Tag: samanvi

  • ಸಮನ್ವಿ ಮುಂದೆ ದೊಡ್ಡ ಸ್ಟಾರ್‌ ಆಗುತ್ತಿದ್ದಳು: ಸೃಜನ್‌ ಲೋಕೇಶ್‌ ಭಾವುಕ

    ಸಮನ್ವಿ ಮುಂದೆ ದೊಡ್ಡ ಸ್ಟಾರ್‌ ಆಗುತ್ತಿದ್ದಳು: ಸೃಜನ್‌ ಲೋಕೇಶ್‌ ಭಾವುಕ

    ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ನನ್ನಮ್ಮ ಸೂಪರ್‌ ಸ್ಟಾರ್‌ ಶೋನ ಸ್ಪರ್ಧಿ ಸಮನ್ವಿ ನೆನೆದು ನಟ ಸೃಜನ್‌ ಲೋಕೇಶ್‌ ಭಾವುಕರಾದರು.

    ಪುಟಾಣಿ ಸಾವಿನ ಸುದ್ದಿ ಕೇಳಿ ಮನಸ್ಸು ತುಂಬಾ ಡಿಸ್ಟರ್ಬ್‌ ಆಗಿದೆ. ರಾತ್ರಿ ಕೂಡ ನಿದ್ರೆ ಮಾಡಲಾಗಲಿಲ್ಲ. ಕಣ್ಣು ಮುಚ್ಚಿದರೂ ಆ ಮಗುವಿನ ಬಿಂಬವೇ ಬರುತ್ತಿತ್ತು. ಇಂತಹ ಸನ್ನಿವೇಶಗಳನ್ನು ನೋಡಿದಾಗ ನಮ್ಮ ಮಕ್ಕಳ ವಿಚಾರದಲ್ಲೂ ನಾವು ಜಾಗೃತರಾಗಬೇಕು ಎನಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು

    ಮುದ್ದಾದ ಮಗು ಅದು. ಕಾರ್ಯಕ್ರಮದಲ್ಲಿ ಬಹಳ ಖುಷಿ ಖುಷಿಯಾಗಿ ಇರುತ್ತಿದ್ದಳು. ಅಂಥ ಮಗು ಅಪಘಾತದಲ್ಲಿ ಸಾವನ್ನಪ್ಪಿದ್ದು ನಿಜಕ್ಕೂ ಘೋರ. ಶತ್ರುಗಳಿಗೂ ಇಂತಹ ಪರಿಸ್ಥಿತಿ ಬರಬಾರದು ಎಂದು ದುಃಖಿಸಿದರು.

    ಪರದೆಯ ಮುಂದೆ ಚೆನ್ನಾಗಿ ಅಭಿನಯಿಸುತ್ತಿದ್ದ ಸಮನ್ವಿ, ತುಂಬಾ ಪ್ರತಿಭಾವಂತೆ. ಮುಗ್ದತೆ, ಪ್ರೀತಿ ಎಲ್ಲವನ್ನೂ ತುಂಬಿಕೊಂಡಿದ್ದ ಮಗು. ಮುಂದೆ ದೊಡ್ಡ ಸ್ಟಾರ್‌ ಆಗುತ್ತಾಳೆ ಎನ್ನುತ್ತಿದ್ದೆವು. ಕಾರ್ಯಕ್ರಮ ಮುಗಿಸಿ ಹೊರಬಂದಾಗ ನನ್ನನ್ನು ಜಡ್ಜ್‌ ಬಾಯ್‌ ಅಂತ ಪ್ರೀತಿಯಿಂದ ಕರೆಯುತ್ತಿದ್ದಳು ಎಂದು ನೆನೆದರು. ಇದನ್ನೂ ಓದಿ: ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ

    ನಮ್ಮ ಜೀವನ ನಮ್ಮ ಕೈಯಲ್ಲಿಲ್ಲ ಎನ್ನುವಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಕೊರೊನಾ ವೈರಸ್‌ ಬಂದಾಗಲೂ ನಮ್‌ ಜೀವನ ನಮ್ಮ ಕೈಯಲ್ಲಿಲ್ಲ. ವಾಹನ ಓಡಿಸುತ್ತಿದ್ದಾಗಲೂ ಹೀಗೆಯೇ ಅಂದುಕೊಳ್ಳಬೇಕು. ಅಪ್ಪು ಅವರು ತೀರಿಕೊಂಡ ಸುದ್ದಿಯನ್ನು ಇನ್ನೂ ಅರಗಿಸಿಕೊಳ್ಳಲು ಆಗಿಲ್ಲ. ಇದರ ಮಧ್ಯೆಯೇ ಮಗು ಸಾವನ್ನಪ್ಪಿದ ಸುದ್ದಿ ಬಂದು, ಬರೆ ಮೇಲೆ ಬರೆ ಹಾಕಿದಂತಾಗಿದೆ ಎಂದು ವಿಷಾದಿಸಿದರು.

    ಇಂತಹ ಸಂದರ್ಭದಲ್ಲಿ ಸಮನ್ವಿ ತಾಯಿ ಅಮೃತಾ ನಾಯ್ಡು ಪರಿಸ್ಥಿತಿ ನೆನೆದರೆ ನೋವಾಗುತ್ತದೆ. ಅಮೃತಾ ಮೊದಲು ಒಂದು ಮಗುವನ್ನು ಕಳೆದುಕೊಂಡಿದ್ದರು. ನಂತರ ಸಮನ್ವಿಯನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ದರು. ಸಮನ್ವಿ ಒಂಟಿಯಾಗುತ್ತಾಳೆ ಎಂಬ ಕಾರಣಕ್ಕೆ ಮತ್ತೊಂದು ಮಗು ಹೊಂದಲು ಯೋಜಿಸಿದ್ದೇವೆ ಅಂತ ಅಮೃತ ಹೇಳುತ್ತಿದ್ದಳು. ಆ ದಂಪತಿ ಈ ನೋವನ್ನು ಹೇಗೆ ಸಹಿಸಿಕೊಳ್ಳುತ್ತಾರೋ ಎಂದು ನೊಂದು ನುಡಿದರು.

  • ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು

    ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು

    ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಸೂಪರ್ ಸ್ಟಾರ್ ರಿಯಾಲಿಟಿ ಶೋನ ಸ್ಪರ್ಧಿ ಸಮನ್ವಿ ಸಾವಿಗೆ ಲಾರಿ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದ ಲಾರಿ ಚಾಲಕ ಮಂಚೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ಸಮನ್ವಿ ಮೃತದೇಹ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದು, ಪರೀಕ್ಷೆಯ ಬಳಿಕ ಆಸ್ಪತ್ರೆ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರವಾಗಲಿದೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು

    ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಸಾವಿಗೆ ಕಲರ್ಸ್ ಕನ್ನಡ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಫೇಸ್‌ಬುಕ್‌ನಲ್ಲಿ ಕಂಬನಿ ಮಿಡಿದಿದ್ದಾರೆ. ಸುದ್ದಿ ಕೇಳಿದಾಗಿನಿಂದ ಮನಸ್ಸಿಗೆ ತೊಂದರೆಯಾಗುತ್ತಿದೆ. ಮಗುವನ್ನು ಕಳೆದುಕೊಂಡಿರುವ ತಾಯಿಯ ಬಗ್ಗೆ ಯೋಚಿಸಲೂ ಆಗುತ್ತಿಲ್ಲ. ಮಗುವನ್ನು ಕಳೆದುಕೊಳ್ಳುವುದಕ್ಕಿಂತ ದೊಡ್ಡ ನೋವು ಇನ್ನೊಂದಿಲ್ಲ ಎಂದು ಬರೆದಿದ್ದಾರೆ. ಇದನ್ನೂ ಓದಿ: ಸಮನ್ವಿ ತುಂಬಾ ಪ್ರತಿಭಾವಂತೆ, ಮಾಡೆಲ್‌ ಥರಾನೆ ಇದ್ದಳು: ಪುಟಾಣಿ ನೆನೆದು ತಾರಾ ಕಂಬನಿ

    ದುರ್ಘಟನೆ ಹೇಗಾಯಿತು?
    ಕನಕಪುರ ರಸ್ತೆಯ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿರುವ ಅಮೃತ ನಾಯ್ಡು ಗುರುವಾರ ಸಂಜೆ ಹೋಂಡಾ ಆಕ್ಟಿವಾದಲ್ಲಿ ಮಗಳೊಂದಿಗೆ ಮನೆಯಿಂದ ಹೊರಗಡೆ ಹೊರಟಿದ್ದರು. ವಾಜರಹಳ್ಳಿ ಮೆಟ್ರೋ ಸ್ಟೇಶನ್ ಬಳಿ ಆಕ್ಟಿವಾ ಪಾರ್ಕ್ ಮಾಡಿ ಇಬ್ಬರೂ ಗಾಯತ್ರಿ ನಗರಕ್ಕೆ ಹೋಗಬೇಕಿತ್ತು. ಇದನ್ನೂ ಓದಿ: ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ

    ಮೆಟ್ರೋ ನಿಲ್ದಾಣಕ್ಕೆ 100 ಮೀ. ದೂರ ಇರುವಂತೆ ತಾಯಿ ಮಗಳು ಟಾಟಾ ಸುಮೋ ಹಾಗೂ ಲಾರಿ ಮಧ್ಯೆ ಸಿಲುಕಿದ್ದರು. ಟಿಪ್ಪರ್ ಲಾರಿ ಚಾಲಕ ಎಡಕ್ಕೆ ಗಾಡಿಯನ್ನು ತಿರುಗಿಸಿದ್ದಾನೆ. ಪರಿಣಾಮ ಎಡಭಾಗದ ಬಂಪರ್ ಡಿಕ್ಕಿ ಹೊಡೆದಿದ್ದರಿಂದ ಅಮೃತ ನಾಯ್ಡು ಮತ್ತು ಮನ್ವಿ ರಸ್ತೆಗೆ ಬಿದ್ದಿದ್ದಾರೆ. ಮಾನ್ವಿಯ ಸೊಂಟಕ್ಕೆ ಲಾರಿ ಬಂಪರ್ ಬಲವಾಗಿ ಗುದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾರ್ಗ ಮಧ್ಯೆ ಸಮನ್ವಿ ಮೃತಪಟ್ಟಿದ್ದಳು. ಕುಮಾರ ಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ

    ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ

    ಬೆಂಗಳೂರು: ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ ನಡೆಯುತ್ತಲೇ ಇದೆ. ಈ ಹಿಂದೆ 7 ತಿಂಗಳ ಗರ್ಭಿಣಿಯಾಗಿದ್ದಾಗ ಮಗುವೊಂದು ಸಾವನ್ನಪ್ಪಿದ್ದು, ಬಳಿಕ ಸಮನ್ವಿ ಹುಟ್ಟಿದ್ದಳು. ಆದರೆ ಇದೀಗ ಈಕೆಯನ್ನೂ ಅಮೃತಾ ಕಳೆದುಕೊಂಡಿದ್ದಾರೆ.

    ಹೌದು. ಅಮೃತಾಗೆ ಮೃತ ಸಮನ್ವಿ ಎರಡನೇ ಮಗಳು. ಮೊದಲ ಮಗು ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿತ್ತು. ಸಮನ್ವಿ ಬಂದ ಬಳಿಕ ಬದುಕಿನಲ್ಲಿ ನಗು ಮೂಡಿತ್ತು ಎಂದು ಹಲವು ಬಾರಿ ಅಮೃತಾ ಹೇಳಿದ್ದರು. ಆದರೆ ಇದೀಗ ಮತ್ತೆ ಅಮೃತಾ ಅವರ ಬಾಳಲ್ಲಿ ಮತ್ತೆ ನಗು ಮಾಸಿದೆ.

    ಸದ್ಯ 4 ತಿಂಗಳು ಗರ್ಭಿಣಿಯಾಗಿರುವ ಅಮೃತಾ ನಾಯ್ಡು ಹಲವು ಧಾರಾವಾಹಿಗಳಲ್ಲೂ ಅಭಿನಯಿಸುತ್ತಿದ್ದರು. ಆದರೆ ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಸೀರಿಯಲ್ ನಿಂದ ನಟಿ ಹೊರಬಂದಿದ್ದರು. ಈ ನಡುವೆ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ದಲ್ಲಿ ಅಮ್ಮ ಮಗಳು ಸ್ಪರ್ಧಿಗಳಾಗಿದ್ದರು. ಅಮೃತಾ ಗರ್ಭಿಣಿಯಾಗಿರುವ ಕಾರಣ ಡಾನ್ಸ್ ಹಾಗೂ ಹಲವು ಟಾಸ್ಕ್ ಕಷ್ಟ ಅನ್ನುವ ಕಾರಣ ಕಳೆದ ವಾರ ಎಲಿಮನೇಟ್ ಆಗಿ ಹೊರಬಂದಿದ್ದರು.

    ಕನಕಪುರ ರಸ್ತೆಯ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿರುವ ಅಮೃತಾ ಇಂದು ಸಂಜೆ 4.30ರ ವೇಳೆ ತನ್ನ ಮಗಳೋಂದಿಗೆ ಮನೆಯಿಂದ ಸ್ಕೂಟಿಯಲ್ಲಿ ಹೊರಟಿದ್ದಾರೆ. ಗಾಯತ್ರಿ ನಗರಕ್ಕೆ ಹೋಗಬೇಕಿದ್ದ ಅಮೃತ ನಾಯ್ಡು, ಸಮನ್ವಿ ವಾಜರಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಬೈಕ್ ಪಾರ್ಕ್ ಮಾಡಬೇಕಿತ್ತು. ಮೆಟ್ರೋ ನಿಲ್ದಾಣಕ್ಕೆ 100 ಮೀಟರ್ ಇರುವಂತೆಯೇ ಅಪಘಾತ ಸಂಭವಿಸಿದೆ. ಟಾಟ ಸುಮೋ ಮತ್ತು ಲಾರಿ ಮಧ್ಯೆ ತಾಯಿ- ಮಗಳು ಸಿಲುಕಿಕೊಂಡರು. ಈ ವೇಳೆ ಆಯತಪ್ಪಿ ತಾಯಿ ಅಮೃತನಾಯ್ಡು, ರಸ್ತೆಯ ಪಕ್ಕಕ್ಕೆ ಬಿದ್ದಿದ್ದರೆ, ಮಗಳು ಸಮನ್ವಿ ರಸ್ತೆಗೆ ಬಿದ್ದಿದ್ದಾಳೆ. ವೇಳೆ ಪಕ್ಕದಲ್ಲೇ ಬರ್ತಿದ್ದ ಲಾರಿ ಸಮನ್ವಿ ಮೇಲೆ ಹರಿದಿದೆ.

    ಸದ್ಯ ಅಮೃತನಾಯ್ಡುಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಟಿಪ್ಪರ್ ಲಾರಿ ಮತ್ತು ಸುಮೋ ವಾಹನಗಳನ್ನು ವಶಕ್ಕೆ ಪಡೆದು, ಡ್ರೈವರ್ ಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಮನ್ವಿ ತುಂಬಾ ಪ್ರತಿಭಾವಂತೆ, ಮಾಡೆಲ್‌ ಥರಾನೆ ಇದ್ದಳು: ಪುಟಾಣಿ ನೆನೆದು ತಾರಾ ಕಂಬನಿ

    ಸಮನ್ವಿ ತುಂಬಾ ಪ್ರತಿಭಾವಂತೆ, ಮಾಡೆಲ್‌ ಥರಾನೆ ಇದ್ದಳು: ಪುಟಾಣಿ ನೆನೆದು ತಾರಾ ಕಂಬನಿ

    ಬೆಂಗಳೂರು: ಭೀಕರ ಅಪಘಾತದಲ್ಲಿ ನನ್ನಮ್ಮ ಸೂಪರ್‌ ಸ್ಟಾರ್‌ ಸ್ಪರ್ಧಿ ಸಮನ್ವಿ ಸಾವಿಗೆ ಹಿರಿಯ ನಟಿ ತಾರಾ ಕಂಬನಿ ಮಿಡಿದಿದ್ದಾರೆ.

    ಸಮನ್ವಿ ತುಂಬಾ ಪ್ರತಿಭಾವಂತೆ. ಮಾಡೆಲ್‌ ಥರಾನೆ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಅವಳಿಲ್ಲ ಎಂಬ ಸುದ್ದಿಯನ್ನು ನನ್ನಿಂದ ನಂಬುವುದಕ್ಕೇ ಆಗುತ್ತಿಲ್ಲ. ಮನಸ್ಸಿಗೆ ತುಂಬಾ ನೋವಾಗುತ್ತಿದೆ ಎಂದು ನಟಿ ವಿಷಾದಿಸಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು

    ನಾನು ಬೆಂಗಳೂರಿನಲ್ಲಿಲ್ಲ, ಹೊರಗಡೆ ಇದ್ದೇನೆ. ಅದ್ಯಾಕೋ ಒಂದೇ ಸಮನೆ ಫೋನ್‌ ಕರೆಗಳು ಬರುತ್ತಿದ್ದವು. ಏನು ಅಂತ ವಿಚಾರಿಸಿದಾಗ ಸಮನ್ವಿ ಇಲ್ಲ ಅಂತ ಹೇಳಿದರು. ಈ ಸುದ್ದಿ ಕೇಳಿ ನನಗೆ ಶಾಕ್‌ ಆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ತಾಯಿ-ಮಕ್ಕಳು ನಮ್ಮ ಕುಟುಂಬದ ಸದಸ್ಯರೇ ಆಗಿದ್ದರು. ಎಲ್ಲರೂ ನನ್ನ ಜೊತೆ ಚೆನ್ನಾಗಿದ್ದರು ಎಂದು ನೆನೆದಿದ್ದಾರೆ.

    ಸಮನ್ವಿ ತಾಯಿ ಅಮೃತಾ ನಾಯ್ಡು ತುಂಬು ಗರ್ಭಿಣಿ. ಶೋನಲ್ಲಿ ಅವಳಿಂದ ಹೆಚ್ಚು ಡ್ಯಾನ್ಸ್‌ ಮಾಡಿಸಲು ಆಗಲ್ಲ. ಆಕೆಗೆ ತುಂಬಾ ಒತ್ತಡ ಹಾಕಿದಂತಾಗುತ್ತದೆ ಎಂಬ ಕಾರಣಕ್ಕೆ ಶೋನಿಂದ ಎಲಿಮಿನೇಷನ್‌ ಮಾಡಿದ್ದೆವು. ಅದಾದ ಬಳಿಕವೂ ಆಕೆ ಫೋನ್‌ ಮಾಡಿ ನನ್ನೊಟ್ಟಿಗೆ ಚೆನ್ನಾಗಿಯೇ ಮಾತನಾಡುತ್ತಿದ್ದಳು. ಒಮ್ಮೆ ನನ್ನನ್ನು ಭೇಟಿಯಾಗಬೇಕು ಎನ್ನುತ್ತಿದ್ದಳು. ನನಗೆ ಲೊಕೇಷನ್‌ ಕಳುಹಿಸಿ, ನಾನೇ ಕಾರು ಕಳುಹಿಸುತ್ತೇನೆ ಬಾ ಎಂದು ತಿಳಿಸಿದ್ದೆ. ಇಲ್ಲ ಅಮ್ಮ ಇನ್ನೊಮ್ಮೆ ಭೇಟಿಯಾಗುತ್ತೇನೆ ಎಂದಿದ್ದಳು. ಆಗ ಸಮನ್ವಿ ಕೂಡ ನನ್ನ ಜೊತೆ ಮಾತನಾಡಿದ್ದಳು ಎಂದು ನೆನೆಯುತ್ತಾ ತಾರಾ ದುಃಖ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೀಟೂ ಕೇಸಲ್ಲಿ ಅರ್ಜುನ್ ಸರ್ಜಾಗೆ ರಿಲೀಫ್

    ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ಶೋನ ಸ್ಪರ್ಧಿ ಸಮನ್ವಿ ದಾರುಣವಾಗಿ ಮೃತಪಟ್ಟ ಘಟನೆ ಕೋಣನ ಕುಂಟೆ ಬಳಿ ನಡೆದಿದೆ.