Tag: Punjab National Bank

  • ಬೆಲ್ಜಿಯಂನಲ್ಲಿ ಮೆಹುಲ್ ಚೋಕ್ಸಿ ಅರೆಸ್ಟ್ – ಭಾರತಕ್ಕೆ ಹಸ್ತಾಂತರಿಸಲು ಸಿಬಿಐ ಮನವಿ

    ಬೆಲ್ಜಿಯಂನಲ್ಲಿ ಮೆಹುಲ್ ಚೋಕ್ಸಿ ಅರೆಸ್ಟ್ – ಭಾರತಕ್ಕೆ ಹಸ್ತಾಂತರಿಸಲು ಸಿಬಿಐ ಮನವಿ

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿದ್ದ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು (Mehul Choksi) ಬೆಲ್ಜಿಯಂನ (Belgium) ಅಧಿಕಾರಿಗಳು ಬಂಧಿಸಿದ್ದಾರೆ. ಭಾರತದ ಕೇಂದ್ರೀಯ ತನಿಖಾ ಸಂಸ್ಥೆ (CBI) ಮತ್ತು ಜಾರಿ ನಿರ್ದೇಶನಾಲಯ (ED) ಮಾಡಿದ ಕೋರಿಕೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

    65 ವರ್ಷದ ಮೆಹುಲ್ ಚೋಕ್ಸಿ, 2018ರಿಂದ ಭಾರತದಿಂದ ಪರಾರಿಯಾಗಿದ್ದರು. ಈ ವರ್ಷದ ಏ.12 ರಿಂದ ಬೆಲ್ಜಿಯಂನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರನ್ನು ಬಂಧಿಸಲಾಗಿದೆ. ಚೋಕ್ಸಿ ಆರೋಗ್ಯ ಕಾರಣಗಳಿಗಾಗಿ ಆಂಟಿಗುವಾದಿಂದ ಬೆಲ್ಜಿಯಂಗೆ ತೆರಳಿದ್ದರು ಎನ್ನಲಾಗಿದೆ.ಇದನ್ನೂ ಓದಿ: ಜಾತಿ ಸಮೀಕ್ಷೆ | 1 ಕೋಟಿ ಜನರನ್ನು ಸಮುದ್ರಕ್ಕೆ ಬಿಡಬೇಕಾ? – ಅಶೋಕ್ ಕಿಡಿ

    ಭಾರತೀಯ ತನಿಖಾ ಸಂಸ್ಥೆಗಳು ಅವರ ವಿರುದ್ಧ ಜಾರಿಯಲ್ಲಿರುವ ಎರಡು ಬೇಲ್ ರಹಿತ ವಾರಂಟ್‌ಗಳನ್ನು ಆಧರಿಸಿ 2024ರ ಸೆಪ್ಟೆಂಬರ್‌ನಲ್ಲಿ ಬೆಲ್ಜಿಯಂ ಸರ್ಕಾರಕ್ಕೆ ಹಸ್ತಾಂತರ ಕೋರಿ ಅರ್ಜಿ ಸಲ್ಲಿಸಿದ್ದವು. ಈ ಮನವಿಯ ಆಧಾರದ ಮೇಲೆ ಮೆಹುಲ್ ಚೋಕ್ಸಿಯನ್ನು ಬಂಧಿಸಲಾಗಿದೆ.

    ಪ್ರಸ್ತುತ ಚೋಕ್ಸಿಯನ್ನು ಬೆಲ್ಜಿಯಂನ ಬಂಧನ ಕೇಂದ್ರದಲ್ಲಿ ಇರಿಸಲ್ಪಟ್ಟಿದ್ದು, ಕಳೆದ ಆರು ತಿಂಗಳಿನಿಂದ ಬೆಲ್ಜಿಯಂನಲ್ಲಿ ವಾಸಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ ಎಂದು ಹೇಳಲಾಗುತ್ತಿದ್ದು, ಅವರು ರಕ್ತದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ಸೂಚಿಸಿವೆ.

    ಚೋಕ್ಸಿಗೆ ಪೌರತ್ವ ಸಿಕ್ಕಿದ್ದು ಹೇಗೆ?
    65 ವರ್ಷದ ಚೋಕ್ಸಿ 2023ರ ನವೆಂಬರ್ 15ರಿಂದ ಎಫ್-ರೆಸಿಡೆನ್ಸಿ ಪೌರತ್ವ ಕಾರ್ಡ್ ಪಡೆದು ಬೆಲ್ಜಿಯಂನಲ್ಲಿ ಕಾನೂನುಬದ್ಧವಾಗಿ ವಾಸಿಸುತ್ತಿದ್ದರು. ಅವನ ಪತ್ನಿ ಬೆಲ್ಜಿಯಂನವರೇ ಆದ್ದರಿಂದ ಪೌರತ್ವ ಕಾರ್ಡ್ ಪಡೆಯಲು ಚೋಕ್ಸಿಗೆ ಸಹಕಾರ ನೀಡಿದ್ದಾರೆ. ಈ ನಡುವೆ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳೋದಕ್ಕೆ ಚೋಕ್ಸಿ ನಕಲಿ ದಾಖಲೆಗಳನ್ನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

    2024ರ ಸೆಪ್ಟೆಂಬರ್‌ನಲ್ಲಿ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ತನಿಖಾ ಸಂಸ್ಥೆಗಳು ಬೆಲ್ಜಿಯಂಗೆ ಮನವಿ ಮಾಡಿದ್ದವು. ಆದ್ರೆ ಅಂದು ಚೋಕ್ಸಿ ಪರ ವಕೀಲರು, ನನ್ನ ಕಕ್ಷಿಗಾರನ ಆರೋಗ್ಯ ಸರಿಯಿಲ್ಲ, ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಆದ್ದರಿಂದ ಅವರನ್ನು ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಭಾರತೀಯ ಅಧಿಕಾರಿಗಳು, ಚೋಕ್ಸಿ ಭಾರತದಲ್ಲೂ ಚಿಕಿತ್ಸೆ ಪಡೆಯಬಹುದು ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ಇಡಿ ಮತ್ತು ಸಿಬಿಐನಿಂದ ಹಸ್ತಾಂತರ ಕೋರಿಕೆಯ ಮೇರೆಗೆ ಬೆಲ್ಜಿಯಂ ಪೊಲೀಸರು ಅವರನ್ನು ಬಂಧಿಸಿದ್ದಾರೆ.

    ಮೆಹುಲ್ ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ, ಪಿಎನ್‌ಬಿ ಬ್ಯಾಂಕ್‌ನ 13,500 ಕೋಟಿ ರೂ.ಗೂ ಅಧಿಕ ಮೊತ್ತದ ವಂಚನೆಯ ಆರೋಪದಲ್ಲಿದ್ದಾರೆ. ಚೋಕ್ಸಿಯ ಕಂಪನಿಯಾದ ಗೀತಾಂಜಲಿ ಜೆಮ್ಸ್, ಬ್ಯಾಂಕ್‌ನ ಕೆಲವು ಅಧಿಕಾರಿಗಳ ಸಹಕಾರದೊಂದಿಗೆ ಲೆಟರ್ ಆಫ್ ಅಂಡರ್‌ಟೇಕಿಂಗ್ (ಎಲ್‌ಒಯು) ಮತ್ತು ಫಾರಿನ್ ಲೆಟರ್ ಆಫ್ ಕ್ರೆಡಿಟ್ (ಎಫ್‌ಎಲ್‌ಸಿ)ಗಳನ್ನು ಕಾನೂನುಬಾಹಿರವಾಗಿ ಬಳಸಿಕೊಂಡು ಈ ವಂಚನೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಸಿಬಿಐ ಮತ್ತು ಇಡಿ ಈಗಾಗಲೇ ಹಲವು ಚಾರ್ಜ್ಶೀಟ್‌ಗಳನ್ನು ಸಲ್ಲಿಸಿವೆ.ಇದನ್ನೂ ಓದಿ: ಇಂದು ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಲಾರಿ ಮುಷ್ಕರ – ರಸ್ತೆಗಿಳಿಯಲ್ಲ 6 ಲಕ್ಷ ಲಾರಿಗಳು

  • ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಲಂಡನ್ ಕೋರ್ಟ್ ಅನುಮತಿ

    ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಲಂಡನ್ ಕೋರ್ಟ್ ಅನುಮತಿ

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆಗೈದು ಪರಾರಿಯಾಗಿರುವ ಆರ್ಥಿಕ ಅಪರಾಧಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಯುಕೆಯ ಲಂಡನ್‍ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ಸ್ ಕೋರ್ಟ್ ಅನುಮತಿ ನೀಡಿದೆ.

    ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಬರೋಬ್ಬರು 14 ಸಾವಿರ ಕೋಟಿ ರೂ.ಗಳನ್ನು ವಂಚನೆ ಹಾಗೂ ಅಕ್ರಮ ಹಣಕಾಸು ಪ್ರಕರಣದಲ್ಲಿ ಅಪರಾಧಿಯಾಗಿರುವ ಚಿನ್ನಾಭರಣ ವ್ಯಾಪಾರಿ ನೀರವ್ ಮೋದಿ(49) ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ಇಂದು ತನ್ನ ಆದೇಶವನ್ನು ಪ್ರಕಟಿಸಿದೆ.

    ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ)ಗೆ 13,500 ಕೋಟಿಯನ್ನು ವಂಚನೆ ಮಾಡಿ ದೇಶ ಬಿಟ್ಟು ಓಡಿ ಹೋಗಿರುವ ಉದ್ಯಮಿ ನೀರವ್ ಮೋದಿಯನ್ನು ಯುಕೆ ಪೊಲೀಸರು ಬಂಧಿಸಿದ್ದರು. ನೀರವ್ ಮೋದಿ ಅಪರಾಧಿಯಾಗಿದ್ದು, ಶಿಕ್ಷೆಗೊಳಪಡಿಸಬಹುದು ಎಂಬುದಕ್ಕೆ ಭಾರತ ಸರ್ಕಾರ ನೀಡಿದ ಸಾಕ್ಷ್ಯಗಳಿಗೆ ನನಗೆ ತೃಪ್ತಿ ಇದೆ ಎಂದು ಜಡ್ಜ್ ಹೇಳಿದ್ದಾರೆ.

    ನೈಋತ್ಯ ಲಂಡನ್‍ನ ವಾಂಡ್ಸ್ ವರ್ತ್ ಜೈಲಿನಿಂದ ನೀರವ್ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ. ವೆಸ್ಟ್‍ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್‍ನ ಡಿಸ್ಟ್ರಿಕ್ಟ್ ಜಡ್ಜ್ ಸ್ಯಾಮ್ಯುಯೆಲ್ ಗೂಜಿ ತೀರ್ಪು ಪ್ರಕಟಿಸಿದರು.

    ನನ್ನನ್ನು ಭಾರತಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಆರೋಪಿ ನೀರವ್ ಮೋದಿ ಲಂಡನ್ ನ್ಯಾಯಾಲಯದಲ್ಲಿ ಈ ಹಿಂದೆ ಹೇಳಿದ್ದ.

    ಜಾಮೀನಿಗಾಗಿ ಹೊಸ ಅರ್ಜಿ ಸಲ್ಲಿಸಿದ್ದ ನೀರವ್ ಮೋದಿ ಭದ್ರತಾ ಠೇವಣಿಗಾಗಿ 18.28 ಕೋಟಿ ರೂ. ಬದಲಾಗಿ 36.57 ಕೋಟಿ ರೂ. ಇರಿಸುತ್ತೇನೆ. ನನ್ನನ್ನು ಗೃಹ ಬಂಧನದಲ್ಲಿ ಇಡುವಂತೆ ಆದೇಶಿಸಿ ಎಂದು ಮನವಿ ಮಾಡಿದ್ದ. ಆದರೆ ಕೋರ್ಟ್ ನಾಲ್ಕನೇ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆದ್ದರಿಂದ ನೀರವ್ ಮೋದಿ ನನ್ನನ್ನು ಭಾರತಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ.

    ಪಿಎನ್‍ಬಿ ಬ್ಯಾಂಕ್ ನಲ್ಲಿ ಸಾಲ ಪಡೆದು ವಂಚಿಸಿರುವ ಪ್ರಕರಣದಲ್ಲಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಮುಖ್ಯ ಅಪರಾಧಿಗಳಾಗಿದ್ದು, ಈ ಹಗರಣ ಬೆಳಕಿಗೆ ಬರುವ ಮುನ್ನವೇ ಇವರಿಬ್ಬರು ಭಾರತ ಬಿಟ್ಟು ಓಡಿಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 49 ವರ್ಷದ ನೀರವ್ ಮೋದಿಯನ್ನು 2019ರ ಮಾರ್ಚ್ 19 ರಂದು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸ್ ಬಂಧಿಸಿ, ಲಂಡನ್‍ನ ವಾಂಡ್ಸ್‍ವರ್ತ್ ಜೈಲಿನಲ್ಲಿ ಇರಿಸಲಾಗಿದೆ.

  • ನಾನು ಭಾರತಕ್ಕೆ ಬರಲ್ಲ – ವಂಚಕ ನೀರವ್ ಮೋದಿ

    ನಾನು ಭಾರತಕ್ಕೆ ಬರಲ್ಲ – ವಂಚಕ ನೀರವ್ ಮೋದಿ

    ನವದೆಹಲಿ: ಭಾರತಕ್ಕೆ ಬಂದರೆ ನನ್ನ ಕಕ್ಷಿದಾರರ ಜೀವಕ್ಕೆ ಅಪಾಯವಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ವಕೀಲರು ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ.

    ಒಂದು ವೇಳೆ ನಾನು ಭಾರತಕ್ಕೆ ಬಂದರೆ ಜೀವಕ್ಕೆ ಅಪಾಯವಿದೆ. ಕೊಲೆ ಬೆದರಿಕೆ ಕೇಳಿಬಂದಿದೆ. ಇದರಿಂದಾಗಿ ನಾನು ಭಾರತಕ್ಕೆ ಬರುವುದಿಲ್ಲ ಅಂತಾ ನೀರವ್ ಮೋದಿ ತಿಳಿಸಿದ್ದಾರೆ ಎಂದು ವಕೀಲ ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಇದನ್ನು ಓದಿ: ನೀರವ್ ಮೋದಿಯ ಹಾಂಗ್​ಕಾಂಗ್​ನ 255 ಕೋಟಿ ರೂ. ಆಸ್ತಿ ಇಡಿ ವಶಕ್ಕೆ

    ಇಡಿ ಅಧಿಕಾರಿಗಳು ನೀರವ್ ಕಂಪನಿ, ಆಸ್ತಿಯನ್ನು ವಶಕ್ಕೆ ಪಡೆದಿದ್ದರಿಂದ ಸಿಬ್ಬಂದಿಗೆ ವೇತನ ನೀಡಿಲ್ಲ. ಅಷ್ಟೇ ಅಲ್ಲದೇ ನೀರವ್ ಬಾಡಿಗೆ ಪಡೆದಿದ್ದ ಜಾಗದ ಮಾಲೀಕರಿಗೆ ಹಣ ಪಾವತಿಸಿಲ್ಲ, ವಜ್ರಾಭರಣಕ್ಕಾಗಿ ಮುಂಗಡ ಹಣ ನೀಡಿದ್ದವರು ತಮ್ಮ ಹಣವನ್ನು ಮರಳಿಸುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಪ್ರಾಣ ಬೆದರಿಕೆ ಇರುವ ಕಾರಣ ನೀರವ್ ಮೋದಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ವಕೀಲರು ಹೇಳಿದ್ದಾರೆ. ಇದನ್ನು ಓದಿ: ನೀರವ್ ಮೋದಿಗೆ ಇಡಿ ಶಾಕ್- 637 ಕೋಟಿ ರೂ. ಆಸ್ತಿ ಮುಟ್ಟುಗೋಲು

    ಏನಿದು ಪ್ರಕರಣ?:
    ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಪರಾರಿಯಾಗಿದ್ದಾರೆ. ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್‍ಗೆ ಮನವಿ ಮಾಡಿಕೊಂಡಿತ್ತು. ಈಗಾಗಲೇ ಮುಂಬೈ ಸೇರಿದಂತೆ ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿಯನ್ನು ಜಾರಿ ನಿರ್ದೇಶನಾಲಯಕ್ಕೆ ವಶಕ್ಕೆ ಪಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 21 ಬ್ಯಾಂಕ್ ಗಳಿಗೆ 25,775 ಕೋಟಿ ರೂ. ವಂಚನೆ!- ಯಾವ ಬ್ಯಾಂಕಿಗೆ ಎಷ್ಟು ಕೋಟಿ ನಷ್ಟ?

    21 ಬ್ಯಾಂಕ್ ಗಳಿಗೆ 25,775 ಕೋಟಿ ರೂ. ವಂಚನೆ!- ಯಾವ ಬ್ಯಾಂಕಿಗೆ ಎಷ್ಟು ಕೋಟಿ ನಷ್ಟ?

    ಇಂದೋರ್: 2017-18 ನೇ ಸಾಲಿನ ಆರ್ಥಿಕ ವರ್ಷದಲ್ಲಿ 21 ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಒಟ್ಟು 25,775 ಕೋಟಿ ರೂ. ವಂಚನೆಯಾಗಿದೆ ಎಂದು ಮಾಹಿತಿ ಹಕ್ಕಿನ ಅಡಿ ಬಹಿರಂಗವಾಗಿದೆ.

    ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಹೆಚ್ಚಿನ 6,461.13 ಕೋಟಿ ರೂ. ವಂಚನೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್‍ಟಿಐ ಕಾರ್ಯಕರ್ತ ರಾಜಶೇಖರ ಗಾವದ್ ಅವರಿಗೆ ಮಾಹಿತಿ ನೀಡಿದೆ.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2,390.75 ಕೋಟಿ ರೂ., ಬ್ಯಾಂಕ್ ಆಫ್ ಇಂಡಿಯಾ ಗೆ 2,224.86 ಕೋಟಿ ರೂ., ಬ್ಯಾಂಕ್ ಆಫ್ ಬರೋಡಾಗೆ 1,928.25 ಕೋಟಿ ರೂ., ಅಲಹಾಬಾದ್ ಬ್ಯಾಂಕ್ ಗೆ 1,520.37 ಕೋಟಿ ರೂ., ಆಂಧ್ರ ಬ್ಯಾಂಕ್ ಗೆ 1,303.30 ಕೋಟಿ ರೂ. ಮತ್ತು ಯುಕೋ ಬ್ಯಾಂಕ್ ಗೆ 1,224.64 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ.

    ಪಟ್ಟಿಯಲ್ಲಿ ಕೊಟ್ಟಿರುವ ಮಾಹಿತಿಯು 1 ಲಕ್ಷ ರೂ ಗಿಂತ ಮೇಲ್ಪಟ್ಟು ಆಗಿರುವ ವಂಚನೆಗಳಾಗಿವೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಯಾವ ರೀತಿಯ ವಂಚನೆಗಳು ಅಥವಾ ವಂಚನೆಗಳ ಸಂಖ್ಯೆಯನ್ನು ಆರ್ ಬಿಐ ಬಹಿರಂಗ ಮಾಡಿಲ್ಲ.

    ಇನ್ನುಳಿದಂತೆ ಕಾರ್ಪೊರೇಷನ್ ಬ್ಯಾಂಕ್ ಗೆ 970.89 ಕೋಟಿ ರೂ. ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಗೆ 880.53 ಕೋಟಿ ರೂ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಗೆ 650.28 ಕೋಟಿ ರೂ. ಮತ್ತು ಸಿಂಡಿಕೇಟ್ ಬ್ಯಾಂಕ್ ಗೆ 455.05 ಕೋಟಿ ರೂ. ನಷ್ಟವಾಗಿದೆ.

    ಕೆನರಾ ಬ್ಯಾಂಕ್ ಗೆ 190.77 ಕೋಟಿ ರೂ. ಪಂಜಾಬ್ ಮತ್ತು ಸಿಂದ್ ಬ್ಯಾಂಕ್ ಗೆ 90.01 ಕೋಟಿ ರೂ. ದೇನಾ ಬ್ಯಾಂಕ್ ಗೆ 89.25 ಕೋಟಿ ರೂ. ವಿಜಯ ಬ್ಯಾಂಕ್ ಗೆ 28.58 ಕೋಟಿ ರೂ. ಮತ್ತು ಇಂಡಿಯನ್ ಬ್ಯಾಂಕ್ ಗೆ 24.23 ಕೋಟಿ ರೂ. ವಂಚನೆಯಾಗಿದೆ ಎಂದು ಆರ್ ಟಿ ಐ ಮಾಹಿತಿಯಲ್ಲಿ ಬಹಿರಂಗವಾಗಿದೆ.

    ಮಾಹಿತಿ ಹಕ್ಕಿನ ಅಡಿ ಬೆಳಕಿಗೆ ಬಂದ ಉತ್ತರಕ್ಕೆ ಆರ್ಥಿಕ ತಜ್ಞ ಜಯಂತಿಲಾಲ್ ಭಂಡಾರಿ ಪ್ರತಿಕ್ರಿಯಿಸಿ, ವಂಚನೆಗೊಳಗಾಗಿರುವ 21 ಸಾರ್ವಜನಿಕ ವಲಯದ ಬ್ಯಾಂಕ್ ಗಳು ತೀರ ಸಂಕಷ್ಟದಲ್ಲಿವೆ. ಬ್ಯಾಂಕ್ ಗಳಿಗೆ ಆಗಿರುವ ಅಪಾರ ಪ್ರಮಾಣದ ವಂಚನೆಯಿಂದ ಮುಂದೆ ಸಾಲಗಳನ್ನು ನೀಡಲು ತೊಂದರೆಯಾಗುತ್ತದೆ. ಇದು ದೇಶದ ಆರ್ಥಿಕತೆಗೆ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಪಿಎನ್‍ಬಿಗೆ ನೀರವ್, ಚೋಕ್ಸಿ ವಂಚಿಸಿದ್ದು 11,400 ಕೋಟಿ ಅಲ್ಲ, 12,700 ಕೋಟಿ ರೂ.

    ಪಿಎನ್‍ಬಿಗೆ ನೀರವ್, ಚೋಕ್ಸಿ ವಂಚಿಸಿದ್ದು 11,400 ಕೋಟಿ ಅಲ್ಲ, 12,700 ಕೋಟಿ ರೂ.

    ಮುಂಬೈ: ವಜ್ರ ವ್ಯಾಪಾರಿ ನೀರವ್ ಮೋದಿಯ ಹಗರಣದಲ್ಲಿ ದಿನಕ್ಕೆ ಒಂದು ಸ್ಫೋಟಕ ಮಾಹಿತಿ ಲಭಿಸುತ್ತಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ನೀರವ್ ವಂಚಿಸಿದ್ದ ಮೊತ್ತ 11,400 ಕೋಟಿ ರೂ. ಬದಲಾಗಿ 12,700 ಕೋಟಿ ರೂ. ಎಂಬ ಮಾಹಿತಿ ಸಿಕ್ಕಿದೆ.

    ಮೊದಲು ಬ್ಯಾಂಕ್ ಅಧಿಕಾರಿಗಳು ಸಿಬಿಐ ಗೆ ನೀಡಿದ್ದ ದೂರಿನಲ್ಲಿ 11,400 ಕೋಟಿ ರೂ. ಎಂದು ತಿಳಿಸಿದ್ದರು. ಆದರೆ ಈ ಕುರಿತು ಸೋಮವಾರ ರಾತ್ರಿ ಬಾಂಬೆ ಸ್ಟಾಕ್ ಎಕ್ಸ್ ಚೆಂಜ್(ಬಿಎಸ್‍ಇ) ಪಿಎನ್‍ಬಿ ಸಲ್ಲಿಸಿದ ಮಾಹಿತಿಯಲ್ಲಿ 1,300 ಕೋಟಿ ರೂ. ಹೆಚ್ಚುವರಿ ಹಣ ಸೇರ್ಪಡೆಯಾಗಿದೆ. ಇದರೊಂದಿಗೆ ನೀರವ್ ಮೋದಿ ಒಡೆತನದ ಗೀತಾಂಜಲಿ ಕಂಪನಿ ಹಾಗೂ ಸಂಬಂಧಿ ಮೆಹುಲ್ ಚೋಕ್ಸಿ 12,700 ಕೋಟಿ ವಂಚಿಸಿದ್ದಾರೆ.

    ಫೆ.14ರಂದು ವಂಚನೆ ಪ್ರಕರಣ ಬೆಳಕಿಗೆ ಬಂದ ವೇಳೆಯಲ್ಲೇ ವಂಚನೆ ಪ್ರಮಾಣದ ಮೊತ್ತ ಮತ್ತಷ್ಟು ಹೆಚ್ಚಗಾಬಹುದೆಂದು ಅಂದಾಜಿಸಲಾಗಿತ್ತು. ಸಿಬಿಐ ಅಧಿಕಾರಿಗಳು ಬಹುಕೋಟಿ ಹಗರಣ ಸಂಬಂಧ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಸ್ತುತ ನೀರವ್ ವಂಚನೆ ಪ್ರಕರಣ ಭಾರತ ಬ್ಯಾಂಕಿಂಗ್ ವಲಯದಲ್ಲಿ ನಡೆದ ಅತ್ಯಂತ ದೊಡ್ಡ ಮಟ್ಟದ ವಂಚನೆ ಪ್ರಕರಣ ಎಂಬ ಕುಖ್ಯಾತಿ ಗಳಿಸಿದೆ.

    ವಂಚನೆ ಪ್ರಕರಣ ಬೆಳಕಿಗೆ ಬರುವ ಮುನ್ನವೇ ನೀರವ್ ಹಾಗೂ ಆತನ ಕುಟುಂಬ ಭಾರತ ಬಿಟ್ಟು ಅಮೆರಿಕಗೆ ಪರಾರಿಯಾಗಿದ್ದರು. ಶನಿವಾರ ನೀರವ್ ಅವರ ಪಾಸ್ ಪೋರ್ಟ್ ಅನ್ನು ರದ್ದು ಮಾಡಲಾಗಿತ್ತು. ನೀರವ್ ಸುಕ್ಷತೆ ದೃಷ್ಟಿಯಿಂದ ಕೆರಿಬಿಯನ್ ದ್ವೀಪ ರಾಷ್ಟ್ರಗಳ ಪೌರತ್ವ ಪಡೆಯಲು ಪ್ರಯತ್ನಿಸಿದ ಕುರಿತು ಮಾಹಿತಿ ಬಹಿರಂಗಗೊಂಡಿತ್ತು.

  • 11,400 ಕೋಟಿ ರೂ. ವಂಚಿಸಿದ್ದ ನೀರವ್ ಮೋದಿ ಕುಟುಂಬ ಕೆರಿಬಿಯನ್ ದ್ವೀಪಕ್ಕೆ ಓಡಿದ್ದು ಯಾಕೆ?

    11,400 ಕೋಟಿ ರೂ. ವಂಚಿಸಿದ್ದ ನೀರವ್ ಮೋದಿ ಕುಟುಂಬ ಕೆರಿಬಿಯನ್ ದ್ವೀಪಕ್ಕೆ ಓಡಿದ್ದು ಯಾಕೆ?

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ) ವಂಚನೆ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಬಂಧನದ ಭೀತಿಯಿಂದ ಪಾರಾಗಲು ಕೆರಿಬಿಯನ್ ಸೇಂಟ್ ಕಿಟ್ಸ್ ಮತ್ತು ನೇವಿಸ್ ದ್ವೀಪ ರಾಷ್ಟ್ರಗಳ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    11,400 ಕೋಟಿ ರೂ. ವಂಚನೆ ಆರೋಪ ಎದುರಿಸುತ್ತಿರುವ ವಜ್ರಾಭರಣಗಳ ಉದ್ಯಮಿಯಾಗಿರುವ ನೀರವ್ ಕುಟುಂಬ ಪ್ರಕರಣ ಬೆಳಕಿಗೆ ಬರುವ ಮುನ್ನವೇ ದೇಶ ತೊರೆದು ಅಮೆರಿಕಕ್ಕೆ ಹಾರಿತ್ತು. ಈಗ ಭಾರತದ ವಿದೇಶಾಂಗ ಸಚಿವಾಲಯ ಅವರನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿರುವಾಗ ನೀರವ್ ಮೋದಿ ಕುಟುಂಬ ಸೇಂಟ್ ಕೀಟ್ಸ್ ಮತ್ತು ನೇವಿಸ್ ದ್ವೀಪದಲ್ಲಿ ಆಶ್ರಯ ಪಡೆಯಲು ಮುಂದಾಗಿದೆ.

    ವಿದೇಶಾಂಗ ಸಚಿವಾಲಯ ಶನಿವಾರ ನೀರವ್ ಹಾಗೂ ಅವರ ಕುಟುಂಬ ಸದಸ್ಯರ ಪಾಸ್‍ಪೋರ್ಟ್ ರದ್ದು ಮಾಡಿತ್ತು. ಅಷ್ಟೇ ಅಲ್ಲದೇ ಅಮೆರಿಕದೊಂದಿಗೆ ಭಾರತದ ರಾಜತಾಂತ್ರಿಕ ಸಂಬಂಧ ಈಗ ಮತ್ತಷ್ಟು ಉತ್ತಮಗೊಂಡಿರುವ ಕಾರಣ ಅಮೆರಿಕ ಸರ್ಕಾರ ಯಾವ ಸಮಯದಲ್ಲಿ ಆದರೂ ನಮ್ಮನ್ನು ಭಾರತದ ವಶಕ್ಕೆ ನೀಡಬಹುದು ಎನ್ನುವ ಭೀತಿಯಿಂದ ನೀರವ್ ಕೆರೆಬಿಯನ್ ದ್ವೀಪ ರಾಷ್ಟ್ರಗಳ ಪೌರತ್ವ ಪಡೆಯಲು ಪ್ರಯತ್ನಿಸಿದ್ದಾರೆ.

    ನೀರವ್ ಕುಟುಂಬ ಈಗಾಗಲೇ ಅಮೆರಿಕದ ನ್ಯೂಯಾರ್ಕ್‍ನಿಂದ ಸೇಂಟ್ಸ್ ಕಿಟ್ಸ್ ಮತ್ತು ನೇವಿಸ್ ಐಲ್ಯಾಂಡ್‍ಗೆ ವಾಸಸ್ಥಳ ಬದಲಿಸಿ ಅಲ್ಲಿ ಐಷಾರಾಮಿ ಬಂಗಲೆಯನ್ನೂ ಖರೀದಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಪೌರತ್ವ ಪಡೆಯುವುದು ಹೇಗೆ?
    ಕೆರಿಬಿಯನ್ ದ್ವೀಪ ರಾಷ್ಟಗಳ ಪೌರತ್ವ ಪಡೆಯುವುದು ಅತ್ಯಂತ ಸರಳ ಪ್ರಕ್ರಿಯೆಯಾಗಿದೆ. ಈ ರಾಷ್ಟ್ರಗಳ ಪೌರತ್ವ ಪಡೆಯಲು ಅಲ್ಲಿನ ಶುಗರ್ ಇಂಡಸ್ಟ್ರಿ ಡೈವರ್ಸಿಫಿಕೇಷನ್ ಫೌಂಡೇಶನ್‍ಗೆ 1.6 ಕೋಟಿ ರೂ. ದೇಣಿಗೆ ಅಥವಾ ಪೂರ್ವ ನಿಗದಿತ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ 2.8 ಕೋಟಿ ರೂ. ಹಣ ಹೂಡಿಕೆ ಮಾಡಿದರೆ ಆ ದೇಶದ ಪೌರತ್ವ ಪಡೆಯಬಹುದು.

    ದ್ವೀಪ ರಾಷ್ಟ್ರದ ಪೌರತ್ವವೇ ಏಕೆ?
    ಭಾರತೀಯ ನಾಗರಿಕರಿಗೆ ಈ ರಾಷ್ಟ್ರದಲ್ಲಿ ಉಳಿದುಕೊಳ್ಳಲು 30 ದಿನಗಳ ವರೆಗೆ ಯಾವುದೇ ಪ್ರವಾಸಿ ವೀಸಾದ ಅಗತ್ಯವಿಲ್ಲ. ಈ ಎಲ್ಲಾ ನಿಯಮಗಳನ್ನು ಚೆನ್ನಾಗಿ ತಿಳಿದಿರುವ ನೀರವ್ ಪ್ರಸ್ತುತ ಸೇಂಟ್ ಕಿಟ್ಸ್ ಮತ್ತು ನೇವಿಸ್ ದ್ವೀಪ ರಾಷ್ಟ್ರಗಳ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ವಿಶೇಷವೆಂದರೆ ಈ ದ್ವೀಪ ರಾಷ್ಟ್ರ ಕೇವಲ 50 ಸಾವಿರ ಜನಸಂಖ್ಯೆ ಮಾತ್ರ ಹೊಂದಿದ್ದು, ಈ ರಾಷ್ಟ್ರಗಳ ಜೊತೆಗೆ ಭಾರತ ಯಾವುದೇ ಒಪ್ಪಂದ ಇದುವರೆಗೂ ಮಾಡಿಕೊಂಡಿಲ್ಲ. ಈ ಕಾರಣಗಳಿಂದ ಇದು ಸುರಕ್ಷಿತ ಸ್ಥಳವಾಗಿರುವ ಹಿನ್ನೆಲೆಯಲ್ಲಿ ನೀರವ್ ಕುಟುಂಬ ಇಲ್ಲಿಗೆ ವಾಸಸ್ಥಳ ಬದಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ನಿಯಮಗಳು ಏನು ಹೇಳುತ್ತೆ?
    ಕಾಮನ್‍ವೆಲ್ತ್ ಮತ್ತು ಸ್ನೇಹ ರಾಷ್ಟ್ರದ ಭಾಗವಾಗಿ ಸೇಂಟ್ ಕಿಟ್ಸ್ ಮತ್ತು ನೇವಿಸ್ ದ್ವೀಪ ಭಾರತದ ಜತೆ ಹಸ್ತಾಂತರ ಒಪ್ಪಂದ ಮಾಡಿಕೊಂಡಿಲ್ಲ. ಒಂದು ವೇಳೆ ಈ ದೇಶದ ಪೌರತ್ವ ಪಡೆದರೆ ನೀರವ್ ಅಲ್ಲಿಂದಲೇ ಸಿಂಗಾಪುರ ಮತ್ತು ಹಾಂಕಾಂಗ್‍ನಲ್ಲಿ ವಜ್ರಾಭರಣಗಳ ವಹಿವಾಟನ್ನು ಮತ್ತೆ ಆರಂಭಿಸಬಹುದಾಗಿದೆ. ಅಲ್ಲದೇ ಈ ದ್ವೀಪ ರಾಷ್ಟ್ರಗಳ ಹಕ್ಕನ್ನು ಪಡೆದಿರುವವರನ್ನ ಭಾರತಕ್ಕೆ ಹಸ್ತಾಂತರ ಮಾಡುವ ಹಕ್ಕನ್ನು ಸಿಂಗಾಪುರ ಹಾಗೂ ಹಾಂಕಾಂಗ್ ಹೊಂದಿಲ್ಲ. ಹೀಗಾಗಿ ಈ ದ್ವೀಪ ಸದ್ಯಕ್ಕೆ ಸುರಕ್ಷಿತ ತಾಣವೆನಿಸಿದೆ. ಇದನ್ನೂ ಓದಿ: ನೀರವ್ ಮೋದಿಗೆ ಸೇರಿದ 10,000ಕ್ಕೂ ಹೆಚ್ಚು ವಾಚ್‍ಗಳನ್ನ ಜಪ್ತಿ ಮಾಡಿದ ಇಡಿ

    ಜತಿನ್ ಮೆಹ್ತಾ ವರ್ಶನ್ 2:
    ಎಂಟು ವರ್ಷಗಳ ಹಿಂದೆ ಉದ್ಯಮಿ ಜತಿನ್ ಮೆಹ್ತಾ ಮಾಲೀಕತ್ವದ ವಿನ್‍ಸಮ್ ಡೈಮಂಡ್ಸ್ ಅಂಡ್ ಜ್ಯುವೆಲ್ಲರಿ ಕಂಪನಿ ಎಸ್‍ಬಿಐ ಹಾಗೂ ಬ್ಯಾಂಕ್ ಆಫ್ ಬರೋಡಾಗೆ ವಂಚನೆ ಮಾಡಿತ್ತು. ಸುಮಾರು 4,686 ಕೋಟಿ ರೂ. ವಂಚಿಸಿದ್ದ ಜತಿನ್ ಮೆಹ್ತಾ 2013 ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದರು. ಅವರು ಸಹ ಸೇಂಟ್ ಕಿಟ್ಸ್ ಮತ್ತು ನೇವಿಸ್ ರಾಷ್ಟ್ರದ ಪೌರತ್ವ ಪಡೆದು ರಕ್ಷಣೆ ಪಡೆದಿದ್ದರು. ಸರ್ಕಾರ ಈ ಪ್ರಕರಣದಲ್ಲಿ ಆರೋಪಿಗಳ ಹಸ್ತಾಂತರಕ್ಕೆ ಸತತ ಪ್ರಯತ್ನ ನಡೆಸುತ್ತಿದ್ದರೂ ಇದುವರೆಗೆ ಅವರನ್ನು ಭಾರತದ ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ.

    ಸೂರತ್‍ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಉದ್ಯಮಿ ಜತಿನ್ ಮೆಹ್ತಾ ಗೆ ಸಂಬಂಧಿಸಿದ ಆಸ್ತಿಯನ್ನು ವಶಕ್ಕೆ ಪಡೆದ ನಂತರ ಕೇವಲ 120 ಕೋಟಿ ರೂ. ಹಣವನ್ನಷ್ಟೇ ಪಡೆಯಲು ಸಾಧ್ಯವಾಯಿತು. ಪ್ರಸ್ತುತ ನೀರವ್ ಮೋದಿ ಸಹ ಇದೇ ಹಾದಿಯನ್ನು ತುಳಿದಿದ್ದು, ಒಂದು ವೇಳೆ ಕೆರಿಬಿಯನ್ ದ್ವೀಪ ರಾಷ್ಟ್ರಗಳ ಪೌರತ್ವ ಪಡೆದರೆ ಮತ್ತೆ ಭಾರತಕ್ಕೆ ಕರೆತರುವುದು ಕಷ್ಟ ಸಾಧ್ಯವಾಗಲಿದೆ. ಇದನ್ನೂ ಓದಿ: ನೀರವ್ ಮೋದಿಗೆ ಬೈ ಬೈ ಹೇಳಿದ ಪ್ರಿಯಾಂಕಾ ಚೋಪ್ರಾ

  • ನೀರವ್ ಮೋದಿಗೆ ಸೇರಿದ 10,000ಕ್ಕೂ ಹೆಚ್ಚು ವಾಚ್‍ಗಳನ್ನ ಜಪ್ತಿ ಮಾಡಿದ ಇಡಿ

    ನೀರವ್ ಮೋದಿಗೆ ಸೇರಿದ 10,000ಕ್ಕೂ ಹೆಚ್ಚು ವಾಚ್‍ಗಳನ್ನ ಜಪ್ತಿ ಮಾಡಿದ ಇಡಿ

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ತೀವ್ರಗೊಳಿಸಿದ್ದು, ಶುಕ್ರವಾರದಂದು ನೀರವ್ ಮೋದಿ ಪತ್ನಿಗೆ ವಿಚಾರಣೆಗಾಗಿ ನೋಟಿಸ್ ನೀಡಿದೆ.

    11,300 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಭರಣ ವಿನ್ಯಾಸಕ ನೀರವ್ ಮೋದಿಗೆ ಸೇರಿದ 44 ಕೋಟಿ ರೂ. ಠೇವಣಿ ಹಾಗೂ ಶೇರ್‍ಗಳನ್ನ ಇಡಿ ಜಪ್ತಿ ಮಾಡಿದೆ. ಇಡಿ ಜಪ್ತಿ ಮಾಡಿರುವ ಬ್ಯಾಂಕ್ ಖಾತೆಯಲ್ಲಿ 30 ಕೋಟಿ ರೂ. ಹಣವಿದ್ದು, ಶೇರ್‍ಗಳ ಮೊತ್ತ 13.86 ಕೋಟಿ ರೂ.ನದ್ದಾಗಿದೆ. ಜೊತೆಗೆ ನೀರವ್ ಮೋದಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ 60 ಪ್ಲಾಸ್ಟಿಕ್ ಕಂಟೇನರ್‍ಗಳಲ್ಲಿದ್ದ 10 ಸಾವಿರಕ್ಕೂ ಹೆಚ್ಚು ಇಂಪೋರ್ಟೆಡ್ ವಾಚ್‍ಗಳನ್ನ ಜಪ್ತಿ ಮಾಡಲಾಗಿದೆ.

    ನೀರವ್ ಮೋದಿ ಡಿಸೈನರ್ ಆಭರಣಗಳ ವ್ಯವಾಹರ ಮಾಡ್ತಿದ್ದರಿಂದ ಡಿಸೈನರ್ ವಾಚ್‍ಗಳ ಸಂಗ್ರಹಕ್ಕಾಗಿ ಈ ವಾಚ್‍ಗಳನ್ನ ಆಮದು ಮಾಡಿಕೊಂಡಿರಬಹುದು ಎನ್ನಲಾಗಿದೆ. ಅಲ್ಲದೆ ಈ ವಾಚ್‍ಗಳನ್ನ ಉಡುಗೊರೆ ನೀಡುವ ಉದ್ದೇಶದಿಂದ ಆಮದು ಮಾಡಿಕೊಂಡಿರುವ ಸಾಧ್ಯತೆಯೂ ಇರುವುದರಿಂದ, ವಾಚ್‍ಗಳ ಆಮದು ಉದ್ದೇಶವೇನೆಂಬುದು ಮುಂದೆ ಸ್ಪಷ್ಟವಾಗಬೇಕಿದೆ.

    ಕಳೆದ ವಾರ ಇಡಿ ನೀರವ್ ಮೋದಿಗೆ ಸಂಬಂಧಿಸಿದ 176 ಸ್ಟೀಲ್ ಅಲ್ಮೆರಾ ಹಾಗೂ 158 ಬಾಕ್ಸ್ ಗಳನ್ನ ಜಪ್ತಿ ಮಾಡಿದೆ. ಗುರುವಾರದಂದು ಇಡಿ ನೀರವ್ ಮೋದಿ ಹಾಗೂ ಗ್ರೂಪ್‍ಗೆ ಸೇರಿದ 100 ಕೋಟಿ ರೂ. ಮೌಲ್ಯದ ಠೇವಣಿ, ಶೇರ್‍ಗಳು ಹಾಗೂ ಐಷಾರಾಮಿ ಕಾರ್‍ಗಳನ್ನ ಜಪ್ತಿ ಮಾಡಿತ್ತು.

    ನೀರವ್ ಮೋದಿಯ 7.80 ಕೋಟಿ ರೂ. ಮೌಲ್ಯದ ಹಾಗೂ ನೀರವ್ ಮೋದಿ ಸಂಬಂಧಿ, ಗೀತಾಂಜಲಿ ಗ್ರೂಪ್‍ನ ಮೆಹುಲ್ ಚೋಕ್ಸಿಗೆ ಸೇರಿದ 86.72 ಕೋಟಿ ರೂ. ಮೌಲ್ಯದ ಮ್ಯೂಚುವಲ್ ಫಂಡ್ಸ್ ಹಾಗೂ ಶೇರ್‍ಗಳನ್ನ ಇಡಿ ಜಪ್ತಿ ಮಾಡಿದೆ.

    ಮುಂಬೈ ಶಾಖೆಯಲ್ಲಿ 11,300 ಕೋಟಿ ರೂ. ಅಕ್ರಮ ವಹಿವಾಟು ನಡೆದಿರುವುದು ತನಿಖೆ ವೇಳೆ ಪತ್ತೆಯಾಗಿದೆ. ತಮಗೆ ಬೇಕಾದ ಗ್ರಾಹಕರ ಜೊತೆ ವ್ಯವಹಾರ ನಡೆಸಿ ಈ ಅಕ್ರಮ ಎಸಗಲಾಗಿದೆ ಎಂದು ಪಿಎನ್‍ಬಿ ಮುಂಬೈ ಶೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ್ದ ಲೆಕ್ಕಪತ್ರದಲ್ಲಿ ತಿಳಿಸಿದೆ.

    ಪಿಎನ್‍ಬಿ ಗ್ರಾಹಕರಿಗೆ ಬೃಹತ್ ಪ್ರಮಾಣದಲ್ಲಿ ಸಾಲ ನೀಡುವ ದೇಶದ ಎರಡನೇ ಅತೀ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಆಗಿದೆ. ಅಷ್ಟೇ ಅಲ್ಲದೇ ತನ್ನ ಆಸ್ತಿಯಿಂದಾಗಿ ದೇಶದ ನಾಲ್ಕನೇ ಅತೀ ದೊಡ್ಡ ಬ್ಯಾಂಕ್ ಎನಿಸಿಕೊಂಡಿದೆ.

    ಪಿಎನ್‍ಬಿ 2016-17ರ ಅವಧಿಯಲ್ಲಿ ವಸೂಲಾಗದ 9,205 ಕೋಟಿ ರೂ. ಸಾಲದ ಮೊತ್ತವನ್ನು ವಜಾ ಮಾಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಳಿಕ ಅತಿ ಹೆಚ್ಚು ಸಾಲದ ಮೊತ್ತವನ್ನು ವಜಾಗೊಳಿಸಿದ ಎರಡನೇ ಬ್ಯಾಂಕ್ ಪಿಎನ್‍ಬಿ ಆಗಿದೆ. ಎಸ್‍ಬಿಐ ವಸೂಲಾಗದ 20,339 ಕೋಟಿ ರೂ. ಸಾಲದ ಮೊತ್ತವನ್ನು ವಜಾಗೊಳಿಸಿತ್ತು.

  • ಪ್ರಧಾನಿ ಮೋದಿಯನ್ನು ಅಪ್ಪಿ 12 ಸಾವಿರ ಕೋಟಿ ರೂ. ಲೂಟಿ ಮಾಡಿ: ರಾಹುಲ್ ಗಾಂಧಿ

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿನ ವಂಚನೆ ಬಯಲಿಗೆ ಬಂದ ಬೆನ್ನಲ್ಲೇ, ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಖ್ಯಾತ ಉದ್ಯಮಿ ಮತ್ತು ಆಭರಣ ವ್ಯಾಪಾರಿ ನೀರವ್ ಮೋದಿ ಅವರ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಗುರಿ ಮಾಡಿ ಟ್ವೀಟ್ ಮಾಡಿದ್ದಾರೆ.

    ರಾಹುಲ್ ತಮ್ಮ ಟ್ವೀಟ್ ನಲ್ಲಿ ಭಾರತವನ್ನು ಲೂಟಿ ಮಾಡಲು ಮಾರ್ಗದರ್ಶನ ನೀಡಿ ಎಂದು ನೀರವ್ ಮೋದಿ ಎಂದು ಬರೆದಿದ್ದು, ಇತ್ತೀಚೆಗೆ ಪ್ರಧಾನಿ ಮೋದಿ ಅವರು ಸ್ವಿಜರ್‍ಲ್ಯೆಂಡ್ ದಾವೋಸ್ ನಲ್ಲಿ ಭಾಗವಹಿಸಿದ್ದ ವಿಶ್ವ ಆರ್ಥಿಕ ಒಕ್ಕೂಟ ಶೃಂಗ ಸಭೆಯಲ್ಲಿ ನೀರವ್ ಭಾಗವಹಿಸಿದ್ದ ವಿಚಾರವನ್ನು ಉಲ್ಲೇಖಿಸಿದ್ದಾರೆ.

    ರಾಹುಲ್ ಟ್ವೀಟ್ ಗೂ ಕೆಲ ಸಮಯದ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ನೀರವ್ ಮೋದಿ ಅಥವಾ ವಿಜಯ್ ಮಲ್ಯ ಬಿಜೆಪಿಯ ಸಹಕಾರವಿಲ್ಲದೇ ದೇಶವನ್ನು ತೊರೆದರು ಎಂಬುದನ್ನು ನಂಬಲು ಸಾಧ್ಯವೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.

    ಮೂಲಗಳ ಪ್ರಕಾರ ಪಿಎನ್‍ಬಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನೀರವ್ ಮೋದಿ ಅವರಿಗೆ ಸಂಬಂಧಿಸಿದ ಕಚೇರಿಗಳ ಮೇಲೆ ಕೇಂದ್ರದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳು ನೀರವ್ ಹಾಗೂ ಅವರ ಸಹೋದರ, ಪತ್ನಿ ಮತ್ತು ಕೆಲವರು ಬ್ಯಾಂಕ್ ಗೆ ಮೋಸ ಮಾಡಿದ್ದು, ಇದರಿಂದ ನಷ್ಟ ಉಂಟಾಗಿದೆ ಎಂದು ಸಿಬಿಐ ಗೆ ದೂರು ನೀಡಿದೆ. ಪ್ರಸ್ತುತ ಉದ್ಯಮಿ ನೀರವ್ ಮೋದಿ ತಲೆ ಮರೆಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಪ್ರಸ್ತುತ ಪ್ರಕರಣದಲ್ಲಿ ನೀರಜ್ ಅವರಿಗೆ ಸಂಬಂಧಿಸಿದ ಮುಂಬೈ, ಸೂರತ್ ಕಚೇರಿಗಳು ಸೇರಿದಂತೆ 10 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

    ಪಂಜಾಬ್ ನ್ಯಾಷನಲ್ ಬ್ಯಾಂಕ್ ಅವ್ಯವಹಾರ ಕುರಿತು ಬುಧವಾರವಷ್ಟೇ ಬ್ಯಾಂಕ್ ಮಾಹಿತಿ ಬಹಿರಂಗ ಪಡಿಸಿತ್ತು. ಇನ್ನು ಅಕ್ರಮ ಹಣ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಿಎನ್‍ಬಿ ತನ್ನ 10 ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿದೆ.

    ಮುಂಬೈ ಶಾಖೆಯಲ್ಲಿ 11,300 ಕೋಟಿ ರೂ. ಅಕ್ರಮ ವಹಿವಾಟು ನಡೆದಿರುವುದು ತನಿಖೆ ವೇಳೆ ಪತ್ತೆಯಾಗಿದೆ. ತಮಗೇ ಬೇಕಾದ ಗ್ರಾಹಕರ ಜೊತೆ ವ್ಯವಹಾರ ನಡೆಸಿ ಈ ಅಕ್ರಮ ಎಸಗಲಾಗಿದೆ ಎಂದು ಪಿಎನ್‍ಬಿ ಮುಂಬೈ ಶೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿತ್ತು. ಪಿಎನ್‍ಬಿ ಗ್ರಾಹಕರಿಗೆ ಬೃಹತ್ ಪ್ರಮಾಣದಲ್ಲಿ ಸಾಲ ನೀಡುವ ದೇಶದ ಎರಡನೇ ಅತೀ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಆಗಿದೆ. ಅಷ್ಟೇ ಅಲ್ಲದೇ ತನ್ನ ಆಸ್ತಿಯಿಂದಾಗಿ ದೇಶದ ನಾಲ್ಕನೇ ಅತೀ ದೊಡ್ಡ ಬ್ಯಾಂಕ್ ಎನಿಸಿಕೊಂಡಿದೆ. ಇದನ್ನೂ ಓದಿ: ಪಿಎನ್‍ಬಿಯಲ್ಲಿ 11,300 ಕೋಟಿ ರೂ. ಭಾರೀ ಅಕ್ರಮ!

    ಪಿಎನ್‍ಬಿ 2016-17ರ ಅವಧಿಯಲ್ಲಿ ವಸೂಲಾಗದ 9,205 ಕೋಟಿ ರೂ. ಸಾಲದ ಮೊತ್ತವನ್ನು ವಜಾ ಮಾಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಳಿಕ ಅತಿ ಹೆಚ್ಚು ಸಾಲದ ಮೊತ್ತವನ್ನು ವಜಾಗೊಳಿಸಿದ ಎರಡನೇ ಬ್ಯಾಂಕ್ ಪಿಎನ್‍ಬಿ ಆಗಿದೆ. ಎಸ್‍ಬಿಐ ವಸೂಲಾಗದ 20,339 ಕೋಟಿ ರೂ. ಸಾಲದ ಮೊತ್ತವನ್ನು ವಜಾಗೊಳಿಸಿತ್ತು.