Tag: russia

  • ಕಾರ್ಟೂನ್ ಪೊಪಾಯ್‍ನಂತ ಬೈಸೆಪ್ಸ್ ಗಾಗಿ ಈ ಯುವಕ ಏನು ಮಾಡ್ತಾರೆ ಗೊತ್ತಾ?

    ಕಾರ್ಟೂನ್ ಪೊಪಾಯ್‍ನಂತ ಬೈಸೆಪ್ಸ್ ಗಾಗಿ ಈ ಯುವಕ ಏನು ಮಾಡ್ತಾರೆ ಗೊತ್ತಾ?

    ಮಾಸ್ಕೋ: ನೀವು ಚಿಕ್ಕವರಿದ್ದಾಗ ಪೊಪಾಯ್ ದಿ ಸೇಲರ್ ಎಂಬ ಕಾರ್ಟೂನ್ ನೋಡೇ ಇರ್ತೀರ. ಆದ್ರೆ ನಿಜಜೀವನದಲ್ಲಿ ಪೊಪಾಯ್ ಥರ ಬೈಸೆಪ್ಸ್ ಇರೋಕೆ ಸಾಧ್ಯನಾ? ಇಲ್ಲೊಬ್ಬ ಮಾಜಿ ಸೈನಿಕ ಪೊಪಾಯ್ ನಂತಹ ಬೈಸೆಪ್ಸ್ ಪ್ರದರ್ಶಿಸಿ ಅಚ್ಚರಿ ಮೂಡಿಸಿದ್ದಾರೆ.

    ರಷ್ಯಾದ 21 ವರ್ಷದ ತೆರೆಶಿನ್ 24 ಇಂಚಿನ ಬೈಸೆಪ್ಸ್ ಹೊಂದಿದ್ದು ಜಗತ್ತಿನಾದ್ಯಂತ ಫೇಮಸ್ ಆಗಿದ್ದಾರೆ. ಈ ರೀತಿ ಬಸೆಪ್ಸ್‍ಗಾಗಿ ಇವರು ಸೈಟ್ ಎನ್‍ಹಾನ್ಸ್‍ಮೆಂಟ್ ಆಯಿಲ್ ಅಥವಾ ಸಿಂಥಾಲ್ ಬಳಸ್ತಾರಂತೆ. ಈ ಎಣ್ಣೆಯನ್ನ ತೋಳುಗಳಿಗೆ ಇಂಜೆಕ್ಟ್ ಮಾಡಿಕೊಳ್ಳೋ ಮೂಲಕ ಇಷ್ಟು ದೊಡ್ಡ ಬೈಸೆಪ್ಸ್ ಬರಿಸಿಕೊಂಡಿದ್ದಾರೆ. ಇದರಿಂದ ಇವರ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ವೈದ್ಯರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

    ಸೈನ್ಯವನ್ನ ಬಿಟ್ಟ ನಂತರ ಕೇವಲ 10 ದಿನಗಳಲ್ಲಿ ಇವರು 10 ಇಂಚಿನ ಬೈಸೆಪ್ಸ್ ಬರಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ತೆರೆಶಿನ್ ಹೆಮ್ಮೆಯಿಂದ ತನ್ನ ಬೈಸೆಪ್ಸ್ ಪ್ರದರ್ಶಿಸಿದ್ದಾರೆ.

    ಆದ್ರೆ ಈ ರೀತಿಯ ಬಾಡಿ ಬಿಲ್ಡಿಂಗ್‍ನಿಂದ ಅನಹುತವಾಗಬಹುದು ಎಂದು ವೈದ್ಯರಾದ ಯುರೀ ಸೆರೆಬ್ರಿಯಾನ್‍ಸ್ಕಿನಿ ಹೇಳಿದ್ದಾರೆ. ಅವರ ತೋಳುಗಳ ಚಲನೆಯೇ ನಿಂತುಬಿಡಬಹುದು. ಅವರ ತೋಳುಗಳು ತುಂಬಾ ಗಟ್ಟಿಯಾಗಿ ಮೇಲೆತ್ತಲು ಕೂಡ ಸಾಧ್ಯವಾಗದಂತೆ ಆಗಬಹುದು. ಅವರು ವಿಕಲಾಂಗರಂತೆ ಆಗಬಹುದು ಎಂದಿದ್ದಾರೆ.

    ಅಲ್ಲದೆ ವೃತ್ತಿಪರ ಪವರ್ ಲಿಫ್ಟರ್ ಆದ ಕಿರಿಲ್ ಸಿಚೆವ್ ಕೂಡ ಇದು ನಿಜವೆಂದು ಹೇಳಿದ್ದಾರೆ. ಅವರ ಮುಖದಲ್ಲೇ ನೋಡಬಹುದು. ಏನೋ ಅನಾರೋಗ್ಯವಿರುವಂತೆ ಕಾಣುತ್ತದೆ ಎಂದು ಅವರು ಹೇಳಿದ್ದಾರೆ. ಇವರಿಗೆ ವೈದ್ಯಕೀಯ ನೆರವಿನ ಅಗತ್ಯವಿದೆ. ಕೇವಲ ಅವರ ತೋಳುಗಳನ್ನ ಸರಿಪಡಿಸಿ ರಕ್ತವನ್ನ ಶುದ್ಧಿಗೊಳಿಸುವುದಷ್ಟೇ ಅಲ್ಲ. ಮನೋವೈಜ್ಞಾನಿಕ ಸಹಾಯ ಕೂಡ ಅಗತ್ಯವಿದೆ ಎಂದು ಹೇಳಿದ್ದಾರೆ.

     

    ಆದ್ರೆ ತೆರೆಶಿನ್ ಮಾತ್ರ ತನ್ನ ಈ ಕ್ರಮವನ್ನ ಮುಂದುವರಿಸೋದಾಗಿ ಹೇಳಿದ್ದಾರೆ. ವರ್ಕೌಟ್ ಮಾಡುವುದರ ಜೊತೆಗೆ ಒಂದು ದಿನ ಬಾಡಿ ಬಿಲ್ಡಿಂಗ್ ದಾಖಲೆ ಮುರಿಯೋ ಕನಸು ಹೊಂದಿದ್ದಾರೆ. ಇಷ್ಟು ದೊಡ್ಡ ಬೈಸೆಪ್ಸ್‍ಗಾಗಿ ಲೀಟರ್‍ಗಟ್ಟಲೆ ಎಣ್ಣೆಯನ್ನ ತೋಳಿಗೆ ಇಂಜೆಕ್ಟ್ ಮಾಡಿಕೊಳ್ಳಬಹುದು ಎಂದು ತೆರೆಶಿನ್ ಹೇಳಿದ್ದಾರೆ.

  • ಬ್ರೆಕ್ ಅಪ್ ಮಾಡ್ಕೊಂಡ ಎಕ್ಸ್ ಬಾಯ್ ಫ್ರೆಂಡ್ ಕಾರನ್ನು ಏನ್ ಮಾಡಿದ್ಲು ಗೊತ್ತಾ?

    ಬ್ರೆಕ್ ಅಪ್ ಮಾಡ್ಕೊಂಡ ಎಕ್ಸ್ ಬಾಯ್ ಫ್ರೆಂಡ್ ಕಾರನ್ನು ಏನ್ ಮಾಡಿದ್ಲು ಗೊತ್ತಾ?

    ಮಾಸ್ಕೋ: ತನ್ನ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದಕ್ಕೆ ಸಿಟ್ಟಿನಿಂದ ರಷ್ಯಾದ ಯುವತಿಯೊಬ್ಬಳು ತನ್ನ ಬಾಯ್ ಫ್ರೆಂಡ್ ನ 6 ಕೋಟಿ ರೂ. ಬೆಲೆ ಬಾಳುವ ಮರ್ಸಿಡಿಸ್ ಕಾರನ್ನು ನೀರಿನಲ್ಲಿ ಮುಳುಗಿಸಿ ತನ್ನ ಆಕ್ರೋಶವನ್ನು ಹೊರಹಾಕಿದ್ದಾಳೆ.

    ಯುವತಿಯನ್ನು 24 ವರ್ಷದ ಕ್ರಿಸ್ಟಿನಾ ಕುಚ್ಮಾ ಎಂದು ಗುರುತಿಸಲಾಗಿದ್ದು, ಈಕೆ ಮಾಡೆಲ್ ಆಗಿದ್ದಾಳೆ. ಈಕೆ ಉದ್ಯಮಿ 41 ವರ್ಷದ ಜೆಂಟೈಲ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಅಂತೆಯೇ ಅವರಿಬ್ಬರ ಸಂಬಂಧ ಚೆನ್ನಾಗಿಯೇ ಇತ್ತು. ಜೆಂಟೈಲ್ ಕೂಡ ಆಕೆಗಾಗಿ ಒಂದು ಸಣ್ಣ ಉದ್ಯಮವನ್ನು ಆರಂಭಿಸಲು ಹಣ ಸಹಾಯ ಮಾಡುವುದಾಗಿಯೂ ಹೇಳಿದ್ದನು. ಅಲ್ಲಿಯವರೆಗೆ ಚೆನ್ನಾಗಿಯೇ ಇದ್ದ ಜೆಂಟೈಲ್ ಒಂದಿನ ಇದ್ದಕ್ಕಿದ್ದಂತೆಯೇ ಆಕೆಯೊಂದಿಗೆ ಸಂಬಂಧವನ್ನು ಬ್ರೇಕ್ ಅಪ್ ಮಾಡಿಕೊಂಡ. ರಜೆಯ ವೇಳೆ ಬಹಮಾಸ್ ಗೆ ತೆರಳಿದ್ದ ಸಂದರ್ಭದಲ್ಲಿ ಇವರಿಬ್ಬರ ಮಧ್ಯದ ಸಂಬಂಧದಲ್ಲಿ ಬಿರುಕು ಮೂಡಿತ್ತು.

    ಇದರಿಂದ ಸಿಟ್ಟುಗೊಂಡ ಕ್ರಿಸ್ಟಿನಾ ನೇರವಾಗಿ ಮನೆಗೆ ಹೋಗಿ ಆತನ ಮನೆಯ ಹಿಂಬದಿಯಲ್ಲಿರುವ ಪೂಲ್ ನಲ್ಲಿ ಮರ್ಸಿಡಿಸ್ ಕಾರನ್ನು ಮುಳುಗಿಸಿಟ್ಟಿದ್ದಾಳೆ. ನಂತರ ಆತನಿಗೆ `ಬ್ಯುಸಿನೆಸ್ ಆರಂಭಿಸಲು ಹಣ ಕೊಡುತ್ತೇನೆ ಅಂದಿದ್ದೆ. ಆದ್ರೆ ಇದೀಗ ನೀನು ಮಾಡಿದ್ದೇನು?. ನೀನು ವಾಪಾಸ್ ಬಂದ ಬಳಿಕ ನಿನ್ನ ಮನೆಯ ಹಿಂಬದಿಯಲ್ಲಿದ್ದ ಪೂಲ್ ನಲ್ಲಿ ನಿನಗೊಂದು ಅಚ್ಚರಿ ಕಾದಿದೆ’ ನೋಡು ಅಂತ ಮೆಸೇಜ್ ಹಾಕಿದ್ದಾಳೆ.

    ಅಂತೆಯೇ ರಜಾ ಮುಗಿಸಿ ಮನೆಗೆ ವಾಪಾಸ್ಸಾಗಿ ನೋಡಿದಾಗ ಆತನ ಕಾರು ನೀರಿನಲ್ಲಿ ಮುಳುಗಿತ್ತು. ಆಕೆಯೂ ತನ್ನ ಕಾರಿನೊಳಗೆ ಇದ್ದಾಳೆ ಅಂತ ಒಂದು ಬಾರಿ ಆತಂಕಗೊಂಡೆ. ನನ್ನ ಕಾರಿಗಿಂತ ಆಕೆಯ ಮೇಲೆ ಅನುಕಂಪ ತೋರಿದ್ದೆ. ಆದ್ರೆ ಕಾರನ್ನು ಪರಿಶೀಲಿಸಿದಾಗ ಆಕೆ ಅದರಲ್ಲಿ ಇರಲಿಲ್ಲ. ಇದರಿಂದ ನನಗೆ ಕೋಪ ಬಂತು ಅಂತ ಜೆಂಟೈಲ್ ಹೇಳಿದ್ದಾನೆ.

    ಒಟ್ಟಿನಲ್ಲಿ ನಾನು ಅವಳನ್ನು ಡಂಪ್ ಮಾಡಿದ್ದಕ್ಕೆ ಅವಳು ನನ್ನ ಕಾರನ್ನು ನೀರಿನಲ್ಲಿ ಡಂಪ್ ಮಾಡಿದ್ದಾಳೆ ಅಂತ ಹೇಳಿದ್ದಾನೆ.

  • 30 ಜನರನ್ನು ಕೊಂದು ತಿಂದ ನರಭಕ್ಷಕ ದಂಪತಿ ಅರೆಸ್ಟ್

    30 ಜನರನ್ನು ಕೊಂದು ತಿಂದ ನರಭಕ್ಷಕ ದಂಪತಿ ಅರೆಸ್ಟ್

    ಮಾಸ್ಕೋ: ಮನುಷ್ಯರನ್ನು ಕೊಂದು ಅವರ ದೇಹದ ವಿವಿಧ ಭಾಗಗಳನ್ನು ತಿನ್ನುತ್ತಿದ್ದ ನರಭಕ್ಷಕ ದಂಪತಿಯನ್ನು ರಷ್ಯಾ ಪೊಲೀಸರು ಬಂಧಿಸಿದ್ದಾರೆ.

    ರಷ್ಯಾದ ಕ್ರಾಸ್ನೋಡರ್ ಪ್ರದೇಶ ನಿವಾಸಿಗಳಾದ ನಟಾಲಿಯಾ ಬಕ್ಯೀವಾ ಮತ್ತು ಡಿಮಿಟ್ರಿ ಬಕ್ಯೀವ ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

    ಮನುಷ್ಯರಿಗೆ ಅಧಿಕ ಪ್ರಮಾಣದ ನಿದ್ರೆ ಮಾತ್ರೆಗಳನ್ನು ನೀಡಿ ಅವರು ಬದುಕಿರುವಾಗಲೇ ಅವರ ಚರ್ಮ ಸುಲಿದು, ದೇಹದ ವಿವಿಧ ಭಾಗಗಳನ್ನು ದಂಪತಿ ಕಿತ್ತು ತಿನ್ನುತ್ತಿದ್ದರು. ನಂತರ ಉಳಿದ ಭಾಗಗಳನ್ನು ಡಿಪ್ ಫ್ರಿಜ್ ನಲ್ಲಿಟ್ಟು ಶೇಖರಿಸುತ್ತಿದ್ದರು ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.

    ಘಟನೆ ಬೆಳಕಿಗೆ ಬಂದಿದ್ದು ಹೇಗೆ?
    ಕ್ರಾಸ್ನೋಡರ್ ನಗರ ಪೊಲೀಸರಿಗೆ ರಸ್ತೆಯಲ್ಲಿ ಮೊಬೈಲ್ ಒಂದು ದೊರೆತಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಮನುಷ್ಯ ದೇಹದ ವಿವಿಧ ಭಾಗಗಳನ್ನು ಕಿತ್ತು ತಿನ್ನುತ್ತಿರುವ ಫೋಟೋಗಳು ಲಭ್ಯವಾಗಿತ್ತು. ಈ ಮೊಬೈಲ್ ಫೋಟೋಗಳನ್ನು ತನಿಖೆಗೆ ಒಳಪಡಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ತನಿಖೆಯ ವೇಳೆ ದಂಪತಿ ಸುಮಾರು 30ಕ್ಕೂ ಹೆಚ್ಚು ಜನರನ್ನು ಕೊಂದು ಅವರ ದೇಹಗಳನ್ನು ತಿಂದಿರುವ ಮಾಹಿತಿಯನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ. ಮಿಲಿಟರಿ ನೆಲೆಯಲ್ಲಿ ಈ ದಂಪತಿ ಕೆಲಸ ಮಾಡುತ್ತಿದ್ದರು.

  • ಮಿಲಿಟರಿ ಹೆಲಿಕಾಪ್ಟರ್‍ ಗುರಿ ತಪ್ಪಿ ರಾಕೆಟ್ ಸಿಡಿತ, ಸ್ಥಳದಲ್ಲಿದ್ದ ವಾಹನ ಢಮಾರ್! ವಿಡಿಯೋ ನೋಡಿ

    ಮಿಲಿಟರಿ ಹೆಲಿಕಾಪ್ಟರ್‍ ಗುರಿ ತಪ್ಪಿ ರಾಕೆಟ್ ಸಿಡಿತ, ಸ್ಥಳದಲ್ಲಿದ್ದ ವಾಹನ ಢಮಾರ್! ವಿಡಿಯೋ ನೋಡಿ

    ಮಾಸ್ಕೋ: ರಷ್ಯಾದ ಮಿಲಿಟರಿ ಅಭ್ಯಾಸದ ವೇಳೆ ಎಡವಟ್ಟಾಗಿದ್ದು, ಹೆಲಿಕಾಪ್ಟರ್ ನಿಂದ ಚಿಮ್ಮಿದ ರಾಕೆಟ್ ನಿಲುಗಡೆ ಮಾಡಿದ್ದ ವಾಹನದ ಮೇಲೆ ಬಿದ್ದಿದ್ದು, ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ.

    ಪಶ್ಚಿಮ ಭಾಗದಲ್ಲಿ ರಷ್ಯಾ ಸೇನೆ ಮಿಲಿಟರಿ ಯುದ್ಧ ಅಭ್ಯಾಸ ನಡೆಸುತ್ತಿದ್ದು ಹೆಲಿಕಾಪ್ಟರ್ ಮೂಲಕ ರಾಕೆಟ್ ಉಡಾಯಿಸುತಿತ್ತು. ಈ ವೇಳೆ ನಿರ್ಧಿಷ್ಟ ಗುರಿಯನ್ನು ತಲುಪಬೇಕಿದ್ದ ರಾಕೆಟ್ ಗುರಿ ತಪ್ಪಿ ವಾಹನಗಳನ್ನು ನಿಂತಿದ್ದ ಸ್ಥಳದ ಮೇಲೆ ಬಿದ್ದಿದೆ. ಈ ಸ್ಫೋಟದಿಂದ ವ್ಯಕ್ತಿಯೊಬ್ಬರು ನೆಲಕ್ಕೆ ಬಿದ್ದಿದ್ದಾರೆ.

    ಈ ಘಟನೆ ನಡೆದ ಸ್ಥಳದಲ್ಲಿ ಟ್ರಕ್‍ಗೆ ಸಮೀಪದಲ್ಲಿರುವ ಬಿಳಿ ಜೀಪ್‍ ಕಿಟಕಿ ಒಡೆದುಹೋಗಿದ್ದು, ಇತರೆ ವಾಹನಗಳು ಕೂಡ ಹಾನಿಗೊಳಗಾಗಿವೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

    ಇದು ಉದ್ದೇಶ ಪೂರ್ವಕವಾಗಿ ನಡೆದಿಲ್ಲ. ಈ ಅವಘಡದಿಂದ ಜನರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಸರಕು ವಾಹನಗಳು ಮಾತ್ರ ಹಾನಿಯಾಗಿವೆ ಎಂದು ಪಶ್ಚಿಮ ಮಿಲಿಟರಿ ಜಿಲ್ಲೆಯ ರಕ್ಷಣಾ ಸಚಿವಾಲಯ ತಿಳಿಸಿದೆ.

    ಹೆಲಿಕಾಪ್ಟರ್ ನಿಂದ ನಿಂದ ಚಿಮ್ಮಿದ ರಾಕೆಟ್ ಭೂಮಿ ಅಪ್ಪಳಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ವಿಡಿಯೋ: 3 ಸುಂಟರಗಾಳಿಗಳ ಮಧ್ಯೆಯೂ ಹಾರಿದ ವಿಮಾನ

    ವಿಡಿಯೋ: 3 ಸುಂಟರಗಾಳಿಗಳ ಮಧ್ಯೆಯೂ ಹಾರಿದ ವಿಮಾನ

    ಮಾಸ್ಕೋ: ವಿಮಾನವೊಂದು ಮೂರು ಸುಂಟರಗಾಳಿಗಳ ಮಧ್ಯೆ ಹಾರಾಡಿದ ಘಟನೆ ರಷ್ಯಾದಲ್ಲಿ ನಡೆದಿದೆ. ವಿಮಾನ ಇಲ್ಲಿನ ಸೋಚಿಯಲ್ಲಿ ಸುರಕ್ಷಿತಾಗಿ ಲ್ಯಾಂಡ್ ಆಗಿದೆ. ಹಲವಾರು ಮಂದಿ ಇದರ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಮಂಗಳವಾರದಂದು ಈ ಘಟನೆ ನಡೆದಿದೆ. ಇನ್ನು ಸುಂಟರಗಾಳಿ ಉಂಟಾಗಿದ್ದು ಭೂಮಿಯ ಮೇಲಲ್ಲ, ನೀರಿನ ಮೇಲೆ. ಬ್ಲಾಕ್ ಸೀ ಪ್ರದೇಶದ ಮೇಲೆ ಸುಮಾರು 12 ಸುಂಟರಗಾಳಿಗಳು ಉಂಟಾಗಿದ್ದು, ಮೂರು ಸುಂಟರಗಾಳಿಗಳ ಮಧ್ಯೆಯೇ ವಿಮಾನ ಹಾರಿಹೋಗಿದೆ.

    ಸುಂಟರಗಾಳಿಗಳು ಒಂದಕ್ಕೊಂದು ತೀರಾ ಸಮೀಪವಿದ್ದಿದ್ದರಿಂದ ಸಾಕಷ್ಟು ವಿಮಾನಗಳ ಮಾರ್ಗ ಬದಲಾಯಿಸಲಾಗಿತ್ತು ಎಂದು ವರದಿಯಾಗಿದೆ.

    ಸುಂಟರಗಾಳಿಗಳ ಮಧ್ಯೆ ಹಾರಿದ ವಿಮಾನ ಸುರಕ್ಷಿತವಾಗಿಯೇ ಲ್ಯಾಂಡ್ ಆಗಿದೆ. ಆದರೂ ಪ್ರಯಾಣಿಕರಿಗೆ ಸುಂಟರಗಾಳಿಯ ಅನುಭವವಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಸುಂಟರಗಾಳಿಯ ಫೋಟೋ ಕ್ಲಿಕ್ಕಿಸಿದ್ದಾರೆ.

    ನೀರಿನ ಮೇಲೆ ಉಂಟಾಗುವ ಸುಂಟರಗಾಳಿಯನ್ನ ವಾಟರ್ ಸ್ಪೌಟ್ಸ್ ಅಂತಾರೆ. ಇದಕ್ಕೆ ಭೂಮಿಯ ಮೇಲೆ ಉಂಟಾಗುವ ಸುಂಟರಗಾಳಿಯಷ್ಟು ತೀವ್ರತೆ ಇರುವುದಿಲ್ಲ. ಆದರೂ ವಾಟರ್ ಸ್ಪೌಟ್ಸ್ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತೆ.

  • ಬರಗಾಲವಿದ್ರೂ ವಿದೇಶ ವ್ಯಾಮೋಹ- ಸರ್ಕಾರದ ದುಡ್ಡಲ್ಲಿ ಮಂತ್ರಿ ರುದ್ರಪ್ಪ ಲಮಾಣಿ ಫ್ಯಾಮಿಲಿ ಟ್ರಿಪ್

    ಬರಗಾಲವಿದ್ರೂ ವಿದೇಶ ವ್ಯಾಮೋಹ- ಸರ್ಕಾರದ ದುಡ್ಡಲ್ಲಿ ಮಂತ್ರಿ ರುದ್ರಪ್ಪ ಲಮಾಣಿ ಫ್ಯಾಮಿಲಿ ಟ್ರಿಪ್

    ಹಾವೇರಿ: ರಾಜ್ಯದಲ್ಲಿ ಬರಗಾಲ ತಂಡವವಾಡ್ತಾ ಇದ್ರೂ ಮಿನಿಸ್ಟರ್‍ಗಳು ಫಾರಿನ್ ಟೂರ್ ಚಟ ಬಿಟ್ಟಿಲ್ಲ. ಜವಳಿ ಸಮಾವೇಶದ ಸೋಗಿನಲ್ಲಿ ಜವಳಿ ಮಂತ್ರಿ ರುದ್ರಪ್ಪ ಲಮಾಣಿ ಒಂದು ವಾರ ಫಾರಿನ್ ಟೂರ್ ಹೊರಟ್ಟಿದ್ದಾರೆ.

    ರಷ್ಯಾದ ಪೀಟರ್ಸ್‍ಬರ್ಗ್‍ನಲ್ಲಿ ಜವಳಿ ಕುರಿತು ಸಮಾವೇಶ ನಡೆಯುತ್ತದೆ. ಹಾಗಾಗಿ ಇಂದು ಸಂಜೆ ಫಾರಿನ್ ಪ್ರವಾಸಕ್ಕೆ ಹೊರಟಿದ್ದೇವೆ ಎಂದು ಸಚಿವಾಲಯ ಹೇಳಿದೆ. ರುದ್ರಪ್ಪ ಲಮಾಣಿಗೆ ಕುಟುಂಬ ಸದಸ್ಯರು ಕೂಡ ಸಾಥ್ ಕೊಡುತ್ತಿದ್ದಾರೆ ಎನ್ನಲಾಗಿದೆ.

    ಜವಳಿ ಮಂತ್ರಿ ನಾನೊಬ್ಬನೇ ಹೋಗೋದು ಸರಿ ಇಲ್ಲ ಅಂತ ಸರ್ಕಾರಿ ದುಡ್ಡಿನಲ್ಲಿ ಕುಟುಂಬ ಸದಸ್ಯರಿಗೂ ಫಾರಿನ್ ದರ್ಶನ ಮಾಡಿಸೋಕೆ ಹೊರಟಿದ್ದಾರೆ. ಇದರ ಜೊತೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿಗೂ ಪ್ರವಾಸ ಭಾಗ್ಯ ಕೊಟ್ಟಿದ್ದಾರಂತೆ. ಮಿನಿಸ್ಟರ್ ಓಕೆ ಅಂದ ಕೂಡಲೇ ಆಪ್ತ ಸಹಾಯಕ ಕೃಷ್ಣನಾಯಕ್, ಡೈರಕ್ಟರ್ ರಮೇಶ್, ಕೈಮಗ್ಗ ನಿಗಮದ ಎಂ.ಡಿ. ಶ್ರೀನಿವಾಸ್‍ಮೂರ್ತಿ, ಜಂಟಿ ನಿದೇರ್ಶಕ ಪ್ರಕಾಶ್ ಎಲ್ಲರೂ ಲಗೇಜ್ ಪ್ಯಾಕ್ ಮಾಡಿಕೊಂಡು ಇಂದು ಸಂಜೆ ವಿಮಾನ ಹತ್ತೋಕೆ ಸಿದ್ದವಾಗಿದ್ದರೆ.

    ಸರ್ಕಾರಿ ದುಡ್ಡಿನಲ್ಲಿ ತಮ್ಮ ಕುಟುಂಬಸ್ಥರಿಗೂ ವಿದೇಶದ ದರ್ಶನ ಮಾಡಿಸುತ್ತಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.

  • ಬ್ಲೂ ವೇಲ್‍ಗಾಗಿ ಭಾರತದಲ್ಲಿ ಮೊದಲ ಬಲಿ- ಬಾಲಕ ಪೋಸ್ಟ್ ಮಾಡಿದ ಕೊನೆಯ ಫೋಟೋ ಇದು

    ಬ್ಲೂ ವೇಲ್‍ಗಾಗಿ ಭಾರತದಲ್ಲಿ ಮೊದಲ ಬಲಿ- ಬಾಲಕ ಪೋಸ್ಟ್ ಮಾಡಿದ ಕೊನೆಯ ಫೋಟೋ ಇದು

    ಮುಂಬೈ: ರಷ್ಯಾ ಮೂಲದ `ಬ್ಲೂ ವೇಲ್ ಚಾಲೆಂಜ್’ ಗಾಗಿ 14 ವರ್ಷದ ಬಾಲಕನೊಬ್ಬ ಬಲಿಯಾಗಿರುವ ಮನಕಲಕುವ ಘಟನೆಯೊಂದು ಮುಂಬೈನ ಅಂಧೇರಿಯಲ್ಲಿ ಬೆಳಕಿಗೆ ಬಂದಿದೆ. ಇದು ಭಾರತದಲ್ಲಿ ಮೊದಲ ಬಲಿಯಾಗಿದೆ.

    ಮನ್ ಪ್ರಿತ್ ಸಹಾನ್ಸ್ ಬ್ಲೂ ವೇಲ್ ಚಾಲೆಂಜ್ ಗೆಲ್ಲುವ ಸಲುವಾಗಿ ಕಟ್ಟಡವೊಂದರಿಂದ ಹಾರಿ ತನ್ನ ಪ್ರಾಣವನ್ನೇ ಕಳೆದುಕೊಂಡ ಬಾಲಕ.

    ಮನ್ ಪ್ರಿತ್ ಶುಕ್ರವಾರ ಸಂಜೆ ಶಾಲೆಯಿಂದ ಮನೆಗೆ ಹೊರಡುವ ವೇಳೆ ಸಹಪಾಠಿಗಳೊಂದಿಗೆ ತಾನು ಸೋಮವಾರ ಶಾಲೆಗೆ ಗೈರಾಗಲಿದ್ದೇನೆ ಅಂತ ಹೇಳಿದ್ದಾನೆ. ಅಲ್ಲದೇ ಆತ್ಮಹತ್ಯೆಗೆ ಎರಡು ದಿನಗಳ ಮೊದಲು ಟೆರೇಸ್ ನಿಂದ ಹೇಗೆ ಹಾರುವುದು ಎಂಬುವುದನ್ನು ಅಂತರ್ಜಾಲದಲ್ಲಿ ಹುಡುಕಾಡುತ್ತಿದ್ದನು ಅಂತ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

    ಅಲ್ಲದೇ ಘಟನೆ ನಡೆಯುವ ಒಂದು ವಾರದ ಮುಂಚೆಯೇ ಈತನ ಚಲನವಲನಗಳಲ್ಲಿ ವ್ಯತ್ಯಾಸಗಳು ಕಂಡುಬಂದಿತ್ತು. ಈ ಬಗ್ಗೆ ಪೋಷಕರಿಗೂ ಸಂಶಯವಿತ್ತು. ಆದ್ರೆ ತಮ್ಮ ಮಗ ಇಂತಹ ಒಂದು ಘೋರ ಹೆಜ್ಜೆ ಇಡಬಹುದು ಅಂತ ಅಂದಕೊಂಡಿರಲಿಲ್ಲ. ಇದೀಗ ಮಗನ ಸಾವಿನಿಂದ ಪೋಷಕರು ಆಘಾತಗೊಂಡಿದ್ದಾರೆ.

    ಆತ್ಮಹತ್ಯೆಗೂ ಕೆಲ ನಿಮಿಷಗಳ ಮುಂಚೆ ಬಾಲಕ ಟೆರೇಸ್‍ನಲ್ಲಿ ಕಾಲು ಕೆಳಗೆ ಹಾಕಿ ಕುಳಿತ ಫೋಟೋ ತೆಗೆದಿದ್ದಾನೆ. ಬಳಿಕ ಆ ಫೋಟೋದ ಮೇಲೆ `ಇನ್ನು ಕೆಲವೇ ಸಮಯದಲ್ಲಿ ನಿಮ್ಮ ಜೊತೆ ಈ ಫೋಟೋ ಮಾತ್ರ ಇರಲಿದೆ ಅಂತ ಬರೆದಿದು ಪೋಸ್ಟ್ ಮಾಡಿದ್ದಾನೆ.

    ಪ್ರಕರಣದ ಕುರಿತಂತೆ ತನಿಖೆ ನಡೆಸಿದ ವೇಳೆ, ಪನ್ ಪ್ರಿತ್ ಕಟ್ಟಡವೊಂದರ ಮೇಲೆ ಕುಳಿತಿರುವುದನ್ನು ಗಮನಿಸಿ ಕೆಳಗಿಳಿಯುವಂತೆ ಕೇಳಿಕೊಂಡಿದ್ದರು. ಈ ವೇಳೆ ಮನ್ ಪ್ರಿತ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾನೆ. `ನಾನು ಕಟ್ಟಡದಿಂದ ಜಿಗಿಯುವುದನ್ನು ತಡೆಯಲು ವ್ಯಕ್ತಿಯೊಬ್ಬರು ಪ್ರಯತ್ನಿಸಿದ್ದಾರೆ ಅಂತ ಫೊಟೋದೊಂದಿಗೆ ಪೋಸ್ಟ್ ಮಾಡಿ ಬಳಿಕ ಕಟ್ಟಡದಿಂದ ಜಿಗಿದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿದ್ದಾನೆ ಅಂತ ವೈದ್ಯರು ಹೇಳಿದ್ದಾರೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಘಟನೆಯ ಬಳಿಕ ಮುಂಬೈ ಪೊಲೀಸರು ಬಾಲಕ ಕಟ್ಟಡದಿಂದ ಹಾರುವುದನ್ನು ಇಬ್ಬರು ನೋಡಿದ್ದಾರೆ. ಇನ್ನು ಹೆತ್ತವರು ತಮ್ಮ ಮಕ್ಕಳಿಗೆ ಇಂತಹ ಆಟದತ್ತ ಗಮನಹಿರಿಸದಂತೆ ಜಾಗೃತರಾಗಬೇಕಾಗಿ ವಿನಂತಿಸಿಕೊಂಡಿದ್ದಾರೆ.

    ಏನಿದು ಬ್ಲೂ ವೇಲ್ ಗೇಮ್?: ಇದು ರಷ್ಯಾ ಮೂಲದ ಭಯಾನಕ ಆನ್ ಲೈನ್ ಆಟವಾಗಿದ್ದು, ಇದನ್ನು ಮಾರಣಾಂತಿಕ ಬ್ಲೂ ವೇಲ್ ಗೇಮ್ ಅಥವಾ ಬ್ಲೂ ವೇಲ್ ಚಾಲೆಂಜ್ ಅಂತನೂ ಕರೆಯುತ್ತಾರೆ. ಈ ಆಟದಲ್ಲಿ ಸಂಗಿತಾ ಕೇಳುವುದು, ಬೆಳಗ್ಗೆ ಬೇಗ ಏಳುವುದು ಸೇರಿದಂತೆ 50 ಟಾಸ್ಕ್ ಗಳಿರುತ್ತವೆ. ಇದರಲ್ಲಿ ಕೊನೆಯ ಆಟ ಎತ್ತರದ ಕಟ್ಟಡದಿಂದ ಕೆಳಗೆ ಜಿಗಿಯುವುದು ಆಗಿರುತ್ತದೆ. ಈ ಚಾಲೆಂಜ್ ನಲ್ಲಿ ಪಾಲ್ಗೊಳ್ಳುವ ಮುನ್ನ ವ್ಯಕ್ತಿ ಸಾಕ್ಷಿಗೆ ಫೋಟೋಗಳನ್ನು ಕಳುಹಿಸಬೇಕು. ನಂತರ ಕಟ್ಟಡದಿಂದ ಹಾರಬೇಕು ಎಂದಾಗಿರುತ್ತದೆ.

    ಇಂತಹ ಟಾಸ್ಕ್ ಗಳು ಹೆಚ್ಚಾಗಿ ಹಾರರ್ ಸಿನಿಮಾಗಳಲ್ಲಿ ಇರುತ್ತವೆ. ಸದ್ಯ ಈ ಆಟಕ್ಕೆ ವಿದೇಶಗಳಲ್ಲಿ 100ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದಾರೆ. ಆದ್ರೆ ಮುಂಬೈನಲ್ಲಿ ನಡೆದ ಈ ಘಟನೆ ಭಾರತದಲ್ಲಿ ಮೊದಲ ಬಲಿಯಾಗಿದೆ.

  • ಭಯಾನಕ ವಿಡಿಯೋ: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಮೇಲೆ 12 ನಾಯಿಗಳ ದಾಳಿ- ನಡುಬೀದಿಯಲ್ಲಿ ನೋಡನೋಡುತ್ತಲೇ ಕಚ್ಚಿತಿಂದ್ವು

    ಭಯಾನಕ ವಿಡಿಯೋ: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಮೇಲೆ 12 ನಾಯಿಗಳ ದಾಳಿ- ನಡುಬೀದಿಯಲ್ಲಿ ನೋಡನೋಡುತ್ತಲೇ ಕಚ್ಚಿತಿಂದ್ವು

    ಮಾಸ್ಕೋ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರ ಮೇಲೆ 12 ನಾಯಿಗಳು ದಾಳಿ ಮಾಡಿ ಕಚ್ಚಿ ತಿಂದ ಭಯಾನಕ ಘಟನೆ ರಷ್ಯಾದ ಸೋವೆಟ್‍ಕ್ಸೀ ಪ್ರಾಂತ್ಯದಲ್ಲಿ ನಡೆದಿದೆ.

    ಸೆಕ್ಯೂರಿಟಿ ಗಾರ್ಡ್ ಆಗಿದ್ದ ಆ ವ್ಯಕ್ತಿ ಪ್ರತಿದಿನ ನಾಯಿಗಳಿಗೆ ಆಹಾರ ಹಾಕ್ತಿದ್ದರು ಎಂದು ಹೇಳಲಾಗಿದೆ. ಆದ್ರೆ ಅಂದು ಆಹಾರ ತಂದಿರಲಿಲ್ಲ. ಹೀಗಾಗಿ ಸುಮಾರು 12 ನಾಯಿಗಳ ಹಿಂಡು ಆ ವ್ಯಕ್ತಿಯ ಮೇಲೆ ದಾಳಿ ಮಾಡಿ ಕಚ್ಚಿ ಕಚ್ಚಿ ತಿಂದಿವೆ. ಮದ್ಯದ ಅಮಲಿನಲ್ಲಿದ್ದ ಕಾರಣ ಅವರಿಗೆ ನಾಯಿಗಳಿಂದ ಬಿಡಿಸಿಕೊಳ್ಳಲು ಕಷ್ಟವಾಗಿದೆ. ಆದರೂ ಆ ವ್ಯಕ್ತಿ ಎರಡು ಬಾರಿ ಮೇಲೆದ್ದು ನಾಯಿಗಳಿಂದ ಬಚಾವಾಗಲು ಯತ್ನಿಸಿದರಾದ್ರೂ ನಾಯಿಗಳು ಮತ್ರ ಮತ್ತೆ ಅವರನ್ನ ಎಳೆದಾಡಿ ಕಚ್ಚಿವೆ.

    ನಾಯಿಗಳ ದಾಳಿಯ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದು, ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದಾಗ ಈ ಭಯಾನಕ ಘಟನೆ ಬೆಳಕಿಗೆ ಬಂದಿದೆ.

    https://www.youtube.com/watch?v=w-OAiDVrZlA

     

  • ಅಫ್ಘಾನಿಸ್ತಾನದ ಐಸಿಸ್ ನೆಲೆ ಮೇಲೆ `ಮದರ್ ಆಫ್ ಆಲ್ ಬಾಂಬ್’ ಪ್ರಯೋಗಿಸಿದ ಅಮೆರಿಕ- 36 ಉಗ್ರರ ಹತ್ಯೆ

    ಅಫ್ಘಾನಿಸ್ತಾನದ ಐಸಿಸ್ ನೆಲೆ ಮೇಲೆ `ಮದರ್ ಆಫ್ ಆಲ್ ಬಾಂಬ್’ ಪ್ರಯೋಗಿಸಿದ ಅಮೆರಿಕ- 36 ಉಗ್ರರ ಹತ್ಯೆ

    ವಾಷಿಂಗ್ಟನ್: ಅಪ್ಘಾನಿಸ್ತಾನದ ಐಸಿಸ್ ನೆಲೆಯ ಮೇಲೆ ಅಮೆರಿಕ ಮದರ್ ಆಫ್ ಆಲ್ ಬಾಂಬ್ಸ್ ಎಂದೇ ಕರೆಯಲಾಗುವ ಅತ್ಯಂತ ದೊಡ್ಡ ಬಾಂಬ್ ಪ್ರಯೋಗಿಸಿದ್ದು, 36 ಉಗ್ರರು ಸಾವನ್ನಪ್ಪಿರುವುದಾಗಿ ಅಫ್ಘಾನಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.

    ಅಫ್ಘಾನಿಸ್ತಾನದ ನಂಗರ್‍ಹರ್ ಪ್ರಾಂತ್ಯದ ಮೇಲೆ ಎಲ್ಲಾ ಬಾಂಬ್‍ಗಳ ತಾಯಿ ಎಂದೇ ಕರೆಯಲಾಗುವ ಅತ್ಯಂತ ಪ್ರಬಲ ಜಿಬಿಯು-43/ಬಿ ಮ್ಯಾಸೀವ್ ಆರ್ಡ್‍ನೆನ್ಸ್ ಏರ್ ಬ್ಲಾಸ್ಟ್ ಬಾಂಬ್(ಎಮ್‍ಓಎಬಿ) ಬಾಂಬನ್ನು ಗುರುವಾರದಂದು ಅಮೆರಿಕ ಸ್ಫೋಟಿಸಿತ್ತು. ಅಮೆರಿಕ ಯುದ್ಧ ಇತಿಹಾಸದಲ್ಲಿ ಇದುವರೆಗೆ ಇಷ್ಟು ಗಾತ್ರದ ಬಾಂಬನ್ನು ಶತ್ರುಗಳ ವಿರುದ್ಧ ಪ್ರಯೋಗ ಮಾಡಿರಲಿಲ್ಲ. ಗುರುವಾರದಂದು ಅಪ್ಘಾನಿಸ್ತಾನದ ಸ್ಥಳೀಯ ಕಾಲಮಾನ ಸಂಜೆ 7 ಗಂಟೆ ಸುಮಾರಿಗೆ ದಾಳಿ ನಡೆಸಲಾಗಿತ್ತು.

    ಎಮ್‍ಸಿ-130 ಸರಕು ಸಾಗಾಣಿಕೆ ಯುದ್ಧ ವಿಮಾನಗಳ ಮೂಲಕ ಐಸಿಸ್ ಭಯೋತ್ಪಾದಕರ ರಕ್ಷಣೆ ಪಡೆಯುತ್ತಿದ್ದ ಸುರಂಗ ಮಾರ್ಗಗಳು, ಬಂಕರ್‍ಗಳು, ಮನೆಗಳನ್ನು ಗುರಿಯಾಗಿರಿಸಿಕೊಂಡು ಬಾಂಬ್ ದಾಳಿ ನಡೆಸಲಾಗಿತ್ತು.

    ದಾಳಿಯಲ್ಲಿ ಐಸಿಸ್ ಅಡಗುದಾಣ ಹಾಗೂ ಸುರಂಗ ನಾಶವಾಗಿದ್ದು, 36 ಉಗ್ರರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ. ಬಾಂಬ್ ದಾಳಿ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು ಎಂದು ವರದಿಯಾಗಿದೆ.

    ನ್ಯೂಯಾರ್ಕ್ ಅವಳಿ ಕಟ್ಟಡ ದಾಳಿ ಬಳಿಕ ಅಮೆರಿಕ ಅಪ್ಘಾನಿಸ್ತಾನದ ಮೇಲೆ ದಾಳಿ ನಡೆಸಿತ್ತು. ಆದರೆ 15 ವರ್ಷಗಳ ಬಳಿಕ ಪಾಕಿಸ್ತಾನದೊಂದಿಗೆ ಗಡಿಹೊಂದಿರುವ ನಂಗರ್‍ಹರ್ ಪ್ರಾಂತ್ಯದಲ್ಲಿ ಐಸಿಸ್ ಸೇರಿದಂತೆ ಉಗ್ರರ ಸಂಘಟನೆಗಳು ಮತ್ತೆ ಉಪಟಳ ಶುರು ಮಾಡಿದ್ದವು. ಸುರಂಗ ಮಾರ್ಗ, ಗುಹೆಗಳನ್ನು ಬಳಸಿಕೊಂಡು ತಮ್ಮ ಚಟುವಟಿಕೆಗಳನ್ನು ನಡೆಸುತ್ತಿವೆ. ಇದು ಅಪ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಸಿರಿಯಾದಲ್ಲಿ ಅಮೆರಿಕ ತೀವ್ರ ಸ್ವರೂಪದ ವೈಮಾನಿಕ ದಾಳಿ ನಡೆಸಿತ್ತು.

    ಏನಿದು `ಮದರ್ ಆಫ್ ಆಲ್ ಬಾಂಬ್’? ಇದರ ವಿಶೇಷತೆಯೇನು?

    – ಎಮ್‍ಓಎಬಿ ಅಂದ್ರೆ ಮ್ಯಾಸೀವ್ ಆರ್ಡ್‍ನೆನ್ಸ್ ಏರ್ ಬ್ಲಾಸ್ಟ್ ಬಾಂಬ್. ಆದ್ರೆ ಇದು ಮದರ್ ಆಫ್ ಆಲ್ ಬಾಂಬ್ಸ್ ಎಂದೇ ಪ್ರಖ್ಯಾತವಾಗಿದೆ.
    – 1 ಜಿಬಿಯು-43 ಬಾಂಬ್ ಬರೋಬ್ಬರೀ 9,797 ಕೆಜಿ ತೂಕ ಭಾರವಿದೆ.
    – ಈ ಬಾಂಬ್‍ನ ಉದ್ದ ಬರೋಬ್ಬರಿ 20 ಅಡಿ.
    – ಯುದ್ಧವಿಮಾನದಿಂದ ಪ್ರಯೋಗವಾದಾಗ ಭೂಮಿಗಿಂತ 60 ಅಡಿ ಎತ್ತರದಲ್ಲೇ ಸ್ಫೋಟ.
    – 200 ಮೀಟರ್‍ನಷ್ಟು ಭೂಗರ್ಭಕ್ಕೆ ನುಗ್ಗಿ ಶತ್ರುಗಳನ್ನು ಧ್ವಂಸಿಸುವ ಸಾಮಥ್ರ್ಯವಿದೆ.
    – ಬಾಂಬ್ ಅಪ್ಪಳಿಸಿದ 32 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭಾರೀ ಅನಾಹುತ ಸೃಷ್ಟಿ.
    – ಇತರೆ ಬಾಂಬ್‍ಗಳಿಗೆ ಹೋಲಿಸಿದ್ರೆ ಜಿಬಿಯು-43 ಭೂಮಿ ಅಡಿಯೊಳಗೂ ಶತ್ರುಗಳ ಬೇಟೆಯಾಡುತ್ತದೆ.
    – 1 ಜಿಬಿಯು-43 ಬಾಂಬ್ ನಿರ್ಮಿಸಲು ಮಾಡಲಾಗಿರುವ ವೆಚ್ಚ ಬರೋಬ್ಬರಿ 103 ಕೋಟಿ ರೂ.
    – ಈ ಬಾಂಬನ್ನು ಇತರೆ ಬಾಂಬ್‍ಗಳಂತೆ ಯುದ್ಧ ವಿಮಾನ ಬಳಸಿ ಪ್ರಯೋಗಿಸಲು ಸಾಧ್ಯವಿಲ್ಲ.
    – ವಾಯುಸೇನೆ ಬಳಸುವ ಸರಕು-ಸಾಗಾಣಿಕೆ ವಿಮಾನಗಳಲ್ಲಿ ಮಾತ್ರ ಇವುಗಳನ್ನು ಪ್ರಯೋಗಿಸಲು ಸಾಧ್ಯ.
    – 2003ರ ಮಾರ್ಚ್‍ನಲ್ಲಿ ಈ ಬಾಂಬ್‍ನ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು.
    – ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ಹಣಿಯುವ ಸಲುವಾಗಿ ಈ ಬಾಂಬ್‍ನ ಅಭಿವೃದ್ಧಿ.
    – ಇರಾಕ್ ಯುದ್ಧಕ್ಕೂ ಮೊದಲು ಅಭಿವೃದ್ಧಿಪಡಿಸಲಾಗಿತ್ತಾದರೂ ಆ ಯುದ್ಧದಲ್ಲಿ ಬಳಸಿರಲಿಲ್ಲ.
    – ಇದು ಜಿಪಿಎಸ್ ನಿರ್ದೇಶಿತ ಬಾಂಬ್ ಆಗಿದ್ದು ನಿರ್ದಿಷ್ಟ ಪ್ರದೇಶವನ್ನೇ ಟಾರ್ಗೆಟ್ ಮಾಡಿ ದಾಳಿ
    – ಅಮೆರಿಕ ಸೇನೆ ಬಳಿ ಒಟ್ಟು 20 ಜಿಬಿಯು ಬಾಂಬ್‍ಗಳಿವೆ.
    – ಮದರ್ ಆಫ್ ಆಲ್ ಬಾಂಬ್‍ಗಿಂತ ನಾಲ್ಕು ಪಟ್ಟು ಬಲಿಷ್ಠವಾಗಿರುವ ‘ಫಾದರ್ ಆಫ್ ಆಲ್ ಬಾಂಬ್’ ರಷ್ಯಾ ಬಳಿ ಇದೆ.

  • ರಷ್ಯಾದ 2018ರ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬೇಕಂತೆ

    ರಷ್ಯಾದ 2018ರ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬೇಕಂತೆ

    ನವದೆಹಲಿ: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾದ ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್(ಇವಿಎಂ)ಗಳಲ್ಲಿ ಲೋಪವಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಹೊತ್ತಲ್ಲೇ ರಷ್ಯಾ ಭಾರತದ ಇವಿಎಂ ತಂತ್ರಜ್ಞಾನವನ್ನ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಸಲು ಇಚ್ಛಿಸಿದೆ.

    2018ರ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ರಷ್ಯಾ, ಇವಿಎಂಗಳ ಮೂಲಕ ಚುನಾವಣೆಯನ್ನು ಅನಾಯಾಸವಾಗಿ ನಡೆಸುವ ಭಾರತದ ಅನುಭವದಿಂದ ಕಲಿಯಲು ಆಸಕ್ತಿ ತೋರಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

    ರಷ್ಯಾದ ಚುನಾವಣಾ ಆಯೋಗದ ಉಪಾಧ್ಯಕ್ಷರಾದ ನಿಕೋಲೈ ಲೆವಿಚೆವ್ ಇವಿಎಂ ಮೂಲಕ ಓಟಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತೆ ಅನ್ನೋದನ್ನ ಅರ್ಥಮಾಡಿಕೊಳ್ಳಲು ಫೆಬ್ರವರಿಯಲ್ಲಿ ಉತ್ತರಾಖಂಡ್‍ಗೆ ಭೇಟಿ ನೀಡಿದ್ದರು. ಅಲ್ಲದೆ ಉತ್ತರಪ್ರದೇಶ, ಪಂಜಾಬ್, ಮಣಿಪುರ ಮತ್ತು ಗೋವಾದಲ್ಲೂ ಚುನಾವಣಾಯನ್ನ ವೀಕ್ಷಿಸಿದ್ದು, ಇವಿಎಂ ವ್ಯವಸ್ಥೆಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಮಾನವನ ಪಾತ್ರ ಕಡಿಮೆ ಇರೋದನ್ನ ನೋಡಿ ಪ್ರಭಾವಿತರಾಗಿದ್ದಾರೆ ಎಂದು ವರದಿಯಾಗಿದೆ.

    ಲೆವಿಚೆವ್ ಅವರು ದೆಹಲಿಯಲ್ಲಿ ಹಿರಿಯ ಅಧಿಕಾರಿಗಳನ್ನ ಭೇಟಿ ಮಾಡಿ, ಇವಿಎಂ ತಂತ್ರಜ್ಞಾನ ಹಾಗೂ ಅದರ ಬಳಕೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದಕ್ಕೆ ಪ್ರತಿಯಾಗಿ ರಷ್ಯಾ ಮತ ಎಣಿಕೆಗೆ ಆಧುನಿಕ ಟ್ಯಾಬುಲೇಷನ್ ಪದ್ಧತಿಯನ್ನ ಅಭಿವೃದ್ಧಿಪಡಿಸಲು ಭಾರತಕ್ಕೆ ನೆರವಾಗಲಿದೆ ಎಂದು ವರದಿಯಾಗಿದೆ.

    ಮಿತ್ರರಾಷ್ಟ್ರಗಳು ಭಾರತದ ಚುನಾವಣಾ ಆಯೋಗದ ನೆರವು ಕೇಳ್ತಿರೋದು ಇದೇ ಮೊದಲೇನಲ್ಲ. 2014ರಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣಾ ಸಂದರ್ಭದಲ್ಲಿ ಮತದಾರರ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ಬ್ಯಾಲೆಟ್ ಪೇಪರ್ ಕೊರತೆ ಉಂಟಾಗಿತ್ತು. ಆಗ ಭಾರತ ಹೆಚ್ಚುವರಿ ಬ್ಯಾಲೆಟ್ ಪೇಪರನ್ನ ಕಾಬುಲ್‍ಗೆ ಪೂರೈಕೆ ಮಾಡಿತ್ತು. ಭಾರತದಲ್ಲಿ 1999ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಎವಿಎಂ ಬಳಕೆ ಮಾಡಲಾಯ್ತು.

    ಮಧ್ಯಪ್ರದೇಶದ ಇವಿಎಂನಲ್ಲಿ ಲೋಪವಾಗಿದೆ ಎಂದು ತೋರಿಸಿ ದೇಶದೆಲ್ಲಡೆ ಸಂಚಲನಕ್ಕೆ ಕಾರಣವಾದ ವಿಡಿಯೋವೊಂದು ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ  ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ನಡೆಯಲಿರುವ ಎರಡು ಉಪಚುನಾವಣೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ) ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಈ ವ್ಯವಸ್ಥೆಯಲ್ಲಿ ವೋಟ್ ಹಾಕಿದ 7 ಸೆಕೆಂಡ್ ಬಳಿಕ ಮತದಾರರ ಕೈಗೆ ಒಂದು ಪೇಪರ್ ಬರುತ್ತೆ. ಇದರಲ್ಲಿ ವೋಟ್ ಯಾರಿಗೆ ಬಿದ್ದಿದೆ ಎನ್ನುವುದನ್ನು ನೋಡಿಕೊಳ್ಳಬಹುದು. ಆದರೆ ಈ ಪೇಪರನ್ನು ಬೂತ್‍ನಿಂದ ಹೊರಗಡೆ ತೆಗೆದುಕೊಂಡು ಹೋಗುವಂತಿಲ್ಲ. ನಾನು ಹಾಕಿರುವ ಅಭ್ಯರ್ಥಿಗೆ ಮತ ಬಿದ್ದಿದೆಯೋ ಇಲ್ಲವೋ ಎನ್ನುವುದನ್ನು ಖಚಿತ ಪಡಿಸಿ ಅಲ್ಲೇ ಇರುವ ಪೆಟ್ಟಿಗೆಯ ಒಳಗಡೆ ಚೀಟಿಯನ್ನು ಹಾಕಬೇಕಾಗುತ್ತದೆ. ಇವಿಎಂ ಬಗ್ಗೆ ಹಲವು ಮಂದಿ ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಅಳವಡಿಸುವಂತೆ ಚುನವಣಾ ಆಯೋಗಕ್ಕೆ ಕಳೆದ ವರ್ಷ ಸಲಹೆ ನೀಡಿತ್ತು.

    ಇದನ್ನೂ ಓದಿ: ಇವಿಎಂ ಪರೀಕ್ಷೆ ವೇಳೆ ಎಸ್‍ಪಿಗೆ ಹಾಕಿದ ಮತ ಬಿಜೆಪಿಗೆ: ಕಾಂಗ್ರೆಸ್ ಗಂಭೀರ ಆರೋಪ