Tag: Sanjay Dutt

  • ಸೋತು ಕಂಗೆಟ್ಟಿದ್ದ ರಣಬೀರ್ ಗೆ ಆಸರೆಯಾಗಿದ್ದು ಆಲಿಯಾ!

    ಸೋತು ಕಂಗೆಟ್ಟಿದ್ದ ರಣಬೀರ್ ಗೆ ಆಸರೆಯಾಗಿದ್ದು ಆಲಿಯಾ!

    – ಸೋಲುಗಳಿಂದಲೇ ಪಾಠ ಕಲಿತಿದ್ದಾನಂತೆ ರಣಬೀರ್ ಕಪೂರ್!
    – ಕುಸಿದು ಬಿದ್ದಾಗ ತೂರಿ ಬಂದಿತ್ತು ಆಳಿಗೊಂದು ಕಲ್ಲು!

    ಮುಂಬೈ: ಸದ್ಯ ಬಾಲಿವುಡ್ ತುಂಬಾ ಭಾರೀ ನಿರೀಕ್ಷೆ ಹುಟ್ಟಿಸಿರೋ ಸಂಜಯ್ ದತ್ ಜೀವನಾಧಾರಿತ ಚಿತ್ರದ ಪ್ರಮುಖ ಆಕರ್ಷಣೆ ರಣಬೀರ್ ಕಪೂರ್. ಥೇಟು ಸಂಜಯ್ ದತ್ ನನ್ನು ಹೋಲುವಂಥಾದ್ದೇ ಹಾವಭಾವ, ಬಾಡಿ ಲಾಂಗ್ವೇಜ್‍ಗಳಿಂದ ರಣಬೀರ್ ಭಾರೀ ಸದ್ದು ಮಾಡುತ್ತಿದ್ದಾನೆ. ಹೀಗೆ ಈ ಪಾತ್ರದಲ್ಲಿ ಈತನನ್ನು ತಲ್ಲೀನನಾಗಿ ನಟಿಸುವಂತೆ ಪ್ರೇರೇಪಿಸಿರೋದು ಸೋಲಿಗೆ ಸೆಡ್ಡು ಹೊಡೆಯೋ ಉಮೇದು. ಈ ಹಿಂದೆ ಸುತ್ತಿಕೊಂಡ ದೊಡ್ಡ ಮಟ್ಟದ ಸೋಲಿನಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದುವ ತಹ ತಹ!

    ಗೆಲುವನ್ನಷ್ಟೇ ಹೆಗಲ ಮೇಲೆ ಹೊತ್ತು ಮೆರೆದಾಡುತ್ತಾ ಸೋತವರನ್ನು ಮೆಟ್ಟಿ ಹೊಸಕೋದು ಬಣ್ಣದ ಜಗತ್ತಿನ ಮಾಮೂಲು ವರಸೆ. ಇದರಿಂದ ಬಾಲಿವುಡ್ ಕೂಡಾ ಹೊರತಾಗಿಲ್ಲ. ಒಂದು ಚಿತ್ರ ತೀರಾ ಸೋಲಬೇಕೆಂದೇನೂ ಇಲ್ಲ. ಬಾಕ್ಸಾಫೀಸಿನಲ್ಲಿ ಕೊಂಚ ಡಲ್ಲು ಹೊಡೆದರೂ ಎಂಥಾ ಸ್ಟಾರ್ ಆದರೂ ಆತನನ್ನು ಒಂದು ಮಟ್ಟಕ್ಕೆ ಕಡೆಗಣಿಸಲಾಗುತ್ತೆ. ಸೂಕ್ಷ್ಮ ಮನಸುಗಳನ್ನು ಘಾಸಿಗೊಳಿಸುವಂಥಾ ವಿದ್ಯಮಾನಗಳೂ ಧಾರಾಳವಾಗಿಯೇ ನಡೆಯುತ್ತವೆ.

    ಪರಿಪಕ್ವವಾದ ನಟನಾಗಿ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದ ರಣಬೀರ್ ಕಪೂರ್ ಕೂಡಾ ಇಂಥಾದ್ದೊಂದು ಆಘಾತವನ್ನ ಎದುರುಗೊಂಡಿದ್ದಾನೆ. ಈ ಹಿಂದೆ ಭಾರೀ ಸದ್ದು ಮಾಡುತ್ತಲೇ ಈತ ನಟಿಸಿದ್ದ ಜಗ್ಗ ಜಾಜೂಸ್ ಚಿತ್ರ ತೆರೆಗಂಡಿತ್ತು. ಈ ಚಿತ್ರ ದೊಡ್ಡ ಮಟ್ಟದ ಹಿಟ್ ಚಿತ್ರವಾಗಿ ದಾಖಲಾಗುತ್ತದೆ ಎಂಬಂತೆ ಹವಾ ಸೃಷ್ಟಿಸಿತ್ತು. ಆದರೆ ಈ ಚಿತ್ರಕ್ಕೆ ಪ್ರೇಕ್ಷಕರ ಕಡೆಯಿಂದ ಅದೇಕೋ ನೀರಸ ಪ್ರತಿಕ್ರಿಯೆ ಸಿಕ್ಕಿ ಬಾಕ್ಸಾಫೀಸಿನಲ್ಲಿಯೂ ಡಲ್ಲು ಹೊಡೆಯುವಂತಾಗಿತ್ತು. ಅದಾದ ಮರುಕ್ಷಣದಿಂದಲೇ ರಣಬೀರ್ ಕಪೂರನತ್ತ ಆಳಿಗೊಂದು ಕಲ್ಲುಗಳು ತೂರಿ ಬರಲಾರಂಭಿಸಿದ್ದವು!

    ವರ್ಷಾನುಗಟ್ಟಲೆ ಇಂಥಾ ಸೋಲಿನ ಯಾತನೆಯಿಂದ ಕಂಗಾಲಾದ ರಣಬೀರ್ ಕಪೂರ್ ಸಂಜಯ್ ಜೀವನಾಧಾರಿತ ಚಿತ್ರದ ಮೂಲಕ ಎಲ್ಲರೂ ಬೆಚ್ಚಿಬೀಳುವಂತೆ ಎದ್ದು ನಿಂತಿದ್ದಾನೆ. ಸ್ವತಃ ಆತನೇ ತಾನು ಗೆಲುವಿನಿಂದ ಅದೇನು ಕಲಿತೆನೋ ಗೊತ್ತಿಲ್ಲ. ಆದರೆ ಸೋಲುಗಳಿಂದ ದೊಡ್ಡ ದೊಡ್ಡ ಪಾಠವನ್ನೇ ಕಲಿತಿದ್ದೇನೆ ಎಂಬಂಥ ಮಾತುಗಳನ್ನೂ ಆಡಿದ್ದಾನೆ. ಇನ್ನೂ ಪ್ರಮುಖ ವಿಚಾರವೆಂದರೆ ಜಗ್ಗ ಜಾಜೂಸ್ ಸೋಲಿನಿಂದ ಕಂಗಾಲಾಗಿದ್ದ ರಣಬೀರ್‍ಗೆ ಸಂಪೂರ್ಣ ಸಾಥ್ ನೀಡಿ ಎದ್ದು ನಿಲ್ಲುವಂತೆ ಮಾಡಿದ್ದ ಆಲಿಯಾ ಭಟ್ ಪ್ರೀತಿ. ಸೋಲಿನಿಂಗ ಕಂಗೆಟ್ಟಿದ್ದ ರಣಬೀರ್‍ಗೆ ಆಲಿಯಾ ಕ್ಷಣ ಕ್ಷಣವೂ ಹೆಗಲಾಗಿದ್ದಳಂತೆ. ಮತ್ತೊಂದು ಗೆಲುವಿನ ರೂವಾರಿಯಾಗಲು ಉತ್ತೇಜಿಸಿದ್ದಳಂತೆ. ಆ ಬಲದಿಂದಲೇ ರಣಬೀರ್ ಸಂಜಯ್ ಚಿತ್ರದ ಮೂಲಕ ಮೈ ಕೊಡವಿಕೊಂಡು ಮೇಲೆದ್ದು ನಿಂತಿದ್ದಾನೆ!

  • ಸಾಯುವ ಮುಂಚೆ ಈ ನಟನ ಹೆಸರಿಗೆ ತನ್ನೆಲ್ಲಾ ಆಸ್ತಿಯನ್ನ ವಿಲ್ ಮಾಡಿದ ಅಭಿಮಾನಿ

    ಸಾಯುವ ಮುಂಚೆ ಈ ನಟನ ಹೆಸರಿಗೆ ತನ್ನೆಲ್ಲಾ ಆಸ್ತಿಯನ್ನ ವಿಲ್ ಮಾಡಿದ ಅಭಿಮಾನಿ

    ಮುಂಬೈ: ವೃದ್ಧೆಯೊಬ್ಬರು ಸಾಯುವ ಮುಂಚೆ ತನ್ನೆಲ್ಲಾ ಆಸ್ತಿಯನ್ನ ಬಾಲಿವುಡ್ ನಟ ಸಂಜಯ್ ದತ್ ಹೆಸರಿಗೆ ವಿಲ್ ಮಾಡಿಟ್ಟಿದ್ದು, ಕುಟುಂಬಸ್ಥರು ಅಚ್ಚರಿಪಟ್ಟಿದ್ದಾರೆ.

    ಮುಂಬೈನ ಮಲಬಾರ್ ಹಿಲ್ ನಿವಾಸಿಯಾದ 62 ವರ್ಷದ ವೃದ್ಧೆ ನಿಶಿ ಹರಿಶ್ಚಂದ್ರ ತ್ರಿಪಾಠಿ ಸಂಜಯ್ ದತ್ ಹೆಸರಿಗೆ ವಿಲ್ ಮಾಡಿದ್ದು, ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ತನ್ನ ಹೆಸರಿಗೆ ಅಭಿಮಾನಿಯೊಬ್ಬರು ಈ ರೀತಿ ಆಸ್ತಿಯನ್ನ ಬರೆದಿರುವ ವಿಷಯ ತಿಳಿದ ಸಂಜಯ್ ದತ್ ಕೂಡ ಆಶ್ಚರ್ಯಪಟ್ಟಿದ್ದಾರೆ.

    ಪತ್ರಿಕೆಯೊಂದರ ವರದಿಯ ಪ್ರಕಾರ, ಸಂಜಯ್ ದತ್‍ಗೆ ಜನವರಿ 29ರಂದು ಪೊಲೀಸರು ಕರೆ ಮಾಡಿ, ನಿಮ್ಮ ಅಭಿಮಾನಿಯೊಬ್ಬರು 15 ದಿನಗಳ ಮುಂಚೆ ಸಾವನ್ನಪ್ಪಿದ್ದು, ತನ್ನ ಖಾತೆ ಹಾಗು ಬ್ಯಾಂಕ್ ಲಾಕರ್‍ನಲ್ಲಿರುವ ಎಲ್ಲಾ ಹಣವನ್ನ ನಿಮ್ಮ ಹೆಸರಿಗೆ ವಿಲ್ ಬರೆದಿದ್ದಾರೆ ಎಂದು ತಿಳಿಸಿದ್ದರು. ವೃದ್ಧೆ ಸಂಜಯ್ ದತ್ ಅವರ ದೊಡ್ಡ ಅಭಿಮಾನಿಯಾಗಿದ್ದರಿಂದ ಈ ರೀತಿ ಆಸ್ತಿಯನ್ನ ಅವರ ಹೆಸರಿಗೆ ಬರೆದಿರಬಹುದು ಎಂದುಕೊಂಡು ಪೊಲೀಸರು ನಟ ಸಂಜ್ ದತ್ ಗಮನಕ್ಕೆ ಈ ವಿಷಯವನ್ನ ತರಬೇಕೆಂದು ಅಂದುಕೊಂಡಿದ್ದರು.

    ವೃದ್ಧೆ ಸಾಯುವುದಕ್ಕೆ ಕೆಲವು ತಿಂಗಳ ಹಿಂದೆ ಬ್ಯಾಂಕಿಗೆ ವಿವರವಾಗಿ ಬರೆದ ಪತ್ರ ಹಾಗು ನಾಮಿನೇಷನ್ ಅಜಿಯನ್ನ ಸಲ್ಲಿಸಿದ್ದರು. ಸಂಜಯ್ ದತ್ ಅವರ ಪಾಲಿ ಹಿಲ್ ವಿಳಾಸವನ್ನ ನೀಡಿ, ಸಂಜಯ್ ದತ್ ಅವರೇ ನಾಮಿನಿ ಎಂದು ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದರು.

    ಆಸ್ತಿ ಬೇಡವೆಂದ ಸಂಜಯ್: ನಟ ಸಂಜಯ್ ದತ್ ಅಭಿಮಾನಿಯ ಆಸ್ತಿಯನ್ನ ನಿರಾಕರಿಸಿದ್ದಾರೆ. ಹಣವನ್ನ ವೃದ್ಧೆಯ ಕುಟುಂಬಸ್ಥರಿಗೆ ವಾಪಸ್ ನೀಡುವಂತೆ ವೃದ್ಧೆ ಖಾತೆ ಹೊಂದಿರುವ ವಾಲ್ಕೆಶ್ವರ್ ನ ಬ್ಯಾಂಕ್ ಆಫ್ ಬರೋಡಾ ಶಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕಾನೂನು ಪ್ರಕ್ರಿಯೆಯ ಪ್ರಕಾರ ವೃದ್ಧೆಯ ಎಲ್ಲಾ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನ ಮರಳಿ ಕುಟುಂಬಸ್ಥರಿಗೆ ವರ್ಗಾಯಿಸುವಂತೆ ನಟ ಹೇಳಿರುವುದಾಗಿ ಸಂಜಯ್ ದತ್ ಪರ ವಕೀಲರಾದ ಸುಭಾಷ್ ಜಾಧವ್ ತಿಳಿಸಿದ್ದಾರೆ.

    ಸಂಜಯ್ ದತ್ ಸದ್ಯ ಸಾಹೇಬ್ ಬೀವಿ ಔರ್ ಗ್ಯಾಂಗ್‍ಸ್ಟರ್ 3 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಂಜಯ್ ದತ್ ಜೀವನಾಧಾರಿತ ಚಿತ್ರವಾದ ‘ಸಂಜು’ ದಲ್ಲಿ ರಣಬೀರ್ ಕಪೂರ್ ಸಂಜಯ್ ದತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್‍ಕುಮಾರ್ ಹಿರಾನಿ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ಜೂನ್ ವೇಳೆಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.

  • ಕನ್ನಡಕ್ಕೆ ಬರಲಿದ್ದಾರಾ ಬಾಲಿವುಡ್ ಸಂಜಯ್ ದತ್?

    ಕನ್ನಡಕ್ಕೆ ಬರಲಿದ್ದಾರಾ ಬಾಲಿವುಡ್ ಸಂಜಯ್ ದತ್?

    ಬೆಂಗಳೂರು: ಬಾಲಿವುಡ್ ಕಲಾವಿದರು ಸಾಕಷ್ಟು ಮಂದಿ ಸ್ಯಾಂಡಲ್‍ ವುಡ್ ನಲ್ಲಿ ನಟಿಸಿದ್ದಾರೆ. ಆದರೆ ಈಗ ಸಂಜಯ್ ದತ್ ಕನ್ನಡ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

    ವಿನೋದ್ ಪ್ರಭಾಕರ್ ಅಭನಯಿಸುತ್ತಿರುವ `ಮುಧೋಳ’ ಚಿತ್ರದಲ್ಲಿ ಸಂಜಯ್ ದತ್ತ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಚಿತ್ರತಂಡ ಈ ಸುದ್ದಿಯ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

    ಈ ಚಿತ್ರವನ್ನು ನಟ ಕಮ್ ನಿರ್ದೇಶಕ ಮೋಹನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಕರೆತರಲು ಮೋಹನ್ ಪ್ರಯತ್ನಿಸಿದ್ದಾರೆ. ಆದರೆ ಈ ಚಿತ್ರಕ್ಕೆ ಸಂಜಯ್ ಅವರು ಅಭಿನಯಿಸುತ್ತಾರಾ ಅಥವಾ ಇಲ್ಲವೋ ಎನ್ನುವುದು ಇನ್ನೂ ದೃಢಪಟ್ಟಿಲ್ಲ.