Tag: Rehersal

  • ಮೈಸೂರು ದಸರಾ: ಏನಿದು ಸಿಡಿಮದ್ದು ಕಾರ್ಯಕ್ರಮ? ಹೇಗೆ ಮಾಡಲಾಗುತ್ತದೆ?

    ಮೈಸೂರು ದಸರಾ: ಏನಿದು ಸಿಡಿಮದ್ದು ಕಾರ್ಯಕ್ರಮ? ಹೇಗೆ ಮಾಡಲಾಗುತ್ತದೆ?

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಸಿಡಿಮದ್ದಿನ ಸದ್ದು ಜೋರಾಗಿತ್ತು. ಜನರು ಮಾತ್ರವಲ್ಲದೆ ಅರಮನೆ ಆವರಣದಲ್ಲಿ ನಿಂತಿದ್ದ ಗಜಪಡೆ, ಅಶ್ವರೋಹಿದಳದ ಕುದುರೆಗಳು ಸಹ ನಿಂತಿದ್ದ ಜಾಗದಿಂದ ಚದುರಿದವು. ದಸರೆಯ ವಿಜಯದ ಸಂಕೇತವಾದ ಸಿಡಿಮದ್ದು ಕಾರ್ಯಕ್ರಮದ ಪೂರ್ವ ತಯಾರಿ ನಡೆಸಲಾಯಿತು.

    ನಾಡಹಬ್ಬ ದಸರಾಗೆ ದಿನಗಣನೆ ಶುರುವಾಗಿದ್ದು, ಈಗಾಗಲೇ ಗಜಪಡೆಗೆ ಭಾರ ಹೊರುವ ತಾಲೀಮು ನಡೆಯುತ್ತಿದೆ. ಈ ಮಧ್ಯೆ ಇಂದು ದಸರಾ ಗಜಪಡೆಗೆ ಅರಮನೆ ಕೋಟೆ ಮಾರಮ್ಮ ದೇವಸ್ಥಾನ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಫಿರಂಗಿಗಳ ಸಿಡಿಮದ್ದು ತಾಲೀಮು ನಡೆಯಿತು. ಈ ತಾಲೀಮಿನಲ್ಲಿ ಕ್ಯಾಪ್ಟನ್ ಅರ್ಜುನ ನೇತೃತ್ವದ 12 ಆನೆಗಳು, 12 ಅಶ್ವಗಳು ಭಾಗಿಯಾಗಿತ್ತು.

    ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ್ ರಾವ್ ನೇತೃತ್ವದಲ್ಲಿ 30 ಮಂದಿ ಸಿಎಆರ್ ಸಿಬ್ಬಂದಿಗಳು, ಮೂರು ಫಿರಂಗಿ ಗಾಡಿಗಳಲ್ಲಿ ಸಿಡಿಮದ್ದು ತಾಲೀಮು ನಡೆಸಿದರು. ಅಲ್ಲದೆ ಇನ್ನೂ 2 ಬಾರಿ ಈ ತಾಲೀಮು ನಡೆಯಲಿದ್ದು, ಕಳೆದ ಬಾರಿಗಿಂತ ಈ ಬಾರಿ ತಾಲೀಮು ಚೆನ್ನಾಗಿ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತರು ತಮ್ಮ ಅಭಿಪ್ರಯಾವನ್ನು ಹಂಚಿಕೊಂಡರು.

    ಜಂಬೂ ಸವಾರಿ ದಿನ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆಯಲ್ಲಿ 21 ಕುಶಾಲತೋಪು ಸಿಡಿಸಲಿದ್ದು ಆ ವೇಳೆಯಲ್ಲಿ ಶಬ್ದಕ್ಕೆ ಬೆದರದಂತೆ ಆನೆಗಳು ಹಾಗೂ ಕುದುರೆಗಳಿಗೆ ಈ ತರಬೇತಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಈ ತರಬೇತಿ ನೀಡಲಾಗಿದ್ದು, ಇಂದು ನಡೆದ ಸಿಡಿಮದ್ದು ತಾಲೀಮಿನಲ್ಲಿ ದ್ರೋಣ, ಚೈತ್ರ, ಧನಂಜಯ ಹಾಗೂ ಹರ್ಷ ಆನೆಗಳು ಸ್ವಲ್ಪ ಬೆದರಿವೆ.

    ಇಂದು ಮೊದಲ ಹಂತದಲ್ಲಿ 6 ಸುತ್ತುಗಳಲ್ಲಿ ಸಿಡಿಮದ್ದು ಸಿಡಿಸಿದ್ದು, ಪ್ರತಿ ಸಿಡಿತದ ಶಬ್ಧದಲ್ಲೂ ನಾಲ್ಕು ಆನೆಗಳು ಬೆದರಿದವು. ಈ ವೇಳೆಯಲ್ಲಿ ಮಾವುತರು ಬೆದರಿದ ನಾಲ್ಕು ಆನೆಗಳನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ತಾಲೀಮಿನ ವೇಳೆ ಆ ಆನೆಗಳು ಹತೋಟಿಗೆ ಬರಲಿದೆ ಎಂದು ಆನೆ ವೈದ್ಯರು ಮಾಹಿತಿ ನೀಡಿದರು.

    ನಾಡ ಹಬ್ಬದ ಯಶಸ್ವಿಗಾಗಿ ಅರಮನೆ ನಗರಿಯಲ್ಲಿ ಸಕಲ ಸಿದ್ದತೆ ನಡೆಯುತ್ತಿದ್ದು, ವಿಜಯದ ಸಂಕೇತವಾಗಿ ಸಿಡಿಸುವ ಸಿಡಿಮದ್ದಿನ ತಾಲೀಮು ಕೂಡ ಇಂದು ಯಶಸ್ವಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಗಜಪಡೆಯ ತಾಲೀಮು ಹಾದಿಯಲ್ಲಿ ಮ್ಯಾಗ್ನೆಟಿಕ್ ರೋಲರ್ ಬಳಕೆ- ಯಾಕೆ?

    ಗಜಪಡೆಯ ತಾಲೀಮು ಹಾದಿಯಲ್ಲಿ ಮ್ಯಾಗ್ನೆಟಿಕ್ ರೋಲರ್ ಬಳಕೆ- ಯಾಕೆ?

    ಮೈಸೂರು: ದಸರಾಗಾಗಿ ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಲಾಗುತ್ತಿದೆ. ಗಜಪಡೆ ತಾಲೀಮು ನಡೆಸುವ ಹಾದಿಯಲ್ಲಿ ಅವುಗಳ ಪಾದಕ್ಕೆ ಅಪಾಯ ಉಂಟು ಮಾಡುವ ಯಾವ ವಸ್ತುಗಳು ಇರದಂತೆ ಮಾಡಲಾಗುತ್ತಿದೆ. ಇದಕ್ಕಾಗಿ ಮ್ಯಾಗ್ನೆಟಿಕ್ ರೋಲರ್ ಬಳಕೆಯಾಗುತ್ತಿದೆ.

    ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಯೂ ಪ್ರತಿ ದಿನ ಅರಮನೆಯಿಂದ ಬನ್ನಿಮಂಟಪದವರೆಗೂ ತಾಲೀಮು ಮಾಡುತ್ತವೆ. ಈ ಹಾದಿಯಲ್ಲಿ ಸಾಮಾನ್ಯವಾಗಿ ಕಬ್ಬಿಣದ ಚೂರು, ಲೋಹದ ತುಣಕುಗಳು, ಗ್ಲಾಸ್ ಚೂರುಗಳು ಬಿದ್ದಿರುತ್ತವೆ. ಆನೆಗಳ ಪಾದಕ್ಕೆ ಇವು ಚುಚ್ಚಿದರೆ ಅವುಗಳ ಪಾದಕ್ಕೆ ಅಪಾಯ ಖಚಿತ.

    ರಸ್ತೆಯ ಕಸ ಗುಡಿಸಿದರೂ ಈ ಲೋಹದ ಚೂರುಗಳು ರಸ್ತೆಯಲ್ಲೇ ಇರುತ್ತವೆ. ಹೀಗಾಗಿ ಲೋಹದ ಚೂರುಗಳು ಇರದಂತೆ ಮಾಡಲು ಮ್ಯಾಗ್ನೆಟಿಕ್ ರೋಲರ್ ಬಳಸಲಾಗುತ್ತಿದೆ. ಗಜಪಡೆಯ ಮುಂದೆ ಸಾರಥಿಯಂತೆ ಮಾಗ್ನೆಟಿಕ್ ರೋಲರ್ ಸಾಗುತ್ತದೆ. ಆನೆಗಳು ಸಾಗುವ ಮುನ್ನ ಅವುಗಳ ಮುಂಭಾಗದಲ್ಲಿ ಈ ರೋಲರ್ ಸಾಗುತ್ತದೆ. ಈ ಮ್ಯಾಗ್ನೆಟಿಕ್ ರೋಲರ್ ಕಬ್ಬಿಣದ ಚೂರು, ಗ್ಲಾಸ್ ಚೂರು, ಲೋಹದ ತುಣಕುಗಳನ್ನು ಸೆಳೆದು ಕೊಳ್ಳತ್ತದೆ. ಆಗ ಆನೆಗಳು ಸಾಗುವ ಹಾದಿ ಲೋಹದ ತುಂಡುಗಳಿಂದ ಮುಕ್ತವಾಗುತ್ತೆ. ಇದರಿಂದ ಆನೆಗಳ ಪಾದಕ್ಕೆ ತೊಂದರೆ ಆಗುವುದು ತಪ್ಪಿದಂತಾಗುತ್ತಿದೆ. ದಿನದ ಎರಡು ಬಾರಿಯ ತಾಲೀಮಿನಲ್ಲೂ ಈ ಮ್ಯಾಗ್ನೆಟಿಕ್ ರೋಲರ್ ಬಳಸಲಾಗುತ್ತಿದೆ. ಮೊದಲು ಜಂಬೂ ಸವಾರಿ ದಿನ ಮಾತ್ರ ಕೈಗಳಿಂದ ಲೋಹದ ಚೂರುಗಳನ್ನು ಸ್ವಚ್ಚ ಮಾಡಲಾಗುತ್ತಿತ್ತು. ಈಗ ಮೈಸೂರು ಭಾಗದ ಸಂತೋಷ್ ಮತ್ತು ವಿಜಯ್ ಈ ಮ್ಯಾಗ್ನೆಟಿಕ್ ರೋಲರ್ ತಯಾರಿಸಿ ಅರಣ್ಯ ಇಲಾಖೆಗೆ ನೀಡಿದ್ದಾರೆ.

    ಈ ರೋಲರ್ ನಲ್ಲಿ ಹೆಚ್ಚಿನ ವಿದ್ಯುತ್ ಕಾಂತೀಯ ಮ್ಯಾಗ್ನೆಟಿಕ್ ಬಳಕೆ ಮಾಡಲಾಗಿದೆ. ಇದರಿಂದ ರಸ್ತೆಯಲ್ಲಿ ಬಂದಿರುವ ಎಲ್ಲಾ ರೂಪದ ಲೋಹದ ತುಂಡುಗಳನ್ನು ಅದು ಸೆಳೆದುಕೊಳ್ಳುತ್ತದೆ. ಈ ರೋಲರ್ ನಿಜಕ್ಕೂ ಆನೆಗಳ ಪಾದದ ಸುರಕ್ಷತೆ ಹೆಚ್ಚಿನ ಸಹಕಾರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv