ಬೆಂಗಳೂರು: ಹೋರಾಟಗಾರರು ಹೇಗೆ ಭಾಷಣ ಮಾಡುತ್ತಾರೋ ಅದೇ ರೀತಿ ನೀವು ಬಿಗ್ ಬುಲೆಟಿನ್ನಲ್ಲಿ ಮಾಡುತ್ತಿದ್ದೀರಿ ಎಂದು ಹಿರಿಯ ಪತ್ರಕರ್ತ ಸತ್ಯನಾರಾಯಣ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯ ವಿಶೇಷ ಬಿಗ್ ಬುಲೆಟಿನ್ ನಲ್ಲಿ ಮಾತನಾಡಿದ ಅವರು, ಕ್ಯಾಮೆರಾ ನಿಮ್ಮದು, ಮೈಕ್ ನಿಮ್ಮ ಬಳಿಯೇ ಇದೆ. ಚರ್ಚೆಯಲ್ಲಿ ಬೇರೆ ಅವರಿಗೆ ಮಾತನಾಡಲು ಅವಕಾಶ ನೀಡದ ಕಾರಣ ಸತ್ಯದ ದರ್ಶನಕ್ಕೆ ಅಪಚಾರವಾಗಬಹುದು ಎನ್ನುವ ಶಂಕೆ ನನ್ನದು ಎಂದು ಅವರು ಹೇಳಿದರು.
ರಾಜಕೀಯ ವ್ಯಕ್ತಿಗಳಿಗೆ ಮಾತನಾಡಲು ಅವಕಾಶ ನೀಡದೇ ಇದ್ದರೆ, ಜನರಿಗೆ ತಪ್ಪು ಮಾಹಿತಿ ರವಾನಿಸಿದಂತೆ ಆಗುತ್ತದೆ. ಕೆಲವೊಮ್ಮೆ ಆಕ್ರೋಶ ಇರಬೇಕು ಎಂದು ತಿಳಿಸಿದರು.
ಬೇರೆಯವರ ಧ್ವನಿ ಕೇಳಲ್ಲ: ನಿಮ್ಮ ಮತನಾಡುವ ಭಾಷೆ ವಾಕ್ಯಗಳು ಚೆನ್ನಾಗಿದೆ. ನಿಮ್ಮ ಧ್ವನಿ ಮಾತ್ರ ಕೇಳುತ್ತದೆ, ಬೇರೆಯವರ ಧ್ವನಿ ಸ್ಪಷ್ಟವಾಗಿ ಕೇಳುವುದಿಲ್ಲ ಯಾಕೆ ಎಂದು ಹಿರಿಯ ನಟಿ ಅರುಂಧತಿ ನಾಗ್ ಎಚ್.ಆರ್.ರಂಗನಾಥ್ ಅವರಲ್ಲಿ ಪ್ರಶ್ನಿಸಿದರು.
ಇದಕ್ಕೆ ಉತ್ತರ ನೀಡಿದ ರಂಗನಾಥ್, ನಮ್ಮದು ಸ್ಟುಡಿಯೋದ ಜೊತೆ ನೇರಸಂಪರ್ಕ ಇರುತ್ತದೆ. ಬೇರೆಯವರ ಮಾತನಾಡುವ ಸಿಗ್ನಲ್ ಸಮಸ್ಯೆಯಾಗುತ್ತದೆ. ಇದರಿಂದಾಗಿ ಕೆಲವೊಮ್ಮೆ ದೃಶ್ಯ, ಆಡಿಯೋ ಸರಿಯಾಗಿ ಬರುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ರಂಗನಾಥ್, ಪ್ರಜಾಪ್ರಭುತ್ವದಲ್ಲಿ ನಾವು ಪ್ರಶ್ನಾತೀತರಲ್ಲ. ನಾವು ಹೇಗೆ ಪ್ರಶ್ನೆ ಮಾಡುತ್ತೇವೋ ಅದೇ ರೀತಿಯಾಗಿ ನಮ್ಮನ್ನು ಜನ ಪ್ರಶ್ನೆ ಮಾಡಬೇಕು. ಇಲ್ಲಿ ಪಬ್ಲಿಕ್ ಟಿವಿಯನ್ನು ಹೊಗಳಿ ಮಾತನಾಡಬಾರದು, ನಮ್ಮ ತಪ್ಪುಗಳನ್ನು ತೋರಿಸಿ ಟೀಕಿಸಬೇಕು ಎಂದು ಅತಿಥಿಗಳಲ್ಲಿ ಕೇಳಿಕೊಂಡಿದ್ದರು.
ಸಂವಾದದ ಕೊನೆಯಲ್ಲಿ ಎಲ್ಲ ಅತಿಥಿಗಳ ಪ್ರಶ್ನೆಗೆ ಉತ್ತರಿಸಿದ ರಂಗನಾಥ್, ನಿಮ್ಮೆಲ್ಲರ ಸಲಹೆಯನ್ನು ಪರಿಗಣಿಸಿದ್ದೇನೆ. ನಾಳೆಯಿಂದಲೇ ನಿಮ್ಮ ಸಲಹೆಗಳು ಜಾರಿ ಆಗುತ್ತದೆ ಎಂದು ಹೇಳಲಾರೆ. ಆದರೆ ಮುಂದಿನ ದಿನಗಳಲ್ಲಿ ನೀವು ಪಬ್ಲಿಕ್ ಟಿವಿಯಲ್ಲಿ ಬದಲಾವಣೆಯನ್ನು ಕಾಣಲಿದ್ದೀರಿ ಎಂದು ತಿಳಿಸಿದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯ, ನಿವೃತ್ತ ಡಿಜಿ, ರೇವಣ ಸಿದ್ದಯ್ಯ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್, ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ದ್ವಾರಕನಾಥ್, ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ, ಉತ್ತರ ಕರ್ನಾಟಕನಿವಾಸಿಗಳ ಸಂಘದ ಅಧ್ಯಕ್ಷ ಚಂದ್ರೇಶಖರ್ ಸಾಂಬ್ರಾಣಿ, ಮಹಿಳಾ ಹೋರಾಟಗಾರ್ತಿ ವಿಮಲಾ ಅತಿಥಿಗಳಾಗಿ ಭಾಗವಹಿಸಿದ್ದರು.
https://www.youtube.com/watch?v=gExNvrRr3zI
https://www.youtube.com/watch?v=2T6LZpEtf6o
