Tag: protest

  • ಬೆಂಗ್ಳೂರು ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್- ಇಂದು `ನಮ್ಮ ಮೆಟ್ರೋ’ ಬಂದ್

    ಬೆಂಗ್ಳೂರು ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್- ಇಂದು `ನಮ್ಮ ಮೆಟ್ರೋ’ ಬಂದ್

    ಬೆಂಗಳೂರು: ಗುರುವಾರ ಮೆಟ್ರೋ ಸಿಬ್ಬಂದಿ ಮೇಲೆ ಕರ್ನಾಟಕ ರಾಜ್ಯ ಇಂಡಸ್ಟ್ರಿಯಲ್ ಫೋರ್ಸ್ ಕಾನ್ಸ್‍ಟೇಬಲ್‍ನಿಂದ ಹಲ್ಲೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಮೆಟ್ರೋ ಸಿಬ್ಬಂದಿ ನಡುವೆ ನಡೆದಿದ್ದ ಗಲಾಟೆ ವೇಳೆ ಆರು ಜನ ಬಿಎಂಆರ್‍ಸಿಎಲ್ ಸಿಬ್ಬಂದಿಗಳನ್ನು ಬಂಧಿಸಲಾಗಿತ್ತು..

    ಬಿಎಂಆರ್‍ಸಿಎಲ್ ಸಿಬ್ಬಂದಿ ಬಂಧನವನ್ನು ಖಂಡಿಸಿ ಮೆಟ್ರೋ ಸಿಬ್ಬಂದಿ ರಾತ್ರಿ ಬೈಯಪ್ಪನಹಳ್ಳಿ ಮೆಟ್ರೋ ಡಿಪೋದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಕೂಡಲೇ ಬಂಧಿಸಲ್ಟಟ್ಟ ಸಿಬ್ಬಂದಿಯನ್ನು ಬಿಡುಗಡೆಗೊಳಿಸಿಬೇಕೆಂದು ಬೈಯಪ್ಪನಹಳ್ಳಿ ಡಿಪೋದಲ್ಲಿ ಸಾವಿರಾರರು ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಮೆಟ್ರೋ ಸಿಬ್ಬಂದಿ ಪ್ರತಿಭಟನೆಯಲ್ಲಿ ತೊಡಗಿದ್ದರಿಂದ ಮೆಟ್ರೋ ಸಂಚಾರ ಸಂಪೂರ್ಣ ನಿಂತು ಹೋಗಿದೆ.

    ಇನ್ನು ಬಂಧಿಸಿದ ಮೆಟ್ರೋ ಸಿಬ್ಬಂದಿಯನ್ನು ಬಿಡಡುಗಡೆ ಮಾಡಲಾಗುವುದಿಲ್ಲ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿದುಬಂದಿದೆ. ಪ್ರತಿಭಟನಾ ಸ್ಥಳಕ್ಕೆ ಬಿಎಂಆರ್‍ಸಿಎಲ್ ಎಂ.ಡಿ ಪ್ರದೀಪ್ ಸಿಂಗ್ ಭೇಟಿ ನೀಡಿದ್ದು, ಪ್ರತಿಭಟನೆಯನ್ನು ಕೈ ಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

     

     

  • ಗಮನಿಸಿ, ಜುಲೈ 12ರಂದು ಪೆಟ್ರೋಲ್, ಡೀಸೆಲ್ ಸಿಗಲ್ಲ

    ಗಮನಿಸಿ, ಜುಲೈ 12ರಂದು ಪೆಟ್ರೋಲ್, ಡೀಸೆಲ್ ಸಿಗಲ್ಲ

    ಬೆಂಗಳೂರು: ಪ್ರತಿ ದಿನ ದರ ಪರಿಷ್ಕರಣೆ ವಿರೋಧಿಸಿ ಅಖಿಲ ಭಾರತ ಪೆಟ್ರೋಲ್ ವರ್ತಕರ ಸಂಘ ಜುಲೈ 12ರಂದು ಬಂಕ್ ಗಳನ್ನು ಬಂದ್ ಮಾಡಿ ಪ್ರತಿಭಟಿಸಲು ಮುಂದಾಗಿದೆ.

    ದೇಶಾದ್ಯಂತೆ ನಡೆಯುವ ಪ್ರತಿಭಟನೆ ಸಾಥ್ ನೀಡಲು ರಾಜ್ಯಾದ್ಯಂತ ಮೂರುವರೆ ಸಾವಿರ ಪೆಟ್ರೋಲ್ ಬಂಕ್‍ಗಳು ಬಂದ್ ಆಗಲಿದೆ ಎಂದು ವರ್ತಕರ ಸಂಘದ ಉಪಾಧ್ಯಾಕ್ಷ ಅನೀಸ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಈ ಬಂದ್ ಗೆ ರವೀಂದ್ರನಾಥ್ ನೇತೃತ್ವದ ಪೆಟ್ರೋಲ್ ಡೀಲರ್ಸ್ ಆಸೋಸಿಯೇಷನ್ ಬೆಂಬಲ ಕೊಟ್ಟಿಲ್ಲ. ಆದರೆ ಸುಮಾರು ರಾಜ್ಯದ 24 ಜಿಲ್ಲೆಯಲ್ಲಿ ನಮ್ಮ ಸಂಘಟನೆ ಪ್ರಬಲವಾಗಿದೆ. ತೈಲ ಕಂಪನಿ ನಮ್ಮ ಬೇಡಿಕೆ ಈಡೇರಿಸದೆ ಇದ್ದರೆ ಬಂದ್ ನಡೆಸಿಯೇ ನಡೆಸುತ್ತೇವೆ ಎಂದು ಅವರು ಹೇಳಿದರು.

    ಪ್ರತಿನಿತ್ಯ ದರ ಪರಿಷ್ಕರಣೆಯಾಗುತ್ತಿರುವುದರಿಂದ ನಮಗೆ ನಷ್ಟವಾಗುತ್ತಿದೆ. ವರ್ತಕರ ಸಲಹೆ ಪಡೆಯದೇ ಕಂಪೆನಿಗಳು ಪ್ರತಿನಿತ್ಯ ಪರಿಷ್ಕರಣೆ ಮಾಡುತ್ತಿವೆ. ಜುಲೈ 12ರಂದು ಬೆಳಗ್ಗೆಯಿಂದ ರಾತ್ರಿಯವರೆಗೆ ಪೆಟ್ರೋಲ್, ಡಿಸೇಲ್ ಸಿಗಲ್ಲ. ಅಷ್ಟೇ ಅಲ್ಲದೇ ಆ ದಿನ ತೈಲವನ್ನು ಖರೀದಿಸಲ್ಲ ಎಂದು ಅವರು ತಿಳಿಸಿದರು.

    ಇದನ್ನೂ ಓದಿ: ಇನ್ನು ಐದು ವರ್ಷದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!

    ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲೇ ಡೀಸೆಲ್ ಬೆಲೆ ಅತಿ ಕಡಿಮೆ

     

     

  • ವಿಧಾನಸೌಧದ ಎದುರು ಮಲ ಮೂತ್ರ ಮೈ ಮೇಲೆ ಸುರಿದುಕೊಂಡು ಪ್ರತಿಭಟನೆ

    ವಿಧಾನಸೌಧದ ಎದುರು ಮಲ ಮೂತ್ರ ಮೈ ಮೇಲೆ ಸುರಿದುಕೊಂಡು ಪ್ರತಿಭಟನೆ

    ಬೆಂಗಳೂರು: ಇಂದು ನಗರದಲ್ಲಿ ವಿಧಾನಸೌಧದ ಎದುರು ಮಲ ಮೂತ್ರ ಮೈ ಮೇಲೆ ಸುರಿದುಕೊಂಡು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದಾರೆ.

    ಬೆಂಗಳೂರು ಪೂರ್ವ ತಾಲೂಕಿನ ವೈಟ್‍ಫೀಲ್ಡ್ ಬಳಿ ರಾಜಕಾಲುವೆ ಒತ್ತುವರಿ ವಿಚಾರ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಯಿಂದ ಒತ್ತುವರಿಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಆಕ್ರೋಶಗೊಂಡ ಪ್ರತಿಭಟನಾ ನಿರತ ಐವರು ವಿಧಾನಸೌಧದ ಗೇಟ್ ಬಳಿ ಮಲ ಮತ್ತು ಮೂತ್ರ ಮೈ ಮೇಲೆ ಸುರಿದುಕೊಂಡಿದ್ದಾರೆ.

    ಬೆಂಗಳೂರಿನ ವೈಟ್ ಫೀಲ್ಡ್ ಬಳಿ ರಾಜಕಾಲುವೆ ಒತ್ತುವರಿ ವಿಚಾರವಾಗಿ ದಲಿತರ ಗುಡಿಸಲುಗಳನ್ನ ನೆಲಸಮ ಮಾಡಲಾಯ್ತು. ಆದ್ರೆ ಆನಂತರ ಖಾಸಗಿ ಕಂಪನಿಯೊಂದು ರಾಜಕಾಲುವೆ ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ಪೂರ್ವ ತಾಲುಕು ತಹಶೀಲ್ದಾರರಿಗೆ ಹಾಗೂ ಜಿಲ್ಲಾಧಾಕಾರಿಗಳಿಗೆ ದೂರು ನೀಡಿದ್ರು ಯಾವುದೇ ಕ್ರಮ ಕೈಗೊಂಡಿಲ್ಲ. ವೈಟ್ ಫೀಲ್ಡ್ ಅಲ್ಲದೇ ಬೆಂಗಳೂರಿನ ವಿವಿಧೆಡೆ ಖಾಸಗಿ ಕಂಪನಿಯವರು ರಾಜ ಕಾಲುವೆ ಒತ್ತುವರಿ ಮಾಡಿದ್ದಾರೆ. ಆದ್ರೆ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ತಿಲ್ಲ. ಬಡವರನ್ನ ಮಾತ್ರ ಒತ್ತುವರಿಯಲ್ಲಿ ಟಾರ್ಗೇಟ್ ಮಾಡಲಾಗ್ತಿದೆ ಅಂತಾ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡು, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

  • ಬಾಗಲಕೋಟೆ-ಕುಡಚಿ ರೈಲು ಸಂಚಾರ ವಿರೋಧಿಸಿ ರೈತರ ಪ್ರತಿಭಟನೆ

    ಬಾಗಲಕೋಟೆ-ಕುಡಚಿ ರೈಲು ಸಂಚಾರ ವಿರೋಧಿಸಿ ರೈತರ ಪ್ರತಿಭಟನೆ

    ಬಾಗಲಕೋಟೆ: ನಗರದಲ್ಲಿ ಕುಡಚಿ ರೈಲು ಸಂಚಾರ ವಿರೋಧಿಸಿ ತಾಲೂಕಿನ ರೈತರು ಬುಧವಾರ ರೈಲು ಹಳಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

    ರೈಲ್ವೆ ಇಲಾಖೆಯ ಅಧಿಕಾರಿಗಳು 5 ವರ್ಷಗಳ ಹಿಂದೆ ರೈಲು ಮಾರ್ಗಕ್ಕಾಗಿ ಬಾಗಲಕೋಟೆ ತಾಲೂಕಿನ ಸಿಗಿಕೇರಿ, ನೀರಲಕೇರಿ ಸುಳಿಕೇರಿ ಸೇರಿದಂತೆ ಹತ್ತಾರು ಗ್ರಾಮದ ನೂರಾರು ಎಕರೆ ಜಮೀನು ಸ್ವಾಧೀನ ಪಡೆಸಿಕೊಂಡಿದ್ದರು.

    ಭೂ ಸ್ವಾಧೀನ ಪಡೆಸಿಕೊಂಡು ಐದು ವರ್ಷಗಳಾದ್ರೂ ಈವರೆಗೂ ಭೂಮಿ ಕಳೆದುಕೊಂಡ ರೈತರಿಗೆ ಯೋಗ್ಯ ಬೆಲೆ ನೀಡಿರಲಿಲ್ಲ. ಅಲ್ಲದೇ ಭೂ ಸ್ವಾಧೀನ ಪಡೆಸಿಕೊಳ್ಳುವಾಗ ರೈತರ ಮಕ್ಕಳ ಶಿಕ್ಷಣಕ್ಕೆ ಅನುಗುಣವಾಗಿ ಮನೆಯೊಬ್ಬರಿಗೆ ಸರ್ಕಾರಿ ಕೆಲಸ ನೀಡುವ ಭರವಸೆ ನೀಡಿದ್ದರು.

    ಆದರೆ ಇಲ್ಲಿಯವರೆಗೆ ರೈಲ್ವೇ ಇಲಾಖೆ ನೀಡಿದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ಹೀಗಿರುವಾಗಲೇ ಅಧಿಕಾರಿಗಳು ಪ್ರಾಯೋಗಿಕವಾಗಿ ಕುಡುಚಿ ರೈಲು ಓಡಿಸಲು ಮನಸ್ಸು ಮಾಡಿದ್ದಾರೆ. ಅಧಿಕಾರಿಗಳ ಈ ಕ್ರಮಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಆಕ್ರೋಶದಿಂದ ರೈಲು ಹಳಿಯಲ್ಲಿಯೇ ಕುಳಿತು ಜನರು ಪ್ರತಿಭಟನೆ ನೆಡೆಸಿದರು.

     

    ಯಾವುದೇ ಕಾರಣಕ್ಕೂ ರೈಲು ಓಡಿಸಲು ಬಿಡೋದಿಲ್ಲವೆಂದು ಖಡಕ್ಕಾಗಿ ಹೇಳಿದ ರೈತರು, ರೈಲ್ವೇ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

  • ಮುಂಗಾರು ಟೈಂನಲ್ಲಿ ಕಸ ಕಗ್ಗಂಟು – 5 ಸಾವಿರ ಪೌರ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ

    ಮುಂಗಾರು ಟೈಂನಲ್ಲಿ ಕಸ ಕಗ್ಗಂಟು – 5 ಸಾವಿರ ಪೌರ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ

    ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕಿದ್ದ ಕಸ ಈಗ ಮತ್ತೆ ಸುದ್ದಿಯಲ್ಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪೌರ ಕಾರ್ಮಿಕರು ಮುಷ್ಕರ ಆರಂಭ ಮಾಡಿದ್ದು ಕಸ ಎತ್ತುವುದನ್ನು ಸ್ಥಗಿತಗೊಳಿಸಿದ್ದಾರೆ

    ಸೋಮವಾರದಿಂದ ಮಹಾನಗರಿಯಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ. ಹೈಕೋರ್ಟ್ ಆದೇಶದಂತೆ ನಮ್ಮನ್ನು ಖಾಯಂಗೊಳಿಸಿ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ಅಂತ ಪಟ್ಟು ಹಿಡಿದಿರೋ ಪೌರ ಕಾರ್ಮಿಕರು ಬೆಂಗಳೂರಿನ ಬನ್ನಪ್ಪಪಾರ್ಕ್‍ನಲ್ಲಿ ಅನಿರ್ದಿಷ್ಠಾವಧಿಯ ಮುಷ್ಕರ ನಡೆಸುತ್ತಿದ್ದಾರೆ. ಇದರಲ್ಲಿ 5 ಸಾವಿರ ಮಂದಿ ಪೌರ ಕಾರ್ಮಿಕರು ಭಾಗವಹಿಸಿದ್ದಾರೆ.

    ಬೇಡಿಕೆ ಈಡೇರುವವರೆಗೆ ಕಸ ಎತ್ತಲ್ಲ ಎಂದು ಕಾರ್ಮಿಕರು ಸ್ಪಷ್ಟಪಡಿಸಿದ್ದಾರೆ. ಒಂದು ಕಡೆ ಮುಂಗಾರು ಮಳೆ ಕೂಡಾ ಬರುತ್ತಿರುವ ಕಾರಣ ಕಸ ವಿಲೇವಾರಿಯಾಗದೇ ರೋಗ-ರುಜಿನಗಳು ಶುರುವಾಗೋ ಆತಂಕ ಎದುರಾಗಿದೆ.

  • ಕೋಲಾರ ಬಂದ್ ಬಿಸಿ: ಊಟಕ್ಕೆ ಮದುವೆ ಮನೆಗಳಿಗೆ ಎಂಟ್ರಿ ಕೊಟ್ಟ ಪ್ರತಿಭಟನಾಕಾರರು

    ಕೋಲಾರ ಬಂದ್ ಬಿಸಿ: ಊಟಕ್ಕೆ ಮದುವೆ ಮನೆಗಳಿಗೆ ಎಂಟ್ರಿ ಕೊಟ್ಟ ಪ್ರತಿಭಟನಾಕಾರರು

    ಕೋಲಾರ: ಇಂದು ಕನ್ನಡಪರ ಸಂಘಟನೆಗಳು ನೀಡಿದ್ದ `ಕರ್ನಾಟಕ ಬಂದ್’ಗೆ ನಗರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಆದರೆ ಬಹುತೇಕ ಮದುವೆಗೆ ಬರಬೇಕಾದ ಜನ ಬರದೇ ಮಂಟಪಗಳು ಬಿಕೋ ಎನ್ನುತ್ತಿದ್ದವು.

    ನಗರದ ವಕೀಲ ಕೋದಂಡಪ್ಪನವರ ಮಗ ವೀರೇಂದ್ರ ಹಾಗೂ ಚಿತ್ರಾ ಎಂಬವರ ಮದುವೆಗೂ ಬಂದ್ ಬಿಸಿ ತಟ್ಟಿತ್ತು. ಬಂದ್‍ನಿಂದಾಗಿ ಮದುವೆಗಳಿಗೆ ಬರಬೇಕಾದ ಬಂಧುಗಳು ಹಾಗು ಸ್ನೇಹಿತರು ಬರದೇ ಇದ್ದಿದರಿಂದ ಕಲ್ಯಾಣ ಮಂಟಪಗಳು ಜನರಿಲ್ಲದೇ ಖಾಲಿ ಖಾಲಿಯಾಗಿತ್ತು.

    ಬಂಧುಗಳು ಬರದೇ ಇದಿದ್ದರಿಂದ ಮಾಡಿದ್ದ ಅಡುಗೆ ಹಾಗೆಯೇ ಉಳಿದಿತ್ತು. ಮದುವೆ ಮನೆಯವರ ಆಹ್ವಾನದ ಮೇರೆಗೆ ಹೋರಾಟಗಾರರೆಲ್ಲರೂ ಬಂದು ಊಟ ಮಾಡಿದ್ದಾರೆ. ಪ್ರತಿಭಟನೆ ಮಾಡಿ ಸುಸ್ತಾಗಿದ್ದ ಪ್ರತಿಭಟನಾಕಾರರು ರುಚಿಯಾದ ಊಟ ಮಾಡಿ ತಮ್ಮ ಹಸಿವು ನೀಗಿಸಿಕೊಂಡರು.

    https://www.youtube.com/watch?v=8OR7M716AWI

     

     

  • ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಬೆತ್ತಲೆ ಪ್ರತಿಭಟನೆ

    ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಬೆತ್ತಲೆ ಪ್ರತಿಭಟನೆ

    ಹಾವೇರಿ: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ರೈತರೊಬ್ಬರು ಹಾವೇರಿಯಲ್ಲಿ ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.

    ನಗರದ ಹೊಸಮನಿ ಸಿದ್ದಪ್ಪ ಸರ್ಕಲ್ ಬಳಿ ರೈತ ಕಾಳಪ್ಪ ಲಮಾಣಿ ಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಇದೇ ವೇಳೆ ಚಂದ್ರಪ್ಪ ಎಂಬವರು ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹುಚ್ಚವ್ವನಹಳ್ಳಿ ಮಂಜುನಾಥ ಬಣದ ಕಾರ್ಯಕರ್ತರು ನಗರದ ಮುರುಘರಾಜೇಂದ್ರಮಠದಿಂದ ಅರೆಬೆತ್ತಲೆ ಪ್ರತಿಭಟನೆ ಪ್ರಾರಂಭಿಸಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲ ರೈತರು ಬೇವಿನಸೊಪ್ಪು ಕಟ್ಟಿಕೊಂಡು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

    ಇದೂವರೆಗೂ ಜಿಲ್ಲೆಯ ಯಾವ ರೈತರಿಗೂ ಬಗರ್ ಹುಕುಂ ಪತ್ರವನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ರೈತರು ರಾಣೇಬೆನ್ನೂರು ಪಟ್ಟಣದಲ್ಲಿ ಪ್ರತಿಭಟನೆ ಕೈಗೊಂಡಿದ್ರೂ, ಯಾವ ಅಧಿಕಾರಿಗಳು ಗಮನ ಹರಿಸಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ರೈತ ಕಾಳಪ್ಪ ಸಾರ್ವಜನಿಕವಾಗಿ ಬೆತ್ತಲಾಗುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ವಿಷ ಸೇವಿಸಿದ ರೈತ ಚಂದ್ರಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿಭಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ರೈತರ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಮುನ್ನೇಚ್ಚರಿಕಾ ಕ್ರಮವಾಗಿ ಪ್ರತಿಭಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    https://www.youtube.com/watch?v=ODhN2OQZmUI

     

  • ರಾಹುಲ್ ಗಾಂಧಿ ಬಂಧನ ಖಂಡಿಸಿ ರಾಜ್ಯದ ಹಲವೆಡೆ ಕಾಂಗ್ರೆಸ್‍ನಿಂದ ರೈಲ್ ರೋಖೋ ಯತ್ನ

    ರಾಹುಲ್ ಗಾಂಧಿ ಬಂಧನ ಖಂಡಿಸಿ ರಾಜ್ಯದ ಹಲವೆಡೆ ಕಾಂಗ್ರೆಸ್‍ನಿಂದ ರೈಲ್ ರೋಖೋ ಯತ್ನ

    ರಾಯಚೂರು/ಉಡುಪಿ: ಮಧ್ಯಪ್ರದೇಶದ ಸರ್ಕಾರ 6 ಮಂದಿ ರೈತರ ಮೇಲೆ ನಡೆಸಿದ ಗೋಲಿಬಾರ್ ಪ್ರಕರಣದ ವಿರುದ್ಧ ಹಾಗು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬಂಧನ ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಹಲವೆಡೆ ರೈಲ್ ರೋಖೋ ಯತ್ನ ನಡೆಸಿದ್ದಾರೆ.

    ಉಡುಪಿ, ರಾಯಚೂರು, ಯಾದಗಿರಿ ಸೇರಿದಂತೆ ರಾಜ್ಯದ ಹಲವೆಡೆ ಯುವ ಕಾಂಗ್ರೆಸ್ ಕಾರ್ಯಕರ್ತರು ರೈಲು ತಡೆಯಲು ಯತ್ನಿಸಿದರು. ಉಡುಪಿಯಲ್ಲಿ ಇಂದ್ರಾಣಿ ರೈಲು ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಮಂಗಳೂರು-ಮಡಗಾಂ ರೈಲನ್ನು ತಡೆಯಲು ಯತ್ನಿಸಿದರು.

    ಮಧ್ಯಪ್ರದೇಶ ಸರ್ಕಾರದ ನಡೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಯಚೂರಿನಲ್ಲಿ ರೈಲ್ವೇ ನಿಲ್ದಾಣಕ್ಕೆ ನುಗ್ಗಿ ಪ್ರತಿಭಟಿಸಲು ಯತ್ನಿಸಿದರು. ಈ ವೇಳೆ 30 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದ್ಯೊಯ್ದಿದ್ದಾರೆ. ಇದಕ್ಕೂ ಮುನ್ನ ನಗರದಲ್ಲಿ ಬೈಕ್ ಮೆರವಣಿಗೆ ನಡೆಸಿ ಮಧ್ಯಪ್ರದೇಶ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

    ಯಾದಗಿರಿಯಲ್ಲೂ ಯುವ ಕಾಂಗ್ರೆಸ್ ಕಾರ್ಯಕರ್ತರು ರೆಲ್ವೇ ನಿಲ್ದಾಣಕ್ಕೆ ನುಗ್ಗಿ ಕೋಯಿಮತ್ತೂರ್ ಕುರ್ಲಾ ಎಕ್ಸ್‍ಪ್ರೆಸ್ ರೈಲು ತಡೆಯಲು ಯತ್ನಿಸಿದಾಗ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದ್ಯೊಯ್ದಿದ್ದಾರೆ.

    ದಾವಣಗೆರೆಯಲ್ಲೂ ಕೂಡ ಯೂತ್ ಕಾಂಗ್ರೆಸ್ ಕಾರ್ಯಕರ್ತರು ರೈಲು ತಡೆಗೆ ಯತ್ನಿಸಿದ್ರು.

     

  • ಬೆಂಗ್ಳೂರಲ್ಲಿ ಪ್ಲಾಸ್ಟಿಕ್ ಅಕ್ಕಿ ಹಾವಳಿ- ಹೊಟ್ಟೆನೋವಿನಿಂದ ನರಳಿ ಧರಣಿ ಕುಳಿತ ವ್ಯಕ್ತಿ

    ಬೆಂಗ್ಳೂರಲ್ಲಿ ಪ್ಲಾಸ್ಟಿಕ್ ಅಕ್ಕಿ ಹಾವಳಿ- ಹೊಟ್ಟೆನೋವಿನಿಂದ ನರಳಿ ಧರಣಿ ಕುಳಿತ ವ್ಯಕ್ತಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ಲಾಸ್ಟಿಕ್ ಮೊಟ್ಟೆ, ಪ್ಲಾಸ್ಟಿಕ್ ಸಕ್ಕರೆ ಮಾರಾಟ ಆಗ್ತಾ ಇರೋ ಸುದ್ದಿ ಕೇಳಿದ್ವಿ. ಆದ್ರೆ ಈಗ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಅಕ್ಕಿಯದ್ದೆ ಸುದ್ದಿ. ಇಲ್ಲೊಬ್ರು ಮಾಮೂಲಿ ಅಕ್ಕಿ ಅಂತ ಪ್ಲಾಸ್ಟಿಕ್ ಅಕ್ಕಿ ತಿಂದು ಕುಟುಂಬವೆಲ್ಲಾ ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

    ಬೆಂಗಳೂರಿನ ಉಳ್ಳಾಲದಲ್ಲಿರುವ ರಿಲಿಯನ್ಸ್ ಮಾರ್ಟ್ ನಲ್ಲಿ ಪ್ರವೀಣ್ ಎಂಬವರು 6 ಕೆ.ಜಿ ಅಕ್ಕಿ ಕೊಂಡುಕೊಂಡು ಅನ್ನಮಾಡಿ ತಿಂದಿದ್ದಾರೆ. ತಕ್ಷಣ ಹೊಟ್ಟೆ ನೋವು, ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಕ್ಕಿ ಪರೀಕ್ಷೆ ಮಾಡಿದ್ದಾರೆ. ನಂತರ ಇದು ಪ್ಲಾಸ್ಟಿಕ್ ಅಕ್ಕಿ ಅಂತ ಆರೋಪ ಮಾಡಿ ನ್ಯಾಯಕ್ಕಾಗಿ ಮಧ್ಯರಾತ್ರಿ ರಿಲಿಯನ್ಸ್ ಮಾರ್ಟ್ ಮುಂದೆ ಧರಣಿ ಕುಳಿತಿದ್ದರು.

    ಬೆಂಗಳೂರಿನ ಕೋಡಿಗೆಹಳ್ಳಿ ಗೇಟ್ ನಲ್ಲಿರುವ ಮೇಗಾ ಮೋರ್ ಸ್ಟೋರ್ ನಲ್ಲಿಯೂ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರೋ ಬಗ್ಗೆ ವರದಿಯಾಗಿತ್ತು. ಅಲ್ಲಿ ನಾಗೇಶ್ ಎಂಬವರು ಭಾನುವಾರದಂದು 25 ಕೆಜಿ ಬ್ಯಾಂಗ್ ಅಕ್ಕಿಯನ್ನು ಖರೀದಿ ಮಾಡಿದ್ರು. ಅದನ್ನ ಬೇಯಿಸಿದ್ರೆ ಅಕ್ಕಿ ತೇಲುತ್ತಿತ್ತು.

    ರಾತ್ರಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದ್ದು, ಆ ಅಕ್ಕಿಯಿಂದ ಮಾಡಿಕೊಂಡು ಬಂದಿದ್ದ ಅನ್ನವನ್ನು ಮುದ್ದೆ ಮಾಡಿ ಗೋಡೆಗೆ ಹೊಡೆದ್ರೆ ಚೂರಾಗಲಿಲ್ಲ. ಗಟ್ಟಿಯಾಗಿ ಕೂಡಿಕೊಂಡು ಹೊಡೆದಾಗಲೆಲ್ಲಾ ಪಿಚ್ ಬೀಳುವ ರೀತಿ ಇತ್ತು. ಇದರಿಂದ ಇದು ಪ್ಲಾಸ್ಟಿಕ್ ಅಕ್ಕಿಯೆಂದು ಆರೋಪಿಸಿದ್ದಾರೆ.

  • ಮಧ್ಯಪ್ರದೇಶದಲ್ಲಿ ಗೋಲಿಬಾರ್‍ಗೆ ಐದು ಬಲಿ: ಈರುಳ್ಳಿ, ಬೇಳೆಗೆ ಬೆಂಬಲ ಬೆಲೆ ಕೇಳಿದ್ದಕ್ಕೆ ಗುಂಡು

    ಮಧ್ಯಪ್ರದೇಶದಲ್ಲಿ ಗೋಲಿಬಾರ್‍ಗೆ ಐದು ಬಲಿ: ಈರುಳ್ಳಿ, ಬೇಳೆಗೆ ಬೆಂಬಲ ಬೆಲೆ ಕೇಳಿದ್ದಕ್ಕೆ ಗುಂಡು

    ಮಂಡ್‍ಸೌರ್: ಮಧ್ಯಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದು, ಐದು ಮಂದಿ ರೈತರು ಮೃತಪಟ್ಟಿದ್ದಾರೆ.

    ಈರುಳ್ಳಿ ಹಾಗೂ ಬೇಳೆ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರ ನಡೆಸುತ್ತಿರುವ ಹೋರಾಟ ಇವತ್ತು ಮಂಡ್‍ಸೌರ್ ಜಿಲ್ಲೆಯಲ್ಲಿ ಹಿಂಸಾರೂಪಕ್ಕೆ ತಿರುಗಿತ್ತು. ಮಂಡ್‍ಸೌರ್ ಜಿಲ್ಲೆಯ ಪಿಪ್ಲಿಯಾಮಂಡಿ ಪ್ರದೇಶದಲ್ಲಿ ರೈತರು-ಪೊಲೀಸರ ಮಧ್ಯೆ ಘರ್ಷಣೆ ನಡೆಯಿತು.

    ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಫೈರಿಂಗ್ ಮಾಡಿದ್ರು. ಘಟನೆಯಲ್ಲಿ ಕನ್ನಯ್ಯಲಾಲ್ ಪಾಟಿದಾರ್ ಹಾಗೂ ಬನ್‍ಶೀ ಪಾಟೀದಾರ್ ಅನ್ನೋರು ಸೇರಿ ಐವರು ರೈತರು ಬಲಿಯಾಗಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ.

    ಮಂಡ್‍ಸೌರ್‍ನಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು, ವದಂತಿ ಹರಡದಂತೆ ಕೆಲ ಪ್ರದೇಶಗಳ್ಲಿ ಇಂಟರ್‍ನೆಟ್ ಸೇವೆ ರದ್ದು ಮಾಡಲಾಗಿದೆ. ಘಟನೆ ಬಗ್ಗೆ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

    ಗೋಲಿಬಾರ್ ಖಂಡಿಸಿ ಬುಧವಾರ ಮಧ್ಯಪ್ರದೇಶ ಬಂದ್‍ಗೆ ಕಿಸಾನ್ ಮಜ್ದೂರ್ ಸಂಘ ಕರೆ ನೀಡಿದೆ. ಆದ್ರೆ ರೈತರ ಎಲ್ಲಾ ಬೇಡಿಕೆ ಈಡೇರಿಕೆ ಸರ್ಕಾರ ಕ್ರಮಕೈಗೊಂಡಿದೆ. ನಮ್ಮದು ರೈತ ಸರ್ಕಾರ ಅಂತ ಸಿಎಂ ಶಿವರಾಜ್ ಚೌವ್ಹಾಣ್ ಹೇಳಿದ್ದಾರೆ.

    ಪೊಲೀಸರು ಶೂಟ್ ಮಾಡಿಲ್ಲ ಸಮಾಜಘಾತುಕರು ಈ ಕೃತ್ಯ ಎಸಗಿದ್ದಾರೆ ಅಂತ ಗೃಹ ಸಚಿವ ಭೂಪೇಂದ್ರ ಸಿಂಗ್ ಹೇಳಿದ್ರೆ, ಉಜ್ಜೈನಿ ಎಸಿ ಓಂ ಝಾ ಮಾತ್ರ ಪೊಲೀಸರೇ ಶೂಟ್ ಮಾಡಿದ್ರಿಂದ ರೈತರು ಸಾವನ್ನಪ್ಪಿದ್ದಾರೆ ಅಂತ ಹೇಳಿರೋದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.

    ಮೃತ ರೈತರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಈ ಮಧ್ಯೆ, ದೇಶದ ರೈತರ ಜೊತೆ ಕೇಂದ್ರ ಸರ್ಕಾರ ಯುದ್ಧ ಮಾಡ್ತಿದೆ. ರೈತರು ಹಕ್ಕುಗಳನ್ನ ಕೇಳಿದ್ರೆ ಬುಲೆಟ್ ಪ್ರಯೋಗಿಸೋದು ಬಿಜೆಪಿಯ `ನವಭಾರತ’ ಅಂತ ರಾಹುಲ್ ಗಾಂಧಿ ಟೀಕಿಸಿದ್ದಾರೆ.