ಯಲಹಂಕದಿಂದ (Yelahanka) ಶನಿವಾರ (ಆ.16) ಮುಂಜಾನೆ ಕಾರ್ಯಕರ್ತರು ಹೊರಡಲಿದ್ದಾರೆ. ನೂರಾರು ಜನ ಭಗವಾಧ್ವಜ ಹಿಡಿದು ಕೇಸರಿ ಶಾಲು ಧರಿಸಿ, ಧರ್ಮಸ್ಥಳಕ್ಕೆ ಹೊರಡಲಿದ್ದಾರೆ. ಪ್ರಯಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ ಸುಮಾರು 3 ಗಂಟೆಗೆ ವಿಶ್ವನಾಥ್ ತಂಡ ಧರ್ಮಸ್ಥಳ ತಲುಪಲಿದೆ. ದೇವರ ದರ್ಶನ ಪಡೆದು ಧರ್ಮಸ್ಥಳದಲ್ಲೇ ಶನಿವಾರ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಇದನ್ನೂ ಓದಿ: 13 ವರ್ಷದ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದ ನನ್ನ ತಂಗಿ ವಾಪಸ್ ಬರಲೇ ಇಲ್ಲ – ಎಸ್ಐಟಿಗೆ ದೂರು ನೀಡಿದ ಸಹೋದರ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಶಾಸಕರ ನಿಯೋಗವೂ ಭಾನುವಾರ (ಆ.17) ಧರ್ಮಸ್ಥಳ ಭೇಟಿ ಮಾಡಲಿದೆ. ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಬಿಜೆಪಿ ಶಾಸಕರು ನಿಯೋಗದಲ್ಲಿರಲಿದ್ದಾರೆ. ಬಿಜೆಪಿ ನಾಯಕರು ಧರ್ಮಾಧಿಕಾರಿಗಳನ್ನೂ ಭೇಟಿ ಮಾಡಿ ನೈತಿಕ ಬೆಂಬಲ ಸೂಚಿಸಲಿದ್ದಾರೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಧರ್ಮಸ್ಥಳ ದೇಗುಲದ ವಠಾರದಲ್ಲಿ ಸ್ಥಳ ಮಹಜರು
ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ (BJP) ಶಾಸಕರಿಗೆ ಸರಿಯಾಗಿ ಅನುದಾನ ಸಿಗುತ್ತಿಲ್ಲ ಎಂದು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ (S.R Vishwanath) ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಬಿಎಂಪಿಯಿಂದಲೂ ನಯಾ ಪೈಸೆ ಸಿಗುತ್ತಿಲ್ಲ. ಅಭಿವೃದ್ಧಿಗೂ ಹಣ ಬಿಡುಗಡೆ ಮಾಡಿಲ್ಲ. ಕೆರೆ, ಪಾರ್ಕ್ ಯಾವುದಕ್ಕೂ ದುಡ್ಡು ಕೊಟ್ಟಿಲ್ಲ. ಬ್ರ್ಯಾಂಡ್ ಬೆಂಗಳೂರು ಹೆಸರು ಮಾತ್ರ ಉಳಿದುಕೊಂಡಿದೆ. ಬೊಮ್ಮಾಯಿ ಸಿಎಂ ಆಗಿದ್ದಾಗ ಶಾಸಕರಿಗೆ ಅನುದಾನ ಕೊಟ್ಟಿದ್ದರು. ಈ ಸರ್ಕಾರದಲ್ಲಿ ಅನುದಾನ ಸಿಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಇವತ್ತು (ಜು.27) ಡಿಸಿಎಂ ಸಭೆ ಕರೆದಿದ್ದಾರೆ. ಸಭೆಯಲ್ಲಿ ಅನುದಾನ ತಾರತಮ್ಯ ಮಾಡಬಾರದು ಎಂದು ಹೇಳುತ್ತೇವೆ. ಜನರು ಕೂಡಾ ನಮಗೆ ಶಾಪ ಹಾಕ್ತಿದ್ದಾರೆ. ಹೂಡಿಕೆದಾರರು ಯಾರು ಬರುತ್ತಿಲ್ಲ. ಕಾಂಗ್ರೆಸ್ ಅವರು ಬೇಕಾದ್ರೆ 100 ಕೋಟಿ ರೂ. ತೆಗೆದುಕೊಳ್ಳಲಿ. ನಮಗೆ 25 ಕೋಟಿ ಆದರೂ ನೀಡಲಿ. ಅನುದಾನದಲ್ಲಿ ತಾರತಮ್ಯ ಮಾಡೋದು ಬೇಡ ಎಂದು ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (Bengaluru) 5 ವಿಭಜನೆಗೆ ವಿರೋಧ ವ್ಯಕ್ತಪಡಿಸಿದ ಅವರು, ಬಿಬಿಎಂಪಿ ವಿಭಜನೆಗೆ ನಮ್ಮ ವಿರೋಧ ಇದೆ. 198 ವಾರ್ಡ್ ಇದ್ದಾಗಲೇ ಸರಿಯಾದ ಮೂಲಭೂತ ಸೌಕರ್ಯಗಳು ಕೊಡಲು ಆಗಿಲ್ಲ. ಈಗ ಮತ್ತೆ ವಿಸ್ತರಣೆ ಮಾಡಿದರೆ ಮೂಲಭೂತ ಸೌಕರ್ಯಗಳ ಕೊಡೋದು ಕಷ್ಟವಾಗುತ್ತದೆ. 5 ಮೇಯರ್, ಸಾವಿರ ಜನ ಕಾರ್ಪೊರೇಟರ್ಗಳು ಇದ್ದು ಆಡಳಿತ ನಡೆಸೋದು ಕಷ್ಟ ಆಗುತ್ತದೆ. 5 ಮೇಯರ್ ಮಾಡಿದ್ರೆ ಒಬ್ಬರು, ಒಬ್ಬರು ಬೇರೆ ಪಕ್ಷದವವರು ಮೇಯರ್ ಆದ್ರೆ ಹಗ್ಗ ಜಗ್ಗಾಟ ಆಗುತ್ತದೆ. ವಲಯ ಆಯುಕ್ತರಿಗೆ ಅಧಿಕಾರ ಕೊಡಲಿ ಅದಕ್ಕೆ ನಮ್ಮ ವಿರೋಧ ಇಲ್ಲ. ಸರ್ಕಾರ ಇದನ್ನ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ಬೇಡ. ಸರ್ಕಾರ ಸದನ ಸಮಿತಿ ರಚನೆ ಮಾಡುವುದಾಗಿ ಹೇಳಿದೆ. ನಾವು ನಮ್ಮ ಅಭಿಪ್ರಾಯ ಹೇಳುತ್ತೇವೆ ಎಂದಿದ್ದಾರೆ.
-ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ರಾಜ್ಯದಲ್ಲಿ ಬರಗಾಲ ಗ್ಯಾರಂಟಿ
ಚಿಕ್ಕಬಳ್ಳಾಪುರ: ಬೇಸಿಗೆಗೂ ಮುನ್ನವೇ ರಾಜ್ಯ ರಾಜಧಾನಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಹಾಗೂ ಹಲವು ಕಡೆ ಜನರ ಪ್ರತಿಭಟನೆ ವಿಚಾರವಾಗಿ ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ (S.R.Vishwanath) ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮದಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಶಾಸಕ ವಿಶ್ವನಾಥ್, ಬ್ರ್ಯಾಂಡ್ ಬೆಂಗಳೂರು ಅಂತ ಬೆಂಗಳೂರಿಗೆ ನಿಮ್ಮ ಸುರಂಗನೂ ಬೇಡ, ಫ್ಲೈಓವರ್ ಬೇಡ. ಮೊದಲು ಜನರಿಗೆ ಕುಡಿಯುವ ನೀರು ಕೊಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: 3 ವರ್ಷಗಳಿಂದ ವರ್ಗಾವಣೆಯಾಗಿಲ್ಲ; ಪೊಲೀಸರಿಂದಲೇ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ!
ಯಲಹಂಕ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅನುದಾನ ಕೇಳಿದ್ರೆ 25 ಲಕ್ಷ ರೂ. ಕೊಟ್ಟಿದ್ದಾರೆ. 210 ಹಳ್ಳಿಗಳಿವೆ. ಎಷ್ಟು ಕೊಳವೆಬಾವಿ ಕೊರಸೋಕೆ ಆಗುತ್ತೆ? ಈ ಸರ್ಕಾರ ಜನರಿಗೆ ಕುಡಿಯುವ ನೀರು ಕೊಡುವ ಕೆಲಸ ಮಾಡಬೇಕು. ಕಾವೇರಿಯಲ್ಲಿ ನೀರಿಲ್ಲ, ಹೀಗೆ ಆದ್ರೆ ನಾವೆಲ್ಲಾ ಸಾಯಬೇಕಾಗುತ್ತೆ. ಮೊದಲು ಕುಡಿಯುವ ನೀರು ಕೊಡಿ ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ವಿಶ್ವವಿಖ್ಯಾತ ಕರಗ ಮಂಟಪವನ್ನು ಬಿಡಿಎ 6 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಿದೆ ಎಂದು ಬಿಡಿಎ ಅಧ್ಯಕ್ಷ ಮತ್ತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ (S.R Vishwanath) ತಿಳಿಸಿದ್ದಾರೆ.
ಹೆಸರಘಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಗಳ ಸಮುದಾಯದ ವತಿಯಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಿಗಳ ಸಮುದಾಯದವರು ಬೆಂಗಳೂರು ಐತಿಹಾಸಿಕ ಕರಗದ ರುವಾರಿಗಳು. ಕ್ಷತ್ರಿಯ ಪರಂಪರೆಯಂತೆಯೇ ತಿಗಳ ಜನಾಂಗ ಕೊಟ್ಟ ಮಾತಿಗೆ ತಪ್ಪುವವರಲ್ಲ. ವ್ಯವಸಾಯ ಮತ್ತು ವ್ಯವಸಾಯೇತರ ಉಪಕಸುಬುಗಳ ಮೂಲಕ ಬದುಕು ಕಟ್ಟಿಕೊಂಡಿರುವ ಕಷ್ಟಜೀವಿಗಳು. ಭಾರತೀಯ ರಾಜ ಮಹಾರಾಜರ ಕಾಲದಲ್ಲಿ ಸೈನ್ಯದಲ್ಲಿ ತಿಗಳ ಸಮುದಾಯ ಮತ್ತು ಬೇಡ ಸಮುದಾಯದ ವಿಶೇಷ ಸೇನಾ ಪಡೆಗಳಿದ್ದು, ಇವರ ಸೇನಾ ಪಡೆಗಳಿಗೆ ವಿಶೇಷ ಪ್ರಾಶಸ್ತ್ಯವಿತ್ತು. ಏಕೆಂದರೆ ಈ ಜನಾಂಗದವರು ಮುಂದಿಟ್ಟ ಹೆಜ್ಜೆ ಇಂದಿಡುವ ಜಾಯಮಾನದವರಲ್ಲ ಎಂಬ ಪ್ರತೀತಿ ಆದಿಕಾಲದಿಂದಲೂ ಇದ್ದು, ಅಚಲವಾದ ಎದೆಗಾರಿಕೆ ಹೊಂದಿರುವ ಸಮುದಾಯವೆಂದು ಖ್ಯಾತಿ ಪಡೆದಿದೆ ಎಂದು ಜನಾಂಗದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಾಸನ ಟಿಕೆಟ್ ಫೈಟ್ಗೆ ಮೂರನೇ ವ್ಯಕ್ತಿ ಎಂಟ್ರಿ- ರಾಜೇಗೌಡ ಪರ ರೇವಣ್ಣ ಫ್ಯಾಮಿಲಿ ಬ್ಯಾಟಿಂಗ್
ತಿಗಳ ಸಮುದಾಯದ ಏಳಿಗೆಗಾಗಿ ಅವರ ಮನವಿಯಂತೆ ಯಲಹಂಕ (Yalahanka) ದಲ್ಲಿ 4 ಕೋಟಿ ರೂ.ವೆಚ್ಚದಲ್ಲಿ ಕರಗ ಮಂಟಪ ನಿರ್ಮಿಸಿ ಕೊಡುವುದರ ಜೊತೆಗೆ ಕಲ್ಯಾಣಿ ಅಭಿವೃದ್ಧಿ ಪಡಿಸಿಕೊಟ್ಟಿದ್ದೇನೆ. ಬೆಂಗಳೂರು ಕರಗ ಮಂಟಪದ ಅಭಿವೃದ್ಧಿಗೂ ಸಹ ಬಿಡಿಎದಿಂದ 6 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಯಲಹಂಕ ಕ್ಷೇತ್ರದಲ್ಲಿ ಎಲ್ಲಾ ಜನಾಂಗದವರಿಗೂ ಸಮುದಾಯ ಭವನ ನಿರ್ಮಿಸಿ ಕೊಟ್ಟಿರುವಂತೆಯೇ ತಿಗಳ ಜನಾಂಗಕ್ಕೂ ಸಹ ಸಮುದಾಯ ಭವನ ನಿರ್ಮಾಣ ಮಾಡಿಕೊಡುವುದರ ಜೊತೆಗೆ ಹೆಚ್ಚುವರಿ ಇನ್ನೊಂದು ಎಕರೆ ಜಮೀನು ನೀಡಿ ಅದರಲ್ಲಿ ತಿಗಳ ಸಮುದಾಯದ ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು. ತಿಗಳ ಸಮುದಾಯದ ಮುಖಂಡರು, ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿದ್ದರು.
ಬೆಂಗಳೂರು: ದೊಡ್ಡಬೆಟ್ಟಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರಾಶ್ರಿತರ ಕೇಂದ್ರವನ್ನಾಗಿ ಪರಿವರ್ತಿಸುತ್ತಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನಡೆಗೆ ಆಮ್ ಆದ್ಮಿ ಪಾರ್ಟಿ (AAP) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬೆಂಗಳೂರು ಎಎಪಿ ಉಪಾಧ್ಯಕ್ಷರಾದ ಬಿ.ಟಿ.ನಾಗಣ್ಣ, ಯಲಹಂಕ ವಿಧಾನಸಭಾ ಕ್ಷೇತ್ರದ ದೊಡ್ಡಬೆಟ್ಟಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವು ಮೂರೂವರೆ ವರ್ಷಗಳಿಂದ ಮುಚ್ಚಲ್ಪಟ್ಟಿತ್ತು. ಸ್ಥಳೀಯರ ಅಪೇಕ್ಷೆಯಂತೆ ಆಮ್ ಆದ್ಮಿ ಪಾರ್ಟಿಯು ಇದನ್ನು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದು, ಆರೋಗ್ಯ ಕೇಂದ್ರವನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿತ್ತು. ಪಾಳು ಬಿದ್ದಿದ್ದ ಕಟ್ಟಡವನ್ನು ಸ್ವಚ್ಛಗೊಳಿಸಿ ಕೊಟ್ಟಿದ್ದೆವು. ಆದರೆ ಈಗ ಆರೋಗ್ಯ ಕೇಂದ್ರವನ್ನು ತೆರೆಯುವ ಬದಲು ಅದನ್ನು ನಿರಾಶ್ರಿತರ ಕೇಂದ್ರವನ್ನಾಗಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಳಗ್ಗೆ 3-4 ಗಂಟೆಯವರೆಗೆ ನನ್ನ ಮಕ್ಕಳ ಹೋಮ್ ವರ್ಕ್ ಮಾಡಿಸುತ್ತಿದ್ದೆ: ಪ್ರಿಯಾಂಕಾ ಗಾಂಧಿ
ಶಾಸಕ ಎಸ್.ಆರ್.ವಿಶ್ವನಾಥ್ರವರು ಈ ವಿಚಾರವನ್ನು ರಾಜಕೀಯ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಆರೋಗ್ಯ ಕೇಂದ್ರ ಪುನರಾರಂಭಿಸಿದರೆ ಆಮ್ ಆದ್ಮಿ ಪಾರ್ಟಿಯ ಆಗ್ರಹಕ್ಕೆ ಮನ್ನಣೆ ಸಿಕ್ಕಂತಾಗುತ್ತದೆ ಎಂಬ ಒಂದೇ ಒಂದು ಕಾರಣಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಅವರ ಕೀಳುಮಟ್ಟದ ರಾಜಕೀಯದಿಂದಾಗಿ ದೊಡ್ಡಬೆಟ್ಟಹಳ್ಳಿ ಹಾಗೂ ಸುತ್ತಮುತ್ತಲಿನ ಜನರು ಆರೋಗ್ಯ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಕೋವಿಡ್ ಆತಂಕದ ಸಂದರ್ಭದಲ್ಲೂ ರೋಗಿಗಳು ನೂರು ರೂಪಾಯಿಗೂ ಹೆಚ್ಚು ಖರ್ಚು ಮಾಡಿಕೊಂಡು ದೂರದ ಆಸ್ಪತ್ರೆಗಳಿಗೆ ಪ್ರಯಾಣಿಸಬೇಕಾಗಿದೆ ಎಂದು ಬಿ.ಟಿ.ನಾಗಣ್ಣ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಕ್ರಮವಾಗಿ ಒತ್ತುವರಿಯಾಗಿದ್ದ ಜಾಗ ಶಾಲೆಗೆ ವಾಪಸ್ – ತಹಶೀಲ್ದಾರ್ಗೆ ಗ್ರಾಮಸ್ಥರಿಂದ ಅಭಿನಂದನೆ
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸುಹಾಸಿನಿ ಫಣಿರಾಜ್ ಮಾತನಾಡಿ, ಸ್ಥಳೀಯ ಶಾಸಕರನ್ನು ಎದುರುಹಾಕಿಕೊಂಡು ಆರೋಗ್ಯ ಕೇಂದ್ರ ಮುಂದುವರಿಸಲು ಸಾಧ್ಯವಿಲ್ಲವೆಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ. ಶಾಸಕರಿಗೆ ಹೆದರಿ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಸ್ಥಿತಿಯಲ್ಲಿ ಅಧಿಕಾರಿಗಳಿರುವುದು ನಿಜಕ್ಕೂ ದುರಂತ. ಬಡ ಹಾಗೂ ಮಧ್ಯಮ ವರ್ಗದ ಜನರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದ ರಾಜಕಾರಣಿ ಎಂದರೆ ಅದು ಎಸ್.ಆರ್.ವಿಶ್ವನಾಥ್. ಸುಮಾರು 4 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಆರೋಗ್ಯ ಕೇಂದ್ರದಿಂದ ಜನರಿಗೆ ಯಾವುದೇ ಲಾಭ ಸಿಗದಂತೆ ಮಾಡುತ್ತಿದ್ದಾರೆ. ಬಿಡಿಎಯಲ್ಲಿ ಭ್ರಷ್ಟಾಚಾರ ಮಾಡುವುದಕ್ಕಷ್ಟೇ ಅವರು ಯೋಗ್ಯರು. ಇದನ್ನು ಆರೋಗ್ಯ ಕೇಂದ್ರವನ್ನಾಗಿಯೇ ಮುಂದುವರಿಸಿ, ನಿರಾಶ್ರಿತರ ಕೇಂದ್ರವನ್ನು ಬೇರೆಡೆ ತೆರೆಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: UP Election- 30 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
ಯಲಹಂಕ ವಿಧಾನಸಭಾ ಕ್ಷೇತ್ರದ ಎಎಪಿ ಮುಖಂಡರಾದ ನಿತಿನ್ ರೆಡ್ಡಿ ಹಾಗೂ ಸ್ಥಳೀಯ ನಾಯಕರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಬೆಂಗಳೂರು: ಪೊಲೀಸರಿಗೆ ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ ಎಂದು ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.
ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆಗೆ ಸುಪಾರಿ ಪ್ರಕರಣ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ನಡೆದ ವಿಚಾರಣೆಗೆ ಹಾಜರಾಗಿದ್ದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸಾಕ್ಷಿದಾರರ ಮುಂದೆ ಪೊಲೀಸರು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಚಾರವಾಗಿ ಸರಿಯಾದ ದಿಕ್ಕಿನಲ್ಲಿ ತನಿಖೆಯಾಗಬೇಕೆಂದು ಹೇಳಿದ್ದೇನೆ.
ಪೆನ್ ಡ್ರೈವ್ ನೋಡಿದಾಗ ಏನೇನೋ ವ್ಯವಹಾರ ಇತ್ತು. ಹೀಗಾಗಿ ರಾತ್ರಿಯೆಲ್ಲಾ ಕುಳಿತುಕೊಂಡು ಸುಪಾರಿ ವಿಚಾರದ ಮಾತುಕತೆಯನ್ನು ಮಾತ್ರ ಎಡಿಟ್ ಮಾಡಿ ಎಲ್ಲಾ ಕಡೆ ಕೊಟ್ಟಿದ್ದೇವು. ಇದೀಗ ರಾ ವೀಡಿಯೋ ಫೂಟೇಜ್ ಅನ್ನು ಪೊಲೀಸರಿಗೆ ನೀಡಲಾಗಿದೆ. ಕುಳ್ಳ ದೇವರಾಜ್ ಕ್ಷಮಾಪಣೆ ಕೇಳೀದ ಪೆನ್ ಡ್ರೈವ್ ಸಹ ನೀಡಿದ್ದೇನೆ. ಮುಂದೆ ವಿಚಾರಣೆಗೆ ಕರೆದಾಗ ಬರಬೇಕೆಂದು ಸೂಚಿಸಿದ್ದಾರೆ. ಮತ್ತೆ ವಿಚಾರಣೆ ಕರೆದರೆ ಬಂದು ಸಹಕಾರ ನೀಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ಸೇವೆಯನ್ನು ಸಹಿಸಲಾಗದೆ ಕೊಲೆಗೆ ಸಂಚು: ಎಸ್.ಆರ್ ವಿಶ್ವನಾಥ್
ಅವನೇ ಸುಳ್ಳು, ಮಾತಾಡುವುದರಲ್ಲಿ ನಿಸ್ಸೀಮ. ಬಹಳ ದಿನದಿಂದ ಇದೆಲ್ಲಾ ನಡೀತಿದೆ. ನಾನು ಕೂಡಾ ಅಸಡ್ಡೆ ಮಾಡಿದೆ ಅನಿಸುತ್ತದೆ. ಆಡಿಯೋ ಕೇಳಿದ ಮೇಲೆಯೇ ಗೊತ್ತಾಗಿದ್ದು, ಏನೂ ಗೊತ್ತಿಲ್ಲದೇ ದೂರು ಕೊಡಲು ಸಾಧ್ಯವಿಲ್ಲ. ಮೊನ್ನೆ ರಾತ್ರಿ ವಿಡಿಯೋ ಸಿಕ್ಕಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಕುರಿತಂತೆ ಚರ್ಚೆ ಮಾಡೋಣ ಎಂದು ಸಿಎಂ ಕೂಡಾ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿ ತೀರ್ಮಾನಕ್ಕೆ ಬದ್ಧ: ಎಸ್.ಆರ್ ವಿಶ್ವನಾಥ್
ಬೆಂಗಳೂರು: ಹಲವು ಕೇಸ್ಗಳಲ್ಲಿ ನನ್ನ ವಿರುದ್ಧ ಮೊದಲಿಂದಲೂ ಹುನ್ನಾರ ನಡೆಯತಿತ್ತು. ಎಲ್ಲ ಕೇಸ್ ಗಳಿಂದಲೂ ಹೊರಗೆ ಬಂದಿದ್ದೇನೆ. ರಾಜಕೀಯ ಜಿದ್ದಾಜಿದ್ದಿಗೆ ಇವೆಲ್ಲ ಮಾಡಿದ್ದಾರೆ. ಶಾಸಕರ ಕೊಲೆಗೆ ಸುಪಾರಿ ವಿಷಯದಿಂದ ಕ್ಷೇತ್ರದ ಜನ ದಿಗ್ಬ್ರಾಂತರಾಗಿದ್ದಾರೆ. ನನ್ನ ಸೇವೆಯನ್ನು ಸಹಿಸಲಾಗದೆ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಆರೋಪಿಸಿದ್ದಾರೆ.
ಕೊಲೆಗೆ ಸ್ಕೆಚ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಎಸ್.ಆರ್ ವಿಶ್ವನಾಥ್, ರಾಜ್ಯದಲ್ಲಿ ಇಂತಹ ಇತಿಹಾಸ ಇಲ್ಲಿಯವರೆಗೆ ಇರಲಿಲ್ಲ. ಗೋಪಾಲಕೃಷ್ಣಗೆ ಇಂತಹ ದುರ್ಬುದ್ಧಿ ಯಾಕೆ ಬಂತೋ ಗೊತ್ತಿಲ್ಲ. ಆತ ಚುನಾವಣೆಯಲ್ಲಿ ನನ್ನ ವಿರುದ್ಧ ಸೋತಿದ್ದವನು. ಹೀಗಾದರೆ ಗೆದ್ದವರನೆಲ್ಲಾ ಕೊಲೆ ಮಾಡಕ್ಕಾಗುತ್ತಾ? 42 ವರ್ಷದಿಂದ ಸಾರ್ವಜನಿಕ ಬದುಕಿನಲ್ಲಿ ಇದ್ದೇನೆ ಮೂರು ಬಾರಿ ಶಾಸಕನಾಗಿದ್ದೇನೆ. ಸುದೀರ್ಘ ರಾಜಕೀಯ ಅವಧಿಯಲ್ಲಿ ಇಂಥ ಘಟನೆ ನಡೆದಿಲ್ಲ. ಸಜ್ಜನಿಕೆಯಿಂದ ಕ್ಷೇತ್ರದಲ್ಲಿ ರಾಜಕಾರಣ ಮಾಡುತ್ತಿದ್ದೇನೆ. ಕಳೆದೆರಡು ಸಲ ನನ್ನ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ನ ಗೋಪಾಲಕೃಷ್ಣ ಮೂರನೇ ಬಾರಿ ಅವರು ಸೋತಿದ್ದರು. ನಿನ್ನೆ ಸಂಜೆ 7:30ಕ್ಕೆ ನನಗೊಂದು ಪತ್ರ ತಲುಪಿತ್ತು. ಕುಳ್ಳ ದೇವರಾಜ್ ಕ್ಷಮಾಪಣೆ ಪತ್ರಬರೆದಿದ್ದರು. ಗೋಪಾಲಕೃಷ್ಣ ಕೊಲೆಗೆ ಸಂಚು ಮಾಡುತ್ತಿದ್ದಾರೆ ಎಂಬ ಬಗ್ಗೆ ಪತ್ರದಲ್ಲಿ ಉಲ್ಲೇಖವಾಗಿತ್ತು. ನಾನು ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಮಾಧ್ಯಮಗಳಲ್ಲಿ, ನಿಜವಾದ ವೀಡಿಯೋ ನೋಡಿದ ನಂತರ ದಿಗ್ಭ್ರಮೆ ಆಯಿತು. ಈಗ ದೂರು ಕೊಟ್ಟಿದ್ದೇನೆ. ಸಿಎಂ ಜೊತೆಗೂ ಮಾತಾಡಿದ್ದೇನೆ ಉನ್ನತ ತನಿಖೆ ಮಾಡಲು ಮನವಿ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್ – ಸುಪಾರಿ ಕೊಡ್ತಿರೋ ವೀಡಿಯೋ, ಆಡಿಯೋ ವೈರಲ್
ಸಾಮಾನ್ಯ ಶಾಸಕನಿಗೆ ಕೊಲೆ ಮಾಡುವ ಚಿಂತನೆ ಸರಿಯಲ್ಲ. ಚುನಾವಣೆಯಲ್ಲಿ ಸೋಲಿಸಲು ಕಷ್ಟ ಅಂತ ಸಂಭಾಷಣೆ ಆರಂಭವಾಗಿದೆ. ಮುಗಿಸಬೇಕು ಎಂದು ಮಾತನಾಡಿದ್ದಾರೆ. ಆಂಧ್ರದಿಂದ ಹಂತಕರನ್ನು ಕರೆಸುವ ಬಗ್ಗೆ ಮಾತನಾಡಿದ್ದಾರೆ. ಶ್ರೈಯಸ್ ಹೊಟೇಲ್ ನಲ್ಲಿ ಕಿಲ್ಲರ್ಸ್ ಕರೆ ತಂದು ಇಟ್ಟಿರುವ ಬಗ್ಗೆ ಮಾತನಾಡಿದ್ದಾರೆ. ಕಡಪ್ಪಾದಿಂದಲೂ ಕಿಲ್ಲರ್ಸ್ ಕರೆಸುವ ಕುರಿತು ಸಮಾಲೋಚನೆ ನಡೆದಿದೆ. ಕಾಂಗ್ರೆಸ್ ಅವಧಿಯಲ್ಲೂ ನನ್ನ ಮೇಲೆ ಶೂಟ್ಔಟ್ ಯತ್ನ ನಡೆದಿತ್ತು ಎಂದಿದ್ದಾರೆ. ಇದನ್ನೂ ಓದಿ: ಮಗಳು, ಇಬ್ಬರು ಪತ್ನಿಯರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ಕೆಜಿಎಫ್ ಬಾಬು
ನಾನು ಜನಪರ ಕೆಲಸ ಮಾಡಿಕೊಂಡು ಬಂದಿದ್ದೇನೆ. ಜನ ಸದಾ ನಮ್ಮ ಮನೆ ಬಳಿ ಇರ್ತಾರೆ. ನಾನು ಗನ್ ಮ್ಯಾನ್, ಡ್ರೈವರ್ ಜೊತೆ ಇರುತ್ತೇನೆ. ಯಾವಾಗ ಬೇಕಾದ್ರೂ ಅವರು ನನಗೆ ಹೊಡೆಯಬಹುದು. ನಾನು ಎಲ್ಲ ರೀತಿಯಲ್ಲೂ ತನಿಖೆಗೆ ಸಹಕಾರ ಕೊಡುತ್ತೇನೆ. ವಿಪಕ್ಷದವರೂ ತನಿಖೆಗೆ ಸಹಕರಿಸಲಿ. ನಿಧಾನ ಆದರೂ ಸಮಗ್ರ ತನಿಖೆ ಆಗಲಿ. ಇದರ ಹಿಂದೆ ಯಾರ್ಯಾರಿದ್ದಾರೆ ಎಂಬುದು ಗೊತ್ತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕುಳ್ಳ ದೇವರಾಜ್ ಗೊತ್ತು. ಆದರೆ ಆತ ನನ್ನ ಪಕ್ಷದ ಕಾರ್ಯಕರ್ತ ಅಲ್ಲ. ಆತನ ಸಂಪರ್ಕ ಇಲ್ಲ, ಫೋನ್ ನಂಬರ್ ಸಹ ಇಲ್ಲ. ಆರು ತಿಂಗಳ ಹಿಂದೆ ಸಂಚು ನಡೆದಿರುವ ಬಗ್ಗೆ ಗೊತ್ತಿಲ್ಲ. ನನಗೆ ವೀಡಿಯೋ ಕುಳ್ಳ ದೇವರಾಜ್ ಕಳುಹಿಸಿದ್ದು, ನನಗೆ ನಿನ್ನೆ ಸಂಜೆ ಗ್ರೀನ್ ಕವರ್ ನಲ್ಲಿ ವೀಡಿಯೋ ಬಂದಿತ್ತು. ಕ್ಷಮಾಪಣೆ ಪತ್ರವೂ ಅದರ ಜೊತೆಗೆ ಇತ್ತು. ಕುಳ್ಳದೇವರಾಜ್, ಗೋಪಾಲಕೃಷ್ಣನ ಪರಮ ಶಿಷ್ಯ. ಕುಳ್ಳ ದೇವರಾಜ್ ವೀಡಿಯೋ ಮಾಡಲು ಹೋದಾಗ ಗೋಪಾಲಕೃಷ್ಣ ಮಣ್ಣು ತಿಂತಿದ್ನಾ? ಪದೇ ಪದೇ ಕೊಲೆ ಸಂಚು ಬಗ್ಗೆ ಮಾತನಾಡುತ್ತಿದ್ದ ಗೋಪಾಲಕೃಷ್ಣ ನನ್ನ ಚಲನವಲನ ಎಲ್ಲ ಗಮನಿಸಿದ್ದ ಅನಿಸುತ್ತದೆ ಎಂದು ಸಂಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ನಮ್ಮ ಮನೆಯಲ್ಲಿ ಅಲ್ಲಾ,ಏಸು ಫೋಟೋ ಇಟ್ಟಿಲ್ಲ- ಸತೀಶ್ ಸೈಲ್
ನಿನ್ನೆ ಗೋಪಾಲಕೃಷ್ಣರನ್ನು ಪೊಲೀಸರು ವಿಚಾರಣೆಗೆ ಕರೆದುಕೊಂಡು ಬಂದಿದ್ರು. ಯಾರೋ ಹಿರಿಯ ರಾಜಕಾರಣಿಯೊಬ್ಬರು ಪೊಲೀಸರಿಗೆ ಧಮ್ಕಿ ಹಾಕಿದ್ದರಂತೆ. ಅದಕ್ಕೆ ಪೊಲೀಸರು ಗೋಪಾಲಕೃಷ್ಣನನ್ನು ಬಿಟ್ಟು ಕಳುಹಿಸಿದ್ದಾರೆ. ನಾನು ಗೋಪಾಲಕೃಷ್ಣನನ್ನು ಬಂಧನ ಮಾಡಲಿ ಅಂತ ಆಗ್ರಹಿಸಲ್ಲ ವಿಚಾರಣೆ ಮಾಡಲಿ, ಸತ್ಯ ಹೊರಗೆ ತರಲಿ. ಕಾಂಗ್ರೆಸ್ ಸರ್ಕಾರ ಇದ್ದಾಗ ನನ್ ವಿರುದ್ಧ ದುರುದ್ದೇಶದ ಕೇಸ್ ಹಾಕಿದ್ರು. ನಾನು ದ್ವೇಷದ ರಾಜಕಾರಣ ಮಾಡಲು ಹೋಗಿಲ್ಲ ಎಂದರು.
ಕಡಬಗೆರೆ ಸೀನನ ಕೊಲೆ ಯತ್ನ ಪ್ರಕರಣ ಸಹ ರೀ ಓಪನ್ ಮಾಡಬೇಕು. ಸಮಗ್ರ ತನಿಖೆ ಮಾಡಬೇಕಾದರೆ ಸೀನನ ಕೊಲೆ ಯತ್ನ ಪ್ರಕರಣವೂ ರೀ ಓಪನ್ ಆಗಲಿ ಎಂದು ಒತ್ತಾಯಿಸಿದರು.
ಬೆಂಗಳೂರು: ಉದ್ದೇಶಿತ ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿರುವ ರೈತರಿಗೆ ಪರಿಹಾರ ನೀಡಿದ ನಂತರವೇ ಸಾರ್ವಜನಿಕರಿಗೆ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ತಿಳಿಸಿದ್ದಾರೆ.
ಬ್ಯಾಟರಾಯನಪುರದಲ್ಲಿ ತಮ್ಮೇಶ್ ಗೌಡ ನೇತೃತ್ವದ ಕೇಸರಿ ಫೌಂಡೇಶನ್ ವತಿಯಿಂದ ಬಡವರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಈ ಉದ್ದೇಶಿತ ಬಡಾವಣೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ನಿವೃತ್ತ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ. ಈ ಸಮಿತಿ ನೀಡುವ ಮಾರ್ಗದರ್ಶನದಡಿಯಲ್ಲಿ ಬಿಡಿಎ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದರು. ಇದನ್ನೂ ಓದಿ:RSS ಪ್ರಮುಖರ ಮನೆ ಕದ ತಟ್ಟಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ
ನಮ್ಮ ಯಲಹಂಕ ಕ್ಷೇತ್ರದ ಮುದ್ದನಹಳ್ಳಿ ಮತ್ತು ನಾಗದಾಸನಹಳ್ಳಿ ಗ್ರಾಮಗಳಲ್ಲಿ ಬಡವರಿಗೆ ಹಾಗೂ ಲಾಕ್ ಡೌನ್ ನಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ದಿನಸಿ ಕಿಟ್ ವಿತರಿಸಲಾಯಿತು , ಹಾಗೂ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಲಾಯಿತು…#Yelahanka#srvishwanathpic.twitter.com/ANQ34xgAmD
ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆ ಹಿರಿಯರಾಗಿರುವ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಅವರ ಕಾಲದಲ್ಲಿಯೇ ಈ ಸಮಸ್ಯೆಯನ್ನು ಬಗೆಹರಿಸಬಹುದಾಗಿತ್ತು. ಆದರೆ, ಏಕೆ ಮಾಡಲಿಲ್ಲ? ಸಮಸ್ಯೆಯ ಗಂಭೀರತೆಯ ಬಗ್ಗೆ ಅವರಿಗೆ ಅರಿವಿದೆ. ಆದಾಗ್ಯೂ, ಬಡಾವಣೆ ವಿಳಂಬವಾಗುತ್ತಿರುವುದರ ಬಗ್ಗೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.
ಸುಪ್ರೀಂಕೋರ್ಟ್ ಮಾರ್ಗಸೂಚಿ ಮತ್ತು ನಿರ್ದೇಶನದಂತೆಯೇ ಈ ಬಡಾವಣೆಯನ್ನು ನಿರ್ಮಾಣ ಮಾಡಬೇಕಾಗಿದೆ. ಈ ವಿಚಾರದಲ್ಲಿ ಬಿಡಿಎ ಆಗಲೀ, ಸರ್ಕಾರ ಅಥವಾ ಮುಖ್ಯಮಂತ್ರಿಯಾಗಲೀ ಯಾರೂ ಸಹ ತಮ್ಮದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಹಾಗೊಂದು ವೇಳೆ ತಮ್ಮದೇ ನಿರ್ಧಾರ ಕೈಗೊಂಡರೆ ಅದು ನ್ಯಾಯಾಂಗ ನಿಂದನೆಯಾದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿಡಿಎ ಮುನ್ನಡಿ ಇಡುತ್ತಿದ್ದು, ಈಗಾಗಲೇ 600 ಎಕರೆಯಷ್ಟು ಭೂಮಿಯನ್ನು ಅವಾರ್ಡ್ ಮಾಡಲಾಗಿದ್ದು, ಇನ್ನೂ ಸುಮಾರು ಸಾವಿರ ಎಕರೆಗೆ ಅವಾರ್ಡ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
ದೊಡ್ಡಬಳ್ಳಾಪುರ ವ್ಯಾಪ್ತಿಯ ಜಿ. ಹೊಸಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ #VishwaVaniFoundation ವತಿಯಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಮತ್ತು ದಿನಸಿ ಕಿಟ್ ತಲುಪಿಸುವ ಸಮಯದಲ್ಲಿ ಅಲ್ಲಿನ ನರ್ಸಿಂಗ್ ಸಿಬ್ಬಂದಿ ಶ್ರೀಮತಿ. ಮದ್ದುರಮ್ಮ ಅವರು ಕಾಣಿಸಿಕೊಂಡರು , ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿ pic.twitter.com/fUrYEEUDDx
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಡಾವಣೆಗೆ ಭೂಮಿ ನೀಡಿದ ರೈತರ ಹಿತವನ್ನು ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಈ ಸೂಚನೆಯನ್ನು ಬಿಡಿಎ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ಭೂಮಿ ನೀಡಿರುವ ರೈತರಿಗೆ ಮೊದಲು ಪರಿಹಾರ ನೀಡಿದ ನಂತರವೇ ಸಾರ್ವಜನಿಕರಿಗೆ ನಿವೇಶನವನ್ನು ಹಂಚಿಕೆ ಮಾಡುತ್ತೇವೆ ಎಂದು ವಿಶ್ವನಾಥ್ ತಿಳಿಸಿದರು.
ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ತುಂಬಿರುವ ಹೂಳೆತ್ತುವ ಕಾರ್ಯವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕೆಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಮಂಗಳವಾರ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಮತ್ತು ಬಿಡಿಎ ಆಯುಕ್ತ ರಾಜೇಶ್ ಗೌಡ ಅವರೊಂದಿಗೆ ಬೆಳ್ಳಂದೂರು ಮತ್ತು ವರ್ತೂರು ಕೆರೆಯ ಹೂಳೆತ್ತುವ ಕಾಮಗಾರಿ ಹಾಗೂ ದೊಡ್ಡಬನಹಳ್ಳಿ ಮತ್ತು ಗುಂಜೂರು ವಸತಿ ಸಮುಚ್ಛಯಗಳಿಗೆ ಭೇಟಿ ನೀಡಿದ ನಂತರ ವಿಶ್ವನಾಥ್ ಈ ವಿಷಯ ತಿಳಿಸಿದರು. ಬೆಳ್ಳಂದೂರು ಕೆರೆಯ ಹೂಳೆತ್ತುವುದು ಮತ್ತು ಇನ್ನಿತರೆ ಕಾಮಗಾರಿಗಳಿಗೆಂದು 100 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದ್ದು, ಇನ್ನೂ ಹೆಚ್ಚು ಯಂತ್ರೋಪಕರಣಗಳು ಮತ್ತು ಮಾನವ ಸಂಪನ್ಮೂಲವನ್ನು ಬಳಸಿಕೊಂಡು ನಿಗದಿತ ಸಮಯದೊಳಗೆ ಅಂದರೆ 2022 ರ ನವೆಂಬರ್ ಒಳಗೆ ಕಾಮಗಾರಿಯನ್ನು ಹಾಗೂ ವರ್ತೂರು ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಬಿಡಿಎ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.
ಎಲ್ಲಾ ಅಪಾರ್ಟ್ ಮೆಂಟ್ ಗಳಿಗೆ ಓಪನ್ ಜಿಮ್:
ದೊಡ್ಡಬನಹಳ್ಳಿ ಬಿಡಿಎ ವಸತಿ ಸಂಕೀರ್ಣಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಂದ ಅಹವಾಲುಗಳನ್ನು ಸ್ವೀಕರಿಸಿದ ವಿಶ್ವನಾಥ್ ಅವರು, ಕೂಡಲೇ ವಸತಿ ಸಂಕೀರ್ಣದಲ್ಲಿರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ನಿವಾಸಿಗಳ ಸಂಘಕ್ಕೆ ಕಚೇರಿಯನ್ನು ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಡಿಎ ನಿರ್ಮಾಣ ಮಾಡಿರುವ ಬಹುತೇಕ ಎಲ್ಲಾ ಅಪಾರ್ಟ್ ಮೆಂಟ್ ಗಳಿಗೆ ಓಪನ್ ಜಿಮ್ ಮತ್ತು ಮಕ್ಕಳ ಆಟೋಟಗಳಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಓಪನ್ ಜಿಮ್ ನಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಸದ್ಯದಲ್ಲಿಯೇ ಪ್ರಾಧಿಕಾರ ಅನುಮೋದನೆ ನೀಡಲಿದೆ ಎಂದು ಭರವಸೆ ನೀಡಿದರು.
ಮಹದೇವಪುರ ಕ್ಷೇತ್ರದ ಬೆಳ್ಳಂದೂರು ಕೆರೆ ಕಾಮಗಾರಿ ಬಗ್ಗೆ ಅಧಿಕಾರಿಗಳೊಂದಿಗೆ ಪರಿವೀಕ್ಷಣೆ ನಡೆಸಿ, ಬೆಳ್ಳಂದೂರು ಕೆರೆ ಕಾಮಗಾರಿಗಳ ಮಾಹಿತಿ ಪಡೆದು, ಹಲವಾರು ವಿಷಯಗಳ ಕುರಿತು ಚರ್ಚಿಸಿ, ಅಗತ್ಯ ಸಲಹೆ, ಸೂಚನೆಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಚಿವರಾದ @ArvindLBJP ಹಾಗೂ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.#SRVishwanathpic.twitter.com/42Lc5ZBwlc
ಗುಂಜೂರು ಸಮಸ್ಯೆ ನಿವಾರಣೆಗೆ ಆಗಸ್ಟ್ 15 ಗಡುವು:
ಇನ್ನು ಗುಂಜೂರು ವಸತಿ ಸಂಕೀರ್ಣದಲ್ಲಿ ವಾಸವಾಗಿರುವ ನಿವಾಸಿಗಳ ಅಹವಾಲುಗಳನ್ನು ಸ್ವೀಕರಿಸಿದ ವಿಶ್ವನಾಥ್ ಅವರು, ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕೂಡಲೇ ಎರಡು ಬೋರ್ ವೆಲ್ ಗಳನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಶಾಶ್ವತ ವಿದ್ಯುತ್ ಸಂಪರ್ಕ, ಕಸ ವಿಲೇವಾರಿ, ಕಾಂಪೌಂಡ್ ನಿರ್ಮಾಣ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಆಗಸ್ಟ್ 15 ರೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಗಡುವು ವಿಧಿಸಿದರು. ಇದೇ ವೇಳೆ, ಕಾಮಗಾರಿಯಲ್ಲಿ ವಿಳಂಬ ಮತ್ತು ಲೋಪಗಳು ಕಂಡು ಬಂದರೆ ಅಂತಹ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ, ಶಾಸಕ ಎಸ್.ಆರ್.ವಿಶ್ವನಾಥ್ ಸಹಿಯನ್ನು ಫೋರ್ಜರಿ ಮಾಡಿ ಓರ್ವ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಬಿ.ಕೆ.ಚಂದ್ರಕಾಂತ್ ಸಿಕ್ಕಿಬಿದ್ದ ಅಧಿಕಾರಿ. ಚಂದ್ರಕಾಂತ್ ತಮ್ಮ ವರ್ಗಾವಣೆಗಾಗಿ ಈ ರೀತಿ ಮಾಡಿದ್ದಾರೆ. ಎಸ್.ಆರ್.ವಿಶ್ವನಾಥ್ ಅವರ ಹೆಸರಿನ ಲೆಟರ್ ಹೆಡ್ ಬಳಸಿ ಸಿಎಂ ಶಿಫಾರಸು ಪತ್ರವನ್ನು ಚಂದ್ರಕಾಂತ್ ತಲುಪಿಸಿದ್ದರು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾ ಅಧಿಕಾರಿ ವಿಠಲ್ ಕಾವಳೆ ಜಾಗಕ್ಕೆ ತಮ್ಮನ್ನು ವರ್ಗಾಯಿಸುವಂತೆ ಚಂದ್ರಕಾಂತ್ ಮನವಿ ಮಾಡಿದ್ದರು. ನಕಲಿ ಶಿಫಾರಸು ಪತ್ರಕ್ಕೆ ಸಹಿ ಮಾಡಿ ಸಿಎಂ ಕೂಡ ವರ್ಗಾವಣೆ ಆದೇಶ ಹೊರಡಿಸಿದ್ದರು. ಇದೀಗ ಫೋರ್ಜರಿ ಪ್ರಕರಣ ಬಯಲಾಗಿದ್ದು, ಆರೋಪಿ ಚಂದ್ರಕಾಂತ್ ವಿರುದ್ಧ ಪೊಲೀಸ್ ದೂರು ಕೊಡಲು ಎಸ್.ಆರ್.ವಿಶ್ವನಾಥ್ ಮುಂದಾಗಿದ್ದಾರೆ.
ಪತ್ರದಲ್ಲಿ ಏನಿದೆ?
ಚಂದ್ರಕಾಂತ್ ಬಿ.ಕೆ. ಸಹಾಯಕ ಕಾರ್ಯದರ್ಶಿಯಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ನನಗೆ ಪರಿಚಿತರಿರುತ್ತಾರೆ. ಇವರು ವಯೋವೃದ್ಧ ತಂದೆ-ತಾಯಿಯ ಆರೋಗ್ಯದ ಕಡೆ ಗಮನಿಸಬೇಕಾದ ಕಾರಣ ಅವರನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯತಿಯಲ್ಲಿ ಸಹಾಯಕ ಯೋಜನಾ ಅಧಿಕಾರಿ-1 ಆಗಿ ಕಾರ್ಯನಿರ್ವಹಿಸುತ್ತಿರವ ವಿಠಲ್ ಕಾವಳೆ ಜಾಗಕ್ಕೆ ತಮ್ಮನ್ನು ವರ್ಗಾಯಿಸುವಂತೆ ಸೂಕ್ತ ಆದೇಶ ನೀಡಬೇಕು ಎಂದು ಕೋರುತ್ತೇನೆ.
ಪತ್ರದ ಕೆಳಗೆ ತಮ್ಮ ವಿಶ್ವಾಸಿ ಎಸ್.ಆರ್.ವಿಶ್ವನಾಥ್ ಎಂದು ಬರೆದು ಅವರ ಸಹಿಯನ್ನು ಫೋರ್ಜರಿ ಮಾಡಿದ್ದಾರೆ. ಈ ಪತ್ರವನ್ನು ಚಂದ್ರಕಾಂತ್ ಬಿ.ಕೆ. ಸೆಪ್ಟೆಂಬರ್ 18ರಂದು ಸಿಎಂ ಯಡಿಯೂರಪ್ಪ ಅವರಿಗೆ ನೀಡಿದ್ದರು. ಇದಕ್ಕೆ ಸಿಎಂ ಅಕ್ಟೋಬರ್ 9ರಂದು ಸಹಿ ಮಾಡಿದ್ದರು.