Tag: Rani channamma University

  • ವೃತ್ತಿ ಕೌಶಲ್ಯದಿಂದ ಯಶಸ್ಸು ಸಾಧ್ಯ – ಗೆಹ್ಲೋಟ್

    ವೃತ್ತಿ ಕೌಶಲ್ಯದಿಂದ ಯಶಸ್ಸು ಸಾಧ್ಯ – ಗೆಹ್ಲೋಟ್

    ಬೆಳಗಾವಿ: ಕಲಿತ ವಿದ್ಯೆಯು ಬದುಕಿನಲ್ಲಿ ಶಾಶ್ವತವಾಗಿರುತ್ತದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಅಗತ್ಯ ಕೌಶಲ್ಯವನ್ನು ಗಳಿಸಬೇಕು. ಯಾವುದೇ ಕ್ಷೇತ್ರವಿರಲಿ ಕೌಶಲದಿಂದ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ. ಆದ್ದರಿಂದ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ (Thawarchand Gehlot) ಕರೆ ನೀಡಿದರು.

    ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಸೋಮವಾರ ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ (Rani Channamma University) 11 ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯೆಯು ನಮ್ಮ ಹಾಗೂ ಸಮಾಜದ ಏಳ್ಗೆಗೆ ಬಳಕೆಯಾಗಬೇಕು. ಸಹೋದರತೆ ಭಾವದೊಂದಿಗೆ ನಾವೆಲ್ಲರೂ ಒಟ್ಟಾಗಿ ಮುನ್ನಡೆಯಬೇಕು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕವು ಪ್ರಪ್ರಥಮವಾಗಿ ಅನುಷ್ಠಾನಗೊಳಿಸಿದೆ. ದೇಶದ ಯುವಸಮುದಾಯದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು. ಇದನ್ನೂ ಓದಿ: ಇವ್ರು ನಮ್ ಜೊತೆ ಇದ್ದಾರಲ್ವಾ – ಶಾಸಕಿ ಹೆಗಲ ಮೇಲೆ ಕೈಯಿಟ್ಟು ಕಾಂಗ್ರೆಸ್ ಸೇರ್ಪಡೆ ವದಂತಿಗೆ ಬಿಎಸ್‌ವೈ ತೆರೆ

    ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯವನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ ಸ್ವಾತಂತ್ರ್ಯದ ಶತಮಾನೋತ್ಸವ ‌ವೇಳೆಗೆ ಭಾರತವನ್ನು ಜಗತ್ತಿನ ಅತ್ಯಂತ ಬಲಿಷ್ಠ ದೇಶವಾಗಿ ಹೊರಹೊಮ್ಮಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಸರ್ಕಾರದ ಯೋಜನೆಗಳ ಸಹಭಾಗಿತ್ವದಿಂದ ಮಾತ್ರ ಅಭಿವೃದ್ಧಿ ಸಾಧ್ಯ.‌ ಕಳೆದ 75 ವರ್ಷಗಳಲ್ಲಿ ಇದು ಸಾಬೀತಾಗಿದೆ. ನವ ಪದವೀಧರರು ಮುಂಬರುವ ದಿನಗಳಲ್ಲಿ ಕ್ರೀಡೆ ಮತ್ತು ಕಲಾಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿ ಇರಬೇಕು. ಪರಿಸರ ಮಾಲಿನ್ಯ ಮತ್ತು ಅಸಮತೋಲನ ನಿರ್ವಹಣೆಗಾಗಿ ನಿರಂತರ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

    ರಾಣಿ ಚೆನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಅತೀ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ವಿವಿ ತನ್ನ ಮೂಲ ಉದ್ದೇಶದ ಈಡೇರಿಕೆ ನಿಟ್ಟಿನಲ್ಲಿ ಫಲಪ್ರದ ಹೆಜ್ಜೆಗಳನ್ನು ಇಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಮೋದಿ ಯುವಜನರನ್ನ ಸ್ವಾವಲಂಬಿಗಳಾಗಿ ಮಾಡಿದ್ರೆ, ಕಾಂಗ್ರೆಸ್‌ 3 ಸಾವಿರ ಕೊಡ್ತೀನಿ ಅಂತಿದೆ – ತೇಜಸ್ವಿ‌ ಸೂರ್ಯ

    ಸಮಾಜ ಸೇವೆಗಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರಿಗೆ (ಮರಣೋತ್ತರ) “ಡಾಕ್ಟರ್ ಆಫ್ ಲೆಟರ್ಸ್” ಗೌರವ ಡಾಕ್ಟರೇಟ್ ಪದವಿ ಹಾಗೂ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರಿಗೆ “ಡಾಕ್ಟರ್ ಆಫ್ ಲೆಟರ್ಸ್” ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಸಂಸದರೂ ಆಗಿರುವ ಮಂಗಳ ಸುರೇಶ್ ಅಂಗಡಿ ಅವರು ದಿ.ಸುರೇಶ್ ಅಂಗಡಿ ಅವರಿಗೆ ವಿಶ್ವವಿದ್ಯಾಲಯ ವತಿಯಿಂದ ಘೋಷಿಸಲಾದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು.

    11 ಸ್ವರ್ಣ ಪದಕ; 27 ಪಿಎಚ್.ಡಿ ಪ್ರದಾನ:
    ಘಟಿಕೋತ್ಸವದಲ್ಲಿ ಒಟ್ಟು 47,185 ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸ್ನಾತಕೋತ್ತರ ಹಾಗೂ ಸ್ನಾತಕ ವಿದ್ಯಾರ್ಥಿಗಳಿಗೆ 11 ಸ್ವರ್ಣ ಪದಕಗಳು, 27 ಪಿಹೆಚ್.ಡಿ ಪದವಿಗಳನ್ನು ಪ್ರದಾನ ಮಾಡಲಾಯಿತು. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್‍ಗೆ ಮರಾಠಿಗರ ಖಡಕ್ ವಾರ್ನಿಂಗ್

    ಘಟಿಕೋತ್ಸವದಲ್ಲಿ ವಿಶ್ರಾಂತ ಕುಲಪತಿ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಮಾಜಿ ಉಪಾಧ್ಯಕ್ಷ ಡಾ.ಬಿ.ತಿಮ್ಮೇಗೌಡ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ರಾಜಶ್ರೀ ಜೈನಾಪುರ, ಕುಲಸಚಿವರು(ಮೌಲ್ಯಮಾಪನ) ಪ್ರೊ.ಶಿವನಾಂದ ಗೊರನಾಳೆ, ಹಣಕಾಸು ಅಧಿಕಾರಿ ಪ್ರೊ. ಎಸ್.ಬಿ.ಆಕಾಶ, ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿವಿಧ ವಿಭಾಗಗಳ ಡೀನ್, ವಿಭಾಗ ಮುಖ್ಯಸ್ಥರು, ವಿದ್ಯಾರ್ಥಿಗಳು ಮತ್ತು ಪಾಲಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

  • ರಾಣಿ ಚನ್ನಮ್ಮ ವಿವಿ, ದೆಹಲಿ ಜೆಎನ್‍ಯು ವಿವಿಯಂತೆ ಆಗಬಾರದು: ಸಂಸದ ಸುರೇಶ್ ಅಂಗಡಿ

    ರಾಣಿ ಚನ್ನಮ್ಮ ವಿವಿ, ದೆಹಲಿ ಜೆಎನ್‍ಯು ವಿವಿಯಂತೆ ಆಗಬಾರದು: ಸಂಸದ ಸುರೇಶ್ ಅಂಗಡಿ

    ಬೆಳಗಾವಿ: ಮಾಜಿ ಸಚಿವ ಜಾರಕಿಹೊಳಿ ಅವರ ಬೆಂಬಲಿಗರು ಎನ್ನಲಾದ ಕೆಲ ಕಾಂಗ್ರೆಸ್ ಕಾರ್ಯಕರ್ತರು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ದಾಂಧಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸುರೇಶ್ ಅಂಗಡಿ ಕಿಡಿಕಾರಿದ್ದಾರೆ. ಅಲ್ಲದೇ ರಾಣಿ ಚನ್ನಮ್ಮ ವಿವಿ ಮತ್ತೊಂದು ದೆಹಲಿಯ ಜೆಎನ್‍ಯು ವಿವಿ ಆಗಬಾರದು ಎಂದು ಹೇಳಿದ್ದಾರೆ.

    ನಗರದಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಂಸದರು, ಚೆನ್ನಮ್ಮ ವಿಶ್ವ ವಿದ್ಯಾಲಯದ ದಾಂಧಲೆ ಪ್ರಕರಣ ಬೆಳಗಾವಿಗೆ ಕಪ್ಪು ಚುಕ್ಕೆ ಆಗಲಿದೆ. ಕಳೆದ 30 ವರ್ಷಗಳ ಹೋರಾಟದಿಂದ ವಿವಿ ಸ್ಥಾಪನೆ ಆಗಿದೆ. ವಿವಿಯಲ್ಲಿ ಪಕ್ಷ ರಾಜಕೀಯ ಬೇಡ. ರಾಣಿ ಚನ್ನಮ್ಮ ವಿವಿ ದೆಹಲಿ ಜೆಎನ್‍ಯು ವಿವಿಯಂತೆ ಆಗಬಾರದು. ದೇಶ ದ್ರೋಹಿಗಳನ್ನು ರಾಣಿ ಚನ್ನಮ್ಮ ವಿವಿಯಲ್ಲಿ ಬಿಟ್ಟಿರಬಹುದು. ಆದರೆ ನಾವು ಅದನ್ನು ಸಹಿಸುವುದಿಲ್ಲ. ವಿಶ್ವ ವಿದ್ಯಾಲಯ ಕುಲಪತಿ ಕೂಡಲೇ ಕಠಿಣ ಕ್ರಮಕೈಗೊಳ್ಳಬೇಕು ಆಗ್ರಹಿಸಿದರು.

    ಇದೇ ವೇಳೆ ವಿವಿಯ ಮುಂಭಾಗದಲ್ಲಿ ಅಂಡರ್ ಪಾಸ್ ಉದ್ಘಾಟನೆ ವಿಚಾರ ಪ್ರಸ್ತಾಪಿಸಿದ ಅವರು, ಉದ್ಘಾಟನೆ ವೇಳೆಯಲ್ಲಿ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ, ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಫೋನ್ ಮಾಡಿ ಆಗಮಿಸುವಂತೆ ಮನವಿ ಮಾಡಲು ಮುಂದಾಗಿದ್ದೆ. ಆದರೆ ಅವರಿಬ್ಬರು ನನ್ನ ಫೋನ್ ಕರೆ ಸ್ವೀಕರಿಸಲಿಲ್ಲ. ಈ ವೇಳೆ ನಾನೇ ಸ್ವತಃ ಹೋಗಿ ಉದ್ಘಾಟನೆ ಪೂಜೆ ನೆರವೇರಿಸಿದೆ. ಈ ಕಾರ್ಯಕ್ರಮಕ್ಕೆ ವಿವಿಯ ಕುಲಪತಿಗಳಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

    ಒಂದೊಮ್ಮೆ ಮಾಜಿ ಸಚಿವರಾದ ಸತೀಶ ಜಾರಕಿಹೊಳಿ ತಮ್ಮ ಬೆಂಬಲಿಗರು ಈ ರೀತಿ ನಡೆಸಿದ್ದಾರೆ ಕ್ರಮಕೈಗೊಳ್ಳಬೇಕು. ಸ್ವತಃ ಸತೀಶ್ ಅವರನ್ನೇ ಈ ಮೂಲಕ ಕೇಳಿಕೊಳ್ಳುತ್ತೇನೆ. ನಿಮ್ಮ ಬೆಂಬಲಿಗರಾದರೆ ಕ್ರಮಕೈಗೊಳ್ಳಿ. ಇಲ್ಲವೇ ಪೊಲೀಸರು ಕ್ರಮ ತೆಗೆದುಕೊಳ್ಳಲು ಅವಕಾಶ ನೀಡಿ ಎಂದು ಮನವಿ ಮಾಡುವುದಾಗಿ ತಿಳಿಸಿದರು. ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳ ವೈಫಲ್ಯವನ್ನು ಟೀಕಿಸಿದ ಸಂಸದರು ರಾಜಕೀಯ ಒತ್ತಡದಿಂದ ಅಧಿಕಾರಿಗಳು ಭಯ ಪಡುತ್ತಿದ್ದಾರೆ. ಆದರೆ ಕಠಿಣ ಕ್ರಮ ಕೈಗೊಳ್ಳದೆ ಇದ್ದರೆ ಅಧಿಕಾರಿಗಳು ಜಾಗ ಖಾಲಿ ಮಾಡಬೇಕು ಎಂದು ಆಗ್ರಹಿಸಿದರು.

    ಏನಿದು ಘಟನೆ? ರಾಣಿಚನ್ನಮ್ಮ ವಿಶ್ವವಿದ್ಯಾಲಯಲ್ಲಿ ಸೋಮವಾರ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕುಲಪತಿ ಶಿವಾನಂದ ಹೊಸಮನಿ ಅವರನ್ನು ಮುತ್ತಿಗೆ ಹಾಕಿ ನೂಕಾಡಿದ್ದರು. ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಇರುವುದು ಕಾರ್ಯಕರ್ತರ ಕೋಪಕ್ಕೆ ಕಾರಣವಾಗಿತ್ತು ಎನ್ನಲಾಗಿತ್ತು. ಈ ವೇಳೆ ಬೆಳಗಾವಿ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದು ಸುಣಗಾರ್ ಹಾಗೂ ಕೆಲವು ಬೆಂಬಲಿಗರು ಕುಲಪತಿ ಅವರನ್ನು ಸುತ್ತುವರಿಯಲು ಯತ್ನಿಸಿದ್ದರು. ಘಟನೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಕುಲಪತಿ ಶಿವಾನಂದ ಹೊಸಮನಿ ಹಿಂದೇಟು ಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಣಿ ಚನ್ನಮ್ಮ ವಿವಿ ಕುಲಪತಿಯನ್ನು ಹಿಡಿದು ನೂಕಾಡಿದ್ರು – ಪೀಠೋಪಕರಣ ಎತ್ತಿ ಎಸೆದ ಕೈ ಕಾರ್ಯರ್ತರು

    ರಾಣಿ ಚನ್ನಮ್ಮ ವಿವಿ ಕುಲಪತಿಯನ್ನು ಹಿಡಿದು ನೂಕಾಡಿದ್ರು – ಪೀಠೋಪಕರಣ ಎತ್ತಿ ಎಸೆದ ಕೈ ಕಾರ್ಯರ್ತರು

    ಬೆಳಗಾವಿ: ರಾಣಿಚನ್ನಮ್ಮ ವಿಶ್ವವಿದ್ಯಾಲಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕುಲಪತಿ ಶಿವಾನಂದ ಹೊಸಮನಿ ಅವರನ್ನು ಮುತ್ತಿಗೆ ಹಾಕಿ ನೂಕಾಡಿದ ಘಟನೆ ನಡೆದಿದೆ.

    ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದ್ದಕ್ಕೆ ಕೋಪಗೊಂಡ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದು ಸುಣಗಾರ್ ಹಾಗೂ ಕೆಲವು ಬೆಂಬಲಿಗರು ಕುಲಪತಿ ಅವರನ್ನು ಮುತ್ತಿಗೆ ಹಾಕಿ ನೂಕಾಡಿದ್ದಾರೆ ಎನ್ನಲಾಗಿದೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಕುಲಪತಿ ಶಿವಾನಂದ ಹೊಸಮನಿ ಹಿಂದೇಟು ಹಾಕಿದ್ದಾರೆ. ವಿಶ್ವವಿದ್ಯಾಲಯಕ್ಕೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕಾರ್ಯಕ್ರಮಕ್ಕೆ ಅಡ್ಡಿ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಆಗಿದ್ದು ಏನು?
    ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ರೆಡ್ ಕ್ರಾಸ್ ಸಂಸ್ಥೆಯಿಂದ ಇಂದು ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಸ್ಥಳೀಯ ಕೆಲವು ನಾಯಕರಿಗೆ ಆಹ್ವಾನ ನೀಡರಲಿಲ್ಲ. ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದು ಸುಣಗಾರ್ ಹಾಗೂ ಕೆಲವು ಬೆಂಬಲಿಗರು ಕಾರ್ಯಕ್ರಮವನ್ನು ತಡೆದಿದ್ದಾರೆ.

    ಕುಲಪತಿ ಶಿವಾನಂದ ಹೊಸಮನಿ ಅವರೊಂದಿಗೆ ವಾಗ್ವಾದಕ್ಕೆ ಇಳಿದ ಕಾಂಗ್ರೆಸ್ ಕಾರ್ಯಕರ್ತರು, ಪೀಠೋಪಕರಣಗಳನ್ನು ಎತ್ತಿ ಬೀಸಾಡಿದ್ದಾರೆ. ಕೆಲವರು ಕಿಟಕಿ ಗಾಜು ಒಡೆದು ಪುಂಡಾಟ ಪ್ರದರ್ಶಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ವಿಶ್ವವಿದ್ಯಾಲಯದ ಅನೇಕ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಇತ್ತ ಕುಲಪತಿ ಶಿವಾನಂದ ಹೂಗಾರ ಅವರು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ರಕ್ಷಣೆಗೆ ನಿಲ್ಲಬೇಕಾಗಿತ್ತು. ಆದರೆ ಅವರು ಹಾಗೇ ಮಾಡದೇ ಗಲಾಟೆಯ ಕುರಿತು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.

    ವಿಶ್ವವಿದ್ಯಾಲಯದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಬಿಜೆಪಿ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಆದರೆ ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಯಾವುದೇ ಆಹ್ವಾನ ನೀಡುವುದಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv