Tag: Retail

  • ಚಿಕ್ಕಬಳ್ಳಾಪುರ: ಚುನಾವಣೆಗೂ ಮುನ್ನ ಖಾಲಿ ಹೊಡೆಯುತ್ತಿದ್ದ ಚಿನ್ನದಂಗಡಿಗಳು ಈಗ ಫುಲ್!

    ಚಿಕ್ಕಬಳ್ಳಾಪುರ: ಚುನಾವಣೆಗೂ ಮುನ್ನ ಖಾಲಿ ಹೊಡೆಯುತ್ತಿದ್ದ ಚಿನ್ನದಂಗಡಿಗಳು ಈಗ ಫುಲ್!

    ಚಿಕ್ಕಬಳ್ಳಾಪುರ: ರಾಜ್ಯ ಉಪಚುನಾವಣಾ ಕದನದ ಮತದಾನ ಮುಗಿದಿದ್ದು, ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಫಲಿತಾಂಶಕ್ಕೆ ಕೇವಲ ಒಂದೇ ದಿನ ಬಾಕಿ ಇದ್ದು, ಆದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಮತದಾನ ಮುಗಿದ ಬೆನ್ನಲ್ಲೇ ಮಹಿಳೆಯರ ಚಿತ್ತ ಮಾತ್ರ ಚಿನ್ನದತ್ತ ನೆಟ್ಟಿದೆ. ಚಿನ್ನಾಭರಣ ಸೇರಿದಂತೆ ಗೃಹಬಳಕೆ ವಸ್ತುಗಳ ಖರೀದಿಗೆ ಮಹಿಳೆಯರು ಮುಗಿಬಿದ್ದಿದ್ದು, ಅದರಲ್ಲೂ ಚಿನ್ನದಂಗಡಿಗಳಲ್ಲಿ ಮಹಿಳೆಯರೇ ತುಂಬಿತುಳುಕುತ್ತಿದ್ದಾರೆ.

    ಚುನಾವಣೆಗೂ ಮುನ್ನ ಖಾಲಿ ಖಾಲಿ ಹೊಡೆಯುತ್ತಿದ್ದ, ನಗರದ ಚಿನ್ನದಂಗಡಿಗಳಲ್ಲಿ ಚಿನ್ನಾಭರಣ ಕೊಳ್ಳುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಹೌದು, ಚುನಾವಣೆ ಬಂದಿದ್ದೇ ಕ್ಷೇತ್ರದಲ್ಲಿ ಕುರುಡು ಕಾಂಚಾಣದ ಅಬ್ಬರ ಬಲು ಜೋರಾಗಿಯೇ ಇತ್ತು. ಯಾರಿಗೇನು ಕಡಿಮೆ ಇಲ್ಲ ಎಂಬಂತೆ ಎಲ್ಲಾ ಪಕ್ಷದ ಅಭ್ಯರ್ಥಿಗಳು, ಕಾಂಚಾಣವನ್ನು ಮತದಾನದ ಹಿಂದಿನ ದಿನ ರಾತ್ರೋ ರಾತ್ರಿ ಹಂಚಿದ್ದಾರೆ ಎಂಬ ಮಾಹಿತಿ ಇದೆ.

    ಚುನಾವಣೆಯಲ್ಲಿ ಆಯಾ ಪಕ್ಷದ ಅಭ್ಯರ್ಥಿಗಳಿಂದ ಹಣ ಪಡೆದ ಮಹಿಳೆಯರು ಎಲ್ಲಾ ಹಣವನ್ನು ಕೂಡಿಟ್ಟು, ಈಗ ಚಿನ್ನಾಭರಣ ಸೇರಿದಂತೆ ಗೃಹಬಳಕೆ ವಸ್ತುಗಳನ್ನ ಕೊಂಡುಕೊಳ್ಳಲು ಮುಗಿಬಿದ್ದಿದ್ದಾರೆ. ಇದರಿಂದ ಇಷ್ಟು ದಿನ ನಿಧಾನವಾಗಿ ಸಾಗಿದ್ದ ವ್ಯಾಪಾರ ಈಗ ಬಲು ಜೋರಾಗಿದೆ ಎಂದು ಚಿನ್ನಾಭರಣ ವರ್ತಕರು ಹೇಳಿಕೆ ನೀಡಿದ್ದಾರೆ.

    ಚಿಕ್ಕಬಳ್ಳಾಪುರ ಉಪಚುನಾವಣಾ ಅಖಾಡದಲ್ಲಿ ಹಿಂದೆಂದೂ ಹರಿಯದ ದೊಡ್ಡ ಪ್ರಮಾಣದ ಕೋಟ್ಯಾಂತರ ರೂಪಾಯಿ ನೀರಿನಂತೆ ಖರ್ಚಾಗಿದೆ. ಆದರೆ ಇದೆಲ್ಲವನ್ನೂ ಕಂಡು ಕಾಣದಂತೆ ಚುನಾವಣಾಧಿಕಾರಿಗಳು ಸುಮ್ಮನಾಗಿದ್ದರು. ಹೀಗಾಗಿ ಕೋಟ್ಯಾಂತರ ರೂಪಾಯಿ ಹಣ ಮತದಾರರ ಕೈ ಸೇರಿದ್ದು. ಈಗ ಆ ಹಣದಲ್ಲಿ ತಮಗೆ ಬೇಕಾದ ವಸ್ತುಗಳನ್ನ ಜನ ಕೊಂಡುಕೊಳ್ಳುತ್ತಿದ್ದಾರೆ. ಇನ್ನೂ ಕ್ಷೇತ್ರದಲ್ಲಿ ಕೋಟಿ ಕೋಟಿ ರೂ. ಖರ್ಚು ಮಾಡಿ ಮತದಾರರಿಗೆ ಹಣ ಹಂಚಿ ಮತದಾರರನ್ನೇ ಭ್ರಷ್ಟರನ್ನಾಗಿ ಅಭ್ಯರ್ಥಿಗಳು ಮಾಡಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಪ್ರಜ್ಞಾವಂತರು ಹೇಳಿದ್ದಾರೆ.

  • ಸೋದರಿಯನ್ನೇ ಕೊಲೆ ಮಾಡಿ ನೇಣು ಹಾಕ್ದ

    ಸೋದರಿಯನ್ನೇ ಕೊಲೆ ಮಾಡಿ ನೇಣು ಹಾಕ್ದ

    ಹೈದರಾಬಾದ್: ಚಿನ್ನದ ಆಭರಣಗಳನ್ನು ಕೊಡಲಿಲ್ಲವೆಂದು ವ್ಯಕ್ತಿಯೊಬ್ಬ ತನ್ನ ಸಹೋದರಿಯನ್ನು ಕೊಲೆ ಮಾಡಿರುವ ಘಟನೆ ತೆಲಂಗಾಣದ ಚಂದನಗರದಲ್ಲಿ ನಡೆದಿದೆ.

    ಆರ್.ಸೀತಾಲಕ್ಷ್ಮಿ (42) ಮೃತ ಸಹೋದರಿ. ಆರೋಪಿ ಆರ್. ರಮಣ ರಾವ್ (36) ಸೆರಿಲಿಂಗಂಪಲ್ಲಿ ಗ್ರಾಮದವನಾಗಿದ್ದು, ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಲಕ್ಷ್ಮಿ ಪತಿಯಿಂದ ವಿಚ್ಛೇದನ ಪಡೆದುಕೊಂಡು ಒಂಟಿಯಾಗಿ ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದರು. ಮೃತ ಮಹಿಳೆಯ ಚಿಕ್ಕಪ್ಪನ ಮಗನಾಗಿದ್ದ ರಾವ್ ಕುಡಿತದ ಚಟಕ್ಕೆ ದಾಸನಾಗಿದ್ದನು. ಪ್ರತಿದಿನ ಮದ್ಯ ಸೇವಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ರಾವ್ ಕಂಠ ಪೂರ್ತಿ ಕುಡಿದು ಬಂದು ಲಕ್ಷ್ಮಿಯ ಚಿನ್ನಾಭರಣವನ್ನು ಕೇಳಿದ್ದಾನೆ. ಆದರೆ ಲಕ್ಷ್ಮಿ ಚಿನ್ನಾಭರಣ ಕೊಡಲು ನಿರಾಕರಿಸಿದ್ದು, ಇದರಿಂದ ಕೋಪಕೊಂಡ ಆರೋಪಿ ಕುಡಿದ ಮತ್ತಿನಲ್ಲಿ ಸಹೋದರಿಯನ್ನು ಕೊಲೆ ಮಾಡಿದ್ದಾನೆ. ನಂತರ ಆಕೆಯನ್ನು ನೇಣು ಹಾಕಿ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನೆರೆಹೊರೆಯವರಿಗೆ ತಿಳಿಸಿದ್ದಾನೆ. ಆದರೆ ಮೃತ ಮಹಿಳೆಯ ಸಹೋದರ ಶಿವಕುಮಾರ್‍ಗೆ ಸಾವಿನ ಬಗ್ಗೆ ಅನುಮಾನ ಮೂಡಿ, ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು.

    ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಅನುಮಾನಾಸ್ಪದ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇತ್ತ ಲಕ್ಷ್ಮಿಯನ್ನು ಸೀರೆಯಿಂದ ಕತ್ತು ಬಿಗಿದು ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿದುಬಂದಿತ್ತು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಆರೋಪಿ ರಾವ್‍ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿದ್ದಾರೆ. ಆಗ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನ ಬಳಿಯಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.