Tag: Rathasapthami

  • ಗುರು ರಾಯರ ಸನ್ನಿಧಿ ಮಂತ್ರಾಲಯದಲ್ಲಿ ವಿಶೇಷ ಪಂಚರಥೋತ್ಸವ

    ಗುರು ರಾಯರ ಸನ್ನಿಧಿ ಮಂತ್ರಾಲಯದಲ್ಲಿ ವಿಶೇಷ ಪಂಚರಥೋತ್ಸವ

    ರಾಯಚೂರು: ರಥಸಪ್ತಮಿ ಹಿನ್ನೆಲೆಯಲ್ಲಿ ಗುರು ರಾಯರ ಸನ್ನಿಧಿ ಮಂತ್ರಾಲಯ ಮಠದಲ್ಲಿ ಪಂಚರಥೋತ್ಸವ ಜರುಗಿಸಲಾಯಿತು. ಬಂಗಾರ ಪಲ್ಲಕ್ಕಿ ಉತ್ಸವದೊಂದಿಗೆ ಮಠದ ಪ್ರಾಂಗಣದಲ್ಲಿ ರಜತ ಅಂಬಾರಿ, ಸುವರ್ಣ ರಥ, ಮರದ ರಥ, ನವರತ್ನ ರಥ ಹಾಗೂ ಬೆಳ್ಳಿ ರಥ ಸೇರಿ ಒಟ್ಟು ಐದು ರಥಗಳು ರಾಯರ ವೃಂದಾವನದ ಸುತ್ತ ಪ್ರದಕ್ಷಿಣೆ ಹಾಕಿದವು.

    ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ಪಂಚರಥೋತ್ಸವಕ್ಕೆ ವಿಶೇಷ ಪೂಜೆಯ ಮೂಲಕ ಚಾಲನೆ ನೀಡಿದರು. ನವರತ್ನ ರಥದಲ್ಲಿ ಕೃಷ್ಣ, ಸುವರ್ಣ ರಥದಲ್ಲಿ ಪ್ರಾಣದೇವರು ಆಂಜನೇಯ ಹಾಗೂ ಉಳಿದ ಮೂರು ರಥಗಳಲ್ಲಿ ರಾಯರನ್ನ ಮೆರವಣಿಗೆ ಮಾಡಲಾಯಿತು. ವಿವಿಧೆಡೆಯಿಂದ ಮಠಕ್ಕೆ ಆಗಮಿಸಿದ್ದ ನೂರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ರಥಸಪ್ತಮಿ ನಿಮಿತ್ತ ಮಠದ ಐದು ರಥಗಳ ವಿಶೇಷ ಉತ್ಸವ ಇಂದು ಜರುಗಿತು.

    ಮಾರ್ಗಶಿರ ಮಾಸ, ಶುಕ್ಲಪಕ್ಷದ ಏಳನೆಯ ದಿನ ಬರುವ ರಥ ಸಪ್ತಮಿಯನ್ನು ಸೂರ್ಯ ಜಯಂತಿ ಅಂತಲೂ ಕರೆಯಲಾಗುತ್ತದೆ. ಸೂರ್ಯನು ಸಿಂಹ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವೇ ರಥಸಪ್ತಮಿ. ಹಿಂದೂ ಧಾರ್ಮಿಕ ದಿನಗಳಲ್ಲಿ ವಿಶೇಷವಾದ ಈ ದಿನವನ್ನ ಮಂತ್ರಾಲಯದಲ್ಲಿ ಪಂಚರಥೋತ್ಸವ ಮೂಲಕ ಸಂಭ್ರಮಿಸಲಾಯಿತು.

  • ಶನಿವಾರ ನಡೆಯಲಿದೆ ವಿಶೇಷ ರಥಸಪ್ತಮಿ- ಅಂದು ಏನು ಮಾಡಬೇಕು?

    ಶನಿವಾರ ನಡೆಯಲಿದೆ ವಿಶೇಷ ರಥಸಪ್ತಮಿ- ಅಂದು ಏನು ಮಾಡಬೇಕು?

    ಬೆಂಗಳೂರು: ದೀರ್ಘಕಾಲದ ಸೂರ್ಯ ಗ್ರಹಣದ ಬಳಿಕ ಬಂದಿರುವ ಶನಿವಾರದ ರಥಸಪ್ತಮಿ ಭಕ್ತರ ಪಾಲಿಗೆ ದೋಷವನ್ನು ಮುಕ್ತ ಮಾಡಿಕೊಳ್ಳುವ ದಿನವಾಗಲಿದೆ.

    ಗ್ರಹಣದ ಬಳಿಕ ಅಲ್ಪಸ್ವಲ್ಪ ದೋಷ ಎಲ್ಲರಿಗೂ ಇರಲಿದೆ. ಹಾಗಾಗಿ ನಾಳೆ ಗ್ರಹಣದ ದೋಷ ಪರಿಪೂರ್ಣ ನಿವಾರಣೆಗೆ ರಥಸಪ್ತಮಿಯನ್ನು ಆಚರಿಸಬೇಕಾಗುತ್ತದೆ. ರಥಸಪ್ತಮಿಯ ದಿನ ಸೂರ್ಯ ಏಕಚಕ್ರಾದಿಪತ್ಯ ಸಾಧಿಸುತ್ತಾನೆ. ಗ್ರಹಣ ಮುಕ್ತನಾದ ಸೂರ್ಯ ಶನಿವಾರದಿಂದ ಇನ್ನಷ್ಟು ಪ್ರಜ್ವಲಿಸುತ್ತಾನೆ.

    ರಥಸಪ್ತಮಿಯ ದಿನ ಏನು ಮಾಡಬೇಕು?
    ಶನಿವಾರದ ಸುದೀರ್ಘ ಸೂರ್ಯಗ್ರಹಣವನ್ನು ನೋಡಿದ್ದರಿಂದ ಈ ಬಾರಿ ರಥಸಪ್ತಮಿ ಬಹಳ ವಿಶೇಷವಾಗಲಿದೆ. ನಾಳೆ ಬೆಳಗ್ಗೆ ಸೂರ್ಯೋದಯದ ಬಳಿಕ ಅರ್ಕ ಪತ್ರವನ್ನು ಹಾಗೂ ಅಕ್ಷತೆಯ ಕಾಳನ್ನು ತಲೆಯ ಮೇಲಿಟ್ಟು ಸ್ನಾನ ಮಾಡಬೇಕು. ಸೂರ್ಯನ ಮುಂದೆ ಗೋಧಿಯನ್ನಿಟ್ಟು ಪೂಜೆ ಮಾಡಬೇಕು. ಬಳಿಕ ಸೂರ್ಯನಿಗೆ ನಮಸ್ಕರಿಸಬೇಕು. ಈ ರೀತಿ ಮಾಡುವುದಿಂದ ಗ್ರಹಣದ ದೋಷವೆಲ್ಲವೂ ನಿವಾರಣೆಯಾಗಲಿದೆ. ಅರ್ಕವನ್ನಿಟ್ಟು ಸ್ನಾನ ಮಾಡುವುದರಿಂದ ಆರೋಗ್ಯ ಭಾಗ್ಯವೂ ಲಭಿಸಲಿದೆ. ಇದಾದ ಬಳಿಕ ಶಿವದರ್ಶನ ಮಾಡಿದರೆ ರಥಸಪ್ತಮಿ ದಿನ ಒಳ್ಳೆಯದಾಗಲಿದೆ ಎಂದು ಅರ್ಚಕರು ಹೇಳಿದ್ದಾರೆ.

    ರಥಸಪ್ತಮಿ ವಿಶೇಷ:
    ಮಾಘ ಮಾಸದ ಶುಕ್ಲ ಪಕ್ಷದ ಉತ್ತರಾಯಣದ ಸಪ್ತಮಿಯಂದು ಬೆಳಕು ನೀಡುವ ಶ್ರೀ ಸೂರ್ಯದೇವರನ್ನು ವಿಶೇಷವಾಗಿ ಆರಾಧಿಸುವ ದಿನವಾಗಿದೆ. ರಥ ಸಪ್ತಮಿ ಅಂದ್ರೇ ಸೂರ್ಯದೇವರ ಜನ್ಮದಿನ. ಈ ದಿನ ಶುಭ ಕಾರ್ಯ ಮಾಡಿದರೆ ಒಳ್ಳೆಯದಾಗಲಿದೆ ಎನ್ನುವ ನಂಬಿಕೆ.

    ಸೂರ್ಯದೇವನು ನಾಳೆ ಉತ್ತರಾಯಣನಾಗಿ ಸಪ್ತ ಕುದುರೆಗಳನ್ನು ಹೊಂದಿದ ರಥವನ್ನೇರಿ ಉತ್ತರ ದಿಕ್ಕಿಗೆ ಪ್ರಯಾಣಿಸುತ್ತಾನೆ ಎನ್ನುವ ನಂಬಿಕೆ. ಈ ರಥಸಪ್ತಮಿಯಂದು ಸೂರ್ಯೋದಯದ ಸಮಯದಲ್ಲಿ ಸಮುದ್ರ ಸ್ನಾನ ಉತ್ತಮ. ಎಕ್ಕೆ ಎಲೆಯನ್ನಿರಿಸಿಕೊಂಡು ಮಾಡುವ ಸ್ನಾನದಿಂದ ಏಳೇಳು ಜನ್ಮದ ಪಾಪ ನಾಶದ ಜತೆ ಮನುಷ್ಯನ ದೇಹದಲ್ಲಿರುವ ಚರ್ಮ ರೋಗವೂ ವಾಸಿಯಾಗಿ ಆರೋಗ್ಯ ವೃದ್ಧಿಸುತ್ತೆ ಎನ್ನುವ ನಂಬಿಕೆ ಇದೆ. ಸೂರ್ಯನಿಗೆ ಪ್ರಿಯವಾದ ಎಕ್ಕೆ ಗಿಡದಿಂದ ಏಳು ಎಕ್ಕೆ ಎಲೆಗಳನ್ನು ತೆಗೆದುಕೊಂಡು ಸೂರ್ಯ ಪಠಣೆ ಮಾಡಿ ಸ್ನಾನಮಾಡಿದರೆ ಇನ್ನು ಉತ್ತಮ.