Tag: Rupay Card

  • ನೋಟು ನಿಷೇಧದಿಂದ ಆನ್‍ಲೈನ್ ವ್ಯವಹಾರ ಎಷ್ಟು ಏರಿಕೆಯಾಗಿದೆ? ಹಿಂದೆ ಎಷ್ಟಿತ್ತು?

    ನೋಟು ನಿಷೇಧದಿಂದ ಆನ್‍ಲೈನ್ ವ್ಯವಹಾರ ಎಷ್ಟು ಏರಿಕೆಯಾಗಿದೆ? ಹಿಂದೆ ಎಷ್ಟಿತ್ತು?

    ನವದೆಹಲಿ: ನೋಟು ನಿಷೇಧದಿಂದಾಗಿ ಭಾರತದ ಅರ್ಥ ವ್ಯವಸ್ಥೆ ಹಳಿಗೆ ಬಂದಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ಕೇಂದ್ರ ಸರ್ಕಾರ ನೋಟು ನಿಷೇಧ ನಿರ್ಧಾರಕ್ಕೆ 2 ವರ್ಷ ಕಳೆದಿದೆ. ಜನರಲ್ಲಿದ್ದ ಹಣವನ್ನು ಜಪ್ತಿ ಮಾಡಲು ನೋಟು ನಿಷೇಧ ಮಾಡಿಲ್ಲ. ಅಕ್ರಮವಾಗಿ ಸಂಗ್ರಹಿಸಿದ್ದ ಹಣವನ್ನು ತೆರಿಗೆ ವ್ಯಾಪ್ತಿಗೆ ತರಲು ಈ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಜೇಟ್ಲಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

    ಎನ್‍ಡಿಎ ಸರ್ಕಾರ ಮೇ 2014ರಲ್ಲಿ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಆದಾಯ ತೆರಿಗೆ ಪಾವತಿದಾರರ ಸಂಖ್ಯೆ 3.8 ಕೋಟಿ ಇತ್ತು. 4 ವರ್ಷದಲ್ಲಿ ಈ ಸಂಖ್ಯೆ 6.86 ಕೋಟಿಗೆ ಏರಿಕೆಯಾಗಿದ್ದು, ನಮ್ಮ ಸರ್ಕಾರದ ಅವಧಿ ಮುಗಿಯುವ ಮುನ್ನ ಈ ಸಂಖ್ಯೆ ದುಪ್ಪಟ್ಟು ಆಗಬೇಕು ಎಂದು ಜೇಟ್ಲಿ ಹೇಳಿದ್ದಾರೆ.

    ಈ ಸಂಬಂಧ ಫೇಸ್‍ಬುಕ್ ನಲ್ಲಿ ದೀರ್ಘ ಪೋಸ್ಟ್ ಪ್ರಕಟಿಸಿರುವ ಜೇಟ್ಲಿ ನೋಟು ನಿಷೇಧದಿಂದ ದೇಶದ ಮೇಲೆ ಆದ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ನೋಟು ನಿಷೇಧಗೊಂಡ ಬಳಿಕ ಜನರ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಅನುಕೂಲವಾಗಲು ಕೇಂದ್ರ ಸರ್ಕಾರ `ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್(ಯುಪಿಐ)ಅನ್ನು 2016ರಲ್ಲಿ ಜಾರಿಗೆ ತಂದಿತ್ತು. ಇದರ ಪರಿಣಾಮ 2016ರ ಅಕ್ಟೋಬರ್ ನಲ್ಲಿ 50 ಕೋಟಿ ರೂ.ನಷ್ಟು ಆನ್‍ಲೈನ್ ವಹಿವಾಟು ನಡೆದಿತ್ತು. ಇದಲ್ಲದೇ 2016 ಅಕ್ಟೋಬರ್ ನಿಂದ ಸೆಪ್ಟೆಂಬರ್ 2018ರ ವರೆಗೆ ಭಾರತದಲ್ಲಿ 59,800 ಕೋಟಿ ರೂ. ಆನ್‍ಲೈನ್ ವ್ಯವಹಾರ ನಡೆದಿದೆ.

    ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಅಭಿವೃದ್ಧಿ ಮಾಡಿದ್ದ ಭೀಮ್ ಯುಪಿಐ ಆ್ಯಪನ್ನು ಭಾರತದ 1.25 ಕೋಟಿ ಗ್ರಾಹಕರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಭೀಮ್ ಆ್ಯಪಿನ ಆನ್‍ಲೈನ್ ವಹಿವಾಟು 2016ರ ಅಕ್ಟೋಬರ್ ನಲ್ಲಿ 20 ಲಕ್ಷ ರೂ. ಇದ್ದರೆ, ಇದೇ ಸೆಪ್ಟೆಂಬರ್ 2018ರಲ್ಲಿ 7,060 ಕೋಟಿ ರೂ. ವಹಿವಾಟು ಏರಿಕೆಯಾಗಿದೆ. 2017ರ ಜೂನ್ ತಿಂಗಳಲ್ಲಿ ದೇಶಾದ್ಯಂತ ಭೀಮ್ ಆ್ಯಪ್ ಮೂಲಕ ಶೇ.48ರಷ್ಟು ವಹಿವಾಟು ನಡೆದಿದೆ.

    ಹೆಚ್ಚಿದ ರುಪೇ ವ್ಯವಹಾರ:
    ರುಪೇ ಕಾರ್ಡ್ ಅನ್ನು ಪಾಯಿಂಟ್ ಆಫ್ ಸೇಲ್(ಪಿಓಎಸ್) ಮತ್ತು ಆನ್ ಲೈನ್ ವ್ಯವಹಾರಕ್ಕೆ ಬಳಸುತ್ತಿದ್ದಾರೆ. ನೋಟು ನಿಷೇಧಕ್ಕೂ ಮೊದಲು ಪಿಓಎಸ್‍ನಲ್ಲಿ 800 ಕೋಟಿ ರೂ. ವ್ಯವಹಾರ ನಡೆದಿದ್ದರೆ 2018 ಸೆಪ್ಟೆಂಬರ್ ವರೆಗೆ 5,730 ಕೋಟಿ ರೂ.ಗೆ ಏರಿಕೆಯಾಗಿದೆ. ಇ ಕಾಮರ್ಸ್ ನಲ್ಲಿ 300 ಕೋಟಿ ರೂ. ವ್ಯವಹಾರ ನಡೆಯುತ್ತಿದ್ದರೆ ಈಗ 2,700 ಕೋಟಿ ರೂ.ಗೆ ಏರಿಕೆಯಾಗಿದೆ.

    ವಿದೇಶಿ ಕಾರ್ಡ್ ಗಳಾದ ವೀಸಾ ಹಾಗೂ ಮಾಸ್ಟರ್ ಕಾರ್ಡ್ ಸಂಸ್ಥೆಗಳು ಭಾರತದಲ್ಲಿ ತಮ್ಮ ಮಾರುಕಟ್ಟೆಯನ್ನು ಕಳೆದುಕೊಳ್ಳುತ್ತಿವೆ. ದೇಶದಲ್ಲಿ ಶೇ.65ರಷ್ಟು ಆನ್‍ಲೈನ್ ವ್ಯವಹಾರಗಳು ಯುಪಿಐ ಹಾಗೂ ರುಪೇ ಕಾರ್ಡ್ ಮೂಲಕವೇ ನಡೆಯುತ್ತಿದೆ. ಇದನ್ನೂ ಓದಿ: ಮೋದಿ ವಿರುದ್ಧ ಅಮೆರಿಕಕ್ಕೆ ದೂರು ಕೊಟ್ಟ ಮಾಸ್ಟರ್ ಕಾರ್ಡ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮೋದಿ ವಿರುದ್ಧ ಅಮೆರಿಕಕ್ಕೆ ದೂರು ಕೊಟ್ಟ ಮಾಸ್ಟರ್ ಕಾರ್ಡ್

    ಮೋದಿ ವಿರುದ್ಧ ಅಮೆರಿಕಕ್ಕೆ ದೂರು ಕೊಟ್ಟ ಮಾಸ್ಟರ್ ಕಾರ್ಡ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾದ ಮೂಲಕ ರುಪೇ ಕಾರ್ಡನ್ನು ಭಾರತದಾದ್ಯಂತ ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ತನಗೆ ಭಾರೀ ನಷ್ಟವಾಗುತ್ತಿದೆ ಎಂದು ಮಾಸ್ಟರ್ ಕಾರ್ಡ್ ಅಮೆರಿಕ ಸರ್ಕಾರಕ್ಕೆ ದೂರು ನೀಡಿದೆ.

    ಗ್ರಾಹಕರು, ಹಣಕಾಸು ಸಂಸ್ಥೆಗಳು ವ್ಯಾಪಾರಿಗಳ ಜೊತೆ ಸೇತುವೆಯಂತೆ ಕೆಲಸ ಮಾಡುವ ಅಮೆರಿಕ ಮೂಲದ ಮಾಸ್ಟರ್‌ಕಾರ್ಡ್ ನೀಡಿದ ದೂರಿನಲ್ಲಿ ಭಾರತದ ಪ್ರಧಾನಿ ಮೋದಿಯವರ ಆರ್ಥಿಕ ನೀತಿಯಿಂದಾಗಿ ನಮ್ಮ ವ್ಯವಹಾರದ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಉಲ್ಲೇಖಿಸಿದೆ.

    ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಉತ್ತೇಜಿಸುತ್ತಿರುವುದು ಸ್ವಾಗತಾರ್ಹ. ಆದರೆ ಅವರು ರಾಷ್ಟ್ರೀಯತೆ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಯ ಮೂಲಕ ಭಾರತದ ರುಪೇ ಕಾರ್ಡ್ ಬಗ್ಗೆ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಇದರಿಂದಾಗಿ ನಮಗೆ ಭಾರತದಲ್ಲಿ ಹೆಚ್ಚು ವ್ಯವಹಾರದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದಿದೆ.

    ಹೊಡೆತ ಹೇಗೆ?
    ಉದಾಹರಣೆಗೆ ಆನ್‍ಲೈನ್ ಶಾಪಿಂಗ್ ತಾಣದಲ್ಲಿ ಗ್ರಾಹಕ ತನ್ನ ಡೆಬಿಟ್/ ಕ್ರೆಡಿಟ್ ಕಾರ್ಡ್ ಬಳಸಿ ವಸ್ತುಗಳನ್ನು ಖರೀದಿಸುತ್ತಾನೆ. ಗ್ರಾಹಕನ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿ ಅದರಲ್ಲಿ ಹಣ ಇದ್ದರೆ ಮಾತ್ರ ಆತನ ಬ್ಯಾಂಕಿನಿಂದ ಆನ್ ಲೈನ್ ಶಾಪಿಂಗ್ ತಾಣದ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ಕೆಲಸವನ್ನು ಮಾಸ್ಟರ್ ಕಾರ್ಡ್ ನಂತಹ ಸಂಸ್ಥೆಗಳು ನಿರ್ವಹಿಸುತ್ತವೆ. ಇವುಗಳ ನಿರ್ವಹಣೆಗೆ ಬ್ಯಾಂಕ್ ಗಳಿಂದ ಶುಲ್ಕವನ್ನು ವಸೂಲಿ ಮಾಡುತ್ತವೆ. ರುಪೇ ಕಾರ್ಡ್ ಜಾರಿಗೆ ಬರುವುದಕ್ಕಿಂತ ಮೊದಲು ಬ್ಯಾಂಕ್ ಗಳ ಈ ಆನ್‍ಲೈನ್ ವ್ಯವಹಾರಕ್ಕೆ ಶುಲ್ಕ ಪಡೆಯುವ ಮೂಲಕ ವೀಸಾ ಹಾಗೂ ಮಾಸ್ಟರ್‌ಕಾರ್ಡ್ ಕಂಪೆನಿಗಳು ಲಾಭ ಪಡೆದುಕೊಳ್ಳುತ್ತಿದ್ದವು. ಈಗ ದೇಶದ ಹಲವು ಬ್ಯಾಂಕ್ ಗಳು ರುಪೇ ಕಾರ್ಡ್ ಗಳನ್ನು ನೀಡುತ್ತಿರುವ ಕಾರಣ ಅಮೆರಿಕ ಮೂಲದ ಮಾಸ್ಟರ್‌ಕಾರ್ಡ್ ಕಂಪೆನಿಗೆ ಭಾರೀ ಹೊಡೆತ ಬಿದ್ದಿದೆ.

    ಭಾರತ ಸರ್ಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‍ಪಿಸಿಐ) ಸಂಸ್ಥೆ ರುಪೇ ಕಾರ್ಡನ್ನು ನಿರ್ವಹಿಸುತ್ತಿದೆ. ಈ ವ್ಯವಸ್ಥೆಯಲ್ಲಿ ನೀಡಬೇಕಾದ ಶುಲ್ಕ ಕಡಿಮೆ ಇದೆ. 2014ರಲ್ಲಿ ಭಾರತದಲ್ಲಿ ಜಾರಿಗೆ ಬಂದ ರುಪೇ ಕಾರ್ಡ್ ಈಗ ದೈತ್ಯ ವೀಸಾವನ್ನು ಹಿಂದಿಕ್ಕಿ ಮೊದಲನೇ ಸ್ಥಾನದಲ್ಲಿದೆ. ಮಾಹಿತಿಗಳ ಪ್ರಕಾರ ಭಾರತದ ಸುಮಾರು 50 ಕೋಟಿ ಗ್ರಾಹಕರು ರುಪೇ ಕಾರ್ಡ್ ಬಳಸುತ್ತಿದ್ದಾರೆ. ದೇಶದ ಕಾರ್ಡ್ ನೆಟ್‍ವರ್ಕ್ ಗಳ ಪೈಕಿ ರುಪೇ ಶೇ.56 ಪಾಲನ್ನು ಹೊಂದಿದೆ. ಜನಧನ್ ಖಾತೆಯನ್ನು ಹೊಂದಿದವರಿಗೆ ರುಪೇ ಕಾರ್ಡ್ ಗಳನ್ನು ನೀಡಲಾಗುತ್ತಿದೆ.

    ಮೋದಿ ಕರೆ ನೀಡಿದ್ದು ಏನು?
    ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ವಿಶೇಷ ಒತ್ತು ನೀಡುತ್ತಲೇ ಇದ್ದಾರೆ. ಅಲ್ಲದೇ ಆನ್‍ಲೈನ್ ವಹಿವಾಟಿಗೆ ಸಂಬಂಧಪಟ್ಟಂತೆ ದೇಶೀಯ ರುಪೇ ಕಾರ್ಡ್ ಬಳುಸುವಂತೆ ಭಾರತೀಯರಲ್ಲಿ ಮನವಿಮಾಡಿಕೊಂಡಿದ್ದರು. ರುಪೇ ಕಾರ್ಡ್ ಬಳಸುವುದರಿಂದ ವಹಿವಾಟಿನ ಶುಲ್ಕಗಳು ಭಾರತದಲ್ಲೇ ಉಳಿಯಲಿದೆ. ಇದರಿಂದಾಗಿ ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ಕರೆ ನೀಡಿದ್ದರು. ಇದನ್ನೂ ಓದಿ: ಯಾಕೆ ಹಳೆ ಎಟಿಎಂ ಕಾರ್ಡ್ ಚೇಂಜ್ ಮಾಡಬೇಕು? ಏನಿದು ಇಎಂವಿ ಚಿಪ್ ಕಾರ್ಡ್? ಎಲ್ಲಿ ಸಿಗುತ್ತೆ?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೋದಿ ಧರ್ಮಸ್ಥಳ ಮಂಜುನಾಥನಿಗೆ ಹೀಗೆ ಸಲ್ಲಿಸ್ತಾರಂತೆ ಪೂಜೆ!

    ಮೋದಿ ಧರ್ಮಸ್ಥಳ ಮಂಜುನಾಥನಿಗೆ ಹೀಗೆ ಸಲ್ಲಿಸ್ತಾರಂತೆ ಪೂಜೆ!

    – ನಾಳೆ ಮೋದಿ ಕರ್ನಾಟಕ ಕಾರ್ಯಕ್ರಮದ ಸಂಪೂರ್ಣ ವಿವರ

    – ನರೇಂದ್ರ ಮೋದಿ ಪೂಜೆ ಸಲ್ಲಿಕೆ ವೇಳೆ ಯಾರಿಗೂ ಪ್ರವೇಶವಿರಲ್ಲ

    ಬೆಂಗಳೂರು/ಮಂಗಳೂರು: ನಾಳೆ ಬೆಳಗ್ಗೆ ಧರ್ಮಸ್ಥಳಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಸಂಪ್ರದಾಯ ಬದ್ಧವಾಗಿಯೇ ಪೂಜೆಯಲ್ಲೇ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಮೋದಿ ಆಪ್ತವಲಯದಿಂದ ಲಭ್ಯವಾಗಿದೆ.

    ಧರ್ಮಸ್ಥಳದ ಮಂಜುನಾಥ ಸನ್ನಿಧಿಯ ಸಂಪ್ರದಾಯದಂತೆ ಸುಮಾರು ಅರ್ಧ ಗಂಟೆಗಳ ಕಾಲ ಪೂಜಾ ವಿಧಿವಿಧಾನಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಮೋದಿಗಾಗಿ ಪಂಚೆ, ಶಲ್ಯ ರೆಡಿಯಾಗಿದ್ದು, ಇದನ್ನು ಧರಿಸಿಯೇ ಪೂಜೆ ಮಾಡಲಿದ್ದಾರೆ. ಪೂಜೆ ವೇಳೆ ಮೋದಿ ಬಿಟ್ಟು ಬೇರೆ ಸಚಿವರು, ಅಧಿಕಾರಿಗಳಿಗೆ ಎಂಟ್ರಿ ಇರಲ್ಲ. ಧರ್ಮಸ್ಥಳದ ಧರ್ಮಾಧಿಕಾರಿಗಳು, ನರೇಂದ್ರ ಮೋದಿ ಹಾಗೂ ಪುರೋಹಿತರು ಮಾತ್ರ ಪೂಜೆ ವೇಳೆ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ನಾಳೆ ಏನೇನು ನಡೆಯುತ್ತೆ?: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಮಂತ್ರಣದಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಅಲ್ಲಿ ದೇವರ ದರ್ಶನದ ಬಳಿಕ ಉಜಿರೆಗೆ ರಸ್ತೆ ಮಾರ್ಗದಲ್ಲಿ ಆಗಮಿಸಲಿದ್ದಾರೆ. ಉಜಿರೆಯಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಸದಸ್ಯರ ಸಮಾವೇಶದಲ್ಲಿ ಹೆಗ್ಗಡೆಯವರ ನೂತನ ಸಂಕಲ್ಪವಾದ ‘ಭೂಮಿ ತಾಯಿಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ’ ಅಭಿಯಾನವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

    ಇದೇ ವೇಳೆ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ವಯ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು ಅವರಿಗೆ ರುಪೇ ಕಾರ್ಡ್ ಗಳನ್ನು ಮೋದಿ ವಿತರಿಸಲಿದ್ದಾರೆ. ಸ್ವ-ಸಹಾಯ ಸಂಘಗಳ ವ್ಯವಹಾರಗಳನ್ನು ಸಂಪೂರ್ಣವಾಗಿ ನಗದು ರಹಿತವಾಗಿ ಮಾಡಿ ತಂತ್ರಾಂಶ ಆಧಾರಿತ ವ್ಯವಹಾರಗಳನ್ನು ಪ್ರೇರೇಪಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದ್ದು ಇದಕ್ಕೆ ನಾಳೆ ಅಂಕಿತ ಬೀಳಲಿದೆ.

    ಈ ಕಾರ್ಯಕ್ರಮದಲ್ಲಿ ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ನಕ್ಸಲ್ ನಿಗ್ರಹ ದಳದವರು ಧರ್ಮಸ್ಥಳ, ಉಜಿರೆ ಮತ್ತು ಕನ್ಯಾಡಿಯಲ್ಲಿ ಶುಕ್ರವಾರ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.

    ವಾಹನ ನಿಲುಗಡೆ: ಬೆಳ್ತಂಗಡಿ ಕಡೆಯಿಂದ ಬರುವವರು ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಾಥಮಿಕ ಶಾಲೆ ಬಳಿ ಮತ್ತು ಅಜ್ಜರಕಲ್ಲು ಮೈದಾನದಲ್ಲಿ ಹಾಗೂ ಇತರರು ಜನಾರ್ಧನ ಸ್ವಾಮಿ ದೇವಸ್ಥಾನದ ಬಳಿ ವಾಹನಗಳನ್ನು ನಿಲ್ಲಿಸಬಹುದು. ಧರ್ಮಸ್ಥಳದಿಂದ ಉಜಿರೆಗೆ ಭಾನುವಾರ ಬೆಳಿಗ್ಗೆ 9 ಗಂಟೆ ವರೆಗೆ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಮುಕ್ತ ಅವಕಾಶವಿದೆ. 9 ಗಂಟೆ ಬಳಿಕ ಅಪರಾಹ್ನ ಎರಡು ಗಂಟೆವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉಜಿರೆ ಹಾಗೂ ಧರ್ಮಸ್ಥಳದಲ್ಲಿ ಭಾನುವಾರ ಬೆಳಿಗ್ಗೆ 7ರಿಂದ ಅಪರಾಹ್ನ 2 ಗಂಟೆ ವರೆಗೆ ಎಲ್ಲಾ ಅಂಗಡಿಗಳನ್ನು ಮುಚ್ಚಲು ಪೊಲೀಸರು ಈಗಾಗಲೇ ಸೂಚನೆ ನೀಡಿದ್ದಾರೆ.

    ಸಾರ್ವಜನಿಕರಿಗೆ ಸೂಚನೆ: ಸಮಾರಂಭದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು ಬೆಳಿಗ್ಗೆ 10 ಗಂಟೆಗೆ ಮೊದಲು ಬಂದು ಆಸೀನರಾಗಬಹುದು. ಸಾರ್ವಜನಿಕರು ಉಜಿರೆ ಕಡೆಯಿಂದ ಬೆಳಾಲು ರಸ್ತೆ ಮೂಲಕ ಕ್ರೀಡಾಂಗಣ ಪ್ರವೇಶಿಸಬಹುದು. ವಿ.ಐ.ಪಿ. ಪಾಸ್ ಹೊಂದಿರುವವರು ಎಸ್.ಡಿ.ಎಂ. ಕಾಲೇಜು ಬಳಿ ನಿರ್ಮಿಸಿದ ದ್ವಾರದ ಮೂಲಕ ಪ್ರವೇಶಿಸಬಹುದು. ಭದ್ರತೆಗಾಗಿ ಉಜಿರೆ ಮತ್ತು ಧರ್ಮಸ್ಥಳದಲ್ಲಿ 2,500 ಪೊಲೀಸರನ್ನು ನಿಯೋಜಿಸಲಾಗಿದೆ. ಕ್ರೀಡಾಂಗಣದಲ್ಲಿ ವಿಶೇಷ ಕಂಟ್ರೋಲ್ ರೂಮ್ ತೆರೆಯಲಾಗಿದ್ದು ಎಲ್ಲಾ ಕಡೆಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ.

    ಸಚಿವರಾದ ಅನಂತ ಕುಮಾರ್, ಡಿ. ವಿ. ಸದಾನಂದ ಗೌಡ, ಅನಂತ್ ಕುಮಾರ್ ಹೆಗಡೆ, ಬಿ. ರಮಾನಾಥ ರೈ, ಸಂಸದರಾದ ಬಿ. ಎಸ್. ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಶಾಸಕ ಕೆ. ವಸಂತ ಬಂಗೇರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್, ಡಿ. ವೀರೇಂದ್ರ ಹೆಗ್ಗಡೆಯವರು, ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸುವರು.

    ಪ್ರಧಾನಿ ಭೇಟಿ ವೇಳಾಪಟ್ಟಿ: ಬೆಳಿಗ್ಗೆ 10.30ಕ್ಕೆ ಮಂಗಳೂರಿನಿಂದ ವಿಶೇಷ ಸೇನಾ ಹೆಲಿಕಾಪ್ಟರ್ ನಲ್ಲಿ ಹೊರಟು ಪ್ರಧಾನಿ ಮೋದಿ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. 11.00 ಗಂಟೆಗೆ ಹೆಗ್ಗಡೆಯವರ ನಿವಾಸಕ್ಕೆ ಭೇಟಿ ನೀಡಿ, 11.30ಕ್ಕೆ ದೇವರ ದರ್ಶನ ಪಡೆಯಲಿದ್ದಾರೆ. 11.40ಕ್ಕೆ ರಸ್ತೆ ಮೂಲಕ ಉಜಿರೆಗೆ ಪ್ರಯಾಣ ಬೆಳೆಸಿ, 12.00 ಗಂಟೆಗೆ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. 12.50ಕ್ಕೆ ರಸ್ತೆ ಮೂಲಕ ಧರ್ಮಸ್ಥಳ ಹೆಲಿಪ್ಯಾಡ್ ಗೆ ಪ್ರಯಾಣಿಸಿ ಹೆಲಿಕಾಪ್ಟರ್ ನಲ್ಲಿ ಮಂಗಳೂರು ವಿಮಾನ ನಿಲ್ದಾಣವಿರುವ ಬಜ್ಪೆಗೆ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 1.10ಕ್ಕೆ ಬಜ್ಪೆಯಿಂದ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಧ್ಯಾಹ್ನ 3.30ರವರೆಗೆ ಸೌಂದರ್ಯ ಲಹರಿ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4.45ಕ್ಕೆ ಬೆಂಗಳೂರಿನಿಂದ ಬೀದರ್ ಗೆ ಪ್ರಯಾಣ ಬೆಳೆಸಿ ಸಂಜೆ 5.10ಕ್ಕೆ ಬೀದರ್-ಕಲಬುರಗಿ ರೈಲು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿಸಿ ಸಂಜೆ 6.20ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.