Tag: Rajeev kumar

  • ಮೋದಿ ಮತ್ತೆ ಪ್ರಧಾನಿಯಾಗಲ್ಲ, ಸುಪ್ರೀಂನಿಂದ ನೈತಿಕ ಗೆಲುವು – ಮಮತಾ ಬ್ಯಾನರ್ಜಿ

    ಮೋದಿ ಮತ್ತೆ ಪ್ರಧಾನಿಯಾಗಲ್ಲ, ಸುಪ್ರೀಂನಿಂದ ನೈತಿಕ ಗೆಲುವು – ಮಮತಾ ಬ್ಯಾನರ್ಜಿ

    ಕೊಲ್ಕತ್ತಾ: ಕೋಲ್ಕತ್ತಾ ಪೊಲೀಸ್ ಆಯುಕ್ತರನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡುವ ಮೂಲಕ ನಮಗೆ ನೈತಿಕ ಗೆಲುವು ಸಿಕ್ಕಿದೆ. ಹಾಗೂ ಈ ಆದೇಶಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

    ಕೋಲ್ಕತ್ತಾದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಜೆಗಳಿಗಿಂತ ಯಾರೂ ದೊಡ್ಡವರಲ್ಲ. ಪ್ರಜಾಪ್ರಭುತ್ವವೇ ದೇಶದ ಒಡೆಯ. ನಾವು ಸಾಕ್ಷಿ ನಾಶ ಮಾಡುತ್ತಿದ್ದೇವೆ ಅಂತ ಆರೋಪಿಸಿದ್ದರು. ಅದು ಸುಳ್ಳಾಗಿದೆ. ರಾಜೀವ್ ಕುಮಾರ್ ಪ್ರಕರಣ ಗೆಲುವು ಕೇವಲ ನನ್ನದಲ್ಲ. ಬಂಗಾಳ ಜನತೆ, ಸೇವ್ ಇಂಡಿಯಾ ಕ್ಯಾಂಪೇನ್ ಹಾಗೂ ಸಂವಿಧಾನದ ಗೆಲುವು ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ಮಮತಾ ಬ್ಯಾನರ್ಜಿ ಗುಡುಗಿದರು.  ಇದನ್ನು ಓದಿ: ಸಿಬಿಐ ವಿಚಾರಣೆಗೆ ರಾಜೀವ್ ಕುಮಾರ್ ಹಾಜರಾಗಬೇಕು: ಕೋರ್ಟ್ ಕಲಾಪ ಹೀಗಿತ್ತು

    ಪ್ರಕರಣದ ಕುರಿತು ವಿಚಾರಣೆ ನಡೆಯದೇ ಏಕಾಏಕಿ ಸಿಬಿಐ ಅಧಿಕಾರಿಗಳು ರಾಜೀವ್ ಕುಮಾರ್ ಅವರನ್ನು ಭಾನುವಾರ ಬಂಧಿಸಲು ಮುಂದಾಗಿದ್ದರು. ಆದರೆ ಈಗ ಕೋರ್ಟ್ ಆದೇಶದಿಂದ ರಾಜೀವ್ ಕುಮಾರ್ ಅವರನ್ನು ಬಂಧಿಸುವಂತಿಲ್ಲ. ಇಬ್ಬರಿಗೂ ಒಪ್ಪಿಗೆಯಾದ ಸ್ಥಳದಲ್ಲಿ ವಿಚಾರಣೆ ನಡೆಸಬೇಕು ಎನ್ನುವ ಆದೇಶ ನೀಡಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಗೆಲುವು ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ಜನರಿಗೆ, ರೈತರು, ಕಲಾವಿದರು ಸೇರಿದಂತೆ ಅನೇಕರಿಗೆ ತೊಂದರೆ ಕೊಟ್ಟಿದ್ದಾರೆ. ಹೀಗಾಗಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದಿಲ್ಲ ಎಂದು ಕುಟುಕಿದರು. ಇದನ್ನು ಓದಿ:  ಮಮತಾ ಪರ ಬ್ಯಾಟಿಂಗ್ ಮಾಡಿದ ರಾಹುಲ್ ನಿಲುವಿಗೆ ಬಂಗಾಳ ಕಾಂಗ್ರೆಸ್ ವಿರೋಧ

    ಕೇಂದ್ರ ಸರ್ಕಾರವು ಎಲ್ಲರನ್ನೂ ಬಂಧಿಸಿ, ರೈಲಿಗೆ ಕಳುಹಿಸಲು ಮುಂದಾಗಿದೆ. ಈ ನೀತಿಯ ವಿರುದ್ಧ ನಾನು ಈ ಧರಣಿ ಮುಂದುವರಿಸಬೇಕಾದರೆ ಇತರ ನಾಯಕರನ್ನು ಭೇಟಿ ಮಾಡುವೆ. ನಾನು ಒಬ್ಬಳೇ ಹೋರಾಡುವುದಿಲ್ಲ. ಈ ನಿಟ್ಟಿನಲ್ಲಿ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಒಡಿಶಾ ಸಿಎಂ ನವೀನ್ ಪಾಟ್ನಾಯಕ್ ಸೇರಿದಂತೆ ಅನೇಕರ ಬೆಂಬಲ ಪಡೆಯುತ್ತೇನೆ ಎಂದು ಹೇಳಿದರು.

    ರಾಜೀವ್ ಕುಮಾರ್ ವಿರುದ್ಧ ಅವರು ಹಲವಾರು ಆರೋಪಗಳನ್ನು ಮಾಡಲಾಗಿತ್ತು. ಜೊತೆಗೆ ನಾವು ನ್ಯಾಯಾಂಗ ನಿಂದನೆ ಮಾಡಿದ್ದೇವೆ ಎಂದು ಅವರು ದೂರಿದ್ದರು. ಇದು ತಿರಸ್ಕೃತವಾಗಿದೆ ಎಂದು ಹೇಳಿದರು.

    ಚಿಟ್ ಫಂಡ್ ಬಹುಕೋಟಿ ಹಗರಣದಲ್ಲಿ ಅನೇಕರು ಭಾಗಿಯಾಗಿದ್ದಾರೆ. ಅಸ್ಸಾಂ ಉಪ ಮುಖ್ಯಮಂತ್ರಿಗಳು 3 ಕೋಟಿ ರೂ. ಪಡೆದಿದ್ದರು. ಅವರನ್ನು ಬಂಧಿಸಲಾಗಿದೆಯೇ? ರೋಸ್ ವ್ಯಾಲಿ ಗ್ರೂಪ್‍ನ ರೋಸ್ ಅಂತ ಕರೆದುಕೊಂಡಿದ್ದ ಬಾಬುಲ್ ಸುಪ್ರಿಯೋ ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸಿಬಿಐ ವಿಚಾರಣೆಗೆ ರಾಜೀವ್ ಕುಮಾರ್ ಹಾಜರಾಗಬೇಕು: ಕೋರ್ಟ್ ಕಲಾಪ ಹೀಗಿತ್ತು

    ಸಿಬಿಐ ವಿಚಾರಣೆಗೆ ರಾಜೀವ್ ಕುಮಾರ್ ಹಾಜರಾಗಬೇಕು: ಕೋರ್ಟ್ ಕಲಾಪ ಹೀಗಿತ್ತು

    ನವದೆಹಲಿ: ಶಾರದಾ ಚಿಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆಗೆ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

    ಸಿಬಿಐ ಸಲ್ಲಿಸಿದ್ದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಅರ್ಜಿ ವಿಚಾರಣೆ ವೇಳೆ ರಾಜೀವ್ ಕುಮಾರ್ ಅವರು ವಿಚಾರಣೆಗೆ ಹಾಜರಾಗಬೇಕು, ಆದರೆ ಅವರನ್ನು ಬಂಧಿಸುವಂತಿಲ್ಲ ಎಂದು ಮುಖ್ಯ ನ್ಯಾ. ರಂಜನ್ ಗೊಗೋಯ್, ದೀಪಕ್ ಗುಪ್ತಾ, ಸಂಜೀವ್ ಖನ್ನಾ ಅವರಿದ್ದ ತ್ರಿಸದಸ್ಯ ಪೀಠ ಆದೇಶಿಸಿತು.

    ಸಿಬಿಐ ಪರವಾಗಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಸಾಲಿಸಿಟರ್ ಜನರಲ್ ತುಷರ್ ಮೆಹ್ತಾ ಹಾಜರಾಗಿದ್ದರೆ, ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಜರಾಗಿದ್ದರು.

    ಕೆಕೆ ವೇಣುಗೋಪಾಲ್ ಅವರು ಆರಂಭದಲ್ಲಿ, ರಾಜೀವ್ ಕುಮಾರ್ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದಾರೆ. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ ಬಳಿಕ ಸಲ್ಲಿಕೆಯಾದ ದಾಖಲೆಗಳು ತಿರುಚಲ್ಪಟ್ಟಿದೆ. ಯಾಕೆ ತಿರುಚಲ್ಪಟ್ಟಿದೆ ಎಂದು ಕೇಳಿದ್ದಕ್ಕೆ ಇದೂವರೆಗೆ ವಿಚಾರಣೆಗೆ ರಾಜೀವ್ ಕುಮಾರ್ ಹಾಜರಾಗಿಲ್ಲ. ಫೋನ್ ಕಾಲ್‍ಗಳ ಮಾಹಿತಿ ಡಿಲೀಟ್ ಆಗಿದೆ. ಯಾರ ಯಾರಿಗೆ ಕಾಲ್ ಮಾಡಿದ್ದಾರೆ ಅವುಗಳು ಡಿಲೀಟ್ ಆಗಿದೆ. ಪ್ರಕರಣದ ಆರೋಪಿಯಾಗಿರುವ ಸುದಿಪ್ಟೋ ಸೆನ್ ಫೋನ್ ಮರಳಿ ನೀಡಲಾಗಿದೆ ಎಂದು ತಿಳಿಸಿದರು.

    ವಿಚಾರಣೆಗೆ ಬಂದಿದ್ದ ಸಿಬಿಐ ಅಧಿಕಾರಿಗಳನ್ನು ಬಸ್ಸಿನಲ್ಲಿ ತುಂಬಿಸಲಾಗಿದೆ. ಠಾಣೆಗಳಲ್ಲಿ ಹಲವು ಗಂಟೆಗಳ ಕಾಲ ಅಧಿಕಾರಿಗಳನ್ನು ಪೊಲೀಸರು ವಶದಲ್ಲಿ ಇಟ್ಟಿದ್ದಾರೆ. ಸಿಬಿಐ ಜಂಟಿ ನಿರ್ದೇಶಕರ ಮನೆಗೆ ಮುತ್ತಿಗೆ ಹಾಕಲಾಗಿತ್ತು. ಪಶ್ಚಿಮ ಬಂಗಾಳ ಪೊಲೀಸರ ಹಿಂದೆ ಯಾರಿದ್ದಾರೆ? ಯಾರ ಆದೇಶದ ಹಿನ್ನೆಲೆಯಲ್ಲಿ ಈ ಕೆಲಸಗಳು ನಡೆದಿದೆ ಎಂದು ಪ್ರಶ್ನಿಸಿದರು. ಈ ಪ್ರಕರಣದ ವಿಚಾರಣೆ ನಡೆಸುವಂತೆ ಸಿಬಿಐಗೆ ನೀಡಿದ್ದೇ ಸುಪ್ರೀಂ ಕೋರ್ಟ್. ಹೀಗಾಗಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಪೊಲೀಸರು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ವಾದಿಸಿದರು.

    ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಾಜರಾಗಿದ್ದ ಅಭಿಷೇಕ್ ಮನು ಸಿಂಘ್ವಿ, ಇದು ಉದ್ದೇಶಪೂರ್ವಕವಾಗಿ ನಡೆದ ದಾಳಿಯಾಗಿದೆ. ಪೊಲೀಸರು ಯಾವುದೇ ಸಿಬಿಐ ಅಧಿಕಾರಿಗಳನ್ನು ಬಂಧಿಸಿಲ್ಲ ಮತ್ತು ವಶಕ್ಕೆ ಪಡೆದಿಲ್ಲ, ರಾಜೀವ್ ಕುಮಾರ್ ಅವರು ಹಲವು ಬಾರಿ ತಟಸ್ಥ ಸ್ಥಳದಲ್ಲಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಸಿಬಿಐಗೆ ಪತ್ರ ಬರೆದಿದ್ದಾರೆ. ರಾಜೀವ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 201(ಪುರಾವೆ ನಾಶ) ಅಡಿಯಲ್ಲಿ ಯಾವುದೇ ಎಫ್‍ಐಆರ್ ದಾಖಲಾಗಿಲ್ಲ. ಎಫ್‍ಐಆರ್ ದಾಖಲಾಗದೇ ಬಂಧನ ಮಾಡುವುದು ಎಷ್ಟು ಸರಿ? 5 ವರ್ಷದ ವಿಚಾರಣೆ ನಡೆಯುತ್ತಿದ್ದು ಈಗ ತುರ್ತಾಗಿ ಬಂಧನ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.

    ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯ ನ್ಯಾಯಮೂರ್ತಿಗಳು, ನೀವು ಬಹಳ ವಿಚಾರಗಳನ್ನು ಊಹೆ ಮಾಡುತ್ತೀರಿ. ಇದು ನಿಮ್ಮ ಸಮಸ್ಯೆ, ಸಿಬಿಐ ತನಿಖೆಗೆ ರಾಜೀವ್ ಕುಮಾರ್ ಸಹಕರಿಸಬೇಕು ಎಂದು ಸಿಂಘ್ವಿಗೆ ಹೇಳಿದರು.

    ಎರಡು ಕಡೆಯ ವಾದವನ್ನು ಅಲಿಸಿದ ಕೋರ್ಟ್ ರಾಜೀವ್ ಕುಮಾರ್ ಅವರನ್ನು ಬಂಧಿಸುವಂತಿಲ್ಲ. ರಾಜೀವ್ ಕುಮಾರ್ ಅವರು ಮೇಘಾಲಯದ ಶಿಲ್ಲಾಂಗ್‍ ನ ತಟಸ್ಥ ಸ್ಥಳದಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶಿಸಿ ಮುಂದಿನ ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿತು. ಈ ವೇಳೆ ನ್ಯಾಯಾಂಗ ನಿಂದನೆ ಕುರಿತ ಅರ್ಜಿಗೆ ಸಂಬಂಧ ಪಟ್ಟಂತೆ ಸಿಬಿಐ ಆರೋಪಗಳಿಗೆ ಫೆ.18ರ ಒಳಗಡೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರಿಗೆ ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ಉತ್ತರ ನೀಡುವಂತೆ ಸೂಚಿಸಿತು.

    ವಿಚಾರಣೆ ಫೆ.7ಕ್ಕೆ: ಸಿಬಿಐ ಬಂಧನಕ್ಕೆ ತಡೆ ಕೋರಿ ರಾಜೀವ್ ಕುಮಾರ್ ಪಶ್ಚಿಮ ಬಂಗಾಳ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇಂದು ನಡೆಯಿತು. ಈ ವೇಳೆ ಈ ಪ್ರಕರಣ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿದೆ ಎಂದು ಹೇಳಿ ಕೋರ್ಟ್ ಮುಂದಿನ ವಿಚಾರಣೆಯನ್ನು ಫೆ.7ಕ್ಕೆ ಮುಂದೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಮತಾ ಪರ ಬ್ಯಾಟಿಂಗ್ ಮಾಡಿದ ರಾಹುಲ್ ನಿಲುವಿಗೆ ಬಂಗಾಳ ಕಾಂಗ್ರೆಸ್ ವಿರೋಧ

    ಮಮತಾ ಪರ ಬ್ಯಾಟಿಂಗ್ ಮಾಡಿದ ರಾಹುಲ್ ನಿಲುವಿಗೆ ಬಂಗಾಳ ಕಾಂಗ್ರೆಸ್ ವಿರೋಧ

    ಕೋಲ್ಕತ್ತಾ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಮತಾ ಬ್ಯಾನರ್ಜಿ ಪರ ಬ್ಯಾಟಿಂಗ್ ಮಾಡಿದರೆ ಪಶ್ಚಿಮ ಬಂಗಾಳದ ಕಾಂಗ್ರೆಸ್ ನಾಯಕರು ಟಿಎಂಸಿ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸಿದೆ.

    ತಪ್ಪಿತಸ್ಥರಲ್ಲದಿದ್ದರೆ ಕೋಲ್ಕತ್ತಾ ಪೊಲೀಸ್ ಆಯುಕ್ತರಾದ ರಾಜೀವ್‍ಕುಮಾರ್ ಅವರು ಸಿಬಿಐ ವಿಚಾರಣೆ ಎದುರಿಸಲು ಹಿಂದೆ ಸರಿಯುತ್ತಿರುವುದು ಏಕೆ ಎಂದು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸೊಮೇಂದ್ರ ನಾಥ್ ಮಿತ್ರಾ ಪ್ರಶ್ನಿಸಿದ್ದಾರೆ.

    ಫ್ಯಾಸಿಸ್ಟ್ ಧೋರಣೆಯ ಟಿಎಂಸಿ ಸರ್ಕಾರವನ್ನು ಕಿತ್ತು ಹಾಕಲು ಪಶ್ಚಿಮ ಬಂಗಾಳದಲ್ಲಿ ಎಲ್ಲ ವಿರೋಧ ಪಕ್ಷಗಳು ಒಂದಾಗಿವೆ. ಬಿಜೆಪಿ ಮತ್ತು ಟಿಎಂಸಿ ವಿರುದ್ಧದ ನಮ್ಮ ಹೋರಾಟ ನಿರಂತರವಾಗಿರುತ್ತದೆ ಸೊಮೇನ್ ಮಿತ್ರಾ ಹೇಳಿದ್ದಾರೆ.

    ಮಮತಾ ಬ್ಯಾನರ್ಜಿ ವಿಚಾರದಲ್ಲಿ ಕೇಂದ್ರ ನಾಯಕರು ಒಂದು ನಿರ್ಧಾರ ತೆಗೆದುಕೊಂಡರೆ ರಾಜ್ಯ ನಾಯಕರು ವ್ಯತಿರಿಕ್ತ ನಿರ್ಧಾರ ತಳೆದಿರುವುದು ಇದು ತಿಂಗಳಲ್ಲಿ ಎರಡನೇ ಬಾರಿ. ಜ.19ರಂದು ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ಪ್ರತಿಪಕ್ಷಗಳ ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರ ಪ್ರತಿನಿಧಿಯಾಗಿ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಗೈರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸಿಬಿಐ Vs ಮಮತಾ: ಮಂಗಳವಾರಕ್ಕೆ ಅರ್ಜಿ ಮುಂದೂಡಿಕೆ: ಸುಪ್ರೀಂನಲ್ಲಿ ಇಂದು ಏನಾಯ್ತು?

    ಸಿಬಿಐ Vs ಮಮತಾ: ಮಂಗಳವಾರಕ್ಕೆ ಅರ್ಜಿ ಮುಂದೂಡಿಕೆ: ಸುಪ್ರೀಂನಲ್ಲಿ ಇಂದು ಏನಾಯ್ತು?

    ನವದೆಹಲಿ: ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಬಂಧನಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ತುರ್ತು ಮಧ್ಯಂತರ ಅರ್ಜಿ ವಿಚಾರಣೆಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ನಡೆಸಲಿದೆ.

    ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ರಾಜೀವ್ ಕುಮಾರ್ ಆರ್‌ಟಿಜಿಎಸ್‌ ಮೂಲಕ ನಡೆಸಿರುವ ವ್ಯವಹಾರದ ಸಾಕ್ಷ್ಯವನ್ನು ನಾಶ ಮಾಡಲು ಮುಂದಾಗಿದ್ದಾರೆ ಸಿಬಿಐ ಆರೋಪಿಸಿದೆ.

    ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್, ಆರೋಪಗಳಿಗೆ ಸಾಕ್ಷ್ಯವನ್ನು ನೀಡಿ. ನಿಮ್ಮ ಆರೋಪದ ಪ್ರಕಾರವೇ ರಾಜೀವ್ ಕುಮಾರ್ ಸಾಕ್ಷ್ಯವನ್ನು ನಾಶ ಮಾಡುತ್ತಿದ್ದಾರೆ ಎಂದಾದರೆ ಈ ಪ್ರಕರಣವನ್ನು ನಾವು ಗಂಭೀರವಾಗಿ ಸ್ವೀಕರಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

     

    ಸಿಬಿಐ ಪರವಾಗಿ ಸಾಲಿಸಿಟರ್ ಜನರಲ್ ತುಷರ್ ಮೆಹ್ತಾ ಹಾಜರಾಗಿ, ನಮ್ಮ ಅಧಿಕಾರಿಗಳನ್ನು ಪಶ್ಚಿಮ ಬಂಗಾಳದ ಪೊಲೀಸರು ಅಕ್ರಮವಾಗಿ ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಸಾಕಷ್ಟು ಬಾರಿ ಸಮನ್ಸ್ ಜಾರಿ ಮಾಡಿದರೂ ಹಾಜರಾಗುತ್ತಿಲ್ಲ. ಹೀಗಾಗಿ ಕೋಲ್ಕತ್ತಾ ಪೊಲೀಸ್ ಆಯುಕ್ತರು ಕೂಡಲೇ ಶರಣಾಗಬೇಕು ಎಂದು ವಾದಿಸಿದರು.

    ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಜರಾಗಿ ರಾಜೀವ್ ಕುಮಾರ್ ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾರೆ ಹೊರತು ಆರೋಪಿಯಲ್ಲ ಎಂದು ತಿಳಿಸಿದರು. ಈ ವೇಳೆ ನಾಳಿನ ವಿಚಾರಣೆಯಲ್ಲಿ ತಮ್ಮ ವಾದಕ್ಕೆ ಪೂರಕ ಮಾಹಿತಿಯನ್ನು ನೀಡುವಂತೆ ಕೋರ್ಟ್ ಸಿಂಘ್ವಿಗೆ ಸೂಚಿಸಿತು.

    ಕಳೆದ ಎರಡು ವರ್ಷಗಳಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡುತ್ತಿದ್ದರೂ ರಾಜೀವ್ ಕುಮಾರ್ ವಿಚಾರಣೆ ಹಾಜರಾಗುತ್ತಿಲ್ಲ. ಅಷ್ಟೇ ಅಲ್ಲದೇ ಚುನಾವಣೆಗೆ ಸಂಬಂಧಿಸಿದಂತೆ ನಡೆದ ಸಭೆಗಳಿಗೂ ಅವರು ಹಾಜರಾಗಿಲ್ಲ ಎಂದು ಸಿಬಿಐ ಆರೋಪಿಸಿದೆ.

    ಭಾನುವಾರ ಏನಾಯ್ತು?
    ಭಾನುವಾರ ಸಂಜೆ 6.30ರ ವೇಳೆಗೆ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ನಿವಾಸಕ್ಕೆ 40ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳ ತಂಡ ಆಗಮಿಸಿದೆ. ಈ ತಂಡ ಮನೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಸುದ್ದಿ ತಿಳಿಯುತ್ತಲೇ ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕ ಸೇರಿದಂತೆ ಹಿರಿಯ ಅಧಿಕಾರಿಗಳು ಧಾವಿಸಿದರು. ಈ ವೇಳೆ ಸಿಬಿಐ ಅಧಿಕಾರಿಗಳು ಮತ್ತು ಕೋಲ್ಕತ್ತಾ ಪೊಲೀಸರ ನಡುವೆ ಮಾತಿನ ಚಕಮಕಿ, ತಳ್ಳಾಟವೂ ನಡೆಯಿತು. ಅಂತಿಮವಾಗಿ 40 ಮಂದಿ ಅಧಿಕಾರಿಗಳ ಪೈಕಿ 15 ಮಂದಿಯನ್ನು ಜೀಪ್‍ನಲ್ಲಿ ಕುಳ್ಳಿರಿಸಿಕೊಂಡು ಹೋದರು.

    ಸಿಬಿಐ ಅಧಿಕಾರಿಗಳು ಬಂದ ವಿಚಾರ ತಿಳಿಯುತ್ತಲೇ ಕೋಪಗೊಂಡ ಮಮತಾ ಬ್ಯಾನರ್ಜಿ ರಾಜೀವ್ ಕುಮಾರ್ ನಿವಾಸಕ್ಕೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿದರು. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ದಂಗೆಗೆ ಕಾರಣವಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಮಮತಾ ಬ್ಯಾನರ್ಜಿ ಪ್ರತಿಭಟನೆಯ ವೇಳೆ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಧರಣಿ ಸ್ಥಳದಲ್ಲಿಯೇ ಕುಳಿತಿದ್ದರು.

    ಸಿಬಿಐ ಹೋಗಿದ್ದು ಯಾಕೆ?
    ಬಂಗಾಳ ಶಾರದಾ ಮತ್ತು ರೋಸ್ ವ್ಯಾಲಿ ಹಗರಣದ ತನಿಖೆಗೆ ವಿಶೇಷ ಪೊಲೀಸ್ ತಂಡ ರಚನೆಯಾಗಿದ್ದು, ಈ ತಂಡದ ನೇತೃತ್ವವನ್ನು ರಾಜೀವ್ ಕುಮಾರ್ ವಹಿಸಿದ್ದರು. ತನಿಖೆ ವಿಳಂಬವಾಗಿದ್ದ ಕಾರಣ ಸಿಬಿಐ ರಾಜೀವ್ ಕುಮಾರ್ ಮೇಲೆಯೇ ಶಂಕೆ ವ್ಯಕ್ತಪಡಿಸಿತ್ತು. ವಿಚಾರಣೆಗೆ ಹಾಜರಾಗುವಂತೆ ಸಿಬಿಐ ರಾಜೀವ್ ಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ಸಿಬಿಐ ರಾಜೀವ್ ಕುಮಾರ್ ಅವರನ್ನು ಬಂಧಿಸಲು ಭಾನುವಾರ ಅವರ ನಿವಾಸಕ್ಕೆ ತೆರಳಿತ್ತು.

    ಸಿಬಿಐ ಹೇಳೋದು ಏನು?
    ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಚಿಟ್‍ಫಂಡ್ ಹಗರಣದ ತನಿಖೆ ನಡೆದಿದೆ. ಈ ತನಿಖೆಗೆ ಯಾರ ಅನುಮತಿಯೂ ಬೇಕಿಲ್ಲ. ಸ್ಥಳೀಯ ಪೊಲೀಸರು ತನಿಖೆಗೆ ಸಹಕಾರ ನೀಡಬೇಕು. ಆದರೆ ನಮ್ಮ ಮನವಿಯನ್ನು ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್‌  ಪಡೆಗಳನ್ನು ಭದ್ರತೆಗೆ ಕರೆಸಿಕೊಂಡಿದ್ದೇವೆ ಎಂದು ಸಿಬಿಐ ನಿರ್ದೇಶಕ ನಾಗೇಶ್ವರ ರಾವ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿಯಿಂದ ಸಿಬಿಐ ದುರ್ಬಳಕೆ, ಪೊಲೀಸ್ ಅಧಿಕಾರಿ ಪರ ಮಮತಾ ಬ್ಯಾನರ್ಜಿ ಬ್ಯಾಟಿಂಗ್

    ಬಿಜೆಪಿಯಿಂದ ಸಿಬಿಐ ದುರ್ಬಳಕೆ, ಪೊಲೀಸ್ ಅಧಿಕಾರಿ ಪರ ಮಮತಾ ಬ್ಯಾನರ್ಜಿ ಬ್ಯಾಟಿಂಗ್

    – ಕೋಲ್ಕತ್ತಾ ಪೊಲೀಸ್ ಆಯುಕ್ತ ವಿಶ್ವದಲ್ಲಿಯೇ ನಂಬರ್ ಒನ್ ಅಧಿಕಾರಿ

    ಕೋಲತ್ತಾ: ಬಿಜೆಪಿಯವರು ರಾಜಕೀಯ ಪ್ರಭಾವನ್ನು ಬಳಸಿ ನಿಷ್ಠಾವಂತ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.

    ಸಿಬಿಐ ಬಂಧನ ಭೀತಿಯಿಂದ ನಾಪತ್ತೆಯಾಗಿರುವ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ಪರವಾಗಿ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ಬಿಜೆಪಿಯವರು ಕೇವಲ ರಾಜಕೀಯ ಪಕ್ಷಗಳ ಮೇಲೆ ಅಷ್ಟೇ ಅಲ್ಲದೆ, ಪೊಲೀಸ್ ಇಲಾಖೆಯ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಈ ಮೂಲಕ ದೇಶದ ಎಲ್ಲಾ ಇಲಾಖೆಗಳನ್ನು ನಾಶ ಮಾಡಲು ಮುಂದಾಗುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

    ಕೋಲ್ಕತ್ತಾ ಪೊಲೀಸ್ ಆಯುಕ್ತರು ವಿಶ್ವದಲ್ಲಿಯೇ ಅತ್ಯುತ್ತಮ ಪೊಲೀಸ್ ಅಧಿಕಾರಿ. ಅವರ ಸಮಗ್ರತೆ, ಧೈರ್ಯ ಹಾಗೂ ಪ್ರಾಮಾಣಿಕತೆ ಪ್ರಶ್ನಾತೀತವಾಗಿದೆ. ರಾಜೀವ್ ಕುಮಾರ್ 24*7 ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಒಂದೇ ಒಂದು ದಿನ ರಜೆ ಪಡೆದಿದ್ದಾರೆ. ನೀವು ಸುಳ್ಳು ಹರಿಬಿಡುತ್ತಿರುವಿರಿ. ಅದು ಮತ್ತಷ್ಟು ಸುಳ್ಳುಗಳನ್ನು ಹುಟ್ಟುಹಾಕುತ್ತಿದೆ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.

    ಆಯುಕ್ತರಿಗೆ ಬಂಧನ ಭೀತಿ ಯಾಕೆ?:
    ರಾಜೀವ್ ಕುಮಾರ್ ಅವರು ಪಶ್ಚಿಮ ಬಂಗಾಳದ 1989ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿದ್ದು ಸದ್ಯ ಕೋಲ್ಕತ್ತಾ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೋಸ್ ವ್ಯಾಲಿ ಹಾಗೂ ಶಾರದಾ ಚಿಟ್ ಫಂಡ್ ಹಗರಣದ ತನಿಖೆಗೆ ಕೋಲ್ಕತ್ತಾ ಪೊಲೀಸ್ ವಿಶೇಷ ತಂಡ ರಚಿಸಿದೆ. ಆದರೆ ತನಿಖೆಯಲ್ಲಿ ರಾಜೀವ್ ಕುಮಾರ್ ಅವರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಸಿಬಿಐ ನೋಟಿಸ್ ಜಾರಿ ಮಾಡಿತ್ತು.

    ರಾಜೀವ್ ಕುಮಾರ್ ಅವರು ಚುನಾವಣಾ ಆಯೋಗದ ಸಭೆಗೂ ಹಾಜರಾಗದೇ ತಪ್ಪಿಸಿಕೊಂಡಿದ್ದರು. ಈ ಸಂಬಂಧ ವರದಿ ನೀಡುವಂತೆ ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೇಳಿತ್ತು. ಆದರೆ ರಾಜೀವ್ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ನಡುವೆ ವಿಚಾರಣೆಗೆ ಹಾಜರಾಗುವಂತೆ ರಾಜೀವ್ ಕುಮಾರ್ ಅವರಿಗೆ ಸಿಬಿಐ ಸಮನ್ಸ್ ಮಾಡಿತ್ತು. ವಿಚಾರಣೆಗೆ ಹಾಜರಾಗದೇ ಇದ್ದರೆ ರಾಜೀವ್ ಕುಮಾರ್ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಸಿಬಿಐ ಮೂಲಗಳು ಆಧಾರಿಸಿ ಮಾಧ್ಯಮಗಳು ವರದಿ ಮಾಡಿದ್ದವು.

    ಬಂಧನ ಭೀತಿಯಿಂದ ರಾಜೀವ್ ಕುಮಾರ್ ಅವರು ವಿಚಾರಣೆಗೆ ಹಾಜರಾಗದೆ ನಾಪತ್ತೆಯಾಗಿದ್ದಾರೆ. ಹೀಗಾಗಿ ಮಮತಾ ಬ್ಯಾನರ್ಜಿ ಅವರು ರಾಜೀವ್ ಕುಮಾರ್ ಅವರ ಬೆಂಬಲಕ್ಕೆ ನಿಂತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv