Tag: Ratnaprabha

  • ಕಮಾಲ್ ಮಾಡದ ಕಮಲ್- ಅಣ್ಣಾಮಲೈ, ಮೆಟ್ರೋ ಮ್ಯಾನ್ ಶ್ರೀಧರನ್‍ಗೆ ಸೋಲಿನ ಕಹಿ

    ಕಮಾಲ್ ಮಾಡದ ಕಮಲ್- ಅಣ್ಣಾಮಲೈ, ಮೆಟ್ರೋ ಮ್ಯಾನ್ ಶ್ರೀಧರನ್‍ಗೆ ಸೋಲಿನ ಕಹಿ

    – ರತ್ನಪ್ರಭಾಗೆ ಠೇವಣಿ ನಷ್ಟ

    ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮಕ್ಕಳ್ ನಿಧಿ ಮಯಂ ಪಕ್ಷದಿಂದ ಕೊಯಂಬತ್ತೂರು ದಕ್ಷಿಣದಿಂದ ಸ್ಪರ್ಧಿಸಿದ್ದ ಕಮಲ್ ಹಾಸನ್ 43,451 ಮತಗಳನ್ನು ಪಡೆಯುವ ಮೂಲಕ ಜಯ ಗಳಿಸಿದರು. ಆದರೆ ತಮಿಳುನಾಡಿನ ಉಳಿದ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಇದರಿಂದ ಕಮಲ್‍ಗೆ ನಿರಾಸೆಯಾಗಿದೆ.

    ತಿರುಪತಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಿಜೆಪಿಯ ರತ್ನಪ್ರಭಾಗೆ ಠೇವಣಿ ನಷ್ಟವಾಗಿದೆ. ತಿರುಪತಿ ಲೋಕಸಭಾ ಕ್ಷೇತ್ರದಲ್ಲಿ ಮದಿಲ್ಲ ಗುರುಮೂರ್ತಿ 6,26,108 ಮತಗಳಿಂದ ಜಯಗಳಿಸಿದರು. ರತ್ನಪ್ರಭಾ ಅವರು ಕೇವಲ 56,842 ಮತಗಳನ್ನು ಮಾತ್ರ ಪಡೆದು ನಿರಾಸೆ ಅನುಭವಿಸಿದರು.

    ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಅರವರಕಚ್ಚಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕರ್ನಾಟಕದ ಸಿಂಗಂ ಎಂದು ಹೆಸರುವಾಸಿಯಾಗಿದ್ದ ಅಣ್ಣಾಮಲೈ ಸೋಲು ಕಂಡಿದ್ದಾರೆ. ಅಣ್ಣಾಮಲೈಗೆ ತೀವ್ರ ಸ್ಪರ್ಧೆ ನೀಡಿದ ಡಿಎಂಕೆ ಪಕ್ಷದ ಅಭ್ಯರ್ಥಿ ಎಲಂಗೋ.ಆರ್ 26,719 ಮತ ಪಡೆದು ವಿಜಯಿಯಾದರೆ, ಅಣ್ಣಾಮಲೈ 22,335 ಮತ ಪಡೆದು ಸೋಲು ಕಂಡರು.

    ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಮೆಟ್ರೋ ಮ್ಯಾನ್ ಶ್ರೀಧರನ್‍ಗೆ ಸೋಲಿನ ಆಘಾತವಾಗಿದೆ. ಪಾಲಕ್ಕಾಡ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಧರನ್ 49,155 ಮತಗಳನ್ನು ಪಡೆದರೆ, ಕಾಂಗ್ರೆಸ್ ಪಕ್ಷದ ಶಾಫಿ ಪರಂಬಿಲ್ 53,080 ಮತ ಪಡೆದು ಜಯ ಗಳಿಸಿದರು.

  • ಶಾಸಕರು ಕುಳಿತುಕೊಳ್ಳುವ ಸ್ಥಾನದಲ್ಲಿ ಕುಳಿತಿದ್ದ ರತ್ನಪ್ರಭಾ!

    ಶಾಸಕರು ಕುಳಿತುಕೊಳ್ಳುವ ಸ್ಥಾನದಲ್ಲಿ ಕುಳಿತಿದ್ದ ರತ್ನಪ್ರಭಾ!

    – ಆಸನ ಖಾಲಿ ಮಾಡಿಸಲು ಎಳೆದಾಡಿದ ಪೊಲೀಸರು

    ಬೆಂಗಳೂರು: ಶಾಸಕರಿಗೆ ನಿಗದಿಯಾಗಿದ್ದ ಚೇರ್ ಮೇಲೆ ಕುಳಿತ್ತಿದ್ದ ರಾಜ್ಯ ಕಾಂಗ್ರೆಸ್ ಮಹಿಳಾ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರನ್ನು ಪೊಲೀಸರು ಕೈ ಹಿಡಿದು ಎಳೆದ ಘಟನೆ ರಾಜಭವನದಲ್ಲಿ ಇಂದು ನಡೆಯಿತು.

    ರಾಜಭವನದಲ್ಲಿ ಇಂದು ಸಂಜೆ ನಡೆದ ನೂತನ ಸಚಿವ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕರಿಗೆ, ಗಣ್ಯರಿಗೆ ಹಾಗೂ ಸಚಿವರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಶಾಸಕರಿಗೆ ಮೀಸಲಾಗಿದ್ದ ವೇದಿಕೆಯ ಮುಂದಿನದ ಆಸನದಲ್ಲಿ ರತ್ನಪ್ರಭಾ ಕುಳಿತಿದ್ದರು. ಇದನ್ನು ಗಮನಿಸಿದ ಪೊಲೀಸರು ಇದು ಶಾಸಕರಿಗೆ ಮೀಸಲಾಗಿರುವ ಜಾಗವೆಂದು ಮನವರಿಕೆ ಮಾಡಿದ್ದಾರೆ. ಆದರೆ ಆಸನವನ್ನು ಬಿಟ್ಟುಬರುವುದಿಲ್ಲ ಅಂತಾ ರತ್ನಪ್ರಭಾ ಪಟ್ಟು ಹಿಡಿದಿದ್ದಾರೆ.

    ನಾಯಕಿಯ ವರ್ತನೆಯಿಂದ ಬೇಸತ್ತ ಪೊಲೀಸರು ಕೈಹಿಡಿದು ಏಳೆದಾಡಿ ಹೊರ ಕಳುಹಿಸಲು ಪ್ರಯತ್ನಿಸಿದರು. ಆದರೆ ಪಟ್ಟು ಬಿಡದ ರತ್ನಪ್ರಭಾ ಅಲ್ಲಿಂದ ಕದಲೇ ಇಲ್ಲ. ಈ ಘಟನೆಯೂ ಕಾಂಗ್ರೆಸ್ ನಾಯಕರನ್ನು ಮುಜುಗುರಕ್ಕೆ ಗುರಿಮಾಡಿತು. ಶಿಷ್ಠಾಚಾರ ಉಲ್ಲಂಘಿಸಿದ ರತ್ನಪ್ರಭಾ ಅವರ ವಿರುದ್ಧ ಕೆಲವರು ಅಸಮಾಧಾನ ಹೊರಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರತ್ನಪ್ರಭಾರ ಸೇವೆ ರಾಜ್ಯಕ್ಕೆ ಸಾಕು- ಕೇಂದ್ರಕ್ಕೆ ಪತ್ರ ಬರೆದ ಹೆಚ್‍ಡಿಕೆ

    ರತ್ನಪ್ರಭಾರ ಸೇವೆ ರಾಜ್ಯಕ್ಕೆ ಸಾಕು- ಕೇಂದ್ರಕ್ಕೆ ಪತ್ರ ಬರೆದ ಹೆಚ್‍ಡಿಕೆ

    ಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ರತ್ನಪ್ರಭಾರ ಸೇವೆ ಶನಿವಾರ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ರತ್ನಪ್ರಭಾರ ಸೇವೆ ರಾಜ್ಯಕ್ಕೆ ಸಾಕು ಎಂದು ಸ್ವತಃ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯನವರ ಕಾಲದಲ್ಲಿ ಅಧಿಕಾರ ವಹಿಸಿಕೊಂಡು ರತ್ನಪ್ರಭಾ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಹೀಗಾಗಿಯೇ ರತ್ನಪ್ರಭಾ ಸಿದ್ದರಾಮಯ್ಯರಿಗೂ ಮತ್ತು ಕಾಂಗ್ರೆಸ್ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ರತ್ನಪ್ರಭಾ ಸಿಎಸ್ ಸೇವೆಯಲ್ಲಿ ಮುಂದುವರಿಯಬಾರದು ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಪುತ್ರ ಕುಮಾರಸ್ವಾಮಿ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಈ ಹಿಂದೆ ಇದೇ ಮುಖ್ಯಮಂತ್ರಿಗಳು ಸಮರ್ಥ ಅಧಿಕಾರಿ ಎಂದು 3 ತಿಂಗಳ ಅವಧಿ ವಿಸ್ತರಣೆ ಕೋರಿ ಪತ್ರ ಬರೆದಿದ್ದರು. ಆದರೆ ತಂದೆ ಹಾಗು ಪಕ್ಷದ ವರಿಷ್ಠರಾದ ದೇವೇಗೌಡರ ಸೂಚನೆಯ ಮೇರೆಗೆ ಸಿಎಂ ತಮ್ಮ ನಿರ್ಧಾರವನ್ನು ಕೈ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

  • ರಾಜ್ಯ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ವಿರುದ್ಧ ಎಸಿಬಿಯಲ್ಲಿ ದೂರು

    ರಾಜ್ಯ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ವಿರುದ್ಧ ಎಸಿಬಿಯಲ್ಲಿ ದೂರು

    ಬೆಂಗಳೂರು: ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ವಿರುದ್ಧ ಕರ್ನಾಟಕ ಭ್ರಷ್ಟಾಚಾರ ವಿರೋಧಿ ಕಚೇರಿ(ಎಸಿಬಿ)ಗೆ ದೂರು ನೀಡಲಾಗಿದೆ.

    ಉದ್ಯೋಗ ಮತ್ತು ತರಬೇತಿ ಇಲಾಖೆಯ ಮಾಜಿ ನೌಕರ ಶಂಕರ್ ದೇವೇಗೌಡ ಅವರು ಎಸಿಬಿಗೆ ರತ್ನಪ್ರಭಾ ವಿರುದ್ಧ ದೂರು ನೀಡಿದ್ದಾರೆ. ರತ್ನಪ್ರಭಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿ ದೂರು ಸಲ್ಲಿಸಿದ್ದಾರೆ.

    ಸುಪ್ರೀಂ ಕೋರ್ಟ್ ಉದ್ಯೋಗ ಮತ್ತು ತರಬೇತಿ ಇಲಾಖೆಯ ಒಟ್ಟು 62 ಜನರನ್ನು ಹಿಂಬಡ್ತಿ ನೀಡುವಂತೆ ಆದೇಶಿತ್ತು. ಆದರೆ ಸುಪ್ರೀಂ ಕೋರ್ಟ್ ನ ಆದೇಶವನ್ನು ಜಾರಿಗೊಳಿಸುವ ಕೊನೆಯ ಹಂತದಲ್ಲಿ ತಡೆ ಹಿಡಿದು ಜಾರಿಗೊಳಿಸದಂತೆ ಇಲಾಖಾ ಕಾರ್ಯದರ್ಶಿಗೆ ಒತ್ತಡ ಹೇರಿದ್ದಾರೆ ಎಂದು ದೂರಿನಲ್ಲಿ ಶಂಕರ್ ದೇವೇಗೌಡ ಉಲ್ಲೇಖಿಸಿದ್ದಾರೆ.

  • ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾರನ್ನು ಹೊಗಳಿದ ಪ್ರಧಾನಿ ಮೋದಿ: ವಿಡಿಯೋ

    ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾರನ್ನು ಹೊಗಳಿದ ಪ್ರಧಾನಿ ಮೋದಿ: ವಿಡಿಯೋ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮ ಒಂದರಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಆಗಿರುವ ರತ್ನಪ್ರಭಾ ಅವರನ್ನು ಹೊಗಳಿದ್ದಾರೆ.

    ಜನವರಿ 5ರಂದು ನೀತಿ ಆಯೋಗದ ವತಿಯಿಂದ ನವದೆಹಲಿ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಾಳಿನ ಜಿಲ್ಲೆಗಳು ಹೇಗಿರಬೇಕು ಎನ್ನುವ ವಿಚಾರದ ಬಗ್ಗೆ ಸಮ್ಮೇಳನ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ನಾನು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಪಡೆಯುತ್ತಿದ್ದ ವೇಳೆ ಮಹಿಳಾ ಐಎಎಸ್ ಅಧಿಕಾರಿಯೊಬ್ಬರ ಟ್ವೀಟ್ ಗಮನಿಸಿದೆ. ಆದರಲ್ಲಿ ಮಹಿಳಾ ಅಧಿಕಾರಿ ತಮ್ಮ ಜೀವನದ ಅಚ್ಚರಿಯ ಘಟನೆಯನ್ನು ಹಂಚಿಕೊಂಡಿದ್ದರು. ನಾನು ಅವರ ಹೆಸರನ್ನು ಮರೆತುಬಿಟ್ಟಿದ್ದೇನೆ. ಈ ವಿಷಯ ಓದಿ ನನಗೆ ತುಂಬಾ ಸಂತೋಷವಾಯಿತು ಎಂದು ತಾವು ಓದಿದ ಟ್ವೀಟ್ ಕುರಿತು ಮಾಹಿತಿ ನೀಡಿದರು.

    ಮಹಿಳಾ ಅಧಿಕಾರಿ 25 ವರ್ಷಗಳ ಹಿಂದೆ ಬಾಲಕನೊಬ್ಬನನ್ನು ಶಾಲೆಗೆ ಸೇರಿಸಿದ್ದರು. ಆತ ಉತ್ತಮ ಶಿಕ್ಷಣ ಪಡೆದು ಇಂದು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಅಧಿಕಾರಿಯೊಬ್ಬರ ಸಣ್ಣ ಕಾರ್ಯ ಸಾಮಾನ್ಯ ವ್ಯಕ್ತಿಯ ಜೀವನದಲ್ಲಿ ಎಂತಹ ಬದಲಾವಣೆ ತಂದಿದೆ. ಇಂತಹ ಸಂತೋಷದ ಕ್ಷಣ ಯಾವ ಅಧಿಕಾರಿಗೂ ಸಿಗುವುದಿಲ್ಲ. ಅಲ್ಲದೇ ಇವರು ಎಲ್ಲಾ ಅಧಿಕಾರಿಗಳಿಗೂ ಮಾದರಿ ಎಂದು ರತ್ನಪ್ರಭಾ ಅವರ ಕಾರ್ಯವನ್ನು ಶ್ಲಾಘಿಸಿದರು.

    ರತ್ನಪ್ರಭಾ ಅವರ ಟ್ವೀಟ್‍ನಲ್ಲಿ ಏನಿತ್ತು?
    ನಾನು ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಒಂದು ದಿನ ಕಾರಿನಲ್ಲಿ ಹೋಗುತ್ತಿದ್ದಾಗ ಒಬ್ಬ ಹುಡುಗನೊಬ್ಬ ಕುರಿ ಮೇಯಿಸುತ್ತಿದ್ದ. ಈ ದೃಶ್ಯವನ್ನು ನೋಡಿ ಕಾರು ನಿಲ್ಲಿಸಿದೆ. ನಂತರ ಸಮೀಪದಲ್ಲೇ ಇದ್ದ ಶಾಲೆಯ ಶಿಕ್ಷಕರನ್ನು ಕರೆದು ಈ ಹುಡುಗನನ್ನು ಶಾಲೆಗೆ ಸೇರಿಸಿಕೊಳ್ಳಿ ಎಂದು ಹೇಳಿದ್ದೆ. ಈ ಘಟನೆಯಾಗಿ 27 ವರ್ಷವಾಗಿದ್ದು, ಇತ್ತೀಚೆಗೆ ಒಂದು ದಿನ ನರಸಪ್ಪ ಎಂಬ ಪೊಲೀಸ್ ಪೇದೆ ನನ್ನ ಕಚೇರಿಗೆ ಬಂದು ಸೆಲ್ಯೂಟ್ ಮಾಡಿ, ಅಂದು ನೀವು ಅಂದು ಕುರಿಗಾಹಿಯಾಗಿದ್ದ ನನ್ನ ಶಾಲೆಗೆ ಸೇರಿಸಿದ್ದರಿಂದ ಇಂದು ನಾನು ಪೊಲೀಸ್ ಪೇದೆ ಆಗಿದ್ದೇನೆ ಎಂದು ಹೇಳಿಕೊಂಡಿದ್ದ. ಸಣ್ಣ ಉಪಕಾರವೂ ಹೇಗೆ ಉತ್ತಮ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

    ರತ್ನಪ್ರಭಾ ಅವರು ಜನವರಿ 3 ರಂದು ಈ ಟ್ವೀಟ್ ಮಾಡಿದ್ದರೆ, 5ನೇ ತಾರೀಖಿನಂದು ಬಳಕೆದಾರರೊಬ್ಬರು, ಪ್ರಧಾನಿ ಮೋದಿ ಅವರು ತಮ್ಮ ಇತ್ತೀಚಿನ ಭಾಷಣದಲ್ಲಿ ನೀವು ಟ್ವೀಟ್ ನಲ್ಲಿ ಹೇಳಿದ ವಿಚಾರವನ್ನು ಪ್ರಸ್ತಾಪ ಮಾಡಿದ್ದರು, ಇದೊಂದು ದೊಡ್ಡ ಪ್ರೇರಣೆ ಎಂದು ತಿಳಿಸಿದ್ದರು.

    ಈ ಟ್ವೀಟ್ ಗೆ ರತ್ನಪ್ರಭಾ ಅವರು ಪ್ರತಿಕ್ರಿಯಿಸಿ, ನಾನು ಭಾಷಣವನ್ನು ಕೇಳಿದೆ. ನಾನು ನನ್ನ ಟ್ವೀಟ್‍ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹೊಗಳಿಕೆ ಕಾರಣವಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಪ್ರಧಾನಿ ಮೋದಿ ಅವರು ನನ್ನ ಬಗ್ಗೆ ಆಡಿರುವ ಮಾತನ್ನು ಕೇಳಿ ನನಗೆ ಬಹಳ ಸಂತೋಷವಾಗುತ್ತಿದೆ. ಇದರಿಂದಾಗಿ ಜನರ ಸೇವೆ ಮತ್ತಷ್ಟು ಮಾಡಲು ಪ್ರೇರಣೆ ಸಿಕ್ಕಿದೆ ಎಂದು ಬರೆದು ಕೊನೆಯಲ್ಲಿ ಕೈಮುಗಿದು ನಮಸ್ಕರಿಸುತ್ತಿರುವ ಇಮೋಜಿ ಹಾಕಿ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿ ಪತ್ರಕ್ಕೆ ಸ್ಪಂದಿಸಿದ ಮೋದಿ

    https://www.youtube.com/watch?v=yGzHg3prwAo

     

  • ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ಮಹಿಳಾ ಅಧಿಕಾರಿಗಳಿಗೆ ಸಿಗುತ್ತಾ ಉನ್ನತ ಸ್ಥಾನ?

    ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ಮಹಿಳಾ ಅಧಿಕಾರಿಗಳಿಗೆ ಸಿಗುತ್ತಾ ಉನ್ನತ ಸ್ಥಾನ?

    ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳು ರಾಜ್ಯದ ಉನ್ನತ ಸ್ಥಾನ ಅಲಂಕಾರಿಸುವ ಅವಕಾಶ ಒದಗಿ ಬಂದಿದೆ. ಪೊಲೀಸ್ ಮಹಾ ನಿರ್ದೇಶಕರ ಹುದ್ದೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಮಹಿಳಾ ಅಧಿಕಾರಿಗಳು ನೇಮಕವಾಗುವ ಸಂದರ್ಭ ಬಂದಿದೆ.

    ಪೊಲೀಸ್ ಮಹಾನಿರ್ದೇಶಕ ದತ್ತಾ ಅವರ ಅಧಿಕಾರಾವಧಿ ಈ ತಿಂಗಳ 31ಕ್ಕೆ ಮುಕ್ತಾಯವಾಗಲಿದೆ. ಖಾಲಿಯಾಗಲಿರುವ ಹುದ್ದೆಗೆ ಹಿರಿತನದ ಆಧಾರದಲ್ಲಿ ಮಹಿಳಾ ಐಪಿಎಸ್ ಅಧಿಕಾರಿ ನೀಲಮಣಿ ರಾಜು, ಹಿರಿಯ ಐಪಿಎಸ್ ಅಧಿಕಾರಿಗಳಾದ ಕಿಶೋರ್ ಚಂದ್ರ ಮತ್ತು ಎಂ.ಎನ್.ರೆಡ್ಡಿ ಹೆಸರು ರೇಸ್‍ನಲ್ಲಿದೆ. ಹಿರಿತನದಲ್ಲಿ ನೀಲಮಣಿ ರಾಜು ಅವರೇ ಮುಂದಿದ್ದಾರೆ.

    ಇನ್ನು ಸುಭಾಷ್ ಕುಂಟಿ ಅವರ ಅಧಿಕಾರ ಕೂಡಾ ಈ ತಿಂಗಳು ಅಂತ್ಯವಾಗಲಿದ್ದು, ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಮಹಿಳಾ ಐಎಎಸ್ ಅಧಿಕಾರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಹಾಗೂ ಪಟ್ನಾಯಕ್ ಹೆಸರು ರೇಸ್‍ನಲ್ಲಿದೆ. ಇಲ್ಲೂ ಹಿರಿತನದಲ್ಲಿ ಪಟ್ನಾಯಕ್ ಗಿಂತ ರತ್ನಪ್ರಭಾ ಮುಂದಿದ್ದಾರೆ. ಹೀಗಾಗಿ ಎರಡು ಹುದ್ದೆಗಳಲ್ಲಿ ಹಿರಿತನದಲ್ಲಿ ಮಹಿಳಾ ಅಧಿಕಾರಿಗಳು ಮುಂದಿದ್ದಾರೆ.

    ಹಿರಿಯತನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾಶಸ್ತ್ಯ ನೀಡಿದರೆ ಇದೇ ಮೊದಲ ಬಾರಿಗೆ ರಾಜ್ಯದ ಇತಿಹಾಸದಲ್ಲಿ ಎರಡು ಪ್ರಮುಖ ಹುದ್ದೆಗಳಿಗೆ ಮಹಿಳಾ ಅಧಿಕಾರಿಗಳು ಅಧಿಕಾರ ಪಡೆಯುವ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

    ಚುನಾವಣೆಯ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಮಹಿಳಾ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳನ್ನು ನೀಡುವ ಮೂಲಕ ಮಹಿಳಾ ಮತಗಳ ಮೇಲೆ ಸಿದ್ದರಾಮಯ್ಯ ಕಣ್ಣಿಡುವ ಸಾಧ್ಯತೆ ಇದೆ. ಅಂದುಕೊಂಡಂತೆ ಎಲ್ಲವೂ ಆದರೆ ರಾಜ್ಯದಲ್ಲಿ ಪೋಲೀಸ್ ಮಹಾನಿರ್ದೇಶಕರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಹಿಳೆಯರಾಗುತ್ತಾರೆ.