Tag: sanitation worker

  • ಪೌರ ಕಾರ್ಮಿಕ ಸಹೋದರರ ಕಂಠಕ್ಕೆ ಆನಂದ್ ಮಹೀಂದ್ರಾ ಫಿದಾ

    ಪೌರ ಕಾರ್ಮಿಕ ಸಹೋದರರ ಕಂಠಕ್ಕೆ ಆನಂದ್ ಮಹೀಂದ್ರಾ ಫಿದಾ

    ನವದೆಹಲಿ: ಪೌರ ಕಾರ್ಮಿಕ ಸಹೋದರಿಬ್ಬರು ತಮ್ಮ ಮಧುರ ಕಂಠದಿಂದ ಹಾಡಿರುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಗಮನಿಸಿರುವ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಇವರಿಬ್ಬರ ಹಾಡಿಗೆ ಫಿದಾ ಆಗಿದ್ದಾರೆ.

    ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೊನಿಯ ಇಬ್ಬರು ಸಹೋದರರಾದ ಹಫೀಜ್ ಮತ್ತು ಹಬೀಬರ್ ಪೌರ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತ ಹಾಡುಗಳನ್ನು ಹಾಡುವ ಹವ್ಯಾಸ ಬೆಳೆಸಿಕೊಂಡಿದ್ದರು. ಹಫೀಜ್ ಮತ್ತು ಹಬೀಬರ್ ಮಧುರವಾಗಿ ಹಾಡುವುದನ್ನು ವೀಡಿಯೋ ಮಾಡಿ ರೋಹಿತ್ ಖಟ್ಟರ್ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಇದನ್ನು ಗಮನಿಸಿರುವ ಆನಂದ್ ಮಹೀಂದ್ರಾ ಈ ಇಬ್ಬರು ಯುವಕರ ಧ್ವನಿಗೆ ಮಾರುಹೋಗಿ ಮುಂದಿನ ಸಂಗೀತ ಶಿಕ್ಷಣಕ್ಕೆ ಸಹಕರಿಸುವುದಾಗಿ ಹೇಳಿಕೊಂಡಿದ್ದಾರೆ.

    ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಫೀಜ್ ಮತ್ತು ಹಬೀಬರ್ ಅಣ್ಣ ತಮ್ಮಂದಿರಿಬ್ಬರೂ ಹಾಡುವ ಹಾಡನ್ನು ಟ್ವೀಟ್ ಮಾಡಿ ನನ್ನ ಸ್ನೇಹಿತರಾದ ರೋಹಿತ್ ಖಟ್ಟರ್ ಟ್ವಿಟ್ಟರ್ ನಲ್ಲಿ ಈ ಯುವಕರಿಬ್ಬರ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಇದನ್ನು ಗಮನಿಸಿದಾಗ ಹಫೀಜ್ ಮತ್ತು ಹಬೀಬರ್ ಕಸ ಸಂಗ್ರಹ ಮಾಡುವ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಅವರ ಪ್ರತಿಭೆಗೆ ಯಾವುದೇ ಮಿತಿಯಿಲ್ಲ ಎಂದು ಬರೆದುಕೊಂಡಿದ್ದಾರೆ.

    ಇದರೊಂದಿಗೆ ಇನ್ನೊಂದು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ, ಸಹೋದರಿಬ್ಬರ ಪ್ರತಿಭೆ ಅಮೋಘವಾಗಿದ್ದು, ರೋಹಿತ್ ಮತ್ತು ನಾನು ಇವರಿಬ್ಬರಿಗೆ ಸಹಾಯ ಮಾಡುತ್ತೇವೆ. ದೆಹಲಿಯ ಆಸುಪಾಸಿನಲ್ಲಿರುವ ಉತ್ತಮವಾದ ಸಂಗೀತ ಶಿಕ್ಷಕರು ಅಥವಾ ಧ್ವನಿ ತರಬೇತುದಾರರು ಹಫೀಜ್ ಮತ್ತು ಹಬೀಬರ್ ಅವರ ದಿನದ ಕೆಲಸ ಮುಗಿದ ಮೇಲೆ ಸಂಜೆ ಹೊತ್ತು ತರಬೇತಿ ಕೊಟ್ಟಿದ್ದರೆ ಅವರ ಮುಂದಿನ ಸಂಗೀತ ಸಾಧನೆಗೆ ಸಹಾಯವಾಗುತ್ತಿತ್ತು ಎಂದಿದ್ದಾರೆ.

    ವೀಡಿಯೋದಲ್ಲಿ ಹಫೀಜ್ ಮತ್ತು ಹಬೀಬರ್ 1969ರಲ್ಲಿ ಬಿಡುಗಡೆಯಾದ ಅನ್ಮೋಲ್ ಮೋತಿ ಮತ್ತು 2010ರಲ್ಲಿ ಬಿಡುಗಡೆಗೊಂಡ ಶಾರುಖ್ ಖಾನ್ ಅವರ ಮೈ ನೇಮ್ ಇಸ್ ಖಾನ್ ಚಿತ್ರದ ‘ಸಜ್ದಾ’ ಹಾಡನ್ನು ಹಾಡುತ್ತಿದ್ದಾರೆ.

  • ಸಂಪ್ ಸ್ವಚ್ಛಗೊಳಿಸಲು ಹೋದ ಏಳು ಜನ ಬಲಿ

    ಸಂಪ್ ಸ್ವಚ್ಛಗೊಳಿಸಲು ಹೋದ ಏಳು ಜನ ಬಲಿ

    ಗಾಂಧಿನಗರ: ಹೋಟೆಲ್ ಸಂಪ್ ಸ್ವಚ್ಛಗೊಳಿಸುವ ವೇಳೆ ವಿಷ ಅನಿಲ ಸೇವಿಸಿ ನಾಲ್ಕು ಜನ ಪೌರ ಕಾರ್ಮಿಕರು ಸೇರಿದಂತೆ ಒಟ್ಟು ಏಳು ಜನ ಸಾವನ್ನಪ್ಪಿರುವ ಘಟನೆ ವಡೋದರದಲ್ಲಿ ಶನಿವಾರ ನಡೆದಿದೆ.

    ಗುಜರಾತ್‍ನ ವಡೋದರಾ ಹತ್ತಿರದ ದಾಭೋಯಿ ತೆಹಸಿಲ್‍ನ ಫರ್ಟಿಕುಯಿ ಗ್ರಾಮದ ದರ್ಶನ್ ಹೋಟೆಲ್‍ನಲ್ಲಿ ಘಟನೆ ನಡೆದಿದ್ದು, ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೆ ಪೌರ ಕಾರ್ಮಿಕನೊಬ್ಬ ಹೋಟೆಲ್‍ನ ಸಂಪ್‍ಗೆ ಇಳಿದಿದ್ದು, ಈ ವೇಳೆ ಅವಘಡ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಮೃತ ನಾಲ್ಕು ಜನ ಪೌರ ಕಾರ್ಮಿಕರನ್ನು ಮಹೇಶ್ ಪಟಾನ್‍ವಾಡಿಯಾ, ಅಶೋಕ್ ಹರಿಜನ್, ಬ್ರಿಜೇಶ್ ಹರಿಜನ್, ಮಹೇಶ್ ಹರಿಜನ್ ಎಂದು ಗುರುತಿಸಲಾಗಿದೆ. ಕಾರ್ಮಿಕರನ್ನು ದಾಭೋಯಿನ ಥುವವಿಯಿಂದ ಕೆಲಸಕ್ಕಾಗಿ ಕರೆಸಿದ್ದರು ಎನ್ನಲಾಗಿದೆ. ಉಳಿದ ಮೂವರಾದ ಅಜಯ್ ವಾಸವ(24), ವಿಜಯ್ ಚೌಹಾಣ್(22) ಹಾಗೂ ಸಹದೇವ್ ವಾಸವ(22) ಅವರು ಹೋಟೆಲ್‍ನ ಕೆಲಸಗಾರರಾಗಿದ್ದಾರೆ.

    ಈ ಕುರಿತು ದಭೋಯ್ ವಿಭಾಗದ ಡಿಎಸ್‍ಪಿ ಕಲ್ಪೇಶ್ ಸೊಳಂಕಿ ಅವರು ಪ್ರತಿಕ್ರಿಯಿಸಿ, ಘಟನೆ ವಿವರ ಪಡೆಯಲಾಗಿದ್ದು, ಹೇಗೆ ನಡೆಯಿತು. ಘಟನೆಗೆ ನಿರ್ಧಿಷ್ಟ ಕಾರಣವೇನು ಎಂದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಮಹೇಶ್ ಪಟಾನ್‍ವಾಡಿಯಾ ಎಂಬ ಪೌರ ಕಾರ್ಮಿಕ ಮೊದಲು ಸಂಪ್‍ಗೆ ಇಳಿದು ಕೆಲಸ ಪ್ರಾರಂಭಿಸಿದ್ದಾನೆ, ಮಹೇಶ್ ಪ್ರತಿಕ್ರಿಯಿಸದ್ದನ್ನು ಕಂಡು ಕೆಲ ಹೊತ್ತಿನ ನಂತರ ಅಶೋಕ್ ಹರಿಜನ್, ಬ್ರಿಜೇಶ್ ಹರಿಜನ್ ಹಾಗೂ ಮಹೇಶ್ ಹರಿಜನ್ ಅವರು ಟ್ಯಾಂಕ್‍ಗೆ ಇಳಿದು ಹಿಂಬಾಲಿಸಿದ್ದಾರೆ. ನಾಲ್ಕೂ ಜನ ಪೌರ ಕಾರ್ಮಿಕರು ಹೊರಗೆ ಬಾರದಕ್ಕೆ ಮೂವರು ಹೋಟೆಲ್ ಕಾರ್ಮಿಕರು ಟ್ಯಾಂಕ್‍ಗೆ ಧುಮುಕಿದ್ದಾರೆ. ಟ್ಯಾಂಕ್‍ಗೆ ಇಳಿಯುತ್ತಿದ್ದಂತೆ ಪ್ರಜ್ಞಾಹೀನರಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ದಾಭೋಯ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿರ್ಲಕ್ಷ್ಯ ಹಾಗೂ ಕೊಲೆಗೆ ಕಾರಣೀಕರ್ತರಾಗಿದ್ದಾರೆ ಎಂದು ಆರೋಪಿಸಿ ಹೋಟೆಲ್ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

    ಒಳಚರಂಡಿ ಸ್ವಚ್ಛಗೊಳಿಸುವ ವೇಳೆ ಪ್ರತಿ ವರ್ಷ ಹಲವಾರು ಪೌರ ಕಾರ್ಮಿಕರು ಉಸಿರುಗಟ್ಟಿ ಸಾವನ್ನುಪ್ಪುತ್ತಿದ್ದು, ಒಳಚರಂಡಿಗಳನ್ನು ಪೌರ ಕಾರ್ಮಿಕರಿಂದ ಸ್ವಚ್ಛಗೊಳಿಸದೆ, ಯಂತ್ರಗಳಿಂದ ಸ್ವಚ್ಛಗೊಳಿಸುವಂತೆ ಕಾನೂನು ರೂಪಿಸಲಾಗಿದ್ದರೂ, ಗಂಭೀರವಾಗಿ ಪರಿಗಣಿಸದೆ, ಕೆಲವರು ಪೌರ ಕಾರ್ಮಿಕರಿಂದ ಸ್ವಚ್ಛಗೊಳಿಸುತ್ತಾರೆ. ಇದರಿಂದ ಅನಾಹುತಗಳಿಗೆ ಕೊನೆಯೇ ಇಲ್ಲದಂತಾಗಿದೆ.

    ಸರ್ಕಾರದ ಮಾಹಿತಿಯನ್ವಯ ಸುಮಾರು 14 ಸಾವಿರದಿಂದ 31 ಸಾವಿರ ಜನ ಮಾತ್ರ ಕೈಯಿಂದ ಸ್ವಚ್ಛಗೊಳಿಸುವ ಕಾರ್ಮಿಕರಿದ್ದಾರೆ ಎಂದು ತಿಳಿಸಿದೆ. ಆದರೆ, ಸಫಾಯಿ ಕರ್ಮಚಾರಿ ಆಂದೋಲನದ ಪ್ರಕಾರ ಸುಮಾರು 7.7 ಲಕ್ಷ ಪೌರ ಕಾರ್ಮಿಕರಿದ್ದು, ಕಳೆದ ದಶಕದಲ್ಲಿ ಒಟ್ಟು 1,800 ಕಾರ್ಮಿಕರು ಮ್ಯಾನ್ ಹೋಲ್ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ. ಬಹುತೇಕ ಪೌರ ಕಾರ್ಮಿಕರು ತಲೆ ಮಾರಿನ ಹಿಂದೆಯೇ ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ಕೆಲಸವನ್ನು ಬಿಟ್ಟಿದ್ದಾರೆ. ಕೆಲವರು ಬೇರೆ ಕೆಲಸ ಸಿಗದಿದ್ದರಿಂದ ಹಾಗೂ ಜಾತಿಯ ಆಧಾರದಲ್ಲಿ ಈ ಕೆಲಸ ಮಾಡುತ್ತಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಪೌರ ಕಾರ್ಮಿಕರ ಜೀವನವನ್ನು ಸುಧಾರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಬಾರಿ ಮಾತನಾಡಿದ್ದು, ಇದರ ಸಂಕೇತವಾಗಿ ಇತ್ತೀಚೆಗೆ ಅಲಹಬಾದ್‍ನಲ್ಲಿ ನಡೆದ ಕುಂಭ ಮೇಳದಲ್ಲಿ ಪೌರ ಕಾರ್ಮಿಕರ ಪಾದ ತೊಳೆದು ಪೂಜೆ ಮಾಡುವ ಮೂಲಕ ಅವರಿಗೆ ಗೌರವ ಸೂಚಿಸಿದ್ದರು.