Tag: Ramesh Kumar

  • ಸ್ಪೀಕರ್ ಸರಳತೆ ನೋಡಿ ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿದ ಅಭಿಮಾನಿ

    ಸ್ಪೀಕರ್ ಸರಳತೆ ನೋಡಿ ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿದ ಅಭಿಮಾನಿ

    ಕೋಲಾರ: ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅಭಿಮಾನಿಯೋರ್ವ ಬೆನ್ನ ಮೇಲೆ ಅವರ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾನೆ.

    ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಯುವಕ ಶ್ರೀನಾಥ್ ತನ್ನ ಬೆನ್ನ ಮೇಲೆ ಸ್ಪೀಕರ್ ರಮೇಶ್ ಕುಮಾರ್ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಶ್ರೀನಾಥ್‍ಗೆ ರಮೇಶ್ ಕುಮಾರ್ ಅವರ ಟ್ಯಾಟೂ ಹಾಕಿಸಿಕೊಳ್ಳಲು ಅವರ ಆದರ್ಶ ನಡೆಯೇ ಕಾರಣವಂತೆ, ಅವರನ್ನು ಚಿಕ್ಕವಯಸ್ಸಿನಿಂದಲೂ ಬಹಳ ಆರಾಧಿಸುತ್ತೇನೆ. ದೊಡ್ಡ ದೊಡ್ಡ ಪದವಿಯಲ್ಲಿದ್ದರೂ ಜನರ ಜೊತೆ ಬೆರೆಯುವ ಅವರ ಸರಳತೆ ನೋಡಿ ನಾನು ಅವರ ಪಕ್ಕ ಅಭಿಮಾನಿಯಾಗಿಬಿಟ್ಟೆ ಎಂದು ಹೇಳಿದ್ದಾರೆ.

    ಮೊದಲಿನಿಂದಲೂ ಅವರನ್ನು ಆರಾಧಿಸುತ್ತಿದ್ದ ನನಗೆ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ವೇಳೆ ಬಡವರಿಗಾಗಿ ಜಾರಿಗೆ ತಂದ ಆರೋಗ್ಯ ಯೋಜನೆಗಳು, ಬರಗಾಲದಿಂದ ತತ್ತರಿಸಿದ್ದ ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ತಂದಿದ್ದು ಇವೆಲ್ಲವೂ ನನಗೆ ಆದರ್ಶ ಎನ್ನಿಸಿ ಜೀವನ ಪರ್ಯಂತ ಅವರ ನೆನಪು ಇರುವಂತೆ ಮಾಡಲು ತನ್ನ ಬೆನ್ನು ಮೇಲೆ ಸುಮಾರು 50 ಸಾವಿರ ಖರ್ಚು ಮಾಡಿ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದು ಶ್ರೀನಾಥ್ ಹೇಳಿದ್ದಾರೆ.

    ರಮೇಶ್‍ಕುಮಾರ್ ಒಬ್ಬ ಅಪರೂಪದ ಸಂವಿಧಾನವನ್ನು ಪರಿಪಾಲಿಸುವ ರಾಜಕಾರಣಿ. ಅವರು ಯಾವುದೇ ಒತ್ತಡಕ್ಕೆ ಒಳಗಾಗುವ ರಾಜಕಾರಣಿ ಅಲ್ಲ ಎನ್ನುತ್ತಾರೆ ಶ್ರೀನಾಥ್.

  • ಸೋಮವಾರದವರೆಗೆ ದೋಸ್ತಿಗಳಿಗೆ ಜೀವದಾನ- 2 ದಿನದಲ್ಲಿ ಅತೃಪ್ತರ ಮನವೊಲಿಕೆಗೆ ಸರ್ಕಸ್

    ಸೋಮವಾರದವರೆಗೆ ದೋಸ್ತಿಗಳಿಗೆ ಜೀವದಾನ- 2 ದಿನದಲ್ಲಿ ಅತೃಪ್ತರ ಮನವೊಲಿಕೆಗೆ ಸರ್ಕಸ್

    ಬೆಂಗಳೂರು: ವಿಧಾನಸಭೆ ಅಧಿವೇಶನ ಶುರುವಾದಾಗ ಸಿಎಂ ತಾನಾಗಿಯೇ ವಿಶ್ವಾಸದಿಂದ ಗುರುವಾರ ವಿಶ್ವಾಸಮತ ಸಾಬೀತುಪಡಿಸುವುದಾಗಿ ಹೇಳಿದ್ದರು. ಆದರೆ ಆ ಬಳಿಕ ನಡೆದಿದ್ದು ಕೇವಲ ಡ್ರಾಮಾ ಎಂದೇ ಹೇಳಬಹುದು. ಗುರುವಾರ 11 ಗಂಟೆ ಕಳಿತವರು ಸಂಜೆಯಾದರೂ ಮುಖ್ಯಮಂತ್ರಿಗಳ ಬಾಯಲ್ಲಿ ವಿಶ್ವಾಸದ ಮಾತೇ ಬರಲಿಲ್ಲ. ಹೀಗಾಗಿ ರಾತ್ರಿ ಬಿಜೆಪಿ ಅಹೋರಾತ್ರಿ ಧರಣಿ ನಡೆಸಿತ್ತು.

    ಇತ್ತ ರಾಜ್ಯಪಾಲರು ಶುಕ್ರವಾರ ಮಧ್ಯಾಹ್ನ 1.30ರ ವರೆಗೆ ಡೆಡ್‍ಲೈನ್ ಕೊಟ್ಟರು. ಆದರೂ ಕೇವಲ ಚರ್ಚೆಯಲ್ಲಿ ಕಾಲಹರಣವಾಯ್ತೇ ಹೊರತು ಸಿಎಂ ವಿಶ್ವಾಸದಲ್ಲಿರುವಂತೆ ಕಾಣಲೇ ಇಲ್ಲ. ಹೀಗಾಗಿ ರಾಜ್ಯಪಾಲರು ಇನ್ನೊಂದು ಡೆಡ್‍ಲೈನ್ ಕೊಟ್ಟರು. 6 ಗಂಟೆಯೊಳಗೆ ವಿಶ್ವಾಸಮತ ಯಾಚಿಸಲೇಬೇಕು ಎಂದು ನಿರ್ದೇಶಿಸಿದರು. ಆದರೂ ದೋಸ್ತಿಗಳು ಕ್ಯಾರೇ ಅನ್ನದೆ ರಾಜ್ಯಪಾಲರ ಮಾತನ್ನೇ ಧಿಕ್ಕರಿಸಿದರು. ಬಳಿಕ ಸಂಜೆ 7.30ಕ್ಕೆ ಸಮಯ ನಿಗದಿ ಮಾಡಲಾಯ್ತು.

    ಇದರ ನಡುವೆ 7.30ಯೊಳಗೆ ವಿಶ್ವಾಸಮತ ಪ್ರಕ್ರಿಯೆ ಮುಗಿಯತ್ತದೆ ಎನ್ನಲಾಗುತ್ತಿತ್ತು. ಆದರೆ ಮತ್ತೆ ಸದನ ಆ ಚರ್ಚೆ, ಈ ಚರ್ಚೆ ಎಂದು ಕಾಲಹರಣದಲ್ಲೇ ಸಾಗಿತು. ಏಳೂವರೆ ಆಗುತ್ತಿದ್ದಂತೆ ಮತ್ತೆ ಸೋಮವಾರಕ್ಕೆ ಮುಂದೂಡಲು ಕಾಂಗ್ರೆಸ್-ಜೆಡಿಎಸ್ ಪಟ್ಟು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿತು. ಆಗ ಯಡಿಯೂರಪ್ಪ ಮಾತನಾಡಿ, ಸ್ಪೀಕರ್ ಬಗ್ಗೆ ಗೌರವವಿದೆ. ರಾತ್ರಿ 11-12 ಗಂಟೆಯಾಗಲಿ. ಎಲ್ಲವೂ ಇವತ್ತೇ ಮುಗಿಯಲಿ ಎಂದು ಒತ್ತಾಯಿಸಿದರು.

    ಇದಕ್ಕೆ ಎದ್ದುನಿಂತ ಸಿಎಂ, ಎಲ್ಲಾ ಸದಸ್ಯರು ಮಾತಾನಾಡಿದ ಬಳಿಕ ಮೈತ್ರಿ ಸರ್ಕಾರದ ಕಾರ್ಯಕ್ರಮದ ಪ್ರಸ್ತಾಪ ಮಾಡಬೇಕು. ಸದಸ್ಯರಿಗೆ ಮಾತಾನಾಡಲು ಅವಕಾಶ ಕೊಡಿ. ಅದಾದ ಬಳಿಕ ವಿಶ್ವಾಸಮತ ಯಾಚನೆ ಎಂದು ಹೇಳಿದ್ರೆ, ನಾವು ಅಧಿಕಾರ ದುರುಪಯೋಗ ಮಾಡಿಕೊಳ್ಳಲ್ಲ. ಸೋಮವಾರಕ್ಕೆ ಮುಂದೂಡಿ ಎಂದು ರೇವಣ್ಣ ಮನವಿ ಮಾಡಿದರು.

    ಇತ್ತ ಸಿದ್ದರಾಮಯ್ಯ ಮಾತನಾಡಿ, ನಾವು ಓಡಿ ಹೋಗೋದಿಲ್ಲ. ವಿಶ್ವಾಸಮತ ಯಾಚನೆ ಅಂತಿಮವಾಗಲೇ ಬೇಕು. ಸೋಮವಾರ ಮಾತಾನಾಡುವ ಸದಸ್ಯರು ಪಾಲ್ಗೊಳ್ಳಲಿ. ಸೋಮವಾರ ಅಂತಿಮ ಮಾಡೋಣ ಎಂದು ಹೇಳಿದರು.

    ಎಲ್ಲವನ್ನೂ ನೋಡಿದ ಸ್ಪೀಕರ್ ರಮೇಶ್ ಕುಮಾರ್ ಕೊನೆಗೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು. ಒಟ್ಟಿನಲ್ಲಿ ಇದರಿಂದ ದೋಸ್ತಿಗಳಿಗಂತೂ 2 ದಿನ ಜೀವದಾನ ಸಿಕ್ಕಿದಂತಾಗಿದೆ. ರಾಜ್ಯ ರಾಜಕೀಯ ಡ್ರಾಮಾದ ಮುಂದಿನ ಎಪಿಸೋಡ್‍ಗೆ ಸೋಮವಾರದವರೆಗೆ ಕಾಯಲೇಬೇಕು.

  • ನಾನೀಗ ಬೆಂಕಿ ಮೇಲೆ ಕುಳಿತಿದ್ದೇನೆ: ಸ್ಪೀಕರ್

    ನಾನೀಗ ಬೆಂಕಿ ಮೇಲೆ ಕುಳಿತಿದ್ದೇನೆ: ಸ್ಪೀಕರ್

    – ಗೌರವವಾಗಿ ಬದುಕುವವರನ್ನು ಸಾಯಿಸುತ್ತಿದ್ದೀರಿ
    – ಪ್ರಾಮಾಣಿಕರು ಎಲ್ಲಿ ಹೋಗುತ್ತಿದ್ದಾರೆ

    ಬೆಂಗಳೂರು: ಸದನದ ಸದಸ್ಯರ ಕಾಲೆಳೆದು ನಗೆಸುತ್ತ, ಮಾಹಿತಿ ನೀಡಿ ಕಲಾಪ ನಡೆಸುತ್ತಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ಕೆಂಡಾಮಂಡಲವಾದರು. ಶಾಸಕರ ಖರೀದಿ ವಿಚಾರವಾಗಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ವಿರುದ್ಧ ಚಾಟಿ ಬೀಸಿದರು.

    ನಮ್ಮ ಶಾಸಕರಿಗೆ ಹಣ ಹಾಗೂ ಅಧಿಕಾರದ ಆಮಿಷವನ್ನು ಬಿಜೆಪಿಯವರು ಒಡ್ಡಿದ್ದರು ಎಂದು ಸಿಎಂ ಪ್ರಸ್ತಾಪಿಸಿದರು. ಈ ವೇಳೆ ಸದನದಲ್ಲಿ ಗಲಾಟೆ ಶುರುವಾಗುತ್ತಿದ್ದಂತೆ ಏರು ಧ್ವನಿಯಲ್ಲಿ ಮಾತು ಆರಂಭಿಸಿದ ಸ್ಪೀಕರ್ ಅವರು, ಒಂದೊಂದು ಕ್ಷಣವನ್ನೂ ಬೆಂಕಿಯ ಮೇಲೆ ಕುಳಿತಿದ್ದೇನೆ ಎನ್ನುವಂತೆ ನನಗೆ ಭಾಸವಾಗುತ್ತದೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಅಂತವರು ಹೊಟ್ಟೆಗೆ ಏನು ತಿನ್ನುತ್ತಾರೆ ಎಂದು ಕಿಡಿಕಾರಿದರು.

    ನಾನು ವಾಸವಿರುವ ಮನೆಗೆ ಬಂದು ನೋಡಿ. ಸರ್ಕಾರದ ಬೋರ್ಡ್ ಹಾಕಿಸಿಲ್ಲ. ಒಬ್ಬ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಂಡಿಲ್ಲ. ನನಗೆ ಕೊಟ್ಟಿರುವ ವಾಹನದ ಮೇಲಿರುವ ಗೂಟವನ್ನು ಕೂಡ ತೆಗೆಸಿ ಹಾಕಿದ್ದೇನೆ. ನಿಮ್ಮ ಬದುಕು ಹೀಗಿದೆ ಅಂತ ನೀವೇ ನೋಡಿಕೊಳ್ಳಿ. ಅವರೆಲ್ಲರೂ ನಿಮ್ಮ ಹುಳುಕುಗಳನ್ನು ಬಿಚ್ಚಿಡುತ್ತಿದ್ದಾರೆ ಎಂದು ಚಾಟಿ ಬೀಸಿದರು.

    ನೀವು ಈ ರೀತಿಯ ಜೀವನ ನಡೆಸುವುದಲ್ಲದೇ ನಮ್ಮನ್ನು ಅಪರಾಧಿಗಳನ್ನಾಗಿ ಮಾಡುತ್ತೀರಾ? ನಮ್ಮ ಕುಟುಂಬದವರು ಹೇಗೆ ಬದುಕಬೇಕು? ನಮ್ಮ ಮನೆಯವರು ಈ ಕಡೆಗೆ ಮುಖ ಕೂಡ ಹಾಕಿಲ್ಲ. ನಿಮ್ಮ ಹೊಸಲು ವ್ಯಾಪಾರ, ಸ್ವಾರ್ಥಕ್ಕೆ ಸಾಕಾಗಿದೆ. ಗೌರವವಾಗಿ ಬದುಕುವವರನ್ನು ಸಾಯಿಸುವುಕ್ಕೆ ಹೋಗುತ್ತಿರುವಿರಿ ಎಂದು ಅಸಮಾಧಾನ ಹೊರ ಹಾಕಿದರು.

    ಸ್ಪೀಕರ್ ಸ್ಥಾನದಲ್ಲಿ ಹೇಗೆ ಕುಳಿತಿದ್ದೇನೆ ಅಂತ ನನಗೆ ಗೊತ್ತಿದೆ. ಒಂದೊಂದು ದಿನ ಬದುಕು ನಡೆಸುವುದು ಎಷ್ಟು ಕಷ್ಟ ಎನ್ನುವುದು ನನಗೆ ಗೊತ್ತಿದೆ. ಒಂದೊಂದೆ ವಿಚಾರವನ್ನು ಬಿಚ್ಚಿಡುತ್ತಾ ಹೋದರೆ ನಿಮ್ಮ ಸ್ವಾರ್ಥ ಎಲ್ಲಿಗೆ ಬೇಕಾದರೂ ಬಂದು ನಿಲ್ಲಬಹುದು. ಪ್ರಾಮಾಣಿಕರು ಇರುವುದು ನಿಮಗೂ (ವಿಪಕ್ಷಕ್ಕೂ) ಬೇಕಾಗಿಲ್ಲ. ಇವರಿಗೂ (ಆಡಳಿತ ಪಕ್ಷಕ್ಕೂ) ಬೇಕಾಗಿಲ್ಲ. ಎಲ್ಲಿ ಹೋಗುತ್ತಿದ್ದಾರೆ ಪ್ರಾಮಾಣಿಕವಾಗಿ ಬದುಕಬೇಕು ಎನ್ನುವವರು ಎಂದು ಗುಡುಗಿದರು.

    ಬಿಚ್ಚಿ ಇನ್ನೂ ಬಿಚ್ಚಿ. ಹೊಟ್ಟೆಯಲ್ಲಿ ಇರುವುದನ್ನು ಎಲ್ಲವನ್ನೂ ಬಿಚ್ಚಿಡಿ. ನಿಮ್ಮಲ್ಲಿರುವ ಗಲೀಜು, ಹೊಲಸು ಒಮ್ಮಿಗೆ ಹೊರಗೆ ಬಂದುಬಿಡಲಿ. ಆಗ ಜನರಿಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತದೆ. ರೆಕಾರ್ಡಿಗೆ ಹೋಗುವುದನ್ನು ನಾನು ತಡೆಯುವುದಿಲ್ಲ. ನೀವು (ವಿಪಕ್ಷದವರು) ಆಡಳಿತ ಪಕ್ಷದವರ ಮೇಲೆ ಕೇಸ್ ಹಾಕಬೇಕು. ಅದು ಎಲ್ಲಿಗೆ ಹೋಗುತ್ತೆ ಅಂತ ನೋಡೋಣ ಎಂದು ಕೆಂಡಾಮಂಡಲವಾದರು.

  • ಅತೃಪ್ತರಿಗೆ ಬಿಗ್ ರಿಲೀಫ್ – ಅಧಿವೇಶನಕ್ಕೆ ಹಾಜರಾಗುವುದು ಕಡ್ಡಾಯವಲ್ಲ

    ಅತೃಪ್ತರಿಗೆ ಬಿಗ್ ರಿಲೀಫ್ – ಅಧಿವೇಶನಕ್ಕೆ ಹಾಜರಾಗುವುದು ಕಡ್ಡಾಯವಲ್ಲ

    ನವದೆಹಲಿ: ವಿಶ್ವಾಸ ಮತಯಾಚನೆಗೆ ಹಾಜರಾಗುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸುವ ಮೂಲಕ ಅತೃಪ್ತ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.

    ಈ ವೇಳೆ ರಾಜೀನಾಮೆ ಅಂಗೀಕಾರಕ್ಕೆ ದಿನ ನಿಗದಿ ಪಡಿಸದ ಕೋರ್ಟ್ ನಿರ್ದಿಷ್ಟ ಸಮಯದಲ್ಲಿ ಅತೃಪ್ತ ಶಾಸಕರ ರಾಜೀನಾಮೆ ನಿರ್ಧಾರ ಮಾಡಿ ಎಂದು ಸ್ಪೀಕರ್ ಅವರಿಗೆ ಆದೇಶ ನೀಡಿದೆ.

    ನಾಳೆ ವಿಶ್ವಾಸಮತಯಾಚನೆ ಮಾಡಬಹುದು. ಆದ್ರೆ ರಾಜೀನಾಮೆ ನೀಡಿರುವ 15 ಶಾಸಕರು ಭಾಗವಹಿಸುವುದು ಕಡ್ಡಾಯವಲ್ಲ. ಹಾಜರಾಗಬೇಕೋ ಬೇಡವೋ ಎನ್ನುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ. ಅತೃಪ್ತ ಶಾಸಕರನ್ನು ಒತ್ತಾಯಪೂರ್ವಕವಾಗಿ ಕರೆತರುವ ಹಾಗಿಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

    ರಾಜೀನಾಮೆ ಅಂಗೀಕರಿಸಿಲ್ಲ ಅಂತ ಸ್ಪೀಕರ್ ವಿರುದ್ಧ 15 ಅತೃಪ್ತ ಶಾಸಕರು ಸಲ್ಲಿಸಿರೋ ಅರ್ಜಿಯ ಬಗ್ಗೆ ಮಂಗಳವಾರ ಸುಮಾರು 212 ನಿಮಿಷ ವಿಚಾರಣೆ ನಡೆದರೂ, ತೀರ್ಪು ಪ್ರಕಟವಾಗಿರಲಿಲ್ಲ. ಅರ್ಜಿದಾರರು, ಸಿಎಂ, ಸ್ಪೀಕರ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ವಕೀಲರು ಸುದೀರ್ಘವಾಗಿ ತಮ್ಮ ಕಕ್ಷಿದಾರರ ಪರವಾಗಿ ವಾದ ಮಂಡಿಸಿದ್ದರು.

    ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ದೀಪಕ್ ಗುಪ್ತಾ ಹಾಗೂ ಜಸ್ಟೀಸ್ ಅನಿರುದ್ಧ್ ಬೋಸ್ ಅವರಿದ್ದ ತ್ರಿಸದಸ್ಯ ಪೀಠದ ಎದುರು ಮುಕುಲ್ ರೋಹಟಗಿ – ಅಭಿಷೇಕ್ ಸಿಂಘ್ವಿ – ರಾಜೀವ್ ಧವನ್ ನಡುವೆ ಅಕ್ಷರಶಃ ವಾಗ್ಯುದ್ಧವೇ ನಡೆದಿತ್ತು. ಸುಮಾರು 3 ಗಂಟೆ 45 ನಿಮಿಷಗಳ ವಾದ ವಿವಾದಗಳನ್ನು ಆಲಿಸಿದ ತ್ರಿಸದಸ್ಯ ಪೀಠ ತೀರ್ಪನ್ನು ಬುಧವಾರ ಬೆಳಗ್ಗೆ 10.30ಕ್ಕೆ ಕಾಯ್ದಿರಿಸಿತ್ತು.

    ಮಂಗಳವಾರ ಸುಪ್ರೀಂಕೋರ್ಟ್ ನಲ್ಲಿ ಏನಾಗಿತ್ತು:
    ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹಟಗಿ:
    10 ಶಾಸಕರು ಜುಲೈ 10ರಂದೇ ರಾಜೀನಾಮೆ ನೀಡಿದ್ದಾರೆ. ಆರ್ಟಿಕಲ್ 190 ಮತ್ತು ಶೆಡ್ಯೂಲ್ 10ರ ನಡುವೆ ವ್ಯತ್ಯಾಸ ಇದ್ದು ಸ್ಪೀಕರ್ ನಿರ್ಧಾರವನ್ನು ಕೋರ್ಟ್ ಪ್ರಶ್ನಿಸಬಹುದು. ಅನರ್ಹತೆ ಬಾಕಿ ಇರೋದು ರಾಜೀನಾಮೆ ಸ್ವೀಕಾರಕ್ಕೆ ಅಡ್ಡಿಯಾಗಬಾರದು. ಉಮೇಶ್ ಜಾಧವ್ ಮೇಲೆ ಅನರ್ಹತೆ ದೂರು ಇದ್ದರೂ ರಾಜೀನಾಮೆ ಅಂಗೀಕರಿಸಲಾಗಿತ್ತು. ಅದೇ ರೀತಿ ಎಲ್ಲ ಶಾಸಕರು ರಾಜೀನಾಮೆಯನ್ನು ಅಂಗೀಕರಿಸಬೇಕು. ಈ ವಿಚಾರದಲ್ಲಿ ಸ್ಪೀಕರ್ ದ್ವಂದ್ವ ನೀತಿಯನ್ನು ಹೊಂದಿದ್ದಾರೆ. ಶಾಸಕರು ಅನರ್ಹ ಮಾಡುವಂತಹ ತಪ್ಪು ಏನು ಮಾಡಿದ್ದಾರೆ? ಅನರ್ಹತೆಗೊಳಿಸಲು ಯಾವುದೇ ಕಾರಣ ಇಲ್ಲ. ನಮ್ಮ ಕಕ್ಷಿದಾರರ ಮೇಲೆ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಆರೋಪವನ್ನು ಹೊರಿಸಲಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ ಸದನದ ಹೊರಗಿನ ಸಭೆಯಲ್ಲಿ ಭಾಗಿಯಾಗುತ್ತಿಲ್ಲ. ವಿಧಾನಸಭಾ ಕಲಾಪಕ್ಕೆ ಹಾಜರಾಗುವಂತೆ ಒತ್ತಡ ಹಾಕುವುದು ಸರಿಯೇ?

    ನನ್ನ ಶಾಸಕರು ಪಕ್ಷ ವಿರೋಧಿ ಚಟುವಟಿಕೆ ಭಾಗಿಯಾಗಿಲ್ಲ. ರಾಜೀನಾಮೆ ನೀಡಿದ ಬಳಿಕ ವಿಪ್ ಜಾರಿಯಾದ್ರೆ ಅನರ್ಹಗೊಳಿಸಲು ಹೇಗೆ ಸಾಧ್ಯ? ಪಕ್ಷಾಂತರ ನಮ್ಮ ಉದ್ದೇಶ ಅಲ್ಲ, ಸರ್ಕಾರದಿಂದ ಹೊರಬರುವುದು ನಮ್ಮ ಉದ್ದೇಶವಾಗಿದೆ. ಶಾಸಕರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೇವೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಡವಿಟ್ ಮೂಲಕವೇ ಹೇಳಿದ್ದಾರೆ. ಹೀಗಿರುವಾಗ ರಾಜೀನಾಮೆ ಅಂಗೀಕಾರಕ್ಕೆ ವಿಳಂಬ ಮಾಡುವುದು ಸರಿಯೇ?

    ನಾನು ಅನರ್ಹತೆ ಪ್ರಕರಣ ಕೈ ಬಿಡುವಂತೆ ಹೇಳಿಲ್ಲ. ಇಲ್ಲಿ ರಾಜೀನಾಮೆ ಸಲ್ಲಿಸಿದ ಬಳಿಕ ಅನಹರ್ತತೆಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಆರ್ಟಿಕಲ್ 191/2 ರಾಜೀನಾಮೆ ನೀಡುವುದು ಶಾಸಕರ ಹಕ್ಕು. ಈ ಹಕ್ಕನ್ನು ತಡೆಯಲು ಸ್ಪೀಕರ್ ಅವರಿಗೆ ಸಾಧ್ಯವಿಲ್ಲ. ಶಾಸಕರು ಇಷ್ಟಪಟ್ಟಲ್ಲಿ ನಿರ್ಧಾರ ತೆಗೆದುಕೊಳ್ಳಲು ಸರ್ವ ಸ್ವತಂತ್ರರು. ಎಲ್ಲ ಶಾಸಕರು ನಿಯಮಬದ್ಧವಾಗಿಯೇ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಈ ಕೂಡಲೇ ಸ್ಪೀಕರ್ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ಮುಕುಲ್ ರೋಹಟಗಿ ವಾದ ಮಂಡಿಸಿದ್ದರು.

    ಸ್ಪೀಕರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ:
    ಸ್ಪೀಕರ್ ರಾಜೀನಾಮೆ ಅಂಗೀಕಾರ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಕೆಲವರನ್ನು ವಿಚಾರಣೆಗೂ ಕೂಡ ಕರೆದಿದ್ದಾರೆ. ಆದರೆ ಅವರು ವಿಚಾರಣೆಗೆ ಬಂದಿಲ್ಲ. ಅನರ್ಹತೆ ಮತ್ತು ರಾಜೀನಾಮೆ ಅಂಗೀಕಾರಕ್ಕೆ ಸಂಬಂಧ ಇಲ್ಲ ಎನ್ನುವುದು ತಪ್ಪು. ಅನರ್ಹತೆ ಮತ್ತು ರಾಜೀನಾಮೆಗೆ ಸಂಬಂಧವಿದೆ. ರಾಜೀನಾಮೆಗಿಂತ ಮುಂಚೆಯೇ ಅನರ್ಹತೆಯ ದೂರು ಸಲ್ಲಿಕೆಯಾಗಿದೆ. ವಿಪ್ ಉಲ್ಲಂಘಿಸಿದರೆ ಅದು ಅನರ್ಹತೆ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ರಾಜೀನಾಮೆ ಅನರ್ಹತೆ ಬಗ್ಗೆ ನಿರ್ಧಾರಕೈಗೊಳ್ಳುವ ಅಧಿಕಾರ ಸ್ವೀಕರ್ ಅವರಿಗೆ ಇದೆ. ವಿಪ್ ಉಲ್ಲಂಘನೆ ಮಾಡಿದರೆ ಶಾಸಕರನ್ನು ಅನರ್ಹತೆ ಮಾಡುವ ಅಧಿಕಾರವನ್ನು ಸ್ಪೀಕರ್ ಹೊಂದಿದ್ದಾರೆ.

    ನಿಯಮದ ಪ್ರಕಾರ ಶಾಸಕರು ಸ್ಪೀಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಬೇಕು. ಖುದ್ದು ಹಾಜರಾಗದೇ ರಾಜೀನಾಮೆ ನೀಡಿದರೆ ಆರ್ಟಿಕಲ್ 190ರ ಅನ್ವಯ ಆಗಲ್ಲ. ವಿಚಾರಣೆಗೂ ಕೂಡ ಶಾಸಕರು ಖುದ್ದು ಹಾಜರಾಗಬೇಕು. ಕೆಲವೊಂದು ಕಾನೂನು ಪ್ರಕ್ರಿಯೆಗಳನ್ನು ಪೂರ್ಣ ಮಾಡಬೇಕಾಗಿರುವ ಕಾರಣ ಒಂದೇ ರಾತ್ರಿಯಲ್ಲಿ ವಿಚಾರಣೆ ಮುಗಿಸಲು ಸಾಧ್ಯವಿಲ್ಲ. ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಶಾಸಕರು ರಾಜೀನಾಮೆಯ ನಾಟಕ ಆಡುತ್ತಿದ್ದಾರೆ. ಸ್ಪೀಕರ್ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಜುಲೈ 11ರಂದು 15 ಶಾಸಕರಲ್ಲಿ 11 ಮಂದಿ ಖುದ್ದು ಹಾಜರಾಗಿ ರಾಜೀನಾಮೆ ನೀಡಿದ್ದಾರೆ. ಉಳಿದ ನಾಲ್ವರು ಇದೂವರೆಗೂ ಬಂದಿಲ್ಲ.

    ಫೆಬ್ರವರಿಯಲ್ಲಿ ಇಬ್ಬರು ಶಾಸಕರ ಅನರ್ಹತೆ ವಿಚಾರಣೆ ಪ್ರಕ್ರಿಯೆ ಶುರುವಾಗಿದೆ. ಜುಲೈ 6ರಂದು ಶಾಸಕರು ರಾಜೀನಾಮೆ ನೀಡಲು ಹೋದಾಗ ಸ್ಪೀಕರ್ ಕಚೇರಿಯಲ್ಲಿ ಇರಲಿಲ್ಲ. ಶಾಸಕರು ಮೊದಲು ಸ್ಪೀಕರ್ ಬಳಿ ಸಮಯ ಕೇಳಿರಲಿಲ್ಲ. ಅನರ್ಹತೆ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ರಾಜೀನಾಮೆ ನೀಡುವುದು ಹೇಗೆ ಸಾಧ್ಯ? ಹಲವು ಅನರ್ಹತೆ ಪ್ರಕರಣಗಳನ್ನು ಪರಿಶೀಲಿಸಿ ತೀರ್ಪು ನೀಡಬೇಕಿದೆ. ಹಾಗಾಗಿ ತಡವಾಗ್ತಿದೆ. ನಾನು ಬಹಳ ಗಟ್ಟಿಯಾಗಿ ಶಾಸಕರು ಅನರ್ಹರಾಗುತ್ತಾರೆಂದು ಹೇಳುತ್ತೇನೆ. ಇವತ್ತಲ್ಲ ನಾಳೆ ಅನರ್ಹತೆ ಆಗಲೇಬೇಕು. ಅನರ್ಹತೆ ತಪ್ಪಿಸಿಕೊಳ್ಳಲು ರಾಜೀನಾಮೆ ಮಾರ್ಗ ಆಗಬಾರದು. ನಾಳೆ ಶಾಸಕರ ರಾಜೀನಾಮೆ, ಅನರ್ಹತೆ ಪ್ರಕರಣವನ್ನು ಸ್ಪೀಕರ್ ಇತ್ಯರ್ಥ ಮಾಡುತ್ತಾರೆ. ಶುಕ್ರವಾರ ನೀಡಿದ್ದ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವನ್ನು ವಾಪಸ್ ಪಡೆಯಿರಿ ಎಂದು ಮನವಿ ಮಾಡಿಕೊಂಡಿದ್ದರು.

    ಸಿಎಂ ಪರ ವಕೀಲ ರಾಜೀವ್ ಧವನ್ ಅವರ ವಾದ:
    ಸ್ಪೀಕರ್ ಕಣ್ಣುಮುಚ್ಚಿಕೊಂಡು ಕುಳಿತಿಲ್ಲ. ಶಾಸಕರು ಆಸೆ, ಆಮಿಷಗಳಿಗೆ ಬಲಿಯಾಗಿದ್ದಾರೆ ಎಂಬ ಮಾಹಿತಿಯನ್ನು ಸ್ಪೀಕರ್ ಅವರಿಗೆ ನೀಡಲಾಗಿದೆ. 11 ಮಂದಿ ಶಾಸಕರು ಮುಂಬೈಗೆ ತೆರಳುವ ಬದಲು ಸ್ಪೀಕರ್ ಬಳಿ ಹೋಗಬೇಕಿತ್ತು. ಇದೊಂದು 11 ಜನರ ಬೇಟೆಯ ತಂಡವಾಗಿದೆ. ಗುಂಪು ರಾಜೀನಾಮೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು. ರಾಜೀನಾಮೆ ಬಳಿಕ 10 ಶಾಸಕರು ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಶೀಘ್ರ ರಾಜೀನಾಮೆ ಅಂಗೀಕಾರವಾದರೆ ಸಂವಿಧಾನ ವಿರೋಧಿ ಆಗುತ್ತದೆ. ಹಾಗಾಗಿ ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ಸುಪ್ರೀಂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಸ್ಪೀಕರ್ ಪ್ರಶ್ನೆ ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಇರಲಿಲ್ಲ. ಈಗಲೂ ಇಲ್ಲ.

    ಸ್ಪೀಕರ್ ಅಧಿಕಾರವನ್ನು 10ನೇ ಶೆಡ್ಯೂಲ್ ಜೊತೆಗೆ ಓದಬೇಕು. ಸಂವಿಧಾನದ 190ನೇ ವಿಧಿಯನ್ನು 10ನೇ ಶೆಡ್ಯೂಲ್ ಪ್ರಕಾರ ಅರ್ಥೈಸಿಕೊಳ್ಳಬೇಕಿದೆ. ಸ್ಪೀಕರ್ ಅವರಿಗೆ ವಿಚಾರಣೆ ನಡೆಸಲು ಸಮಯಾವಕಾಶದ ಅಗತ್ಯವಿದೆ. ಇದೆಲ್ಲವೂ ರಾಜಕೀಯ ಪ್ರೇರಿತವಾಗಿದ್ದು, ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದೆ. ಹೀಗಾಗಿ ವಿಧಿ 190 ಮತ್ತು ಶೆಡ್ಯೂಲ್ 10ನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವಕಕ್ಕೆ ಮಾರಕ. ಇಂತಹ ಬೆಳವಣಿಗೆಯಿಂದ ಪ್ರಜಾಪ್ರಭುತ್ವದ ಬುಡ ಅಲುಗಾಡುತ್ತಿದೆ.

    ಶಾಸಕರ ರಾಜೀನಾಮೆಗಳಿಗೆ ಕಾರಣಗಳೇ ಇಲ್ಲ. ಶಾಸಕರು ನೀಡುವ ಕಾರಣಗಳು ಸ್ಪೀಕರ್ ಅವರಿಗೆ ತೃಪ್ತಿಯಾದ್ರೆ ಮಾತ್ರ ರಾಜೀನಾಮೆ ಸಾಂವಿಧಾನಿಕವಾಗಲಿದೆ. 10 ರಿಂದ 13 ಶಾಸಕರು ರಾಜೀನಾಮೆ ನೀಡಲು ಸರ್ಕಾರ ಕೆಡವಲು ಬೇಟೆಗೆ ಹೊರಟಿದ್ದಾರೆ. ರಾಜಕೀಯ ಆಟದಲ್ಲಿ ಕೋರ್ಟ್ ಮಧ್ಯಪ್ರವೇಶಕ್ಕೆ ಶಾಸಕರು ಬಯಸಿದ್ದಾರೆ ಎಂದು ತಮ್ಮ ವಾದದಲ್ಲಿ ಮಂಡಿಸಿದ್ದರು.

    ರಾಜೀನಾಮೆ ಇದೊಂದು ರಾಜಕೀಯ ಕುತಂತ್ರವಾಗಿದ್ದು, ಅಧಿವೇಶನಕ್ಕೂ ಮುನ್ನ ಸರ್ಕಾರಕ್ಕೆ ಸಂಖ್ಯಾಬಲ ಇಲ್ಲದಂತೆ ಮಾಡುವ ಪ್ಲಾನ್ ಇದಾಗಿದೆ. ಇಂತಹ ಬೆಳವಣಿಗೆಗಳನ್ನು ಪರಿಗಣಿಸಬಾರದು. ಬಜೆಟ್ ಅಂಗೀಕಾರಕ್ಕೂ ಮೊದಲೇ ಸರ್ಕಾರ ಬೀಳಿಸುವುದು ಇವರೆಲ್ಲರ ಉದ್ದೇಶವಾಗಿದೆ. ಗುರುವಾರಕ್ಕೆ ಪೂರ್ಣ ಪ್ರಮಾಣದ ಚರ್ಚೆ ಆಗಲಿ. ಅಂದು ಎಲ್ಲ ಶಾಸಕರು ಹಾಜರಾಗಲಿ ಎಂದು ವಾದಿಸಿದ್ದರು.

  • ಸುಪ್ರೀಂಗಿಂತ ದೊಡ್ಡವನು ನಾನಲ್ಲ, ನಾನು ಯಾರಿಗೂ ಸವಾಲ್ ಹಾಕಿಲ್ಲ: ಸ್ಪೀಕರ್

    ಸುಪ್ರೀಂಗಿಂತ ದೊಡ್ಡವನು ನಾನಲ್ಲ, ನಾನು ಯಾರಿಗೂ ಸವಾಲ್ ಹಾಕಿಲ್ಲ: ಸ್ಪೀಕರ್

    ಕೋಲಾರ: ಮೈತ್ರಿ ಪಕ್ಷದ ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ಇಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, ನಾನು ಯಾರಿಗೂ ಸವಾಲ್ ಹಾಕಿಲ್ಲ, ಸುಪ್ರೀಂ ಕೋರ್ಟಿಗಿಂತ ದೊಡ್ಡವನು ನಾನಲ್ಲ ಎಂದಿದ್ದಾರೆ.

    ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಂದು ಅತೃಪ್ತರ ರಾಜೀನಾಮೆ ಅಂಗೀಕಾರ ಮಾಡುವ ಬಗ್ಗೆ ವಾದ ಪ್ರತಿವಾದಗಳು ನಡೆದಿದೆ. ಈ ಸಂಬಂಧ ತೀರ್ಪನ್ನು ನಾಳೆ ನೀಡುವುದಾಗಿ ಕೋರ್ಟ್ ತಿಳಿಸಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ಅವರು, ನಾಳೆಯ ಕೋರ್ಟ್ ತೀರ್ಪು ನೋಡಿದ ಬಳಿಕ ಪ್ರತಿಕ್ರಿಯೆ ನೀಡುವೆ. ಸುಪ್ರೀಂ ಕೋರ್ಟ್ ಗಿಂತ ದೊಡ್ಡವನು ನಾನಲ್ಲ. ಇವತ್ತು ವಾದ ವಿವಾದ ನಡೆದಿದೆ. ಅದರ ಬಗ್ಗೆ ಅಂತಿಮ ತೀರ್ಮಾನ ಬರುವವರೆಗೂ ಮಾತನಾಡಲ್ಲ. ನನಗೆ ಕೊಟ್ಟಿರುವ ಜವಾಬ್ದಾರಿ ನಾನು ನಿರ್ವಹಣೆ ಮಾಡುತ್ತಿದ್ದೇನೆ. ಯಾರಿಗೂ ನಾನು ಸವಾಲ್ ಹಾಕಿಲ್ಲ ಎಂದರು.

    ನಾನು ಯಾರ ಜೊತೆಗೂ ಜಿದ್ದಾ ಜಿದ್ದಿ ಮಾಡಿಲ್ಲ. ನನ್ನ ಧ್ವನಿಯೇ ಸ್ಪಲ್ಪ ಜೋರಾಗಿದೆ. ನಮ್ಮಪ್ಪನಿಗೂ ಸ್ವಲ್ಪ ಗಂಟಲು ದೊಡ್ಡದಾಗಿತ್ತು ಹಾಗಾಗಿ ನಾನು ಹಾಗೆ ಮಾತನಾಡುತ್ತೇನೆ. ಇದು ಸುಪ್ರೀಂ ಕೋರ್ಟ್ ಹಾಗೂ ನನ್ನ ನಡುವಿನ ಸಂಘರ್ಷ ಅಲ್ಲ. ನಿಮ್ಮ ಭಾಷೆಯಲ್ಲಿ ನೀವು ಏನಾದರೂ ಮಾತನಾಡಿಕೊಳ್ಳಿ. ನಿಮಗೆ ಪತ್ರಿಕಾ ಸ್ವಾತಂತ್ರ್ಯವಿದೆ ಎಂದು ಮಾಧ್ಯಮಗಳಿಗೆ ಹೇಳಿದರು.

  • ನಾಳೆ ಶಾಸಕರ ರಾಜೀನಾಮೆ, ಅನರ್ಹತೆ ಪ್ರಕರಣ ಇತ್ಯರ್ಥ

    ನಾಳೆ ಶಾಸಕರ ರಾಜೀನಾಮೆ, ಅನರ್ಹತೆ ಪ್ರಕರಣ ಇತ್ಯರ್ಥ

    – ಸುಪ್ರೀಂಗೆ ಮಾಹಿತಿ ಕೊಟ್ಟ ಸಿಂಘ್ವಿ

    ನವದೆಹಲಿ: ವಿಶ್ವಾಸ ಮತ ಯಾಚನೆಯ ಮುನ್ನದಿನವಾದ ಬುಧವಾರ ಶಾಸಕರ ರಾಜೀನಾಮೆ ಮತ್ತು ಅನಹರ್ತತೆ ವಿಚಾರವನ್ನು ಸ್ಪೀಕರ್ ರಮೇಶ್ ಕುಮಾರ್ ಇತ್ಯರ್ಥ ಮಾಡಲಿದ್ದಾರೆ.

    ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್, ನ್ಯಾ.ದೀಪಕ್ ಗುಪ್ತಾ, ಅನಿರುದ್ಧ ಬೋಸ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು. ಈ ವೇಳೆ ಸ್ಪೀಕರ್ ಪರವಾಗಿ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ ಬುಧವಾರ ಅನಹರ್ತತೆ ಮತ್ತು ರಾಜೀನಾಮೆಯನ್ನು ಇತ್ಯರ್ಥ ಮಾಡಲಿದ್ದಾರೆ ಎಂದು ತಿಳಿಸಿದರು.

    ಅಭಿಷೇಕ್ ಮನು ಸಿಂಘ್ವಿ ವಾದ ಹೀಗಿತ್ತು:
    ಸ್ಪೀಕರ್ ರಾಜೀನಾಮೆ ಅಂಗೀಕಾರ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಕೆಲವರನ್ನು ವಿಚಾರಣೆಗೂ ಕೂಡ ಕರೆದಿದ್ದಾರೆ. ಆದರೆ ಅವರು ವಿಚಾರಣೆಗೆ ಬಂದಿಲ್ಲ. ಅನರ್ಹತೆ ಮತ್ತು ರಾಜೀನಾಮೆ ಅಂಗೀಕಾರಕ್ಕೆ ಸಂಬಂಧ ಇಲ್ಲ ಎನ್ನುವುದು ತಪ್ಪು. ಅನರ್ಹತೆ ಮತ್ತು ರಾಜೀನಾಮೆಗೆ ಸಂಬಂಧವಿದೆ.

    ರಾಜೀನಾಮೆಗಿಂತ ಮುಂಚೆಯೇ ಅನರ್ಹತೆಯ ದೂರು ಸಲ್ಲಿಕೆಯಾಗಿದೆ. ವಿಪ್ ಉಲ್ಲಂಘಿಸಿದರೆ ಅದು ಅನರ್ಹತೆ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ರಾಜೀನಾಮೆ ಅನರ್ಹತೆ ಬಗ್ಗೆ ನಿರ್ಧಾರಕೈಗೊಳ್ಳುವ ಅಧಿಕಾರ ಸ್ವೀಕರ್ ಅವರಿಗೆ ಇದೆ. ವಿಪ್ ಉಲ್ಲಂಘನೆ ಮಾಡಿದರೆ ಶಾಸಕರನ್ನು ಅನರ್ಹತೆ ಮಾಡುವ ಅಧಿಕಾರವನ್ನು ಸ್ಪೀಕರ್ ಹೊಂದಿದ್ದಾರೆ. ಪಕ್ಷ ವಿರೋಧ ಚಟುವಟಿಕೆ ಆಧಾರದ ಮೇಲೆ ಅನರ್ಹತೆ ಮಾಡಬೇಕು. ಪಕ್ಷ ವಿರೋಧಿ ಚಟುವಟಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದೇ ರಾತ್ರಿಯಲ್ಲಿ ರಾಜೀನಾಮೆ ಅಂಗೀಕಾರ ಮಾಡಲು ಸಾಧ್ಯವಿಲ್ಲ. ಮುಕುಲ್ ರೋಹಟಗಿ ಅವರ ವಾದದಲ್ಲಿ ಹುರುಳಿಲ್ಲ. ತ್ವರಿತವಾಗಿ ರಾಜೀನಾಮೆ ಅಂಗೀಕರಿಸುವುದು ಸೂಕ್ತ ತೀರ್ಮಾನವಲ್ಲ.

    ಅನರ್ಹತೆ ಪ್ರಶ್ನೆಯೂ ಅನರ್ಹತೆಗೆ ದೂರು ನೀಡಲು ಕಾರಣವಾದ ಘಟನೆ ಮತ್ತು ಸಮಯವನ್ನು ಆಧರಿಸಿರುತ್ತದೆ. ನಿಯಮದ ಪ್ರಕಾರ ಶಾಸಕರು ಸ್ಪೀಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಬೇಕು. ಖುದ್ದು ಹಾಜರಾಗದೇ ರಾಜೀನಾಮೆ ನೀಡಿದರೆ ಆರ್ಟಿಕಲ್ 190ರ ಅನ್ವಯ ಆಗಲ್ಲ. ವಿಚಾರಣೆಗೂ ಕೂಡ ಶಾಸಕರು ಖುದ್ದು ಹಾಜರಾಗಬೇಕು. ಕೆಲವೊಂದು ಕಾನೂನು ಪ್ರಕ್ರಿಯೆಗಳನ್ನು ಪೂರ್ಣ ಮಾಡಬೇಕಾಗಿರುವ ಕಾರಣ ಒಂದೇ ರಾತ್ರಿಯಲ್ಲಿ ವಿಚಾರಣೆ ಮುಗಿಸಲು ಸಾಧ್ಯವಿಲ್ಲ. ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಶಾಸಕರು ರಾಜೀನಾಮೆಯ ನಾಟಕ ಆಡುತ್ತಿದ್ದಾರೆ. ಸ್ಪೀಕರ್ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಜುಲೈ 11ರಂದು 15 ಶಾಸಕರಲ್ಲಿ 11 ಮಂದಿ ಖುದ್ದು ಹಾಜರಾಗಿ ರಾಜೀನಾಮೆ ನೀಡಿದ್ದಾರೆ. ಉಳಿದ ನಾಲ್ವರು ಇದೂವರೆಗೂ ಬಂದಿಲ್ಲ.

    ಆರಂಭದಲ್ಲಿ ಶಾಸಕರು ಸಲ್ಲಿಸಿದ್ದ ರಾಜೀನಾಮೆ ಕ್ರಮಬದ್ಧವಾಗಿರಲಿಲ್ಲ. ತದನಂತರ ಸಲ್ಲಿಸಿದ ರಾಜೀನಾಮೆ ಕ್ರಮಬದ್ಧವಾಗಿದೆ. ಫೆಬ್ರವರಿಯಲ್ಲಿ ಇಬ್ಬರು ಶಾಸಕರ ಅನರ್ಹತೆ ವಿಚಾರಣೆ ಪ್ರಕ್ರಿಯೆ ಶುರುವಾಗಿದೆ. ಜುಲೈ 6ರಂದು ಶಾಸಕರು ರಾಜೀನಾಮೆ ನೀಡಲು ಹೋದಾಗ ಸ್ಪೀಕರ್ ಕಚೇರಿಯಲ್ಲಿ ಇರಲಿಲ್ಲ. ಶಾಸಕರು ಮೊದಲು ಸ್ಪೀಕರ್ ಬಳಿ ಸಮಯ ಕೇಳಿರಲಿಲ್ಲ. ಅನರ್ಹತೆ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ರಾಜೀನಾಮೆ ನೀಡುವುದು ಹೇಗೆ ಸಾಧ್ಯ? ಹಲವು ಅನರ್ಹತೆ ಪ್ರಕರಣಗಳನ್ನು ಪರಿಶೀಲಿಸಿ ತೀರ್ಪು ನೀಡಬೇಕಿದೆ. ಹಾಗಾಗಿ ತಡವಾಗ್ತಿದೆ. ನಾನು ಬಹಳ ಗಟ್ಟಿಯಾಗಿ ಶಾಸಕರು ಅನರ್ಹರಾಗುತ್ತಾರೆಂದು ಹೇಳುತ್ತೇನೆ. ಇವತ್ತಲ್ಲ ನಾಳೆ ಅನರ್ಹತೆ ಆಗಲೇಬೇಕು. ಅನರ್ಹತೆ ತಪ್ಪಿಸಿಕೊಳ್ಳಲು ರಾಜೀನಾಮೆ ಮಾರ್ಗ ಆಗಬಾರದು. ನಾಳೆ ಶಾಸಕರ ರಾಜೀನಾಮೆ, ಅನರ್ಹತೆ ಪ್ರಕರಣವನ್ನು ಸ್ಪೀಕರ್ ಇತ್ಯರ್ಥ ಮಾಡುತ್ತಾರೆ. ಶುಕ್ರವಾರ ನೀಡಿದ್ದ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವನ್ನು ವಾಪಸ್ ಪಡೆಯಿರಿ ಎಂದು ಮನವಿ ಮಾಡಿಕೊಂಡರು.

    ಶಾಸಕರ ರಾಜೀನಾಮೆ ಅಂಗೀಕರಿಸುವಂತೆ ಗಡುವು ನೀಡುವಂತಿಲ್ಲ. ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡುವಂತಿಲ್ಲ. 2018 ಮೇ ತಿಂಗಳಲ್ಲಿ ಸರ್ಕಾರ ರಚನೆಯಾದಾಗ ಸ್ಪೀಕರ್ ಗೆ ಸುಪ್ರೀಂ ಯಾವುದೇ ನಿರ್ದೇಶನ ನೀಡಿರಲಿಲ್ಲ. ರಾಜೀನಾಮೆ ವಿಚಾರದಲ್ಲಿ ಬಿಜೆಪಿ ನಾಯಕರ ಪಾತ್ರ ಇದೆ. ಬಿಎಸ್ ಯಡಿಯೂರಪ್ಪ ಆಪ್ತ ಸಂತೋಷ್, ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ್ ಹೆಸರನ್ನು ಪ್ರಸ್ತಾಪಿಸಿ, ರಾಜೀನಾಮೆ ನೀಡಿರುವ ಶಾಸಕರು ಬಿಜೆಪಿ ನಾಯಕರೊಂದಿಗೆ ಒಡನಾಟ ಹೊಂದಿದ್ದಾರೆ ಎಂದು ಸಿಂಘ್ವಿ ವಾದಿಸಿದರು.

    ಸಿಜೆಐ ಪ್ರಶ್ನೆ:
    ರಾಜೀನಾಮೆ ಅಂಗೀಕಾರ ಪ್ರಕ್ರಿಯೆ ತಡವಾಗಲು ಕಾರಣವೇನು? ರಾಜೀನಾಮೆಯನ್ನು ಸರ್ಕಾರ ತಡೆಯುತ್ತಿದ್ಯಾ? ಮೊದಲು ರಾಜೀನಾಮೆ ಇತ್ಯರ್ಥಪಡಿಸಿ ನಂತರ ಅನರ್ಹತೆಯನ್ನು ತೆಗೆದುಕೊಳ್ಳಿ ಎಂದು ನಮ್ಮ ಕಾರ್ಯವ್ಯಾಪ್ತಿಯನ್ನು ಪ್ರಶ್ನೆ ಮಾಡಬೇಡಿ ಎಂದು ಸಿಜೆಐ ಪ್ರಶ್ನೆ ಮಾಡಿದರು. ಈ ಹಿಂದೆ 24 ಗಂಟೆಯ ಒಳಗಡೆ ವಿಶ್ವಾಸ ಮತಯಾಚನೆ ನಡೆಸಲು ಸೂಚನೆ ನೀಡಿ ಎಂದು ನಾವು ರಾಜ್ಯಪಾಲರಿಗೆ ನೀಡಿದ ಆದೇಶವನ್ನು ನೀವು ಒಪ್ಪಿಕೊಂಡಿದ್ದರೆ ಈಗ ಯಾಕೆ ಪ್ರಶ್ನೆ ಮಾಡುತ್ತೀರಿ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಪ್ರಶ್ನೆ ಮಾಡಿದರು.

    ಬೆಳಗ್ಗೆ 10.52ಕ್ಕೆ ವಿಚಾರಣೆ ಆರಂಭಗೊಂಡಿದ್ದು, ಮೊದಲು ರಾಜೀನಾಮೆ ಸಲ್ಲಿಸಿದ ಶಾಸಕರ ಪರವಾಗಿ ಮುಕುಲ್ ರೋಹಟಗಿ ವಾದ ಮಂಡಿಸಿದರು. ಇದಾದ ಬಳಿಕ ಸ್ಪೀಕರ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು. ದೀರ್ಘ ವಿಚಾರಣೆ ನಡೆಸಿದ ಪೀಠ ಭೋಜನ ವಿರಾಮದ ನಂತರವೂ ವಾದವನ್ನು ಆಲಿಸಲಿದೆ.

  • ಚದುರಂಗದಲ್ಲಿ ಯಾರು ಗೆಲ್ತಾರೋ? ಯಾರು ಸೋಲ್ತಾರೋ ಗೊತ್ತಿಲ್ಲ: ಸ್ಪೀಕರ್

    ಚದುರಂಗದಲ್ಲಿ ಯಾರು ಗೆಲ್ತಾರೋ? ಯಾರು ಸೋಲ್ತಾರೋ ಗೊತ್ತಿಲ್ಲ: ಸ್ಪೀಕರ್

    – ಗುರುವಾರಕ್ಕೆ ವಿಧಾನಸಭಾ ಕಲಾಪ ಮುಂದೂಡಿಕೆ

    ಬೆಂಗಳೂರು: ಪ್ರತಿಪಕ್ಷ ಸದಸ್ಯರು ಸದನದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದು ವಿರೋಧ ಪಕ್ಷವಿಲ್ಲದೇ ಇಲ್ಲದೇ ಕಲಾಪ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ವಿಧಾನಸಭೆಯನ್ನು ಗುರವಾರಕ್ಕೆ ಮುಂದೂಡಲಾಗುತ್ತಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

    ಸದನ ಸಲಹಾ ಸಮತಿ ಸಭೆ ಬಳಿಕ ಅಧಿವೇಶನದಲ್ಲಿ ಭಾಗವಹಿಸಿ, ನಾಯಕರು ಈಗಾಗಲೇ ವಿಶ್ವಾಸಮತಯಾಚನೆ ಮನವಿ ಮಾಡಿದ್ದಾರೆ. ಈ ಬಗ್ಗೆ ನಾನು ಅವರಿಗೆ ಮಾಹಿತಿ ನೀಡಿದ್ದು, ಇಂದು ಬೆಳಗ್ಗೆ ಸದನ ಸದಸ್ಯರಾದ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿದ್ದೆ. ಈ ಸಂದರ್ಭದಲ್ಲಿ ಅವರು ನನಗೆ ಅವಿಶ್ವಾಸ ಮತಯಾಚನೆ ಮಾಡಲು ಮನವಿ ಮಾಡಿದ್ದರು. ಇಬ್ಬರ ಉದ್ದೇಶ ಒಂದೇ ಆಗಿರುವುದರಿಂದ ನನ್ನ ಅಭಿಪ್ರಾಯದೊಂದಿಗೆ ಕಾನೂನುನಿನ ಅಡಿ ನಿರ್ಧಾರ ಕೈಗೊಂಡಿದ್ದೇನೆ ಎಂದರು. ಅಲ್ಲದೇ ಈ ಬಗ್ಗೆ ಎರಡು ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿದ್ದಾಗಿ ಸ್ಪಷ್ಟಪಡಿಸಿದರು.

    ಇದರಂತೆ ಗುರುವಾರದಂದು ವಿಶ್ವಾಸಮತಯಾಚನೆ ಚರ್ಚೆ ಮಾಡಲು ಸಮಯ ನಿಗದಿ ಮಾಡಲಾಗಿದೆ. ಈ ನಡುವೆ ಸದನದಲ್ಲಿ ಭಾಗವಹಿಸಲು ವಿರೋಧ ಪಕ್ಷದ ನಾಯಕರು ಭಾಗವಹಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಹಿನ್ನೆಲೆಯಲ್ಲಿ ಈ ಹಿಂದೆ ನಡೆದುಕೊಂಡ ರೀತಿಯನ್ನು ನಾನು ಅವಲೋಕಿಸಿಕೊಂಡಿದ್ದೇನೆ. ಆದ್ದರಿಂದ ಸಂಸದೀಯ ಕಲಾಪಗಳನ್ನು ಗುರುವಾರ 11 ಗಂಟೆಗೆ ಮುಂದೂಡಲಾಗಿದೆ ಎಂದರು.

    ಇದೇ ಸಂದರ್ಭದಲ್ಲಿ ಎರಡು ಪಕ್ಷಗಳಿಗೆ ಸೂಚನೆ ನೀಡಿದ ಅವರು, ಈ ಚದುರಂಗದಲ್ಲಿ ಯಾರು ಗೆಲ್ತಿರೋ ಯಾರು ಸೋಲ್ತಿರೋ ಗೊತ್ತಿಲ್ಲ. ಅದು ನನಗೆ ಮುಖ್ಯವೂ ಅಲ್ಲ. ಆದರೆ ಮಾತಿನ ಬಗ್ಗೆ ನಿಗಾ ಇರಲಿ. ನಿಮ್ಮ ಮಾತುಗಳೆಲ್ಲವೂ ದಾಖಲೆಯಾಗಲಿದೆ. ಅನೇಕ ಜನ ಬದುಕು ಮುಡುಪಿಟ್ಟು ಈ ಅವಕಾಶ ನೀಡಿದ್ದಾರೆ. ನಾನು ಯಾರನ್ನ ಮೆಚ್ಚಿಸಲು ಇಲ್ಲಿ ಕುಳಿತಿಲ್ಲ. ನಾನು ಅಸಹಾಯಕ ಸ್ಥಾನದಲ್ಲಿ ಇದ್ದು, ನೀವು ನನ್ನ ಮೇಲೆ ವಾಕ್ಬಾಣಗಳನ್ನು ಪ್ರಯೋಗಿಸಿದರೂ ನಾನು ಈ ಸ್ಥಾನದಲ್ಲಿ ಇರುವುದರಿಂದ ಏನು ಮಾತನಾಡಲಾರೆ ಆದರೆ ನಾನು ಉತ್ತರಿಸಲು ಸಾಧ್ಯವಾಗದೇ ಕುಳಿತಿಲ್ಲ ಎಂದು ಹೇಳಿದರು.

  • ಸುಪ್ರೀಂನಲ್ಲಿಂದು ಶಾಸಕಾಂಗ Vs ನ್ಯಾಯಾಂಗ- ಕೋರ್ಟ್ ಆದೇಶದ ಮೇಲೆ ದೋಸ್ತಿ ಭವಿಷ್ಯ

    ಸುಪ್ರೀಂನಲ್ಲಿಂದು ಶಾಸಕಾಂಗ Vs ನ್ಯಾಯಾಂಗ- ಕೋರ್ಟ್ ಆದೇಶದ ಮೇಲೆ ದೋಸ್ತಿ ಭವಿಷ್ಯ

    ನವದೆಹಲಿ: ಸಮ್ಮಿಶ್ರ ಸರ್ಕಾರದ ಶಾಸಕರ ರಾಜೀನಾಮೆ ವಿಚಾರ ಸುಪ್ರೀಂ ಅಂಗಳಕ್ಕೆ ತಲುಪಿದ್ದು, ಇಂದು ಸುಪ್ರೀಂಕೋರ್ಟ್ ನಲ್ಲಿ ಶಾಸಕಾಂಗ ವರ್ಸಸ್ ನ್ಯಾಯಾಂಗದ ವಾದ-ವಿವಾದಗಳು ನಡೆಯಲಿದೆ.

    ರಾಜೀನಾಮೆ ಅಂಗೀಕಾರ ನಿಧಾನವಾಗುತ್ತಿರುವ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ಸುಪ್ರೀಂ ಮೊರೆಹೋಗಿದ್ದು, ಗುರುವಾರ ವಿಚಾರಣೆಯಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಹೀಗಾಗಿ ಸುಪ್ರೀಂ ನಿರ್ದೇಶನದಂತೆ ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರದ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಇಂದಿನ ಅತೃಪ್ತ ಶಾಸಕರ ಕೇಸ್ ಹೊಸ ತೀರ್ಪಿಗೆ ನಾಂದಿಯಾಗುತ್ತಾ ಎಂಬುದನ್ನು ಕಾದು ನೋಡಬೇಕು.

    ಸುಪ್ರೀಂಕೋರ್ಟ್ ಮುಂದೆ ಸ್ಪೀಕರ್ ವಾದ:
    ನಿಮ್ಮ ಸೂಚನೆಯಂತೆ 10 ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ನಿಯಮದಂತೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ನಿನ್ನೆ ಸಂಜೆಯ ಎಲ್ಲ ಬೆಳವಣಿಗೆಯ ವಿಡಿಯೋ ರೆಕಾರ್ಡ್ ಮಾಡಿ ಕೋರ್ಟ್ ಗೆ ಒಪ್ಪಿಸಿದೆ. ಶಾಸಕರ ರಾಜೀನಾಮೆ ಆಧರಿಸಿ ವಿಚಾರಣೆ ನಡೆಸಬೇಕು. ವಿಚಾರಣೆ ನಡೆಸದೇ ತಕ್ಷಣ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ದಿನಾಂಕ ನಿಗದಿಪಡಿಸಿ ಶಾಸಕರ ವಿಚಾರಣೆ ನಡೆಸಿ ಕ್ರಮ ಕೈಕೊಳ್ಳುವೆ. ಸಂವಿಧಾನದ ನಿಯಮ ಪ್ರಕಾರ ನಿಗದಿತ ಸಮಯದಲ್ಲಿ ರಾಜೀನಾಮೆ ಅಂಗೀಕರಿಸುವಂತೆ ನೀವು ಸೂಚಿಸುವಂತಿಲ್ಲ ಎಂದು ಸ್ಪೀಕರ್ ಹೇಳಬಹುದು.

    ರಾಜೀನಾಮೆ ಅಂಗೀಕಾರಕ್ಕೆ ಎಷ್ಟು ದಿನಾವಾದರೂ ಸಮಯ ಹಿಡಿಯಬಹುದು. ಕರ್ನಾಟಕದಲ್ಲಿ ರಾಜಕೀಯ ಸ್ಥಿತ್ಯಂತರಗಳಿಂದ ಈ ರಾಜೀನಾಮೆಗಳು ಮಹತ್ವ ಪಡೆದುಕೊಂಡಿದೆ. ಈ ರೀತಿಯ ಪ್ರಕರಣಗಳು ದೇಶದಲ್ಲಿ ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಪ್ರಕರಣ ನಡೆದಿವೆ. ರಾಜೀನಾಮೆ ಅಂಗೀಕಾರಕ್ಕೆ ನಾನು ತಡಮಾಡಿರಲಿಲ್ಲ. ಜುಲೈ 6 ಶನಿವಾರ ರಾಜೀನಾಮೆ ಸಲ್ಲಿಕೆಯಾಗಿದೆ. ಭಾನುವಾರ ರಜೆ, ಸೋಮವಾರ ಪೂರ್ವ ನಿಗದಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಾನು ರಜೆಯಲ್ಲಿದ್ದೆ. ಮಂಗಳವಾರ ರಾಜೀನಾಮೆ ಪತ್ರಗಳ ಪರಿಶೀಲನೆ ಪ್ರಕ್ರಿಯೆ ನಡೆಸಿದ್ದೇನೆ. ಮುಂದೆಯೂ ಸಂವಿಧಾನದ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಸ್ಪೀಕರ್ ಇಂದು ವಾದ ಮಂಡಿಸುವ ಸಾಧ್ಯತೆಗಳಿವೆ.

    ರೆಬಲ್ ಶಾಸಕರ ವಾದ:
    ಕೋರ್ಟ್ ನಿರ್ದೇಶನದಂತೆ ನಿನ್ನೆ ಸಂಜೆ ರಾಜೀನಾಮೆ ಸಲ್ಲಿಸಿದೆ. ಸ್ಪೀಕರ್ ಮತ್ತೆ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ರಾಜೀನಾಮೆ ನಿಯಮಗಳ ಪ್ರಕಾರ ಪುನರ್ ಸಲ್ಲಿಕೆ ಬಳಿಕವೂ ನಿರ್ಧಾರ ತೆಗದುಕೊಂಡಿಲ್ಲ. ಆರ್ಟಿಕಲ್ 190ರ ಅನ್ವಯ ಸ್ಪೀಕರ್ ರಾಜೀನಾಮೆ ಅಂಗೀಕರಿಸುವಂತೆ ಸೂಚಿಸಬೇಕು. ಇಂದಿನಿಂದ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಈಗಾಗಲೇ ಎರಡು ಪಕ್ಷದ ಶಾಸಕರಿಗೆ ವಿಪ್ ಜಾರಿಯಾಗಿದೆ. ಮುಂದೆ ಅನರ್ಹತೆ ಅಸ್ತ್ರ ಪ್ರಯೋಗಿಸುವ ಸಾಧ್ಯತೆ ಇದೆ. ಸರ್ಕಾರದ ಒತ್ತಡ ಮೇಲೆ ಸ್ಪೀಕರ್ ಅನರ್ಹತೆ ಪ್ರಕ್ರಿಯೆ ಆರಂಭಿಸದಂತೆ ಹಾಗೂ ಶೀಘ್ರ ರಾಜೀನಾಮೆ ಅಂಗೀಕಾರಕ್ಕೆ ಸೂಚನೆ ನೀಡಿ ಎಂದು ಅತೃಪ್ತ ಶಾಸಕರು ವಾದ ಮಂಡಿಸಬಹುದು ಎಂಬುದಾಗಿ ತಿಳಿದುಬಂದಿದೆ.

  • ಸರ್ಕಾರ ಹೇಗೆ ಉಳಿಯುತ್ತೆ ಅನ್ನೋ ಚಿಂತೆ ನಿಮಗೆ ಬೇಡ – ಕ್ಯಾಬಿನೆಟ್‍ನಲ್ಲಿ ಸಿಎಂ

    ಸರ್ಕಾರ ಹೇಗೆ ಉಳಿಯುತ್ತೆ ಅನ್ನೋ ಚಿಂತೆ ನಿಮಗೆ ಬೇಡ – ಕ್ಯಾಬಿನೆಟ್‍ನಲ್ಲಿ ಸಿಎಂ

    ಬೆಂಗಳೂರು: ಸ್ಪೀಕರ್ ಮತ್ತು ಕಾನೂನಿನ ಮೂಲಕ ನಾವು ಸರ್ಕಾರವನ್ನು ಉಳಿಸುತ್ತೇವೆ ಎಂದು ಸಿಎಂ ಕ್ಯಾಬಿನೆಟ್ ಸಭೆಯಲ್ಲಿ ಭರವಸೆ ನೀಡಿದ್ದಾರೆ.

    ಸಚಿವರು ಆದಷ್ಟು ತಮ್ಮ ವ್ಯಾಪ್ತಿಯ ಶಾಸಕರ ಜೊತೆ ಸಂಪರ್ಕದಲ್ಲೇ ಇರಿ. ಹೇಗೆ ಸರ್ಕಾರ ಉಳಿಯುತ್ತದೆ ಎಂಬ ಚಿಂತೆ ನಿಮಗೆ ಬೇಡ. ಅತೃಪ್ತರ ಓಲೈಕೆಯನ್ನು ಎರಡು ಪಕ್ಷದವರು ಮಾಡುವುದು ಬೇಡ ಎಂದು ಹೇಳಿರುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಸ್ಪೀಕರ್ ಮತ್ತು ಕಾನೂನಿನಿಂದ ಸರಕಾರಕ್ಕೆ ದೊಡ್ಡ ರಿಲೀಫ್ ಸಿಗಲಿದೆ. ಯಾವುದೇ ಸಮಸ್ಯೆ ಆಗದ ರೀತಿ ಅಧಿವೇಶನ ನಡೆಯುತ್ತದೆ. ಬಿಜೆಪಿಯವರ ಜೊತೆ ಆಕ್ರೋಶಕ್ಕೆ ಯಾರು ಇಳಿಯಬೇಡಿ. ಎಲ್ಲರೂ ಒಗ್ಗಟ್ಟಾಗಿ ಇರಿ. ಇದೇ ನೀವು ಮಾಡುವ ದೊಡ್ಡ ಸಹಾಯ ಎಂದು ಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಬಹಳ ಮಂದಿಗೆ ಇದೇ ಕೊನೆಯ ಕ್ಯಾಬಿನೆಟ್ ಎಂದುಕೊಂಡಿದ್ದೀರಲ್ಲ ಎಂದು ಸಚಿವರನ್ನು ನಗುತ್ತಲೇ ಪ್ರಶ್ನಿಸಿದ ಸಿಎಂ, ಇದು ಕೊನೆ ಸಭೆ ಅಲ್ಲ. ಸರ್ಕಾರ ಸೇಫ್ ಆಗಿ ಇನ್ನೂ ಬಹಳಷ್ಟು ಕ್ಯಾಬಿನೆಟ್ ಸಭೆ ನಡೆಸುತ್ತೇನೆ ಎಂದು ತಮ್ಮದೇ ಧಾಟಿಯಲ್ಲಿ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

  • ಸುಪ್ರೀಂ ಮೆಟ್ಟಿಲೇರಿದ ಸ್ಪೀಕರ್ ರಮೇಶ್‍ಕುಮಾರ್

    ಸುಪ್ರೀಂ ಮೆಟ್ಟಿಲೇರಿದ ಸ್ಪೀಕರ್ ರಮೇಶ್‍ಕುಮಾರ್

    ನವದೆಹಲಿ:  ಇಂದು ಸಂಜೆ 6 ಗಂಟೆಯ ಒಳಗಡೆ ನಿರ್ಧಾರ ತಿಳಿಸಲು ಸಾಧ್ಯವಿಲ್ಲ ಎಂದು ಹೇಳಿ ಸ್ಪೀಕರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

    ಇಂದು ಸಂಜೆ 6 ಗಂಟೆಯ ಒಳಗಡೆ ಶಾಸಕರ ರಾಜೀನಾಮೆ ಅಂಗೀಕಾರದ ಬಗ್ಗೆ ನಿರ್ಧಾರವನ್ನು ಕೈಗೊಂಡು ಶುಕ್ರವಾರ ತಿಳಿಸಬೇಕೆಂದು ಸುಪ್ರೀಂ ಕೋರ್ಟ್ ಸ್ಪೀಕರ್ ಗೆ  ಆದೇಶಿಸಿತ್ತು.

    ಈಗ ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ಸ್ಪೀಕರ್, ನನಗೆ ಆದೇಶ ನೀಡಲು ನ್ಯಾಯಾಲಯಗಳಿಗೆ ಆದೇಶವಿಲ್ಲ. ನಾನು ನಿಯಮಗಳ ಪ್ರಕಾರವೇ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಹೇಳಿ ಸುಪ್ರೀಂ ಮೆಟ್ಟಿಲೇರಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತುರ್ತು ವಿಚಾರಣೆ ಇಂದು ನಡೆಸುವುದಿಲ್ಲ. ಶುಕ್ರವಾರ ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದೆ.

    ಸುಪ್ರೀಂ ಆದೇಶ ಏನು?
    ಅತೃಪ್ತ ಶಾಸಕರು ಸ್ಪೀಕರ್ ಅವರನ್ನು ಇಂದು ಸಂಜೆ 6 ಗಂಟೆಯೊಳಗೆ ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿತ್ತು. ಅಲ್ಲದೆ ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ರಾಜೀನಾಮೆ ಕುರಿತು ಇಂದೇ ನಿರ್ಧಾರ ಕೈಗೊಳ್ಳಬೇಕು. ಆ ನಿರ್ಧಾರವನ್ನು ನಾಳೆ ತನಗೆ ತಿಳಿಸಬೇಕೆಂದೂ ಸುಪ್ರೀಂ ಕೋರ್ಟ್ ಸೂಚಿಸಿದೆ.