Tag: PSI Srinivas

  • ಪಿಎಸ್‍ಐ ಶ್ರೀನಿವಾಸ್ ವಿಕೃತ ಕಾಮಿ: ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿಕೆ ವಿಡಿಯೋ ವೈರಲ್

    ಪಿಎಸ್‍ಐ ಶ್ರೀನಿವಾಸ್ ವಿಕೃತ ಕಾಮಿ: ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿಕೆ ವಿಡಿಯೋ ವೈರಲ್

    ಚಿಕ್ಕಬಳ್ಳಾಪುರ: ದೇವನಹಳ್ಳಿಯ ವಿಶ್ವನಾಥಪುರ ಠಾಣೆಯ ಪಿಎಸ್‍ಐ ಶ್ರೀನಿವಾಸ್ ಅವರು ವಿಕೃತ ಕಾಮಿ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಸದ್ಯ ಅವರ ಹೇಳಿಕೆ ವಿಡಿಯೋ ಭಾರೀ ವೈರಲ್ ಆಗಿದೆ.

    ವಿಜಯಪುರದಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಪಿಎಸ್‍ಐ ಶ್ರೀನಿವಾಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಇದನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಈಗ ಈ ವಿಡಿಯೋ ವೈರಲ್ ಆಗಿದ್ದು, ಭಾರೀ ಟೀಕೆ ವ್ಯಕ್ತವಾಗುತ್ತಿವೆ.

    ಶ್ರೀನಿವಾಸ್ ಅವರ ವಿರುದ್ಧ ಹೋರಾಟಕ್ಕೆ ಇಳಿದರೆ ನಾನು ಅವರಂತೆ ಆಗಬೇಕಾಗುತ್ತದೆ. ಅವರು ಲೇ ಅಂದರೆ ನಾನು ಲೇ ಎನ್ನಬೇಕಾಗುತ್ತದೆ. ಅಧಿಕಾರಕ್ಕೆ ಬಂದ ತಕ್ಷಣವೇ ಅವರನ್ನು ವರ್ಗಾವಣೆ ಮಾಡಲು ನಾನು ಮುಂದಾಗಿದ್ದೆ. ಆದರೆ ಪ್ರಕರಣಕ್ಕೆ ಸಿಲುಕಿ ಈಗ ಅವರು ಅಮಾನತ್ತು ಆಗಿದ್ದಾರೆ ಎಂದು ಹೇಳಿದರು.

    ಪಿಎಸ್‍ಐ ಶ್ರೀನಿವಾಸ್ ಅವರು ಅಮಾಯಕರ ಬಳಿ 20 ಲಕ್ಷ ವಸೂಲಿ ಮಾಡಿದ್ದರು. ಇದನ್ನು ಮರೆ ಮಾಚಲು ಕೆಲವು ಬಡವರಿಗೆ ಐದು, ಹತ್ತು ಸಾವಿರ ರೂ. ದಾನ ಮಾಡಿದ್ದಾರೆ. ಇದರಿಂದಾಗಿ ಅವರ ಪರವಾಗಿ ಅನೇಕರು ಧ್ವನಿ ಎತ್ತುವಂತಾಯಿತು. ಅಲ್ಲದೇ ಇತ್ತೀಚೆಗೆ ಅಕ್ರಮ ಕಲ್ಲು ಸಾಗಾಣಿಕೆ ವಿಚಾರದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಗೆ ಬೆದರಿಕೆ ಹಾಕಿದ್ದರು. ಈ ಪ್ರಕರಣದಿಂದಾಗಿ ಶ್ರೀನಿವಾಸ್ ಅವರು ಅಮಾನತು ಕೂಡ ಆಗಿದ್ದರು. ಶ್ರೀನಿವಾಸ್ ಅವರ ಹಗರಣಗಳು ಸದ್ಯದಲ್ಲಿಯೇ ಹೊರ ಬೀಳಲಿವೆ ಎಂದು ಹೇಳಿದರು.

    ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಯಾವುದೇ ಅಧಿಕಾರಿಗಳು ನನ್ನನ್ನು ಭೇಟಿ ಮಾಡಿ, ಶುಭಕೋರಲಿಲ್ಲ. ಆದರೆ ನಂತರದ ದಿನಗಳಲ್ಲಿ ಅವರೇ ಭೇಟಿ ಮಾಡಲು ಬಂದರು. ಈ ವೇಳೆ ಯಾರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲವೋ ಅವರು ಕೆಲಸ ಬಿಟ್ಟು ಮನೆಗೆ ಹೋಗಬಹುದು. ಇಲ್ಲವೇ ಬೇರೆ ಕಡೆಗೆ ವರ್ಗ ಮಾಡಿಸಿಕೊಂಡು ಹೋಗಬಹುದು ಎಂದು ತಾಖೀತು ಮಾಡಿರುವೆ ಎಂದು ಶಾಸಕರು ಹೇಳಿದ್ದರು.

  • ಸಿಪಿಐಗೆ ಕಾನೂನು ಪಾಠ ಹೇಳಿದ್ದಕ್ಕೆ ಸಿಂಗಂ ಖ್ಯಾತಿಯ ಪಿಎಸ್‍ಐ ಶ್ರೀನಿವಾಸ್‍ಗೆ ಅಮಾನತು ಭಾಗ್ಯ

    ಸಿಪಿಐಗೆ ಕಾನೂನು ಪಾಠ ಹೇಳಿದ್ದಕ್ಕೆ ಸಿಂಗಂ ಖ್ಯಾತಿಯ ಪಿಎಸ್‍ಐ ಶ್ರೀನಿವಾಸ್‍ಗೆ ಅಮಾನತು ಭಾಗ್ಯ

    ಚಿಕ್ಕಬಳ್ಳಾಪುರ: ದಂಧೆಕೋರರ ಪರವಾಗಿ ನಿಂತ ಸಿಪಿಐಗೆ ಕಾನೂನು ಪಾಠ ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದ್ದ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೊಲೀಸ್ ಠಾಣೆಯ ಪಿಎಸ್‍ಐ ಶ್ರೀನಿವಾಸ್ ಈಗ ಅಮಾನತುಗೊಂಡಿದ್ದಾರೆ.

    ಹಿರಿಯ ಅಧಿಕಾರಿಯ ಜೊತೆ ಅಸಭ್ಯ ವರ್ತನೆ ಆರೋಪದಡಿಯಲ್ಲಿ ಪಿಎಸ್‍ಐ ಶ್ರೀನಿವಾಸ್‍ರವರನ್ನು ಅಮಾನತುಗೊಳಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿ ಭೀಮಾಶಂಕರ ಗುಳೇದ ಆದೇಶ ಹೊರಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಎಸ್‍ಪಿಯವರು, ಹಿರಿಯ ಅಧಿಕಾರಿ ಜೊತೆ ಅಸಭ್ಯ ವರ್ತನೆ ಅಲ್ಲದೇ ಹಲವು ಕಾರಣಗಳಿಂದ ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಈ ಕುರಿತು ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ಪಿಎಸ್‍ಐ ಶ್ರೀನಿವಾಸ್‍ರವರು ಅಮಾನತು ಆದೇಶ ನೋವು ತಂದಿದ್ದು, ಈ ಕುರಿತು ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಪಬ್ಲಿಕ್ ಟಿವಿ ಜೊತೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

    ಏನಿದು ಪ್ರಕರಣ?
    ದೇವನಹಳ್ಳಿಯ ಜೆಡಿಎಸ್‍ನ ಮಾಜಿ ಅಧ್ಯಕ್ಷನಾದ ಕೃಷ್ಣಮೂರ್ತಿ ಕಡೆಯವರು ಅಕ್ರಮವಾಗಿ ಲಾರಿಗಳಲ್ಲಿ ಗ್ರಾನೈಟ್ ಸಾಗಿಸುತ್ತಿದ್ದರು. ಕಳೆದ ಭಾನುವಾರ ಕಾನೂನು ಬಾಹಿರವಾಗಿ ಗ್ರಾನೈಟ್ ಸಾಗಿಸುತ್ತಿರುವ ಖಚಿತ ಮಾಹಿತಿ ವಿಶ್ವನಾಥಪುರ ಪೊಲೀಸರಿಗೆ ಸಿಕ್ಕಿದೆ. ಈ ಕುರಿತು ಪೊಲೀಸ್ ಸಿಬ್ಬಂದಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾಗ ದಂಧೆಕೋರರು ಪೊಲೀಸರ ಮೇಲೆಯೇ ದಬ್ಬಾಳಿಕೆ ನಡೆಸಿದ್ದರು.

    ಸಿಬ್ಬಂದಿಗೆ ಲಾರಿಯನ್ನು ವಶಪಡಿಸಿಕೊಳ್ಳದಂತೆ ಬೆದರಿಕೆ ಹಾಕಿದ್ದರು. ಈ ಕುರಿತು ಸಿಬ್ಬಂದಿಯು ವಿಶ್ವನಾಥಪುರದ ಪಿಎಸ್‍ಐ ಶ್ರೀನಿವಾಸ್‍ಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪಿಎಸ್‍ಐ ಮೇಲೆಯೂ ದಬ್ಬಾಳಿಕೆ ನಡೆಸಲಾಗಿತ್ತು. ಪಿಎಸ್‍ಐ ಬಗ್ಗದಿದ್ದಾಗ ಮೇಲಾಧಿಕಾರಿಗಳ ಮುಖಾಂತರ ಒತ್ತಡ ಮುಂದಾಗಿದ್ದರು. ಇದನ್ನೂ ಓದಿ: ದಂಧೆಕೋರರ ಪರ ನಿಂತ ಸಿಪಿಐಗೆ ಸಿಂಗಂ ಸ್ಟೈಲಲ್ಲಿ ಪಿಎಸ್‍ಐ ಅವಾಜ್!

    ದೂರವಾಣಿ ಮೂಲಕ ಮಾತನಾಡಿದ ವಿಜಯಪುರ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ದಂಧೆಕೋರರ ಪರನಿಂತು ಲಾರಿಗಳನ್ನು ಬಿಡುವಂತೆ ಒತ್ತಡ ಹೇರಿದ್ದಾರೆ. ಈ ವೇಳೆ ಪಿಎಸ್‍ಐಯು ಮೇಲಾಧಿಕಾರಿಯ ಒತ್ತಡಕ್ಕೆ ಮಣಿಯದೇ ಕಾನೂನು ಎಲ್ಲರಿಗೂ ಒಂದೇ ಅಂತ ಖಡಕ್ ಆಗಿ ಉತ್ತರಿಸಿದ್ದಾರೆ. ದಂಧೆಕೋರರ ಪರ ನಿಂತ ಮೇಲಾಧಿಕಾರಿಗೆ ಫೋನ್‍ನಲ್ಲಿಯೇ ತರಾಟೆ ತೆಗೆದುಕೊಂಡಿದ್ದರು.

    ಈ ಎಲ್ಲಾ ಘಟನೆಯನ್ನು ಸ್ಥಳೀಯರು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ಸೋಷಿಯಲ್ ಮಿಡಿಯಾಗಳಲ್ಲಿ ವಿಡಿಯೋ ಹಾಕಿದ್ದಾರೆ. ಸದ್ಯ ಪಿಎಸ್‍ಐ ಶ್ರೀನಿವಾಸ್‍ರವರು ಮೇಲಾಧಿಕಾರಿಗೆ ಖಡಕ್ ಆವಾಜ್ ಹಾಕಿದ ವಿಡಿಯೋ ವೈರಲ್ ಆಗಿದ್ದು, ಪಿಎಸ್‍ಐ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    https://www.youtube.com/watch?v=1UsgtKiMocA&feature=youtu.be