Tag: renamed

  • ಜಿಲ್ಲಾಧಿಕಾರಿ ಬದಲಾಗಿ ಕಲೆಕ್ಟರ್ ಮರುನಾಮಕರಣ: ಕಂದಾಯ ಸಚಿವ

    ಜಿಲ್ಲಾಧಿಕಾರಿ ಬದಲಾಗಿ ಕಲೆಕ್ಟರ್ ಮರುನಾಮಕರಣ: ಕಂದಾಯ ಸಚಿವ

    ಕಾರವಾರ: ಹಳ್ಳಿಗಳಲ್ಲಿ ಜನರ ಸಮಸ್ಯೆ ತಿಳಿದು ಸೂಕ್ತ ಪರಿಹಾರ ಕಲ್ಪಿಸುವ ಸಂಬಂಧ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ತಿಂಗಳಿಗೊಮ್ಮೆ ಹಳ್ಳಿಗಳಿಗೆ ತೆರಳುವ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.

    ಕುಮಟಾದ ಡಯಟ್ ಮೈದಾನದಲ್ಲಿ ಆಯೋಜಿಸಿದ್ದ ಮಿನಿ ವಿಧಾನಸೌಧದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದೆಲ್ಲೆಡೆ ಜಿಲ್ಲಾಧಿಕಾರಿಯನ್ನು ಕಲೆಕ್ಟರ್ ಎಂದು ಕರೆಯುತ್ತಾರೆ. ಹೀಗಾಗಿ ಜಿಲ್ಲಾಧಿಕಾರಿ ಎಂಬ ಹೆಸರನ್ನು ಕಲೆಕ್ಟರ್ ಎಂದು ಬದಲಿಸುವ ಪ್ರಸ್ತಾವ ನಮ್ಮ ಮುಂದಿದೆ. ಇದರ ಜತೆಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ತಿಂಗಳಿಗೆ ಒಮ್ಮೆ ಹಳ್ಳಿಗಳಿಗೆ ತೆರಳಿ, ಅಲ್ಲಿನ ಸಮಸ್ಯೆಗಳನ್ನು ಅರಿತು ಪರಿಹರಿಸಬೇಕು. ಈ ನಿಟ್ಟಿನಲ್ಲಿ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಹೇಳಿದರು.

    ಪ್ರತಿ ತಿಂಗಳಿಗೊಮ್ಮೆ ಡಿಸಿ, ಉಪವಿಭಾಗಧಿಕಾರಿ, ತಹಶೀಲ್ದಾರರು ಒಂದು ಗ್ರಾಮ ಪಂಚಾಯತಿಗೆ ಭೇಟಿ ನೀಡಬೇಕು. ಬೆಳಗ್ಗೆ 11 ಗಂಟೆಗೆ ಹಳ್ಳಿಯಲ್ಲಿದ್ದು, ಸಂಜೆ 5 ಗಂಟೆಯವರೆಗೆ ಅಲ್ಲಿನ ಸಮಸ್ಯೆ ಪರಿಶೀಲಿಸಬೇಕು. ದಲಿತರ, ರೈತರ ಮನೆಯಲ್ಲಿ ಊಟ ಮಾಡಬೇಕು. ಇದನ್ನು ಇಡೀ ರಾಜ್ಯದ ಜಿಲ್ಲಾಧಿಕಾರಿಗಳು ಅನುಸರಿಸಬೇಕು ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಹೇಳಿದರು.

    ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಂಡಿದ್ದರೆ ಸಮಸ್ಯೆ ತಿಳಿಯುವುದಿಲ್ಲ. ಬದಲಿಗೆ ಭೇಟಿ ನೀಡಿದ ವೇಳೆ ಶಾಲಾ ಅಂಗನವಾಡಿಗಳು ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕು. ಹಿರಿಯರ ಪಿಂಚಣಿ, ಖಾತಾ ಸಮಸ್ಯೆ, ರೈತರ ಸಮಸ್ಯೆಗಳ ಬಗ್ಗೆ ಪರಿಶೀಲಿಸಬೇಕು. ಪ್ರವಾಹ ಸಂತ್ರಸ್ತರಿಗೆ ಸರ್ಕಾರದಿಂದ ತೊಂದರೆಯಾಗಬಾರದು. ಕೂಡಲೇ ಅವರು ಮನೆಗಳನ್ನು ಕಟ್ಟಿಕೊಳ್ಳಬೇಕು. ಪ್ರತಿ ಡಿಸಿ ಖಾತೆಯಲ್ಲಿ ಕನಿಷ್ಠ 5 ಕೋಟಿ ಇರಬೇಕು. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಡಿಸಿ ಖಾತೆಯಲ್ಲಿ 50 ಕೋಟಿ ಇದೆ. ಪ್ರವಾಹ ಸಂತ್ರಸ್ತರಿಗೆ ಕೂಡಲೇ ಮನೆ ಕಟ್ಟಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

    ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಶೇ. 80ರಷ್ಟು ಅರಣ್ಯ, ಸಮುದ್ರ, ನದಿ, ಹಿನ್ನೀರಿನಿಂದ ಆವೃತವಾಗಿದೆ. ಸಿಆರ್ಝೆಡ್ ಸಮಸ್ಯೆಯಿಂದಾಗಿ ಜನರಿಗೆ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿ ಜನರು ಎರಡ್ಮೂರು ಗುಂಟೆ ಜಾಗದಲ್ಲಿ ಜನರು ವಾಸಿಸುತ್ತಿದ್ದಾರೆ. ಇ-ಸ್ವತ್ತು ಎಂಬ ಭೂತದಿಂದ ಎಲ್ಲವೂ ಹಾಳಾಗಿದೆ. ಇದು ಬಹುದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದ್ದು, ಇದನ್ನು ನಿವಾರಿಸಿಕೊಡಬೇಕು. ಈ ಹಿಂದಿನ ಕಾಂಗ್ರೆಸ್, ಸಮ್ಮಿಶ್ರ ಸರ್ಕಾರದಲ್ಲಿ ಈ ನಿಯಮ ಸರಳೀಕರಣಗೊಳಿಸುವುದಾಗಿ ಹೇಳಿದ್ದರು.

    ಇದರಿಂದ ಪುರಸಭೆಗಾಗಲಿ, ಗ್ರಾಮ ಪಂಚಾಯತಿಗಾಗಲಿ ಆದಾಯವಿಲ್ಲ. ಮನೆ ಕಟ್ಟಿಕೊಳ್ಳಲು ಆಗದೇ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆಗಳು ಬರುತ್ತಿಲ್ಲ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಟ್ಕಳ ಶಾಸಕ ಸುನೀಲ ನಾಯ್ಕ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಸಿಇಒ ಮೊಹಮ್ಮದ್ ರೋಶನ್, ಜಿಲ್ಲಾ ಪಂಚಾಯತಿ ಸದಸ್ಯರಾದ ರತ್ನಾಕರ್ ನಾಯ್ಕ, ಶ್ರೀಕಲಾ ಶಾಸ್ತ್ರಿ, ತಾಲೂಕು ಪಂಚಾಯತಿ ಅಧ್ಯಕ್ಷೆ ವಿಜಯಾ ಪಟಗಾರ ಇದ್ದರು.

  • ದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣಕ್ಕೆ ಅರುಣ್ ಜೇಟ್ಲಿ ಹೆಸರು ಮರುನಾಮಕರಣ

    ದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣಕ್ಕೆ ಅರುಣ್ ಜೇಟ್ಲಿ ಹೆಸರು ಮರುನಾಮಕರಣ

    ನವದೆಹಲಿ: ದೆಹಲಿಯ ಪ್ರತಿಷ್ಠಿತ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣಕ್ಕೆ ಮಾಜಿ ಅಧ್ಯಕ್ಷ ಹಾಗೂ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಹೆಸರನ್ನು ಮರುನಾಮಕರಣ ಮಾಡಲು ನಿರ್ಧಾರ ಕೈಗೊಂಡಿದೆ.

    ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘ(ಡಿಡಿಸಿಎ) ಈ ವಿಚಾರವನ್ನು ತಿಳಿಸಿದ್ದು, ಸೆಪ್ಟೆಂಬರ್ 12ರಂದು ನಡೆಯಲಿರುವ ಸಮಾರಂಭದಲ್ಲಿ ಮರುನಾಮಕರಣ ಮಾಡಲಾಗುವುದು. ಅಲ್ಲದೆ, ಕೋಟ್ಲಾ ಸ್ಟ್ಯಾಂಡ್‍ಗೆ ಈ ಹಿಂದೆ ಘೋಷಿಸಿದಂತೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಹೆಸರನ್ನು ಇಡಲಾಗುವುದು ಎಂದು ತಿಳಿಸಿದೆ.

    ಮೈದಾನಕ್ಕೆ ಫಿರೋಜ್ ಷಾ ಕೋಟ್ಲಾ ಎಂದೇ ಕರೆಯಲಾಗುತ್ತದೆ, ಆದರೆ ಕ್ರೀಡಾಂಗಣದ ಹೆಸರನ್ನು ಮಾತ್ರ ಮರುನಾಮಕರಣ ಮಾಡಲಾಗುತ್ತದೆ ಎಂದು ಡಿಡಿಸಿಎ ಸ್ಪಷ್ಟಪಡಿಸಿದೆ.

    ಈ ಕುರಿತು ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ ಮಾತನಾಡಿ, ವಿರಾಟ್ ಕೊಹ್ಲಿ, ವಿರೇಂದ್ರ  ಸೆಹ್ವಾಗ್, ಗೌತಮ್ ಗಂಭೀರ್, ಆಶಿಶ್ ನೆಹ್ರಾ, ರಿಷಬ್ ಪಂತ್‍ರಂತಹ ಆಟಗಾರರಿಗೆ ಅರುಣ್ ಜೇಟ್ಲಿ ಅವರು ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತಿದ್ದರು. ಇವೆರಲ್ಲರೂ ಭಾರತ ಹೆಮ್ಮೆ ಪಡುವಂತಹ ನಾಯಕರು ಎಂದು ಶರ್ಮಾ ತಿಳಿಸಿದ್ದಾರೆ.

    ಜೇಟ್ಲಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕ್ರೀಡಾಂಗಣದಲ್ಲಿ ಅಧುನಿಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ನವೀಕರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ವಿಶ್ವ ದರ್ಜೆಯ ಡ್ರೆಸ್ಸಿಂಗ್ ರೂಂ ನಿರ್ಮಿಸುವುದರ ಜೊತೆಗೆ ಕ್ರೀಡಾಂಗಣದ ಸಾಮಥ್ರ್ಯವನ್ನು ಹೆಚ್ಚಿಸಿದ್ದಾರೆ ಎಂದು ಶರ್ಮಾ ಇದೇ ವೇಳೆ ಜೇಟ್ಲಿ ಅವರ ಕಾರ್ಯವನ್ನು ಸ್ಮರಿಸಿದ್ದಾರೆ.

    ಸೆಪ್ಟೆಂಬರ್ 12ರಂದು ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯುವ ಈ ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಕ್ರೀಡಾ ಸಚಿವ ಕಿರಣ್ ರಿಜಿಜು ಉಪಸ್ಥಿತರಿರಲಿದ್ದಾರೆ.

    ಫಿರೋಜ್ ಷಾ ಕ್ರೀಡಾಂಗಣವು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಂತರ ಭಾರತ ಎರಡನೇ ಅತ್ಯಂತ ಹಳೇಯ ಕ್ರಿಕೆಟ್ ಕ್ರೀಡಾಂಗಣವಾಗಿದೆ. 1883ರಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಪ್ರಸ್ತುತ ಕ್ರೀಡಾಂಗಣದ ಸಾಮರ್ಥ್ಯ 40 ಸಾವಿರಕ್ಕಿಂತ ಹೆಚ್ಚಿದೆ. ಈ ಕ್ರೀಡಾಂಗಣ 34 ಟೆಸ್ಟ್ ಪಂದ್ಯಗಳು, 25 ಏಕದಿನ ಮತ್ತು 5 ಟಿ-20 ಪಂದ್ಯಗಳಿಗೆ ಆತಿಥ್ಯ ವಹಿಸಿದೆ.

  • ಜೆಎನ್‍ಯುಗೆ ಮೋದಿ ಹೆಸರನ್ನು ಇಡಬೇಕು – ಬಿಜೆಪಿ ಸಂಸದ

    ಜೆಎನ್‍ಯುಗೆ ಮೋದಿ ಹೆಸರನ್ನು ಇಡಬೇಕು – ಬಿಜೆಪಿ ಸಂಸದ

    ನವದೆಹಲಿ: ಜವಾಹರ್‍ಲಾಲ್ ನೆಹರು ವಿಶ್ವದ್ಯಾಲಯ(ಜೆಎನ್‍ಯು)ಕ್ಕೆ ಪ್ರಧಾನಿ ನರೇಂದ್ರ ಮೋದಿ(ಎಂಎನ್‍ಯು) ಹೆಸರನ್ನು ಮರುನಾಮಕರಣ ಮಾಡಬೇಕು ಎಂದು ದೆಹಲಿ ವಾಯವ್ಯ ಕ್ಷೇತ್ರದ ಸಂಸದ ಹನ್ಸ್ ರಾಜ್ ಹನ್ಸ್ ಅವರು ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ.

    ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಏಕ್ ಶಾಮ್ ಶಹೀದಾನ್ ಕೆ ನಾಮ್’ ಕಾರ್ಯಕ್ರಮದಲ್ಲಿ ಭಗವಹಿಸಿ ಮಾತನಾಡಿದ ಅವರು, ಕಾಶ್ಮೀರದ ಕುರಿತು ಮಾತನಾಡುವಾಗ ಜವಾಹರ್‍ಲಾಲ್ ನೆಹರು ಹಾಗೂ ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದರು. ಹಿಂದೆ ನಮ್ಮ ಹಿರಿಯರು ಮಾಡಿದ ತಪ್ಪುಗಳ ತೀವ್ರತೆಯನ್ನು ಇದೀಗ ನಾವು ಎದುರಿಸುತ್ತಿದ್ದೇವೆ ಎಂದು ನೆಹರು ಹಾಗೂ ಗಾಂಧಿ ಕುಟುಂಬದ ವಿರುದ್ಧ ಕಿಡಿ ಕಾರಿದರು.

    ನಾವೆಲ್ಲರೂ ಶಾಂತಿಯುತವಾಗಿ ಬದುಕುತ್ತಿದ್ದೇವೆ. ಈ ಸ್ಥಳವನ್ನು ಬಾಂಬ್ ದಾಳಿಗಳು ಆವರಿಸಿಕೊಳ್ಳಬಾರದು ಎಂದು ಪ್ರಾರ್ಥಿಸಿ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿ ಮುಗಿದ ನಂತರ ಜೆಎನ್‍ಯುಗೆ ಎಂಎನ್‍ಯು ಎಂದು ಮರುನಾಮಕರಣ ಮಾಡಬೇಕು. ಅಲ್ಲದೆ, ಮೋದಿ ಅವರ ನೆನಪಿಗಾಗಿ ಯಾವುದಕ್ಕಾದರೂ ಅವರ ಹೆಸರಿಡಬೇಕಿದೆ ಎಂದು ಹನ್ಸ್ ರಾಜ್ ತಿಳಿಸಿದ್ದಾರೆ.

    ಈ ಹೇಳಿಕೆ ನಂತರ ಸಂಸದ ಹನ್ಸ್ ರಾಜ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಜವಾಹರ್‍ಲಾಲ್ ನೆಹರು ಅವರು ಈ ಹಿಂದೆ(ಜಮ್ಮು ಕಾಶ್ಮೀರವನ್ನು ಉಲ್ಲೇಖಿಸಿ) ತಪ್ಪುಗಳನ್ನು ಮಾಡಿದ್ದಾರೆ ಎಂದು ಕಿಡಿ ಕಾರಿದರು.

    ವಿವಿಗೆ ಮರುನಾಮಕರಣ ಮಾಡುವ ಕುರಿತ ತಮ್ಮ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಮೊದಲ ಬಾರಿಗೆ ಜೆಎನ್‍ಯುಗೆ ಬಂದಿದ್ದು, ಜೆಎನ್‍ಯು ಬಗ್ಗೆ ಸಾಕಷ್ಟು ಕೇಳಿದ್ದೇನೆ. ಆದರೆ, ಈಗ ಮೋದಿ ಸರ್ಕಾರದ ಪ್ರಯತ್ನದಿಂದಾಗಿ ವಿವಿಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಹೀಗಾಗಿ ಜೆಎನ್‍ಯುಗೆ ‘ಮೋದಿ ನರೇಂದ್ರ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಬೇಕೆಂದು ಹೇಳಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಎಬಿವಿಪಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಹನ್ಸ್ ರಾಜ್ ಮಾತ್ರವಲ್ಲದೆ, ಸಂಸದ ಮನೋಜ್ ತಿವಾರಿ ಸಹ ಇದೇ ರೀತಿ ಹೇಳಿಕೆ ನೀಡಿದ್ದಾರೆ.

    ನಾವಿಲ್ಲಿ ಪಾಸಿಟಿವ್ ಜೆಎನ್‍ಯು ನೋಡುತ್ತಿದ್ದೇವೆ. ಈ ಹಿಂದೆ ಕೆಲವರು ವಿಶ್ವವಿದ್ಯಾಲಯದಲ್ಲೇ ‘ಭಾರತ್ ತೆರೆ ತುಕ್ಡೆ ಹೋಂಗೆ’ ಘೋಷಣೆಗಳನ್ನು ಕೂಗಿದ್ದರು. ಇದೀಗ ವಿವಿ ಬೆಳೆದು ಸಮಯಕ್ಕೆ ತಕ್ಕಂತೆ ಬದಲಾವಣೆಯಾಗಿದೆ. ಈಗ ವಿದ್ಯಾರ್ಥಿಗಳು ‘ವಂದೇ ಮಾತರಂ’ ಹಾಗೂ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳನ್ನು ಕೂಗುವುದನ್ನು ನಾವು ಕೇಳಿದ್ದೇವೆ ಎಂದು ತಿವಾರಿ ಹೇಳಿದರು.

    ಜೆಎನ್‍ಯು ಹೆಸರನ್ನು ಬದಲಿಸುವ ಹನ್ಸ್ ರಾಜ್ ಅವರ ಹೇಳಿಕೆ ಕುರಿತು ತಿವಾರಿ ಪ್ರತಿಕ್ರಿಯಿಸಿ, ಕೆಲವೊಮ್ಮೆ ಉತ್ಸಾಹದಿಂದ ಹೇಳಿಕೆಗಳನ್ನು ನೀಡುತ್ತೇವೆ. ಹಾಗೆ ಹೇಳಿದ ಮಾತ್ರಕ್ಕೆ ಅದನ್ನೇ ಮಾಡುತ್ತಾರೆ ಎಂದಲ್ಲ. ಹನ್ಸ್ ರಾಜ್ ಅವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಮೋದಿ ಅವರನ್ನು ಹೆಚ್ಚು ಇಷ್ಟ ಪಡುವ ಕಾರಣದಿಂದ ಆ ರೀತಿ ಹೇಳಿದ್ದಾರೆ ಎಂದು ತಿವಾರಿ ಸ್ಪಷ್ಟಪಡಿಸಿದರು.

    ಇತ್ತೀಚೆಗೆ ದೆಹಲಿಯ ಬಿಜೆಪಿ ಮುಖ್ಯಸ್ಥರೊಬ್ಬರು ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಓಕೆ)ವನ್ನು ವಾಪಸ್ ಪಡೆಯಲು ಭಾರತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಒಂದು ಭಾಗ ಎಂದು ರಾಷ್ಟ್ರದ ಪ್ರತಿ ಮಗು ಹೇಳುತ್ತದೆ. ಹೀಗಾಗಿ ಅದನ್ನು ಹಿಂಪಡೆಯಲು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರತಿಪಾದಿಸಿದ್ದರು.