Tag: russia

  • ಮುಂಬೈ ಮಾಜಿ ಪೊಲೀಸ್ ಆಯುಕ್ತ ನಾಪತ್ತೆ, ರಷ್ಯಾಗೆ ಪರಾರಿ?

    ಮುಂಬೈ ಮಾಜಿ ಪೊಲೀಸ್ ಆಯುಕ್ತ ನಾಪತ್ತೆ, ರಷ್ಯಾಗೆ ಪರಾರಿ?

    ಮುಂಬೈ: ಮುಂಬೈ ನಗರದ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ನಾಪತ್ತೆಯಾಗಿದ್ದು ರಷ್ಯಾಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

    ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಪರಮ್ ಬೀರ್ ಸಿಂಗ್ ಎಲ್ಲಿದ್ದಾರೆ ಎನ್ನುವುದು ನಿಗೂಢವಾಗಿದೆ.

    ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಪರಮ್ ಬೀರ್ ಸಿಂಗ್ ಎಲ್ಲಿದ್ದಾರೆ ಎನ್ನುವುದು ರಾಜ್ಯ ಸರ್ಕಾರ ಅಥವಾ ತನಿಖಾ ಸಂಸ್ಥೆಗಳಿಗೆ ತಿಳಿದಿಲ್ಲ. ಹಲವು ಬಾರಿ ನೋಟಿಸ್ ನೀಡಿದರೂ ತನಿಖಾ ಅಧಿಕಾರಿಗಳ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಮಗಳ ಸಾವಿಗೆ ತೆಲುಗು ನಟ ಕಾರಣ- ಸೌಜನ್ಯ ತಂದೆ ದೂರು 

    ಕೇಂದ್ರ ಗೃಹ ಸಚಿವಾಲಯದ ಜೊತೆ ಅವರನ್ನು ಹುಡುಕುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರಿ ಅಧಿಕಾರಿಯಾಗಿ, ಅವರು ಸರ್ಕಾರದ ಅನುಮತಿಯಿಲ್ಲದೆ ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ ಎಂದರು.

    ಮಹಾರಾಷ್ಟ್ರದ ಗೃಹ ಸಚಿವರಾದ ಅನಿಲ್ ದೇಶ್ ಮುಖ್ ಪ್ರತಿ ತಿಂಗಳು 100 ಕೋಟಿ ರು. ಹಫ್ತಾ ಕೇಳುತ್ತಾರೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪರಮ್ ಬೀರ್ ಸಿಂಗ್ ದೂರು ನೀಡಿದ್ದರು. ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬ್ ಇಟ್ಟ ಸಚಿನ್ ವಾಜೆ ಅವರನ್ನು ಬಳಸಿಕೊಂಡು ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಫೆಬ್ರವರಿ ಮಧ್ಯಭಾಗದಲ್ಲಿ ಅಂದರೆ ಫೆಬ್ರವರಿ 6ರಿಂದ 16ರ ಮಧ್ಯೆ ಅನಿಲ್ ದೇಶ್‍ಮುಖ್ ಅವರು ಕೆಲವು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಪರಮ್ ಬೀರ್ ಸಿಂಗ್ ಪತ್ರದಲ್ಲಿ ದೂರಿದ್ದರು.

    ಈ ಪತ್ರ ಬೆಳಕಿಗೆ ಬಂದ ಬೆನ್ನಲ್ಲೇ ಬಿಜೆಪಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಭಾರೀ ಟೀಕೆ ಮಾಡತೊಡಗಿತು. ಮಾಜಿ ಸಿಎಂ ದೇವೇಂದ್ರ ಫಡ್ನಾವೀಸ್ ದಾಖಲೆಗಳ ಮೇಲೆ ದಾಖಲೆಗಳನ್ನು ಬಿಡುಗಡೆ ಮಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಟೀಕೆ ಜಾಸ್ತಿ ಆಗುತ್ತಿದ್ದಂತೆ ಅನಿಲ್ ದೇಶ್ ಮುಖ್ ರಾಜೀನಾಮೆ ಮಂತ್ರಿ ಸ್ಥಾನಕ್ಕೆ ನೀಡಿದ್ದರು. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು ಪರಮ್ ಬೀರ್ ಪ್ರಮುಖ ಸಾಕ್ಷಿಯಾಗಿದ್ದಾರೆ.

    ಮುಂಬೈ ಪೊಲೀಸರು ಪರಮ್ ಬಿರ್ ಸಿಂಗ್ ವಿರುದ್ಧ ಜೂನ್ ತಿಂಗಳಿನಲ್ಲಿ 4 ಎಫ್‍ಐಆರ್ ದಾಖಲಿಸಿದ್ದಾರೆ. ಬಿಲ್ಡರ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸುಲಿಗೆ, ವಂಚನೆ, ನಕಲಿ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಅಡಿ ಎಫ್‍ಐಆರ್ ದಾಖಲಾಗಿದೆ.

  • ಗಡ್ದಧಾರಿಯಾಗಿ ರಷ್ಯಾದ ಬೀದಿಯಲ್ಲಿ ಸಲ್ಮಾನ್ ಅಲೆದಾಟ – ಫೋಟೋ ವೈರಲ್

    ಗಡ್ದಧಾರಿಯಾಗಿ ರಷ್ಯಾದ ಬೀದಿಯಲ್ಲಿ ಸಲ್ಮಾನ್ ಅಲೆದಾಟ – ಫೋಟೋ ವೈರಲ್

    ಮುಂಬೈ: ಬಾಲಿವುಡ್ ಬ್ಯಾಡ್ ಬಾಯ್ ನಟ ಸಲ್ಮಾನ್ ಖಾನ್ ಸದಾ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಹ್ಯಾಂಡ್‍ಸಮ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಲ್ಲು ಏನೇ ಸ್ಟೈಲ್ ಮಾಡಿದರೂ ಅದು ಬಾಲಿವುಡ್‍ನಲ್ಲಿ ಟ್ರೆಂಡ್ ಸೆಟ್ ಮಾಡಿಬಿಡುತ್ತದೆ. ಸದ್ಯ ಸಲ್ಮಾನ್‍ಖಾನ್ ಗಡ್ಡ ಬಿಟ್ಟುಕೊಂಡು ರಷ್ಯಾದ ಬೀದಿಯಲ್ಲಿ ಅಲೆದಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಹೌದು, ಬಾಲಿವುಡ್ ಬ್ಯಾಚುಲರ್ ಎಂದೇ ಫೇಮಸ್ ಆಗಿರುವ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ಬಹು ನಿರೀಕ್ಷಿತ ಟೈಗರ್-3 ಸಿನಿಮಾದ ಶೂಟಿಂಗ್ ರಷ್ಯಾದಲ್ಲಿ ನಡೆಯುತ್ತಿದೆ. ಸದ್ಯ ಈ ಸಿನಿಮಾದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಕೆಂಪು ಬಣ್ಣದ ಉದ್ದ ದಾಡಿ ಮತ್ತು ಉದ್ದ ಕೂದಲು ಬಿಟ್ಟುಕೊಂಡು ರಷ್ಯಾದ ಬೀದಿಯಲ್ಲಿ ಓಡಾಡಿದ್ದಾರೆ. ಈ ನ್ಯೂ ಲುಕ್‍ನಲ್ಲಿ ಸಲ್ಮಾನ್ ಖಾನ್ ಸಖತ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಅವರ ಗುರುತೆ ಸಿಗದಂತೆ ಬದಲಾಗಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಸಲ್ಮಾನ್ ಕಾನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನೂ ಓದಿ:ಸಲ್ಮಾನ್ ಖಾನ್‍ಗೆ ಮಂಡಿಯೂರಿ ಧನ್ಯವಾದ ತಿಳಿಸಿದ ರಾಖಿ ಸಾವಂತ್

    ಏಕ್ ತಾ ಟೈಗರ್, ಟೈಗರ್ ಜಿಂದಾ ಹೈ ಸಿನಿಮಾದ ನಂತರ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಟೈಗರ್-3 ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಸಲ್ಮಾನ್ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೆ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಶೇಷವೆಂದರೆ ಈ ಸಿನಿಮಾದ ಅಥಿತಿ ಪಾತ್ರದಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಕೂಡ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇದೆ.  ಇದನ್ನೂ ಓದಿ: ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿದ ಸಲ್ಮಾನ್ ಖಾನ್

  • ಸಿಂಗಲ್ ಡೋಸ್ ಸ್ಪುಟ್ನಿಕ್ ಲೈಟ್ ವ್ಯಾಕ್ಸಿನ್ ಸೆಪ್ಟೆಂಬರ್​​​ಗೆ ಲಭ್ಯ – ಬೆಲೆ 750 ರೂ.

    ಸಿಂಗಲ್ ಡೋಸ್ ಸ್ಪುಟ್ನಿಕ್ ಲೈಟ್ ವ್ಯಾಕ್ಸಿನ್ ಸೆಪ್ಟೆಂಬರ್​​​ಗೆ ಲಭ್ಯ – ಬೆಲೆ 750 ರೂ.

    ನವದೆಹಲಿ: ಭಾರತದಲ್ಲಿ ರಷ್ಯಾದ ಕೊರೊನಾ ಲಸಿಕೆ ಸ್ಪುಟ್ನಿಕ್ ಲೈಟ್ ಸೆಪ್ಟೆಂಬರ್ ಗೆ ಲಭ್ಯವಾಗಲಿದೆ. ಈ ಲಸಿಕೆ ಸಿಂಗಲ್ ಡೋಸ್ ಆಗಿದ್ದು, 750 ರೂ. ಬೆಲೆ ನಿಗದಿಪಡಿಸಲಾಗಿದೆ ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ಲೈಟ್ ತಯಾರಿಕಾ ರಷ್ಯನ್ ಡೆರೆಕ್ಟ್ ಇನ್‍ವೆಸ್ಟಮೆಂಟ್ ಫಂಡ್ (ಆರ್ ಡಿಎಫ್)ನ ಪಾರ್ಟನರ್ ಕಂಪನಿ ಪೈನಸಿಯಾ ಬಯೋಟೆಕ್ ಭಾರತದಲ್ಲಿ ಬಳಕೆಗೆ ತುರ್ತು ಅನುಮತಿಯನ್ನು ಕೇಳಿದೆ.

    ರಷ್ಯಾದ ಲಸಿಕೆಯಾಗಿರುವ ಸ್ಪುಟ್ನಿಕ್ ವಿಗೆ ಏಪ್ರಿಲ್ 12ರಂದು ಭಾರತ ತುರ್ತು ಅನುಮೋದನೆ ನೀಡಿತ್ತು. ಸದ್ಯ ಈ ಲಸಿಕೆ 65 ದೇಶಗಳಲ್ಲಿ ನೀಡಲಾಗುತ್ತಿದೆ. ಏಪ್ರಿಲ್ ನಲ್ಲಿ ಅನುಮತಿ ದೊರೆತರೂ ಮೇನಲ್ಲಿ ಈ ಲಸಿಕೆಯನ್ನ ದೇಶದ ಜನರಿಗೆ ನೀಡಲು ಆರಂಭಿಸಲಾಯ್ತು. ಜೂನ್, ಜುಲೈನಲ್ಲಿ ವ್ಯಾಕ್ಸಿನ್ ಪೂರೈಕೆಯನ್ನು ಏರುಪೇರಾಗಿದ್ದರಿಂದ ಲಸಿಕಾಕರಣ ಕೊಂಚ ನಿಧಾನಗತಿಯಲ್ಲಿದೆ. ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಸ್ಪುಟ್ನಿಕ್ ವಿ ಲಸಿಕಾಕರಣ ವೇಗ ಪಡೆದುಕೊಳ್ಳಲಿದೆ ಎಂದು ವರದಿಯಾಗಿದೆ.

    ಏನಿದು ಸ್ಪುಟ್ನಿಕ್ ಲೈಟ್?
    ಸ್ಪುಟ್ನಿಕ್ ಲೈಟ್ ಹೊಸ ಲಸಿಕೆ ಅಲ್ಲ. ರಷ್ಯಾ ನೀಡುತ್ತಿರುವ ಸ್ಪುಟ್ನಿಕ್ ವಿ ಯ ಎರಡು ಡೋಸ್ ಗಳ ಮೊದಲನೇ ಡೋಸ್. ಸ್ಪುಟ್ನಿಕ್ ವಿಯ ಎರಡು ಡೋಸ್ ಗಳು ಬೇರೆ ಬೇರೆ ವೈರಲ್ ಫ್ಯಾಕ್ಟರ್ ಗಳಲ್ಲಿದೆ. ಸ್ಪುಟ್ನಿಕ್ ವಿ ಮೊದಲ ಡೋಸ್ ಶೇ.79.4ರಷ್ಟು ಪರಿಣಾಮಾಕಾರಿಯಾಗಿದ್ದರಿಂದ ಇದಕ್ಕೆ ಸ್ಪುಟ್ನಿಕ್ ಲೈಟ್ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದವರೆಲ್ಲ ಬಾಹುಬಲಿ: ಪ್ರಧಾನಿ ಮೋದಿ

    ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಷಿನ್ ಲಸಿಕೆಯ ಎರಡು ಡೋಸ್ ಪಡೆಯಬೇಕು. ಎರಡೂ ಡೋಸ್ ಪಡೆದ್ರೂ ಇದರ ಪರಿಣಾಮ ಶೇ.80. ಹಾಗಾಗಿ ಸ್ಪುಟ್ನಿಕ್ ವಿಯ ಮೊದಲನೇ ಡೋಸ್ ಲೈಟ್ ಇವರೆಡಕ್ಕಿಂತೂ ಹೆಚ್ಚು ಪರಿಣಾಮಕಾರಿ ಎಂದು ಪ್ರಯೋಗಲಾಯದಲ್ಲಿ ಸಾಬೀತಾಗಿದೆ. ಕಳೆದ ವಾರ ಭಾರತದಲ್ಲಿ ಜಾನ್‍ಸನ್ ಆ್ಯಂಡ್ ಜಾನ್‍ಸನ್ ಸಿಂಗಲ್ ಡೋಸ್ ಲಸಿಕೆ ಬಳಕೆಗೆ ಭಾರತ ಅನುಮತಿ ನೀಡಿದೆ. ಇದನ್ನೂ ಓದಿ: ಮುಂದಿನ ತಿಂಗಳೇ ಮಕ್ಕಳಿಗೆ ಕೊರೊನಾ ಲಸಿಕೆ ಸಾಧ್ಯತೆ: ಐಸಿಎಂಆರ್

    ಸ್ಪುಟ್ನಿಕ್ ಲೈಟ್ ಲಾಭಗಳೇನು?
    * ಈ ಲಸಿಕೆ ಶೇ.79.4 ಪರಿಣಾಮಕಾರಿಯಾಗಿದ್ದು, ಎರಡದಿಂದ ಎಂಟು ಡಿಗ್ರಿ ತಾಪಮಾನದಲ್ಲಿ ಶೇಖರಿಸಡಬಹುದಾಗಿ ದೆ.
    * ಶೇ.100ರಷ್ಟು ಜನರಲ್ಲಿ 10 ದಿನಗಳಲ್ಲಿಯೇ 40 ಪಟ್ಟು ಆಂಟಿಬಾಡಿಗಳ ಉತ್ಪಾದನೆ ಆಗಲಿದೆ.
    * ಕೊರೊನಾ ವೈರಸ್ ನ ಎಲ್ಲ ರೂಪಾಂತರಿಗಳ ವಿರುದ್ಧ ಸ್ಪುಟ್ನಿಕ್ ಲೈಟ್ ಕೆಲಸ ಮಾಡಲಿದೆ.
    * ವೈರಸ್ ಎಸ್-ಪ್ರೋಟಿನ್ ವಿರುದ್ಧ ಇಮ್ಯೂನ್ ರೆಸ್ಪಾನ್ಸ್ ಡೆವಲಪ್ ಆಗಲಿದೆ.

  • ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ

    ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ

    – ಏರ್ ಪೋರ್ಟ್ ನಲ್ಲಿಯೇ ಉಳಿದ ಅರ್ಧ ಹಣ

    ಕಾಬೂಲ್: ತಾಲಿಬಾನಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾಜಿ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆಯುವಾಗ ನಾಲ್ಕು ಕಾರ್ ಮತ್ತು ಒಂದು ಹೆಲಿಕಾಪ್ಟರ್ ನಲ್ಲಿ ಅಪಾರ ಪ್ರಮಾಣದ ನಗದು ತೆಗೆದುಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ. ಆದ್ರೆ ಎಲ್ಲವೂ ಹಣ ತೆಗೆದುಕೊಂಡ ಹೋಗಲಾಗದೇ ಕೆಲ ನಗದನ್ನು ಕಾಬೂಲ್ ವಿಮಾನ ನಿಲ್ದಾಣದಲ್ಲಿಯೇ ಬಿಟ್ಟುಹೋಗಿರೋದು ರಷ್ಯಾದ ರಾಯಭಾರಿ ಕಚೇರಿ ದೃಢಪಡಿಸಿದೆ.

    ತಾಲಿಬಾನಿಗಳು ಸಹ ವಿಮಾನ ನಿಲ್ದಾಣದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿರೋದನ್ನು ಹೇಳಿಕೊಂಡಿದ್ದರು. ಇದು ಸುಮಾರು 50 ಲಕ್ಷ ಡಾಲರ್ ಎಂದು ಹೇಳಲಾಗುತ್ತಿದ್ದು, ಆದ್ರೆ ಈ ವರದಿಯನ್ನು ದೃಢಪಡಿಸಿರಲಿಲ್ಲ. ಇದೀಗ ಕಾಬೂಲ್ ನಲ್ಲಿರುವ ರಷ್ಯಾದ ರಾಯಭಾರಿ ಕಚೇರಿ ಈ ಸುದ್ದಿಯನ್ನು ಖಚಿತಪಡಿಸಿದೆ. ಅಫ್ಘಾನಿಸ್ತಾನ ತಾಲಿಬಾನಿಗಳ ಕೈ ವಶವಾದ್ರೂ ತನ್ನ ರಾಯಭಾರಿ ಕಚೇರಿಯನ್ನು ಮುಚ್ಚದಿರಲು ರಷ್ಯಾ ನಿರ್ಧರಿಸಿದೆ. ನಾವು ತಾಲಿಬಾನಿಗಳ ಚಲನವಲನಗಳನ್ನು ಇಲ್ಲಿಂದಲೇ ಗಮನಿಸುತ್ತೇವೆ. ಅಂದ್ರೆ ಅವರ ಸರ್ಕಾರವನ್ನು ಒಪ್ಪಿಕೊಂಡಂತೆ ಅಲ್ಲ ಎಂದು ಸ್ಪಷ್ಟಪಡಿಸಿದೆ.

    ಈ ಕುರಿತು ಮಾಹಿತಿ ನೀಡಿರುವ ಕಾಬೂಲ್ ನಲ್ಲಿರುವ ದೂತವಾಸ ಕಚೇರಿಯ ವಕ್ತಾರೆ ನಿಕಿತಾ ಐಚಿಂಕೋ, ಭಾನುವಾರವೇ ಘನಿ ದೇಶ ತೊರೆದಿದ್ದಾಯ್ತು. ಹೋಗುವಾಗ ನಾಲ್ಕು ಕಾರ್ ಮತ್ತು ಹೆಲಿಕಾಪ್ಟರ್ ನಲ್ಲಿ ನಗದು ರವಾನಿಸಲಾಗಿತ್ತು. ಆದ್ರೆ ಏಕಕಾಲದಲ್ಲಿ ಅಷ್ಟು ನಗದು ತೆಗೆದುಕೊಂಡ ಹೋಗಲಾರದ ಘಣಿ ಕೆಲ ಹಣವನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳಿಗೆ ಹೆದರಿ 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನ

    ಅಶ್ರಫ್ ಘನಿ ಮತ್ತು ಮಾಜಿ ಉಪಾಧ್ಯಕ್ಷ ಸಾಲೇಹ ಭಾನುವಾರವೇ ತಮ್ಮ ದೇಶದ ಜನತೆಯನ್ನು ಬಿಟ್ಟು ಅಫ್ಘಾನಿಸ್ತಾನ ತೊರೆದಿದ್ದರು. ಈ ವೇಳೆ ಇಬ್ಬರ ಜೊತೆ ಆಪ್ತರು ಮಾತ್ರ ಪ್ರಯಾಣಿಸಿದ್ದಾರೆ ಎನ್ನಲಾಗಿದೆ. ಆದ್ರೆ ಕಾಬೂಲ್ ನಿಂದ ಯಾವ ವಿಮಾನದಿಂದ ಎಲ್ಲಿಗೆ ಹೋದ್ರು ಎಂಬುದರ ಬಗ್ಗೆ ಇದುವರೆಗೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಕೆಲ ಮಾಧ್ಯಮಗಳ ಪ್ರಕಾರ ಘನಿ ತಜಕೀಸ್ತಾನ ಎಂದು ಹೇಳುತ್ತಿದ್ರೆ, ಕೆಲವರ ಪ್ರಕಾರ ಅಮೆರಿಕ ತಲುಪಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

    ಅಶ್ರಫ್ ಘನಿ ಹೇಳಿದ್ದೇನು?:
    ನನಗೆ ಕಠಿಣ ಸವಾಲು ಎದುರಾಗಿತ್ತು. ತಾಲಿಬಾನಿಗಳನ್ನು ಎದುರಿಸಲು ನಿಂತಿದ್ದೆ. ಅವರೆಲ್ಲರೂ ಶಸ್ತ್ರಸಜ್ಜಿ ತರಾಗಿ ರಾಷ್ಟ್ರಪತಿ ಭವನ ಪ್ರವೇಶಿಸಲು ಸಿದ್ಧರಾಗಿದ್ದರು. ನಾನು ಅಫ್ಘಾನಿಸ್ತಾನದಿಂದ ದೂರ ಹೋಗಬೇಕೆಂಬುವುದು ಅವರ ಡಿಮ್ಯಾಂಡ್ ಆಗಿತ್ತು. ಕಳೆದ 20 ವರ್ಷಗಳಿಂದ ದೇಶದ ಜನರ ರಕ್ಷಣೆಯಲ್ಲಿ ತೊಡಗಿಕೊಂಡಿದ್ದೇನೆ. ಒಂದು ವೇಳೆ ಅವರ ಡಿಮ್ಯಾಂಡ್ ಒಪ್ಪದಿದ್ರೆ ಯುದ್ಧವೇ ನಡೆಯತ್ತಿತ್ತು. ಈ ಯುದ್ಧದಲ್ಲಿ ನೂರಾರು ಜನ ಪೊಲೀಸರು ಹುತಾತ್ಮರಾಗುತ್ತಿದ್ದರು. ರಕ್ತ ಹರಿಸೋದು ನನಗೆ ಇಷ್ಟವಿರಲಿಲ್ಲ. ಅವರ ಬೇಡಿಕೆಯಂತೆ ಆಧಿಕಾರ ಹಸ್ತಾಂತರಿಸಿ ದೇಶ ತೊರೆದೆ. ಇಲ್ಲವಾದಲ್ಲಿ 60 ಲಕ್ಷ ಜನಸಂಖ್ಯೆಯುಳ್ಳು ಈ ನಗರ ದೊಡ್ಡ ದುರಂತಕ್ಕೆ ಸಾಕ್ಷಿಯಾಗುತ್ತಿತ್ತು ಎಂದು ಹೇಳಿದ್ದಾರೆ.  ಇದನ್ನೂ ಓದಿ: ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು

    https://www.youtube.com/watch?v=ckd3p_Ra2VI

  • ರಷ್ಯಾದಲ್ಲಿ ಬಸ್ ಸ್ಫೋಟ – ಮಹಿಳೆ ಸಾವು, 17 ಮಂದಿಗೆ ಗಾಯ

    ರಷ್ಯಾದಲ್ಲಿ ಬಸ್ ಸ್ಫೋಟ – ಮಹಿಳೆ ಸಾವು, 17 ಮಂದಿಗೆ ಗಾಯ

    ಮಾಸ್ಕೋ: ಮಧ್ಯ ರಷ್ಯಾದ ವೊರೊನೆಜ್ ನಗರದಲ್ಲಿ ಗುರುವಾರ ಸಂಜೆ ಸಂಭವಿಸಿದ ಬಸ್ಸಿನ ಸ್ಫೋಟದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಸುಮಾರು 17 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

    ಇದು ಭಯೋತ್ಪಾದಕರು ನಡೆಸಿರುವ ಕೃತ್ಯವೋ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬಸ್ಸಿನಲ್ಲಿ 35 ಜನ ಪ್ರಯಾಣಿಕರಿದ್ದರು ಎಂದು ಬಸ್ ಚಾಲಕ ತಿಳಿಸಿದ್ದಾರೆ. ಸದ್ಯ ಘಟನೆಯಲ್ಲಿ ಗಾಯಗೊಂಡವರ ಸಂಖ್ಯೆ 18ಕ್ಕೇರಿದ್ದು, ಅವರಲ್ಲಿ ಓರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ವೊರೊನೆಜ್ ಗವರ್ನರ್ ಅಲೆಕ್ಸಾಂಡರ್ ಗುಸೆವ್ ಹೇಳಿದ್ದಾರೆ.

    ಬಸ್ ಶಾಪಿಂಗ್ ಸೆಂಟರ್ ಬಳಿ ಇರುವ ನಿಲ್ದಾಣದಲ್ಲಿ ಸ್ಫೋಟಗೊಂಡಿದ್ದು, ದಾರಿಹೋಕರೊಬ್ಬರು ತಮ್ಮ ಮೊಬೈಲ್‍ನಲ್ಲಿ ವೀಡಿಯೋ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಬಸ್ ಸ್ಫೋಟಗೊಂಡು ಮೇಲ್ಛಾವಣಿ ಹಾಗೂ ಕಿಟಕಿಗಳು ಕಿತ್ತುಹೋಗುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ:BJP ಜೊತೆಗೆ ಟ್ವಿಟ್ಟರ್ ಕೈಜೋಡಿಸಿ ಪ್ರಜಾತಂತ್ರ ಹತ್ತಿಕ್ಕುವ ಕೃತ್ಯದಲ್ಲಿ ತೊಡಗಿದೆ: ಪ್ರಿಯಾಂಕಾ ಗಾಂಧಿ

  • ಸೀರೆಯುಟ್ಟು ವಿದೇಶದಲ್ಲಿ ಸುತ್ತಾಡಿದ ತಾಪ್ಸಿ ಪನ್ನು

    ಸೀರೆಯುಟ್ಟು ವಿದೇಶದಲ್ಲಿ ಸುತ್ತಾಡಿದ ತಾಪ್ಸಿ ಪನ್ನು

    ಮಾಸ್ಕೋ: ನಟಿ ತಾಪ್ಸಿ ಪನ್ನು ಸೀರೆಯುಟ್ಟು ವಿದೇಶದಲ್ಲಿ ಸುತ್ತಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ತಾಪ್ಸಿ ಪನ್ನು ತಮ್ಮತಂಗಿ ಶಗುನ್ ಪನ್ನು ಜೊತೆಗೆ ವಿದೇಶದಲ್ಲಿ ರಜೆಯ ಮಜದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಾಪ್ಸಿ ಅವರ ಪ್ರವಾಸದ ಚಿತ್ರಗಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೆಚ್ಚಾಗಿ ತಾಪ್ಸಿ ಸೀರೆಯನ್ನು ತೊಟ್ಟಿದ್ದಾರೆ. ಸೀರೆಯುಟ್ಟು ಶೂ ತೊಟ್ಟು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ತಾಪ್ಸಿ ಹಂಚಿಕೊಂಡಿದ್ದಾರೆ. ನೆಟ್ಟಗರು ಸೀರೆಯಲ್ಲಿ ತಾಪ್ಸಿ ವಿದೇಶ ಸುತ್ತಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  SSLC ಪರೀಕ್ಷೆ ನಡೆಸಬಾರದು: ವಾಟಳ್ ನಾಗರಾಜ್

     

    View this post on Instagram

     

    A post shared by Taapsee Pannu (@taapsee)

    ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ತಾಪ್ಸಿ ಸದ್ಯ ಕೊಂಚ ಬ್ರೇಕ್ ಪಡೆದಿದ್ದು ವಿದೇಶ ಪ್ರವಾಸದಲ್ಲಿದ್ದಾರೆ. ತನ್ನ ತಂಗಿಯ ಜೊತೆಗೆ ರಷ್ಯಾದ ಮಾಸ್ಕೋನಲ್ಲಿ ಸುತ್ತಾಡುತ್ತಿದ್ದಾರೆ. ವಿದೇಶ ಪ್ರವಾಸದಲ್ಲೂ ತಾಪ್ಸಿ ಭಾರತೀಯ ಸಂಸ್ಕೃತಿಯ ಉಡುಪನ್ನು ತೊಟ್ಟಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

     

    View this post on Instagram

     

    A post shared by Taapsee Pannu (@taapsee)

    ಬಾಯ್‍ಫ್ರೆಂಡ್ ಮಥಿಯಾಸ್ ಜತೆ ಲವ್ ರಿಲೇಶನ್ ಶಿಪ್‍ನಲ್ಲಿದ್ದೇನೆ. ಆದರೆ ಸದ್ಯಕ್ಕೆ ಮದುವೆ ಬಗ್ಗೆ ಯೋಚನೆ ಮಾಡಿಲ್ಲ. ತನಗೆ ಮಕ್ಕಳು ಬೇಕೆನಿಸಿದಾಗ ಮದುವೆಯಾಗುತ್ತೇನೆ. ಸದ್ಯಕ್ಕೆ ಆ ಆಲೋಚನೆ ಇಲ್ಲ. ಸದ್ಯಕ್ಕೆ ಏನಿದ್ದರೂ ತನ್ನ ಗಮನವೆಲ್ಲ ಸಿನಿಮಾದತ್ತ ಇದೆ. ತಾನು ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಸದಾ ಪ್ರತ್ಯೇಕವಾಗಿ ನೋಡುತ್ತೇನೆ. ಎರಡನ್ನೂ ಮಿಕ್ಸ್ ಮಾಡುವುದಿಲ್ಲ ಎಂದು ಲವ್ ಲೈಫ್ ಹಾಗೂ ಬಾಯ್ ಫ್ರೆಂಡ್ ಬಗ್ಗೆ ಈ ಹಿಂದೆ ತಾಪ್ಸಿ ಹೇಳಿಕೊಂಡಿದ್ದರು.

    ನಟಿ ತಾಪ್ಸಿ ಪನ್ನು ಸದಾ ಒಂದಿಲ್ಲೊಂದು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುತ್ತಾರೆ. ಈ ಬಾರಿ ಅವರು ಹಸೀನ್ ದಿಲ್‍ರುಬಾ ಚಿತ್ರಕ್ಕಾಗಿ ಹಾಟ್ ಅವತಾರ ತಾಳಿದ್ದಾರೆ. ಇತ್ತಿಚೇಗೆ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

  • ರಷ್ಯಾ ಪ್ರವಾಸದೊಂದಿಗೆ ಲಸಿಕೆ – ಏನಿದು ವ್ಯಾಕ್ಸಿನ್ ಟೂರಿಸಂ? ಬೆಲೆ ಎಷ್ಟು?

    ರಷ್ಯಾ ಪ್ರವಾಸದೊಂದಿಗೆ ಲಸಿಕೆ – ಏನಿದು ವ್ಯಾಕ್ಸಿನ್ ಟೂರಿಸಂ? ಬೆಲೆ ಎಷ್ಟು?

    ನವದೆಹಲಿ: ಭಾರತದಲ್ಲಿ ಲಸಿಕೆ ಕೊರತೆ ಕಾಡುತ್ತಿರುವ ಬೆನ್ನಲ್ಲೇ ಹಲವು ಭಾರತೀಯರು ವಿದೇಶದಲ್ಲಿ ಲಸಿಕೆ ಹಾಕಿಸಿಕೊಂಡು ಬರಲು ಯೋಜನೆ ರೂಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ ರಷ್ಯಾ ಭರ್ಜರಿ ಆಫರ್ ನೀಡಿದ್ದು, ಲಸಿಕೆ ಪ್ರವಾಸೋದ್ಯಮದ ಪರಿಕಲ್ಪನೆಯನ್ನು ಜಾರಿಗೆ ತಂದಿದೆ.

    ದೆಹಲಿಯ ಟ್ರಾವೆಲ್ ಏಜೆನ್ಸಿಯೊಂದು ವ್ಯಾಕ್ಸಿನ್ ಟೂರಿಸಂ ಪ್ಯಾಕೇಜ್ ಘೊಷಿಸಿದೆ. ಇದರಲ್ಲಿ 24 ದಿನಗಳ ರಷ್ಯಾ ಪ್ರವಾಸ ಸೇರಿದಂತೆ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಳ್ಳಬಹುದಾಗಿದೆ. ಎರಡೂ ಡೋಸ್ ವ್ಯಾಕ್ಸಿನ್ ಪಡೆಯಲು 21 ದಿನಗಳ ಅಂತರವಿದ್ದು, ಈ ಸಮಯದಲ್ಲಿ ಪ್ರಯಾಣಿಕರು ರಷ್ಯಾ ಪ್ರವಾಸ ಮಾಡಬಹುದಾಗಿದೆ. 24 ದಿನಗಳ ಈ ಪ್ರವಾಸಕ್ಕೆ 1.29 ಲಕ್ಷ ರೂ. ದರವನ್ನು ನಿಗದಿ ಮಾಡಲಾಗಿದೆ.

    ಟ್ರಾವೆಲ್ ಏಜೆನ್ಸಿ ಅಧಿಕಾರಿಯ ಹೇಳಿಕೆಯನ್ನಾಧರಿಸಿ ಈ ಕುರಿತು ವರದಿ ಮಾಡಲಾಗಿದ್ದು, ಮಾಸ್ಕೋದಲ್ಲಿ ಲ್ಯಾಂಡ್ ಆದ ಮರುದಿನವೇ ಪ್ರಯಾಣಿಕರಿಗೆ ಸ್ಪುಟ್ನಿಕ್-ವಿ ಲಸಿಕೆಯ ಮೊದಲ ಡೋಸ್ ನೀಡಲಾಗುತ್ತದೆ. ಬಳಿಕ 2ನೇ ಡೋಸ್ ಲಸಿಕೆ ಪಡೆಯಲು 21 ದಿನಗಳ ಅಂತರವಿದ್ದು, ಈ ವೇಳೆ ರಷ್ಯಾ ಪ್ರವಾಸ ಮಾಡಬಹುದು. 2ನೇ ಡೋಸ್ ಲಸಿಕೆ ಪಡೆದು, ಭಾರತಕ್ಕೆ ಮರಳಬಹುದಾಗಿದೆ.

    ವಿಶ್ವದ ಮೊದಲ ಕೊರೊನಾ ವ್ಯಾಕ್ಸಿನ್ ಅಭಿವೃದ್ಧಿ ಪಡಿಸಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2020ರ ಆಗಸ್ಟ್ 11 ರಂದು ಘೋಷಿಸಿದ್ದರು. ಪುಟಿನ್ ಪುತ್ರಿ ಮರಿಯಾ ಪುಟಿನ್‍ಗೆ ಮೊದಲ ಸ್ಪುಟ್ನಿಕ್ ಲಸಿಕೆ ನೀಡಲಾಗಿತ್ತು. ಉತ್ತಮ ಪರಿಣಾಮ ಬೀರಿದ್ದು, ಸಮೃದ್ಧವಾಗಿ ಆಂಟಿಬಾಡಿಗಳು(ಪ್ರತಿಕಾಯಗಳು) ಉತ್ಪತ್ತಿಯಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೋಂಕನ್ನು ನಿಯಂತ್ರಣಕ್ಕೆ ಈ ಲಸಿಕೆ ತರುತ್ತದೆ ಎಂದು ವರದಿಯಾಗಿದೆ. ಮಾಸ್ಕೋದಲ್ಲಿರುವ ಸೆಚನೋವ್ ವಿವಿಯ ಗಮಾಲಿಯಾ ಸಂಶೋಧನಾ ಕೇಂದ್ರ ಮತ್ತು ರಷ್ಯಾ ರಕ್ಷಣಾ ಸಚಿವಾಲಯ ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.

  • ರಾಯಚೂರು ಮೂಲದ ಕಂಪನಿಯಿಂದ ಕೋವಿಡ್ ಲಸಿಕೆ ಉತ್ಪಾದನೆ

    ರಾಯಚೂರು ಮೂಲದ ಕಂಪನಿಯಿಂದ ಕೋವಿಡ್ ಲಸಿಕೆ ಉತ್ಪಾದನೆ

    – ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆಗೆ ರಷ್ಯಾ ಜೊತೆ ಒಪ್ಪಂದ
    – ವರ್ಷಕ್ಕೆ 100 ಮಿಲಿಯನ್ ಡೋಸ್ ಉತ್ಪಾದನೆಗೆ ಯೋಜನೆ
    – ಎರಡು ತಿಂಗಳಲ್ಲಿ ರಾಜ್ಯದಲ್ಲೇ ತಯಾರಾಗಲಿದೆ ಲಸಿಕೆ

    ರಾಯಚೂರು: ರಷ್ಯಾ ಮೂಲದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಇನ್ನು ಮುಂದೆ ರಾಜ್ಯದಲ್ಲೇ ತಯಾರಾಗಲಿದೆ. ರಾಯಚೂರು ಮೂಲದ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಕಂಪನಿ ರಾಜ್ಯದಲ್ಲಿ ಲಸಿಕೆ ಉತ್ಪಾದಿಸಲಿದೆ. ಲಸಿಕೆಯ ಭಾರತೀಯ ಮಾರುಕಟ್ಟೆ ಭಾಗೀದಾರ ಕಂಪನಿ ಡಾ.ರೆಡ್ಡಿಸ್ ಲ್ಯಾಬೋರೇಟರಿಸ್ ಜೊತೆ ಮಾತುಕತೆ ಪೂರ್ಣಗೊಂಡಿದ್ದು ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಫಾರ್ಮಾ ಕಂಪನಿ ಲಸಿಕೆ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದೆ.

    ಬೇಡಿಕೆಗೆ ಅನುಗುಣವಾಗಿ ಲಸಿಕೆ ಪೂರೈಕೆ ಹಾಗೂ ಬೆಲೆ ತಗ್ಗಿಸಲು ದೇಶಿಯ ಕಂಪನಿಗಳೊಂದಿಗೆ ಲಸಿಕೆ ಉತ್ಪಾದನೆಗಾಗಿ ರಷಿಯನ್ ಡೈರೆಕ್ಟ್ ಇನ್ವೆಸ್ಟ್‍ಮೆಂಟ್ ಫಂಡ್(ಆರ್‌ಡಿಐಎಫ್) 6 ಭಾರತೀಯ ಫಾರ್ಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಾಯಚೂರಿನ ಶಿಲ್ಪಾ ಮೆಡಿಕೇರ್ ಲಿ, ಹೆಟೆರೋ ಡ್ರಗ್ಸ್, ವರ್ಚೊ ಲ್ಯಾಬೋರೇಟರಿಸ್, ಪನಾಸಿಯಾ ಬಯೋಟೆಕ್, ಗ್ಲ್ಯಾಂಡ್ ಫಾರ್ಮಾ ಮತ್ತು ಸ್ಟೆಲ್ಲಿಸ್ ಬಯೋಫಾರ್ಮಾ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

    ಶಿಲ್ಪಾ ಮೆಡಿಕೇರ್ ಲಿಮಿಟೆಡ್ ತನ್ನ ಧಾರವಾಡದ ಯುನಿಟ್‍ನಲ್ಲಿ ಲಸಿಕೆ ಉತ್ಪಾದನೆಗೆ ತಯಾರಿ ನಡೆಸಿದೆ. ಧಾರವಾಡದ ಯುನಿಟ್ ವರ್ಷಕ್ಕೆ 100 ರಿಂದ 200 ಮಿಲಿಯನ್ ಡೋಸ್ ಲಸಿಕೆ ಉತ್ಪಾದನಾ ಸಾಮಥ್ರ್ಯ ಹೊಂದಿದ್ದು. 100 ಮಿಲಿಯನ್ ಡೋಸ್ ತಯಾರಿಕೆ ಗುರಿಯಿಟ್ಟುಕೊಳ್ಳಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಮೊದಲ ಡೋಸ್ ಲಸಿಕೆ ತಯಾರಾಗಲಿದೆ ಅಂತ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಕಾಂತ್ ಬತೋಡ ತಿಳಿಸಿದ್ದಾರೆ.

    ಈಗಾಗಲೇ ರಷ್ಯಾದಿಂದ ಭಾರತಕ್ಕೆ ಎರಡು ಬ್ಯಾಚ್ ಸ್ಪುಟ್ನಿಕ್ ವಿ ಲಸಿಕೆ ಬಂದಿದೆ. ಮೇ 1 ರಂದು 1.5 ಲಕ್ಷ ಡೋಸ್ ಮೊದಲ ಬ್ಯಾಚ್, ಮೇ 14 ರಂದು 60 ಸಾವಿರ ಡೋಸ್ ಎರಡನೇ ಬ್ಯಾಚ್ ಸ್ಪುಟ್ನಿಕ್ ವಿ ಲಸಿಕೆ ಭಾರತಕ್ಕೆ ಬಂದಿದ್ದು, ಹೈದರಾಬಾದ್‍ನ ಡಾ.ರೆಡ್ಡಿಸ್ ಲ್ಯಾಬ್ ಲಸಿಕೆ ಪಡೆದುಕೊಂಡಿದೆ. ಒಂದು ಡೋಸ್‍ನ ಬೆಲೆ 995 ರೂ ಇದ್ದು, ಜನ ಸಾಮಾನ್ಯರಿಗೆ ದುಬಾರಿಯಾಗಲಿದೆ. ಹೀಗಾಗಿ ಆರ್‌ಡಿಐಎಫ್ ಜೊತೆ ಒಪ್ಪಂದ ಮಾಡಿಕೊಂಡಿರುವ ರೆಡ್ಡಿಸ್ ಲ್ಯಾಬ್ ಸ್ಥಳೀಯವಾಗಿ ಉತ್ಪಾದನೆಗೆ ಒತ್ತುನೀಡಿದ್ದು. ದೇಶಿಯ 6 ಕಂಪನಿಗಳಿಗೆ ಲಸಿಕೆ ತಯಾರಿಕೆಗೆ ಅವಕಾಶ ಮಾಡಿಕೊಟ್ಟಿದೆ.

    ಶೇಕಡಾ 15 ರಷ್ಟು ಪ್ರಮಾಣದ ಲಸಿಕೆಯನ್ನು ರಷ್ಯಾದಿಂದ ಆಮದು ಮಾಡಿಕೊಂಡು, ಉಳಿದ ಬೇಡಿಕೆಯನ್ನು ಪೂರೈಸಲು ದೇಶಿಯ ಕಂಪನಿಗಳಲ್ಲೇ ಲಸಿಕೆ ತಯಾರಿಸಲು ಯೋಜಿಸಲಾಗಿದೆ. ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಸುಸಜ್ಜಿತ ಲಸಿಕೆ ತಯಾರಿಕೆ ಘಟಕವನ್ನು ಧಾರವಾಡದಲ್ಲಿ ಹೊಂದಿದ್ದು ಶೀಘ್ರದಲ್ಲೇ ಕಾರ್ಯಾರಂಭಿಸಲಿದೆ.

  • ಭಾರತಕ್ಕೆ ಬಂತು ಮೊದಲ ಹಂತದ ಸ್ಪುಟ್ನಿಕ್ ವಿ ಲಸಿಕೆ

    ಭಾರತಕ್ಕೆ ಬಂತು ಮೊದಲ ಹಂತದ ಸ್ಪುಟ್ನಿಕ್ ವಿ ಲಸಿಕೆ

    – ರಷ್ಯಾ ತಯಾರಿಸಿರುವ ವಿಶ್ವದ ಮೊದಲ ಕೊರೊನಾ ಲಸಿಕೆ

    ಹೈದರಾಬಾದ್: 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನವನ್ನು ವಿಸ್ತರಿಸಿದ ಬೆನ್ನಲ್ಲೇ ಹಲವು ರಾಜ್ಯಗಳಲ್ಲಿ ವ್ಯಾಕ್ಸಿನ್ ಕೊರತೆ ಉಂಟಾಗಿತ್ತು. ಇದೆಲ್ಲದರ ಮಧ್ಯೆ ಇದೀಗ ಮೊದಲ ಹಂತದ ಸ್ಪುಟ್ನಿಕ್ ವಿ ಲಸಿಕೆಯು ರಷ್ಯಾದಿಂದ ಬಂದಿದ್ದು, ಹೈದರಾಬಾದ್‍ಗೆ ಆಗಮಿಸಿದೆ.

    ರಷ್ಯಾ ತಯಾರಿಸಿರುವ ಸ್ಪುಟ್ನಿಕ್ ವಿ ಮೊದಲ ಹಂತದ 1.50 ಲಕ್ಷ ಡೋಸ್ ಲಸಿಕೆ ಈಗ ಹೈದರಾಬಾದ್ ಗೆ ಆಗಮಿಸಿದೆ. ಇನ್ನೂ 30 ಲಕ್ಷ ಡೋಸ್ ಈ ತಿಂಗಳ ನಂತರ ಬರಲಿದೆ. ಈ ಲಸಿಕೆಯ ಡೋಸ್‍ಗಳನ್ನು ರಷ್ಯನ್ ವ್ಯಾಕ್ಸಿನ್ ಪಾರ್ಟರ್ ಆಗಿರುವ ಡಾ.ರೆಡ್ಡಿ ಲ್ಯಾಬರೋಟರಿಯಲ್ಲಿ ದಾಸ್ತಾನು ಮಾಡಲಾಗಿದೆ.

    ಕಸೌಲಿಯ ಸೆಂಟ್ರಲ್ ಡ್ರಗ್ಸ್ ಲ್ಯಾಬರೋಟರಿಯಿಂದ ಅನುಮತಿ ಪಡೆದ ಬಳಿಕ ಡಾ.ರೆಡ್ಡಿ ಲ್ಯಾಬರೋಟರಿ ಸ್ಪುಟ್ನಿಕ್ ವಿ ಲಸಿಕೆಯನ್ನು ವಿತರಿಸಲಿದೆ.

    ಈ ಕುರಿತು ಭಾರತದಲ್ಲಿನ ರಷ್ಯಾ ರಾಯಭಾರಿ ನಿಕೋಲಾಯ್ ಕುಡಶೇವ್ ಅವರು ಟ್ವೀಟ್ ಮಾಡಿದ್ದು, ಕೋವಿಡ್ ಎದುರಿಸಲು ರಷ್ಯಾ ಮತ್ತು ಭಾರತ ಜಂಟಿ ಪ್ರಯತ್ನಗಳನ್ನು ಮುಂದುವರಿಸಿದ್ದು, ಮಾರಣಾಂತಿಕ ಎರಡನೇ ಅಲೆ ತಗ್ಗಿಸಲು ಹಾಗೂ ಜೀವ ಉಳಿಸಲು ಭಾರತ ಸರ್ಕಾರವನ್ನು ಬೆಂಬಲಿಸಲು ಈ ಕ್ರಮ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

    ಸ್ಥಳೀಯ ಉತ್ಪಾದನೆ ಸಹ ಶೀಘ್ರದಲ್ಲೇ ಆರಂಭವಾಗಲಿದೆ. ಬಳಿಕ ಪ್ರತಿ ವರ್ಷ 850 ಮಿಲಿಯನ್ ಡೋಸ್ ಲಸಿಕೆ ಉತ್ಪಾದನೆಯಾಗಲಿದೆ ಎಂದು ತಿಳಿಸಿದ್ದಾರೆ. ಭಾರತ ಔಷಧ ನಿಯಂತ್ರಣ ಮಂಡಳಿಯು ಏಪ್ರಿಲ್ 12ರಂದು ಸ್ಪುಟ್ನಿಕ್ ವಿ ಗೆ ಅನುಮತಿ ನೀಡಿದೆ. ಈ ಲಸಿಕೆ ಶೇ.91.6ರಷ್ಟು ಎಫಿಕೇಸಿ ಹೊಂದಿದೆ. ಸ್ಪುಟ್ನಿಕ್ ವಿ ಕೊರೊನಾ ವಿರುದ್ಧ ಹೋರಾಟದಲ್ಲಿನ ವಿಶ್ವದ ಮೊದಲ ಲಸಿಕೆಯಾಗಿದೆ. ಇದರ ಕ್ಲಿನಿಕಲ್ ಟ್ರಯಲ್ ಡಾಟಾ ಸಹ ದಿ ಲ್ಯಾನ್ಸೆಟ್ ನಲ್ಲಿ ಪ್ರಕಟವಾಗಿದೆ. ಈ ಲಸಿಕೆ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎಂದು ಲ್ಯಾನ್ಸೆಟ್ ಸ್ಪಷ್ಟಪಡಿಸಿದೆ.

  • ಮೂರನೇ ಕೊರೊನಾ ಲಸಿಕೆ ಬಂತು – ರಷ್ಯಾದ ಸ್ಪುಟ್ನಿಕ್ -V ತುರ್ತು ಬಳಕೆಗೆ ಅನುಮತಿ

    ಮೂರನೇ ಕೊರೊನಾ ಲಸಿಕೆ ಬಂತು – ರಷ್ಯಾದ ಸ್ಪುಟ್ನಿಕ್ -V ತುರ್ತು ಬಳಕೆಗೆ ಅನುಮತಿ

    ನವದೆಹಲಿ: ಕೋವಿಶೀಲ್ಡ್, ಕೋವಾಕ್ಸಿನ್ ಬಳಿಕ ದೇಶದಲ್ಲಿ ರಷ್ಯಾದ ಸ್ಪುಟ್ನಿಕ್ V ಲಸಿಕೆ ತುರ್ತು ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದೆ.

    ಇಂದು 1.60 ಲಕ್ಷ ಕೊರೊನಾ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಡಿಸಿಜಿಐ ಅನುಮತಿ ನೀಡಿದೆ. 2020ರ ಆಗಸ್ಟ್‌ನಲ್ಲಿ ರಷ್ಯಾ ಈ ಲಸಿಕೆಯನ್ನು ಬಿಡುಗಡೆ ಮಾಡಿತ್ತು. ಕೊರೊನಾ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ವಿತರಣೆ ಹೆಚ್ಚಿಸಲು ತಜ್ಞರ ಸಮಿತಿ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು. ಈ ಶಿಫಾರಸಿನ ಹಿನ್ನೆಲೆಯಲ್ಲಿ ಡಿಸಿಜಿಐ ಅನುಮತಿ ನೀಡಿದೆ.

    ಸ್ಪುಟ್ನಿಕ್ V ಲಸಿಕೆಯನ್ನು ಭಾರತದಲ್ಲಿ ಡಾ| ರೆಡ್ಡೀಸ್ ಕಂಪನಿ ಜನರ ಮೇಲೆ ಪ್ರಯೋಗ ನಡೆಸುತ್ತಿದ್ದು, ಅನುಮತಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಸ್ಪುಟ್ನಿಕ್ ಲಸಿಕೆಯನ್ನು ಭಾರತದಲ್ಲಿ ಹೈದರಾಬಾದ್‍ನ ಡಾ| ರೆಡ್ಡೀಸ್ ಲ್ಯಾಬೋರೇಟರಿ, ಹೆಟೆರೊ ಬಯೋಫಾರ್ಮಾ, ಗ್ಲಾಂಡ್ ಫಾರ್ಮಾ, ಸ್ಟೆಲಿಸ್ ಬಯೋಫಾರ್ಮಾ ಹಾಗೂ ವಿಕ್ರೋ ಬಯೋಟೆಕ್ ಕಂಪನಿಗಳಲ್ಲಿ ಈಗಾಗಲೇ ತಯಾರಿಸಲಾಗುತ್ತಿದೆ.

    ಭಾರತದಲ್ಲಿ ಸದ್ಯ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳಿಗಷ್ಟೇ ಅನುಮತಿಯಿದ್ದು, ಅವುಗಳನ್ನೇ ಜನರಿಗೆ ನೀಡಲಾಗುತ್ತಿದೆ. ಹೀಗಾಗಿ ಅಲ್ಲಲ್ಲಿ ಕೊರೋನಾ ಲಸಿಕೆಯ ಕೊರತೆ ಕಾಣಿಸಿಕೊಳ್ಳುತ್ತಿದೆ. ಈಗ ಈ ಲಸಿಕೆಗೆ ಒಪ್ಪಿಗೆ ಸಿಕ್ಕಿದರಿಂದ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಕ್ಕಿದಂತಾಗಿದೆ. ವರ್ಷಕ್ಕೆ 85 ಕೋಟಿ ಸ್ಪುಟ್ನಿಕ್ ಲಸಿಕೆಯನ್ನು ತಯಾರಿಸುವ ಸಾಮರ್ಥ್ಯ ಭಾರತದ ವಿವಿಧ ಘಟಕಗಳಿಗಿರುವುದು ವಿಶೇಷ.

    ಮುಂದಿನ ದಿನಗಳಲ್ಲಿ ಜಾನ್ಸನ್ ಅಂಡ್ ಜಾನ್ಸನ್, ನೋವಾವಾಕ್ಸ್, ಜೈಡಸ್ ಕ್ಯಾಡಿಲಾ ಹಾಗೂ ಇಂಟ್ರಾನೇಸಲ್ (ಮೂಗಿನ ಮೂಲಕ ತೆಗೆದುಕೊಳ್ಳುವ) ಲಸಿಕೆಗೂ ಸರ್ಕಾರ ಅನುಮತಿ ನೀಡುವ ಸಾಧ್ಯತೆಯಿದೆ. ಸುಮಾರು 20 ಬೇರೆ ಬೇರೆ ಕೊರೋನಾ ಲಸಿಕೆಗಳು ದೇಶದಲ್ಲಿ ಪ್ರಯೋಗದ ವಿವಿಧ ಹಂತದಲ್ಲಿವೆ.

    ವಿಶ್ವದ ಮೊದಲ ಕೊರೊನಾ ವ್ಯಾಕ್ಸಿನ್ ಅಭಿವೃದ್ಧಿ ಪಡಿಸಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2020ರ ಆಗಸ್ಟ್ 11 ರಂದು ಘೋಷಿಸಿದ್ದರು. ಪುಟಿನ್ ಪುತ್ರಿ ಮರಿಯಾ ಪುಟಿನ್‍ಗೆ ಮೊದಲ ಸ್ಪುಟ್ನಿಕ್ ಲಸಿಕೆ ನೀಡಲಾಗಿತ್ತು. ಉತ್ತಮ ಪರಿಣಾಮ ಬೀರಿದ್ದು, ಸಮೃದ್ಧವಾಗಿ ಆಂಟಿಬಾಡಿಗಳು(ಪ್ರತಿಕಾಯಗಳು) ಉತ್ಪತ್ತಿಯಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೋಂಕನ್ನು ನಿಯಂತ್ರಣಕ್ಕೆ ಈ ಲಸಿಕೆ ತರುತ್ತದೆ ಎಂದು ವರದಿಯಾಗಿದೆ.

    ಮಾಸ್ಕೋದಲ್ಲಿರುವ ಸೆಚನೋವ್ ವಿವಿಯ ಗಮಾಲಿಯಾ ಸಂಶೋಧನಾ ಕೇಂದ್ರ ಮತ್ತು ರಷ್ಯಾ ರಕ್ಷಣಾ ಸಚಿವಾಲಯ ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.