Tag: punjab

  • ವಿಡಿಯೋ: ಹಾಡಹಗಲೇ ನಡುರಸ್ತೆಯಲ್ಲಿ ಹಿಂದೂ ಸಂಘರ್ಷ ಸೇನೆ ಮುಖಂಡನಿಗೆ ಗುಂಡಿಟ್ಟು ಕೊಲೆ

    ವಿಡಿಯೋ: ಹಾಡಹಗಲೇ ನಡುರಸ್ತೆಯಲ್ಲಿ ಹಿಂದೂ ಸಂಘರ್ಷ ಸೇನೆ ಮುಖಂಡನಿಗೆ ಗುಂಡಿಟ್ಟು ಕೊಲೆ

    ಚಂಡೀಗಢ: ಹಿಂದೂ ಸಂಘರ್ಷ ಸೇನೆ ಮುಖಂಡರೊಬ್ಬರನ್ನು ನಡುರಸ್ತೆಯಲ್ಲೇ ಗುಂಡಿಕ್ಕಿ ಕೊಲೆ ಮಾಡಿರೋ ಆಘಾತಕಾರಿ ಘಟನೆ ಪಂಜಾಬ್‍ನ ಅಮೃತ್‍ಸರ್‍ನಲ್ಲಿ ಸೋಮವಾರದಂದು ನಡೆದಿದೆ.

    ಹಿಂದೂ ಸಂಘರ್ಷ ಸೇನೆಯ ಜಿಲ್ಲಾ ಮುಖ್ಯಸ್ಥರಾದ ವಿಪಿನ್ ಕುಮಾರ್ ಕೊಲೆಯಾದ ವ್ಯಕ್ತಿ. ಇಲ್ಲಿನ ಭರತ್‍ನಗರದ ಮಾರ್ಕೆಟ್‍ನಲ್ಲಿ ಹಾಡಹಗಲೇ ಕೊಲೆ ನಡೆದಿದ್ದು, ಘಟನೆಯ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕುಮಾರ್ ಅವರು ಬೈಕ್‍ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರ ಜೊತೆ ಮಾತನಾಡುತ್ತಿದ್ದಾಗ ಏಕಾಏಕಿ ಗುಂಡೇಟು ಬಿದ್ದಿದೆ. ಕೂಡಲೇ ಕುಮಾರ್ ಕೆಳಗೆ ಬಿದ್ದಿದ್ದಾರೆ. ಕುಮಾರ್ ಜೊತೆಗಿದ್ದ ಮತ್ತೋರ್ವ ವ್ಯಕ್ತಿ ಸ್ಥಳದಿಂದ ಓಡಿಹೋಗಿದ್ದಾರೆ. ನಂತರ ಇಬ್ಬರು ದುಷ್ಕರ್ಮಿಗಳು ಬಂದು ಕುಮಾರ್ ಅವರ ಮೇಲೆ ಮತ್ತೆ ಗುಂಡಿನ ದಾಳಿ ನಡೆದಿದ್ದಾರೆ. ಆರೋಪಿಗಳು ಕುಮಾರ್ ಅವರ ಮೇಲೆ ಸುಮಾರು 5 ಸುತ್ತು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.

    ಘಟನೆಯ ಬಳಿಕ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಕುಮಾರ್ ಅವರು ಹಿಂದೂ ಸಂಘರ್ಷ ಸೇನೆಯ ಮುಖಂಡರು ಮಾತ್ರವಲ್ಲದೆ ಬಡವರಿಗೆ ಆಹಾರ ನೀಡೋ ಕೆಲಸ ಮಾಡುವ ಜೈ ಶಂಕರ್ ವೆಲ್ಫೇರ್ ಸಸೈಟಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    https://www.youtube.com/watch?v=OVyek18dW_s

  • ಪ್ರಾಣಿಗಳನ್ನು ಮನೆಯಲ್ಲಿ ಸಾಕಲು 250, 500 ರೂ. ಪಾವತಿಸಬೇಕು!

    ಪ್ರಾಣಿಗಳನ್ನು ಮನೆಯಲ್ಲಿ ಸಾಕಲು 250, 500 ರೂ. ಪಾವತಿಸಬೇಕು!

    ಚಂಡೀಘಡ: ಪಂಜಾಬ್ ನಲ್ಲಿನ್ನು ಸಾಕು ಪ್ರಾಣಿಗಳನ್ನು ಮನೆಯಲ್ಲಿಟ್ಟುಕೊಳ್ಳೋದಿಕ್ಕೂ ತೆರಿಗೆ ಪಾವತಿಸಬೇಕು. ಹೌದು, ಇನ್ನು ಮುಂದೆ ಸಾಕು ಪ್ರಾಣಿಗಳನ್ನು ಮನೆಯಲ್ಲಿಟ್ಟಿರುವ ಮಾಲೀಕರು ವರ್ಷಕ್ಕೆ 250 ಹಾಗೂ 500 ರೂ. ತೆರಿಗೆ ಪಾವತಿಸಬೇಕು.

    ಸ್ಥಳೀಯಾಡಳಿತ ಸಂಸ್ಥೆಗಳ ಸಚಿವ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಈ ಬಗ್ಗೆ ನೋಟಿಸ್ ಹೊರಡಿಸಿದ್ದಾರೆ.

    ನಾಯಿ, ಬೆಕ್ಕು, ಹಂದಿ, ಕುರಿ, ಜಿಂಕೆ ಇತ್ಯಾದಿ ಸಾಕು ಪ್ರಾಣಿಗಳನ್ನು ಸಾಕುವವರು ಒಂದು ವರ್ಷಕ್ಕೆ 250 ರೂಪಾಯಿ ತೆರಿಗೆಯನ್ನು ಪಾವತಿಸಬೇಕು. ಎಮ್ಮೆ, ಗೂಳಿ, ಹಸು, ಒಂಟೆ, ಆನೆಯಂತಹ ಸಾಕು ಪ್ರಾಣಿಗಳಿಗೆ ಪ್ರತಿಯೊಂದು ಪ್ರಾಣಿಗೂ ಒಂದು ವರ್ಷಕ್ಕೆ 500 ರೂಪಾಯಿಗಳನ್ನು ಪಾವತಿಸುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.

    ಎಲ್ಲಾ ಸಾಕು ಪ್ರಾಣಿಗಳಿಗೂ ಗುರುತು ಅಥವಾ ಸಂಖ್ಯೆಯನ್ನು ನೀಡಿ, ಮೈಕ್ರೋಚಿಪ್ ಗಳನ್ನು ಅಳವಡಿಸಲಾಗುವುದು ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.

    ಇದರ ಜೊತೆಗೆ ಪ್ರಾಣಿಗಳನ್ನು ಸಾಕಬೇಕಾದರೆ ಕಡ್ಡಾಯವಾಗಿ ಅಧಿಕಾರಿಗಳಿಂದ ಲೈಸೆನ್ಸ್ ಪಡೆಯಬೇಕು. ನಂತರ ಪ್ರತಿ ವರ್ಷವು ಲೈಸೆನ್ಸ್ ನವೀಕರಿಸಬೇಕು ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.

     

  • ಪಂಜಾಬ್ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸೋಲಿಗೆ ಕಾರಣವೇನು?

    ಪಂಜಾಬ್ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸೋಲಿಗೆ ಕಾರಣವೇನು?

    ಚಂಡೀಗಢ: ಪಂಜಾಬ್‍ನ ಗುರ್‍ದಾಸಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸ್ವರನ್ ಸಲಾರಿಯಾ ಸೋಲು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಆಡಳಿತ ರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಜಾಕರ್ ಭರ್ಜರಿ ಗೆಲುವನ್ನು ಪಡೆದಿದ್ದಾರೆ.

    ಕಾಂಗ್ರೆಸ್ ಪಕ್ಷದ ಈ ಗೆಲುವನ್ನು ಕೇಂದ್ರದಲ್ಲಿರುವ ಎನ್‍ಡಿಎ ಸರ್ಕಾರದ ಆಡಳಿತದ ವಿರುದ್ಧದ ಜನಭಿಪ್ರಾಯ ಇದಾಗಿದ್ದು, ಈ ಮೂಲಕ ಗುರ್ದಾಸ್‍ಪುರ ಕ್ಷೇತ್ರದ ಜನರು ಕೇಂದ್ರ ಸರ್ಕಾರದ ಆಡಳಿತ ಬಗ್ಗೆ ತಮ್ಮ ಅಸಮಧಾನವನ್ನು ಹೊರ ಹಾಕಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಅದರೆ ಮಧ್ಯೆ ಹೊಸ ಅಂಶವೊಂದು ಬೆಳಕಿಗೆ ಬಂದಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ಸ್ವರನ್ ಅವರ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣವೇ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.

    ಆರೋಪವೇನು? ಸ್ವರನ್ ಅವರ ವಿರುದ್ಧ 45 ವರ್ಷದ ಮುಂಬೈ ಮೂಲದ ಮಹಿಳೆ ಎಂಬವರು ಲೈಂಗಿಕ ದೌಜನ್ಯದ ದೂರನ್ನು ದಾಖಲು ಮಾಡಿದ್ದರು. ಅಲ್ಲದೇ ಅವರಿಬ್ಬರ ನಡುವಿನ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯನ್ನು ಗೊಳಿಸಿದ್ದರು. ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿರುವಂತೆ ತಮ್ಮನ್ನು ಮದುವೆಯಾಗುವುದಾಗಿ ಮಾತು ನೀಡಿ, 1982 ರಿಂದ 2014 ವರೆಗೇ ಸುಮಾರು 32 ವರ್ಷಗಳ ಕಾಲ ತಮ್ಮ ಮೇಲೆ ದೌರ್ಜನ್ಯವನ್ನು ಎಸಗಿದ್ದಾರೆ. ಅಲ್ಲದೆ ಆ ಅವಧಿಯಲ್ಲಿ ತಾವು ವಾಸಿಸಲು ಒಂದು ಫ್ಲಾಟ್ ಸಹ ನೀಡಿದ್ದರು ಎಂದು ತಿಳಿಸಿದ್ದರು.

    ಆದರೆ ಮಹಿಳೆಯ ಆರೋಪವನ್ನು ಸ್ವರನ್ ನಿರಾಕರಿಸಿದ್ದರು. ತಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರಲು ಈ ರೀತಿ ದೂರು ನೀಡಿದ್ದಾರೆ ಎಂದು ತಿಳಿಸಿದ್ದರು. ಸ್ವರನ್ ಮೂಲತಃ ಮುಂಬೈನ ಉದ್ಯಮಿಯಾಗಿದ್ದಾರೆ.

    ಸ್ವರನ್ ಅವರು ಚುನಾವಣೆ ಆಯೋಗಕ್ಕೆ ನಾಮಪತ್ರ ಸಲ್ಲಿಕೆ ವೇಳೆ ಈ ವಿಷಯವನ್ನು ಮುಚ್ಚಿಟ್ಟಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು. ಪಂಜಾಬ್ ಹಣಕಾಸು ಸಚಿವ ಮನ್‍ಪ್ರೀತ್ ಸಿಂಗ್ ಬಾದಲ್ ಈ ಕುರಿತು ಪ್ರತಿಕ್ರಿಯೆಯನ್ನು ನೀಡಿದ್ದು, ಬಿಜೆಪಿಯ ಅಭ್ಯರ್ಥಿಯ ವಿರುದ್ಧ 2014 ಡಿಸೆಂಬರ್ 15ರಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ)ಯ 376, 420 ಮತ್ತು 306 ರ ಸೆಕ್ಷನ್‍ಗಳ ಪ್ರಕಾರ ದೂರು ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಸುನಿಲ್ ಜಾಕರ್ ಅವರು ಒಟ್ಟು 4,99,752 ಮತಗಳನ್ನು ಗಳಿಸಿದ್ದು, ಬಿಜೆಪಿಯ ಸಲಾರಿಯಾ 3,06,533 ಮತ ಪಡೆದರೆ, ಆಪ್ ಅಭ್ಯರ್ಥಿ ಖಜುರಿಯಾ 23,579 ಮತಗಳನ್ನು ಗಳಿಸಿದ್ದಾರೆ. ಹಿರಿಯ ನಟ ಮತ್ತು ಸಂಸದರಾಗಿದ್ದ ವಿನೋದ್ ಖನ್ನಾ ಸಾವಿನ ಬಳಿಕ ಗುರುದಾಸ್‍ಪುರ ಲೋಕಸಭಾ ಕ್ಷೇತ್ರ ತೆರವಾಗಿತ್ತು. ವಿನೋದ್ ಖನ್ನಾ ಬಿಜೆಪಿ ಅಭ್ಯರ್ಥಿಯಾಗಿ ಗೆಲುವನ್ನು ಪಡೆದುಕೊಂಡಿದ್ದರು.

  • ಪಂಜಾಬ್ ಉಪಚುನಾವಣೆ ಕಾಂಗ್ರೆಸ್ ತೆಕ್ಕೆಗೆ-ಬಿಜೆಪಿಗೆ ಭಾರೀ ಮುಖಭಂಗ

    ಪಂಜಾಬ್ ಉಪಚುನಾವಣೆ ಕಾಂಗ್ರೆಸ್ ತೆಕ್ಕೆಗೆ-ಬಿಜೆಪಿಗೆ ಭಾರೀ ಮುಖಭಂಗ

    ಚಂಡೀಗಢ: ಪಂಜಾಬ್ ನ ಗುರ್‍ದಾಸ್‍ಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ರಾಜಕೀಯ ವಲಯದಲ್ಲಿ ಭಾರೀ ಕೂತೂಹಲವನ್ನು ಹುಟ್ಟುಹಾಕಿತ್ತು. ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಆಡಳಿತ ರೂಢ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವನ್ನು ಪಡೆದುಕೊಂಡಿದೆ.

    ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಾಕರ್ ತಮ್ಮ ಪ್ರತಿ ಸ್ಪರ್ಧಿ ಬಿಜೆಪಿಯ ಸ್ವರನ್ ಸಲಾರಿಯಾ ಅವರಿಂದ ಸುಮಾರು 1,93,219 ಮತಗಳ ಅಂತರದಿಂದ ಗೆಲುವನ್ನು ಪಡೆದಿದ್ದಾರೆ. ಕೇಂದ್ರದಲ್ಲಿಯ ಎನ್‍ಡಿಎ ಸರ್ಕಾರದ ಆಡಳಿತದ ಜನಮತಸಂಗ್ರಹ ಇದಾಗಿದ್ದು, ಗುರ್‍ದಾಸ್‍ಪುರ ಕ್ಷೇತ್ರದ ಜನರು ಕೇಂದ್ರದಲ್ಲಿರುವ ಸರ್ಕಾರದ ಆಡಳಿತ ವಿರುದ್ಧ ತಮ್ಮ ಅಸಮಧಾನವನ್ನು ಹೊರ ಹಾಕಿದ್ದಾರೆ ಎಂದು ಸುನಿಲ್ ಜಾಕರ್ ತಿಳಿಸಿದ್ದಾರೆ.

    ಕೇವಲ ಆರು ತಿಂಗಳು ಹಿಂದೆ ರಾಜ್ಯ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಪಕ್ಷಕ್ಕೆ ಗುರ್‍ದಾಸ್‍ಪುರ ಉಪ ಚುನಾವಣೆ ಪ್ರತಿಷ್ಠೆಯ ಕಣವಾಗಿ ಏರ್ಪಟ್ಟಿತ್ತು. ಇನ್ನೂ ಬಿಜೆಪಿಗೂ ಉಪಚುನಾವಣೆ ಗೆಲ್ಲುವುದು ಅನಿವಾರ್ಯವಾಗಿತ್ತು. ಆಪ್ ಸಹ ತನ್ನಪಕ್ಷದಿಂದ ನಿವೃತ್ತ ಮೇಜರ್ ಜನರಲ್ ಸುರೇಶ್ ಖಜುರಿಯಾ ಅವರನ್ನು ಕಣಕ್ಕೀಳಿಸಿತ್ತು. ಆದರೆ ಖಜುರಿಯಾ ಕೇವಲ 23,579 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಸುನಿಲ್ ಜಾಕರ್ ಅವರು ಒಟ್ಟು 4,99,752 ಮತಗಳನ್ನು ಗಳಿಸಿದ್ದು, ಬಿಜೆಪಿಯ ಸಲಾರಿಯಾ 3,06,533 ಮತ ಪಡೆದರೆ, ಆಪ್ ಅಭ್ಯರ್ಥಿ ಖಜುರಿಯಾ 23,579 ಮತಗಳನ್ನು ಗಳಿಸಿದ್ದಾರೆ.

    ಹಿರಿಯ ನಟ ಮತ್ತು ಸಂಸದರಾಗಿದ್ದ ವಿನೋದ್ ಖನ್ನಾ ಸಾವಿನ ಬಳಿಕ ಗುರುದಾಸ್‍ಪುರ ಲೋಕಸಭಾ ಕ್ಷೇತ್ರ ತೆರವಾಗಿತ್ತು. ವಿನೋದ್ ಖನ್ನಾ ಬಿಜೆಪಿ ಅಭ್ಯರ್ಥಿಯಾಗಿ ಗೆಲುವನ್ನು ಪಡೆದುಕೊಂಡಿದ್ದರು. ಪಂಜಾಬ್ ಮುಖ್ಯಮಂತ್ರಿ ಆಗಿರುವ ಅಮರಿಂದರ್ ಸಿಂಗ್ ಅವರು ಸುಬಿಲ್ ಜಾಕರ್ ಅವರಿಗೆ ಶುಭಾಶಯವನ್ನು ತಿಳಿಸಿದ್ದಾರೆ.

    ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಸಚಿವ ಹಾಗೂ ಮಾಜಿ ಕ್ರಿಕೆಟಿಗ ಇದು ರಾಹುಲ್ ಗಾಂಧಿ ಅವರಿಗೆ ದೀಪಾವಳಿಯ ಉಡುಗೊರೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

  • ಹಾಡಹಗಲೇ ಉದ್ಯಮಿ ಶೂಟೌಟ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಹಾಡಹಗಲೇ ಉದ್ಯಮಿ ಶೂಟೌಟ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಫರೀದ್‍ಕೋಟ್: ಹಾಡಹಗಲೇ ಉದ್ಯಮಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ಪಂಜಾಬ್‍ನ ಫರೀದ್‍ಕೋಟ್‍ನಲ್ಲಿ ನಡೆದಿದೆ.

    ಸ್ಥಳೀಯ ಉದ್ಯಮಿಯಾದ ರವೀಂದರ್ ಪಪ್ಪು ಕೊಚ್ಚರ್ ಮೃತ ದುರ್ದೈವಿ. ಭಾನುವಾರ ಮಧ್ಯಾಹ್ನ ಸುಮಾರು 3ಗಂಟೆ ವೇಳೆಯಲ್ಲಿ ರವೀಂದರ್ ಅವರನ್ನ ಅವರ ಮಿಲ್ ಹೊರಗಡೆ ಗುಂಡಿಟ್ಟು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಫರೀದ್‍ಕೋಟ್ ಜಿಲ್ಲೆಯ ಜೈತೋ ನಗರದ ಸ್ಥಳೀಯ ಗ್ಯಾಂಗ್‍ವೊಂದರ ಸದಸ್ಯ ಎನ್ನಲಾಗಿದೆ.

    ರವೀಂದರ್ ಅವರು ಮಿಲ್‍ನ ಗೇಟ್ ಹೊರಗಡೆ ಕಾರ್ ನಿಲ್ಲಿಸುತ್ತಿದ್ದಂತೆ ಹಿಂದಿನಿಂದ ಬಿಳಿ ಬಣ್ಣದ ಸ್ವಿಫ್ಟ್ ಡಿಸೈರ್ ಕಾರ್ ಬಂದಿದೆ. ಕೂಡಲೇ ವ್ಯಕ್ತಿಯೊಬ್ಬ ಕಾರಿನಿಂದ ಕೆಳಗಿಳಿದು ಡ್ರೈವರ್ ಸೀಟ್‍ನ ಕಿಟಕಿ ಮೂಲಕವೇ ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ. ವ್ಯಕ್ತಿ ಸತ್ತಿದ್ದಾರೆ ಎಂಬುದನ್ನ ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ 5ನೇ ಬಾರಿಗೆ ಗುಂಡು ಹಾರಿಸಿ ಕಾರ್ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರವೀದರ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ತಲೆ ಹಾಗೂ ಕತ್ತಿನ ಭಾಗಕ್ಕೆ ಗುಂಡು ತಗುಲಿದ್ದವು ಎಂದು ಪೊಲೀಸರು ಹೇಳಿದ್ದಾರೆ.

    ಸಿಸಿಟಿವಿ ದೃಶ್ಯಾವಳಿಯ ಪ್ರಕಾರ ದಾಳಿಕೋರ ವ್ಯಕ್ತಿಯ ಕಾರಿನಲ್ಲಿ ಇಬ್ಬರು ಇದ್ದರು. ಒಬ್ಬ ಚಾಲಕನ ಸೀಟ್‍ನಲ್ಲಿ ಕುಳಿತಿದ್ದ. ಮತ್ತೊಬ್ಬ ಕಾರಿನಿಂದ ಕೆಳಗಿಳಿದು ಬಂದು ಗುಂಡು ಹಾರಿಸಿದ್ದಾನೆ. ವಾಹನದ ಗುರುತು ಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಫರೀದ್‍ಕೋಟ್‍ನ ಎಸ್‍ಎಸ್‍ಪಿ ನಾನಕ್ ಸಿಂಗ್ ಹೇಳಿದ್ದಾರೆ. ಐಪಿಸಿ ಸೆಕ್ಷನ್ 302ರ ಅಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

    ಇದೇ ವರ್ಷ ಫೆಬ್ರವರಿಯಲ್ಲಿ ಮೂವರು ಗ್ಯಾಂಗ್‍ಸ್ಟರ್‍ಗಳು ಮಿಲ್ ಹೊರಗಡೆ ಗಾಳಿಯಲ್ಲಿ ಗುಂಡು ಹಾರಿಸಿ, ರವೀಂದರ್ ಅವರ ಕಾರಿನೊಂದಿಗೆ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ರವೀಂದರ್ ಅವರು ಆ ಗ್ಯಾಂಗ್‍ಸ್ಟರ್‍ಗಳಿಗೆ ಸುಲಿಗೆ ಹಣ ನೀಡಲು ನಿರಾಕರಿಸಿದ್ರು. ಅವರ ಪ್ರಾಣಕ್ಕೆ ಅಪಾಯವಿದ್ದಿದ್ದರಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮೂವರನ್ನ ಬಂಧಿಸಲಾಗಿತ್ತು. ಒಂದು ವಾರದ ನಂತರ ಮೊಗಾದಲ್ಲಿ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು ಎಂದಿದ್ದಾರೆ. ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಇದೇ ತಂಡ ಮತ್ತೆ ದಾಳಿ ನಡೆಸಿರಬಹುದು ಎನ್ನಲಾಗಿದೆ.

    ರವೀಂದರ್ ಅವರ ಪ್ರಾಣಕ್ಕೆ ಅಪಾಯವಿದ್ದರೂ ಸೂಕ್ತ ಭದ್ರತೆ ಒದಗಿಸಿರಲಿಲ್ಲ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಫೆಬ್ರವರಿಯಲ್ಲಿ ನಡೆದ ಘಟನೆಯ ನಂತರವೂ ನಮ್ಮ ಅಣ್ಣನಿಗೆ ಪೊಲೀಸ್ ಭದ್ರತೆ ಯಾಕೆ ನೀಡಲಿಲ್ಲ? ಅವರಿಗಾದ ಗತಿ ನೋಡಿ ನಮಗೂ ಜೀವಭಯವಾಗುತ್ತಿದೆ ಎಂದು ಮೃತ ರವೀಂದರ್ ಅವರ ಸಹೋದರ ನರೇಂದರ್ ಸಿಂಗ್ ಕೊಚ್ಚರ್ ಹೇಳಿದ್ದಾರೆ.

  • ಕೇವಲ 2 ರೂಪಾಯಿಗಾಗಿ ಅಂಗಡಿಯವನಿಗೆ ಚಾಕುವಿನಿಂದ ಇರಿದ!

    ಕೇವಲ 2 ರೂಪಾಯಿಗಾಗಿ ಅಂಗಡಿಯವನಿಗೆ ಚಾಕುವಿನಿಂದ ಇರಿದ!

    ಲುಧಿಯಾನ: ಕೇವಲ 2 ರೂಪಾಯಿಗಾಗಿ ನಡೆದ ಜಗಳದಲ್ಲಿ ಗ್ರಾಹಕನೊಬ್ಬ ಅಂಡಗಿಯವನಿಗೆ ಚಾಕುವಿನಿಂದ ಇರಿದ ಘಟನೆ ಪಂಜಾಬ್‍ನ ಸರಾಬಾ ನಗರದಲ್ಲಿ ನಡೆದಿದೆ.

    ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯನ್ನು ರೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ರೋಹಿತ್‍ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸೋಮವಾರ ಸಂಜೆ ನನ್ನ ಸಂಬಂಧಿಯಾದ ರೋಹಿತ್ ಕುಮಾರ್ ಸಹಾಯ ಮಾಡಲೆಂದು ಅಂಗಡಿಗೆ ಬಂದರು. ಆಗ ಒಬ್ಬ ಗ್ರಾಹಕ ಬಂದು ಸಿಗರೇಟ್ ಖರೀದಿಸಿ 10 ರೂ. ಕೊಟ್ಟ. ಇನ್ನೂ 2 ರೂ. ಕೊಡಬೇಕು ಎಂದು ರೋಹಿತ್ ಕೇಳಿದ. ಆದ್ರೆ ಆ ಗ್ರಾಹಕ 2 ರೂ. ಕೊಡಲು ನಿರಾಕರಿಸಿದ. ಇಬ್ಬರ ನಡುವೆ ವಾಗ್ವಾದ ನಡೆದು ಗ್ರಾಹಕ ಚಾಕವಿನಿಂದ ರೋಹಿತ್‍ಗೆ ಇರಿದು ಪರಾರಿಯಾದ ಎಂದು ಅಂಗಡಿ ಮಾಲೀಕ ಸುನಿಲ್ ಕುಮಾರ್ ಹೇಳಿದ್ದಾರೆ.

    ಈ ಬಗ್ಗೆ ಸರಾಬಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗಾಗಿ ಹತ್ತಿರದ ಸಿಸಿಟಿವಿಗಳನ್ನ ಪರೀಶೀಲನೆ ಮಾಡ್ತಿದ್ದಾರೆ.

  • ವಿಡಿಯೋ: ಹೆಣ್ಣುಮಗು ಹೆತ್ತಿದಕ್ಕೆ ಪತಿ ಮನೆಯವರಿಂದ ಮಹಿಳೆ ಮೇಲೆ ಹಾಕಿಸ್ಟಿಕ್‍ನಿಂದ ಹಲ್ಲೆ

    ವಿಡಿಯೋ: ಹೆಣ್ಣುಮಗು ಹೆತ್ತಿದಕ್ಕೆ ಪತಿ ಮನೆಯವರಿಂದ ಮಹಿಳೆ ಮೇಲೆ ಹಾಕಿಸ್ಟಿಕ್‍ನಿಂದ ಹಲ್ಲೆ

    ಪಂಜಾಬ್: ಹೆಣ್ಣು ಮಗುವನ್ನು ಹೆತ್ತಿದ್ದಕ್ಕೆ ಮಹಿಳೆಯೊಬ್ಬರನ್ನು ಆಕೆಯ ಪತಿ ಮನೆಯವರು ಮನಸೋ ಇಚ್ಛೆ ಥಳಿಸಿರುವ ಘಟನೆ ಪಂಜಾಬ್‍ನ ಪಾಟಿಯಾಲದಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.

    ಪಾಟಿಯಾಲ ನಿವಾಸಿ ಮೀನಾ ಕಶ್ಯಪ್ ಎಂಬವರು ಹಲ್ಲೆಗೊಳಗಾದ ಮಹಿಳೆ. ಮೀನಾ ದಲ್ಜೀತ್ ಸಿಂಗ್ ಎಂಬವರನ್ನು ಮದುವೆ ಆಗಿದ್ದರು. ಇತ್ತೀಚೆಗೆ ಮೀನಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

    ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಮನೆಯವರಿಗೆ ಇಷ್ಟವಿರದ ಕಾರಣ ಹಾಗೂ ವರದಕ್ಷಿಣೆಗಾಗಿ ಮೀನಾ ಅವರ ಗಂಡನ ಸಹೋದರ ಮತ್ತು ಆತನ ಸ್ನೇಹಿತರು ಸೇರಿ ಮಹಿಳೆಗೆ ಥಳಿಸಿದ್ದಾರೆ ಎಂದು ವರದಿಯಾಗಿದೆ.

    ಹೆಣ್ಣು ಮಗುವನ್ನ ತಿರಸ್ಕರಿಸಿದ್ದಕ್ಕೆ ಹಾಗೂ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಕಾರಣ ಮೀನಾ ಹಾಗೂ ದಲ್ಜೀತ್ ಸಿಂಗ್ ಪತ್ಯೇಕವಾಗಿ ವಾಸವಿದ್ದರು. ಬಳಿಕ ದಲ್ಜೀತ್ ಸಹೋದರ ಹಾಗೂ ಸ್ನೇಹಿತರು ಬಂದು ಹಾಕಿಸ್ಟಿಕ್‍ನಿಂದ ಮೀನಾ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

    ಈ ಬಗ್ಗೆ ನಾವು ಕಳೆದ ವರ್ಷವೇ ದೂರು ನೀಡಿದ್ದೆವು. ಆದ್ರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಎರಡು ವರ್ಷಗಳ ಹಿಂದೆ ಇವರ ಮದುವೆಯಾಗಿದ್ದು ಹೆಣ್ಣು ಮಗು ಇದೆ. ಅವರ ಕುಟುಂಬ 7 ಲಕ್ಷ ರೂ. ವರದಕ್ಷಿಣೆ ಕೇಳಿದ್ರು ಎಂದು ಮೀನಾ ಅವರ ತಂದೆ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

    ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

  • ಯಾವ ರಾಜ್ಯದಲ್ಲಿ ಎಷ್ಟು ಸಾಲಮನ್ನಾ? ಕೇಂದ್ರ ಸರ್ಕಾರ ಮತ್ತು ಆರ್‍ಬಿಐ ಹೇಳಿದ್ದು ಏನು?

    ಯಾವ ರಾಜ್ಯದಲ್ಲಿ ಎಷ್ಟು ಸಾಲಮನ್ನಾ? ಕೇಂದ್ರ ಸರ್ಕಾರ ಮತ್ತು ಆರ್‍ಬಿಐ ಹೇಳಿದ್ದು ಏನು?

    ಬೆಂಗಳೂರು: ಕೊನೆಗೂ ರೈತರ ಮತ್ತು ವಿಪಕ್ಷಗಳ ಹೋರಾಟಕ್ಕೆ ಕರ್ನಾಟಕ ಸರ್ಕಾರ ಬಗ್ಗಿದ್ದು, ಸಹಕಾರಿ ಬ್ಯಾಂಕ್ ಗಳಲ್ಲಿನ ರೈತರ 50 ಸಾವಿರ ರೂ.ವರೆಗಿನ ಸಾಲವನ್ನು ಮನ್ನಾ ಮಾಡಿದೆ.

    ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಕಟಿಸಿದ ಸಿಎಂ ಸಿದ್ದರಾಮಯ್ಯ, ಸಾಲಮನ್ನಾದಿಂದ ರಾಜ್ಯ ಸರ್ಕಾರಕ್ಕೆ 8,165 ಕೋಟಿ ರೂ. ಹೊರೆಯಾಗಲಿದ್ದು, 22,27,506 ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

    4ನೇ ರಾಜ್ಯ: ಆರಂಭದಲ್ಲಿ ಉತ್ತರಪ್ರದೇಶದ ಯೋಗಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದರೆ, ಜೂನ್ ಎರಡನೇ ವಾರದಲ್ಲಿ ಮಹಾರಾಷ್ಟ್ರದಲ್ಲಿರುವ ಬಿಜೆಪಿ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿತ್ತು. ಇದಾದ ನಂತರ ಪಂಜಾಬ್‍ನಲ್ಲಿರುವ ಕಾಂಗ್ರೆಸ್ ಸರ್ಕಾರ ಸಾಲಮನ್ನಾ ನಿರ್ಣಯ ತೆಗೆದುಕೊಂಡ ಬಳಿಕ ಈಗ ಸಿದ್ದರಾಮಯ್ಯನವರು ಸಹಕಾರಿ ಬ್ಯಾಂಕ್ ಗಳಲ್ಲಿರುವ ಸಾಲವನ್ನು ಮನ್ನಾ ಮಾಡಲು ಮುಂದಾಗಿದ್ದಾರೆ.

    ಉತ್ತರಪ್ರದೇಶ: ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಏಪ್ರಿಲ್ 4ರಂದು ನಡೆಸಿದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ರೈತರ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಪ್ರಕಟಿಸಿದ್ದರು. 2.25 ಕೋಟಿ ರೈತರಿಗೆ ಇದರಿಂದ ಅನುಕೂಲವಾಗಲಿದ್ದು, ಸರ್ಕಾರಕ್ಕೆ 36 ಸಾವಿರ ಕೋಟಿ ಹೊರೆಯಾಗಲಿದೆ.

    ಮಹಾರಾಷ್ಟ್ರ: ಸಾಲಮನ್ನಾ ಮಾಡುವಂತೆ ರೈತರು ಪ್ರತಿಭಟನೆ ತೀವ್ರವಾದ ಬಳಿಕ ಸಿಎಂ ಫಡ್ನಾವಿಸ್ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಈ ಸಂಬಂಧ ಜೂನ್ 11 ರಂದು ಸಾಲಮನ್ನಾ ಮಾನದಂಡಕ್ಕೆ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ. ಕಡಿಮೆ ಭೂಮಿ ಹೊಂದಿರುವ ರೈತರ ಸಾಲವನ್ನು ಅಕ್ಟೋಬರ್ 31ರ ಒಳಗಡೆ ಮನ್ನಾ ಮಾಡುತ್ತೇವೆ ಅದರ ಜೊತೆ ವಿದ್ಯುತ್ ಬಿಲ್ ಬಾಕಿ ಇಟ್ಟುಕೊಂಡ ರೈತರ ದಂಡ ಹಾಗೂ ಬಡ್ಡಿಯನ್ನು ಪಾವತಿಸುತ್ತೇವೆ ಎಂದು ಫಡ್ನಾವಿಸ್ ಹೇಳಿದ್ದಾರೆ. ಈ ನಿರ್ಧಾರದಿಂದ ಸರ್ಕಾರಕ್ಕೆ 30 ಸಾವಿರ ಕೋಟಿ ಹೊರೆ ಬೀಳಲಿದೆ.

    ಪಂಜಾಬ್: ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಜೂನ್ 20 ರಂದು 10 ಲಕ್ಷ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದೆ. 5 ಎಕರೆ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರ 2 ಲಕ್ಷ ರೂ.ವರೆಗಿನ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ. ಅಷ್ಟೇ ಅಲ್ಲದೇ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ಧನವನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಲಾಗುವುದು ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ. ಸಾಲಮನ್ನಾದಿಂದಾಗಿ ಪಂಜಾಬ್ ಸರ್ಕಾರಕ್ಕೆ 24 ಸಾವಿರ ಕೋಟಿ ಹೊರೆ ಬೀಳಲಿದೆ.

    ಕೇಂದ್ರ ಸರ್ಕಾರ ಹೇಳಿದ್ದು ಏನು?
    ಸಾಲಮನ್ನಾ ಮಾಡಬೇಕೋ? ಬೇಡವೋ ಎನ್ನುವುದು ರಾಜ್ಯ ಸರ್ಕಾರದ ತೀರ್ಮಾನಕ್ಕೆ ಬಿಟ್ಟ ವಿಚಾರ. ಕೇಂದ್ರ ಸರ್ಕಾರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೆ ಹಣಕಾಸಿನ ನೆರವು ನೀಡುವುದಿಲ್ಲ. ಈ ವಿಚಾರವನ್ನು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇವೆ, ಇದನ್ನು ಬಿಟ್ಟು ಹೊಸದಾಗಿ ಏನು ಹೇಳುವುದಿಲ್ಲ ಎಂದು ಜೂನ್ ಮೂರನೇ ವಾರದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದರು.

    ಆರ್‍ಬಿಐ ಏನು ಹೇಳುತ್ತೆ?
    ರೈತರ ಸಾಲಮನ್ನಾ ಮಾಡಿದರೆ ಹಣಕಾಸು ಸ್ಥಿತಿ ಬಿಗಡಾಯಿಸಬಹುದು. ದೇಶದ ಆರ್ಥಿಕ ಸ್ಥಿತಿ ಕೈ ತಪ್ಪಿ ಹೋಗಬಹುದು. ಈ ಯೋಜನೆಗಳನ್ನು ಪ್ರಕಟಿಸುವ ಮೊದಲು 100 ಬಾರಿ ಯೋಚಿಸಬೇಕು ಎಂದು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಆರ್‍ಬಿಐ ಗವರ್ನರ್ ಉರ್ಜಿತ್ ಪಟೇಲ್ ಈ ಹಿಂದೆ ಎಚ್ಚರಿಕೆ ನೀಡಿದ್ದರು.

    ಇದನ್ನೂ ಓದಿ: ಸಾಲ ಮನ್ನಾ ಮಾಡಿದ ನಂತ್ರ ಮೋದಿಗೆ ಸಿಎಂ ಸವಾಲ್ ಹಾಕಿದ್ದು ಹೀಗೆ

  • ಬಿಎಸ್‍ಎಫ್ ತರಬೇತಿ ಶಿಬಿರದಲ್ಲಿ ಪ್ಲೇ ಆಯ್ತು ಸೆಕ್ಸ್ ವಿಡಿಯೋ

    ಬಿಎಸ್‍ಎಫ್ ತರಬೇತಿ ಶಿಬಿರದಲ್ಲಿ ಪ್ಲೇ ಆಯ್ತು ಸೆಕ್ಸ್ ವಿಡಿಯೋ

    ಜಲಂಧರ್: ಬಿಎಸ್‍ಎಫ್ ಸೈನಿಕರ ತರಬೇತಿ ಶಿಬಿರದ ಸಭೆ ನಡೆಯುವ ವೇಳೆ ಸ್ಕ್ರೀನ್ ಮೇಲೆ ತರಬೇತಿ ಕುರಿತಾದ ಸಾಕ್ಷ್ಯಚಿತ್ರ ಕಾಣುವ ಬದಲು ಸೆಕ್ಸ್ ವಿಡಿಯೋ ಒಂದು ಪ್ರದರ್ಶನ ಕಂಡಿದ್ದು, ಸ್ಥಳದಲ್ಲಿದ್ದ ತರಬೇತಿದಾರರು ಮುಜುಗುರಕ್ಕೊಳಾಗದ ಸನ್ನಿವೇಶ ಉಂಟಾಗಿದೆ.

    ಪಂಜಾಬ್ ರಾಜ್ಯದ ಫಿರೋಜ್‍ಪುರ್‍ನ 77ನೇ ಬೆಟಾಲಿಯನ್‍ನಲ್ಲಿ ಈ ಘಟನೆ ನಡೆದಿದೆ. ಸೆಕ್ಸ್ ನ ವಿಡಿಯೋ ಸುಮಾರು ಒಂದು ನಿಮಿಷದವರೆಗೂ ಪ್ಲೇ ಆಗಿದೆ ಎಂದು ಬಿಎಸ್‍ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

    ಕ್ಲಿಪಿಂಗ್ ಪ್ಲೇ ಆಗುವ ವೇಳೆ ಶಿಬಿರದಲ್ಲಿ 12 ಜನ ಮಹಿಳೆಯರು ಹಾಗು 20 ಜನ ಪುರುಷರು ಭಾಗಿಯಾಗಿದ್ದರು. ತರಬೇತಿಯ ಕುರಿತಾದ ಸಾಕ್ಷ್ಯ ಚಿತ್ರದ ಬದಲು ಪೋರ್ನ್ ವಿಡಿಯೋ ಪ್ಲೇ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಬಿಎಸ್‍ಎಫ್‍ನ ಹಿರಿಯ ವಕ್ತಾರ ಡಿಐಜಿ ಆರ್.ಎಸ್.ಕಟರಿಯಾ ಹೇಳಿದ್ದಾರೆ.

     

  • ಹಾಡಹಗಲೇ ಕೊಡಲಿಯಿಂದ ಮಹಿಳೆಯ ಕತ್ತು ಸೀಳಿ ವಿಡಿಯೋ ಮಾಡಿದ

    ಹಾಡಹಗಲೇ ಕೊಡಲಿಯಿಂದ ಮಹಿಳೆಯ ಕತ್ತು ಸೀಳಿ ವಿಡಿಯೋ ಮಾಡಿದ

    ಲುಧಿಯಾನಾ: ಮಹಿಳೆಯನ್ನ ಯುವಕನೊಬ್ಬ ಹಾಡಹಗಲೇ ಕೊಡಲಿಯಿಂದ ಕೊಂದು ನಂತರ ವಿಡಿಯೋ ಮಾಡಿದ ಘಟನೆ ಪಂಜಾಬ್‍ನ ಕಿಲಾ ರಾಯ್ಪುರ್ ಗ್ರಾಮದಲ್ಲಿ ನಡೆದಿದೆ.

    40 ವರ್ಷದ ಸರಬ್ಜಿತ್ ಕೌರ್ ಕೊಲೆಯಾದ ಮಹಿಳೆ. ಭಾನುವಾರ ಬೆಳಿಗ್ಗೆ ಸರಬ್ಜಿತ್ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ ಆರೋಪಿ ಮನಿಂದರ್ ಸಿಂಗ್ ಮಹಿಳೆಯ ಮೇಲೆ ದಾಳಿ ನಡೆಸಿದ್ದು, ಕುತ್ತಿಗೆ ಮತ್ತು ಎದೆಯ ಭಾಗಕ್ಕೆ ಕೊಡಲಿಯಿಂದ ಹೊಡೆದಿದ್ದಾನೆ. ನಂತರ ತನ್ನ ಫೋನ್ ಹೊರತೆಗೆದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯ ವಿಡಿಯೋ ಮಾಡಿದ್ದಾನೆ. ನಂತರ ಫೋನಿನ ಕ್ಯಾಮೆರಾವನ್ನ ತನ್ನ ಕಡೆ ತಿರುಗಿಸಿ ಏನೋ ಮಾತನಾಡಿದ್ದಾನೆ.

    ಯುವಕ ಕೃತ್ಯವೆಸಗಿದ ಬಳಿಕ ಮಹಿಳೆಯ ಮೃತದೇಹದ ಪಕ್ಕ ನಿಂತು ವಿಡಿಯೋ ಮಾಡಿದ್ದನ್ನು ಪೊಲೀಸರು ದೃಢಪಡಿಸಿದ್ದಾರೆ. ಘಟನೆಯ ಬಳಿಕ ಮನಿಂದರ್ ಸಿಂಗ್ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿ ಕೊಲೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತರಾದ ಧ್ರುಮ್ ನಿಂಬ್ಲೆ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಸರಬ್ಜಿತ್ ಅವರ ಮಗಳಾದ ಲಖ್ವಿಂದರ್ ಕೌರ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

    ಬ್ಲಾಕ್‍ಮೇಲೆ ಮಾಡಿದ್ದಕ್ಕೆ ಕೊಲೆ: ಮನಿಂದರ್ ಸಿಂಗ್ ಇದೇ ಗ್ರಾಮದಲ್ಲಿ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಈ ವಿಷಯ ಸರಬ್ಜಿತ್‍ಗೆ ಗೊತ್ತಿತ್ತು. ತನಗೆ ಸತತವಾಗಿ ಬ್ಲಾಕ್‍ಮೇಲ್ ಮಾಡಲಾಗಿತ್ತೆಂದು ಮನಿಂದರ್ ಹೇಳಿದ್ದಾನೆ. ನಿರಂತರ ಬ್ಲಾಕ್‍ಮೇಲ್‍ನಿಂದ ಕೋಪಗೊಂಡು ಮಹಿಳೆಯನ್ನು ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.