Tag: Reservation Fight

  • ಯತ್ನಾಳ್ ಪರ ಬ್ಯಾಟ್ ಬೀಸಿದ ಈಶ್ವರಪ್ಪ

    ಯತ್ನಾಳ್ ಪರ ಬ್ಯಾಟ್ ಬೀಸಿದ ಈಶ್ವರಪ್ಪ

    ವಿಜಯಪುರ: ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲ ಇಲಾಖೆಗಳು ನಿರೀಕ್ಷೆ ಮೀರಿ ಕೆಲಸ ಮಾಡುತ್ತಿವೆ. ಮೀಸಲಾತಿ ಹೋರಾಟವನ್ನ ನಾನು ಸ್ವಾಗತ ಮಾಡ್ತೀನಿ. ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಹಿಂದುತ್ವದ ಪ್ರಮುಖ ಶಕ್ತಿ. ಸಿಎಂ ಯಡ್ಡಿಯೂರಪ್ಪ ಹಾಗೂ ಮಗ ವಿಜಯೇಂದ್ರನ ಬಗ್ಗೆ ಆರೋಪಗಳ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಲಿ.ಅದು ಬಿಟ್ಟು ಮಾಧ್ಯಮಗಳ ಮುಂದೆ ಸಾರ್ವಜನಿಕವಾಗಿ ಮಾತನಾಡಬೇಡಿ ಎಂದು ಹೇಳಿದ್ದೀನಿ ಎಂದು ಪರೋಕ್ಷವಾಗಿ ಯತ್ನಾಳ್ ಪರ ಸಚಿವ ಕೆ.ಎಸ್.ಈಶ್ವರಪ್ಪ ಬ್ಯಾಟ್ ಬೀಸಿದರು.

    ಮೀಸಲಾತಿಯನ್ನು ಉಳ್ಳವರೆ ಅನುಭವಿಸುತ್ತಿದ್ದಾರೆ. ಅಪ್ಪ ಎಂಪಿ, ಮಗ ಶಾಸಕರಾಗುತ್ತಿದ್ದಾರೆ. ರಾಜಕೀಯ ಮೀಸಲಾತಿ ಸಹ ಸಿರಿವಂತರೆ ಅನುಭವಿಸುತ್ತಿದ್ದಾರೆ. ರಾಹುಲ್ ಗಾಂಧಿ ಏನ್ ಮಾಡ್ತಾರೋ ಅವರಿಗೆ ಗೊತ್ತಿಲ್ಲ. ಕಾಂಗ್ರೆಸ್ ಎಂದರೆ ಸುಭಾಷ್ ಚಂದ್ರ ಬೋಸ್ ನಂತವರ ರಕ್ತದ ಒಂದ ಅಂಶವಾದರೂ ಇದೆಯಾ ಎಂದು ಪ್ರಶ್ನಿಸಿದರು. ಇನ್ನು ಕಾಂಗ್ರೆಸ್ ದೇಶವನ್ನು ದಿವಾಳಿ ಮಾಡಿದ ಮುಸ್ಲಿಂ ಲೀಗ್ ದೇಶದ್ರೋಹಿ ಪಕ್ಷ. ಹಾಗಾಗಿ ಈ ಎರಡು ಪಕ್ಷಗಳ ಜೊತೆ ಬಿಜೆಪಿ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ ಎಂದರು.

    ಕಾಂಗ್ರೆಸ್‍ಗೆ ರಾಮನ ಶಾಪ ಬಿಡಲ್ಲ: ಗೋವಿನ ಶಾಪದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ರಾಮನ ಶಾಪದಿಂದ ಕಾಂಗ್ರೆಸ್ ನವರ ಅಡ್ರೆಸ್ ಇರಲ್ಲ ಅಂತಾ ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ವಿಜಯಪುರದಲ್ಲಿ ವಾಗ್ದಾಳಿ ನಡೆಸಿದರು.

    ಮುಸ್ಲಿಂರನ್ನ ಸಂತೃಪ್ತಿ ಪಡೆಸಲು ಹಿಂದೂ ಯುವಕರ ಕಗ್ಗೊಲೆಗಳು ಆಗಿವೆ. ಈಗ ರಾಮ ಮಂದಿರದ ಬಗ್ಗೆ ಅಕೌಂಟ್ ಕೇಳ್ತಿದ್ದಾರೆ. ಇವರಿಗೆ ರಾಮನ ಶಾಪ ಬಿಡಲ್ಲ. ಸಿದ್ದರಾಮಯ್ಯ ಮುಂದಿನ ಸಿಎಂ ಅಂತಾ ಹೇಳಿಕೊಳ್ಳುತ್ತಿದ್ದಾರೆ. ಮುಸ್ಲಿಮರ ಅಭಿವೃದ್ಧಿಗೆ ಎಷ್ಟೋ ಸಾವಿರ ಕೋಟಿ ಕೊಡ್ತೀನಿ ಅಂತಿದ್ದಾರೆ. ಅವರ ಪಕ್ಷದವರೇ ಸಿದ್ದರಾಮಯ್ಯ ಮುಂದಿನ ಸಿಎಂ ಅಭ್ಯರ್ಥಿ ಅಂತಾ ಹೇಳ್ತಿಲ್ಲ. ಡಿಕೆಶಿ ಕೂಡ ಸಿದ್ದರಾಮಯ್ಯ ಮುಂದಿನ ಸಿಎಂ ಅಭ್ಯರ್ಥಿ ಅಂತಾ ಹೇಳುತ್ತಿಲ್ಲ ಎಂದು ಕಿಚಾಯಿಸಿದರು.

  • ನಿರ್ಣಾಯಕ ‘ಪಂಚಮ’ ಕಹಳೆಗೆ ತತ್ತರಿಸಿದ ಸರ್ಕಾರ – ಯತ್ನಾಳ್ ರಾಜಕೀಯ ದಾಳ, ಫಲಕೊಡದ ಸಿಎಂ ಸಂಧಾನ

    ನಿರ್ಣಾಯಕ ‘ಪಂಚಮ’ ಕಹಳೆಗೆ ತತ್ತರಿಸಿದ ಸರ್ಕಾರ – ಯತ್ನಾಳ್ ರಾಜಕೀಯ ದಾಳ, ಫಲಕೊಡದ ಸಿಎಂ ಸಂಧಾನ

    – ಸರ್ಕಾರಕ್ಕೆ ಮಾರ್ಚ್ 4ರವರೆಗೂ ಡೆಡ್‍ಲೈನ್
    – ಇಕ್ಕಟ್ಟಿನಲ್ಲಿ ಸಿಎಂ ಬಿಎಸ್‍ವೈ

    ಬೆಂಗಳೂರು: 2ಎ ಮೀಸಲಾತಿಗೆ ಆಗ್ರಹಿಸಿ ಏಳುನೂರಕ್ಕೂ ಹೆಚ್ಚು ಕಿಲೋಮೀಟರ್ ದೂರವನ್ನು ಪಾದಯಾತ್ರೆ ಮೂಲಕ ಕ್ರಮಿಸಿದ ಪಂಚಮಸಾಲಿ ಸಮುದಾಯದ ಲಕ್ಷಾಂತರ ಮಂದಿ ಬೆಂಗಳೂರಿನಲ್ಲಿ ಪಂಚಮ ಪಾಂಚಜನ್ಯ ಮೊಳಗಿಸಿದ್ದಾರೆ. ಪಂಚಮಸಾಲಿ ಸಮುದಾಯದ ಹೋರಾಟವನ್ನು ನಿಲ್ಲಿಸಬೇಕೆಂದು ಸಚಿವರ ಮೂಲಕ ಸಿಎಂ ಯಡಿಯೂರಪ್ಪ ಮಾಡಿದ ಒಂದೇ ಒಂದು ತಂತ್ರವೂ ಫಲ ಕೊಡಲಿಲ್ಲ. ಬದಲಿಗೆ ಮೀಸಲು ಹೋರಾಟ ಇನ್ನಷ್ಟು ತೀವ್ರವಾಯ್ತು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಇಡೀ ಸಮುದಾಯ ಯತ್ನಿಸಿತು. ಅಧಿವೇಶನದಲ್ಲಿ ಅಂತಿಮ ನಿರ್ಣಯ ಆಗಲೇಬೇಕು. ಎಂಬ ಒಕ್ಕೊರಲ ನಿರ್ಣಯವನ್ನು ಸಮಾವೇಶ ತೆಗೆದುಕೊಂಡಿದೆ. ಇದರಿಂದಾಗಿ ಸಿಎಂ ಯಡಿಯೂರಪ್ಪ ಅಕ್ಷರಷಃ ಅಡಕತ್ತರಿಗೆ ಸಿಲುಕಿದ್ದಾರೆ.

    ಸ್ವಾಗತ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್, ಕತ್ತಿ ಝಳಪಿಸುವ ಮೂಲಕ, ವಿಜಯಾನಂದ ಕಾಶಪ್ಪನವರ್ ಕಹಳೆ ಊದುವ ಮೂಲಕ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿದರು. ಸಮಾವೇಶ ಉದ್ದೇಶಿಸಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಇದು ಮುಕ್ತಾವಯಲ್ಲ, ಶಕ್ತಿ ಪ್ರದರ್ಶನ. ಯಾರೇನೇ ಒತ್ತಡ ಹೇರಿದರೂ ಮೀಸಲಾತಿ ಸಿಗೋವರೆಗೂ ಹೋರಾಟ ನಿಲ್ಲಿಸಲ್ಲ. ಮಾರ್ಚ್ 4ರವರೆಗೂ ಶಾಂತಿಯುತ ಧರಣಿ ಮಾಡೋದಾಗಿ ಘೋಷಿಸಿದರು.

    ಸಚಿವರ ಮನವೊಲಿಕೆ ಫುಲ್ ಫೇಲ್: ಸಿಎಂ ಸಂದೇಶ ತಂದಿದ್ದ ಸಚಿವ ಸಿಸಿ ಪಾಟೀಲ್ ಮಾತನಾಡಿ, ನಮ್ಮ ಹೋರಾಟಕ್ಕೆ ಸಿಎಂ ಬೆಂಬಲ ಸೂಚಿಸಿದ್ದಾರೆ. ಹಿಂದುಳಿದ ಆಯೋಗಕ್ಕೆ ವರದಿ ನೀಡುವಂತೆ ಸೂಚಿಸಿದ್ದಾರೆ. ಏಕಾಏಕಿ ತೀರ್ಮಾನ ಕೈಗೊಂದರೆ ಬೇರೆಯವರು ನ್ಯಾಯಾಲಯಕ್ಕೆ ಹೋಗಬಹುದು ಎನ್ನುತ್ತಲೇ ಸಭಿಕರು ಘೋಷಣೆ ಕೂಗಿದರು. ಆದ್ರೂ ಮಾತು ಮುಂದುವರೆಸಿದ ಸಿಸಿ ಪಾಟೀಲ್, ಸಮಾವೇಶದ ನಂತರ ಪ್ರತಿಭಟನೆ ಕೈಬಿಡಿ ಮನವಿ ಮಾಡಿದರು.

    ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಯಾರು ಚಿಂತೆ ಮಾಡುವ ಅಗತ್ಯವಿಲ್ಲ. ಮೀಸಲಾತಿ ಕೊಡಿಸುವ ಸಲುವಾಗೆ ಈ ಸಮಾವೇಶ ಮಾಡ್ತಿದ್ದೇವೆ. 70 ವರ್ಷ ಆಳಿದವರು ಏನು ಮಾಡಲಿಲ್ಲ ಅಂತಾ ಕಾಂಗ್ರೆಸ್ಸಿಗರ ಮೇಲೆ ಗೂಬೆ ಕೂರಿಸಲು ನೋಡಿದರು. ನಾವು ಕೊಟ್ಟೇ ಕೊಡ್ತೀವಿ ಸ್ವಲ್ಪ ಟೈಮ್ ಕೊಡಿ ಎಂದು ಮನವಿ ಮಾಡಿಕೊಂಡರು.

    ಸಚಿವರ ಭರವಸೆಯನ್ನು ಒಪ್ಪಲು ತಯಾರಿಲ್ಲದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಮೂಗಿಗೆ ತುಪ್ಪ ಸವರೋ ಕೆಲಸ ಮಾಡಬೇಡಿ. ಇದು ಮಾಡು ಇಲ್ಲವೇ ಮಡಿ ಹೋರಾಟ. ಮೀಸಲಾತಿ ಸಿಗವರೆಗೂ ಮನೆಗೆ ಹೋಗಲ್ಲ. ನಾವು ವಿಧಾನಸೌಧಕ್ಕೆ ಮುತ್ತಿಗೆ ಹಾಕೇ ಹಾಕ್ತೀವಿ ಅಂತಾ ಗುಡುಗಿದರು.

    ಯತ್ನಾಳ್ ಸವಾಲ್:
    ಸಚಿವರ ಭರವಸೆಯನ್ನು ನಂಬಲು ತಯಾರಿರದ ಜಯಮೃತ್ಯುಂಜಯ ಸ್ವಾಮೀಜಿ, ಮುಂದಿನ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಸ್ವಾಗತ ಸಮಿತಿ ಅಧ್ಯಕ್ಷ ಯತ್ನಾಳ್‍ಗೆ ನೀಡಿದ್ರು. ಈ ವೇಳೆ ಮಾತನಾಡಿದ ಯತ್ನಾಳ್, ನನ್ನ ಕೈಯಲ್ಲಿ ಕತ್ತಿ ಕೊಟ್ಟಿದ್ದಾರೆ. ಯಾಕೆ ಅಂದ್ರೆ ಮಾಡು ಇಲ್ಲವೇ ಮಡಿ ಅಂತಾ. ನಾವು ಬೆನ್ನಿಗೆ ಚೂರಿ ಹಾಕಲ್ಲ. ಎದುರು ಬಂದ್ರೆ ಹೊಡೆಯೋದೇ ಅಂತಾ ಅಬ್ಬರಿಸಿದರು. ಇಬ್ಬರು ಸಚಿವರು ಹೋಗಿ ಸಿಎಂಗೆ ಕೇಳಿ, ಇಲ್ಲವಾದ್ರೆ ರಾಜೀನಾಮೆ ಕೊಡ್ತಿನಿ ಅಂತಾ ಹೇಳಿರಿ.. ಅದ್ಯಾಕೆ ಮಾಡಲ್ಲ ನಾನು ನೋಡ್ತೀನಿ ಅಂತಾ ಓಪನ್ ವೇದಿಕೆಯಲ್ಲಿ ಸವಾಲು ಹಾಕಿದರು.

    ಶಾಸಕ ಯತ್ನಾಳ್ ಉರುಳಿಸಿದ ರಾಜಕೀಯ ದಾಳಕ್ಕೆ ಕಕ್ಕಾಬಿಕ್ಕಿಯಾದ ಸಚಿವರಿಬ್ಬರು ಕೋಪದಿಂದ ವೇದಿಕೆಯಿಂದ ಕೆಳಗಿಳಿದು ಹೊರ ನಡೆದರು. ನೇರವಾಗಿ ಸಿಎಂ ಮನೆಗೆ ಹೋಗಿ ಸಮಾವೇಶದ ವರದಿ ಒಪ್ಪಿಸಿದರು. ಇದಕ್ಕೂ ಮುನ್ನ ಜೈಲಲ್ಲಿರುವ ಮಾಜಿ ಮಂತ್ರಿ ವಿಜಯ್ ಕುಲಕರ್ಣಿ ಪತ್ನಿಯನ್ನು ವೇದಿಕೆಗೆ ಕರೆಯಿಸಿ ಸಮುದಾಯದ ಮುಖಂಡರು ಧೈರ್ಯ ತುಂಬುವ ಕೆಲಸ ಮಾಡಿದರು. ಈ ವೇಳೆ ಮಾತು ಬಾರದೇ ವಿನಯ್ ಕುಲಕರ್ಣಿ ಪತ್ನಿ ಗದ್ಗದಿತರಾದರು. ಸಮಾವೇಶದ ಮಧ್ಯೆ ಮಳೆ ಬಂದು ಕೆಲ ಕಾಲ ಜನ ಪರದಾಡಿದರು. ನಗರದಲ್ಲಿ ಟ್ರಾಫಿಕ್ ಜಾಮ್ ಕೂಡ ಕಂಡುಬಂತು.