Tag: Rudrapur

  • ಅತ್ಯಾಚಾರಿಯ ಮಗುವಿಗೆ ಜನ್ಮ – ಹೆರಿಗೆ ನಂತರ ಬಾಲಕಿ ಸಾವು

    ಅತ್ಯಾಚಾರಿಯ ಮಗುವಿಗೆ ಜನ್ಮ – ಹೆರಿಗೆ ನಂತರ ಬಾಲಕಿ ಸಾವು

    ಡೆಹ್ರಾಡೂನ್: 12 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿ ಮೃತಪಟ್ಟಿರುವ ಘಟನೆ ಉತ್ತರಾಖಂಡದ ರುದ್ರಪುರದಲ್ಲಿ ನಡೆದಿದೆ.

    ಠಾಕೂರ್ ನಿವಾಸಿಯಾಗಿರುವ 12 ವರ್ಷದ ಬಾಲಕಿ ಶನಿವಾರ ರಾತ್ರಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರಿಂದ ಆಕೆಯನ್ನು ಉದ್ಧಮ್ ಸಿಂಗ್ ನಗರದ ಜೆಎಲ್ ನೆಹರೂ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

    ವೈದ್ಯರು ನಡೆಸಿದ ಪರೀಕ್ಷೆಯಲ್ಲಿ ಆಕೆ 7 ತಿಂಗಳ ಗರ್ಭಿಣಿ ಎಂಬ ಸತ್ಯ ಬಹಿರಂಗಗೊಂಡಿದೆ. ನಂತರ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಶೀಘ್ರವೇ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅಕಾಲಿಕ ಹೆರಿಗೆಯಿಂದ ಬಳಿಕ ಬಾಲಕಿ ಮೃತ ಪಟ್ಟಿದ್ದಾಳೆ. ಗಂಭೀರ ಸ್ಥಿತಿಯಲ್ಲಿದ್ದಾಗ ಆಕೆ ತನ್ನ ಮೇಲೆ ನೆರೆಮನೆಯ ವ್ಯಕ್ತಿ ಕೆಲವು ತಿಂಗಳ ಹಿಂದೆ ಅತ್ಯಾಚಾರ ಮಾಡಿರುವುದಾಗಿ ತಿಳಿಸಿದ್ದಾಳೆ.

    ಈ ವಿಚಾರವಾಗಿ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಬಾಲಕಿಯು ಸಾಯುವ ಮುನ್ನ ಮಂದಲ್(22) ಆರೋಪಿ ಎಂದು ಗುರುತಿಸಿದ್ದಾಳೆ. ಹಾಗಾಗಿ ಆರೋಪಿಯನ್ನು ವಶಕ್ಕೆ ಪಡೆದು ಆತನ ಡಿಎನ್‍ಎ ಮಾದರಿ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

    ಬಾಲಕಿ ಆತ ತನ್ನನ್ನು ಚಾಕೊಲೇಟ್ ನೀಡುವುದಾಗಿ ಹೇಳಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು ಎಂದು ಹೇಳಿದ್ದಾಳೆ. ಬಾಲಕಿಯ ತಾಯಿ ಸಹ ಒಮ್ಮೆ ಆಕೆಯ ದೇಹದಲ್ಲಿ ಆಗುತ್ತಿರುವ ಬದಲಾವಣೆ ಕುರಿತಂತೆ ಪ್ರಶ್ನಿಸಿದ್ದರೂ ಕೂಡ ಬಾಲಕಿ ಇಲ್ಲಿಯವರೆಗೂ ಈ ವಿಚಾರವನ್ನು ಹೇಳಿಕೊಂಡಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.

    ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದ್ದು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯಿದೆ(ಪೋಕ್ಸೋ) ಅಡಿ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ.

  • ಮಹಿಳಾ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಬಿಜೆಪಿ ಶಾಸಕ- ವಿಡಿಯೋ ವೈರಲ್

    ಮಹಿಳಾ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಬಿಜೆಪಿ ಶಾಸಕ- ವಿಡಿಯೋ ವೈರಲ್

    ಡೆಹ್ರಾಡೂನ್: ಉತ್ತರಾಖಂಡ್‍ದ ಬಿಜೆಪಿ ಶಾಸಕರೊಬ್ಬರು ಮಹಿಳಾ ಸಬ್‍ಇನ್ಸ್‌ಪೆಕ್ಟರ್ ಗೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರುದ್ರಪುರ್ ಕ್ಷೇತ್ರದ ಶಾಸಕ ರಾಜ್‍ಕುಮಾರ್ ತುಕ್ರಾಲ್ ಅವರ ಇಬ್ಬರು ಸಹಚರರು ಸಂಚಾರ ನಿಯಮ ಉಲ್ಲಂಘಿಸಿದ್ದರು. ಹೀಗಾಗಿ ಅವರನ್ನು ರುದ್ರಪುರ್ ಸಂಚಾರ ಠಾಣೆಯ ಪೊಲೀಸರು ಬಂಧಿಸಿದ್ದರು. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆಗೆ ಬಂದ ಶಾಸಕರು ಸಬ್‍ಇನ್ಸ್‌ಪೆಕ್ಟರ್ ಅನಿತಾ ಗೈರೊಲಾ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ.

    ಬಂಧನಕ್ಕೆ ಕಾರಣ ತಿಳಿಸುತ್ತಿದ್ದರೂ ಕೇಳದ ಶಾಸಕ, ಅನಿತಾ ಗೈರೊಲಾ ಅವರ ಮೇಲೆ ಹರಿಹಾಯ್ದು, ಬೆದರಿಕೆ ಒಡ್ಡಿದ್ದಾರೆ. ಬಳಿಕ ಹಿಂಬಾಲಕರು ಹೇಳಿದ್ದರಿಂದ ಮತ್ತೇ ಠಾಣೆ ಬಾಗಿಲ ಬಳಿ ನಿಂತು, ಬಂಧಿತರನ್ನು ಬಿಡುವಂತೆ ಒತ್ತಾಯಿಸಿದ್ದಾರೆ.

    ಸ್ಥಳದಲ್ಲಿಯೇ ಇದ್ದ ವ್ಯಕ್ತಿಯೊಬರು ತಮ್ಮ ಮೊಬೈಲ್‍ನಲ್ಲಿ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ.

    ಇದೇ ಮೊದಲಲ್ಲ, ಈ ಹಿಂದೆಯೂ ಯುವಕನೊಬ್ಬ ಪರಿಶಿಷ್ಟ ಜಾತಿಯ ಯುವತಿಯ ಜೊತೆಗೆ ಓಡಿ ಹೋಗಿದ್ದನು. ಹೀಗಾಗಿ ಯುವತಿಯ ಕುಟುಂಬದ ಮೂರು ಜನ ಮಹಿಳೆಯರ ಮೇಲೆ ಶಾಸಕರು ಹಲ್ಲೆ ಮಾಡಿದ್ದಾರೆ. ನಡು ರಸ್ತೆಯಲ್ಲಿಯೇ ಯುವತಿಯ ತಾಯಿ ಸೇರಿದಂತೆ ಇಬ್ಬರು ಸಹೋದರಿಯರನ್ನು ಥಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv