Tag: Ramandira

  • ಸಿದ್ದರಾಮಯ್ಯ ದೇಶನಿಷ್ಠೆಯ ಬಗ್ಗೆ ನಮಗೆ ಸಂದೇಹವಿದೆ: ಪೇಜಾವರ ಶ್ರೀ

    ಸಿದ್ದರಾಮಯ್ಯ ದೇಶನಿಷ್ಠೆಯ ಬಗ್ಗೆ ನಮಗೆ ಸಂದೇಹವಿದೆ: ಪೇಜಾವರ ಶ್ರೀ

    – ಹೆಚ್‍ಡಿಕೆ ವಿರುದ್ಧವೂ ಸ್ವಾಮೀಜಿ ಕಿಡಿ

    ಉಡುಪಿ: ರಾಮಮಂದಿರಕ್ಕೆ ನಾನು ದೇಣಿಗೆ ನೀಡುವುದಿಲ್ಲ. ಮಂದಿರ ನಿರ್ಮಾಣವಾಗುವ ಜಮೀನು ವಿವಾದಿತ ಸ್ಥಳ ಎಂದು ಹೇಳುವ ಮೂಲಕ ರಾಜ್ಯವ್ಯಾಪಿ ಚರ್ಚೆಗೆ ಕಾರಣವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿಮ್ಮ ದೇಶನಿಷ್ಠೆಯ ಬಗ್ಗ ಸಂದೇಹವಿದೆ ಎನ್ನುವ ಮೂಲಕ ಪೇಜಾವರ ಸ್ವಾಮೀಜಿ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

    ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ನಾವು ಯಾರಿಗೂ ಯಾವತ್ತೂ ದೇಣಿಗೆಗೆ ಒತ್ತಾಯ ಮಾಡಿಲ್ಲ. ವಿಶ್ವದಾದ್ಯಂತ ದೇಣಿಗೆ ಕೊಡುವವರು ಸಂತೋಷದಿಂದ ಕೊಡುತ್ತಿದ್ದಾರೆ. ವಿವಾದಿತ ಎಂದು ಹೇಳುತ್ತೀರಿ, ನೀವು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಮಾನ್ಯ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ಇದೇ ವೇಳೆ ಮಾಜಿ ಮುಖ್ಯಮಂತ್ರಿ ಕುಮಾಸ್ವಾಮಿ ಆರೋಪದ ಕುರಿತು ಮಾತನಾಡಿದ ಪೇಜಾವರ ಶ್ರೀ, ನಿಧಿ ಸಂಗ್ರಹ ಕುರಿತು ಮಾಡಿರುವ ಆರೋಪಕ್ಕೆ ಕುಮಾರಸ್ವಾಮಿ ಅವರು ಒಂದು ಸಣ್ಣ ದಾಖಲೆಯನ್ನು ಕೊಟ್ರು ಆರೋಪಕ್ಕೆ ಬೆಲೆ ಬರುತ್ತದೆ. ನೀವು ಯಾರೋ ದಾರಿಯಲ್ಲಿ ಅಡ್ಡಾಡುವ ಸಾಮಾನ್ಯ ವ್ಯಕ್ತಿಯಲ್ಲ. ನೀವು ಈ ರಾಜ್ಯದ ಪ್ರತಿಷ್ಠಿತ ವ್ಯಕ್ತಿ. ಒಂದು ರಾಜಕೀಯ ಪಕ್ಷದ ಮುಖಂಡ. ನೀವು ಮಾತನಾಡುವ ಮೊದಲು ಅದಕ್ಕೆ ಸೂಕ್ತ ಸಾಕ್ಷಾಧಾರಗಳನ್ನು ಕೊಡಬೇಕು. ಒಂದು ಕಾಲದಲ್ಲಿ ಇಡೀ ರಾಜ್ಯವನ್ನು ಸರ್ಕಾರವನ್ನು ಮುನ್ನಡೆಸಿದವರು, ನೀವು ಆರೋಪ ಮಾಡುವ ಸಂದರ್ಭದಲ್ಲಿ ಯೋಚನೆಯನ್ನು ಮಾಡಬೇಕಾಗುತ್ತದೆ ಎಂದರು.

    ತೀರ್ಥಕ್ಷೇತ್ರ ಟ್ರಸ್ಟ್ ಈ ತರದ ಗುರುತು ಮಾಡುವ ಯಾವುದೇ ಸೂಚನೆಗಳನ್ನು ನಮ್ಮ ಕಾರ್ಯಕರ್ತರಿಗೆ ನೀಡಿಲ್ಲ. ನಿರೀಕ್ಷೆ ಮೀರಿ ಭಕ್ತರು ರಾಮಮಂದಿರಕ್ಕೆ ದೇಣಿಗೆಯನ್ನು ಕೊಡುತ್ತಿದ್ದಾರೆ. ಇಷ್ಟೆಲ್ಲ ಜನ ಮುಂದೆ ಬಂದು ದೇಣಿಗೆ ನೀಡುತ್ತಿರುವಾಗ, ಒತ್ತಾಯಪೂರ್ವಕವಾಗಿ ದೇಣಿಗೆ ಸಂಗ್ರಹಿಸುವ ಪ್ರಶ್ನೆಯ ಬರುವುದಿಲ್ಲ. ಈ ಹೇಳಿಕೆಯಿಂದ ದೇಶದ ಜನಕ್ಕೆ ಕುಮಾರಸ್ವಾಮಿ ಅವರ ವ್ಯಕ್ತಿತ್ವದ ಮೇಲೆ ಸಂಶಯ ಬರುತ್ತದೆ. ಹೊರತು ನಮ್ಮ ಸಂಸ್ಥೆಯ ಮೇಲೆ ಸಂಶಯ ಬರಲಿಕ್ಕಿಲ್ಲ. ಕುಮಾರಸ್ವಾಮಿಯವರ ಒಳಗೆ ಏನಿದೆ ಅದು ಹೊರಗೆ ಬಂದಿದೆ. ಒಳ್ಳೆಯ ಕೆಲಸ ಆಗುವಾಗ ಸಾವಿರಾರು ವಿಘ್ನಗಳು ಎದುರಾಗುತ್ತದೆ. ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಿದ ನಂತರ ಈವರೆಗೆ ಯಾವುದೇ ವಿಘ್ನಗಳು ಬಂದಿಲ್ಲ, ಇದು ಮೊದಲ ಅಡ್ಡಿ. ಆರೋಪಗಳು ಬರುವುದು ಸಹಜ, ಅದಕ್ಕೆ ಸೂಕ್ತವಾದ ಸಾಕ್ಷ್ಯಾಧಾರಗಳನ್ನು ಕೊಡಬೇಕು. ನಾವು ಇದನ್ನೆಲ್ಲ ಧೈರ್ಯವಾಗಿ ಎದುರಿಸಿಕೊಂಡು ಮುಂದೆ ಹೋಗುತ್ತೇವೆ ಎಂದು ಅಭಿಪ್ರಾಯಪಟ್ಟರು.

    ಅಯೋಧ್ಯ ಶ್ರೀ ರಾಮ ಜನ್ಮಭೂಮಿ ಹಿಂದೂಗಳಿಗೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆದು ಉತ್ಕನನದ ಕೆಲಸ ನಡೆಯುತ್ತಿದೆ. ಈ ನಡುವೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಚರ್ಚಾಸ್ಪದ ಹೇಳಿಕೆ ನೀಡಿದ್ದಾರೆ.

     

  • ಅಪ್ಪ ಅಮ್ಮ ನೀಡಿದ್ದ ಚಿಲ್ಲರೆ ಹಣವನ್ನು ರಾಮಮಂದಿರಕ್ಕೆ ದೇಣಿಗೆ ನೀಡಿದ ಚಿಣ್ಣರು

    ಅಪ್ಪ ಅಮ್ಮ ನೀಡಿದ್ದ ಚಿಲ್ಲರೆ ಹಣವನ್ನು ರಾಮಮಂದಿರಕ್ಕೆ ದೇಣಿಗೆ ನೀಡಿದ ಚಿಣ್ಣರು

    – ಐದು ಸಾವಿರಕ್ಕೂ ಅಧಿಕ ಹಣ ನೀಡಿದ ಸಹೋದರಿಯರು
    – ಚಿಣ್ಣರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ

    ಶಿವಮೊಗ್ಗ: ದೇಶಾದ್ಯಂತ ಜನ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ ಮಾಡುತ್ತಿದ್ದಾರೆ. ಇದೆ ಹಾದಿಯಲ್ಲಿ ಸಾಗಿರುವ ಸಹೋದರಿಯರಿಬ್ಬರು ಅಪ್ಪ, ಅಮ್ಮ ಕೊಟ್ಟ ಹಣವನ್ನೆಲ್ಲ ಕೂಡಿಟ್ಟು ಇದೀಗ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದಾರೆ.

    ಶಿವಮೊಗ್ಗದ ಗಾಡಿಕೊಪ್ಪ ಬಡಾವಣೆಯ ಶಂಕರ್ ಮತ್ತು ನೇತ್ರಾವತಿಯ ದಂಪತಿಯ ಪುತ್ರಿಯರಾದ ಛಾಯಾಶ್ರೀ ಹಾಗೂ ಅನುಶ್ರೀ ದೇಣಿಗೆ ನೀಡಿರುವ ಸಹೋದರಿಯರು. ತಮ್ಮ ಹುಟ್ಟುಹಬ್ಬಕ್ಕೆ ಖರ್ಚಿಗೆಂದು ಅಪ್ಪ ಅಮ್ಮ ನೀಡಿದ ಹಣ ಮತ್ತು ಆಗಾಗ ಇತರೆ ವಸ್ತುಗಳ ಖರೀದಿ ಮತ್ತು ಖರ್ಚಿಗಾಗಿ ಹೆತ್ತವರು ನೀಡುತ್ತಿದ್ದ ಚಿಲ್ಲರೆ ಹಣವನ್ನು ಕೂಡಿಟ್ಟಿದ್ದರು. ಚಿಲ್ಲರೆ ಹಣವನ್ನು ಸಣ್ಣದೊಂದು ಅಕ್ವೇರಿಯಂನಲ್ಲಿ ಸಂಗ್ರಹಿಸಿ, ನೋಟುಗಳನ್ನು ಹುಂಡಿಯಲ್ಲಿ ಹಾಕಿ ಭದ್ರ ಮಾಡಿದ್ದರು. ಇದೀಗ ರಾಮ ಮಂದಿರಕ್ಕೆ ನಿಧಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ತಂದೆ ಶಂಕರ್ ಜೀವನ ನಿರ್ವಹಣೆಗಾಗಿ ಪೈಂಟರ್ ಕೆಲಸ ಮಾಡುತ್ತಿದ್ದರೆ ತಾಯಿ ನೇತ್ರಾವತಿ ಗೃಹಿಣಿಯಾಗಿದ್ದು, ಛಾಯಾಶ್ರೀ ಹಾಗೂ ಅನುಶ್ರೀ ಅಪ್ಪ ಅಮ್ಮ ಕೊಡುತ್ತಿದ್ದ ಚಿಲ್ಲರೆ ಹಣವನ್ನು ಕೂಡಿಡುವ ಹವ್ಯಾಸ ಬೆಳೆಸಿಕೊಂಡಿದ್ದರು. ಜೊತೆಗೆ ತಮಗೆ ಬೇಕಾದಾಗ ಖರ್ಚು ಸಹ ಮಾಡುತ್ತಿದ್ದರು. ಆದರೆ ಯಾವಾಗ ರಾಮ ಮಂದಿರ ನಿರ್ಮಾಣ ಮಾಡುತ್ತಾರೆ ಎಂಬ ವಿಷಯ ತಿಳಿದ ಮೇಲೆ ಅಂದಿನಿಂದ ಈ ಚಿಣ್ಣರು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬೇಕು ಎಂದು ನಿರ್ಧರಿಸಿ ಅಪ್ಪ ಅಮ್ಮ ಕೊಡುತ್ತಿದ್ದ ಚಿಲ್ಲರೆ ಹಣವನ್ನು ಖರ್ಚು ಮಾಡುವುದನ್ನು ನಿಲ್ಲಿಸಿದ್ದರು.

    ಇದುವರೆಗೆ ಐದು ಸಾವಿರಕ್ಕೂ ಅಧಿಕ ಹಣ ಸಂಗ್ರಹಿಸಿದ್ದು ಈ ಹಣವನ್ನು ಸಚಿವ ಕೆ.ಎಸ್.ಈಶ್ವರಪ್ಪ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಅರ್ಪಣೆ ಮಾಡಿದ್ದಾರೆ. ಚಿಣ್ಣರ ಈ ಕಾರ್ಯಕ್ಕೆ ಸಚಿವ ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.