದ ಕೆಡುಕುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿತ್ಯ ಕೂಲಿ ಕಾರ್ಮಿಕರ ಜೊತೆ ಕೆಲಸ ಮಾಡುತ್ತಾರೆ. ಜೊತೆಗೆ ಏಳನೀರು ಮಾರಿ ಬಂದ ದುಡ್ಡಲ್ಲಿ ಲೋನ್ ಮೂಲಕ ಒಂದು ವಾಹನ ಖರೀದಿಸಿ ನಿತ್ಯ ಕಾಯಕದಲ್ಲಿ ತೊಡಗಿದ್ದಾರೆ. ಇಬ್ಬರು ತಮ್ಮಂದಿರು ಮತ್ತು ಅಪ್ಪ-ಅಮ್ಮನನ್ನು ಸಾಕುವ ಹೊಣೆ ಹೊತ್ತಿರುವ ಮಹಾದೇವಿ ಟಾಟಾ ಏಸ್ ವಾಹನವನ್ನು ಲೀಲಾಜಾಲವಾಗಿ ಓಡಿಸುತ್ತಾರೆ. ಮದುವೆಯಾಗಿ ಕೆಲ ವರ್ಷಗಳ ನಂತರ ಗಂಡ ಬೇರೊಬ್ಬ ಹೆಂಗಸಿನ ಸಹವಾಸ ಮಾಡಿ ಮಹಾದೇವಿಯವರನ್ನ ಮನೆಯಿಂದ ಹೊರಹಾಕಿದ ನಂತರ ಮಹಾದೇವಿ ಧೃತಿಗೆಡದೆ ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿರುವುದು ನಿಜಕ್ಕೂ ಮಾದರಿ ಅಂತಾರೆ ಸ್ಥಳೀಯರು.

    ಹುಟ್ಟುತ್ತಲೇ ಗಂಡು ಹೆಣ್ಣೆಂಬ ಬೇಧ-ಭಾವ ಮಾಡಿ ಅದೆಷ್ಟೋ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವ ಜನರಿಗೆ ಮಹಾದೇವಿ ಗಂಡಿಗಿಂತ ನಾನು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಜೀವನ ಒಡ್ಡಿರುವ ಸವಾಲನ್ನು ದಿಟ್ಟತನದಿಂದ ಸ್ವೀಕರಿಸಿ ಮುನ್ನುಗ್ಗುತ್ತಿರುವ ಮಹಾದೇವಿಗೆ ಸಹಾಯ ಬೇಕಿದೆ.

    https://www.youtube.com/watch?v=TK7Qbe6tjD0