Tag: ramanath kovind

  • ಇಂದಿನಿಂದ ರಾಷ್ಟ್ರಪತಿ ಭವನಕ್ಕೆ ಪ್ರವಾಸಿಗರಿಗೆ ನೋ ಎಂಟ್ರಿ

    ಇಂದಿನಿಂದ ರಾಷ್ಟ್ರಪತಿ ಭವನಕ್ಕೆ ಪ್ರವಾಸಿಗರಿಗೆ ನೋ ಎಂಟ್ರಿ

    ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಈವರೆಗೆ ದೇಶದಲ್ಲಿ 75 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆ ಮುಜಾಗ್ರತಾ ಕ್ರಮವಾಗಿ ರಾಷ್ಟ್ರಪತಿ ಭವನಕ್ಕೆ ಪ್ರವಾಸಿಗರ ಪ್ರವೇಶವನ್ನು ರದ್ದುಗೊಳಿಸಲಾಗಿದೆ.

    ಕೊರೊನಾ ಭೀತಿಯಿಂದ ಈಗಾಗಲೇ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರದಂತೆ ಸೂಚಿಸಿ ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಇದೇ ಬೆನ್ನಲ್ಲೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ಟೀಟ್ ಮಾಡಿ, ಇಂದಿನಿಂದ ರಾಷ್ಟ್ರಪತಿ ಭವನಕ್ಕೆ ಪ್ರವಾಸಿಗರ ಭೇಟಿಗೆ ಅವಕಾಶವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

    ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ರಾಷ್ಟ್ರಪತಿ ಭವನಕ್ಕೆ ಪ್ರವಾಸಿಗರ ಭೇಟಿ ಅವಕಾಶ ನಿರಾಕರಿಸಲಾಗಿದೆ. ವಿದೇಶಿ ಪ್ರಯಾಣಿಕರ ಭೇಟಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ರಾಷ್ಟ್ರಪತಿಗಳು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಇನ್ನೊಂದು ಟ್ವೀಟ್‍ನಲ್ಲಿ, ರಾಷ್ಟ್ರಪತಿ ಭವನದ ಮ್ಯೂಸಿಯಂ ಕಾಂಪ್ಲೆಕ್ಸ್ ಹಾಗೂ ಗಾರ್ಡ್ ಸಮಾರಂಭ ಬದಲಾವಣೆಗೆ ಕೂಡ ಸಾರ್ವಜನಿಕರ ಭೇಟಿಯನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿಯನ್ನು ಕೊರೊನಾ ವೈರಸ್ ಸೋಂಕು ಜನರಲ್ಲಿ ಆತಂಕ ಸೃಷ್ಟಿಸಿದೆ. ಈವರೆಗೆ 6 ಕೊರೊನಾ ಸೋಂಕಿತ ಪ್ರಕರಣಗಳು ದೆಹಲಿಯಲ್ಲಿ ವರದಿಯಾಗಿದ್ದು, ಇದರಿಂದ ಎಚ್ಚೆತ್ತ ದೆಹಲಿ ಸರ್ಕಾರ 5ನೇ ತರಗತಿವರೆಗೆ ಪ್ರಾಥಮಿಕಾ ಶಾಲೆಗಳಿಗೆ ರಜೆ ಘೋಷಿಸಿದೆ. ಸರ್ಕಾರಿ ನೌಕರರ ಬಯೋ ಮೆಟ್ರಿಕ್ ಹಾಜರಾತಿ ಕೂಡ ರದ್ದುಗೊಳಿಸಿದೆ.

    ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮಹಾಮಾರಿ ಕೊರೊನಾ ಹರಡುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ ಬಿಬಿಎಂಪಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ, ಉತ್ತರ, ನಗರ ಭಾಗದ ಶಾಲೆಗಳಲ್ಲಿ 1ರಿಂದ 6ನೇ ತರಗತಿವರೆಗೆ ಪರೀಕ್ಷೆಯನ್ನು ರದ್ದುಗೊಳಿಸಿದೆ.

    ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ, 1ರಿಂದ 6ನೇ ತರಗತಿವರೆಗೆ ಪರೀಕ್ಷೆ ಇಲ್ಲ. 7ರಿಂದ 9ನೇ ತರಗತಿವರೆಗೆ ಮಾರ್ಚ್ 23 ಒಳಗೆ ಪರೀಕ್ಷೆ ನಡೆಸಬೇಕು. ಆ ಬಳಿಕ ವಿದ್ಯಾರ್ಥಿಗಳಿಗೆ ರಜೆ ನೀಡಬೇಕು. ಹಾಗೆಯೇ 10ನೇ ತರಗತಿ ವಿದ್ಯಾರ್ಥಿಗಳಿಗೆ ಈಗಾಗಲೇ ನಿಗದಿಗೊಳಿಸಿರುವ ದಿನಾಂಕದಂದೆ ಪರೀಕ್ಷೆ ನಡೆಸಲಾಗುವುದು. ಅಲ್ಲದೇ ವಿದ್ಯಾರ್ಥಿಗಳು ನಿಗದಿತ ಪರೀಕ್ಷೆಯ ದಿನ ಮಾತ್ರ ಶಾಲೆಗೆ ಬಂದು ಪರೀಕ್ಷೆ ಬರೆಯಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.

  • ಅತ್ಯಾಚಾರಿಗಳಿಗೆ ಕ್ಷಮೆ ಇಲ್ಲ, ಕ್ಷಮಾದಾನದ ಅರ್ಜಿ ಸ್ವೀಕರಿಸಲ್ಲ -ರಾಷ್ಟ್ರಪತಿ ಕೋವಿಂದ್

    ಅತ್ಯಾಚಾರಿಗಳಿಗೆ ಕ್ಷಮೆ ಇಲ್ಲ, ಕ್ಷಮಾದಾನದ ಅರ್ಜಿ ಸ್ವೀಕರಿಸಲ್ಲ -ರಾಷ್ಟ್ರಪತಿ ಕೋವಿಂದ್

    – ನಿರ್ಭಯಾ ಅತ್ಯಾಚಾರಿಗಳಿಗೆ ನೇಣು ಫಿಕ್ಸ್?

    ಗಾಂಧಿನಗರ: ಹೈದರಾಬಾದ್ ದಿಶಾ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿದ ಬೆನ್ನಲ್ಲೇ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಮಕ್ಕಳನ್ನು ಅತ್ಯಾಚಾರ ಮಾಡಿದ ಆರೋಪಿಗಳ ಕ್ಷಮಾದಾನ ಮನವಿಯನ್ನು ಸ್ವೀಕಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

    ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಮಕ್ಕಳನ್ನು ಅತ್ಯಾಚಾರ ಮಾಡಿ ಪೊಕ್ಸೊ ಕಾಯ್ದೆ ಅಡಿಯಲ್ಲಿ ಬಂಧನವಾಗಿರುವ ಆರೋಪಿಗಳ ಕ್ಷಮಾದಾನದ ಪತ್ರವನ್ನು ನಾವು ಸ್ವೀಕಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

    ನಮ್ಮ ದೇಶದಲ್ಲಿ ಮಹಿಳೆಯ ಸುರಕ್ಷತೆ ಗಂಭೀರವಾದ ಸಮಸ್ಯೆಯಾಗಿದೆ. ಮಕ್ಕಳನ್ನು ಆತ್ಯಾಚಾರ ಮಾಡಿ ಪೊಕ್ಸೊ ಕಾಯ್ದೆ ಅಡಿಯಲ್ಲಿರುವ ಆರೋಪಿಗಳಿಗೆ ಕ್ಷಮಾದಾನದ ಅರ್ಜಿ ಸಲ್ಲಿಸುವ ಹಕ್ಕನ್ನು ನೀಡಬಾರದು. ಸಂಸತ್ತು ಆ ಅರ್ಜಿಯನ್ನು ಪರಿಶೀಲನೆ ಮಾಡಬೇಕು ಎಂದು ರಾಮನಾಥ್ ಕೋವಿಂದ್ ಅವರು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಇದನ್ನು ಓದಿ: 2008 ವಾರಂಗಲ್ ಎನ್‌ಕೌಂಟರ್‌ನಂತೆ ದಿಶಾ ‘ಹತ್ಯಾಚಾರಿ’ಗಳ ಹುಟ್ಟಡಗಿಸಿದ ವಿ.ಸಿ ಸಜ್ಜನರ್

    ಕ್ಷಮಾದಾನ ಪತ್ರ ಎಂದರೇನು?
    ಶಿಕ್ಷೆಗೊಳಗಾದ ಅತ್ಯಾಚಾರಿಗಳಿಗೆ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷಿ ವಿಧಿಸಿದರೆ ಆರೋಪಿಗಳು ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಬರೆಯುವ ಅವಕಾಶವಿದೆ. ಈ ಅರ್ಜಿ ಪರಿಶೀಲನೆ ನಡೆಸಿದ ಬಳಿಕ ರಾಷ್ಟ್ರಪತಿಗಳು ನೀಡುವ ತೀರ್ಪು ಅಂತಿಮವಾಗುತಿತ್ತು. ಆದರೆ ಈಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇದಕ್ಕೆ ಅಂತ್ಯವಾಡಿದ್ದು, ಮಕ್ಕಳನ್ನು ಆತ್ಯಾಚಾರ ಮಾಡಿದ ಆರೋಪಿಗಳ ಕ್ಷಮಾದಾನದ ಅರ್ಜಿ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಪೊಕ್ಸೊ ಕಾಯ್ದೆ ಅಡಿಯಲ್ಲಿ ಬರುವ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಅಂತಿಮವಾಗಲಿದೆ.

    ನಿರ್ಭಯಾ ಅತ್ಯಾಚಾರಿಗಳಿಗೆ ನೇಣು ಫಿಕ್ಸ್?
    2012 ಡಿಸೆಂಬರ್ 16 ರಂದು ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಈ ನಡುವೆ ರಾಜ್ಯಪಾಲರಿಗೆ ಆರೋಪಿಗಳು ಕ್ಷಮಾದಾನದ ಅರ್ಜಿ ಸಲ್ಲಿಸಿದ್ದು, ಅದನ್ನು ರಾಜ್ಯಪಾಲರು ತಿರಸ್ಕಾರ ಮಾಡಿದ್ದಾರೆ. ಹೀಗಿರುವಾಗ ಪ್ರಕರಣದ ದೋಷಿಗಳು ಕ್ಷಮಾದಾನ ನೀಡುವಂತೆ ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದರು. ಆದರೆ ಇಂದು ಗೃಹ ಸಚಿವಾಲಯವೂ ಈ ಅರ್ಜಿಯನ್ನು ತಿರಸ್ಕರಿಸಿದೆ. ನಿರ್ಭಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗುತ್ತಾ ಇಲ್ಲವೋ ಎನ್ನುವುದು ಕೆಲ ದಿನಗಳಲ್ಲಿ ರಾಷ್ಟ್ರಪತಿಗಳು ಇತ್ಯರ್ಥಪಡಿಸಲಿದ್ದಾರೆ. ಇದನ್ನು ಓದಿ: ಕಳೆದ 7 ವರ್ಷಗಳಿಂದ ಪ್ರತಿದಿನವೂ ಸಾಯುತ್ತಿದ್ದೇವೆ: ನಿರ್ಭಯಾ ತಾಯಿ

  • 47ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾ.ಎಸ್.ಎ.ಬೋಬ್ಡೆ

    47ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾ.ಎಸ್.ಎ.ಬೋಬ್ಡೆ

    ನವದೆಹಲಿ: ಸುಪ್ರೀಂಕೋರ್ಟಿನ 47ನೇ ಮುಖ್ಯ ನ್ಯಾಯಾಧೀಶರಾಗಿ ಶರದ್ ಅರವಿಂದ್ ಬೋಬ್ಡೆ ಪ್ರಮಾಣ ವಚನ ಸ್ವೀಕರಿಸಿದರು. ನ್ಯಾ.ಬೋಬ್ಡೆ ಅವರಿಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಪ್ರಮಾಣ ವಚನ ಬೋಧಿಸಿದರು. 23 ಏಪ್ರಿಲ್ 2021ರವರೆಗೆ ಬೋಬ್ಡೆ ಅವರು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಲಿದ್ದಾರೆ.

    ಅಯೋಧ್ಯೆ ತೀರ್ಪು ನೀಡಿದ ಸಾಂವಿಧಾನಿಕ ಪೀಠದ ಐವರು ನ್ಯಾಯಾಧೀಶರಲ್ಲಿ ಬೋಬ್ಡೆ ಅವರು ಒಬ್ಬರಾಗಿದ್ದರು. ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಂಜನ್ ಗೋಗೋಯ್, ನ್ಯಾಯಮೂರ್ತಿ ಎಸ್‍ಎ ಬೋಬ್ಡೆ, ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಕರ್ನಾಟಕ ಮೂಲದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಪೀಠ ಅಯೋಧ್ಯೆ ತೀರ್ಪು ಪ್ರಕಟಿಸಿತ್ತು.

    ರಂಜನ್ ಗೋಗೊಯ್ ಅವರ ನಿವೃತ್ತಿ ಬಳಿಕ ನ್ಯಾ. ಶರದ್ ಅರವಿಂದ್ ಬೋಬ್ಡೆ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2000ರಲ್ಲಿ ಬಾಂಬೆ ಹೈಕೋರ್ಟ್ ನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಬೋಬ್ಡೆ ಅವರು ನೇಮಕಗೊಂಡರು. ಮಧ್ಯಪ್ರದೇಶದ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರ ಮೂಲದವರಾಗಿರುವ ಬೋಬ್ಡೆ ಅವರು ಏಪ್ರಿಲ್ 2013ರಲ್ಲಿ ಸುಪ್ರಿಂಕೋರ್ಟಿಗೆ ಬಡ್ತಿ ಪಡೆದರು. 63 ವರ್ಷದ ಬೋಬ್ಡೆ ಸಿಜೆಐ ಆಗಿ 18 ತಿಂಗಳು ಕಾರ್ಯ ನಿರ್ವಹಿಸಲಿದ್ದಾರೆ.

  • ಏಕತಾ ದಿನದ ಅಂಗವಾಗಿ ಉಕ್ಕಿನ ಮನುಷ್ಯನಿಗೆ ನಮೋ ನಮನ

    ಏಕತಾ ದಿನದ ಅಂಗವಾಗಿ ಉಕ್ಕಿನ ಮನುಷ್ಯನಿಗೆ ನಮೋ ನಮನ

    ಅಹಮದಾಬಾದ್: ಸರ್ದಾರ್ ವಲ್ಲಭಭಾಯ್ ಪಟೇಲ್‍ರ 144ನೇ ಜನ್ಮದಿನವನ್ನು ದೇಶಾದ್ಯಂತ ‘ಏಕತಾ ದಿವಸ್’ ರೂಪದಲ್ಲಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‍ನ ಕೆವಡಿಯಾದಲ್ಲಿರುವ ಏಕತಾ ಪ್ರತಿಮೆಯ ಪಾದಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ.

    ಇತ್ತ ದೆಹಲಿಯ ಪಟೇಲ್ ಚೌಕ್‍ನಲ್ಲಿ ಸರ್ದಾರ್ ಪ್ರತಿಮೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ ಪುಷ್ಪನಮನ ಸಲ್ಲಿಸಿದ್ದಾರೆ. ಹಾಗೆಯೇ ಏಕತಾ ಓಟಕ್ಕೆ ಚಾಲನೆ ನೀಡಿದರು. ಈ ವೇಳೆ ಬಾಕ್ಸರ್ ಮೇರಿ ಕೋಮ್ ಕೋಡ ಉಪಸ್ಥಿತರಿದ್ದರು. ಇತ್ತ ಬೆಂಗಳೂರಿನಲ್ಲಿ ಕೂಡ ಏಕತಾ ಮ್ಯಾರಥಾನ್ ನಡೆದಿದ್ದು, ವಿಧಾನಸೌಧದಲ್ಲಿ ಮ್ಯಾರಥಾನ್‍ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

    ಸರ್ದಾರ್ ವಲ್ಲಭಭಾಯ್ ಪಟೇಲ್‍ರ ಜಯಂತೋತ್ಸವದಂದೇ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎರಡು ಕೇಂದ್ರಾಡಳಿತ ಪ್ರದೇಶವಾಗಿ ಕಾರ್ಯರೂಪಕ್ಕೆ ಬಂದಿದೆ. ಕೇಂದ್ರ ಸರ್ಕಾರವು 370ರ ವಿಧಿ ರದ್ದು ಮಾಡಿದ ಮೂರು ತಿಂಗಳ ಬಳಿಕ ಕಣಿವೆ ರಾಜ್ಯ ಎರಡು ಕೇಂದ್ರಾಡಳಿತ ಪ್ರದೇಶವಾಗಿ ಜಾರಿಗೆ ಬಂದಿದೆ.

    370ನೇ ವಿಧಿ ಹಾಗೂ 35(ಎ) ವಿಧಿ ಈ ಎರಡು ವಿಧಿಗಳು ಭಾರತದಲ್ಲಿ ಭಯೋತ್ಪಾದನೆಗೆ ದಾರಿ ಮಾಡಿಕೊಟ್ಟಿತ್ತು. ಆದರೆ ಪ್ರಧಾನಿಯವರು 370ನೇ ವಿಧಿ ಹಾಗೂ 35 ಎ ವಿಧಿಯನ್ನು ರದ್ದುಗೊಳಿಸುವ ಮೂಲಕ ಈ ದಾರಿಯನ್ನು ಮುಚ್ಚಿದ್ದಾರೆ ಎಂದು ಏಕತಾ ಓಟಕ್ಕೆ ಚಾಲನೆ ನೀಡುವ ಮೊದಲು ಅಮಿತ್ ಶಾ ಹೇಳಿದರು.

    2014ರಲ್ಲಿ ಮೋದಿ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನವನ್ನು ಏಕತಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಘೋಷಿಸಿದ್ದರು. ಹೀಗಾಗಿ 2014ರಿಂದ ಪ್ರತಿ ವರ್ಷ ಅಕ್ಟೋಬರ್ 31ರಂದು ಏಕತಾ ದಿನವನ್ನಾಗಿ ದೇಶಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಬರೀ ಕೇಂದ್ರ ನಾಯಕರು ಮಾತ್ರವಲ್ಲದೆ ರಾಜ್ಯದ ಅನೇಕ ರಾಜಕಾರಣಿಗಳು ಕೂಡ ಉಕ್ಕಿನ ಮನುಷ್ಯನಿಗೆ ನಮನ ಸಲ್ಲಿಸಿದ್ದಾರೆ.

  • ಆರು ರಾಜ್ಯಗಳ ರಾಜ್ಯಪಾಲರ ನೇಮಕ

    ಆರು ರಾಜ್ಯಗಳ ರಾಜ್ಯಪಾಲರ ನೇಮಕ

    ನವದೆಹಲಿ: ಆರು ರಾಜ್ಯಗಳ ರಾಜ್ಯಪಾಲರ ನೇಮಕಕ್ಕೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಆನಂದಿ ಪಟೇಲ್ ಅವರನ್ನು ಉತ್ತರ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ಜಗದೀಪ್ ಧನಖಡ್ ನೇಮಿಸಲಾಗಿದೆ.

    ಗುಜರಾತ್ ಮಾಜಿ ಸಿಎಂ ಆಗಿರುವ ಆನಂದಿಬೆನ್ ಪಟೇಲ್ ಈ ಮೊದಲು ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದರು. ಇದೀಗ ಆನಂದಿಬೆನ್ ಅವರಿಗೆ ಉತ್ತರ ಪ್ರದೇಶದ ಜವಾಬ್ದಾರಿಯನ್ನ ವಹಿಸಲಾಗಿದೆ. ಬಿಹಾರ ರಾಜ್ಯಪಾಲರಾಗಿದ್ದ ಲಾಲಜೀ ಟಂಡನ್ ಅವರಿಗೆ ಮಧ್ಯಪ್ರದೇಶದ ಜವಾಬ್ದಾರಿ ನೀಡಲಾಗಿದೆ.

    ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತ್ರಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳ ರಾಜ್ಯಪಾಲರ ಸೇವಾವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಕ್ರಮವಾಗಿ ಆನಂದಿಬೆನ್ ಪಟೇಲ್, ಜಗದೀಪ್ ಧನಖಡ್, ರಮೇಶ್ ಬೈಂಸ್ ಮತ್ತು ಆರ್ಯನ್ ರವಿ ಅವರನ್ನು ನೇಮಕಗೊಳಿಸಲಾಗಿದೆ. ಬಿಹಾರಕ್ಕೆ ಫಗು ಚೌಹಾಣ್ ಅವರನ್ನು ರಾಜ್ಯಪಾಲರಾಗಿ ನೇಮಿಸಲಾಗಿದೆ.

    ಆಗಸ್ಟ್ ನಲ್ಲಿ ಮತ್ತೆ ಐದು ರಾಜ್ಯಗಳ ರಾಜ್ಯಪಾಲರು ನಿವೃತ್ತಿ ಹೊಂದಲಿದ್ದಾರೆ. ಮಹಾರಾಷ್ಟ್ರದ ವಿದ್ಯಾಸಾಗರ್ ರಾವ್ (ಆಗಸ್ಟ್ 29), ಗೋವಾದ ಮೃದುಲಾ ಸಿನ್ಹಾ (ಆಗಸ್ಟ್ 30), ಕರ್ನಾಟಕದ ವಜೂಭಾಯಿ ವಾಲಾ (ಆಗಸ್ಟ್ 31), ರಾಜಸ್ಥಾನದ ಕಲ್ಯಾಣ್ ಸಿಂಗ್ (ಸೆಪ್ಟೆಂಬರ್ 3) ಮತ್ತು ಕೇರಳದ ಪಿ.ಸದಾಶಿವಂ (ಸೆಪ್ಟೆಂಬರ್ 4) ರಾಜ್ಯಪಾಲರು ನಿವೃತ್ತಿ ಹೊಂದಲಿದ್ದಾರೆ.

  • ವೃಕ್ಷಮಾತೆ ಸಾಲು ಮರದ ತಿಮ್ಮಕ್ಕಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

    ವೃಕ್ಷಮಾತೆ ಸಾಲು ಮರದ ತಿಮ್ಮಕ್ಕಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

    ನವದೆಹಲಿ: ಪರಿಸರ ಸಂರಕ್ಷಣೆಗೆ ನೀಡಿರುವ ಕೊಡುಗೆಗೆ ಮಾನ್ಯತೆ ನೀಡಿ, ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅಲ್ಲದೆ ಟ್ವೀಟ್ ಮೂಲಕ ಸ್ವತಃ ರಾಷ್ಟ್ರಪತಿಗಳೇ ವೃಕ್ಷಮಾತೆಗೆ ಅಭಿನಂದನೆ ತಿಳಿಸಿದ್ದಾರೆ.

    ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್, ಪರ್ವತಾರೋಹಿ ಬಚೇಂದ್ರಿ ಪಾಲ್, ಜಾನಪದ ಗಾಯಕಿ ತೀಜನ್ ಬಾಯಿ, ಪರಿಸರಪ್ರೇಮಿ, ಕರ್ನಾಟಕದ ಸಾಲು ಮರದ ತಿಮ್ಮಕ್ಕ ಸೇರಿದಂತೆ 54 ಗಣ್ಯರಿಗೆ 2019ನೇ ಸಾಲಿನ ಪದ್ಮ ಪುರಸ್ಕಾರಗಳನ್ನು ಪ್ರಧಾನ ಮಾಡಿದ್ದಾರೆ. ಈ ಹಿಂದೆ ಮಾರ್ಚ್ 11ರಂದು ವಿವಿಧ ಕ್ಷೇತ್ರದಲ್ಲಿ ಸಾಧಿಸಿದ 56 ಗಣ್ಯರಿಗೆ ಪದ್ಮ ಪ್ರಶಸ್ತಿ ನೀಡಿ ರಾಷ್ಟ್ರಪತಿಗಳು ಗೌರವಿಸಿದ್ದರು. ಇದನ್ನೂ ಓದಿ: ದಿಗ್ಗಜರಿಗೆ ರಾಷ್ಟ್ರಪತಿಗಳಿಂದ ಪದ್ಮ ಗೌರವ ಪ್ರದಾನ

    ಟ್ವೀಟ್‍ನಲ್ಲಿ ಏನಿದೆ?
    ಸಮಾಜ ಸೇವೆ ಮಾಡಿದಂತಹ ಶ್ರೀಮತಿ ಸಾಲುಮರದ ತಿಮ್ಮಕ್ಕರವರಿಗೆ ರಾಷ್ಟ್ರಪತಿ ಪದ್ಮಶ್ರೀ ಪುರಸ್ಕಾರವನ್ನು ಪ್ರದಾನ ಮಾಡಿದ್ದಾರೆ. 107 ನೇ ವಯಸ್ಸಿನ ಕರ್ನಾಟಕದ ಶ್ರೀಮತಿ ತಿಮ್ಮಕ್ಕರವರು ಒಬ್ಬ ಪರಿಸರವಾದಿ ಹಾಗೂ ತನ್ನ ಹಳ್ಳಿಯಾದ ಹುಲಿಕಲ್‍ನಿಂದ ಕುದೂರುವರೆಗಿನ 4 ಕಿ.ಮೀ ಹೆದ್ದಾರಿಯ ಉದ್ದಗಲಕ್ಕೂ ಆಲದ ಮರಗಳನ್ನು ನೆಟ್ಟು ಹೆಸರುವಾಸಿಯಾಗಿದ್ದಾರೆ.

    ಪರಿಸರದ ಮೇಲೆ ತಮಗಿರುವ ಪ್ರೀತಿಯಿಂದ ರಸ್ತೆ ಬದಿಗಳಲ್ಲಿ ಮರಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ನೀರುಣಿಸಿ ಪೋಷಿಸಿ ತಿಮ್ಮಕ್ಕನವರು ವೃಕ್ಷಮಾತೆಯಾದವರು. ಸಾಲುಮರದ ತಿಮ್ಮಕ್ಕ ಮೂಲಕ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರು. ಮಕ್ಕಳು ಇಲ್ಲವೆನ್ನುವ ಕಾರಣಕ್ಕೆ ರಸ್ತೆ ಬದಿಯ ಆಲದ ಮರಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ಬೆಳೆಸಿ, ಪೋಷಿಸಿ ಪರಿಸರ ಉಳಿಸಿ ಎಂದು ಸಾರಿದ ವೃಕ್ಷಮಾತೆ. ಇದೇ ಕಾರಣಕ್ಕೆ ಅವರು ಸಾಲುಮರದ ತಿಮ್ಮಕ್ಕ ಎಂದು ಖ್ಯಾತಿ ಪಡೆದಿದ್ದಾರೆ.

    ಸಾಲು ಮರದ ತಿಮ್ಮಕ್ಕನವರು ನೆಟ್ಟ ಮರಗಳೆಲ್ಲವೂ ಕುದೂರಿನಿಂದ ಹುಲಿಕಲ್‍ನ ರಾಜ್ಯ ಹೆದ್ದಾರಿಯಲ್ಲಿ ಇಂದಿಗೂ ಇವೆ. ಈಗ ಇವುಗಳನ್ನು ಬೆಳೆಸುವ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ವಹಿಸಿಕೊಂಡಿದೆ. ಆದ್ರೆ ಇಳಿಯ ವಯಸಿನಲ್ಲೂ ತಿಮ್ಮಕ್ಕ ಅವರು ಮಾತ್ರ ಪರಿಸರ ರಕ್ಷಣೆ, ಕಾಳಜಿಯನ್ನು ಮರೆತಿಲ್ಲ. ಸ್ವಾರ್ಥವಿಲ್ಲದೆ ಪರಿಸರಕ್ಕಾಗಿ ಸೇವೆ ಸಲ್ಲಿಸಿದ ತಿಮ್ಮಕ್ಕ ಅವರ ಕಾರ್ಯವನ್ನು ಮೆಚ್ಚಿ ಈಗಾಗಲೇ ಹಲವು ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಗಳು ಲಭಿಸಿದೆ. ಬಿಬಿಸಿ 2016 ರಲ್ಲಿ ಜಗತ್ತಿನ ಅತಿ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಕೂಡ ಸಾಲು ಮರದ ತಿಮ್ಮಕ್ಕ ಅವರು ಸ್ಥಾನ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕೊಡವ ಭಾಷೆಯಲ್ಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪರನ್ನು ಸ್ಮರಿಸಿದ ರಾಷ್ಟ್ರಪತಿ

    ಕೊಡವ ಭಾಷೆಯಲ್ಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪರನ್ನು ಸ್ಮರಿಸಿದ ರಾಷ್ಟ್ರಪತಿ

    ಬೆಂಗಳೂರು: ಇಂದು ಭಾರತೀಯ ಸೇನೆಯ ಮಹಾದಂಡ ನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ 120ನೇ ಜನ್ಮ ದಿನಾಚರಣೆ. ಹೀಗಾಗಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಕಾರ್ಯಪ್ಪ ಅವರನ್ನು ಸ್ಮರಿಸಿದ್ದಾರೆ.

    ಕನ್ನಡ ಲಿಪಿಯಲ್ಲಿ ಕೊಡವ ಭಾಷೆಯಲ್ಲಿಯೇ ಟ್ವೀಟ್ ಮಾಡುವ ಮೂಲಕ ಕರ್ನಾಟಕದ ಕೊಡಗಿನ ಹಿರಿಮೆಯ ಪುತ್ರ ಹಾಗೂ ಅದಕ್ಕೂ ಮಿಗಿಲಾಗಿ ಭಾರತದ ಮಹಾನ್ ಪುತ್ರ ಎಂದು ನೆನಪಿಸಿಕೊಳ್ಳುವ ಮೂಲಕ ಜನ್ಮದಿನಾಚರಣೆಗೆ ಶುಭಾಶಯ ತಿಳಿಸಿದ್ದಾರೆ.

    ಟ್ವೀಟ್ ನಲ್ಲೇನಿದೆ..?:
    “ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಆಯಿಂಗಡ ಪುಟ್ಟ ನ ದಿನತ್ ರ ಒರ್ ಸ್ಮರಣೆ. ಕೊಡ ಗ್ ರ , ಕರ್ನಾಟಕ ತ್ ರ, ಆಂಡ ಮೀದ ಭಾರತ ದೇಶ ತ್ ರ ಕೊದಿಮೋಂವ ನಾನ ಇಯಂಗ ನಂಗಡ ಕೇಳಿ ಪೋನ ಮಹದಂಡ ನಾಯಕ ಅಲ್ಲತೆ ಪ್ರೀತಿರ ರಾಷ್ಟ್ರನಾಯಕ. ಇಯಂಗಡ ದೇಶ ಸೇವೆನ ನಂಗ ಎಕ್ಕಲೂ ಗೇ ನ ಬೆಚ್ಚೋ ವ. – ರಾಷ್ಟ್ರಪತಿ ಕೋವಿಂದ್”

    ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪನವರ ಜನ್ಮದಿನದ ಸ್ಮರಣೆ. ಕರ್ನಾಟಕದ ಕೊಡಗಿನ ಹಿರಿಮೆಯ ಪುತ್ರ ಹಾಗೂ ಅದಕ್ಕೂ ಮಿಗಿಲಾಗಿ ಭಾರತದ ಮಹಾನ್ ಪುತ್ರರಾದ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪನವರು ನಮ್ಮ ಅತ್ತ್ಯುತ್ತಮ ಸೇನಾ ದಂಡನಾಯಕರಲ್ಲಿ ಒಬ್ಬರು ಹಾಗೂ ಅತ್ಯಂತ ನೆಚ್ಚಿನ ರಾಷ್ಟ್ರ ನಾಯಕರಾಗಿ ಉಳಿದಿರುತ್ತಾರೆ ಎಂದು ಬರೆದುಕೊಂಡಿದ್ದಾರೆ.

    ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪ(ಕಾರ್ಯಪ್ಪ) ಅವರು 1899ರ ಜನವರಿ 28 ರಂದು ಕೊಡಗು ಜಿಲ್ಲೆಯ ಶನಿವಾರ ಸಂತೆಯಲ್ಲಿ ತಂದೆ ಕೊಡಂದೆರ ಮಾದಪ್ಪ ಕಾರಿಯಪ್ಪ ಹಾಗೂ ತಾಯಿ ಕಾವೇರಿಯ ಪುತ್ರನಾಗಿ ಜನಿಸಿದ್ದರು. ಭಾರತದ ಸೇನೆಯ ಪ್ರಥಮ ದಂಡನಾಯಕರಾಗಿದ್ದರು ಮತ್ತು ಫೀಲ್ಡ್ ಮಾರ್ಷಲ್ (ಮಹಾದಂಡನಾಯಕ) ಪದವಿಯನ್ನು ಪಡೆದ ಮೊದಲ ವ್ಯಕ್ತಿ. 1993 ಮೇ 15 ರಂದು ಕಾರ್ಯಪ್ಪ ನಿಧನರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಧಿ ಪಾಠ ಮಾಡೋ ಸಿಎಂ, ರಾಷ್ಟ್ರಪತಿ ಕೋವಿಂದ್‍ರನ್ನ ಗೋವಿಂದ್  ಅಂದ್ರು

    ಸಂಧಿ ಪಾಠ ಮಾಡೋ ಸಿಎಂ, ರಾಷ್ಟ್ರಪತಿ ಕೋವಿಂದ್‍ರನ್ನ ಗೋವಿಂದ್ ಅಂದ್ರು

    ದಾವಣಗೆರೆ: ಸಂಧಿ ಸಮಾಸದ ಪಾಠ ಮಾಡೋ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರಪತಿ ಹೆಸರು ಗೊತ್ತಿಲ್ಲದೇ ಚಡಪಡಿಸಿದ ಘಟನೆ ಇಂದು ನಡೆದಿದೆ.

    ಜಿಲ್ಲೆಯ ಚನ್ನಗಿರಿಯಲ್ಲಿ ಬಹುಕೋಟಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಯವರು ಈ ಎಡವಟ್ಟು ಮಾಡಿದ್ದಾರೆ. ತಮ್ಮ ಭಾಷಣದ ವೇಳೆ ಕೋವಿಂದ್ ರನ್ನ ಗೋವಿಂದ್ ಎಂದ ಅವರು, ಯಾರ್ರಿ ಅವರು ರಾಷ್ಟ್ರಾಧ್ಯಕ್ಷರು ಗೋವಿಂದ.. ಪೂರ್ತಿ ಹೆಸ್ರೇನ್ರಿ ಅಂತ ವೇದಿಕೆ ಮೇಲಿದ್ದವರನ್ನ ಕೇಳುವ ಮೂಲಕ ಪೇಚಿಗೆ ಸಿಲುಕಿದರು.

    ವೇದಿಕೆಯಲ್ಲಿದ್ದವರು ಹೇಳಿದ ಮೇಲೆ ಎಚ್ಚೆತ್ತ ಸಿದ್ದರಾಮಯ್ಯ ರಾಮನಾಥ ಗೋವಿಂದ್ ಅಲ್ಲ ಕೋವಿಂದ್.. ಕೋವಿಂದ್ ಎಂದು ಸರಿಪಡಿಸಿಕೊಂಡರು.’

    ಇದನ್ನೂ ಓದಿ: ಸಿದ್ದರಾಮಯ್ಯಗೆ ಗೊತ್ತಿರೋದು ಒಂದೇ ಸಂಧಿ: ಸಿಎಂ ವ್ಯಾಕರಣದ ಬಗ್ಗೆ ವಿಶ್ವನಾಥ್ ವ್ಯಂಗ್ಯ

    ಕೆಲ ತಿಂಗಳ ಹಿಂದೆ ಮೈಸೂರಿನ ಮೃಗಾಲಯದಲ್ಲಿ ಸಿಎಂ ಸಂಧಿ ಪಾಠ ಮಾಡಿದ್ದರು. ಮೃಗ + ಆಲಯ ಇದು ಸವರ್ಣದೀರ್ಘ ಸಂಧಿ, ಗುಣಸಂಧಿ ಅಂದರೆ ಏನು ಗೊತ್ತಾ ಎಂದು ಸಿಎಂ ಸಭಿಕರನ್ನು ಪ್ರಶ್ನೆ ಮಾಡಿದ್ದರು. ಆ ಬಳಿಕ ಶಿಕ್ಷಕರ ದಿನಾಚರಣೆಯಂದು ಮತ್ತೊಮ್ಮೆ ಕನ್ನಡ ವ್ಯಾಕರಣದ ಕುರಿತು ಮಾತನಾಡಿದ್ದರು.

    ಇದನ್ನೂ ಓದಿ: ಶಿಕ್ಷಕರ ಮುಂದೆ ಸಂಧಿ ಪಾಠ – ವೇದಿಕೆಯಲ್ಲೇ ಶರವಣರ ಕಾಲೆಳೆದ ಸಿಎಂ

  • ರಾಷ್ಟ್ರಪತಿ ಚುನಾವಣೆಗೆ ಕ್ಷಣಗಣನೆ ಆರಂಭ-ಮೈತ್ರಿ ರಾಜಕೀಯದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ

    ರಾಷ್ಟ್ರಪತಿ ಚುನಾವಣೆಗೆ ಕ್ಷಣಗಣನೆ ಆರಂಭ-ಮೈತ್ರಿ ರಾಜಕೀಯದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ

    ಬೆಂಗಳೂರು: ಕಳೆದ ಮೂರು ತಿಂಗಳಿನಿಂದ ದೇಶದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ರಾಷ್ಟ್ರಪತಿ ಚುನಾವಣೆಗೆ ಕ್ಷಣಗಣಗೆ ಆರಂಭವಾಗಿದೆ. ಇಂದು 10 ಗಂಟೆಯಿಂದ ಚುನಾವಣಾ ಮತದಾನ ಪ್ರಕ್ರಿಯೆ ನಡೆಯಲಿದೆ. ದಲಿತ ವರ್ಸಸ್ ದಲಿತ ಫೈಟ್ ಜೋರಾಗಿದ್ದು, ಅಡ್ಡ ಮತದಾನವಾಗುವ ಭೀತಿಯಲ್ಲಿ ಪಕ್ಷಗಳಿವೆ. ಹೀಗಾಗಿ ತನ್ನ ಸದಸ್ಯರಿಗೆ ತಮ್ಮ ಅಭ್ಯರ್ಥಿಗಳಿಗೆ ಮತದಾನ ಮಾಡುವಂತೆ ಸಭೆ ಕರೆದು ಮನವಿ ಮಾಡಿದ್ದಾರೆ.

    ಇಂದಿನಿಂದ ಆರಂಭವಾಗುವ ಮಳೆಗಾಲದ ಅಧಿವೇಶನದಲ್ಲಿ ನೂತನ ಪ್ರಥಮ ಪ್ರಜೆಗೆ ಮತದಾನ ನಡೆಯಲಿದೆ. ಎನ್‍ಡಿಎ ಮಿತ್ರಕೂಟದಿಂದ ರಾಮನಾಥ್ ಕೋವಿಂದ್ ಹಾಗೂ ಯುಪಿಎ ಒಕ್ಕೂಟದಿಂದ ಮೀರಾ ಕುಮಾರ್ ಪ್ರಬಲ ಅಭ್ಯರ್ಥಿಗಳಾಗಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳು ದಲಿತರಾಗಿದ್ದು, ಈ ಬಾರಿಯ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದೆ.

    ಸಂಸದರು ಸಂಸತ್ ನಲ್ಲಿ ಹಾಗೂ ವಿಧಾನಸಭೆ ಸದಸ್ಯರು ಆಯಾ ರಾಜ್ಯದ ವಿಧಾನಸಭೆಯಲ್ಲಿ ಮತದಾನ ಮಾಡಲಾಗುತ್ತಿತ್ತು. ಈ ವರ್ಷ ಸಂಸದರು ಆಯಾ ರಾಜ್ಯದ ವಿಧಾನಸಭೆಯಲ್ಲಿ ಮತದಾನಕ್ಕೆ ಅವಕಾಶ ಕೇಳಿದ್ದು, ಆಯೋಗ ಕೂಡಾ ಒಪ್ಪಿಗೆ ಸೂಚಿಸಿದೆ. ಈ ಹಿನ್ನಲೆ ಅಡ್ಡಮತದಾನದ ಭಯ ಕೂಡ ಪಕ್ಷಗಳಲ್ಲಿ ಹೆಚ್ಚಾಗಿ ಕಾಡತೊಡಗಿದೆ.

    ಇವರು ಮತದಾರರರು: ರಾಷ್ಟ್ರಪತಿ ಚುನಾವಣೆ ಇತರೆ ಚುನಾವಣೆಗಳಿಗಿಂತ ಭಿನ್ನವಾಗಿದೆ. ರಾಷ್ಟ್ರಪತಿ ಚುನಾವಣಾ ಪ್ರಕ್ರಿಯೆಯನ್ನು ಎಲೆಕ್ಟ್ರೊ ಕೊರಲ್ ಅಂತಾ ಕರೆಯಲಾಗುತ್ತೆ. ಅಂದ್ರೆ ಲೋಕಸಭೆ ರಾಜ್ಯಸಭೆ ಸಂಸದರು ಮತ್ತು ಎಲ್ಲ ರಾಜ್ಯಗಳ ವಿಧಾನಸಭಾ ಸದಸ್ಯರು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಡಲು ಅರ್ಹರು. ಈ ಪದ್ಧತಿಯನ್ನ ಎಲೆಕ್ಟ್ರೊ ಕಾಲೇಜ್ ಎನ್ನಲಾಗುತ್ತೆ. ಇನ್ನೊಂದು ಮುಖ್ಯಾಂಶ ಇಲ್ಲಿ ಸಂಸದ ಮತ್ತು ಮತದ ಮೌಲ್ಯ 708 ಹಾಗೂ ಪ್ರತಿಯೊಂದು ರಾಜ್ಯ ವಿಧಾನ ಸಭಾ ಸದಸ್ಯನ ಮತದ ಮೌಲ್ಯ ಆಯಾ ರಾಜ್ಯದ ಜನಸಂಖ್ಯೆ ಆಧರಿಸಿರುತ್ತೆ. ಅಂದ್ರೆ 1971ರ ಜನಸಂಖ್ಯೆ ಆಧಾರ ಮೇಲೆ ಆಯಾ ರಾಜ್ಯದ ಜನಸಂಖ್ಯೆಯನ್ನು ಪ್ರತಿ ಶಾಸಕನಿಗೂ ವಿಭಾಗಿಸಿ ಸಾವಿರದಿಂದ ಭಾಗಿಸಬೇಕು. ಆಗಾ ಬರುವ ಅಂಕಿ ಆ ರಾಜ್ಯದ ಶಾಸಕನ ಮತ ಮೌಲ್ಯವಾಗಿರುತ್ತದೆ.

    ಮತದಾರರ ಸಂಖ್ಯೆ:
    * ರಾಷ್ಟ್ರಪತಿ ಚುನಾವಣೆ ಒಟ್ಟು ಮತದಾರ ಸಂಖ್ಯೆ-4896
    * ಇದರಲ್ಲಿ ಲೋಕಸಭೆ ಮತ್ತು ರಾಜ್ಯ ಸಭೆ ಸಂಸದರು-776
    * ಎಲ್ಲ ರಾಜ್ಯಗಳ ವಿಧಾನಸಭಾ ಸದಸ್ಯರ ಸಂಖ್ಯೆ-4120

    ಮತ ಲೆಕ್ಕಾಚಾರ ಹೇಗೆ?
    ಪ್ರಸ್ತುತ ಈಗ ದೇಶದಲ್ಲಿ 776 ಸಂಸದರು ಮತ್ತು 4,120 ಶಾಸಕರಿದ್ದಾರೆ. 1971ರ ಜನಗಣತಿಯ ಆಧರಿಸಿ ಸಂಸದರು, ಶಾಸಕರ ಮತಮೌಲ್ಯ ನಿರ್ಧಾರ ಮಾಡಲಾಗುತ್ತದೆ. ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯೊಂದಿಗೆ ಭಾಗಿಸಿ 1 ಸಾವಿರದೊಂದಿಗೆ ಗುಣಿಸಿದಾಗ ಶಾಸಕರ ಮತಮೌಲ್ಯ ಸಿಗುತ್ತದೆ.

    ಕರ್ನಾಟಕದ ಶಾಸಕರ ಮತ ಮೌಲ್ಯ ಎಷ್ಟು?
    1971ರ ಜನಗಣತಿಯ ಪ್ರಕಾರ ಕರ್ನಾಟಕದ ಜಸಂಖ್ಯೆ = 2,92,99,014.
    ಕರ್ನಾಟಕದ ಶಾಸಕರ ಮತಮೌಲ್ಯ = 131
    ಕರ್ನಾಟಕದ ಒಟ್ಟು ಮತ ಮೌಲ್ಯ (131*224) = 29,344

    ಬೇರೆ ರಾಜ್ಯದಲ್ಲಿ ಎಷ್ಟು?
    ಉತ್ತರ ಪ್ರದೇಶದ ಶಾಸಕರ ಮತಮೌಲ್ಯ 208 ಆಗಿದ್ದರೆ, ಗೋವಾ ಶಾಸಕರ ಮತಮೌಲ್ಯ 8 ಆಗಿದೆ.

    ಸಂಸದರ ಮತ ಮೌಲ್ಯ ಎಷ್ಟು?
    ಎಲ್ಲಾ ರಾಜ್ಯಗಳ ಶಾಸಕರ ಮತಮೌಲ್ಯವನ್ನು ಸಂಸದರ ಒಟ್ಟು ಸಂಖ್ಯೆಯಿಂದ ಭಾಗಿಸಿದಾಗ ಸಂಸದರ ಮತ ಮೌಲ್ಯ ಸಿಗುತ್ತದೆ.
    ಸಂಸದರ ಮತ ಮೌಲ್ಯ : 5,49,474/776 = 708

    ಈಗಾಗಲೇ ಹೆಚ್ಚು ಮತಗಳನ್ನು ಹೊಂದಿರುವ ಎನ್‍ಡಿಎ ಗೆ ಗೆಲವಿನ ನಗೆ ಬೀರಲು ಕೇವಲ 11.828 ಮತಗಳು ಮಾತ್ರಬೇಕು. ಶಿವಸೇನೆ, ಎಐಎಡಿಎಂಕೆ, ಅಕಾಲಿದಳ, ಸಿಪಿಜೆ ಸೇರಿದಂತೆ ಹದಿನಾಲ್ಕು ಮಿತ್ರ ಪಕ್ಷಗಳು ಬೆಂಬಲ ಘೋಷಿಸಿವೆ. ಯುಪಿಎ ಒಕ್ಕೂಟಕ್ಕೆ 1,47,212 ಮತಗಳು ಬೇಕಾಗಿದ್ದು ಟಿಎಂಸಿ, ಬಿಎಸ್ಪಿ, ಆರ್‍ಜೆಡಿ, ಜೆಡಿಎಸ್ ಸೇರಿದಂತೆ ಹದಿನೇಳು ಮಿತ್ರಪಕ್ಷಗಳ ಬೆಂಬಲ ನೀಡಿವೆ. ಇದರ ಜೊತೆಗೆ ಆಪ್, ಬಿಜೆಡಿ, ಟಿಎಸ್‍ಆರ್, ವೈಎಸ್‍ಆರ್ ನಿರ್ಣಾಯಕ ಸ್ಥಾನದಲ್ಲಿವೆ.

    ಒಂದು ಹಂತದಲ್ಲಿ ಮೇಲ್ನೋಟಕ್ಕೆ ಎನ್‍ಡಿಎ ಸರ್ಕಾರದ ಅಭ್ಯರ್ಥಿ ರಾಮನಾಥ್ ಕೋವಿಂದ್ ಗೆ ಬೆಂಬಲ ಹೆಚ್ಚಿದ್ದು ಮತದಾನದ ವೇಳೆ ಅಚ್ಚರಿಯ ಬೆಳವಣಿಗೆ ಯಾದ್ರೆ ಯುಪಿಎ ಅಭ್ಯರ್ಥಿ ಮೀರಾಕುಮಾರ್ ಗೆಲುವನ್ನು ಅಲ್ಲಗೆಳೆಯುವಂತಿಲ್ಲ. ಒಟ್ಟಿನಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದ್ದು, ಇದೇ ಜುಲೈ 20ರಂದು ದೇಶದ ಮೊದಲ ಪ್ರಜೆ ಯಾರು ಅಂತಾ ಗೊತ್ತಾಗಲಿದೆ.