Tag: salary

  • ತೆಲಂಗಾಣದಂತೆ ವೇತನ ನೀಡಿ, ತಿಂಗಳೊಳಗೆ ಔರಾದ್ಕರ್ ವರದಿ ಜಾರಿಗೆ ತನ್ನಿ: ಶಶಿಧರ್ ವೇಣುಗೋಪಾಲ್

    ತೆಲಂಗಾಣದಂತೆ ವೇತನ ನೀಡಿ, ತಿಂಗಳೊಳಗೆ ಔರಾದ್ಕರ್ ವರದಿ ಜಾರಿಗೆ ತನ್ನಿ: ಶಶಿಧರ್ ವೇಣುಗೋಪಾಲ್

    ಹಾವೇರಿ: ಪೊಲೀಸ್ ಇಲಾಖೆಯ ಸಿಬ್ಬಂದಿಗೆ ತೆಲಂಗಾಣದಂತೆ ವೇತನ ನೀಡಿ. ಮುಂದಿನ ಒಂದು ತಿಂಗಳೊಳಗೆ ಔರಾದ್ಕರ್ ವರದಿ ಜಾರಿಗೆ ತನ್ನಿ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾ ಸಂಘದ ರಾಜ್ಯಾಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಕದ ರಾಜ್ಯ ತೆಲಂಗಾಣದಲ್ಲಿ ಒಬ್ಬ ಸಿವಿಲ್ ಪೊಲೀಸ್ 45 ಸಾವಿರ ರೂ. ಸಂಬಳ ಪಡೆಯುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ 30 ಸಾವಿರ ರೂ. ಪಡೆಯುತ್ತಾರೆ. ಈ ವೇತನ ತಾರತಮ್ಯ ನಾವು ಖಂಡಿಸುತ್ತೇವೆ. ಜೊತೆಗೆ ಒಂದು ತಿಂಗಳೊಳಗೆ ಔರಾದ್ಕರ್ ವರದಿ ಜಾರಿಗೆ ಮಾಡದಿದ್ದರೆ, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಗಳ ಸಹಭಾಗಿತ್ವದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದರು.

    ಪೊಲೀಸ್ ಇಲಾಖೆ ನಿತ್ಯ ಆಡಳಿತದಲ್ಲಿ ರಾಜಕಾರಣಿ ಕಪಿಮುಷ್ಠಿಯಲ್ಲಿ ಸಿಲುಕಿದೆ. ಇಲಾಖೆಯು ರಾಜಕಾರಣಿಗಳ ಅಣತಿ ಮೇಲೆ ಕಾರ್ಯನಿರ್ವಹಿಸುವ ಕೇಂದ್ರಗಳಾಗಿವೆ. ರಾಜಕೀಯ ನಾಯಕರ ಹಸ್ತಕ್ಷೇಪದಿಂದ ಇಲಾಖೆ ನಲುಗಿ ಹೋಗಿದೆ. ಸರಕಾರಗಳು ಬದಲಾದ ಸಮಯದಲ್ಲಿ ಪೊಲೀಸ್ ವರ್ಗಾವಣೆಯು ಒಂದು ರೀತಿಯಲ್ಲಿ ಹಣಗಳಿಸುವ ದಂಧೆಗಳಾಗಿ ಮಾರ್ಪಾಡು ಆಗಿವೆ. ಇಲಾಖೆಯಲ್ಲಿ ಕಾನೂನಿಗೆ ಅವಕಾಶ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಪೊಲೀಸರಲ್ಲಿ ರಾಜಕೀಯ ವ್ಯವಸ್ಥೆಯಿಂದ ಅಸಹಾಯಕತೆ ಹೆಚ್ಚಾಗಿದೆ. ಇಲಾಖೆಯ ಸಿಬ್ಬಂದಿಗಳು ವೇತನ ತಾರತಮ್ಯ ಖಂಡಿಸಿ ಹೋರಾಟ ಮಾಡಿದ್ದು ನಿಜ. ಹೋರಾಟದ ಫಲವಾಗಿ ಔರಾದ್ಕರ್ ವರದಿ ಬಂದಿದೆ. ಈ ವರದಿ ತುಲನಾತ್ಮಕವಾಗಿ ವಾಸ್ತವಿಕ ವಿಚಾರಗಳನ್ನು ಹೊಂದಿದೆ. ಆದರೆ ವರದಿಯಂತೆ ಪೊಲೀಸ್ ಇಲಾಖೆಯಲ್ಲಿ ವೇತನ ಹೆಚ್ಚಳವಾಗಿಲ್ಲ ಎಂದರು. ಇದನ್ನು ಓದಿ: ಔರಾದ್ಕರ್ ವರದಿ ಜಾರಿಗೆ ಮತ್ತೆ ಕಣ್ಣಾಮುಚ್ಚಾಲೆ

    2018 ರಲ್ಲಿ ನೇಮಕಗೊಂಡ ಪೊಲೀಸ್ ಕಾನ್ಸಸ್ಟೆಬಲ್ 23,500 ರೂ. ವೇತನ ಪಡೆಯುತ್ತಾರೆ. ಆದರೆ 2012 ರಲ್ಲಿ ನೇಮಕಗೊಂಡವರು ಅಷ್ಟೇ ಪ್ರಮಾಣದಲ್ಲಿ ವೇತನ ಪಡೆಯುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ? ನಾವು ಸೇವಾ ಹಿರಿತನವನ್ನು ಪ್ರಶ್ನೆ ಮಾಡುತ್ತಿದ್ದೇವೆ. ವೇತನ ಪರಿಷ್ಕರಣೆ ಮಾಡಿ ಎನ್ನುತ್ತಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿಕೊಂಡ ಸಾಮಾಜಿಕ ಜಾಲತಾಣದ ಮೂಲಕ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಕುಮಾರಸ್ವಾಮಿ ಸರ್ಕಾರ ನಾನು 420 ಸರ್ಕಾರ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಬಂಧಿಸಿದರು. ಆಡಳಿತ ನಡೆಸುವರು ನನ್ನ ಧ್ವನಿ ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

    ನಿರ್ಲಕ್ಷ್ಯ ಸರಿಯಲ್ಲ: ಔರಾದ್ಕರ್ ವರದಿ ಜಾರಿ ವಿಚಾರದಲ್ಲಿ ಸರಕಾರ ನಿರ್ಲಕ್ಷ್ಯ ಮಾಡಬಾರದು. ಈ ವಿಚಾರದಲ್ಲಿ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಅದನ್ನು ಗೃಹ ಸಚಿವರು ಸರಿಯಾಗಿ ನಿಭಾಯಿಸಬೇಕು. ಇನ್ನು ಒಂದು ತಿಂಗಳೊಳಗೆ ವರದಿಯನ್ನು ಜಾರಿಗೆ ತರದಿದ್ದರೆ 3 ಹಂತದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಮೊದಲ ಹಂತದಲ್ಲಿ 35 ಸಾವಿರ ಸಿಬ್ಬಂದಿಗಳು, ಡಿಜಿಪಿ ಮನವಿ ಸಲ್ಲಿಸುವುದು. 2ನೇ ಹಂತದಲ್ಲಿ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಹೋರಾಟ ಮಾಡುವುದು. 3ನೇ ಹಂತವಾಗಿ ಹೈ ಕೋರ್ಟ್, ಸುಪ್ರೀಂ ಕೋರ್ಟಿನಲ್ಲಿ ಕಾನೂನ ಸಮರ ಮಾಡುತ್ತೇವೆ. ಈ ದೇಶ ನಮ್ಮದು, ಈ ಮಣ್ಣು ನಮ್ಮದು, ಇದನ್ನು ಹಾಳು ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

  • ಥಂಬ್ ಮಾಡಿದ್ರೆ ಎರಡೆರಡು ಸಂಬಳ- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ‘ಡಬಲ್ ಆ್ಯಕ್ಟಿಂಗ್’ ಬಯಲು

    ಥಂಬ್ ಮಾಡಿದ್ರೆ ಎರಡೆರಡು ಸಂಬಳ- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ‘ಡಬಲ್ ಆ್ಯಕ್ಟಿಂಗ್’ ಬಯಲು

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೆರಿಗೆದಾರರ ಹಣ ಪೋಲು ಮಾಡಲು ದಾರಿ ಹುಡುಕಿದೆ. ಪೌರಕಾರ್ಮಿಕರ ಹೆಸರಲ್ಲಿ ಕೋಟಿ ಕೋಟಿ ಲೂಟಿಯಾಗುತ್ತಿದೆ. ನೀವು ಕೆಲಸಕ್ಕೆ ಬರುವ ಅಗತ್ಯವಿಲ್ಲ, ಬರೀ ಥಂಬ್ ಇಂಪ್ರೆಷನ್ ಹಾಕಿ ಹೋದರೆ ಸಾಕು. ಸಂಬಳ ನಿಮ್ ಅಕೌಂಟ್ ಗೆ ಬಂದು ಬೀಳುತ್ತದೆ. ಇದು ಬೇನಾಮಿ ಪೌರಕಾರ್ಮಿಕರ ಜಾಲದ ಎಳೆ ಪತ್ತೆಯಾಗಿದೆ.

    ಸಿನಿಮಾದಲ್ಲಿ ಮಾತ್ರ ಡಬಲ್ ಆ್ಯಕ್ಟಿಂಗ್ ನೋಡಿರುತ್ತೀವಿ, ಆದರೆ ಜಯನಗರದ ಲೋಕೇಶ್ ಎಂಬಾತ ಡಬಲ್ ಸಂಬಳಕ್ಕಾಗಿ ಏಕಕಾಲದಲ್ಲಿ ಡಬಲ್ ರೋಲ್ ಪ್ಲೇ ಮಾಡುತ್ತಾ ಇರುವುದು ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯ ವೇಳೆ ಬೆಳಕಿಗೆ ಬಂದಿದೆ.

    ಜಯನಗರದ ಖಾಸಗಿ ಆಸ್ಪತ್ರೆಯ ಆವರಣದಲ್ಲಿ ವಾಹನಗಳ ನಿಲುಗಡೆ ಮೇಲ್ವಿಚಾರಣೆ ಸಿಬ್ಬಂದಿಯಾಗಿರುವ ಲೋಕೇಶ್ ಬೆಳಗ್ಗೆ 8 ಗಂಟೆಯಾದರೆ ಸಾಕು ಡಬಲ್ ಡ್ಯೂಟಿ ಮಾಡುತ್ತಾರೆ. ಆಸ್ಪತ್ರೆಯಲ್ಲಿ ಕೆಲಸ ಮಾಡಿ ಪೌರಕಾರ್ಮಿಕ ಕೆಲಸ ಮಾಡಿದ್ದೀನಿ ಎಂದು ಡಬಲ್ ಸಂಬಳ ಪಡೆಯುತ್ತಾರೆ. ಖಾಸಗಿ ಆಸ್ಪತ್ರೆ ಉದ್ಯೋಗಿ ಶಾಕಂಬರಿ ನಗರ ವಾರ್ಡ್ ಬಿಬಿಎಂಪಿ ಕಚೇರಿಯಲ್ಲಿ ಪೌರಕಾರ್ಮಿಕ ಕೆಲಸ ಮಾಡಿದ್ದೀನಿ ಎಂದು ಬೆರಳಚ್ಚು ಹಾಜರಾತಿ ಹಾಕಿದರು ಕೇಳುವವರು ಇಲ್ಲದಂತಾಗಿದೆ.

    ಪೊರಕೆ ಹಿಡಿಯಲಿಲ್ಲ, ಕೆಲಸ ಮಾಡಿಲ್ಲ ಆದರೆ ಸಂಬಳ ಮಾತ್ರ 3 ವರ್ಷಗಳಿಂದ ಲೋಕೇಶ್ ಅಕೌಂಟ್ ಗೆ ಪಕ್ಕಾ ಬೀಳ್ತಾ ಇದೆ. ಸಾವಿರಾರು ಮಂದಿ ಬಯೋಮೆಟ್ರಿಕ್ ಫೇಕ್ ಮಾಡಿ ಮಿಸ್ ಯೂಸ್ ಮಾಡುತ್ತಿದ್ದಾರೆ. ಈ ಸತ್ಯವನ್ನ ಖುದ್ದು ಪೌರಕಾರ್ಮಿಕರ ಕೆಲಸಗಳನ್ನ ನೋಡಿಕೊಳ್ಳಬೇಕಾದ ಮೇಲ್ವಿಚಾರಕ ಕುಮಾರ್ ಬಾಯಿಬಿಟ್ಟಿದ್ದಾರೆ.

    ಪೌರಕಾರ್ಮಿಕರ ಸಂಖ್ಯೆ ಹಾಗೂ ತಪ್ಪು ಲೆಕ್ಕದಿಂದ ಸೋರಿಕೆ ತಡೆಯಲು ಈ ಹೆಲ್ತ್ ಇನ್ಸ್‍ಪೆಕ್ಟರ್‍ಗಳಿಗೆ ಸೂಚನೆ ನೀಡಿದೆ. ಆದರೆ ಆರೋಗ್ಯಾಧಿಕಾರಿಗಳೇ ಫೇಕ್ ಪೌರಕಾರ್ಮಿಕರ ಸೃಷ್ಟಿಸಿ ಎಟಿಎಂ ಕಾರ್ಡ್ ಕಸಿದು ತಮ್ಮ ಬಳಿ ಇಟ್ಟುಕೊಂಡು ಸಂಬಳದಲ್ಲಿ 50-50 ಸಂಬಳ ಡಿವೈಡ್ ಮಾಡಿಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ತ್ಯಾಗರಾಜು ಆರೋಪಿಸಿದ್ದಾರೆ.

    ಇಷ್ಟಕ್ಕೆ ಸುಮ್ಮನಾಗದೇ ಪಾಲಿಕೆಗೆ ವಂಚಿಸುತ್ತಿರುವ ಲೋಕೇಶ್ ಅವರನ್ನೇ ಮಾತಿಗೆ ಎಳೆದಾಗ ಸತ್ಯವನ್ನ ಒಪ್ಪಿಕೊಂಡಿದ್ದಾರೆ.
    ಪ್ರತಿನಿಧಿ – ಏನ್ ಕೆಲಸ ಮಾಡ್ತೀರಾ
    ಲೋಕೇಶ್ – ಆಸ್ಪತ್ರೆ ಡ್ಯೂಟಿ ಮಾಡ್ತೀನಿ
    ಪ್ರತಿನಿಧಿ – ಬಿಬಿಎಂಪಿ ಥಂಬ್ ಯಾಕೆ ಹಾಕ್ತೀರಾ
    ಲೋಕೇಶ್ – ಅದು ನಮ್ ಅಪ್ಪನ ಕೆಲಸ ಮಾಡ್ತಾ ಇದ್ದೀನಿ

    ಪ್ರತಿನಿಧಿ – ತಪ್ಪಲ್ವ ಎರಡೆರಡು ಸಂಬಳ
    ಲೋಕೇಶ್ – ಅಲ್ಲಿ ಸಂಬಳ ನಾನ್ ತಗೋತ್ತಿಲ್ಲ
    ಪ್ರತಿನಿಧಿ – ಮತ್ಯಾರಿಗೆ, ನಿಮ್ ಎಟಿಎಂ ಕಾರ್ಡ್ ಯಾರ ಹತ್ರ ಇದೆ..?
    ಲೋಕೇಶ್ – ಗೊತ್ತಿಲ್ಲ ಅಪ್ಪನ ಕೇಳಿ ಹೇಳ್ತೀನಿ

    ಪೌರಕಾರ್ಮಿಕರಿಗೆ ವಂಚನೆಯಾಗಬಾರದೆಂದು ಬಿಬಿಎಂಪಿ ನೇರ ವೇತನಕ್ಕೆ ಮುಂದಾಗಿದೆ. ಇದರಿಂದ ಪಾಲಿಕೆಗೆ ಆಗುತ್ತಿರುವ ಖರ್ಚಿನ ವಿವರ ಹೀಗಿದೆ…
    * ಬಿಬಿಎಂಪಿ ಪೌರಕಾರ್ಮಿಕರು 2 ಸಾವಿರ ತಲಾ35 ಸಾವಿರ ಒಟ್ಟು 7 ಕೋಟಿ
    * ಗುತ್ತಿಗೆ ಪೌರಕಾರ್ಮಿಕರು 16 ಸಾವಿರ ತಲಾ 18 ಸಾವಿರ ಒಟ್ಟು 28 ಕೋಟಿ

    * ಪೌರಕಾರ್ಮಿಕರ ಸಂಬಳಕ್ಕಾಗಿ ತಿಂಗಳಿಗೆ 35 ಕೋಟಿ ಖರ್ಚು
    * ಪೌರಕಾರ್ಮಿಕರಿಗೆ ನೇರ ವೇತನ ಮೂಲಕ ಮಧ್ಯವರ್ತಿಗಳ ತಡೆಯಾಗಲಿತು
    * ಬಯೋಮೆಟ್ರಿಕ್ ಮೂಲಕ ಫೇಕ್ ಪೌರಕಾರ್ಮಿಕರ ತಡೆಯಲು ಯತ್ನ

    ಹೀಗೆ ಬಯೋಮೆಟ್ರಿಕ್‍ಗೆ ದೋಖಾ ಮಾಡಿರುವ ಜಾಲವನ್ನ ಪಬ್ಲಿಕ್ ಟಿವಿ ಬಯಲಿಗೆಳೆದಿದೆ. ಈಗ ಪಾಲಿಕೆ ಮುಂದಿನ ಕ್ರಮ ಏನು ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.

  • ಸುಂದರ್ ಪಿಚೈಗೆ 1,704 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ- ಜನವರಿಯಿಂದ ಹೆಚ್ಚಾಗಲಿದೆ ಸಂಬಳ

    ಸುಂದರ್ ಪಿಚೈಗೆ 1,704 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ- ಜನವರಿಯಿಂದ ಹೆಚ್ಚಾಗಲಿದೆ ಸಂಬಳ

    – ಹಾಗಾದರೆ ಸುಂದರ್ ಪಿಚೈ ಸಂಬಳ ಎಷ್ಟು?

    ನವದೆಹಲಿ: ಇತ್ತೀಚೆಗಷ್ಟೇ ಗೂಗಲ್ ಮಾತೃ ಸಂಸ್ಥೆಗೆ ಸಿಇಒ ಆಗಿ ಆಯ್ಕೆಯಾಗಿರುವ ಗೂಗಲ್ ಸಿಇಒ ಸಹ ಆಗಿರುವ ಸುಂದರ್ ಪಿಚೈ ಅವರ ವೇತನದಲ್ಲಿ ಭಾರೀ ಹೆಚ್ಚಳವಾಗಿದ್ದು, ಕಂಪನಿ ವಿಶೇಷ ಪ್ಯಾಕೇಜ್ ಘೋಷಿಸಿದೆ.

    ಈ ವಿಶೇಷ ವೇತನ ಪ್ಯಾಕೇಜ್ 2020ರಿಂದ ಅನ್ವಯವಾಗಲಿದ್ದು, ಪ್ರಸ್ತುತ ಸುಂದರ್ ಪಿಚೈ ಅವರಿಗಿರುವ ವಾರ್ಷಿಕ 14.22 ಕೋಟಿ ರೂ.(2 ಮಿಲಿಯನ್ ಡಾಲರ್) ಸಂಬಳವಲ್ಲದೆ, ಹೆಚ್ಚುವರಿಯಾಗಿ (ಸ್ಟಾಕ್ ಅವಾರ್ಡ್) 1,704 ಕೋಟಿ ರೂ.(240 ಮಿಲಿಯನ್ ಡಾಲರ್)ಗಳ ಪ್ಯಾಕೇಜ್‍ನ್ನು ಕಂಪನಿ ಘೋಷಿಸಿದೆ. ಇದರಲ್ಲಿ 640 ಕೋಟಿ ರೂ.(90 ಮಿಲಿಯನ್ ಡಾಲರ್)ಗಳು ಅಲ್ಫಾಬೆಟ್ ಕಂಪನಿಯ ಕಾರ್ಯಕ್ಷಮತೆಗೆ ಸಂಬಂಧಿಸಿದ್ದಾಗಿದೆ.

    ಜನವರಿ 1ರಿಂದ ಸುಂದರ್ ಪಿಚೈ ಅವರ ಸಂಬಳ ಗಣನೀಯವಾಗಿ ಹೆಚ್ಚಳವಾಗಲಿದ್ದು, 24 ಕೋಟಿ ಡಾಲರ್ ನಲ್ಲಿ 12 ಕೋಟಿ ಡಾಲರ್ ಸ್ಟಾಕ್ ಅವಾರ್ಡ್ ತ್ರೈಮಾಸಿಕ ಕಂತಿಗಳಲ್ಲಿ ಸಿಗಲಿದೆ. ಉಳಿದಿದ್ದು ಪಿಚೈ ತಮಗೆ ನೀಡಿರುವ ಟಾರ್ಗೆಟ್ ಪೂರ್ಣಗೊಳಿಸಿದಾಗ ಸಿಗಲಿದೆ. ಗೂಗಲ್ ಮಾತೃ ಸಂಸ್ಥೆ ಆಲ್ಫಾಬೆಟ್ ಹಾಗೂ ಗೂಗಲ್ ಸಂಸ್ಥೆಯ ಸಿಇಒ ಆಗಿದ್ದರಿಂದ ಸಂಬಳ ಹೆಚ್ಚಳ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    2018ರಲ್ಲಿ ಸುಂದರ್ ಪಿಚೈ ಒಟ್ಟು 19 ಲಕ್ಷ ಡಾಲರ್ (135 ಕೋಟಿ ರೂ.) ಭತ್ಯೆ ಒಳಗೊಂಡಂತೆ ಸಂಬಳವನ್ನು ಪಡೆದುಕೊಂಡಿದ್ದರು. ಇದರಲ್ಲಿ 6.5 ಲಕ್ಷ ಡಾಲರ್ (4.6 ಕೋಟಿ ರೂ.) ಬೇಸಿಕ್ ಸ್ಯಾಲರಿ ಇತ್ತು. 2018ರಲ್ಲಿ ಸ್ಟಾಕ್ ಅವಾರ್ಡ್ ತೆಗೆದುಕೊಂಡಿರಲಿಲ್ಲ. ಸದ್ಯ ಸಿಗುತ್ತಿರುವ ಸಂಬಳವೇ ಹೆಚ್ಚಿದೆ, ಅದನ್ನು ತೆಗೆದುಕೊಂಡು ಏನು ಮಾಡಲಿ ಎಂದಿದ್ದರು. 1704 ಕೋಟಿ ರೂ. ಮೌಲ್ಯದ ಸ್ಟಾಕ್ ಅವಾರ್ಡ್ ಇದುವರೆಗಿನ ಹೆಚ್ಚಿನ ಮೊತ್ತದಾಗಿದೆ.

    ಇತ್ತೀಚೆಗಷ್ಟೇ ಭಾರತ ಮೂಲದ ಸುಂದರ್ ಪಿಚೈ ಜಾಗತಿಕ ಐಟಿ ದಿಗ್ಗಜ ಗೂಗಲ್ ಕಂಪನಿಯ ಮಾತೃ ಸಂಸ್ಥೆ ಅಲ್ಫಾಬೆಟ್ ಮುಖ್ಯಸ್ಥರಾಗಿ ನೇಮಕವಾಗಿದ್ದರು. ಗೂಗಲ್ ಸಹ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸರ್ಗೆ ಬಿನ್ ಅಲ್ಫಾಬೆಟ್‍ನಿಂದ ಹೊರನಡೆದಿದ್ದು, ಆ ಸಂಸ್ಥೆಯನ್ನು ಇನ್ನು ಮುಂದೆ ಸುಂದರ್ ಪಿಚೈ ನೋಡಿಕೊಳ್ಳಲಿದ್ದಾರೆ. ಸರ್ಜಿ ಬ್ರಿನ್ ಮತ್ತು ಲ್ಯಾರಿ ಪೇಜ್ ಮಂಗಳವಾರ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

    ಐದು ವರ್ಷಗಳ ಹಿಂದೆ 2005ರ ಅಕ್ಟೋಬರ್ 2 ರಂದು ಗೂಗಲ್, ಕ್ಯಾಲಿಕೋ, ಗೂಗಲ್ ಫೈಬರ್, ಡೀಪ್ ಮೈಂಡ್ ಸೇರಿದಂತೆ ಎಲ್ಲವನ್ನೂ ಒಗ್ಗೂಡಿಸಲು ಗೂಗಲ್ ಮಾತೃ ಸಂಸ್ಥೆ ಅಲ್ಫಾಬೆಟ್ ಸ್ಥಾಪಿಸಿ ಪೇಜ್ ಮತ್ತು ಬಿನ್ ಪ್ರಮುಖ ಸ್ಥಾನಗಳನ್ನು ಹೊಂದಿದ್ದರು.

    ಕಂಪನಿಯ ಮುಖ್ಯಸ್ಥರನ್ನಾಗಿ ಸುಂದರ್ ಪಿಚೈ ಅವರನ್ನು ನೇಮಕ ಮಾಡುವುದಕ್ಕೂ ಮುನ್ನ ಲ್ಯಾರಿ ಪೇಜ್ ಮತ್ತು ಸರ್ಗೆ ಬಿನ್ ಈ ಕುರಿತು ಪತ್ರ ಬರೆದು, ಇನ್ನು ಮುಂದೆ ಗೂಗಲ್ ಮತ್ತು ಅಲ್ಫಾಬೆಟ್ ಕಂಪನಿಗೆ ಇಬ್ಬರು ಸಿಇಒಗಳು ಇರುವುದಿಲ್ಲ. ಎರಡೂ ಕಂಪನಿಯನ್ನು ಒಬ್ಬರೇ ನೋಡಿಕೊಳ್ಳಲಿದ್ದಾರೆ. ಸುಂದರ್ ನಮ್ಮ ಜೊತೆ 15 ವರ್ಷಗಳಿಂದ ಇದ್ದು, ಈತ ತಂತ್ರಜ್ಞಾನವನ್ನು ಪ್ರೀತಿಸುವ ವ್ಯಕ್ತಿಯಾಗಿದ್ದಾನೆ. ಆತನ ಮೇಲೆ ನಮಗೆ ಪೂರ್ಣ ನಂಬಿಕೆಯಿದೆ. ಈ ಸಂಸ್ಥೆಯನ್ನು ಮುನ್ನಡೆಸಲು ಸುಂದರ್ ಅವರಿಗಿಂತ ಸಮರ್ಥ ವ್ಯಕ್ತಿ ಬೇರೆ ಇಲ್ಲ. ತಂತ್ರಜ್ಞಾನ, ಉದ್ಯಮ, ಭವಿಷ್ಯದ ಯೋಜನೆ ಕುರಿತು ಅವರಿಗೆ ಸ್ಪಷ್ಟವಾದ ಜ್ಞಾನವಿದೆ ಎಂದು ಹೇಳಿ ಸುಂದರ್ ಅವರನ್ನು ಹೊಗಳಿದ್ದರು.

    ಯಾರು ಸುಂದರ್ ಪಿಚೈ?
    ಸುಂದರ್ ಪಿಚೈ ಭಾರತೀಯ ಮೂಲದ ಅಮೆರಿಕದ ಕಂಪ್ಯೂಟರ್ ಎಂಜಿನಿಯರ್. ಸುಂದರ್ ಇಲ್ಲಿಯವರಗೆ ಗೂಗಲ್ ಕ್ರೋಮ್, ಆಂಡ್ರಾಯ್ಡ್ ಅಪ್ಲಿಕೇಶನ್ ಮತ್ತು ಗೂಗಲ್ ಡ್ರೈವ್ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು. 2004ರಲ್ಲಿ ಗೂಗಲ್‍ಗೆ ಸೇರಿದ ಸುಂದರ್, ಖರಗ್‍ಪುರ್ ಐಐಟಿಯಿಂದ ಬಿ.ಟೆಕ್ ಪದವಿ, ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ ಪದವಿಗಳಿಸಿದ್ದಾರೆ. ಮೈಕ್ರೋ ಸಾಫ್ಟ್ ಸಿಇಒ ಆಗಿ ಸತ್ಯ ನಾಡೆಲ್ಲಾ ನೇಮಕವಾದ ಬಳಿಕ ಆಗಸ್ಟ್ 10, 2015ರಂದು ಪಿಚೈ ಅವರನ್ನು ಗೂಗಲ್ ಸಿಇಒ ಆಗಿ ನೇಮಕಗೊಳಿಸಿತ್ತು. ಸುಂದರ್ ಗೂಗಲ್ ಸೇರಿದ್ದು 2004ರ ಏಪ್ರಿಲ್ 1ರಂದು. ಈ ದಿನವೇ ಗೂಗಲ್ ಜಿಮೇಲ್ ಸೇವೆಯನ್ನು ಆರಂಭಿಸಿತ್ತು.

  • ಚಾಲಕ, ನಿರ್ವಾಹಕರಿಗೆ ಹಬ್ಬಕ್ಕೂ ಸಿಗ್ಲಿಲ್ಲ ಸಂಬಳ- ನೌಕರರ ಕ್ಷಮೆಯಾಚಿಸಿದ ಡಿಸಿಎಂ ಲಕ್ಷ್ಮಣ ಸವದಿ

    ಚಾಲಕ, ನಿರ್ವಾಹಕರಿಗೆ ಹಬ್ಬಕ್ಕೂ ಸಿಗ್ಲಿಲ್ಲ ಸಂಬಳ- ನೌಕರರ ಕ್ಷಮೆಯಾಚಿಸಿದ ಡಿಸಿಎಂ ಲಕ್ಷ್ಮಣ ಸವದಿ

    ಚಿತ್ರದುರ್ಗ: ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಾತಿಗೆ ಈಗ ಡಿಸಿಎಂ ಸವದಿ ದನಿಗೂಡಿಸಿದ್ದಾರೆ. ಬಿಎಂಟಿಸಿ, ಕೆಎಸ್‍ಆರ್ ಟಿಸಿಯ ಚಾಲಕ-ನಿರ್ವಾಹಕರಿಗೆ ಇನ್ನೂ ಸಂಬಳ ಆಗಿಲ್ಲ. ಕೇವಲ ಅಧಿಕಾರಿಗಳಿಗೆ ಮಾತ್ರ ಆಗಿದ್ದು, ಹಬ್ಬದಲ್ಲಿ ಬೋನಸ್, ಸ್ವೀಟ್ಸ್ ನಿರೀಕ್ಷೆಯಲ್ಲಿದ್ದ ಶ್ರಮಿಕ ವರ್ಗಕ್ಕೆ ಶಾಕ್ ಆಗಿದೆ.

    ಈ ಬಗ್ಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ್ ಸವದಿ ಅವರು, ಸಾರಿಗೆ ನೌಕರರ ಕ್ಷಮೆಯಾಚಿಸಿದರು. ಹಬ್ಬಕ್ಕೆ ಮುಂಚಿತವಾಗಿ ಸಂಬಳ ನೀಡಬೇಕಿತ್ತು. ಆದರೆ ಸಾರಿಗೆ ನಿಗಮದಲ್ಲಿ ಹಣದ ಕೊರತೆ ಇದ್ದು, ಅ.9ಕ್ಕೆ ಸಂಬಳ ಸಂದಾಯ ಮಾಡುತ್ತೇವೆ. ಹುಬ್ಬಳ್ಳಿ, ಕಲಬುರಗಿ ವಿಭಾಗದಲ್ಲಿ ಸಂಬಳ ತಡವಾಗಿದೆ. ಚಾಲಕ, ನಿರ್ವಾಹಕರು ಸಹಕಾರ ನೀಡಲು ಮನವಿ ಮಾಡುತ್ತೇನೆ ಎಂದರು.

    ಇದೇ ವೇಳೆ ಬಿಜೆಪಿ ನಾಯಕರ ಸಭೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಎಸ್‍ವೈ ಪ್ರಶ್ನಾತೀತ ನಾಯಕರಾಗಿದ್ದು, ಈಗಲೂ ಯಡಿಯೂರಪ್ಪ ನಮ್ಮ ನಾಯಕರು, ಮುಂದೆಯೂ ನಾಯಕರು. ಅವರ ಕೈ ಬಲಪಡಿಸುವ ಕಾರ್ಯ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಕೇಂದ್ರದಿಂದ ಹೆಚ್ಚಿನ ನೆರೆ ಪರಿಹಾರದ ಸಿಗುವ ವಿಶ್ವಾಸವಿದೆ ಎಂದರು.

  • 9 ರೂ.ಗಾಗಿ 15 ಲಕ್ಷ ಕಳೆದುಕೊಂಡ ಕಂಡಕ್ಟರ್

    9 ರೂ.ಗಾಗಿ 15 ಲಕ್ಷ ಕಳೆದುಕೊಂಡ ಕಂಡಕ್ಟರ್

    ಅಹಮದಾಬಾದ್: ಗುಜರಾತ್ ಸಾರಿಗೆ ಸಂಸ್ಥೆಯ ನಿರ್ವಾಹಕನೋರ್ವ 9 ರೂ. ಆಸೆಗಾಗಿ ಅಂದಾಜು 15 ಲಕ್ಷ ರೂ. ಕಳೆದುಕೊಂಡಿದ್ದಾನೆ. ಪ್ರಯಾಣಿಕನಿಂದ 9 ರೂ.ಪಡೆದು ಟಿಕೆಟ್ ನೀಡದ್ದಕ್ಕೆ ಆತನ ಸಂಬಳದಿಂದ 15 ಲಕ್ಷ ರೂ.ಗೆ ಕತ್ತರಿ ಹಾಕಲಾಗಿದೆ.

    ಏನಿದು ಪ್ರಕರಣ?
    ನಿರ್ವಾಹಕ ಚಂದ್ರಕಾಂತ್ ಪಟೇಲ್ ವಿರುದ್ಧ ಪ್ರಯಾಣಿಕರಿಗೆ ಟಿಕೆಟ್ ನೀಡದ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಗುಜರಾತಿನ ಸಾರಿಗೆ ಇಲಾಖೆ ವಿಶೇಷ ಸಮಿತಿಯನ್ನು ರಚಿಸಿತ್ತು. ಸುದೀರ್ಘ ವಿಚಾರಣೆ ನಡೆಸಿದ ಸಮಿತಿ ಚಂದ್ರಕಾಂತ್ ದೋಷಿ ಎಂದು ಹೇಳಿತ್ತು. ದೋಷಿ ಎಂದು ಸಾಬೀತಾದ ಬೆನ್ನಲ್ಲೇ ಸಾರಿಗೆ ನಿಗಮ ಮಂಡಳಿ ಆತನ ಸಂಬಳದ ಎರಡು ಏರಿಕೆಯನ್ನು ಕಡಿತಗೊಳಿಸಿತ್ತು. ಸಾರಿಗೆ ಸಂಸ್ಥೆ ನಿರ್ಧರಿಸುವ ಸಂಬಳಕ್ಕೆ ಚಂದ್ರಕಾಂತ್ ತನ್ನ ವೃತ್ತಿಯನ್ನು ಪೂರ್ಣಗೊಳಿಸಬೇಕೆಂದು ಆದೇಶಿಸಿತ್ತು.

    2003 ಜುಲೈ 5ರಂದು ಚಂದ್ರಕಾಂತ್ ಪಟೇಲ್ ಕಾರ್ಯನಿರ್ವಹಿಸುತ್ತಿದ್ದ ಬಸ್ ಮಾರ್ಗ ಮಧ್ಯೆ ಪರಿಶೀಲನೆಗೆ ಒಳಪಟ್ಟಿತ್ತು. ಓರ್ವ ಪ್ರಯಾಣಿಕನಿಂದ 9 ರೂ. ಪಡೆದಿದ್ದ ಚಂದ್ರಕಾಂತ್ ಪಟೇಲ್ ಟಿಕೆಟ್ ನೀಡಿರಲಿಲ್ಲ. ಚಂದ್ರಕಾಂತ್ ವಿರುದ್ಧ ಸಾರಿಗೆ ನಿಗಮದಲ್ಲಿ ಪ್ರಕರಣ ದಾಖಲಾಗಿತ್ತು.

    ಹೈಕೋರ್ಟ್ ಮೆಟ್ಟಿಲೇರಿದ ಚಂದ್ರಕಾಂತ್:
    ದೂರು ದಾಖಲಾದ ಒಂದು ತಿಂಗಳ ಬಳಿಕ ಚಂದ್ರಕಾಂತ್ ದೋಷಿ ಎಂದು ನಿಗಮ ಮಂಡಳಿ ಆದೇಶಿಸಿ ಆತನ ಸಂಬಳದ ಕೆಲ ಮೊತ್ತವನ್ನು ಕಡಿತಗೊಳಿಸಿತ್ತು. ಸಾರಿಗೆ ನಿಗಮದ ತೀರ್ಪು ಪ್ರಶ್ನಿಸಿ ಔದ್ಯೋಗಿಕ ನ್ಯಾಯಧೀಕರಣ ಮತ್ತು ಹೈ ಕೋರ್ಟ್ ಮೊರೆ ಹೋಗಿದ್ದ ಚಂದ್ರಕಾಂತ್ ಗೆ ಅಲ್ಲಿಯೂ ದೋಷಿ ಎಂದು ಪರಿಗಣಿಸಲಾಗಿತ್ತು. ಹಾಗೆ ಗುಜರಾತಿನ ಸಾರಿಗೆ ಸಂಸ್ಥೆಯ ತೀರ್ಪನ್ನು ಎತ್ತಿ ಹಿಡಿದು, ಚಂದ್ರಕಾಂತ್ ಸಲ್ಲಿಸಿದ ಎರಡೂ ಕಡೆ ಅರ್ಜಿ ವಜಾಗೊಂಡಿತ್ತು.

    ಈ ಕುರಿತು ಪ್ರತಿಕ್ರಿಯಿಸಿರುವ ಚಂದ್ರಕಾಂತ್ ಪರ ವಕೀಲರು, ಇಷ್ಟು ಚಿಕ್ಕ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆ. ಸಾರಿಗೆ ಸಂಸ್ಥೆ ನೀಡಿರುವ ಶಿಕ್ಷೆಯಿಂದ ನನ್ನ ಕಕ್ಷಿದಾರರ ವೃತ್ತಿ ಜೀವನದಲ್ಲಿ 15 ಲಕ್ಷ ರೂ. ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

    ನಿರ್ವಾಹಕ ಚಂದ್ರಕಾಂತ್ ಹಣದ ವಿಚಾರಕ್ಕೆ ಸಂಬಂಧಿಸಿದಂತೆ 35 ಪ್ರಕರಣಗಳನ್ನು ಎದುರಿಸಿದ್ದಾರೆ. ಹಲವು ಬಾರಿ ಸಾಮಾನ್ಯ ಶಿಕ್ಷೆ ಮತ್ತು ಸಣ್ಣ ಪ್ರಮಾಣದ ದಂಡವನ್ನು ವಿಧಿಸಲಾಗಿತ್ತು ಎಂದು ಸಾರಿಗೆ ಸಂಸ್ಥೆ ಪರ ವಕೀಲರು ಪ್ರತಿಕ್ರಿಯಿಸಿದ್ದಾರೆ.

  • ನಗರಸಭೆ ವಿರುದ್ಧ ಪೌರಕಾರ್ಮಿಕರಿಂದ ಅರೆಬೆತ್ತಲೆ ಪ್ರತಿಭಟನೆ

    ನಗರಸಭೆ ವಿರುದ್ಧ ಪೌರಕಾರ್ಮಿಕರಿಂದ ಅರೆಬೆತ್ತಲೆ ಪ್ರತಿಭಟನೆ

    ಗದಗ: ಸರಿಯಾಗಿ ಸಂಬಳ ನೀಡದ ಹಿನ್ನೆಲೆಯಲ್ಲಿ ವೇತನ ಜಾರಿಗಾಗಿ ಆಗ್ರಹಿಸಿ ಪೌರಕಾರ್ಮಿಕರು ಗದಗ-ಬೆಟಗೇರಿ ನಗರಸಭೆಯ ಮುಂಭಾಗ ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದಾರೆ.

    ನಗರಸಭೆಯ ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ 7 ತಿಂಗಳು ಹಾಗೂ ಖಾಯಂ ನೌಕರರಿಗೆ 3 ತಿಂಗಳಿಂದ ವೇತನ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವೇತನ ನೀಡುವಂತೆ ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

    ಸರಿಯಾದ ಸಂಬಳ ಸಿಗದ ಕಾರಣಕ್ಕೆ ತಮ್ಮ ಕುಟುಂಬಗಳು ನಿತ್ಯ ಊಟಕ್ಕೂ ಪರಿತಪಿಸುವಂತಾಗಿದೆ. ಆದರೆ ನಗರಸಭೆ ಅಧಿಕಾರಿಗಳಿಗೆ ಮಾತ್ರ ಕಾರ್ಮಿಕರ ಕಷ್ಟ ಕಾಣುತ್ತಿಲ್ಲ. ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪೌರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

    ನಗರಸಭೆ ಗೇಟ್ ಬಂದ್ ಮಾಡಿ ಕಚೇರಿ ಎದುರು ವಾಹನಗಳನ್ನು ಇಟ್ಟು ಕಾರ್ಮಿಕರು ಅರೆಬೆತ್ತಲೆ ಸ್ಥಿತಿಯಲ್ಲಿ ಪ್ರತಿಭಟನೆ ನಡೆಸಿದರು. ವೇತನ ನೀಡಿ, ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕೊಡಿ ಎಂದು ಆಗ್ರಹಿಸಿದರು. ಜೊತೆಗೆ ಕಷ್ಟ ಪಟ್ಟು ಮಾಡುವ ಕೆಲಸಕ್ಕೆ ನಮಗೆ ನೀಡಬೇಕಾದ ವೇತನ ಜಾರಿಗೊಳಿಸಲು ಅಧಿಕಾರಿಗಳು ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು.

  • ಸಂಬಳ ಕೇಳಿದ ಮಹಿಳೆಯನ್ನು ನಡುರಸ್ತೆಯಲ್ಲಿ ಕೂದಲು ಎಳೆದಾಡಿ ಹಲ್ಲೆ ನಡೆಸಿದ್ರು!

    ಸಂಬಳ ಕೇಳಿದ ಮಹಿಳೆಯನ್ನು ನಡುರಸ್ತೆಯಲ್ಲಿ ಕೂದಲು ಎಳೆದಾಡಿ ಹಲ್ಲೆ ನಡೆಸಿದ್ರು!

    ನವದೆಹಲಿ: ಸಂಬಳ ಕೇಳಿದ ಮಹಿಳೆಯ ಮೇಲೆ ಯುವಕರು ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಲ್ಲೆಗೊಳಗಾದ ಯುವತಿ ಗ್ರೇಟರ್ ನೋಯ್ಡಾದ ನಾಲೇಜ್ ಪಾರ್ಕ್ ಬಳಿಯ ಯುನಿಸೆಕ್ಸ್ ಸಲೂನ್ ನಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದರು.

    ಮೇ 12ರಂದು ಸಲೂನ್ ಮಾಲೀಕನ ಬಳಿ ಮಹಿಳೆ ಸಂಬಳ ಕೇಳಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ಮಾಲೀಕ ತನ್ನ ಯುವಕರೊಂದಿಗೆ ಸೇರಿ ಹಲ್ಲೆ ನಡೆಸಿದ್ದಾನೆ. ಮಹಿಳೆಯ ಕೂದಲು ಹಿಡಿದು ಯುವಕರು ದೊಣ್ಣೆಯಿಂದ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ಜನರು ಸಹಾಯಕ್ಕೆ ಮುಂದಾಗದೇ ಮೊಬೈಲ್ ನಲ್ಲಿ ವಿಡಿಯೋ ಸೆರೆಹಿಡಿದಿದ್ದಾರೆ.

    ಸಲೂನ್ ನಲ್ಲಿ ಮಹಿಳೆ ಧರಿಸಿದ್ದ ಟೀ ಶರ್ಟ್ ಎಳೆಯಲು ಪ್ರಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಯುವಕರು ಅತ್ಯಾಚಾರಕ್ಕೂ ಮುಂದಾಗಿದ್ದರು. ಕೊನೆಗೆ ಮಹಿಳೆ ಭಯಗೊಂಡು ಹೊರಗಡೆ ಬಂದಿದ್ದರಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸೋಮವಾರ ಮಹಿಳೆ ನಾಲೇಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಲಭ್ಯವಾಗಿದೆ. ಮಹಿಳೆ ನೀಡಿದ ದೂರು ಆಧರಿಸಿ ಸಲೂನ್ ಮಾಲೀಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿದ್ದ ಮೂವರು ನಾಪತ್ತೆಯಾಗಿದ್ದು, ಅವರನ್ನು ಸಹ ಶೀಘ್ರದಲ್ಲಿಯೇ ಬಂಧಿಸಲಿದ್ದೇವೆ ಎಂದು ಹಿರಿಯ ಪೊಲೀಸ್ ಆಧಿಕಾರಿ ತಿಳಿಸಿದ್ದಾರೆ.

  • ನನಗೆ ಈಗಲೂ ನನ್ನ ತಾಯಿ ಹಣ ನೀಡ್ತಾರೆ: ಮೋದಿ

    ನನಗೆ ಈಗಲೂ ನನ್ನ ತಾಯಿ ಹಣ ನೀಡ್ತಾರೆ: ಮೋದಿ

    ನವದೆಹಲಿ: ನನಗೆ ಈಗಲೂ ನನ್ನ ತಾಯಿಯೇ ಹಣ ನೀಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಟ ಅಕ್ಷಯ್ ಕುಮಾರ್ ಅವರು ನಡೆಸಿದ ಸಂದರ್ಶನದಲ್ಲಿ ಹೇಳಿದ್ದಾರೆ.

    ಸಂದರ್ಶನದಲ್ಲಿ ಅಕ್ಷಯ್ ಕುಮಾರ್ ಅವರು ನೀವು ನಿಮ್ಮ ಸಂಬಳದ ಹಣವನ್ನು ನಿಮ್ಮ ತಾಯಿಗೆ ನೀಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮೋದಿ ಅವರು ಈಗಲೂ ನನ್ನ ತಾಯಿ ನನಗೆ ಹಣ ನೀಡುತ್ತಾರೆ. ನಾನು ಅವರನ್ನು ಭೇಟಿ ಮಾಡಲು ಹೋದಾಗ ಅವರು ನನಗೆ ಹಣ ನೀಡುತ್ತಾರೆ ಎಂದರು.

    ನನ್ನ ತಾಯಿ ನನ್ನಿಂದ ಏನೂ ಬಯಸುವುದಿಲ್ಲ. ಅವರಿಗೆ ಆ ಅವಶ್ಯಕತೆ ಕೂಡ ಇಲ್ಲ. ನಾನು ಮುಖ್ಯಮಂತ್ರಿ ಆದಾಗಿನಿಂದ ನನ್ನ ಕುಟುಂಬದ ಖರ್ಚು ಸರ್ಕಾರದ ಮೇಲೆ ಇಲ್ಲ. ಬೇರೆ ಮುಖ್ಯಮಂತ್ರಿ ಕುಟುಂಬದವರಿಗೆ ಮೆಡಿಕಲ್ ಖರ್ಚು ಸಿಗುತ್ತದೆ. ಆದರೆ ನಮ್ಮ ಕುಟುಂಬದವರು ಇದನ್ನು ಯಾವುದು ತೆಗೆದುಕೊಂಡಿಲ್ಲ. ಹಾಗಂತ ನಾನು ನನ್ನ ಕುಟುಂಬವನ್ನು ನಿರ್ಲಕ್ಷಿಸಿ ಇಲ್ಲ. ನಾನು ಮುಖ್ಯಮಂತ್ರಿ ಆದ ದಿನದಿಂದ ನನ್ನ ದೇಶವನ್ನು ನಾನು ಕುಟುಂಬ ಎಂದುಕೊಂಡಿದ್ದೇನೆ ಎಂದು ಹೇಳಿದರು.

  • ಸಂಬಳ ನೀಡದ ಮಾಲೀಕನೇ ಕಿಡ್ನ್ಯಾಪ್

    ಸಂಬಳ ನೀಡದ ಮಾಲೀಕನೇ ಕಿಡ್ನ್ಯಾಪ್

    ಬೆಂಗಳೂರು: ಸಂಬಳ ನೀಡದ ಮಾಲೀಕನನ್ನು ಕಾರ್ಮಿಕರೇ ಕಿಡ್ನ್ಯಾಪ್ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬೆಂಗಳೂರಿನ ಹಲಸೂರಿನಲ್ಲಿ ಇನ್ಪೂಟಿಕ್ ಸಾಫ್ಟ್ ವೇರ್ ಕಂಪನಿ ಮಾಲೀಕ ಸುಜಯ್ ಎಂಬವರನ್ನು ಕಾರ್ಮಿಕರು ಅಪಹರಣ ಮಾಡಿದ್ದಾರೆ. ಮಾಲೀಕ ಸುಜಯ್ ಕಳೆದ ಮೂರು ತಿಂಗಳಿನಿಂದ ಕಾರ್ಮಿಕರಿಗೆ ಸಂಬಳ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾತನಾಡುವ ನೆಪದಲ್ಲಿ ಕಾರ್ಮಿಕರು ಕರೆಸಿ ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ಮದ್ದೂರಿನಲ್ಲಿ ತೋಟದ ಮನೆಯಲ್ಲಿ ಕೂಡಿ ಹಾಕಿದ್ದರು.

    ಈ ವೇಳೆ ಮಾಲೀಕ ಸುಜಯ್ ಕಾರ್ಮಿಕರಿಗೆ ಸಂಬಳ ನೀಡುವ ಭರವಸೆ ನೀಡಿದ್ದಾರೆ. ನಂತರ ನಾಲ್ವರು ಕಾರ್ಮಿಕರು ವಾಪಸ್ ಮನೆಗೆ ಬಿಟ್ಟಿದ್ದಾರೆ. ಆದರೆ ಮನೆಗೆ ಬಂದ ಕಂಪನಿ ಮಾಲೀಕ ಸುಜಯ್ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾಲೀಕ ಸುಜಯ್ ಆಸ್ಪತ್ರೆಯಿಂದಲೂ ನಾಪತ್ತೆಯಾಗಿದ್ದಾರೆ.

    ಮತ್ತೆ ಕಾರ್ಮಿಕರೇ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯಕ್ಕೆ ಈ ಕುರಿತು ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಂಜಯ್, ರಾಕೇಶ್, ನಿರಂಜನ್ ಮತ್ತು ದರ್ಶನ್ ಎಂದು ಗುರುತಿಸಲಾಗಿದೆ. ಆದರೆ ಆರೋಪಿಗಳ ಬಂಧನದ ನಂತರವೂ ಕಂಪನಿ ಮಾಲೀಕ ಸುಜಯ್ ಪತ್ತೆಯಾಗಲಿಲ್ಲ.

  • ಗಾಳಿ ಬೀಸೋದಕ್ಕೂ ಸರ್ಕಾರಿ ಸಂಬಳ..!

    ಗಾಳಿ ಬೀಸೋದಕ್ಕೂ ಸರ್ಕಾರಿ ಸಂಬಳ..!

    ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಕಂಟ್ರೋಲ್ ರೂಂ ಮೇಲ್ವಿಚಾರಕನ ದರ್ಬಾರ್ ಶುರುವಾಗಿದ್ದು, ಇವರಿಗೆ ಗಾಳಿ ಬೀಸೋದಕ್ಕೂ ಸರ್ಕಾರಿ ಸಂಬಳ ಕೊಡಬೇಕಾ ಅನ್ನೋ ಪ್ರಶ್ನೆಯೊಂದು ಎದ್ದಿದೆ.

    ಬೆಂಗಳೂರು ಮಹಾನಗರ ಪಾಲಿಕೆಯ ಕ್ಲಾಸ್ 4 ನೌಕರ ಸುಬ್ರಮಣ್ಯ ಅಂಧ ದರ್ಬಾರ್ ಮಾಡುತ್ತಿದ್ದು, ಇವರು ಬಿಬಿಎಂಪಿಯ ಕೊಠಡಿಯ ಕಂಟ್ರೋಲ್ ರೂಮಿನ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದಾರೆ. ಮರ ಕಡಿಯುವರು, ಪಾಲಿಕೆ ಕೆಳ ವರ್ಗದ ನೌಕರರನ್ನು ಈಗ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮೇಲ್ವಿಚಾರಕ ಗಾಳಿ ಬೀಸಿಕೊಳ್ಳುತ್ತಿರೋ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕಳೆದ 3- 4 ವರ್ಷಗಳಿಂದ ಕಂಟ್ರೋಲ್ ರೂಂ ಜೊತೆ ಎಲ್ಲ ಕಂಟ್ರೋಲ್ ಇರುವ ನೌಕರನಾಗಿದ್ದು, ಮಾತು ಶುರು ಮಾಡಿದರೆ ಸಾಕು ಕಮೀಷನರ್, ಮಿನಿಸ್ಟರ್ ಹೆಸರು ಹೇಳುತ್ತಾರೆ. ಇವರ ಅಡಿಯಲ್ಲಿ ಬರುವ ಕೆಳ ವರ್ಗದ ನೌಕರರನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

    ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮೇಲ್ವಿಚಾರಕ ಚೇರ್ ಮೇಲೆ ಕುಳಿತುಕೊಂಡು ಮೊಬೈಲ್ ಬಳಸುತ್ತಿದ್ದಾರೆ. ಆದರೆ ಅವರ ಪಕ್ಕದ ಎರಡನೇ ಚೇರ್ ಮೇಲೆ ಕೆಳ ನೌಕರ ಕುಳಿತುಕೊಂಡು ಅವರಿಗೆ ಗಾಳಿ ಬೀಸುತ್ತಿದ್ದಾರೆ. ಸರ್ಕಾರಿ ಸಂಬಳ ಕೊಡುವುದು ಕಚೇರಿಯ ಕೆಲಸವನ್ನು ಮಾಡುವುದಕ್ಕೆ, ಆದರೆ ಮೇಲ್ವಿಚಾರಕ ತನಗೆ ಗಾಳಿ ಬೀಸಿಕೊಳ್ಳುವ ಮೂಲಕ ಗಾಳಿ ಬೀಸುವುದಕ್ಕೂ ಸರ್ಕಾರಿ ಸಂಬಳ ಕೊಡಬೇಕಾ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಮೇಲ್ವಿಚಾರಕನು ಪಾಲಿಕೆ ವರ್ಗಾವಣೆ, ನೇಮಕಾತಿ, ವ್ಯಜ್ಯಗಳನ್ನ ಬರೀ ಅವಾಜ್ ಹಾಕುತ್ತಲೇ ಬಗೆಹರಿಸುವ ಮಾಸ್ಟರ್ ಎಂಬ ಮಾತು ಕೂಡ ಇದೆ. ಆದರೆ ಇವರು ಕೆಳವರ್ಗದ ಜನರಿಂದ ಗಾಳಿ ಬೀಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಜನಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv