Tag: R.Lata

  • ನಂದಿಗಿರಿಧಾಮ ಲಾಕ್‍ಡೌನ್ ಮುಕ್ತಾಯ – ಸೆ.7ರಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ

    ನಂದಿಗಿರಿಧಾಮ ಲಾಕ್‍ಡೌನ್ ಮುಕ್ತಾಯ – ಸೆ.7ರಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ

    – ಬೆಳಗ್ಗೆ 8ರಿಂದ ಸಂಜೆ 5ಗಂಟೆಯವರೆಗೆ ಮಾತ್ರ ಅವಕಾಶ

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದ ಲಾಕ್‍ಡೌನ್ ಮುಕ್ತವಾಗಲಿದ್ದು, ಸೆಪ್ಟೆಂಬರ್ 07 ರಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ ಅಂತ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

    ಕೊರೊನಾ ಹರಡುವ ಭೀತಿಯಿಂದ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನ ಬಂದ್ ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಲಾಕ್‍ಡೌನ್ ಆದೇಶ ಮಾಡಿತ್ತು. ಸದ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್‍ಡೌನ್ ಅನ್‍ಲಾಕ್ ಮಾರ್ಗಸೂಚಿ 4.0 ಬಿಡುಗಡೆ ನಂತರ ಜಿಲ್ಲಾಡಳಿತ ನಂದಿಬೆಟ್ಟಕ್ಕೆ ಹೇರಲಾಗಿದ್ದ ಲಾಕ್‍ಡೌನ್ ತೆರವುಗೊಳಿಸಿದೆ. ಇದೇ ತಿಂಗಳ 7ರಿಂದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದು, ಪ್ರತಿದಿನ ಬೆಳಗ್ಗೆ 8ರಿಂದ ಸಂಜೆ 5ಗಂಟೆಯವರೆಗೆ ಮಾತ್ರ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಿ ಸಮಯ ನಿಗದಿ ಮಾಡಿದೆ.

    ಮುಂದಿನ ಸೋಮವಾರದಿಂದ ಪ್ರವಾಸಿಗರಿಗೆ ನಂದಿಬೆಟ್ಟ ಪ್ರವೇಶಕ್ಕೆ ಅವಕಾಶ ಸಿಗುತ್ತಿದ್ದು, ಸಾಕಷ್ಟು ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸುವ ಸಾಧ್ಯತೆಯಿದೆ. ಕೊರೊನಾ ಸೋಂಕಿನ ಆತಂಕದಿಂದ ಮನೆಯಲ್ಲಿದ್ದ ಜನರಿಗೆ ನಂದಿಬೆಟ್ಟದ ಪ್ರಾಕೃತಿಕ ಸೊಬಗು ಸೌಂದರ್ಯ ಸವಿಯುವ ಅವಕಾಶ ಸಿಗುತ್ತಿರೋದು ಸಂತಸ ತಂದಿದೆ.

    ಮಾಸ್ಕ್ ಧರಿಸದಿದ್ರೆ ದಂಡ:
    ನಂದಿಬೆಟ್ಟಕ್ಕೆ ಬರೋ ಪ್ರವಾಸಿಗರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸಿದವರಿಗೆ ಮಾತ್ರ ನಂದಿಬೆಟ್ಟಕ್ಕೆ ಪ್ರವೇಶ ನೀಡಲಾಗುವುದು ಅಂತ ನಂದಿಗಿರಿಧಾಮ ವಿಶೇಷಾಧಿಕಾರಿ ಗೋಪಾಲ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ನಂದಿಬೆಟ್ಟದ ತಪ್ಪಲು ಚೆಕ್‍ಪೋಸ್ಟ್ ಬಳಿಯೇ ಮಾಸ್ಕ್ ಧರಿಸಿರುವ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿ ನಂತರ ಪ್ರವಾಸಿಗರಿಗೆ ನಂದಿಗಿರಿಧಾಮಕ್ಕೆ ಪ್ರವೇಶ ನೀಡಲಾಗುವುದು. ಒಂದು ವೇಳೆ ಪ್ರವೇಶದ ವೇಳೆ ಮಾಸ್ಕ್ ಧರಿಸಿ ತದನಂತರ ಬೆಟ್ಟದ ಮೇಲೆ ಬಂದು ಮಾಸ್ಕ್ ಧರಿಸದೆ ಓಡಾಡಿ ನಿರ್ಲಕ್ಷ್ಯವಹಿಸಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

    ಮಾಸ್ಕ್ ಕಡ್ಡಾಯದ ಜೊತೆಗೆ ಸಾಮಾಜಿಕ ಅಂತರ ಸಹ ಕಾಯ್ದುಕೊಳ್ಳಬೇಕಿದೆ. ಕುಟುಂಬಸ್ಥರು ಹಾಗೂ ಸ್ನೇಹಿತರು ಗುಂಪುಗೂಡಿದರೂ ಸಾಮಾಜಿಕ ಅಂತರದ ಕಡೆ ಗಮನ ಹರಿಸಬೇಕು. ಅನಾವಶ್ಯಕವಾಗಿ ಗುಂಪುಗೂಡಬಾರದು, ಕೊರೊನಾ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ಗೋಪಾಲ್ ಮನವಿ ಮಾಡಿದ್ದಾರೆ. ಇದರ ಜೊತೆಗೆ ನಂದಿಗಿರಿಧಾಮದಲ್ಲಿ ಈಗಾಗಲೇ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್ ನೀರಿನ ಬಾಟಲ್ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನ ಪ್ರವಾಸಿಗರು ತರಬಾರದು ಎಂದು ತಿಳಿಸಿದ್ದಾರೆ.

    ಪ್ರವಾಸಿಗರಿಗೆ ಕುಡಿಯುವ ನೀರು ಓದಗಿಸುವ ಸಲುವಾಗಿ ಆರ್‍ಓ ಪ್ಲಾಂಟ್‍ಗಳನ್ನ ಅಳವಡಿಸಲಾಗುತ್ತಿದೆ. 5 ತಿಂಗಳ ನಂತರ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ಪುನಾರರಂಭವಾಗಲಿದ್ದು, ಪ್ರವಾಸಿಗರು ನಂದಿಬೆಟ್ಟಕ್ಕೆ ಕಾಲಿಡೋಕೆ ತುದಿಗಾಲಲ್ಲಿ ಕಾತುರದಿಂದ ಕಾಯುತ್ತಿದ್ದಾರೆ. ರಾತ್ರಿ ಹಾಗೂ ಬೆಳ್ಳಂಬೆಳಗ್ಗೆಯೇ ಪ್ರವಾಸಿಗರು ಬಂದು ಕಾಯುವುದು ಬೇಡ. 8 ಗಂಟೆಯ ನಂತರ ಪ್ರವಾಸಿಗರು ಬಂದು ನಂದಿಬೆಟ್ಟದ ಸೊಬಗನ್ನ ಸವಿಯುವಂತೆ ಡಿಸಿ ಆರ್.ಲತಾ ಮನವಿ ಮಾಡಿದ್ದಾರೆ. ಒಂದು ವಾರ ಹಾಗೂ 15 ದಿನಗಳ ಕಾಲ ಪ್ರವಾಸಿಗರ ಸಂಖ್ಯೆಯನ್ನ ಅವಲೋಕಿಸಿ ಮುಂದಿನ ದಿನಗಳಲ್ಲಿ ಬೆಳಗ್ಗೆ ಇನ್ನೂ ಬೇಗ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡುವ ಬಗ್ಗೆ ತೀರ್ಮಾನಿಸಲಾಗುವುದು

  • 2 ತಿಂಗಳು ಸಂಘ ಸಂಸ್ಥೆಗಳು ಸಾಲ ಕೇಳಂಗಿಲ್ಲ – ಡಿಸಿ ಆರ್ಡರ್

    2 ತಿಂಗಳು ಸಂಘ ಸಂಸ್ಥೆಗಳು ಸಾಲ ಕೇಳಂಗಿಲ್ಲ – ಡಿಸಿ ಆರ್ಡರ್

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿರುವ ವಿವಿಧ ಸ್ವ-ಸಹಾಯ ಸಂಘಗಳು, ಮಹಿಳಾ ಸ್ವ-ಸಹಾಯ ಸಂಘಗಳು, ಮೈಕ್ರೋ ಫೈನಾನ್ಸ್, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಾಲ ಮರುಪಾವತಿಗೆ ಎರಡು ತಿಂಗಳ ಅವಧಿ ವಿಸ್ತರಣೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ.

    ಅಂದಹಾಗೆ ಜಿಲ್ಲೆಯಾದ್ಯಾಂತ ಮಹಿಳಾ ಸ್ವ-ಸಹಾಯ ಸಂಘಗಳು ಸೇರಿದಂತೆ ಮೈಕ್ರೋ ಫೈನಾನ್ಸ್ ಹಾಗೂ ವಿವಿಧ ಸ್ವ-ಸಹಾಯ ಸಂಘಗಳು ಸಾಲ ಪಾವತಿಗೆ ಒತ್ತಡ ಹೇರಿ ಅನಗತ್ಯ ಕಿರುಕುಳ ನೀಡುತ್ತಿರುವುದು ಕಂಡು ಬಂದಿದೆ. ಹೀಗಾಗಿ ಎಚ್ವೆತ್ತಿರುವ ಜಿಲ್ಲಾಧಿಕಾರಿ ಎರಡು ತಿಂಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಕೂಲಿ ಕಾರ್ಮಿಕರು, ಸಾರ್ವಜನಿಕರು ಮತ್ತು ಮಹಿಳೆಯರು ನಿಟ್ಟುಸಿರು ಬಿಡುವಂತಾಗಿದೆ.

    ಸಾಲ ಮರು ಪಾವತಿಗೆ ಎರಡು ತಿಂಗಳ ಕಾಲಾವಕಾಶ ವಿಸ್ತರಣೆಯಾಗಿದೆ. ಸದ್ಯ ಈ ಎರಡು ತಿಂಗಳು ಸಾಲ ಮರುಪಾವತಿಗೆ ಬ್ರೇಕ್ ಬಿದ್ದಿದ್ದು, ಎರಡು ತಿಂಗಳ ನಂತರ ಸಾಲ ಮರು ಪಾವತಿ ಎಂದಿನಂತೆ ಕಂತುಗಳ ಪ್ರಕಾರ ಪಾವತಿಸಬೇಕಾಗುತ್ತದೆ.

  • ಬಾಡಿಗೆ ಮನೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿರೋವರಿಗೆ ಖಾಲಿ ಮಾಡಿ ಅಂದ್ರೆ ಕೇಸ್: ಡಿಸಿ

    ಬಾಡಿಗೆ ಮನೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿರೋವರಿಗೆ ಖಾಲಿ ಮಾಡಿ ಅಂದ್ರೆ ಕೇಸ್: ಡಿಸಿ

    ಚಿಕ್ಕಬಳ್ಳಾಪುರ: ಹೋಂ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಯ ಕುಟುಂಬ ಒಂದು ವೇಳೆ ಬಾಡಿಗೆ ಮನೆಯಲ್ಲಿದ್ದು, ಮನೆಯ ಮಾಲೀಕರು ಅವರನ್ನು ಮನೆ ಖಾಲಿ ಮಾಡುವಂತೆ ಒತ್ತಡ ಹೇರಿ ಕಿರುಕುಳ ನೀಡುತ್ತಿದ್ದರೆ ಅಂತ ಮಾಲೀಕರ ವಿರುದ್ಧ ಕಠಿಣ ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದು ಡಿಸಿ ಆರ್.ಲತಾ ಹೇಳಿದ್ದಾರೆ.

    ಬಾಡಿಗೆ ಮನೆಯಲ್ಲಿರುವ ಹೋಂ ಕ್ವಾರಂಟೈನ್‍ಗೆ ಒಳಗಾದವರಷ್ಟೇ ಅಲ್ಲದೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಆಶಾ ಕಾರ್ಯಕರ್ತರು, ಶುಶ್ರೂಷಕಿಯರು ಹಾಗೂ ಕೋವಿಡ್-19ರ ನಿಯಂತ್ರಣದಲ್ಲಿ ಕಾರ್ಯನಿರತರೆಲ್ಲರಿಗೂ ಈ ಕಾನೂನು ಅನ್ವಯವಾಗುತ್ತದೆ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಜನರು ಲಾಕ್‍ಡೌನ್‍ಗೆ ಸಹಕರಿಸುತ್ತಿದ್ದಾರೆ. ಮತ್ತಷ್ಟು ಸಹಕಾರದ ಅಗತ್ಯ ಪೊಲೀಸರಿಗೆ ಬೇಕಾಗಿದೆ ಎಂದು ಮನವಿ ಮಾಡಿಕೊಂಡರು. ವರ್ತಕರು, ತರಕಾರಿ ಮಾರಾಟಗಾರರು ಮತ್ತಿತರರು ಅಗತ್ಯ ಸೇವೆಗಳಲ್ಲಿ ತೊಡಗಿದ್ದು ಅವರಿಗೆ ಓಡಾಡಲು ಅವಕಾಶ ನೀಡಿ ಪಾಸ್ ನೀಡಲಾಗುವುದು ಎಂದರು.

    ಹೋಂ ಕ್ವಾರಂಟೈನ್ ನಡಿ ಇರುವವರು ಹೊರಗೆ ಓಡಾಡುವಂತಿಲ್ಲ. ಒಂದು ವೇಳೆ ಅನುಮತಿ ಇಲ್ಲದೆ ಓಡಾಡಿದರೆ ಅಂತವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ದಿನಸಿ, ಹಾಲು, ಔಷಧಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಲಭ್ಯವಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಸಾಮಾಜಿಕ ಅಂತರವನ್ನು ಕಾಪಾಡುವುದು ಅತ್ಯಗತ್ಯ ಎಂದು ತಿಳಿಸಿದರು.