Tag: Rejection

  • ಫಾತಿಮಾ ‘ಛಂದ ಪುಸ್ತಕ ಬಹುಮಾನ’ ನಿರಾಕರಣೆ: ಸೋಷಿಯಲ್ ಮೀಡಿಯಾದಲ್ಲಿ ಎಡ-ಬಲ ಚರ್ಚೆ

    ಫಾತಿಮಾ ‘ಛಂದ ಪುಸ್ತಕ ಬಹುಮಾನ’ ನಿರಾಕರಣೆ: ಸೋಷಿಯಲ್ ಮೀಡಿಯಾದಲ್ಲಿ ಎಡ-ಬಲ ಚರ್ಚೆ

    ಪ್ರತಿವರ್ಷವೂ ಛಂದ ಪುಸ್ತಕ (Chanda Pushtaka) ಪ್ರಕಾಶನವು ಕಥೆಗಾರರನ್ನು ಉತ್ತೇಜಿಸುವ ಸುಲವಾಗಿ ‘ಛಂದ ಪುಸ್ತಕ ಬಹುಮಾನ’ ನೀಡುತ್ತಾ ಬಂದಿದೆ. ಮೊನ್ನೆಯಷ್ಟೇ 2022ನೇ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಘೋಷಿಸಲಾಗಿತ್ತು. ಈ ಬಾರಿಯ ಪ್ರಶಸ್ತಿಯನ್ನು ಯುವ ಬರಹಗಾರ್ತಿ ಫಾತಿಮಾ ರಲಿಯಾ (Fatima Ralia) ಪಡೆದುಕೊಂಡಿದ್ದರು. ಸತತ ಮೂರು ವರ್ಷಗಳ ಕಾಲ ಮಹಿಳೆಯರೇ ಈ ಪ್ರಶಸ್ತಿಯನ್ನು ಪಡೆದಿದ್ದರಿಂದ ಸ್ವತಃ ಸ‍ಂಸ್ಥೆಯೇ ಹೆಮ್ಮೆಯ ಮಾತುಗಳನ್ನು ಆಡಿತ್ತು. ಆದರೆ, ಹೆಮ್ಮೆಪಟ್ಟ ಸಂಗತಿಯೇ ಇದೀಗ ವಿವಾದಕ್ಕೆ ಮೂಲವಾಗಿ ಕೂತಿದೆ. ಈ ಬಾರಿ ಪ್ರಶಸ್ತಿ ಪಡೆದಿರುವ ಫಾತಿಮಾ, ಆ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

    ಅಂದುಕೊಂಡಂತೆ ನಡೆದಿದ್ದರೆ, ಮುಂದಿನ ತಿಂಗಳು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬೇಕಿತ್ತು. ಅಂದು ಪ್ರಶಸ್ತಿ ಪ್ರದಾನ ಮತ್ತು ಬಹುಮಾನ ಬಂದ ಹಸ್ತಪ್ರತಿಯು ಪುಸ್ತಕವಾಗಿ ಬಿಡುಗಡೆ ಆಗಬೇಕಿತ್ತು. ಅಂದು ಕಾರ್ಯಕ್ರಮಕ್ಕೆ ಬರುವಂತೆ ಸ್ವತಃ ಫಾತಿಮಾ ರಲಿಯಾ ಕೂಡ ಕೆಲವರಿಗೆ ಮಸೇಜ್ ಕೂಡ ಮಾಡಿದ್ದರು. ಆದರೆ, ಇದೀಗ ಪ್ರಶಸ್ತಿಯನ್ನೇ ನಿರಾಕರಿಸಿ ಚರ್ಚೆಗೆ ಕಾರಣವಾಗಿದ್ದಾರೆ. ಛಂದ ಸಂಸ್ಥೆಗೆ ಕಳುಹಿಸಿರುವ ಇಮೇಲ್ ನಲ್ಲಿ ‘ವೈಯಕ್ತಿಕ ಕಾರಣದಿಂದಾಗಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲ’ ಎಂದು ಬರೆದಿದ್ದಾರೆ. ಹಾಗಾಗಿ ಛಂದ ಪ್ರಕಾಶನದ ವಸುಧೇಂದ್ರ ಕೂಡ ಆ ಬರಹಗಾರ್ತಿಯ ನಿರ್ಧಾರವನ್ನು ಗೌರವಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:`ಕಾಂತಾರ’ ಮುಂದೆ ಬೆದರಿದ ಬಾಲಿವುಡ್: ಥಿಯೇಟರ್‌ಗೆ `ಗುಡ್ ಬೈ’ ಹೇಳಿದ ರಶ್ಮಿಕಾ ಚಿತ್ರ

    ಪ್ರಶಸ್ತಿ ನಿರಾಕರಣೆಯ ಹಿಂದೆ ಹಲವು ಅನುಮಾನಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿವೆ. ರಲಿಯಾ ಕಳುಹಿಸಿದ್ದ ಹಸ್ತಪ್ರತಿಯಲ್ಲಿ ಮುಸ್ಲಿಂ ಮಹಿಳೆಯರ ತಲ್ಲಣಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಪುಸ್ತಕವನ್ನು ಪ್ರಕಟಿಸದಂತೆ ಮತ್ತು ಬಹುಮಾನವನ್ನು ಪಡೆಯದಂತೆ ರಲಿಯಾಗೆ ಒತ್ತಡವನ್ನೂ ಹೇರಲಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ವೈಯಕ್ತಿಕ ಕಾರಣ ನೀಡಿ, ಅವರು ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ವಿಜಯ ಕರ್ನಾಟಕ ಕಥಾ ಸ್ಪರ್ಧೆಯಲ್ಲೂ ಇವರಿಗೆ ಬಹುಮಾನ ಬಂದಿತ್ತು. ಕಾರ್ಯಕ್ರಮಕ್ಕೆ ಬರದೇ ಇದ್ದರೂ, ಆ ಪ್ರಶಸ್ತಿಯನ್ನು ಮತ್ತು ನಗದು ಬಹುಮಾನವನ್ನು ಅವರು ಸ್ವೀಕರಿಸಿದ್ದಾರೆ. ಛಂದ ಪುಸ್ತಕ ಬಹುಮಾನವನ್ನು ಮಾತ್ರ ನಿರಾಕರಿಸಿದ್ದಾರೆ. ಹಾಗಾಗಿ ಅನೇಕ ಪ್ರಶ್ನೆಗಳು ಮೂಡಿವೆ.

    ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಛಂದ ಪುಸ್ತಕದ ವಸುಧೇಂದ್ರ (Vasudhendra), ‘ಆ ಹುಡುಗಿ ವೈಯಕ್ತಿಕ ಕಾರಣ ಎಂದು ಹೇಳಿ ಬಹುಮಾನವನ್ನು ನಿರಾಕರಿಸಿದ್ದಾರೆ. ವೈಯಕ್ತಿಕ ಕಾರಣ ಅಂತ ಹೇಳಿದ ಮೇಲೆ ನಾವೂ ಅದನ್ನು ಕೇಳಲು ಹೋಗಿಲ್ಲ. ನಿರಾಕರಣೆಯ ಹಿಂದೆ ಅವರ ಧರ್ಮದವರು ಇದ್ದಾರೆ ಎನ್ನುವುದನ್ನು ನಾನು ಒಪ್ಪಲಾರೆ. ಈ ಬಹುಮಾನ ಬಂದಾಗ ಅವರ ಧರ್ಮದವರೇ ಸಂಭ್ರಮಿಸಿದ್ದಾರೆ. ಈಗಾಗಲೇ ರಲಿಯಾ ಒಂದು ಪುಸ್ತಕವನ್ನೂ ಪ್ರಕಟಿಸಿದ್ದಾರೆ. ನಿರಾಕರಣೆಗೆ ಬೇರೆ ಬಣ್ಣ ಕೊಡುವುದು ಬೇಡ’ ಎಂದರು.

    ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ ಗ್ರಾಮದವರಾದ ಫಾತಿಮಾ ರಲಿಯಾ ಸದ್ಯಕ್ಕೆ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ವಾಸಿಸುತ್ತಿದ್ದಾರೆ. ತಂದೆ ಅಬ್ದುಲ್ ರಶೀದ್ ಮತ್ತು ತಾಯಿ ಆಯಿಶಾ. ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಬಿಎ ಪದವಿಯನ್ನು ಪಡೆದಿರುವ ಇವರು, ’ಕಡಲು ನೋಡಲು ಹೋದವಳು’ ಎಂಬ ಲಲಿತ ಪ್ರಬಂಧಗಳ ಸಂಕಲನವನ್ನು ಈ ವರ್ಷವೇ ಪ್ರಕಟಿಸಿದ್ದಾರೆ. ಕಳೆದ ವಾರವಷ್ಟೇ ವಿಜಯ ಕರ್ನಾಟಕ ಕಥಾ ಸ್ಪರ್ಧೆಯ ಬಹುಮಾನವನ್ನೂ ಇವರು ಪಡೆದಿದ್ದಾರೆ. ಛಂದ ಪುಸ್ತಕ ಬಹುಮಾನವಾಗಿ 40,000 ರೂಪಾಯಿ, ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆಯಲಿದ್ದರು.

    ಈ ಬಾರಿಯ ಛಂದಾ ಪುಸ್ತಕ ಬಹುಮಾನಕ್ಕಾಗಿ 93 ಕತೆಗಾರರು ಭಾಗವಹಿಸಿದ್ದರು. ಈ ಬಾರಿಯ ಹಸ್ತಪ್ರತಿ ಬಹುಮಾನದ ಆಯ್ಕೆಯನ್ನು ದೇಶದ ಹೆಮ್ಮೆಯ ಸಿನಿಮಾ ನಿರ್ದೇಶಕ ಶ್ರೀ ಗಿರೀಶ ಕಾಸರವಳ್ಳಿ (Girish Kasaravalli) ಅವರು ಮಾಡಿದ್ದರು. ರಲಿಯಾ ಬರೆದು ಪುಸ್ತಕದ ಬಗ್ಗೆ ಗಿರೀಶ್ ಟಿಪ್ಪಣಿ ಮಾಡಿ, “ಬದುಕಿನ ಹಲವು ಸಂಕಟಗಳನ್ನು ಮತ್ತು ಸಂಕಷ್ಟಗಳನ್ನು ಇವರು ಆಳವಾದ ಕಾಳಜಿಯಿಂದ ಗಮನಿಸಿ ದಾಖಲಿಸುತ್ತಾರೆ. ಸಮಾಜವನ್ನು ವ್ಯಕ್ತಿಯ ನೆಲೆಯಿಂದಷ್ಟೇ ನೋಡದೆ, ಸಮುದಾಯದ ದೃಷ್ಟಿಯಿಂದ ನೋಡುತ್ತಾರೆ. ಕನ್ನಡ ಕಥನಲೋಕಕ್ಕೆ ಮುಸ್ಲಿಂ ಮಹಿಳೆಯರ ತಲ್ಲಣಗಳ ಕತೆಗಳನ್ನು ಈಗಾಗಲೇ ಸಾರಾ ಅಬೂಬಕ್ಕರ್ ಮತ್ತು ಬಾನು ಮುಷ್ತಾಕ್ ಅವರು ಕಟ್ಟಿಕೊಟ್ಟಿದ್ದಾರೆ. ಅವರಿಬ್ಬರ ಕತೆಗಳಲ್ಲಿ ಬರುವ ಪಾತ್ರಗಳಂತೆ, ಇವರ ಕತೆಗಳಲ್ಲೂ ಪಾತ್ರಚಿತ್ರಣವು ವಿಶಿಷ್ಟವಾಗಿದೆ. ಹೊರಸಮಾಜ ಕಟ್ಟಲಿಚ್ಚಿಸುವ ಏಕಶಿಲಾಕೃತಿಯ (ಸ್ಟೀರಿಯೋಟೈಪ್) ವ್ಯಕ್ತಿಗಳಿಗಿಂತಲೂ ಭಿನ್ನ ಪಾತ್ರಚಿತ್ರಣ ಇವುಗಳಲ್ಲಿ ಕಾಣಬಹುದು. ಧರ್ಮವು ಒಡ್ಡುವ ಹಲವು ಪ್ರಶ್ನೆಗಳಿಗೆ ಮುಖಾಮುಖಿಯಾಗಿ, ಧರ್ಮದ ಚೌಕಟ್ಟನ್ನು ದಾಟಿ ಬದುಕನ್ನು ನೋಡುವ ಆತ್ಮಸ್ಥೈರ್ಯ ಇವರಿಗಿದೆ’ ಎಂದು ಬರೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಉದ್ಯೋಗಕ್ಕೆ ಕುತ್ತು ತಂದ ಸರ್‌ನೇಮ್- ಫೇಸ್‍ಬುಕ್‍ನಲ್ಲಿ ಯುವತಿ ಅಳಲು

    ಉದ್ಯೋಗಕ್ಕೆ ಕುತ್ತು ತಂದ ಸರ್‌ನೇಮ್- ಫೇಸ್‍ಬುಕ್‍ನಲ್ಲಿ ಯುವತಿ ಅಳಲು

    ದಿಶ್ಪೂರ್: ಸರ್‌ನೇಮ್ (ಉಪನಾಮ)ದಿಂದಾಗಿ ಯುವತಿಯೊಬ್ಬಳು ಉದ್ಯೋಗಕ್ಕೆಂದು ಹಾಕಿರುವ ಅರ್ಜಿ ತಿರಸ್ಕೃತಗೊಂಡಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಅಸ್ಸಾಂನ ಸ್ನಾತಕೋತ್ತರ ಪದವೀಧರೆ ಪ್ರಿಯಾಂಕ ಚುತಿಯಾ ಅವರ ಅರ್ಜಿ ತಿರಸ್ಕೃತಗೊಂಡಿದೆ. ಇದರಿಂದ ಮನನೊಂದ ಯುವತಿ ಫೇಸ್‍ಬುಕ್ ಮೂಲಕ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಕೇವಲ ನನ್ನ ಸರ್ ನೇಮ್‍ನಿಂದಾಗಿ ಉದಯೋಗಕ್ಕಾಗಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿರುವುದು ನನಗೆ ಬಹಳ ನೋವಾಗಿದೆ ಎಂದು ಪ್ರಿಯಾಂಕ ಹೇಳಿಕೊಂಡಿದ್ದಾಳೆ.

    ಪ್ರಿಯಾಂಕ ಚುತಿಯಾ ಅವರ ನೇಮ್‍ನಲ್ಲಿ ‘ಚುತಿಯಾ’ ಎಂಬುದು ಅವರ ಉಪನಾಮವಾಗಿದೆ. ಇದನ್ನು ಅಸ್ಸಾಂಮಿನಲ್ಲಿ ‘ಸುತಿಯಾ’ ಎಂದು ಉಚ್ಛರಿಸಲಾಗುತ್ತಿದೆ. ಆದರೆ ಇದೇ ಸರ್‌ನೇಮ್ ಬಳಸಿ ಪ್ರಿಯಾಂಕ ಅವರು, ನ್ಯಾಷನಲ್ ಸೀಡ್ ಕಾರ್ಪೊರೇಶನ್ ಲಿಮಿಟೆಡ್ (ಎನ್‍ಎಸ್‍ಸಿಎಲ್) ಎಂಬ ಸರ್ಕಾರಿ ಒಡೆತನದ ಕಂಪನಿಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾಳೆ. ಆದರೆ ಆಕೆಯ ಸರ್ ನೇಮ್‍ನಲ್ಲಿ ‘ಆಡುಭಾಷೆ’ ಬಳಕೆಯಾಗಿದೆ ಎಂದು ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ.

    ಪ್ರಿಯಾಂಕ ಚುತಿಯಾ ಅವರು, ಅಸ್ಸಾಂನ ಗೋಗಾಮುಖ್ ಮೂಲದವಳಾಗಿದ್ದು, ಆಕೆಯ ಮನೆತನದವರಿಗೆ ಚುತಿಯಾ ಎಂಬ ಸರ್‌ನೇಮ್ ಇದೆ. ಆದರೆ ಇದನ್ನು ಅಸ್ಸಾಂನಲ್ಲಿ ಸುತಿಯಾ ಎಂದು ಉಚ್ಛರಿಸಲಾಗುತ್ತದೆ. ಪ್ರಿಯಾಂಕ ಕೃಷಿ ಅರ್ಥಶಾಸ್ತ್ರ ಮತ್ತು ಕೃಷಿ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ. ಹೀಗಾಗಿ ಆಕೆ ಎನ್‍ಎಸ್‍ಸಿಎಲ್ ಕಂಪನಿಗೆ ಉದ್ಯೋಗ ಅರ್ಜಿ ಸಲ್ಲಿಸಿದ್ದಾಳೆ. ಆದರೆ ಎನ್‍ಎಸ್‍ಸಿಎಲ್ ಕಂಪನಿಯ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸುವಾಗ ನಿಮ್ಮ ಹೆಸರಿನಲ್ಲಿ ಆಡುಭಾಷೆ ಬಳಸಲಾಗಿದೆ. ಆದ್ದರಿಂದ ನಿಮ್ಮ ಅರ್ಜಿಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದೆ.

    ಇದರಿಂದ ಬೇಸರಗೊಂಡ ಪ್ರಿಯಾಂಕ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ಕೇವಲ ನನ್ನ ಸರ್ ನೇಮ್‍ನಿಂದ ನನ್ನ ಅರ್ಜಿ ತಿರಸ್ಕೃತವಾಗಿದೆ. ಎನ್‍ಎಸ್‍ಸಿಎಲ್ ಕಂಪನಿಯ ಪೋರ್ಟಲ್‍ನಲ್ಲಿ ಅರ್ಜಿಯ ಸರ್ ನೇಮ್‍ನಲ್ಲಿ ಆಡುಭಾಷೆಯಿದೆ ಎಂದು ಹೇಳಿದೆ. ನಾನು ಅವರಿಗೆ ನನ್ನ ಉಪನಾಮದಲ್ಲಿ ಆಡುಭಾಷೆ ಬಳಸಿಲ್ಲ. ನನ್ನ ಸಮುದಾಯದಿಂದ ನನಗೆ ಆ ಸರ್‌ನೇಮ್ ಬಂದಿದೆ ಎಂದು ಎಷ್ಟೇ ಹೇಳಿದರೂ ಕಂಪನಿ ಸಿಬ್ಬಂದಿ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಪ್ರೀತಿಸಲಿಲ್ಲ ಎಂದು 12ರ ಬಾಲಕಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ!

    ಪ್ರೀತಿಸಲಿಲ್ಲ ಎಂದು 12ರ ಬಾಲಕಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ!

    ಹೈದರಾಬಾದ್: ಪ್ರೀತಿಯನ್ನು ನಿರಾಕರಿಸಿದಕ್ಕೆ ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿ ಮೇಲೆ ನಡುರಸ್ತೆಯಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಮಾನವೀಯ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

    ಮೌಲಾನಾ ಸಾಹೇಬ್ ಎಂಬ ಯುವಕ ಅಪ್ರಾಪ್ತೆಗೆ ಬೆಂಕಿ ಹಚ್ಚಿದ್ದಾನೆ. ಕರ್ನೂಲ್ ಜಿಲ್ಲೆಯ ಕೌತಾಲಂ ಮಂಡಲದಲ್ಲಿ ಈ ಅಮಾನವೀಯ ಘಟನೆ ಜರುಗಿದೆ. ಕೌತಾಲಂ ಪ್ರದೇಶದ 12 ವರ್ಷದ ಬಾಲಕಿಯೊಬ್ಬಳನ್ನು ಮೌಲಾನಾ ಪ್ರೀತಿಸುತ್ತಿದ್ದನು. ಆದರಿಂದ ಕಳೆದ ಕೆಲವು ತಿಂಗಳಿಂದ ಬಾಲಕಿಗೆ ಪ್ರೀತಿ ಪ್ರೇಮವೆಂದು ಯುವಕ ಪೀಡಿಸುತ್ತಿದ್ದನು.

    ಬಾಲಕಿಗೆ ಯುವಕನನ್ನು ಪ್ರೀತಿಸಲು ಇಷ್ಟವಿರಲಿಲ್ಲ. ಎಷ್ಟೇ ಬಾರಿ ಯುವಕ ಪ್ರೀತಿ ಮಾಡು ಎಂದು ಕಾಟಕೊಡುತ್ತಿದ್ದರೂ ಬಾಲಕಿ ನಾನು ಪ್ರೀತಿ ಮಾಡಲ್ಲ ಎಂದು ಹೇಳಿದ್ದಾಳೆ. ಹೀಗಾಗಿ ತನ್ನ ಪ್ರೀತಿಯನ್ನು ಬಾಲಕಿ ಒಪ್ಪಲಿಲ್ಲ ಎಂದು ಯುವಕ ಮನನೊಂದಿದ್ದನು. ಹಾಗೆಯೇ ಬಾಲಕಿ ಮೇಲೆ ಹುಚ್ಚು ಪ್ರೀತಿ ಇಟ್ಟಿದ್ದ ಯುವಕ ಆಕೆಯನ್ನು ಪಡೆಯಲೆಬೇಕು ಎಂದು ಹಟಕ್ಕೆ ಬಿದ್ದಿದ್ದನು.

    ಶುಕ್ರವಾರ ರಾತ್ರಿ ವೇಳೆ ಬಾಲಕಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಯುವಕ ಆಕೆಯನ್ನು ತಡೆದು ತನ್ನನ್ನು ಪ್ರೀತಿ ಮಾಡಲೇ ಬೇಕು ಎಂದು ಬೆದರಿಸಿದ್ದಾನೆ. ಅದ್ಯಾವುದಕ್ಕೂ ಬಾಲಕಿ ಒಪ್ಪದೇ ಇದ್ದಾಗ ನಡುರಸ್ತೆಯಲ್ಲೇ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಆಗ ಬಾಲಕಿಯ ಕಿರುಚಾಟವನ್ನು ಕೇಳಿ ಸ್ಥಳಕ್ಕೆ ಬಂದ ಜನರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ಅಪ್ರಾಪ್ತ ಬಾಲಕಿ ಮೇಲೆ ಕೊಲೆ ಯತ್ನ ಮಾಡಿದಕ್ಕೆ ಆರೋಪಿ ಮೇಲೆ ಪೊಲೀಸರು ನಿರ್ಭಯ ಕಾಯ್ದೆ ಪ್ರಕಾರ ಕೊಲೆ ಪ್ರಕರಣ ದಾಖಲಿಸಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv