Tag: Raj Gopi

  • ನಡುವಯಸಿನ ಪಯಣಿಗರಿಗೆ ಹಿರಿಜೀವದ ಬೆಸುಗೆ!

    ನಡುವಯಸಿನ ಪಯಣಿಗರಿಗೆ ಹಿರಿಜೀವದ ಬೆಸುಗೆ!

    ಬೆಂಗಳೂರು: ಅಪ್ಪಟ ಕನ್ನಡದ, ಕೇಳಿದಾಕ್ಷಣವೇ ಆಪ್ತವೆನ್ನಿಸುವ ಶೀರ್ಷಿಕೆಯ ಚಿತ್ರಗಳು ಆಗಾಗ ಗಮನ ಸೆಳೆಯುತ್ತಿರುತ್ತವೆ. ಇದೀಗ ಬಿಡುಗಡೆಗೆ ರೆಡಿಯಾಗಿರುವ ರಾಜ್ ಗೋಪಿ ನಿರ್ದೇಶನದ ಪಯಣಿಗರು ಕೂಡಾ ಅದೇ ಸಾಲಿನಲ್ಲಿ ಸೇರ್ಪಡೆಯಾಗಬಲ್ಲ ಚಿತ್ರ. ಕೊಳನ್ ಕಲ್ ಮಹಾಗಣಪತಿ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಪಯಣಿಗರು ಇದೇ ಏಪ್ರಿಲ್ ಹದಿನೇಳನೇ ತಾರೀಕಿನಂದು ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ.

    ಸಂಸಾರದ ಜವಾಬ್ದಾರಿ ಹೊತ್ತ ಐವರು ನಡುವಯಸಿನ ಸ್ನೇಹಿತರು ಗೋವಾ ಟ್ರಿಪ್ಪಿಗೆ ಹೋಗೋದು ಈ ಕಥೆಯ ಮೂಲ. ನೆಮ್ಮದಿ ಅರಸಿ ಹೊರಡುವ ಈ ಸ್ನೇಹಿತರಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಸ್ವಭಾವ. ಆದರೆ ಅವರಿಗೆ ಬೆಂಗಳೂರಿನಿಂದ ಗೋವಾ ಪ್ರಯಾಣದಲ್ಲಿ ಅನಿರೀಕ್ಷಿತ ಘಟನಾವಳಿಗಳೇ ಪದೇ ಪದೇ ಎದುರಾಗುತ್ತವೆ. ಗೋವಾದಲ್ಲಿಯಂತೂ ಇರುವ ನೆಮ್ಮದಿಯನ್ನೂ ಕಿತ್ತುಕೊಳ್ಳುವಂಥಾ ಘಟನೆಯೊಂದು ನಡೆದು ಇಡೀ ಟೀಮು ಕಂಗಾಲಾಗುತ್ತೆ.

    ಇಂಥಾ ಹೊತ್ತಲ್ಲಿಯೇ ಈ ಪಯಣದಲ್ಲಿ ಅನಿರೀಕ್ಷಿತವಾಗಿ ರಾಮಣ್ಣ ತಾತ ಎಂಬ ಹಿರಿಯ ಕ್ಯಾರೆಕ್ಟರ್ ಒಂದು ಈ ಟೀಮು ಸೇರಿಕೊಳ್ಳುತ್ತದೆಯಂತೆ. ಈ ರಾಮಣ್ಣ ತಾತನ ಪಾತ್ರವನ್ನು ಹಿರಿಯ ನಟ ನಾಗರಾಜ್ ರಾವ್ ನಿರ್ವಹಿಸಿದ್ದಾರಂತೆ. ಎಲ್ಲ ಪಾತ್ರಗಳಂತೆಯೇ ಈ ಪಾತ್ರವೂ ಕೂಡಾ ಎಲ್ಲರನ್ನು ಕಾಡುವಂತೆ ಮೂಡಿ ಬಂದಿದೆಯಂತೆ. ನಿಖರವಾಗಿ ಹೇಳ ಬೇಕೆಂದರೆ, ಪಯಣಿಗರ ಪಯಣ ಪಕ್ಕಾ ಬೇರೆಯದ್ದೇ ಜಾಡಿನದ್ದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.

    ಈ ಚಿತ್ರದಲ್ಲಿ ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ರಾಘವೇಂದ್ರ ಬೂದನೂರು, ಸುಧೀರ್ ಮೈಸೂರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ವಿನು ಮನಸು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಾ ಶಿವಶಂಕರ್ ಛಾಯಾಗ್ರಹಣ ಮತ್ತು ರವಿಚಂದ್ರ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

  • ಗೋವಾ ಟ್ರಿಪ್ ಹೊರಟ ಪಯಣಿಗರ ಟ್ರೇಲರ್ ಅನಾವರಣ

    ಗೋವಾ ಟ್ರಿಪ್ ಹೊರಟ ಪಯಣಿಗರ ಟ್ರೇಲರ್ ಅನಾವರಣ

    ಬೆಂಗಳೂರು: ಈ ಹಿಂದೆ ಸಡಗರ, ಡೀಲ್ ರಾಜ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ರಾಜ್ ಗೋಪಿ ಈಗ ಮತ್ತೊಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಪಯಣಿಗರು ಎಂಬ ವಿಭಿನ್ನ ಶೀರ್ಷಿಕೆ ಹೊಂದಿರುವ ಈ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಬಿಗ್‍ಬಾಸ್ ಹಾಗೂ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಟ್ರೈಲರ್ ಅನಾವರಣಗೊಳಿಸಿದರು. ಜೀವನದಲ್ಲಿ ಸುಖ-ದುಃಖಗಳನ್ನೆಲ್ಲ ಅನುಭವಿಸಿ ನೆಮ್ಮದಿ ಪಡೆಯಲು ಗೋವಾ ಟ್ರಿಪ್ ಹೊರಡುವ ನಾಲ್ವರು ಗೆಳೆಯರ ಕಥೆ ಇದಾಗಿದೆ. ನಲವತ್ತು ದಾಟಿದ ಈ ಸ್ನೇಹಿತರು ಮನೆಯಲ್ಲಿ ಹೆಂಡತಿಯರ ವಿರೋಧದ ನಡುವೆಯೂ ಗೋವಾ ಪಯಾಣ ಆರಂಭಿಸುತ್ತಾರೆ. ನಂತರ ಈ ನಾಲ್ವರ ಜರ್ನಿಯಲ್ಲಿ ಏನೆಲ್ಲಾ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ ಎಂಬುದೇ ಪಯಣಿಗರ ಚಿತ್ರದ ಕಥೆ. ಕೆಂಪಿರುವೆ ಖ್ಯಾತಿಯ ಲಕ್ಷ್ಮಣ್, ಶಿವಶಂಕರ್ ಅಶ್ವಿನ್ ಹಾಸನ್, ರಾಘವೇಂದ್ರ ಹಾಗೂ ಇತರರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಮಾತನಾಡಿದ ರಾಜ್‍ಗೋಪಿ ಅವರವರ ಜೀವನದಲ್ಲಿ ಪ್ರತಿಯೊಬ್ಬರು ಪಯಣಿಗರೇ. ಆ ಪಯಣ ಮುಗಿಯುವವರೆಗೆ ನಾವು ಸಂತೋಷವಾಗಿದ್ದು ಇತರರನ್ನು ಸಂತೋಷವಾಗಿಡಿ ಅನ್ನೋದೆ ಈ ಚಿತ್ರದ ಕಥೆ. ಈ ಚಿತ್ರದಲ್ಲಿ ಲವ್ ಜರ್ನಿ, ಕಾಮಿಡಿ ಜರ್ನಿ ಎರಡೂ ಇದೆ. ಸಂಸಾರದ ನೊಗವನ್ನು ಹೊತ್ತ ಈ ನಾಲ್ವರು ಗೋವಾ ಪ್ರಯಾಣಕ್ಕೆ ಅಲ್ಲಿ ಏನೋ ಒಂದು ಎಡವಟ್ಟಿನಲ್ಲಿ ಸಿಕ್ಕಿಹಾಕಿಕೊಂಡು ಮತ್ತೆ ಅದರಿಂದ ಹೇಗೆ ಹೊರಬರುತ್ತಾರೆ. ಪ್ರತಿಯೊಬ್ಬರ ಜೀವನಕ್ಕೆ ಬೆಲೆ ಕೊಡಬೇಕು, ಕುಟುಂಬಕ್ಕೆ ಬೆಲೆ ಕೊಡಬೇಕು. ಮನೆಯವರಿಗೆ ಒಂದಷ್ಟು ಕಾಲವನ್ನು ಮೀಸಲಿಡಿ ಎಂದು ಈ ಚಿತ್ರದ ಮೂಲಕ ಸಂದೇಶ ಹೇಳಹೊರಟಿದ್ದೇವೆ ಎಂದು ಹೇಳಿದರು. ವಿನು ಮನಸ್ಸು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. 60-70 ಭಾಗದಷ್ಟು ಚಿತ್ರದ ಕಥೆ ಕಾರಿನಲ್ಲೇ ನಡೆಯುತ್ತದೆ.