Tag: Rescue Team

  • ಮಳೆಯಿಂದ ಚರಂಡಿ ಒಳಗೆ ಬಿದ್ದ ಶ್ವಾನವನ್ನು ರಕ್ಷಿಸಿದ ರೆಸ್ಕ್ಯೂ ಟೀಮ್

    ಮಳೆಯಿಂದ ಚರಂಡಿ ಒಳಗೆ ಬಿದ್ದ ಶ್ವಾನವನ್ನು ರಕ್ಷಿಸಿದ ರೆಸ್ಕ್ಯೂ ಟೀಮ್

    ಬೆಂಗಳೂರು: ಮಳೆಯಿಂದ ಚರಂಡಿಗೆ ಒಳಗೆ ಬಿದ್ದ ಶ್ವಾನವನ್ನು ಸಿವಿಲ್ ಡಿಫೆನ್ಸ್ ಕ್ವಿಕ್ ರೆಸ್ಕ್ಯೂ ಟೀಮ್ ರಕ್ಷಿಸಿದೆ.

    ಸಿಲಿಕಾನ್ ಸಿಟಿಯಲ್ಲಿ ಒಂದೇ ಸಮನೆ ಸುರಿದ ಮಳೆಯಿಂದ ತಪ್ಪಿಸಿಕೊಳ್ಳಲು ಹೋಗಿ ವಿದ್ಯಾರಣ್ಯಪುರದಲ್ಲಿ ನಾಯಿಯೊಂದು ತೆರೆದ ಸ್ಲ್ಯಾಬ್ ನಿಂದಾಗಿ ಚರಂಡಿ ಒಳಗೆ ಹೋಗಿದೆ. ನಂತರ ಮೇಲೆ ಬರಲಾರದೇ ಸುಮಾರು ಎರಡು ಗಂಟೆ ಒದ್ದಾಡಿದೆ.

    ಇದನ್ನು ಕಂಡ ಸ್ಥಳೀಯರು ಕೊನೆಗೆ ಸಿವಿಲ್ ಡಿಫೆನ್ಸ್ ಕ್ವಿಕ್ ರೆಸ್ಕ್ಯೂ ಟೀಮ್‍ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದು ಟೀಮ್ ಡ್ರೈನೇಜ್‍ನಲ್ಲಿ ಒದ್ದಾಡಿ ಗೋಳಿಡುತ್ತಿದ್ದ ನಾಯಿಯನ್ನು ಅರ್ಧಗಂಟೆ ಕಾರ್ಯಚರಣೆ ಮಾಡಿ ರಕ್ಷಿಸಿದ್ದಾರೆ. ಚರಂಡಿಯಿಂದ  ಹೊರ ಬರುತ್ತಿದ್ದಂತೆ ನಾಯಿ ಖುಷಿಯಿಂದ ರಕ್ಷಿಸಿದ ಟೀಮ್ ನತ್ತ ಕೃತಜ್ಞತಾ ದೃಷ್ಟಿ ಬೀರಿದೆ.

  • ಬ್ಯಾಂಕ್ ಛಾವಣಿ ಕುಸಿದು ಓರ್ವ ಸಾವು, 10 ಜನರಿಗೆ ಗಾಯ

    ಬ್ಯಾಂಕ್ ಛಾವಣಿ ಕುಸಿದು ಓರ್ವ ಸಾವು, 10 ಜನರಿಗೆ ಗಾಯ

    ಮುಂಬೈ: ಬ್ಯಾಂಕ್ ಅಫ್ ಮಹಾರಾಷ್ಟ್ರದ ಶಾಖೆಯೊಂದರ ಮೇಲ್ಛಾವಣಿ ಕುಸಿದು ಓರ್ವ ಮೃತಪಟ್ಟು, 10 ಜನ ಗಂಭೀರ ಗಾಯಗೊಂಡ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ.

    ಬೆಳಗ್ಗೆ 11ಕ್ಕೆ ವ್ಯವಹಾರ, ವಹಿವಾಟು ಜೋರಾಗಿ ನಡೆಯುತಿತ್ತು. ಗ್ರಾಹಕರು ಹೆಚ್ಚಿದ್ದ ಸಂದರ್ಭದಲ್ಲೇ ಬ್ಯಾಂಕಿನ ಮೇಲ್ಛಾವಣಿ ಕುಸಿದಿದೆ ಎಂದು ಕರ್ಮಲಾ ಪೊಲೀಸ್ ಠಾಣೆಯ ತನಿಖಾಧಿಕಾರಿ ಶ್ರೀಕಾಂತ್ ಪದುಲೆ ಅವರು ತಿಳಿಸಿದ್ದಾರೆ.

    ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಟ್ಟಡದ ಸುತ್ತಲಿನ ಪ್ರದೇಶ ಹಾನಿಯಾಗಿತ್ತು. ಇಂದು ಇದ್ದಕ್ಕಿದ್ದಂತೆ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಹತ್ತಾರು ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಬಲೆ ಹಾಕಿದಂತಾಗಿತ್ತು.

    ಸಾವನ್ನಪ್ಪಿದವರನ್ನು ಪ್ರಶಾಂತ್ ಬಗಾಲ್(40) ಎಂದು ಗುರುತಿಸಲಾಗಿದ್ದು, ಕ್ಯಾಷ್ ಕೌಂಟರ್ ಬಳಿ ನಿಂತಿದ್ದಾಗ ಮೇಲ್ಛಾವಣಿ ಕುಸಿದು ಬಿದ್ದಿದೆ. ಕಟ್ಟದ ಅವಶೇಷದಡಿ ಸಿಲುಕಿಕೊಂಡಿದ್ದ 10 ಜನರನ್ನು ರಕ್ಷಿಸಲಾಗಿದ್ದು, ಗಂಭೀರ ಗಾಯಗೊಂಡಿದ್ದಾರೆ ಎಂದು ಶ್ರೀಕಾಂತ್ ಪದುಲೆ ತಿಳಿಸಿದ್ದಾರೆ.

    ಇನ್ನೂ 10 ಜನರು ಕಟ್ಟಡದ ಅವಶೇಷದ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇರುವುದರಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಬ್ಯಾಂಕ್ ಅಲ್ಲದೆ, ಮೊದಲ ಮಹಡಿ ಕ್ಲಿನಿಕ್‍ನಲ್ಲಿದ್ದ ಕೆಲವು ರೋಗಿಗಳೂ ಸಹ ಸಿಲುಕೊಂಡಿರುವ ಶಂಕೆ ಇದೆ.

  • ಬಾವಿಗೆ ಬಿದ್ದ 4 ವರ್ಷದ ಚಿರತೆ ರಕ್ಷಣೆ – ವಿಡಿಯೋ ವೈರಲ್

    ಬಾವಿಗೆ ಬಿದ್ದ 4 ವರ್ಷದ ಚಿರತೆ ರಕ್ಷಣೆ – ವಿಡಿಯೋ ವೈರಲ್

    ಪುಣೆ: ಬಾವಿಯಲ್ಲಿ ಬಿದ್ದು ಮೇಲೆ ಹತ್ತಲು ಸಾಧ್ಯವಾಗದೆ ಒದ್ದಾಡುತ್ತಿದ್ದ 4 ವರ್ಷದ ಗಂಡು ಚಿರತೆಯನ್ನು ರಕ್ಷಿಸುವಲ್ಲಿ ವೈಲ್ಡ್ ಲೈಫ್ ಎಸ್‍ಓಎಸ್ ಹಾಗೂ ಶಿರೂರ್ ರೇಂಜ್ ರಕ್ಷಣಾ ತಂಡ ಯಶಸ್ವಿಯಾಗಿದ್ದು, ವಿಡಿಯೋ ವೈರಲ್ ಆಗಿದೆ.

    ಶಿರೂರ್ ತಾಲೂಕಿನ ಫಕ್ಟೆ ಎಂಬ ಗ್ರಾಮದಲ್ಲಿ ಬಾವಿಯೊಂದಕ್ಕೆ ಚಿರತೆ ಆಕಸ್ಮಿಕವಾಗಿ ಬಿದ್ದಿತ್ತು. ಶಿರೂರ್ ರೇಂಜ್‍ನ ರಕ್ಷಣಾ ತಂಡದ ಸ್ವಯಂ ಸೇವಕ ವಿಟಲ್ ಬಾಬುರಾವ್ ಬುಜ್ಬಲ್ ಮಾಹಿತಿ ನೀಡಿದ ನಂತರ ರಕ್ಷಣಾ ತಂಡಗಳು ಸ್ಥಳಕ್ಕಾಗಮಿಸಿ ರಕ್ಷಿಸಿವೆ.

    ರೇಂಜ್ ಫಾರೆಸ್ಟ್ ಆಫೀಸರ್ ಮನೋಹರ್ ರಾಮ್‍ದೇವ್, ಮಾಣಿಕ್‍ದೋ ಚಿರತೆ ರಕ್ಷಣಾ ಕೇಂದ್ರದ ಪಶು ವೈದ್ಯಾಧಿಕಾರಿ, ಡಾ.ಅಜಯ್ ದೇಶಮುಖ್, ಅವರ ನೇತೃತ್ವದಲ್ಲಿ ಚಿರತೆಯನ್ನು ರಕ್ಷಿಸಲಾಗಿದೆ.

    ರಕ್ಷಣೆಯ ನಂತರ ಚಿರತೆಯನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಮಾಣಿಕ್‍ದೋ ಚಿರತೆ ರಕ್ಷಣಾ ಕೇಂದ್ರಕ್ಕೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಚಿರತೆ ರಕ್ಷಣೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಕೋಲ್ಕತ್ತಾದಲ್ಲಿ ಸೇತುವೆ ಕುಸಿತ – 8 ಮಂದಿಗೆ ಗಾಯ

    ಕೋಲ್ಕತ್ತಾದಲ್ಲಿ ಸೇತುವೆ ಕುಸಿತ – 8 ಮಂದಿಗೆ ಗಾಯ

    ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದ ಡೈಮಂಡ್ ಹರ್ಬರ್ ರಸ್ತೆಯಲ್ಲಿರುವ ಮಜರತ್ ಸೇತುವೆ ಕುಸಿದು ಬಿದ್ದ ಪರಿಣಾಮ, ಓರ್ವ ಸಾವನ್ನಪ್ಪಿ, ಹಲವು ಜನ ಅವಶೇಷಗಳ ಅಡಿಯಲ್ಲಿ ಸಿಲುಕೊಂಡಿದ್ದಾರೆ.

    ರಾಜಧಾನಿಯ ಹಳೆಯ ನಗರ ಹಾಗೂ ಜನಜಂಗುಳಿ ಹೆಚ್ಚಿರುವ ಡೈಮಂಡ್ ಹರ್ಬರ್ ರಸ್ತೆಯಲ್ಲಿರುವ ಮಜರತ್ ಸೇತುವೆಯು ಸಂಜೆ 4.45ರ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದ್ದು, ಪರಿಣಾಮವಾಗಿ ಅದರ ಮೇಲೆ ಸಂಚರಿಸುತ್ತಿದ್ದ ಹಲವು ವಾಹನಗಳು ಸೇರಿದಂತೆ 10 ಕ್ಕೂ ಹೆಚ್ಚು ಬೈಕುಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿವೆ. ಅಲ್ಲದೇ ಸ್ಥಳದಲ್ಲೇ ಓರ್ವ ಸಾವನ್ನಪ್ಪಿ 8ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಅವಶೇಷಗಳ ಅಡಿಯಲ್ಲಿ ಹಲವು ಮಂದಿ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು, ಸಿಲುಕಿಕೊಂಡಿರುವ ಜನರನ್ನು ರಕ್ಷಿಸುತ್ತಿದ್ದು, ಗಾಯಗೊಂಡಿದ್ದ 8 ಮಂದಿಯನ್ನು ಎಸ್‍ಎಸ್‍ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೇತುವೆ ಬಿದ್ದ ಪರಿಣಾಮ ವಾಹನಗಳು ಸಂಪೂರ್ಣ ನಜ್ಜು-ಗುಜ್ಜಾಗಿವೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸೇತುವೆ ಕುಸಿದು ಬಿದ್ದು, ಹಲವರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವುದು ಮಾಹಿತಿ ಸಿಕ್ಕಿದೆ. ಈಗಾಗಲೇ ರಕ್ಷಣಾ ತಂಡ ಹಾಗೂ ಅಗ್ನಿಶಾಮಕದಳ ಸಿಬ್ಬಂದಿಯು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಾನು ತುರ್ತು ಭೇಟಿಗಾಗಿ ಡಾರ್ಜಿಲಿಂಗ್ ಗೆ ಭೇಟಿ ನೀಡಿದ್ದು, ಯಾವುದೇ ವಿಮಾನಗಳು ಇಲ್ಲದ ಕಾರಣ ಘಟನಾ ಸ್ಥಳಕ್ಕೆ ತೆರಳಲು ಸಾಧ್ಯವಾಗಿಲ್ಲ. ಶೀಘ್ರವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅಲ್ಲದೇ ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಆದೇಶ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಬಿಜೆಪಿಯ ಮುಖಂಡ ಮುಕುಲ್ ರಾಯ್ ಪ್ರತಿಕ್ರಿಯಿಸಿ, ಸೇತುವೆ ಕುಸಿತಕ್ಕೆ ಸಿಎಂ ಮಮತಾ ಬ್ಯಾನರ್ಜಿಯವರೇ ನೇರ ಹೊಣೆ. ಕೇವಲ ಅವರು ನಗರವನ್ನು ಸುಂದರವಾಗಿಸುವುದಾಗಿ ಆಶ್ವಾಸನೆ ನೀಡುತ್ತಿದ್ದಾರೆಯೇ ಹೊರತು, ಯಾವುದೇ ಹಳೆಯ ಕಾಮಗಾರಿಗಳನ್ನು ಸರಿಪಡಿಸುವಲ್ಲಿ ಗಮನಹರಿಸಿಲ್ಲ. ಇದರ ಹೊಣೆಯನ್ನು ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv