Tag: Sandesh Shetty

  • ಮಾಸ್ ಹೀರೋ ಆಗಿ ನಿಲ್ಲುವ ಭರವಸೆ ಮೂಡಿಸಿದ ‘ಇನಾಮ್ದಾರ್’ ಹೀರೋ

    ಮಾಸ್ ಹೀರೋ ಆಗಿ ನಿಲ್ಲುವ ಭರವಸೆ ಮೂಡಿಸಿದ ‘ಇನಾಮ್ದಾರ್’ ಹೀರೋ

    ನಾಮ್ದಾರ್… (Inamdar)  ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಸಖತ್ ಸುದ್ದಿ ಮಾಡುತ್ತಿರುವ ಸಿನಿಮಾ. ಕರಾವಳಿ ಭಾಗದ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಡೈರೆಕ್ಟ್ ಮಾಡಿರುವ ಈ ಚಿತ್ರ, ಕಥಾವಸ್ತು ಹಾಗೂ ಪಾತ್ರವರ್ಗದಿಂದ ಕುತೂಹಲ ಹುಟ್ಟಿಸಿದೆ. ವಿಶೇಷ ಅಂದರೆ ಈ ಸಿನಿಮಾದಿಂದ ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆಗೊಳ್ಳುತ್ತಿರುವ ರಂಜನ್ ಛತ್ರಪತಿ (Ranjan Chhatrapati), ಮೊದಲ ನೋಟದಲ್ಲೇ ಮಾಸ್ ಹೀರೋ ಆಗಿ ನಿಲ್ಲುವ ಭರವಸೆ ಮೂಡಿಸಿದ್ದಾರೆ.ಸ್ಯಾಂಡಲ್ ವುಡ್ ನ ಆ್ಯಕ್ಟರ್ ಕಂ ಆ್ಯಕ್ಷನ್ ಕಂಪೋಸರ್ ಥ್ರಿಲ್ಲರ್ ಮಂಜು ರಂಜನ್ ಪ್ರತಿಭೆನಾ ಗುರ್ತಿಸಿ ಹೊಸ ಹುರುಪು ತುಂಬುವ ಕೆಲಸ ಮಾಡಿದ್ದಾರೆ.

    ರಂಜನ್ ಛತ್ರಪತಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಸಿನಿಮಾ ಕುಟುಂಬದ ಹಿನ್ನಲೆಯೇನು ಇಲ್ಲ. ಆದರೆ, ಕಲಾವಿದನೆನಿಸಿಕೊಳ್ಳಬೇಕು ಎನ್ನುವ ಹುಚ್ಚು ಮಾತ್ರ ಮೊದಲಿನಿಂದಲೂ ಇತ್ತು. ಹಲವು ವರ್ಷಗಳ ಹಿಂದೆ ಗಾಂಧಿನಗರಕ್ಕೆ ಬಂದು ಅಲೆದಿದ್ದು ಉಂಟಂತೆ. ಆದರೆ, ಅವಕಾಶ ಅಷ್ಟು ಸುಲಭವಾಗಿ ದಕ್ಕದ ಅಸಲಿಯತ್ತು ಅರಿವಾಗಿ ಹುಟ್ಟೂರಿಗೆ ವಾಪಾಸ್ ಆದ್ರಂತೆ. ಜೀವನೋಪಾಯಕ್ಕಾಗಿ ಹೋಟೆಲ್ ಮಾಡಿಕೊಂಡು ಇರುವ ಹೊತ್ತಲ್ಲೇ ರಂಜನ್ ಛತ್ರಪತಿಗೆ ನಿರ್ದೇಶಕ ಸಂದೇಶ್ ಶೆಟ್ಟಿಯವರ ಪರಿಚಯವಾಗಿದೆ. ಅಲ್ಲಿಂದ ಶುರುವಾದ ಇವರಿಬ್ಬರ ಒಡನಾಟ ಈಗ ‘ ಇನಾಮ್ದಾರ್’ ಚಿತ್ರದವರೆಗೆ ಬಂದು ನಿಂತಿದೆ.

    ಸಂದೇಶ್ ಶೆಟ್ಟಿಯ (Sandesh Shetty) ನಿರ್ದೇಶನದ ಇನಾಮ್ದಾರ್ ಚಿತ್ರದಲ್ಲಿ ರಂಜನ್ ಛತ್ರಪತಿ ನಾಯಕನಟನಾಗಿ ಬಣ್ಣ ಹಚ್ಚಿದ್ದಾರೆ. ಇನಾಮ್ದಾರ್ ವಂಶದ ಮಗನ ಪಾತ್ರವನ್ನು ನಿಭಾಯಿಸಿದ್ದಾರೆ. ಯಾವುದೇ ಅಭಿನಯ ತರಬೇತಿಯನ್ನ ಪಡೆದಿಲ್ಲವಾದರೂ ಕೂಡ ನಿರ್ದೇಶಕರ ಅಣತಿಯನ್ನ ಚಾಚೂ ತಪ್ಪದೇ ಪಾಲಿಸಿ ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಕೆಲಸ ಮಾಡಿದ್ದಾರಂತೆ. ಈ ಬಗ್ಗೆ ಖುಷಿಯಿಂದಲೇ ನಮ್ಮೊಟ್ಟಿಗೆ ಮಾತುಕತೆಗಿಳಿದ ನಾಯಕ ರಂಜನ್, ನಂಗೊಂದು ಇಂಟ್ರುಡಕ್ಷನ್ ಫೈಟ್ ಇದೆ. ಅದನ್ನು ಥ್ರಿಲ್ಲರ್ ಮಂಜು ಸರ್ ಅದ್ಭುತವಾಗಿ ಕಂಪೋಸ್ ಮಾಡಿದ್ದಾರೆ. ಬಾಡಿ ಡಬಲ್ ಮಾಡಿಸದೇ, ಡ್ಯೂಪ್ ಹಾಕಿಸದೇ ನನ್ನಿಂದ ಹೈವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್ ಮಾಡಿಸಿದ್ದಾರೆ. ಆ ಸಾಹಸ ಸನ್ನಿವೇಶ ಸಿನಿಮಾ ಪ್ರೇಮಿಗಳ ಮೈ ರೋಮಾಂಚನಗೊಳಿಸುತ್ತವೆ. ಖುಷಿಯ ವಿಚಾರ ಅಂದರೆ ನಾನು ಅಗ್ರೇಸೀವ್ ಆಗಿ ಫೈಟ್ ಮಾಡಿದ್ದನ್ನು ನೋಡಿ ಥ್ರಿಲ್ಲರ್ ಮಂಜು ಸರ್ ಹೊಗಳಿದರು. ಮಾಸ್ ಸಿನಿಮಾಗಳಿಗೆ ಪಕ್ಕಾ ಸ್ಯೂಟ್ ಆಗ್ತೀಯಾ ಟ್ರೈ ಮಾಡು ಅಂತೇಳಿದ್ದಾರೆ ಎಂದು ರಂಜನ್ ಹೇಳಿಕೊಳ್ತಾರೆ.

    ಇನ್ನೂ ಇಂಟ್ರುಡಕ್ಷನ್ ಫೈಟ್ಸ್ ಜೊತೆಗೆ ಮೂರು ಹಾಡುಗಳಲ್ಲಿ ರಂಜನ್ ಛತ್ರಪತಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿಲ್ಕು ಮಿಲ್ಕು ಹಾಡಿನಲ್ಲಿ ಎಸ್ತರ್ ನರೋನ್ಹಾ ಜೊತೆಗೆ ಪಡ್ಡೆಹೈಕ್ಳ ಬೆವರಿಳಿಸಿದ್ದಾರೆ. ಚೆಂದಾನೇ ಚೆಂದಾನೇ ಹಾಡಿನ ಮೂಲಕ ಚಿತ್ರಪ್ರೇಮಿಗಳ ಗಮನ ಸೆಳೆದಿದ್ದಾರೆ. ಇನ್ನೊಂದು ಹಾಡು ಬೆಳ್ಳಿತೆರೆ ಮೇಲೆ ಮೂಡಲಿದೆ.

     

    ಇನ್ನೇನು ಸಿನಿಮಾ ರಿಲೀಸ್ ಗೆ ಸಜ್ಜಾಗಿದೆ. ಇದೇ ಅಕ್ಟೋಬರ್ 27 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಾಣಿಸೋಕೆ ತಯಾರಿ ನಡೆಸಿದೆ. ಗೆಳೆಯ ರಂಜನ್ ಛತ್ರಪತಿನಾ ಕೈ ಹಿಡಿದು ನಿರ್ದೇಶಕ ಸಂದೇಶ್ ಹೀರೋ ಚಾನ್ಸ್ ಕೊಟ್ಟಂತೆ, ಅರ್ಧಕ್ಕೆ ನಿಂತು ಹೋದ ಇನಾಮ್ದಾರ್ ಚಿತ್ರವನ್ನು ಟೇಕಾಫ್ ಮಾಡುವ ಮೂಲಕ ಸ್ನೇಹಿತ ಸಂದೇಶ್ ಶೆಟ್ಟಿನಾ ನಿರಂಜನ್ ಶೆಟ್ಟಿ ಕೈಹಿಡಿದಿದ್ದಾರೆ. ಸೋ, ದೋಸ್ತಿಗಳು ಜೊತೆಯಾಗಿ ತಯಾರಿಸಿರೋ ಇನಾಮ್ದಾರ್ ಕಥೆ ಗಟ್ಟಿತನದಿಂದ ಕೂಡಿದ್ದರೆ ಗಲ್ಲಾಪೆಟ್ಟಿಗೆ ಗ್ಯಾರಂಟಿ ಉಡೀಸ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಇನಾಮ್ದಾರ್’ಗೆ ಪ್ಯಾನ್ ಇಂಡಿಯಾ ಬೇಡಿಕೆ: ಡೈರೆಕ್ಟರ್ ಸಂದೇಶ್ ಗೆ ಸಿಗ್ತು ನಾನಾ ಪಾಟೇಕರ್ ಕಾಲ್ ಶೀಟ್

    `ಇನಾಮ್ದಾರ್’ಗೆ ಪ್ಯಾನ್ ಇಂಡಿಯಾ ಬೇಡಿಕೆ: ಡೈರೆಕ್ಟರ್ ಸಂದೇಶ್ ಗೆ ಸಿಗ್ತು ನಾನಾ ಪಾಟೇಕರ್ ಕಾಲ್ ಶೀಟ್

    ಪಂಚಭಾಷೆಯಲ್ಲಿ ತಯ್ಯಾರಾಗುತ್ತಾ ಪ್ಯಾನ್ ಇಂಡಿಯಾ ತುಂಬೆಲ್ಲಾ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಮಧ್ಯೆ ಕನ್ನಡದಲ್ಲಿ ನಿರ್ಮಾಣಗೊಂಡು ಬಿಡುಗಡೆಯ ಹೊಸ್ತಿಲಲ್ಲಿರುವ `ಇನಾಮ್ದಾರ್’ (Inamdar) ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಸೃಷ್ಟಿಸಿಕೊಳ್ತಿದೆ. ಹೌದು, ಟ್ರೇಲರ್ ನೋಡಿ ಇಂಪ್ರೆಸ್ ಆಗಿರುವ ಪರಭಾಷಾ ಸಿನಿಮಾ ಮಂದಿ `ಇನಾಮ್ದಾರ್’ ಚಿತ್ರದ ಹಕ್ಕುಗಳನ್ನು ತಮ್ಮ ಸ್ವಾದೀನಕ್ಕೆ ಪಡೆಯಲು ಮುಂದೆ ಬರುತ್ತಿದ್ದಾರಂತೆ. ಈ ಕುರಿತು ಸಂತೋಷ ಹಂಚಿಕೊಂಡ ಚಿತ್ರದ ನಿರ್ದೇಶಕರಾದ ಸಂದೇಶ್ ಶೆಟ್ಟಿ (Sandesh Shetty) ಆಜ್ರಿಯವರು `ಇನಾಮ್ದಾರ್’ ಸೃಷ್ಟಿಸಲಿರುವ ಸಂಚಲನ ಹಾಗೂ ತಲ್ಲಣದ ಬಗ್ಗೆ ಮಾತಿಗಿಳಿದರು. ಹೆಸರಾಂತ ಹಿರಿಯ ನಟ ನಾನಾ ಪಾಟೇಕರ್ ಗೆ ಆ್ಯಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿರುವ ಕುರಿತು ಮಾಹಿತಿ ಹೊರಹಾಕಿದರು. ಪಂಕಜ್ ತ್ರಿಪಾಠಿ ಹಾಗೂ ನಾನಾ ಪಾಟೇಕರ್ (Nana Patekar) ಇಬ್ಬರನ್ನೂ ಸೇರಿಸಿ ಸಿನಿಮಾ ಮಾಡಲಿದ್ದು, ಬಾಲಿವುಡ್ ನಿರ್ಮಾಪಕರು ಬಂಡವಾಳ ಹೂಡಲು ಮುಂದೆ ಬಂದಿರುವುದಾಗಿ ಹೇಳಿಕೊಂಡರು.

    ಸಂದೇಶ್ ಶೆಟ್ಟಿ ಆಜ್ರಿ ಕರಾವಳಿ ಭಾಗದ ನಿರ್ದೇಶಕರು. ಕಳೆದ ಮೂರು ವರ್ಷಗಳ ಹಿಂದೆ `ಕತ್ತಲೆ ಕೋಣೆ’ ಎಂಬ ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ ಮಾಡಿದ್ದರು. ಈಗ ಭಿನ್ನ ಕಥಾಹಂದರವುಳ್ಳ `ಇನಾಮ್ದಾರ್’ ಚಿತ್ರದ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳಲು ರೆಡಿಯಾಗಿದ್ದಾರೆ. ಟೀಸರ್ ನಲ್ಲಿ ದಟ್ಟಕಾನನ ಹಾಗೂ ಬುಡಕಟ್ಟು ಜನಾಂಗದ ದರ್ಶನ ಮಾಡಿಸಿ ಸಿನಿಮಾಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದ್ದರು. ಕೌತುಕದ ಜೊತೆಗೆ ಕಿಕ್ ಇರಲೆಂದು `ಸಿಲ್ಕು ಮಿಲ್ಕು’ ಸುಂದರಿನಾ ಕಣಕ್ಕಿಳಿಸಿದ್ದರು. ಆಕೆ ಅಖಾಡವನ್ನ ಕಬ್ಜ ಮಾಡಿಕೊಂಡ ಬೆನ್ನಲ್ಲೇ ಈಗ ಟ್ರೈಲರ್ ಹೊರಬಿದ್ದಿದೆ. ಮಾಸ್, ಕ್ಲಾಸ್ ಎನ್ನದೇ ಎಲ್ಲಾ ವರ್ಗದ ಸಿನಿಮಾ ಪ್ರೇಮಿಗಳನ್ನ ತನ್ನತ್ತ ಸೆಳೆಯುತ್ತಿದೆ. ಅಚ್ಚರಿಯೆಂಬಂತೆ `ಇನಾಮ್ದಾರ್’ಗೆ ಪರಭಾಷೆಯಲ್ಲಿಯೂ ಬೇಡಿಕೆ ಹೆಚ್ಚುತ್ತಿದೆ. ಡಬ್ಬಿಂಗ್ ರೈಟ್ಸ್ ಕೊಳ್ಳಲು ಹಲವರು ಮುಂದೆ ಬಂದಿದ್ದು `ಇನಾಮ್ದಾರ್’ ತಂಡಕ್ಕೆ ಹೊಸ ಹುರುಪು ತುಂಬಿದೆ. ಕನ್ನಡದ ಜೊತೆಗೆ ಬೇರೆ ಭಾಷೆಗೂ ಸಿನಿಮಾನ ಡಬ್ ಮಾಡಿ ರಿಲೀಸ್ ಮಾಡುವ ಪ್ಲ್ಯಾನ್ ನಿರ್ದೇಶಕರಿಗಿದೆ.

    ಇನ್ನೂ `ಇನಾಮ್ದಾರ್’ ಚಿತ್ರಕ್ಕಾಗಿ ನಿರ್ದೇಶಕ ಸಂದೇಶ್ ಶೆಟ್ಟಿ ಎರಡು ವರ್ಷ ಶ್ರಮಪಟ್ಟಿದ್ದಾರೆ. ಛತ್ರಪತಿ ಶಿವಾಜಿ ಮಹರಾಜ್ ರಿಂದ ಇನಾಮ್ ಪಡೆದಂತಹ ವಂಶಸ್ಥರನ್ನು ಸಂಪರ್ಕ ಮಾಡಿ ಮಾಹಿತಿ ಕಲೆಹಾಕಿರುವ ನಿರ್ದೇಶಕರು, ಸಾಹಿತಿ ಡಾ. ಸರಜೂ ಕಾಟ್ಕರ್ ಅವರು ಬರೆದಿರುವ `ಶಿವಾಜಿ ಮೂಲ ಕನ್ನಡದ ನೆಲ’ ಪುಸ್ತಕವನ್ನು ಆಧಾರಗ್ರಂಥವನ್ನಾಗಿಸಿಕೊಂಡು `ಇನಾಮ್ದಾರ್’ ಚಿತ್ರ ಕಟ್ಟಿಕೊಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲಿ ಛತ್ರಪತಿ ಶಿವಾಜಿಯನ್ನು ಆರಾಧಿಸುವ ಇನಾಮ್ದಾರ್ ಕುಟುಂಬ ಹಾಗೂ ಕರಾವಳಿಯಲ್ಲಿ ಸಾಕ್ಷಾತ್ ಶಿವನನ್ನು ಪೂಜಿಸುವ ಕಾಡು ಜನರ ನಡುವೆ ನಡೆಯುವ ವರ್ಣಸಂಘರ್ಷದ ಕಥೆಯನ್ನು ಸಿನಿಮಾವಾಗಿಸಿದ್ದಾರೆ. ಕೆಳಜಾತಿಯವರ ಮೇಲೆ ಮೇಲ್ವರ್ಗದ ದಬ್ಬಾಳಿಕೆ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಸಮಾನತೆ-ಸೌಹಾರ್ದತೆ ಬರೀ ಬಾಯಿಮಾತಿಗಷ್ಟೇ ಸೀಮಿತವಾಗಿರಬಾರದು, ಅದು ಜಾರಿಯಾಗ್ಬೇಕು ಎನ್ನುವ ನಿಟ್ಟಿನಲ್ಲಿಯೇ ಶೆಟ್ರು ಅಖಾಡಕ್ಕಿಳಿದಿದ್ದಾರೆ. ತನ್ನ ಕನಸಿನ `ಇನಾಮ್ದಾರ್’ ಮೂಲಕ ಕರಾಳತೆಯನ್ನು ಬಟಾಬಯಲು ಮಾಡಿ ಜನರನ್ನೂ ಜಾಗೃತಗೊಳಿಸ್ತೇನೆ ಎಂತಲೂ ತಿಳಿಸಿದ್ದಾರೆ.

    ಇಂತಹದ್ದೊಂದು ಸಾಹಸಕ್ಕೆ ಕೈಹಾಕಿರುವ ಸಂದೇಶ್ ಶೆಟ್ಟಿ, ಸ್ಯಾಂಡಲ್ವುಡ್ನ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ, ಅವಿನಾಶ್, ಥ್ರಿಲ್ಲರ್ ಮಂಜು, ಪ್ರಮೋದ್ ಶೆಟ್ಟಿ, ಎಂಕೆ ಮಠ, ಚಿತ್ರಕಲಾ ರಾಜೇಶ್ ಸೇರಿದಂತೆ ಹಲವರನ್ನ ಒಟ್ಟುಗೂಡಿಸಿದ್ದಾರೆ. ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕರಡಿ ಕಾಮ ಮತ್ತು ಕಮರಕಾಳ ಈ ಎರಡು ಪಾತ್ರಗಳನ್ನೂ ಪೋಷಣೆ ಮಾಡಿದ್ದಾರೆ. ಸಿನಿದುನಿಯಾದಲ್ಲಿ ತಮ್ಮದೊಂದು ಛಾಪು ಮೂಡಿಸಲೇಬೇಕು ಅಂತ ಪಣತೊಟ್ಟಿರುವ ಸಂದೇಶ್ ಗೆ ನೆಗೆಟೀವ್ ಶೇಡ್ ಪಾತ್ರಗಳಲ್ಲಿ ಗುರ್ತಿಸಿಕೊಳ್ಳಬೇಕು ಎನ್ನುವ ಹೆಬ್ಬಯಕೆ. ಅದನ್ನು ತಮ್ಮದೇ ನಿರ್ದೇಶನದ ಚಿತ್ರದಲ್ಲಿ ಈಡೇರಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಮೂರ್ನಾಲ್ಕು ಗಂಟೆಗಳ ಕಾಲ ಮೇಕಪ್ ಹಾಕಿಸಿಕೊಂಡು ನಟಿಸುವುದರ ಜೊತೆಗೆ ಘಟಾನುಘಟಿ ತಾರೆಯರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಳೆಬೇರು-ಹೊಸ ಚಿಗುರು ಎನ್ನುವಂತೆ ಸೀನಿಯರ್ಸ್ ಜೊತೆಗೆ ಜೂನಿಯರ್ಸ್ ಗಳು ಇದ್ದಾರೆ. ಕಾಂತಾರ ಖ್ಯಾತಿಯ ನಾಗರಾಜ್ ಬೈಂದೂರು, ಪ್ರಶಾಂತ್ ಸಿದ್ದಿ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಹಾಲಂಬಿ, ಸಂಜು ಬಸಯ್ಯ ಜೊತೆಗೆ ಚಿರಶ್ರೀ ಅಂಚನ್ ಹಾಗೂ ಎಸ್ತರ್ ನರೋನಾ ನಾಯಕಿಯರಾಗಿ ಮಿಂಚಿದ್ದಾರೆ. `ಸಿಲ್ಕು ಮಿಲ್ಕು’ ಸಾಂಗ್ ಮೂಲಕ ಎಸ್ತರ್ ಎಕ್ಕಾಮಕ್ಕಾ ಕಿಕ್ ಕೊಟ್ಟಿದ್ದಾರೆ. ಬುಡಕಟ್ಟು ಜನಾಂಗದ ಹೆಣ್ಣುಮಗಳ ಪಾತ್ರದಲ್ಲಿ ಚಿರಶ್ರೀ ಅಂಚನ್ ಕಾಣಿಸಿಕೊಂಡಿದ್ದಾರೆ. ರಂಜನ್ ಛತ್ರಪತಿ ನಾಯಕನಟನಾಗಿ ಧಗಧಗಿಸಿದ್ದಾರೆ.

    ಬೆಳಗಾವಿ, ನಿಪ್ಪಾಣಿ, ಧಾರವಾಡ, ಹುಬ್ಬಳಿ, ಚಿಕ್ಕಮಂಗಳೂರು, ಕರಾವಳಿ ಭಾಗ ಸುತ್ತಮುತ್ತ ಸುಮಾರು 65 ದಿನ `ಇನಾಮ್ದಾರ್’ ಶೂಟಿಂಗ್ ನಡೆದಿದೆ. ಚಿತ್ರದಲ್ಲಿ ಒಟ್ಟು 6 ಫೈಟ್ ಸೀಕ್ವೆನ್ಸ್ ಗಳಿದ್ದು ಥ್ರಿಲ್ಲರ್ ಮಂಜು ಅವರು 5 ಆ್ಯಕ್ಷನ್ ಸೀಕ್ವೆನ್ಸ್ ನ ಕಂಪೋಸ್ ಮಾಡಿಕೊಟ್ಟಿದ್ದಾರೆ. ನಿರ್ದೇಶನ, ನಟನೆ ಜೊತೆಗೆ ಟೈಗರ್ ಫೈಟ್ ಸೀಕ್ವೆನ್ಸ್ ಸಂಯೋಜನೆ ಮಾಡಿದ್ದಾರಂತೆ ಡೈರೆಕ್ಟರ್ ಸಂದೇಶ್ ಶೆಟ್ಟಿ. ಈಗಾಗಲೇ ಟ್ರೇಲರ್ ನಲ್ಲಿ ಟೈಗರ್ ಫೈಟ್ ಸೀಕ್ವೆನ್ಸ್ ಝಲಕ್ ಹೊರಬಿದ್ದಿದೆ. ರಾಕಿ ಸೋನು ಸಂಗೀತ, ನಕುಲ್ ಅಭಯಂಕರ್ ಹಿನ್ನಲೆ ಸಂಗೀತ `ಇನಾಮ್ದಾರ್’ಗೆ ಶಕ್ತಿತುಂಬಿದೆ. ಮುರುಳಿ ಕ್ಯಾಮೆರಾ ಕೈಚಳಕ ತೋರಿದ್ದು, ಶಿವರಾಜ್ ಮೇಹು ಸಂಕಲನ ತೋರಿದ್ದಾರೆ. ನಿರ್ದೇಶಕ ಸಂದೇಶ್ ಶೆಟ್ಟಿಯವರ ಸ್ನೇಹಿತ ನಿರಂಜನ್ ಶೆಟ್ಟಿ ತಲ್ಲೂರು `ಇನಾಮ್ದಾರ್’ಗೆ ಬಂಡವಾಳ ಹೂಡಿದ್ದು, ಶ್ರೀ ಕುಂತಿಯಮ್ಮ ಪ್ರೊಡಕ್ಷನ್ ಹಾಗೂ ತಸ್ಮೈ ಪ್ರೊಡಕ್ಷನ್ ನಿರ್ಮಾಣದಲ್ಲಿ  ಅದ್ದೂರಿಯಾಗಿ ಸಿನಿಮಾ ನಿರ್ಮಿಸಿದ್ದಾರೆ. ವಿಜಯ್ ಫಿಲಂಸ್ ವಿತರಣೆ ಹೊಣೆ ಹೊತ್ತಿದ್ದು, ಸುಮಾರು 150 ಥಿಯೇಟರ್ ನಲ್ಲಿ ರಾಜ್ಯಾದ್ಯಂತ ರಿಲೀಸ್ ಮಾಡುವ ಪ್ಲ್ಯಾನ್ ಹಾಕ್ಕೊಂಡಿದೆ. ಇದೇ ಅಕ್ಟೋಬರ್ 27ರಂದು ಚಿತ್ರ ತೆರೆಗಪ್ಪಳಿಸಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ರೈಲರ್ ಮೂಲಕ ಕಿಚ್ಚು ಹಚ್ಚಿದ `ಇನಾಮ್ದಾರ್’ ಸಿನಿಮಾ

    ಟ್ರೈಲರ್ ಮೂಲಕ ಕಿಚ್ಚು ಹಚ್ಚಿದ `ಇನಾಮ್ದಾರ್’ ಸಿನಿಮಾ

    ನಾಮ್ದಾರ್ ಈ ಹೆಸರು ಕಿವಿಗೆ ಬಿದ್ದಾಕ್ಷಣ ಛತ್ರಪತಿ ಶಿವಾಜಿ ಮಹರಾಜ್ ನೆನಪಾಗೋದು ಸಹಜ. ಯಾಕಂದ್ರೆ, `ಇನಾಮ್ದಾರ್’ ಪದ್ದತಿಯನ್ನ ಭೂಮಿ ಮೇಲೆ ಅನುಷ್ಕಾನಕ್ಕೆ ತಂದಿದ್ದೇ ಅವರು. ಹೀಗ್ಯಾಕೆ, ನಾವು `ಇನಾಮ್ದಾರ್’ ಪದ್ದತಿ ಕುರಿತಾಗಿ ಮಾತನಾಡ್ತಿದ್ದೇವೆ ಅಂದರೆ ಅದೇ ಹೆಸರಲ್ಲಿ ಕನ್ನಡದಲ್ಲಿ ಒಂದು ಸಿನಿಮಾ ಬರುತ್ತಿದೆ. ಕರಾವಳಿ ಮೂಲದ ನಿರ್ದೇಶಕ ಸಂದೇಶ್ ಶೆಟ್ಟಿ ಆ ಚಿತ್ರವನ್ನು ನಿರ್ದೇಶನ ಮಾಡಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಟೀಸರ್ ಮೂಲಕ ಸಿನಿದುನಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ `ಇನಾಮ್ದಾರ್’ ಚಿತ್ರ ಈಗ ಟ್ರೈಲರ್  ನಿಂದ ರಾಜಕೀಯ ಪಡಸಾಲೆಯಲ್ಲೂ ಚರ್ಚೆಗೊಳಪಟ್ಟಿದೆ. ಛತ್ರಪತಿ ಶಿವಾಜಿ ಮಹರಾಜ್ ಕನ್ನಡದ ಕುಲ ತಿಲಕ ಎಂದು ಕೂಗಿ ಕೂಗಿ ಹೇಳ್ತಿರುವ `ಇನಾಮ್ದಾರ್’ ಮೇಲೆ ಕನ್ನಡಪರ ಹೋರಾಟಗಾರರು ಹಾಗೂ ಸಂಘಟನೆಗಳು ಮುಗಿಬೀಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

    ಮರಾಠ ಸಾಮ್ರಾಜ್ಯದ ಚಕ್ರವರ್ತಿ ಛತ್ರಪತಿ ಶಿವಾಜಿ ಮಹರಾಜ್ ಕನ್ನಡಿಗನಾ? ಈ ಪ್ರಶ್ನೆ ಇಂದು ನಿನ್ನೆ ಚರ್ಚೆಗೊಳಪಟ್ಟಿರುವುದಿಲ್ಲ. ತಲೆತಲಾಂತರದಿಂದ ಬುಗಿಲೆದ್ದಿರುವ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ, ವಾದ-ವಿವಾದಗಳಂತೂ ನಡೆಯುತ್ತಲೇ ಇದೆ. ಶಿವಾಜಿ ಮಹರಾಜ್ ಮೂಲತಃ ಕನ್ನಡಿಗರೇ ಎನ್ನುವವರು ಇದ್ದಾರೆ. ಶಿವಾಜಿ ಕನ್ನಡಿಗನಲ್ಲ ಅಂತ ಕೆಂಡಕಾರುವವರು ಇದ್ದಾರೆ. ಹೀಗಿರುವಾಗ ನಿರ್ದೇಶಕ ಸಂದೇಶ್ ಶೆಟ್ಟಿ ಛತ್ರಪತಿ ಶಿವಾಜಿ ಮಹರಾಜ್ ಕನ್ನಡದ ಕುಲ ತಿಲಕ ಎನ್ನುತ್ತಾ ಅಖಾಡಕ್ಕಿಳಿದಿದ್ದಾರೆ. ಔರಂಗಜೇಬನ ಫ್ಲೆಕ್ಸ್ ಹಾಕೋಕೆ ಅವಕಾಶ ಕೊಡ್ತಾರೆ. ಅದೇ ಶಿವಾಜಿ ಪುತ್ಥಳಿ ಅನಾವರಣ ಮಾಡ್ತೀವಿ ಎಂದರೆ ರೊಚ್ಚಿಗೇಳ್ತಾರೆ. ಇದ್ಯಾವ ನ್ಯಾಯ ಎನ್ನುತ್ತಾ ಕಣ್ಣಲ್ಲೇ ಕೆಂಡ ಉಗುಳುತ್ತಿರುವ ಡೈರೆಕ್ಟರ್ ಸಂದೇಶ್, ಶಿವಾಜಿ ಮಹರಾಜರನ್ನು ಆರಾಧಿಸುವ `ಇನಾಮ್ದಾರ್’ ಕುಟುಂಬದ ಮೇಲೆ ಸಿನಿಮಾ ಮಾಡಿ ಮುಗಿಸಿದ್ದಾರೆ. 2 ನಿಮಿಷ 34 ಸೆಕೆಂಡಿನ ಟ್ರೈಲರ್ ಮೂಲಕವೇ ಕಿಚ್ಚು ಹಚ್ಚಿ ವಾದ-ವಿವಾದಕ್ಕೆ ನಾಂದಿಹಾಡಿದ್ದಾರೆ. ಇದನ್ನೂ ಓದಿ:ಬಿಕಿನಿ ಬಳಿಕ ಮತ್ತೆ ಬೋಲ್ಡ್ ಲುಕ್‌ನಲ್ಲಿ ‘ಗೀತಾ’ ಸೀರಿಯಲ್ ನಟಿ

    `ಇನಾಮ್ದಾರ್’ ಚಿತ್ರ ಕೈಗೆತ್ತಿಕೊಳ್ಳುವ ಮೊದಲು ನಿರ್ದೇಶಕ ಸಂದೇಶ್ ಶೆಟ್ಟಿ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಡಾ. ಸರಜೂ ಕಾಟ್ಕರ್ ಅವರು ಬರೆದಿರುವ `ಶಿವಾಜಿ ಮೂಲ ಕನ್ನಡದ ನೆಲ’ ಪುಸ್ತಕವನ್ನೂ ಆಧಾರವಾಗಿಟ್ಟುಕೊಂಡು ಕಥೆ ಸಿದ್ದಪಡಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಮೂಲದ ಶಿವಾಜಿ ಮಹಾರಾಜರನ್ನು ಆರಾಧಿಸುವ `ಇನಾಮ್ದಾರ್’ ಕುಟುಂಬ ಹಾಗೂ ದಕ್ಷಿಣದ ಕರಾವಳಿ ಭಾಗದ ಕಾಡಿನಲ್ಲಿ ವಾಸಿಸುವ ಹಾಗೂ ಶಿವನ ಆರಾಧಕರಾದ ಕಾಡು ಜನರ ನಡುವೆ ನಡೆಯುವ ವರ್ಣ ಸಂಘರ್ಷದ ಕಥೆಯನ್ನು ಸಿನಿಮಾವಾಗಿಸಿದ್ದಾರೆ. ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಶಾಂತಿಧೂತರು, ಸಮಾನತೆ-ಸೌಹಾರ್ದತೆಯಿಂದ ಬಾಳಬೇಕು ಅನ್ನೋದು ಬರೀ ಬಾಯಿ ಮಾತಿಗೆ ಸೀಮಿತವಾಗಿದೆ. ಜಾತಿ, ಧರ್ಮದಿಂದ ಲಿಂಗ ತಾರತಮ್ಯದಿಂದ ಕಚ್ಚಾಡಿಕೊಳ್ಳುವುದು ಹೆಚ್ಚಾಗುತ್ತಲೇ ಇದೆ. ಅದನ್ನು ತಡೆಯುವ ನಿಟ್ಟಿನಲ್ಲಿ, ಸಮಾಜಕ್ಕೆ ಒಂದು ಸಂದೇಶ ಕೊಡುವ ಹಾದಿಯಲ್ಲಿ ಸಂದೇಶ್ ಶೆಟ್ಟಿ ಆಜ್ರಿಯವರು ಒಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ಕಲಾವಿದರನ್ನೆಲ್ಲಾ ಒಟ್ಟುಗೂಡಿಸಿಕೊಂಡು ಸಿನಿಮಾ ಮಾಡಿದ್ದಾರೆ. `ಇನಾಮ್ದಾರ್’ ಮೂಲಕ ಬದಲಾವಣೆ ತರಲು ಹೊರಟು ನಿಂತಿದ್ದಾರೆ.

    ಈ ಸಿನಿಮಾದಿಂದ ಬೆಳಗಾವಿ ಮೂಲದ ರಂಜನ್ ಛತ್ರಪತಿ ಅನ್ನೋರು ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದಾರೆ. ನಿರ್ದೇಶನದ ಜೊತೆಗೆ ಸಂದೇಶ್ ಶೆಟ್ಟಿ ಆಜ್ರಿಯವರು ಪ್ರಮುಖ ಪಾತ್ರ ಪೋಷಣೆ ಮಾಡಿದ್ದಾರೆ. ಹಿರಿಯ ನಟರಾದ ಶರತ್ ಲೋಹಿತಾಶ್ವ, ಅವಿನಾಶ್, ಥ್ರಿಲ್ಲರ್ ಮಂಜು, ಪ್ರಮೋದ್ ಶೆಟ್ಟಿ, ಎಂಕೆ ಮಠ ಸೇರಿದಂತೆ ಕಾಂತಾರ ಖ್ಯಾತಿಯ ಬೈಂದೂರು, ಪ್ರಶಾಂತ್ ಸಿದ್ದಿ, ರಘುಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಹಾಲಂಬಿ ಅವರಂತ ಕರಾವಳಿಯ ಪ್ರತಿಭೆಗಳ ಸಮಾಗಮ ಈ ಚಿತ್ರದಲ್ಲಾಗಿದೆ. ಕುಡ್ಲದ ಬೆಡಗಿ ಚಿರಶ್ರೀ ಅಂಚನ್ ಹಾಗೂ ಬಹುಭಾಷೆಯಲ್ಲಿ ಗುರ್ತಿಸಿಕೊಂಡಿರುವ ಎಸ್ತರ್ ನರೋನ್ಹಾ ನಾಯಕಿಯರಾಗಿ ಮಿಂಚಿದ್ದಾರೆ. `ಸಿಲ್ಕು ಮಿಲ್ಕು’ ಹಾಡಿನ ಮೂಲಕ ಬಂಟ್ವಾಳದ ಬ್ಯೂಟಿ ನಟಿ ಎಸ್ತರ್ ನರೋನಾ, ಪಡ್ಡೆಹುಡುಗರ ಮೈ ಬೆವರುವಂತೆ ಮಾಡಿದ್ದಾರೆ. ಉತ್ತರ ಕರ್ನಾಟಕದ ದಾಟಿಯಲ್ಲಿ, ರಾಕಿ ಸೋನು ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ `ಸಿಲ್ಕು ಮಿಲ್ಕು’ ಸಾಂಗ್ ಯೂಟ್ಯೂಬ್‍ನಲ್ಲಿ ಮಿಲಿಯನ್ಸ್ ಗಟ್ಟಲೇ ವೀವ್ಸ್ ಪಡೆದಿದೆ. ಗೀತಾ ಸಾಯಿ ಅವರ ನೃತ್ಯ ನಿರ್ದೇಶನ ಈ ಸಿನಿಮಾಕ್ಕಿದೆ.

    ಇನ್ನೂ ಬೆಳಗಾವಿ, ಕುಂದಾಪುರ ಸೇರಿದಂತೆ ಹಲವೆಡೆ `ಇನಾಮ್ದಾರ್’ ಚಿತ್ರೀಕರಣ ನಡೆದಿದೆ. ಮುರುಳಿ ಛಾಯಾಗ್ರಹಣದಲ್ಲಿ, ಶಿವರಾಜ್ ಮೇಹು ಸಂಕಲನದಲ್ಲಿ ಸಿನಿಮಾ ತಯಾರಾಗಿದೆ. ಕತ್ತಲೆ ಕೋಣೆ ಎನ್ನುವ ವಿಭಿನ್ನ ಹಾರರ್ ಬೇಸ್ ಇರುವ ಸೈಂಟಿಫಿಕ್ ಥ್ರಿಲ್ಲರ್ ಚಿತ್ರವನ್ನು ತೆರೆಯ ಮೇಲೆ ತಂದಿದ್ದ ಸಂದೇಶ ಶೆಟ್ಟಿ ಆಜ್ರಿ, 3 ವರ್ಷಗಳ ಗ್ಯಾಪ್ ಬಳಿ ಈ ಬಾರಿ `ಇನಾಮ್ದಾರ್’ ಚಿತ್ರದ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳುತ್ತಿದ್ದಾರೆ.   ನಿರ್ದೇಶಕ ಸಂದೇಶ್ ಶೆಟ್ಟಿಯವರ ಸ್ನೇಹಿತ ನಿರಂಜನ್ ಶೆಟ್ಟಿ ತಲ್ಲೂರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀ ಕುಂತಿಯಮ್ಮ ಪ್ರೊಡಕ್ಷನ್ ಹಾಗೂ ತಸ್ಮೈ ಪ್ರೊಡಕ್ಷನ್ ನಿರ್ಮಾಣದಲ್ಲಿ `ಇನಾಮ್ದಾರ್’ ಅದ್ದೂರಿಯಾಗಿಯೇ ಮೂಡಿಬಂದಿದೆ. ಅಕ್ಟೋಬರ್ 27ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]