Tag: rama lalla

  • ಸೂರ್ಯ ತಿಲಕವನ್ನು ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆಬಾಗುತ್ತೇನೆ: ಅರುಣ್‌ ಯೋಗಿರಾಜ್‌

    ಸೂರ್ಯ ತಿಲಕವನ್ನು ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆಬಾಗುತ್ತೇನೆ: ಅರುಣ್‌ ಯೋಗಿರಾಜ್‌

    ಅಯೋಧ್ಯೆ: ಬಾಲರಾಮನ ಹಣೆಯ ಮೇಲಿನ ಸೂರ್ಯ ತಿಲಕವನ್ನು ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ನಾನು ತಲೆಬಾಗುತ್ತೇನೆ ಎಂದು ಶಿಲ್ಪಿ ಅರುಣ್‌ ಯೋಗಿರಾಜ್‌ ಹೇಳಿದ್ದಾರೆ.

    ಅಯೋಧ್ಯೆಯಲ್ಲಿ (Ayodhya) ಇಂದು ರಾಮಲಲ್ಲಾನ ದರ್ಶನ ಪಡೆದ ಬಳಿಕ ಪ್ರತಿಕ್ರಿಯಿಸಿದ ಅವರು, ರಾಮನ ದರ್ಶನಕ್ಕೆ ಲಕ್ಷಾಂತರ ಜನರು ಬರುತ್ತಿದ್ದಾರೆ. ಶ್ರೀರಾಮನ ಆಶೀರ್ವಾದದಿಂದ ನಾನು ಕೂಡ ಇಂದು ನನ್ನ ಕುಟುಂಬದೊಂದಿಗೆ ರಾಮಲಲ್ಲಾನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

    ಇದೇ ವೇಳೆ ಸೂರ್ಯ ತಿಲಕದ (Surya Tilak) ಬಗ್ಗೆ ಮಾತನಾಡಿ, ಇಂದಿನ ಸೂರ್ಯ ತಿಲಕವನ್ನು ನಾನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಸೂರ್ಯ ತಿಲಕವನ್ನು ಸಾಧ್ಯವಾಗಿಸಿದ ವಿಜ್ಞಾನಿಗಳ ಮುಂದೆ ನಾನು ತಲೆಬಾಗಲು ಬಯಸುತ್ತೇನೆ. ಈ ಕ್ಷಣವನ್ನು ವೀಕ್ಷಿಸಲು ಸಾಧ್ಯವಾಗಿದ್ದು ನನ್ನ ಅದೃಷ್ಟವೇ ಸರಿ ಎಂದು ಅರುಣ್‌ ಯೋಗಿರಾಜ್‌ ತಿಳಿಸಿದರು. ಇದನ್ನೂ ಓದಿ: 500 ವರ್ಷದ ಬಳಿಕ ರಾಮನವಮಿಯಂದು ಅಯೋಧ್ಯೆಯಲ್ಲಿ ಬಾಲ ರಾಮನಿಗೆ ಅಭಿಷೇಕ, ಸೂರ್ಯ ತಿಲಕ!

    ವಿಜ್ಞಾನಿಗಳು ನಾಲ್ಕು ವರ್ಷಗಳಿಂದ ಸೂರ್ಯ ತಿಲಕವನ್ನು ಸಾಧ್ಯವಾಗಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ವಿಜ್ಞಾನಿಗಳೊಂದಿಗೆ ಸಮಯ ಕಳೆಯಲು ಸಾಧ್ಯವಾಯಿತು. ನಾನು ಅತ್ಯಂತ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ನಾವು ಇದನ್ನೆಲ್ಲಾ ಕಥೆಗಳಲ್ಲಿ ಮಾತ್ರ ಕೇಳಿದ್ದೇವೆ, ಆದರೆ ಇಂದು ನಮ್ಮ ವಿಜ್ಞಾನಿಗಳು ಇದನ್ನು ಸಾಧ್ಯವಾಗಿಸಿದ್ದಾರೆ ಎಂದು ಅರುಣ್‌ ಅವರು ವಿಜ್ಞಾನಿಗಳ ಕಾರ್ಯವನ್ನು ಶ್ಲಾಘಿಸಿದರು.

    500 ವರ್ಷದ ಬಳಿಕ ಶ್ರೀರಾಮನ ಹುಟ್ಟಿದ ಸ್ಥಳ ಅಯೋಧ್ಯೆಯಲ್ಲಿ ರಾಮನವಮಿಯ (Rama Navami) ದಿನವಾದ ಇಂದು ಬಾಲರಾಮನಿಗೆ ಸೂರ್ಯ ಅಭಿಷೇಕ ನಡೆಯಿತು. ಭಗವಾನ್ ಶ್ರೀರಾಮನ ಜನ್ಮ ಮುಹೂರ್ತದ ವೇಳೆಯಲ್ಲೇ ಮಧ್ಯಾಹ್ನ 12 ಗಂಟೆಯ ನಂತರ ಸೂರ್ಯ ರಶ್ಮಿ ರಾಮ ಲಲ್ಲಾನ ವಿಗ್ರಹದ ಹಣೆಯನ್ನು ಸ್ಪರ್ಶಿಸಿತು.

    ರಾಮ ಮಂದಿರದಲ್ಲಿ (Ram Mandir) ಸೂಕ್ತ ಸ್ಥಳಗಳಲ್ಲಿ ಅಳವಡಿಸಿರುವ ಮಸೂರಗಳು ಸೂರ್ಯನ ಕಿರಣವನ್ನು ರಾಮಲಲ್ಲಾ ಮೂರ್ತಿಯ ಹಣೆಯನ್ನು ಸ್ಪರ್ಶಿಸಿತು. ಯಾವುದೇ ಬ್ಯಾಟರಿ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಕೆ ಮಾಡದೇ ಸೂರ್ಯನ ಕಿರಣಗಳು ನೇರವಾಗಿ ಬಾಲ ರಾಮನ ಹಣೆಯನ್ನು ಸ್ಪರ್ಶಿಸುವಂತೆ ಮಾಡಲು ಮಸೂರಗಳನ್ನು ಮಾತ್ರ ಬಳಕೆ ಮಾಡಲಾಗಿತ್ತು. ಈ ಕ್ಷಣಕ್ಕೆ ಸಾಕ್ಷಿಯಾಗಲು ಅರುಣ್‌ ಯೋಗಿರಾಜ್‌ ಅವರು ತಮ್ಮ ಕುಟುಂಬದೊಂದಿಗೆ ಮಂಗಳವಾರ ರಾತ್ರಿಯೇ ಅಯೋಧ್ಯೆಗೆ ಆಗಮಿಸಿದ್ದರು.

  • ಅಯೋಧ್ಯೆಯಲ್ಲಿ ‘ಜೈ ಶ್ರೀರಾಮ್‌’ ಎಂದ ಶಿಲ್ಪಿ ಅರುಣ್‌ ಯೋಗಿರಾಜ್‌ ಕುಟುಂಬ

    ಅಯೋಧ್ಯೆಯಲ್ಲಿ ‘ಜೈ ಶ್ರೀರಾಮ್‌’ ಎಂದ ಶಿಲ್ಪಿ ಅರುಣ್‌ ಯೋಗಿರಾಜ್‌ ಕುಟುಂಬ

    ಅಯೋಧ್ಯೆ: ನಾಳೆ ರಾಮನವಮಿ (Rama Navami) ಹಬ್ಬದ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮಮಂದಿರದಲ್ಲಿ ವಿಶೇಷ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಮಲಲ್ಲಾ ವಿಗ್ರಹ ಶಿಲ್ಪಿ ಅರುಣ್ ಯೋಗಿರಾಜ್ (Sculptor Arun Yogiraj) ಕುಟುಂಬ ಈಗಾಗಲೇ ಅಯೋಧ್ಯೆ ತಲುಪಿದೆ.

    ಹೌದು. ರಾಮಂದಿರದಲ್ಲಿ ರಾಮಲಲ್ಲಾ (Rama Lalla) ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಮೊದಲ ರಾವನವಮಿ ಹಬ್ಬ ಇದಾಗಿದ್ದು, ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ (Ayodhya Ram Mandir) ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದಲ್ಲಿ ಭಾಗಿಯಾಗಲು ಅರುಣ್‌ ಕುಟುಂಬ ಆಗಮಿಸಿದೆ.

    ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅರುಣ್‌ ಅವರು, ರಾಮಲಲ್ಲಾನ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ನಂತರ ಮೊದಲ ಬಾರಿಗೆ ಕುಟುಂಬ ಸಮೇತ ಬಂದಿದ್ದೇನೆ. ನನ್ನ ಕೆಲಸವನ್ನು ನೋಡಿ ಕುಟುಂಬ ಸಂತಸಗೊಂಡಿದೆ. ರಾಮನವಮಿ ಆಚರಣೆಗಾಗಿ ನಾವು ಕಾತರದಿಂದ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಬೆಂಗಳೂರಿನ ಕಂಪನಿಯಿಂದ ‘ಸೂರ್ಯ ತಿಲಕ ಯಂತ್ರ’ ಕೊಡುಗೆ – ಏನಿದರ ವೈಶಿಷ್ಟ್ಯ?

    ಈ ಹಿಂದೆ ಬೆಂಗಳೂರಿನಲ್ಲಿ ಮಾತನಾಡಿದ್ದ ಶಿಲ್ಪಿ, ಜನವರಿ 22 ರ ಬಳಿಕ ಅಯೋಧ್ಯೆಗೆ ಭೇಟಿ ನೀಡಿಲ್ಲ. ಇದೀಗ ರಾಮಲಲ್ಲಾ ವಿಗ್ರಹವನ್ನು ವೀಕ್ಷಿಸಲು ತಮ್ಮ ಕುಟುಂಬವನ್ನು ಅಲ್ಲಿಗೆ ಕರೆದೊಯ್ಯಲು ಉತ್ಸುಕನಾಗಿದ್ದೇನೆ. ಹೊಸ ಬಟ್ಟೆ ಖರೀದಿಸುವುದು ಸೇರಿದಂತೆ ತಮ್ಮ ಸಿದ್ಧತೆಗಳ ಜೊತೆಗೆ ತಮ್ಮ ಕುಟುಂಬ ಪ್ರವಾಸದ ಉತ್ಸಾಹವನ್ನು ಹಂಚಿಕೊಂಡಿದ್ದರು. ವಿಶೇಷವಾಗಿ ವಿಗ್ರಹದ ನೋಟದಲ್ಲಿನ ಬದಲಾವಣೆಗಳ ಬಗ್ಗೆ ಸ್ನೇಹಿತರಿಂದ ಕೇಳಿದ ನಂತರ ರಾಮಲಲ್ಲಾನನ್ನು (Rama Lalla) ಮತ್ತೆ ನೋಡಲು ತುಂಬಾ ಉತ್ಸುಕನಾಗಿದ್ದೇನೆ ಎಂದಿದ್ದರು.

    ನನ್ನ ಕುಟುಂಬದವರು ರಾಮಲಲ್ಲಾನನ್ನು ನೋಡಬೇಕೆಂದು ಪಟ್ಟು ಹಿಡಿದಿದ್ದಾರೆ. ದಿನನಿತ್ಯ ಹೇಳುತ್ತಾ ಇರುತ್ತಾರೆ. ಆದರೆ ನಾನು ಮುಂದೂಡುತ್ತಲೇ ಇದ್ದೆ. ಹಾಗಾಗಿ ಈ ಬಾರಿ ನಾನು ಅವರನ್ನು ಕರೆದುಕೊಂಡು ಹೋಗುತ್ತೇನೆ. ಅವರನ್ನು ಬಿಟ್ಟು ನಾನು ಅಯೋಧ್ಯೆಗೆ (Ayodhya) ಹೋದರೆ ಅವರು ನನ್ನನ್ನು ಶಿಕ್ಷಿಸುತ್ತಾರೆ ಎಂದು ನಗುತ್ತಲೇ ಅರುಣ್‌ ಅವರು ಹೇಳಿದ್ದರು. ಇದನ್ನೂ ಓದಿ: Ram Navami: ಅಯೋಧ್ಯೆ ರಾಮಮಂದಿರಕ್ಕೆ 1,11,111 ಕೆಜಿ ಲಡ್ಡು

  • ಅಯೋಧ್ಯೆಗೆ ಬರೋ ಮುನ್ನ ಮೈಸೂರಿನ ಚಿಣ್ಣರ ಮೇಳದಲ್ಲಿ ಸಮಯ ಕಳೆದಿದ್ದೆ- ಶಿಲ್ಪಿ ಅರುಣ್‌ ಯೋಗಿರಾಜ್‌ ಬಿಚ್ಚಿಟ್ಟ ಸತ್ಯ

    ಅಯೋಧ್ಯೆಗೆ ಬರೋ ಮುನ್ನ ಮೈಸೂರಿನ ಚಿಣ್ಣರ ಮೇಳದಲ್ಲಿ ಸಮಯ ಕಳೆದಿದ್ದೆ- ಶಿಲ್ಪಿ ಅರುಣ್‌ ಯೋಗಿರಾಜ್‌ ಬಿಚ್ಚಿಟ್ಟ ಸತ್ಯ

    – 7 ತಿಂಗಳು ಯಾರ ಸಂಪರ್ಕದಲ್ಲೂ ಇರಲಿಲ್ಲ
    – ಅಯೋಧ್ಯೆಗೆ ಬಂದು ರಾಮಲಲ್ಲಾರನ್ನು ನೋಡಲು ಮನವಿ
    – ಪ್ರಾಣಪ್ರತಿಷ್ಠೆಗೂ ಮುನ್ನ ವೈರಲ್‌ ಫೋಟೋದ ಬಗ್ಗೆ ಶಿಲ್ಪಿ ಹೇಳಿದ್ದೇನು..?

    ಅಯೋಧ್ಯೆ: ರಾಮಲಲ್ಲಾನ (Ram Lalla) ಮೂರ್ತಿ ಕೆತ್ತನೆ ಮಾಡಲು ಅಯೋಧ್ಯೆಗೆ ಬರುವುದಕ್ಕೂ ಮುನ್ನ ಮೈಸೂರಿನಲ್ಲಿ ನಡೆದ ಚಿಣ್ಣರ ಮೇಳದಲ್ಲಿ ಬಹಳಷ್ಟು ಸಮಯ ಕಳೆದಿದ್ದೇನೆ. ಈ ವಿಚಾರ ಯಾರಿಗೂ ಗೊತ್ತಿಲ್ಲ ಎಂದು ಶಿಲ್ಫಿ ಅರುಣ್‌ ಯೋಗಿರಾಜ್‌ (Arun Yogiraj)  ಅವರು ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.

    ಅಯೋಧ್ಯೆಯಿಂದ (Ayodhya Ram Mandir) ವಾಪಸ್‌ ಆಗುವ ಮುನ್ನ ಪಬ್ಲಿಕ್‌ ಟಿವಿ ಜೊತೆ ಮಾತನಾಡುತ್ತಾ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಜೊತೆ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೂ ಮುನ್ನ ವೈರಲ್‌ ಆದ ಫೋಟೋದ ಬಗ್ಗೆಯೂ ಪ್ರತಿಕ್ರಿಯಿಸಿದರು.

    ಈ ರಾಮನ ವಿಗ್ರಹ ಮಾಡಲು ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಪಟ್ಟಿದ್ದೀನಿ. 140 ಕೋಟಿ ಜನಕ್ಕೆ ದರ್ಶನ ಮಾಡಿಸಲು ಇರುವ ಅವಕಾಶ ಎರಡು ಕಣ್ಣು, ಒಂದು ಮೂಗು ಹಾಗೂ ಬಾಯಿ. ಅಷ್ಟರಲ್ಲಿ ನಾನು ಲಲ್ಲಾ ಅವರನ್ನು ಹುಡುಕಿ ದೇಶಕ್ಕೆ ತೋರಿಸಬೇಕಾಗಿರುತ್ತೆ. ಇದಕ್ಕೆ ಬಹಳಷ್ಟು ಅಧ್ಯಯನವನ್ನು ಮಾಡಿದ್ದೀನಿ. ಎಲ್ಲನೂ ಇಂದು ಫಲಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಕೆತ್ತನೆಯಲ್ಲಿ ಬಳಸುವ ಉತ್ತಮ ಪಂಚತಾಳವನ್ನು ಇಲ್ಲಿ ಬಳಸಿದ್ದೇನೆ. ಒಂದು ಅಳತೆಯೊಳಗಡೆ ಕಲೆ ತೋರಿಸುವುದು ನಮ್ಮ ಕೈಯಲ್ಲಿರುತ್ತೆ. ಆ ಕಲೆಯನ್ನು ತೋರಿಸುವುದಕ್ಕೆ ಪ್ರಯತ್ನ ಪಟ್ಟಿದ್ದೇನೆ. ಇದಕ್ಕಿಂತಲೂ ದೇಶದ ಜನ ನೋಡಿ ಮೆಚ್ಚಿಕೊಂಡಿರುವುದು ನನಗೆ ಸಂತಸ ತಂದಿದೆ ಎಂದರು. ಇದನ್ನೂ ಓದಿ: ಬಾಲಕ ರಾಮನ ಕಣ್ತುಂಬಿಕೊಳ್ಳಲು 2ನೇ ದಿನವೂ ಸೇರಿದ ಲಕ್ಷಾಂತರ ಭಕ್ತರು- ದೇಗುಲದಲ್ಲಿ ಹೈ ಸೆಕ್ಯೂರಿಟಿ

    ಅಯೋಧ್ಯೆಗೆ ಬಂದು ಲಲ್ಲಾನ ನೋಡಿ: ಮೂರ್ತಿ ಉದ್ಘಾಟನೆಯ ದಿನ ಬಹಳಷ್ಟು ಮಂದಿಯನ್ನು ನಾನು ಭೇಟಿಯಾಗಿದ್ದೇನೆ. ಆಗ ಅವರಲ್ಲಿ ಹೇಳಲಾರದ ಸಂತಸವನ್ನು ನಾನು ಕಂಡಿದ್ದೇನೆ. ವಿಗ್ರಹ ನೋಡಿದ ತಕ್ಷಣ ಎಲ್ಲರ ಕಣ್ಣಲ್ಲಿ ನೀರು ಬಂದಿದ್ದೂ ಉಂಟು. ಇದು ಲಲ್ಲಾನ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುವ ಫೋಟೋಗಿಂತಲೂ ರಾಮಲಲ್ಲಾ ಅವರನ್ನು ಎದುರುಗಡೆ ನೋಡಲು ತುಂಬಾ ಸುಂದರವಾಗಿದ್ದಾರೆ. ಹೀಗಾಗಿ ಅಯೋಧ್ಯೆಗೆ ಬಂದೇ ರಾಮಲಲ್ಲಾ ಅವರನ್ನು ನೋಡಿ ಎಂದು ಇದೇ ವೇಳೆ ಅವರು ಮನವಿ ಮಾಡಿಕೊಂಡರು. ಜೊತೆಗೆ ನಿಮ್ಮ ಲಲ್ಲಾ ತುಂಬಾ ಮುದ್ದಾಗಿದ್ದಾರೆ. ನಿಮಗೆಲ್ಲರಿಗೂ ಅವರು ಆಶೀರ್ವಾದ ಮಾಡಲಿ ಎಂದು ಶುಭಹಾರೈಸಿದರು.

    ಎಲ್ಲರ ಸಂಪರ್ಕದಿಂದಲೂ ದೂರವಾಗಿದ್ದೆ  : ಈ 6 ತಿಂಗಳು ನನ್ನ ಜೀವನದಲ್ಲಿಯೇ ಪ್ರಮುಖವಾದ ಘಟ್ಟವಾಗಿದೆ. ಇಡೀ ಪ್ರಪಂಚದಲ್ಲಿ ಯಾರಿಗೂ ಸಿಗದೇ ಇರುವ ಅವಕಾಶ ಇದಾಗಿದೆ. ಜೊತೆಗೆ ಇದೇ ವೇಳೆ ತಂದೆ-ತಾಯಿ, ಪತಿ ಸೇರಿದಂತೆ ಕುಟುಂಬಸ್ಥರಿಗೆ ಧನ್ಯವಾದಗಳನ್ನು ತಿಳಿಸಿದರು.

    ನಾನು ಯಾರ ಜೊತೆನೂ ಸರಿಯಾಗಿ ಮಾತಾಡದೇ ಸುಮಾರು 7 ತಿಂಗಳು ಆಗಿತ್ತು. ಹೀಗಾಗಿ ಮಾತನಾಡಲು ಸ್ವಲ್ಪ ಕಷ್ಟ ಆಗುತ್ತಿದೆ. ಏಕಾಗ್ರತೆಗೆ ಎಲ್ಲಿಯೂ ತೊಂದರೆ ಆಗಬಾರದೆಂದು ಹೊರಜಗತ್ತಿನ ಜೊತೆ ಸಂಬಂಧ ಕಟ್‌ ಮಾಡಿಕೊಂಡಿದ್ದೆವು. ಯಾಕೆಂದರೆ ಇತಿಹಾಸ ಇರುವಂತಹ ಜಾಗ, ದೇಶಾದ್ಯಂತ ಜನ ಕಾಯುತ್ತಿದ್ದಾರೆ. ಇದರ ಪ್ರಾಮುಖ್ಯತೆ ನನಗೆ ಗೊತ್ತಿದ್ದರಿಂದ ಸಾಕಷ್ಟು ಅಧ್ಯಯನ ಮಾಡಿಕೊಂಡು ಮೂರ್ತಿ ಕೆತ್ತನೆ ಮಾಡಿದ್ದೇನೆ ಎಂದರು.

    ಚಿಣ್ಣರ ಮೇಳದಲ್ಲಿ ಮಕ್ಕಳ ಜೊತೆ ಸಮಯ ಕಳೆದಿದ್ದೆ: ಅಯೋಧ್ಯೆಗೆ ಬರುವುದಕ್ಕಿಂತಲೂ ಮುಂಚೆ ಚಿಣ್ಣರ ಮೇಳಕ್ಕೆ ಹೋಗಿದ್ದೆ. ಅಲ್ಲಿ ಬಹಳಷ್ಟು ಸಮಯ ಕಳೆದಿದ್ದೇನೆ. ಮಕ್ಕಳ ಜೊತೆ ಇರುತ್ತಿದ್ದೆ. ಇದು ಯಾರಿಗೂ ಹೇಳಿಲ್ಲ. ಸಾಕಷ್ಟು ಫೋಟೋಗಳನ್ನು ಸೇವ್‌ ಮಾಡಿಕೊಂಡಿದ್ದೆ. ಒಟ್ಟಿನಲ್ಲಿ ಆ ಸಮಯದಲ್ಲಿ ಏನು ಮಾಡಬೇಕು ಎಂಬ ಆದೇಶ ಆ ಭಗವಂತನಿಂದಲೇ ಬಂದಿರುತ್ತದೆ ಎಂದು ಹೇಳಿದರು.

    ಪ್ರಾಣಪ್ರತಿಷ್ಠಾನೆಗೂ ಮುನ್ನ ಫೋಟೋ ವೈರಲ್‌ ಬಗ್ಗೆ ಪ್ರತಿಕ್ರಿಯಿಸಿದ ಅವರು, 7 ತಿಂಗಳಿಂದ ಕಾಪಾಡಿಕೊಂಡು ಬಂದೆ. ಆದರೆ ಅದು ಹೇಗೆ ಫೋಟೋ ಮೂಲಕ ಹೊರಗೆ ಬಂತು ಎನ್ನುವುದು ಗೊತ್ತಾಗಿಲ್ಲ. ಆದರೆ ಆ ಸಮಯದಲ್ಲಿ ಸಾಕಷ್ಟು ಬೇಸರ ಆಯಿತು. ಆದರೆ ಹಳೆಯ ಫೋಟೋ ಹಾಗೂ ಪ್ರತಿಷ್ಠಾಪನೆ ಆದ ಬಳಿಕ ರಾಮಲಲ್ಲಾನ ವಿಗ್ರಹಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಅದೇ ಖುಷಿ ಎಂದು ತಿಳಿಸಿದರು.

    ಯೋಗಿ ಆದಿತ್ಯನಾಥ್‌ ಅವರು ಪ್ರಾಣಪ್ರತಿಷ್ಠೆ ದಿನ ತಮ್ಮ ಭಾಷಣದಲ್ಲಿ ನನಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಪ್ರಧಾನಿಯವರು ಮಾತನಾಡಲು ಸಿಕ್ಕಿಲ್ಲ. ಟ್ರಸ್ಟ್‌ ವತಿಯಿಂದ ಗೌರವಪೂರ್ವಕವಾಗಿ ಏನು ಕೊಟ್ಟರೂ ಖುಷಿನೇ ಎಂದು ಅರುಣ್‌ ಯೋಗಿರಾಜ್‌ ಅವರು ಪಬ್ಲಿಕ್‌ ಟಿವಿ ಜೊತೆ ಖುಷಿ ಹಂಚಿಕೊಂಡರು.