Tag: RKS Bhadouria

  • ಲಡಾಖ್ ಗಡಿಯಲ್ಲಿ ಫೈಟರ್‌ ಜೆಟ್‌ ರಫೇಲ್‌ ನಿಯೋಜಿಸಲು ಚಿಂತನೆ

    ಲಡಾಖ್ ಗಡಿಯಲ್ಲಿ ಫೈಟರ್‌ ಜೆಟ್‌ ರಫೇಲ್‌ ನಿಯೋಜಿಸಲು ಚಿಂತನೆ

    ನವದೆಹಲಿ: ಗಲ್ವಾನ್‌ ಘರ್ಷಣೆಯ ಬಳಿಕ ಲಡಾಖ್‌ ಗಡಿಯಲ್ಲಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಈಗಾಗಲೇ ಹಾರಾಟ ನಡೆಸುತ್ತಿವೆ. ಈಗ ಇವುಗಳ ಜೊತೆ ರಫೇಲ್‌ ಯುದ್ಧ ವಿಮಾನಗಳನ್ನು ನಿಯೋಜಿಸಲು ವಾಯುಸೇನೆ ಚಿಂತನೆ ನಡೆಸಿದೆ.

    ಭಾರತ ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಹಿನ್ನೆಲೆಯಲ್ಲಿ ವಾಯು ಸೇನೆ ಮುಖ್ಯಸ್ಥ ಆರ್.ಕೆ.ಎಸ್ ಭದೌರಿಯಾ ನೇತೃತ್ವದ ಉನ್ನತ ವಾಯುಪಡೆಯ ಕಮಾಂಡರ್ ಗಳ ತಂಡ ಎರಡು ದಿನಗಳ ಕಾಲ ಲಡಾಕ್‍ಗೆ ಭೇಟಿ ನೀಡಲಿದೆ.

    ಭೂ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಭೇಟಿ ಬಳಿಕ ವಾಯು ಸೇನೆ ತಂಡ ಭೇಟಿ ನೀಡುತ್ತಿದ್ದು, ಲಡಾಕ್‍ನಲ್ಲಿರುವ ಚೀನಾ ಭಾರತದ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಪ್ರದೇಶ ಹಾಗೂ ಆ ಭಾಗದಲ್ಲಿ ನಡೆಯುತ್ತಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಪರಿಸ್ಥಿತಿಯ ಪರಿಶೀಲನೆ ನಡೆಸಲಿದೆ.

    ಎರಡು ದಿನದ ಭೇಟಿಯಲ್ಲಿ ಈ ಪ್ರದೇಶದಲ್ಲಿ ವಾಯುಪಡೆ ಅವಳಿ-ಎಂಜಿನ್ ಫೈಟರ್ ಜೆಟ್ ಹಾಗೂ ಜುಲೈ ಅಂತ್ಯದ ವೇಳೆಗೆ ಭಾರತಕ್ಕೆ ಬರಲಿರುವ ರಫೇಲ್ ಫೈಟರ್ ಜೆಟ್‍ಗಳು ನಿಯೋಜಿಸುವ ಬಗ್ಗೆ ಮುಖ್ಯವಾಗಿ ಚರ್ಚೆಯಾಗಲಿದೆ. ಸುಖೋಯ್-30 ಎಂಕೆಐ ಮತ್ತು ಮಿರಾಜ್-2000 ಸೇರಿದಂತೆ ಇತರ ಫೈಟರ್ ಜೆಟ್‍ಗಳ ಸಮನ್ವಯದೊಂದಿಗೆ ಉತ್ತರದ ಗಡಿಗಳಲ್ಲಿ ರಫೇಲ್ ಫೈಟರ್ ಜೆಟ್‍ಗಳನ್ನು ಶೀಘ್ರವಾಗಿ ನಿಯೋಜಿಸುವ ಬಗ್ಗೆ ವಾಯುಪಡೆ ಗಮನ ಹರಿಸಿದ್ದು, ಈ ಬಗ್ಗೆ ಯೋಜನೆಗಳನ್ನು ರೂಪಿಸಲಿದೆ.

    ಪೂರ್ವ ಲಡಾಕ್‍ನಿಂದ ಅರುಣಾಚಲ ಪ್ರದೇಶದವರೆಗಿನ ಗಡಿ ಪ್ರದೇಶ, ಎಲ್‍ಎಸಿ ಉದ್ದಕ್ಕೂ ವಾಯುಪಡೆಯು ತನ್ನ ಫೈಟರ್ ಜೆಟ್‍ಗಳನ್ನು ಸಕ್ರಿಯವಾಗಿ ನಿಯೋಜಿಸಲು ತೀರ್ಮಾನಿಸಿದೆ. ಐಎಎಫ್‍ನ ಹಿರಿಯ ಅಧಿಕಾರಿಗಳು ಎರಡು ದಿನದ ಭೇಟಿಯಲ್ಲಿ ಚೀನಾದ ಮಿಲಿಟರಿ ರಚನೆಯನ್ನು ಆಧರಿಸಿ ಭಾರತದ ಪ್ರತಿರೋಧದ ಶಕ್ತಿಯನ್ನು ನಿಯೋಜಿಸಲಿದ್ದಾರೆ.

    ಜೂನ್ 2ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲೆ ಜೊತೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಈ ವೇಳೆ ಫ್ರಾನ್ಸ್‌ನಲ್ಲಿ ಕೋವಿಡ್‌ 19 ಇದ್ದರೂ ನಿಗದಿಯಂತೆ ಜುಲೈ 27ರ ಒಳಗಡೆ ಭಾರತಕ್ಕೆ ಯುದ್ಧ ವಿಮಾನಗಳನ್ನು ತಲುಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂದು ವರದಿಯಾಗಿತ್ತು.

    58 ಸಾವಿರ ಕೋಟಿ ರೂ.ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ 2016 ರ ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಐಎಎಫ್‌ನ ಅತ್ಯಂತ ಪ್ರಮುಖ ನೆಲೆಗಳಲ್ಲಿ ಒಂದಾಗಿರುವ ಹರ್ಯಾಣದ ಅಂಬಾಲ ವಾಯನೆಲೆಯಲ್ಲಿ ಮೊದಲ ಸ್ಕ್ವಾಡ್ರನ್ಅನ್ನು ಇರಿಸಲಾಗಿತ್ತದೆ.

  • ನಾವು ಬಾಲಕೋಟ್ ರೀತಿಯ ಇನ್ನೊಂದು ವೈಮಾನಿಕ ದಾಳಿಗೆ ಸಿದ್ಧ: ಐಎಎಫ್ ಮುಖ್ಯಸ್ಥ ಭದೌರಿಯಾ

    ನಾವು ಬಾಲಕೋಟ್ ರೀತಿಯ ಇನ್ನೊಂದು ವೈಮಾನಿಕ ದಾಳಿಗೆ ಸಿದ್ಧ: ಐಎಎಫ್ ಮುಖ್ಯಸ್ಥ ಭದೌರಿಯಾ

    ನವದೆಹಲಿ: ನಾವು ಬಾಲಕೋಟ್ ರೀತಿಯ ಇನ್ನೊಂದು ವೈಮಾನಿಕ ದಾಳಿಗೆ ಸಿದ್ಧವಿದ್ದೇವೆ ಎಂದು ಭಾರತೀಯ ವಾಯುಪಡೆ ನೂತನ ಮುಖ್ಯಸ್ಥ ಆರ್.ಕೆ.ಎಸ್ ಭದೌರಿಯಾ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಬಿ.ಎಸ್ ಧನೋವಾ ಅವರು ಇಂದು ನಿವೃತ್ತಿ ಹೊಂದಿದ ಬಳಿಕ ಅಧಿಕಾರ ವಹಿಸಿಕೊಂಡ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ, ಭವಿಷ್ಯದಲ್ಲಿ ಬಾಲಕೋಟ್ ರೀತಿಯ ದಾಳಿಗೆ ಭಾರತೀಯ ವಾಯುಪಡೆ ಸಿದ್ಧವಿದೆ ಎಂದು ಹೇಳಿದರು.

    ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮುಂದಿನ ಸವಾಲಿಗೆ ತಯಾರಾಗಿದ್ದೇವೆ. ಯಾವುದೇ ಬೆದರಿಕೆಗೆ ಹೆದುರುವುದಿಲ್ಲ ಎಂದರು. ಇದೇ ವೇಳೆ ಫೆಬ್ರವರಿಯಲ್ಲಿ ನಡೆದ ಬಾಲಕೋಟ್ ವೈಮಾನಿಕ ದಾಳಿಯಲ್ಲಿ ನಾಶವಾಗಿದ್ದ ಜೈಶ್-ಇ-ಮೊಹಮ್ಮದ್ ಉಗ್ರರ ಸಂಘಟನೆಯ ಕ್ಯಾಪ್ ಮತ್ತೆ ಸಕ್ರಿಯವಾಗಿದೆ ಎಂಬ ವಿಚಾರದ ಬಗ್ಗೆ ಕೇಳಿದಾಗ, ನಮಗೆ ಈ ವಿಚಾರದ ಬಗ್ಗೆ ಮಾಹಿತಿ ಸಿಕ್ಕಿದೆ ಅಗತ್ಯವಿದ್ದಾಗ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

    ನನ್ನ ಮೊದಲ ಆದ್ಯತೆ ಬಜೆಟ್ ಅನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲ ಜೆಟ್‍ಗಳನ್ನು ಅಧುನೀಕರಣ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವುದು. ನಮ್ಮ ಕಾರ್ಯಾಚರಣೆಗಳಲ್ಲಿ ರಫೇಲ್ ವಿಮಾನ ಮುಖ್ಯ ಪಾತ್ರ ವಹಿಸಲಿದೆ. ಈ ಜೆಟ್ ಚೀನಾ ಮತ್ತು ಪಾಕಿಸ್ತಾನದ ನಿದ್ದೆಗೆಡಿಸಲಿದೆ ಎಂದು ಹೇಳಿದರು. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪರುಮಾಣು ದಾಳಿಯ ವಿಚಾರದ ಬಗ್ಗೆ ಮಾತನಾಡಿದ ಅವರು, ಅದು ಅವರ ತಿಳುವಳಿಕೆ ಬಿಟ್ಟದ್ದು, ನಮಗೆ ನಮ್ಮದೇ ಆದ ಯೋಜನೆಗಳಿವೆ. ನಾವು ಯಾವುದೇ ಸಾವಲನ್ನು ಯಾವುದೇ ಸಮಯದಲ್ಲಾದರು ಎದುರಿಸಲು ಸಿದ್ಧವಿದ್ದೇವೆ ಎಂದು ತಿಳಿಸಿದರು.

    https://twitter.com/IAF_MCC/status/1178533186931806209

    ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾದ ಏರ್ ಮಾರ್ಷಲ್ ಭದೌರಿಯಾ ಅವರನ್ನು ಜೂನ್ 1980 ರಲ್ಲಿ ಐಎಎಫ್‍ನ ಫೈಟರ್ ಸ್ಟ್ರೀಮ್‍ನಲ್ಲಿ ನಿಯೋಜನೆ ಮಾಡಲಾಯಿತು. ಅವರು 39 ವರ್ಷಗಳ ಸೇವೆಯಲ್ಲಿ ವಿವಿಧ ಕಮಾಂಡ್, ಸಿಬ್ಬಂದಿ ಮತ್ತು ಸೂಚನಾ ನೇಮಕಾತಿಗಳು ಕೆಲಸವನ್ನು ನಿರ್ವಹಿಸಿದ್ದಾರೆ. ಇಂದು ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

    ಭದೌರಿಯಾ ಅವರು ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ವಾಯು ಸೇನಾ ಮೆಡಲ್ ಪಡೆದಿದ್ದಾರೆ. ಎಡಿಸಿಯ ಸುಪ್ರೀಂ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಭಡೌರಿಯಾ ಅವರು ಈ ವರೆಗೆ 4,250 ಗಂಟೆಗೂ ಹೆಚ್ಚು ಕಾಲ ವಿಮಾನ ಹಾರಾಟ ನಡೆಸಿದ್ದಾರೆ. ಒಟ್ಟು 26 ವಿವಿಧ ಯುದ್ಧ ವಿಮಾನಗಳು ಹಾಗೂ ಸಾಗಣಿಕಾ ವಿಮಾನಗಳಲ್ಲಿ ಹಾರಾಟ ನಡೆಸಿದ್ದಾರೆ. ಅಲ್ಲದೆ, ಪ್ರಾಯೋಗಿಕ ಪರೀಕ್ಷಾ ಪೈಲೆಟ್, ಕ್ಯಾಟ್ `ಎ’ ಅರ್ಹ ಫ್ಲೈಯಿಂಗ್ ಇನ್‍ಸ್ಟ್ರಕ್ಟರ್ ಹಾಗೂ ಪೈಲೆಟ್ ಅಟ್ಯಾಕ್ ಇನ್‍ಸ್ಟ್ರಕ್ಟರ್ ಅನುಭವ ಹೊಂದಿದ್ದಾರೆ. ಈ ಹಿಂದೆ ಫ್ರೆಂಚ್ ವಾಯುಪಡೆಯ ಮಾಂಟ್-ಡಿ-ಮಾರ್ಸನ್ ವಾಯುನೆಲೆಯಲ್ಲಿ ರಫೇಲ್ ವಿಮಾನವನ್ನು ಸಹ ಭಡೌರಿಯಾ ಹಾರಿಸಿದ್ದರು. ಬೆಂಗಳೂರಿನ ಮಾಜಿ ಚೀಫ್ ಟ್ರೇನಿಂಗ್ ಕಮಾಂಡರ್ ಆಗಿಯೂ ಭದೌರಿಯಾ ಕರ್ತವ್ಯ ನಿರ್ವಹಿಸಿದ್ದರು.