Tag: Rudrakshipura

  • ರುದ್ರಾಕ್ಷಿಪುರ: ಶಿಲೆ ಕೆತ್ತುವ ಮನಸೊಳಗೆ ಮೊಳಕೆಯೊಡೆದ ಸಿನಿಮಾ ಕನಸು!

    ರುದ್ರಾಕ್ಷಿಪುರ: ಶಿಲೆ ಕೆತ್ತುವ ಮನಸೊಳಗೆ ಮೊಳಕೆಯೊಡೆದ ಸಿನಿಮಾ ಕನಸು!

    ಬೆಂಗಳೂರು: ಈಶ್ವರ ಪೋಲಂಕಿ ನಿರ್ದೇಶನದ ರುದ್ರಾಕ್ಷಿಪುರ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ. ಥ್ರಿಲ್ಲರ್ ಕಥಾನಕ ಹೊಂದಿರೋ ಈ ಚಿತ್ರ ವೀಕ್ಷಣೆಗಾಗಿ ಪ್ರೇಕ್ಷಕರೂ ಕಾತರರಾಗಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳ ಹಿಂದೆ ನಿರ್ಮಾಪಕರಾಗಿ, ಸಿನಿಮಾ ಪ್ರೇಮಿಯಾಗಿ ನಿಂತಿರುವವರು ನಾಗರಾಜ್ ಮುರುಡೇಶ್ವರ!

    ಯಾವ ಮೂಲೆಯಲ್ಲಿ, ಯಾವ ಕೆಲಸ ನೆಚ್ಚಿಕೊಂಡಿರೋ ಜೀವಗಳಿಗೆ ಈ ಸಿನಿಮಾ ಕನಸು ಬೀಳುತ್ತೋ ಹೇಳಲು ಬರೋದಿಲ್ಲ. ಈ ಮಾತಿಗೆ ತಕ್ಕುದಾಗಿಯೇ ಇದೆ ರುದ್ರಾಕ್ಷಿಪುರ ಚಿತ್ರದ ನಿರ್ಮಾಪಕ ನಾಗರಾಜ್ ಮುರುಡೇಶ್ವರ ಅವರ ರಿಯಲ್ ಸ್ಟೋರಿ!

    ಉತ್ತರಕನ್ನಡ ಜಿಲ್ಲೆಯ ಪ್ರಖ್ಯಾತ ಯಾತ್ರಾ ಸ್ಥಳವಾದ ಮುರುಡೇಶ್ವರ ನಾಗರಾಜ್ ಅವರ ಊರು. ತೀರಾ ಹನ್ನೊಂದನೇ ವರ್ಷಕ್ಕೆ ಊರು ಬಿಟ್ಟಿದ್ದ ಅವರು ನಂತರ ಹೋಗಿದ್ದು ದೂರದ ಚೆನ್ನೈಗೆ. ಅಲ್ಲಿ ಏನೇನೋ ಪಡಿಪಾಟಲು ಪಟ್ಟು ವಿವೇಕ್ ಆರ್ಕಿಟೆಕ್ಟ್ ಕಂಪೆನಿಯಲ್ಲಿ ಸಣ್ಣ ಕೆಲಸಕ್ಕೆ ಸೇರಿಕೊಂಡ ನಾಗರಾಜ್ ಶಿಲ್ಪಕಲೆಯ ಸಂಪೂರ್ಣ ಪಾಠ ಕಲಿತದ್ದು ಅಲ್ಲಿಯೇ. ಆ ನಂತರ ಹತ್ತಾರು ವರ್ಷಗಳ ಕಾಲ ಅಲ್ಲಿಯೇ ಕಾರ್ಯನಿರ್ವಹಿಸಿ ಇದೀಗ ಅವರು ಶಿವಮೊಗ್ಗದಲ್ಲಿ ಚೌಡೇಶ್ವರಿ ಶಿಲ್ಪಕಲಾ ಕಂಪೆನಿ ತೆರೆದಿದ್ದಾರೆ. ಇದರಡಿಯಲ್ಲಿ ಮೂವತ್ತಕ್ಕೂ ಹೆಚ್ಚು ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದಾರೆ.

    ಹೀಗೆ ಶಿಲ್ಪಿಯಾಗಿ ಯಶ ಕಂಡಿರೋ ನಾಗರಾಜ್ ಅವರು ಹದಿನೈದು ವರ್ಷಗಳಿಂದಲೂ ನಿರ್ದೇಶಕನಾಗ ಬೇಕೆಂಬ ಕನಸನ್ನು ಸಾಕಿಕೊಂಡಿದ್ದರು. ಆದರೆ ನಿರ್ದೇಶಕ ಈಶ್ವರ್ ಪೋಲಂಕಿ ಹೇಳಿದ ಕಥೆ, ಅದರಲ್ಲಿನ ಹೊಸತನ ಕಂಡಾಗ ಮೊದಲು ನಿರ್ಮಾಪಕನಾಗಿ ಅಖಾಡಕ್ಕಿಳಿಯೋದೇ ಒಳಿತೆನ್ನಿಸಿತ್ತಂತೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಒಂದಷ್ಟು ಪಾಠವನ್ನೂ ನಾಗರಾಜ್ ಕಲಿತುಕೊಂಡಿದ್ದಾರೆ.

    ರುದ್ರಾಕ್ಷಿಪುರ ಚಿತ್ರವನ್ನು ಖಂಡಿತಾ ಜನ ಮೆಚ್ಚಿ ಪ್ರೋತ್ಸಾಹಿಸುತ್ತಾರೆಂಬ ನಂಬಿಕೆ ನಾಗರಾಜ್ ಅವರಿಗಿದೆ. ಜೊತೆಗೆ ಮುಂದೆ ತಾವೇ ನಿರ್ದೇಶಕರಾಗಿ ಹೊರ ಹೊಮ್ಮಲು ಬೇಕಾದ ತಯಾರಿಯನ್ನೂ ಅವರು ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಗೂಢಗಳ ರೂವಾರಿ ರುದ್ರಾಕ್ಷಿಪುರ!

    ನಿಗೂಢಗಳ ರೂವಾರಿ ರುದ್ರಾಕ್ಷಿಪುರ!

    ಬೆಂಗಳೂರು: ಶೀರ್ಷಿಕೆಯಿಂದಲೇ ಗಮನ ಸೆಳೆದು ಕುತೂಹಲ ಹುಟ್ಟು ಹಾಕೋ ಟ್ರೆಂಡ್ ಒಂದು ಶುರುವಾಗಿದೆಯಲ್ಲಾ? ಆ ಸಾಲಿಗೆ ಬೇಷರತ್ತಾಗಿ ಸೇರ್ಪಡೆಗೊಳ್ಳೋ ಚಿತ್ರ ರುದ್ರಾಕ್ಷಿಪುರ. ಈಶ್ವರ ಪೋಲಂಕಿ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಶಿಲ್ಪಿಯಾಗಿರೋ ನಾಗರಾಜ್ ಮುರುಡೇಶ್ವರ ನಿರ್ಮಾಣ ಮಾಡಿದ್ದಾರೆ. ಇನ್ನೇನು ಬಿಡುಗಡೆಗೆ ಸಜ್ಜುಗೊಂಡಿರೋ ಈ ಚಿತ್ರ ಕುತೂಹಲ ಕೆರಳಿಸಿರೋದು ತನ್ನೊಳಗೆ ಬಚ್ಚಿಟ್ಟುಕೊಂಡಿರೋ ನಿಗೂಢಗಳಿಂದಲೇ!

    ನಿರ್ದೇಶಕ ಈಶ್ವರ ಪೋಲಂಕಿ ಇದೊಂದು ಥ್ರಿಲ್ಲರ್ ಕಥೆ ಹೊಂದಿರೋ ಚಿತ್ರ ಎಂಬುದರ ಹೊರತಾಗಿ ಮತ್ತೆಲ್ಲವನ್ನೂ ನಿಗೂಢವಾಗಿಯೇ ಇಟ್ಟಿದ್ದಾರೆ. ಆದರೆ ಈ ಚಿತ್ರಕ್ಕೆ ರುದ್ರಾಕ್ಷಿಪುರ ಅಂತ ಹೆಸರಿಡಲು ಕಾರಣವೇನು? ಅಸಲೀ ಕಥೆಯೇನೆಂಬ ಕುತೂಹಲ ಮಾತ್ರ ಪ್ರೇಕ್ಷಕರನ್ನು ಕಾಡುತ್ತಲೇ ಇದೆ. ಅದು ಬಹುಶಃ ಮುಂದಿನ ತಿಂಗಳ ಹೊತ್ತಿಗೆಲ್ಲ ತಣಿಯಲಿದೆ.

    ಈಶ್ವರ್ ಅಪ್ಪಟ ಕನ್ನಡ ಪ್ರೇಮಿ ಹುಡುಗ. ತನ್ನ ಮೂಲವಿರೋದು ಆಂಧ್ರಪ್ರದೇಶದಲ್ಲಿಯೇ ಆದರೂ ಕನ್ನಡವನ್ನೇ ಉಸಿರೆಂದುಕೊಂಡಿರುವವರು ಈಶ್ವರ್. ಬಹುಶಃ ಓದಿನ ಆಧಾರದಲ್ಲಿಯೇ ಕೆಲಸ ಅರಸಿದ್ದರೆ ಅವರೀಗ ಸಿಎ ಆಗಿ ಕೈ ತುಂಬಾ ಸಂಬಳ ಸಿಗುವ ಕೆಲಸ ಪಡೆದು ನೆಮ್ಮದಿಯಾಗಿರುತ್ತಿದ್ದರು. ಆದರೆ ನಿರ್ದೇಶಕನಾಗಬೇಕೆಂಬ ಕನಸು ಹೊತ್ತು ಬಂದು ರುದ್ರಾಕ್ಷಿಪುರ ಚಿತ್ರದ ಮೂಲಕ ಅದನ್ನು ನನಸು ಮಾಡಿಕೊಂಡಿದ್ದಾರೆ.

    ಇದು ಪಕ್ಕಾ ಥ್ರಿಲ್ಲರ್ ಕಥಾನಕ. ಪ್ರೇಕ್ಷಕರನ್ನು ಕ್ಷಣ ಕ್ಷಣವೂ ಕಾತರಗೊಳ್ಳುವಂತೆ ಮಾಡಿ ಭರ್ಜರಿ ಮನರಂಜನೆ ನೀಡಬೇಕೆಂಬ ಉದ್ದೇಶವಿಟ್ಟುಕೊಂಡೇ ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ಈ ಚಿತ್ರದಲ್ಲಿ ದಾವಣಗೆರೆ ಅರ್ಜುನ್ ಸಹಾನ್ ನಾಯಕನಾಗಿ ನಟಿಸಿದ್ದಾರೆ. ರೂಪಿಕಾ ನಾಯಕಿ. ಈಗ ಚಿತ್ರದ ಬಗ್ಗೆ ವ್ಯಾಪಕ ಕುತೂಹಲ ಕೆರಳಿಕೊಂಡಿದೆಯಲ್ಲಾ? ಚಿತ್ರ ನೋಡಿದ ಪ್ರತಿಯೊಬ್ಬರಿಗೂ ತಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನದ್ದನ್ನು ಪಡೆದುಕೊಂಡ ತೃಪ್ತಿಯನ್ನು ಖಂಡಿತಾ ಈ ಚಿತ್ರ ನೀಡುತ್ತದೆ ಎಂಬುದು ನಿರ್ದೇಶಕರ ಭರವಸೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv