Tag: Reunion

  • 34 ವರ್ಷಗಳ ಬಳಿಕ ಸಹಪಾಠಿಗಳ ಪುನರ್ ಮಿಲನ – ಸವಿನೆನಪುಗಳ ಮೆಲುಕು!

    34 ವರ್ಷಗಳ ಬಳಿಕ ಸಹಪಾಠಿಗಳ ಪುನರ್ ಮಿಲನ – ಸವಿನೆನಪುಗಳ ಮೆಲುಕು!

    ಅಲ್ಲಿ ಸೇರಿದ್ದವರೆಲ್ಲಾ ಸುಮಾರು 55 ವರ್ಷ ವಯಸ್ಸಿನ ಆಸುಪಾಸಿನವರು.. ಪರಸ್ಪರ ಪರಿಚಯವಿಲ್ಲ.. ಅವರ್ಯಾರು ?ಇವರ್ಯಾರು? ಅಂತ ಮುಖ ಮುಖ ನೋಡಿ ಗುರುತು ಹಿಡಿಯುವ ಪ್ರಯತ್ನ..ಗುರುತು ಹಿಡಿಯುತ್ತಿದ್ದಂತೆ ಒಂದು ಆಲಿಂಗನ.. ಗೊತ್ತಾಗದ್ದಿದ್ದರೆ ಮಿಳಿ ಮಿಳಿ ಕಣ್ಣು ಬಿಟ್ಟು ಸ್ವಲ್ಪ ಹೊತ್ತು ನೋಡಿ ಪರಿಚಯ ಮಾಡಿಕೊಂಡು ಹರಟೆ ಆರಂಭ.. ಇದು ನಡೆದದ್ದು ಕಳೆದ ಭಾನುವಾರ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಸ್ಪಂದನ ಸಭಾಂಗಣದಲ್ಲಿ.. ಹಳೆ ವಿದ್ಯಾರ್ಥಿಗಳ ಪುನರ್ ಮಿಲನದಲ್ಲಿ..

    ಹೌದು ಅವರೆಲ್ಲಾ 34 ವರ್ಷಗಳ ಸುದೀರ್ಘ ಅವಧಿಯ ಬಳಿಕ ಅಲ್ಲಿ ಸೇರಿದ್ದರು.. ಕಾಲೇಜಿನ 1991ರ BSc ವಿದ್ಯಾರ್ಥಿಗಳ ಪುನರ್ ಸಮಾಗಮವದು. ಸಹಪಾಠಿ ಹಿರಿಯ ಪತ್ರಕರ್ತ, ಪ್ರಸ್ತುತ ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತ ಬದ್ರುದ್ದೀನ್.ಕೆ ಅವರು ಈ ಹುದ್ದೆಗೆ ನೇಮಕವಾದ ವಿಷಯವೇ ಈ ಪುನರ್ ಮಿಲನಕ್ಕೆ ನಾಂದಿ ಆಯಿತು . ಹಾಗೆ ಆರಂಭವಾದ ಸಹಪಾಠಿಗಳ ಹುಡುಕಾಟ ಮೂರು ದಶಕಗಳ ಬಳಿಕ ಪುನರ್ ಮಿಲನಕ್ಕೆ ವೇದಿಕೆ ಆಯಿತು ಎಂದು ಹೇಳಿದರು ಈ ತಂಡದ ವಿದ್ಯಾರ್ಥಿನಿ ಪ್ರಸ್ತುತ ಮಂಗಳೂರಿನ ಪದವಿ ಕಾಲೇಜಿನ ಪ್ರೊಫೆಸರ್ ಡಾ.ಕೃಷಪ್ರಭಾ ..

    ಬದ್ರುದ್ದೀನ್ ವಿಷಯದಲ್ಲಿ ಜುಲೈ 4ರಂದು ಪರಸ್ಪರ ಮಾತನಾಡಿದರು.. ಉಳಿದವರನ್ನು ಸೇರಿಸುವ ಸಲುವಾಗಿ ಚರ್ಚಿಸಿ ಸಿಗದವರ ಹುಡುಕಾಟ ನಡೆಯಿತು.. ವಾಟ್ಸಪ್‌ ಗ್ರೂಪ್ ರಚನೆ ಆಯಿತು.. 20 ದಿನದಲ್ಲಿ 52 ಮಂದಿಯ ಪೈಕಿ 47 ಮಂದಿ ಸಂಪರ್ಕಕ್ಕೆ ಬಂದರು.. ಒಮ್ಮೆ ತಕ್ಷಣಕ್ಕೆ ಸೇರೋಣ ಎಂದಾಯಿತು..

    ದೂರದ ದುಬಾಯಿಯಿಂದ ಹಿಡಿದು, ಕಲಬುರಗಿ, ಕೇರಳ, ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರಿನಿಂದ ಎಲ್ಲರೂ ಧಾವಿಸಿಬಿಟ್ಟರು. ಇದೆಲ್ಲಾ ಒಂದು ತಿಂಗಳಲ್ಲಿ ನಡೆದು ಹೋದದ್ದೆ ವಿಸ್ಮಯ..

    ಬೇರೆ ಬೇರೆ ಕಡೆ ವೃತ್ತಿಯಲ್ಲಿ ಇರುವ ಕಾಲೇಜಿನ ಪ್ರಾಂಶುಪಾಲರುಗಳು ಪ್ರೊಫೆಸರ್‌ಗಳು, ಉಪನ್ಯಾಸಕರು, ಪ್ರೌಢ ಶಾಲೆಗಳ ಮುಖ್ಯಶಿಕ್ಷಕರು, ಉದ್ಯಮಿಗಳು, ಪ್ರಗತಿಪರ ಕೃಷಿಕರು, ಸಹಕಾರಿ ಧುರೀಣರು, ದೇವಾಲಯದ ಧರ್ಮದರ್ಶಿಗಳು, ಸಮಾಜ ಸೇವಕರು, ಗೃಹಿಣಿಯರು, ವಿವಿಧ ಕ್ಷೇತ್ರಗಳ ಪರಿಣಿತರ ಸಮಾಗಮವೇ ಇದಾಗಿತ್ತು.

    ಕಾಲೇಜಿನಲ್ಲಿ ಅವರು ಕಳೆದ ಅವಧಿ, ಆಗಿನ ಸವಿನೆನಪು, ತುಂಟಾಟಗಳ ಮೆಲುಕು, ಜೀವನ ಸಾಗಿ ಬಂದ ಹಾದಿ, ಕಷ್ಟಕಾರ್ಪಣ್ಯಗಳನ್ನು ಹಂಚಿಕೊಂಡರು.. ತಮ್ಮ ಯಶೋಗಾಥೆಗಳನ್ನು ತಿಳಿಸಿ ಸಂಭ್ರಮಿಸಿದರು..

    ಹಾಡಿದರು ಕುಣಿದರು, ಫನ್ ಗೇಮ್ಸ್‌ ಗಳನ್ನು ಆಡುತ್ತಾ ಖುಷಿಪಟ್ಟರು.. ತಾವು ಕಲಿತ ತರಗತಿಯಲ್ಲಿ ಕೆಲಕಾಲ ಕಳೆದು ಹಳೆ ನೆನಪುಗಳನ್ನು ಮೆಲುಕು ಹಾಕಿದರು.. ಈ ಪುನರ್ ಮಿಲನ ಅವರಲ್ಲಿ ಹೊಸ ಹುರುಪು ಜೀವನೊಲ್ಲಾಸ ಮೂಡಿಸಿದಂತೆ ಭಾಸವಾಗಿದ್ದು ನಿಜ..

    ಒಟ್ಟಿಗೆ ಬೆಳಗಿನ ಉಪಹಾರದೊಂದಿಗೆ ಆರಂಭವಾದ ಈ ಸಮಾಗಮ ಸಹಭೋಜನದೊಂದಿಗೆ ಮುಂದುವರಿಯಿತು..
    ಕಾಲೇಜಿನ ಹಾಲಿ ಪ್ರಾಂಶುಪಾಲ ರೆ.ಫಾ.ಆಂಟನಿ ಪ್ರಕಾಶ್ ಮೊಂತೆರೊ ಹಳೆವಿದ್ಯಾರ್ಥಿಗಳೊಂದಿಗೆ ಬೆರೆತು ಸಹನುಡಿಗಳನ್ನು ಆಡಿದರು..

    ಕಾಲೇಜಿನೊಂದಿಗಿನ ಬೆಸುಗೆ ಮುಂದುವರಿಯಲಿ ಎಂದು ಆಶಿಸಿದರು.. ಒಟ್ಟಿಗೆ ಭೋಜನ ಸವಿದು ಸಂಭ್ರಮಕ್ಕೆ ಸಾಕ್ಷಿಯಾದರು.. ಉಪಪ್ರಾಂಶುಪಾಲ ವಿಜಯಕುಮಾರ್ ಮೊಳೆಯಾರ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಭಾರತಿ ರೈ ಜೊತೆಗಿದ್ದರು..

    ಮತ್ತೆ ಮತ್ತೆ ಸೆರೋಣ.. ಈ ಬೆಸುಗೆ ನಿರಂತರವಾಗಿರಲಿ ಎನ್ನುವುದೇ ಎಲ್ಲರ ಹಾರೈಕೆ ಮತ್ತು ಆಶಯವಾಗಿತ್ತು.. ಜೀವನದಲ್ಲಿ ಏನೋ ಗಳಿಸಿದ ಹುರುಪಿನೊಂದಿಗೆ..ನಿರಂತರ ಸಮ್ಮಿಲನದ ಸಂಕಲ್ಪದೊಂದಿಗೆ ತೆರಳಿದ ಎಲ್ಲರ ಮುಖದಲ್ಲಿ ಮಂದಹಾಸವಿತ್ತು.

  • ಹೂವಿನ ಅಂಗಿ ತೊಟ್ಟರು ದರ್ಶನ್

    ಹೂವಿನ ಅಂಗಿ ತೊಟ್ಟರು ದರ್ಶನ್

    ಬೆಂಗಳೂರು: ಯಜಮಾನ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿರುವ ದರ್ಶನ್ ಅದರ ನಡುವೆಯೂ ಮೈಸೂರಿನ ಹಳೆಯ ಸ್ನೇಹಿತರೊಂದಿಗೆ ಒಂದಿಷ್ಟು ಕಾಲ ಕಳೆದರು. ಬೆಳೆದು ದೊಡ್ಡವರಾಗುತ್ತಲೇ ಜೊತೆಗಿದ್ದವರನ್ನು ಮರೆತುಬಿಡುವ ಕಾಲಿವಿದೆ. ಆದರೆ ಅಂಥಾ ಕೆಟ್ಟ ಮರೆವು ನಮಗೆ ಬೇಡ ಅಂತಾ ತೀರ್ಮಾನಿಸಿರುವವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಒಬ್ಬರು.

    ಇವತ್ತಿಗೆ ನಾವೆಲ್ಲಾ ಏನೇ ಆಗಿರಬಹುದು ಆದರೆ ಹಳೆಯದನ್ನು ಮರೆಯಬಾರದು. ಕಡೇ ಪಕ್ಷ ವರ್ಷಕ್ಕೊಮ್ಮೆಯಾದರೂ ಜೊತೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಬೇಕು. ಒಬ್ಬರಿಗೊಬ್ಬರು ಕಷ್ಟ ಸುಖ ಹಂಚಿಕೊಳ್ಳಬೇಕು. ಭವಿಷ್ಯದ ಪ್ಲಾನುಗಳನ್ನು ಚರ್ಚಿಸಬೇಕು ಅನ್ನೋದು ದರ್ಶನ್ ಅವರ ಅಭಿಪ್ರಾಯ. ಈ ಕಾರಣದಿಂದಲೇ ಸುಮಾರು ವರ್ಷಗಳಿಂದ ಸ್ಕೂಲ್ ಮತ್ತು ಕಾಲೇಜಲ್ಲಿ ಜೊತೆಗೆ ಬೆಳೆದ ಸ್ನೇಹಿತರೊಂದಿಗೆ ಒಂದು ಔತಣಕೂಟವನ್ನು ಏರ್ಪಡಿಸಲಾಗುತ್ತಿದೆ. ದರ್ಶನ್ ಅವರ ಜೊತಗೆ ಸಂಪರ್ಕದಲ್ಲಿರುವ ಎಲ್ಲ ಗೆಳೆಯ-ಗೆಳತಿಯರೂ ಒಂದೆಡೆ ಸೇರುತ್ತಾರೆ.

    ಹಾಗೆ ನಿನ್ನೆ ಕೂಡಾ ರೀಯೂನಿಯನ್ ಸಭೆ ಏರ್ಪಾಡಾಗಿತ್ತು. ಅಲ್ಲಿಗೆ ಬಂದ ದರ್ಶನ್ ಗೆಳೆಯರು ಹೂವಿನಿಂದ ಸಿಂಗರಿಸಿದ ಅಂಗಿಯೊಂದನ್ನು ತೊಡಿಸಿದ್ದು ವಿಶೇಷವಾಗಿತ್ತು. ಮಲ್ಲಿಗೆ ಗುಲಾಬಿಗಳಿಂದ ತಯಾರಿಸಿದ್ದ ಆ ಅಂಗಿ ದರ್ಶನ್ ಅವರನ್ನು ಪೂರ್ತಿಯಾಗಿ ಆವರಿಸಿತ್ತು.

    ಈ ಸಂದರ್ಭದಲ್ಲಿ ದರ್ಶನ್ ಅವರ ಚಿತ್ರರಂಗದ ಗೆಳೆಯರಾದ ಸೃಜನ್, ಧರ್ಮ ಕೀರ್ತಿ ಮತ್ತು ಯಶಸ್ ಸೂರ್ಯ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.