Tag: protection

  • ಕೊಡಗು – ದಕ್ಷಿಣ ಕನ್ನಡ ಗಡಿಯಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪದ ರಕ್ಷಣೆ

    ಕೊಡಗು – ದಕ್ಷಿಣ ಕನ್ನಡ ಗಡಿಯಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪದ ರಕ್ಷಣೆ

    ಮಡಿಕೇರಿ: ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಕೊಡಗು- ದಕ್ಷಿಣ ಕನ್ನಡದ ಗಡಿಯಲ್ಲಿರುವ ಕಲ್ಲುಗುಂಡಿ ಗ್ರಾಮದಲ್ಲಿ ಸೆರೆಹಿಡಿಯಲಾಗಿದೆ.

    ಗ್ರಾಮದ ಮಣಿ ಕುಮಾರ್ ಎಂಬುವವರ ಮನೆಯ ತೋಟದಲ್ಲಿ ಸುಮಾರು 14 ಆಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿತ್ತು. ಭಾರೀ ಗಾತ್ರದ ಹಾವನ್ನು ಕಂಡು ಗಾಬರಿಗೊಂಡು ತಕ್ಷಣ ಉರಗ ತಜ್ಞರಿಗೆ ಕರೆ ಮಾಡಿದ್ದಾರೆ.

    ಮಾಹಿತಿ ತಿಳಿದ ಜಾಲ್ಸೂರಿನ ಸ್ನೇಕ್ ಶ್ಯಾಮ್ ಪ್ರಸಾದ್ ಅವರು ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಪಿಲಿಕುಳ ನಿಸರ್ಗಧಾಮದ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

    ಸ್ನೇಕ್ ಶ್ಯಾಮ್ ಪ್ರಸಾದ್ ಈವರೆಗೆ ಅನೇಕ ಕಾಳಿಂಗದಂತಹ ವಿಷಕಾರಿ ಸಾಕಷ್ಟು ವಿಷಕಾರಿ ಹಾವುಗಳನ್ನು ಸೆರೆಹಿಡಿದಿದ್ದಾರೆ. ನಂತರ ಹಾವನ್ನು ಸಾರ್ವಜನಿಕರಿಗೆ ಪ್ರದರ್ಶನ ಮಾಡಿ, ಮಾಹಿತಿ ನೀಡಿ ಹಾವುಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಾರೆ.

  • ಕೋಳಿ ಸಾಯ್ಸಿ, 4 ಮೊಟ್ಟೆ ನುಂಗಿ ನರಳಾಡುತ್ತಿದ್ದ ನಾಗರ ಹಾವಿನ ರಕ್ಷಣೆ – ವಿಡಿಯೋ ನೋಡಿ

    ಕೋಳಿ ಸಾಯ್ಸಿ, 4 ಮೊಟ್ಟೆ ನುಂಗಿ ನರಳಾಡುತ್ತಿದ್ದ ನಾಗರ ಹಾವಿನ ರಕ್ಷಣೆ – ವಿಡಿಯೋ ನೋಡಿ

    ಚಿಕ್ಕಮಗಳೂರು: ಆಹಾರ ಹುಡುಕುತ್ತಾ ಕಾಡಿನಿಂದ ನಾಡಿಗೆ ಬಂದ ನಾಗರ ಹಾವೊಂದು ಮನೆಯೊಳಗೆ ನುಗ್ಗಿ ಕೋಳಿಯೊಂದನ್ನು ಸಾಯಿಸಿ, ನಾಲ್ಕು ಮೊಟ್ಟೆಯನ್ನ ನುಂಗಿ ಸಾವು ಬದುಕಿನ ಮಧ್ಯೆ ನರಳಾಡಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಚೇಗು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಹರೀಶ್ ಎಂಬವರ ಮನೆಗೆ ಹಾವು ಬಂದಿದೆ. ನಂತರ ಒಂದು ಕೋಳಿಯನ್ನು ಸಾಯಿಸಿ ನಾಲ್ಕು ಮೊಟ್ಟೆಯನ್ನ ನುಂಗಿದೆ. ಆದ್ರೆ ನಾಲ್ಕು ಮೊಟ್ಟೆಗಳು ಗಂಟಲಿನಲ್ಲಿ ಸಿಲುಕಿ ಅಡುಗೆ ಮನೆಯಲ್ಲಿ ಬಿದ್ದು ಹೊರಳಾಡುತ್ತಿತ್ತು. ಇದನ್ನೂ ಓದಿ15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ ಮಾಡಿದ ಉರಗತಜ್ಞ

    ಹಾವಿನ ನರಳಾಟ ಕಂಡು ಹರೀಶ್ ಮನೆಯವರು ಭಯಗೊಂಡಿದ್ದು, ಕೂಡಲೇ ಉರುಗ ತಜ್ಞ ಆರೀಫ್ ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಆರೀಫ್ ನಾಗರಹಾವನ್ನ ಹಿಡಿದು ಚಿಕಿತ್ಸೆ ನೀಡಿದ್ದಾರೆ. ನಾಗರ ಹಾವಿನ ಹೊಟ್ಟೆಯಲ್ಲಿದ್ದ ನಾಲ್ಕು ಮೊಟ್ಟೆಯನ್ನೂ ಹೊರಹಾಕಿಸಿದ್ದಾರೆ. ಇದನ್ನ ಕಂಡ ಗ್ರಾಮಸ್ಥರು ಆಶ್ಚರ್ಯ ಚಕಿತರಾಗಿದ್ದಾರೆ.

    ಆರೀಫ್ ನಾಗರ ಹಾವನ್ನ ರಕ್ಷಣೆ ಮಾಡಿ ಚಾರ್ಮಾಡಿ ಘಾಟ್ ಗೆ ಬಿಟ್ಟಿದ್ದಾರೆ.

    https://youtu.be/46aIxYtXo04

     

  • ಅನಾರೋಗ್ಯಕ್ಕೀಡಾದ ನಾಯಿಗೆ ಚಿತ್ರಹಿಂಸೆ- ಹಗ್ಗ ಕಟ್ಟಿ ಬೈಕ್‍ನಲ್ಲಿ ಎಳೆದೊಯ್ದ ಮಾಲೀಕ!

    ಅನಾರೋಗ್ಯಕ್ಕೀಡಾದ ನಾಯಿಗೆ ಚಿತ್ರಹಿಂಸೆ- ಹಗ್ಗ ಕಟ್ಟಿ ಬೈಕ್‍ನಲ್ಲಿ ಎಳೆದೊಯ್ದ ಮಾಲೀಕ!

    ಬೆಳಗಾವಿ: ನಿಷ್ಠೆ ಅಂದರೆ ನಾಯಿ ಎಂದು ಥಟ್ಟನೆ ಹೇಳುತ್ತಾರೆ. ಆದರೆ ಇಲ್ಲೊಂದು ಕಡೆ ವರ್ಷಗಟ್ಟಲೆ ಸ್ವಾಮಿನಿಷ್ಠೆ ಮೆರೆದ ನಾಯಿಗೆ ಕ್ರೂರ ಶಿಕ್ಷೆ ಕೊಡಲಾಗಿದೆ.

    ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದ ಹೃದಯವಿದ್ರಾವಕ ಘಟನೆ ನಡೆದಿದ್ದು, ಅನಾರೋಗ್ಯಕ್ಕೆ ತುತ್ತಾದ ಶ್ವಾನವನ್ನು ಅದರ ಮಾಲೀಕ ಬೈಕ್ ಗೆ ಕಟ್ಟಿ ಒಂದು ಕಿಲೋಮೀಟರ್ ಗಿಂತ ಹೆಚ್ಚು ದೂರ ಎಳೆದೊಯ್ಯುವ ಮೂಲಕ ಅಮಾನವೀಯತೆ ಮೆರೆದಿದ್ದಾನೆ.

    ಜೀವಂತ ನಾಯಿಯನ್ನು ಎಳೆದೊಯ್ಯುತ್ತಿದ್ದ ಘಟನೆ ನೋಡಿ ಶ್ವಾನ ಪ್ರಿಯರು ಅದರ ರಕ್ಷಣೆ ಮಾಡಿದ್ದಾರೆ. ಅನಾರೋಗ್ಯಕ್ಕೆ ತುತ್ತಾದ ನಾಯಿಗೆ ಚಿಕಿತ್ಸೆ ಕೊಡಿಸಿ ಗುಣಮುಖವಾಗಿಸುವ ಬದಲು ಹೀಗೆ ಎಳೆದೊಯ್ದಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.

    ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಪ್ರಾಣಿ ಪ್ರಿಯರಿಂದ ಆಕ್ರೋಶವ್ಯಕ್ತವಾಗಿದ್ದು, ನಾಯಿ ಮಾಲೀಕ ಯಾರೇ ಆಗಿದ್ದರೂ ಅವರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

  • 12 ಅಡಿಗೂ ಅಧಿಕ ಉದ್ದದ ಬೃಹತ್ ಹೆಣ್ಣು ಕಾಳಿಂಗ ಸರ್ಪದ ರಕ್ಷಣೆ

    12 ಅಡಿಗೂ ಅಧಿಕ ಉದ್ದದ ಬೃಹತ್ ಹೆಣ್ಣು ಕಾಳಿಂಗ ಸರ್ಪದ ರಕ್ಷಣೆ

    ಕಾರವಾರ: ಹಾವು ಅಂದರೆ ಎಲ್ಲರೂ ಭಯ ಪಡುತ್ತಾರೆ. ಅಂಥದ್ರಲ್ಲಿ ಕಾರ್ಕೋಟಕ ವಿಷವಿರುವ ಕಾಳಿಂಗ ಸರ್ಪವನ್ನು ನೋಡಿದರೆ ಯಾರಿಗೆ ತಾನೇ ಭಯ ಆಗಲ್ಲ.

    ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ 12 ಅಡಿಗೂ ಹೆಚ್ಚು ಉದ್ದದ ಬೃಹತ್ ಹೆಣ್ಣು ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಗೋಬ್ರಾಳ ದಲ್ಲಿ ನಡೆದಿದೆ.

    ಜಿಲ್ಲೆಯ ದಾವುಲ್ ಶೇಖ್ ಎಂಬವರ ರೆಸಾರ್ಟ್ ಗೆ ಈ ಅಪರೂಪದ ಅಥಿತಿ ಆಗಮಿಸಿದ್ದು, ತನ್ನ ಬೃಹದಾಕಾರದ ಮೈಮಾಟದಿಂದ ಸ್ಥಳೀಯರನ್ನು ಭಯಭೀತಗೊಳಿಸಿತ್ತು. ತಕ್ಷಣ ಇಲ್ಲಿನವರು ಉರುಗ ತಜ್ಞ ರಝಾಕ್ ಶಾಹಾಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಉರುಗ ತಜ್ಞ 12 ಅಡಿಗೂ ಹೆಚ್ಚು ಉದ್ದದ 10 ವರ್ಷ ಪ್ರಾಯದ ಹೆಣ್ಣು ಕಾಳಿಂಗವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

    ಕಾಳಿಂಗಗಳು ಬಿಸಲಿನ ಬೇಗೆಗೆ ತಂಪು ಪ್ರದೇಶ ಅರಸಿ ಬರುವುದು ಸಾಮಾನ್ಯ. ಹೀಗಾಗಿ ಅಪರೂಪದ ಅಳವಿನಂಚಿನಲ್ಲಿರುವ ಈ ಕಾಳಿಂಗ ಗಳು ಮಾರ್ಚ್ ನಿಂದ ಜೂನ್ ವರಗೆ ತಂಪು ಪ್ರದೇಶ ಅರಸಿ ನಾಡಿಗೆ ಬರುತ್ತಿವೆ. ಇಲ್ಲಿ ಸುಲಭವಾಗಿ ತನ್ನ ಆಹಾರ ಅರಸಿ ಭೇಟೆಯಾಡುತ್ತವೆ. ಇದಲ್ಲದೇ ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿಗೆ ತೊಡಗುತ್ತವೆ. ಇವುಗಳನ್ನು ಕೊಲ್ಲದೇ ರಕ್ಷಿಸಬೇಕು. ಸರಿಸುಮಾರು 20 ವರ್ಷ ಬದುಕುವ ಇವು ಗೂಡನ್ನು ಕಟ್ಟಿ 25 ರಿಂದ 30 ಮೊಟ್ಟೆ ಇಡುತ್ತವೆ. ಇವು ತನ್ನ ಮೊಟ್ಟೆ ಯನ್ನು ಕಾಯುವ ಏಕೈಕ ಹಾವಾಗಿದೆ. ಅಳವಿನಂಚಿನಲ್ಲಿ ಇರುವ ಈ ಹಾವನ್ನು ರಕ್ಷಿಸಬೇಕು ಎಂದು ಉರುಗ ತಜ್ಞ ರಝಾಕ್ ಶಾಹ ಹೇಳಿದ್ದಾರೆ.

    https://www.youtube.com/watch?v=1HFy7Gai9XM

  • ಪ್ರೀತಿಸಿ ಮದ್ವೆಯಾಗಿ ಎಸ್‍ಪಿ ಕಚೇರಿಗೆ ಬಂದ ಜೋಡಿ

    ಪ್ರೀತಿಸಿ ಮದ್ವೆಯಾಗಿ ಎಸ್‍ಪಿ ಕಚೇರಿಗೆ ಬಂದ ಜೋಡಿ

    ಚಿತ್ರದುರ್ಗ: ಪ್ರಾಣ ಬೆದರಿಕೆಯ ಹಿನ್ನೆಲೆಯಲ್ಲಿ ಪ್ರೀತಿಸಿ ಮದುವೆಯಾದ ಜೋಡಿಯೊಂದು ಇದೀಗ ರಕ್ಷಣೆ ಕೋರಿ ಚಿತ್ರದುರ್ಗ ಎಸ್‍ಪಿ ಕಚೇರಿಗೆ ಮೊರೆಹೋಗಿದೆ.

    ಚಿತ್ರದುರ್ಗದ ಮಾರುತಿ-ರುಕ್ಸಾರ್ (ಹೆಸರು ಬದಲಾಯಿಸಲಾಗಿದೆ) ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮೂಲತಃ ಚಿಕ್ಕಮಗಳೂರಿನಲ್ಲಿರುವ ಯುವತಿ ಕುಟುಂಬ ನೆಲೆಸಿದ್ದು, ಈ ಹಿಂದೆ ಕುಟುಂಬ ಚಿತ್ರದುರ್ಗದಲ್ಲಿ ನೆಲೆಸಿದ್ದಾಗ ಮಾರುತಿ ಮೇಲೆ ಪ್ರೇಮಾಂಕುರವಾಗಿತ್ತು. ಸದ್ಯ ಇವರಿಬ್ಬರ ಪ್ರೀತಿ ವಿಚಾರ ಮನೆಯವರಿಗೆ ತಿಳಿದಿದ್ದು, ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಜೋಡಿ ಮಾರ್ಚ್ 8ರಂದು ಚಿತ್ರದುರ್ಗ ತಾಲೂಕಿನ ಜಾನಕೊಂಡ ಗ್ರಾಮದ ರಂಗನಾಥಸ್ವಾಮಿ ದೇಗುಲದಲ್ಲಿ ಪ್ರೇಮವಿವಾಹ ಆಗಿದ್ದರು. ಆದರೆ ಯುವತಿಯ ಪೋಷಕರು ಮಾರುತಿ ವಿರುದ್ಧ ಚಿಕ್ಕಮಗಳೂರು ಠಾಣೆಯಲ್ಲಿ ಅಪಹರಣ ಪ್ರಕರಣವನ್ನು ದಾಖಲಿಸಿದ್ದಾರೆ.

    ನಂತರ ಯುವತಿಯ ಪೋಷಕರ ವಿರುದ್ಧ ಪ್ರೇಮಿಗಳು ಪ್ರಾಣ ಬೆದರಿಕೆ ಆರೋಪವನ್ನು ದಾಖಲಿಸಿದ್ದು, ರಕ್ಷಣೆ ಕೋರಿ ಚಿತ್ರದುರ್ಗ ಎಸ್‍ಪಿ ಕಚೇರಿಗೆ ಮೊರೆ ಹೋಗಿದ್ದಾರೆ.

  • ವಿಡಿಯೋ: ನೀರು ಕುಡಿಯಲು ಹೋಗಿ ಕೆಸರು ಹೊಂಡಕ್ಕೆ ಬಿದ್ದ ಮರಿಯಾನೆ- ಅರಣ್ಯಾಧಿಕಾರಿಗಳಿಂದ ರಕ್ಷಣೆ

    ವಿಡಿಯೋ: ನೀರು ಕುಡಿಯಲು ಹೋಗಿ ಕೆಸರು ಹೊಂಡಕ್ಕೆ ಬಿದ್ದ ಮರಿಯಾನೆ- ಅರಣ್ಯಾಧಿಕಾರಿಗಳಿಂದ ರಕ್ಷಣೆ

    ಹಾಸನ: ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಮುಳುಗಿದ್ದ ಮರಿಯಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಆಲೂರು ತಾಲೂಕಿನ ಮಗ್ಗೆ ಬಳಿ ಆನೆ ಹಿಂಡು ಭಾನುವಾರ ರಾತ್ರಿ ನೀರು ಕುಡಿಯಲು ಬಂದಿತ್ತು. ಕೆರೆಯ ಒಂದು ಭಾಗದಲ್ಲಿ ಮೊದಲೇ ಜೆಸಿಬಿಯಿಂದ ಗುಂಡಿ ತೋಡಿದ್ದರಿಂದ ಅಲ್ಲಿ ಕೆಸರು ತುಂಬಿತ್ತು. ಇದನ್ನು ಅರಿಯದ ಆರೇಳು ವರ್ಷದ ಸಲಗ ನೀರು ಕುಡಿಯುವ ಧಾವಂತದಲ್ಲಿ ಕೆಸರಲ್ಲಿ ಹೂತುಕೊಂಡಿತ್ತು.

    ಮುಂಜಾನೆ ಗ್ರಾಮಸ್ಥರು ಇದನ್ನು ನೋಡಿ ಆತಂಕದಿಂದ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಸಿಬ್ಬಂದಿ ಜೆಸಿಬಿ ಸಹಾಯದಿಂದ ಮರಿಯಾನೆಯನ್ನು ಮೇಲೆತ್ತಿದ್ದಾರೆ. ಈ ವೇಳೆ ಜೀವ ಉಳಿಸಿಕೊಳ್ಳುವ ಭಯದಲ್ಲಿ ವಿಚಲಿತವಾದ ಮರಿಯಾನೆ ತನ್ನನ್ನು ಮೇಲೆತ್ತಿದ ಜೆಸಿಬಿ ಮೇಲೆ ದಾಳಿಗೆ ಮುಂದಾಗಿದ್ದು, ತಕ್ಷಣ ಜೆಸಿಬಿಯಿಂದ ಇಬ್ಬರು ಇಳಿದು ಓಡಿ ಹೋಗಿದ್ದಾರೆ.

    ಜನರು ಕೂಗಾಡಿದ್ರಿಂದ ಭಯಗೊಂಡ ಮರಿಯಾನೆ, ಸ್ಥಳದಿಂದ ಕಾಲ್ಕಿತ್ತಿದೆ. ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಇಬ್ಬರು, ನಾಲ್ಕೈದು ಗಂಟೆಗಳ ಕಾಲ ನರಳಾಡಿದ ಮರಿಯಾನೆ ಬದುಕಿತಲ್ಲ ಎಂದು ಸಂತಸಪಟ್ಟಿದ್ದಾರೆ.

    https://youtu.be/nvNIIjLKQOs

  • ವಿಸಿ ನಾಲೆಗೆ ಎತ್ತಿನಬಂಡಿ ಪಲ್ಟಿ: ಎತ್ತನ್ನ ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

    ವಿಸಿ ನಾಲೆಗೆ ಎತ್ತಿನಬಂಡಿ ಪಲ್ಟಿ: ಎತ್ತನ್ನ ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

    ಮಂಡ್ಯ: ಮೇವು ತುಂಬಿಕೊಂಡು ಬರುತ್ತಿದ್ದ ಎತ್ತಿನಗಾಡಿ ವಿಸಿ ನಾಲೆಗೆ ಪಲ್ಟಿಯಾಗಿ ಒಂದು ಎತ್ತು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಮತ್ತೊಂದು ಎತ್ತನ್ನು ಸ್ಥಳೀಯರು ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಗಾಣದಹೊಸೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಗಿರಿಗೌಡ ತಮ್ಮ ಜಮೀನಿನಿಂದ ಎತ್ತಿನಗಾಡಿಯಲ್ಲಿ ಮೇವು ತುಂಬಿಕೊಂಡು ವಿಸಿ ನಾಲೆಯ ಏರಿಮೇಲೆ ಬರುತ್ತಿದ್ದರು. ಈ ಸಂದರ್ಭದಲ್ಲಿ ವಿಸಿ ನಾಲೆಗೆ ಹಾಕಿದ್ದ ಪಂಪ್ ಸೆಟ್ ಶಬ್ದಕ್ಕೆ ಬೆದರಿ ಎತ್ತುಗಳು ವಿಸಿ ನಾಲೆಯ ಕಡೆ ಏಕಾಏಕಿ ನುಗ್ಗಿದ ಎತ್ತುಗಳು ಗಾಡಿ ಸಮೇತ ಹರಿಯುತ್ತಿರುವ ನೀರಿನೊಳಗೆ ಬಿದ್ದಿವೆ.

    ಈ ಘಟನೆಯನ್ನು ಕಂಡ ಸ್ಥಳೀಯರು ಕೂಡಲೇ ವಿಸಿ ನಾಲೆಗೆ ಜಿಗಿದು ಒಂದು ಎತ್ತಿನ ಮೂಗುದಾರವನ್ನು ಕತ್ತರಿಸಿದ್ದಾರೆ. ತಕ್ಷಣ ಆ ಎತ್ತು ಈಜಿ ದಡ ಸೇರಿದೆ. ಆದರೆ ಮತ್ತೊಂದು ಎತ್ತಿನ ಮೂಗುದಾರವನ್ನು ಕತ್ತರಿಸಲು ಸಾಧ್ಯವಾಗದಿದ್ದರಿಂದ ಎತ್ತು ನೀರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದೆ. ಅಪಘಾತದಲ್ಲಿ ರೈತ ಗಿರಿಗೌಡರಿಗೆ ತಲೆಯ ಭಾಗಕ್ಕೆ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದ್ದು, ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಸ್ಥಳೀಯರ ಸಹಾಯದೊಂದಿಗೆ ವಿಸಿ ನಾಲೆಯಲ್ಲಿ ಮುಳುಗಿದ್ದ ಎತ್ತು ಹಾಗೂ ಗಾಡಿಯನ್ನು ಹೊರತೆಗೆದಿದ್ದಾರೆ.

     

  • ಮಗಳ ಸಾವಿನ ಸುದ್ದಿ ಕೇಳಿಯೂ ಅಪರಿಚಿತ ವ್ಯಕ್ತಿಯನ್ನು ಬದುಕಿಸಿದ ಪೊಲೀಸ್ ಪೇದೆ

    ಮಗಳ ಸಾವಿನ ಸುದ್ದಿ ಕೇಳಿಯೂ ಅಪರಿಚಿತ ವ್ಯಕ್ತಿಯನ್ನು ಬದುಕಿಸಿದ ಪೊಲೀಸ್ ಪೇದೆ

    ಲಕ್ನೋ: ಪೇದೆಯೊಬ್ಬರು ಮಗಳ ಸಾವಿನ ಸುದ್ದಿ ಕೇಳಿಯೂ ಅಪರಿಚಿತ ವ್ಯಕ್ತಿಯ ಪ್ರಾಣ ಕಾಪಾಡಲು ಧಾವಿಸಿದ್ದು, ಈಗ ಅವರ ಕಾರ್ಯಕ್ಕೆ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಉತ್ತರ ಪ್ರದೇಶದ ಮೀರತ್ ನ ಮುಖ್ಯಪೇದೆ ಭೂಪೇಂದ್ರ ತೋಮರ್ ಅವರು ತಮ್ಮ ಕರ್ತವ್ಯ ನಿಷ್ಠೆಯಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ತಮ್ಮ ಮಗಳ ಸಾವಿನ ಸುದ್ದಿ ಕೇಳಿದ ನಂತರವೂ ಅಪರಿಚಿತ ವ್ಯಕ್ತಿಯನ್ನು ಕಾಪಾಡಿದ್ದಾರೆ.

    ನಡೆದುದ್ದೇನು?: ತೋಮರ್ ಫೆಬ್ರವರಿ 23ರಂದು ಸಿಬ್ಬಂದಿಯೊಂದಿಗೆ ಕರ್ತವ್ಯದಲ್ಲಿದ್ದರು. ಆಗ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ವ್ಯಕ್ತಿಯೊಬ್ಬ ಚಾಕು ಇರಿತಕ್ಕೊಳಗಾಗಿ ರಸ್ತೆಯಲ್ಲಿ ಒದ್ದಾಡುತ್ತಿದ್ದಾನೆ ಎಂದು ಸಾರ್ವಜನಿಕರಿಂದ ಕರೆ ಬಂದಿತ್ತು. ತಕ್ಷಣ ಅವರು ಮತ್ತು ಅವರ ತಂಡ ಹೋಗಲು ಸಿದ್ಧವಾಗುತ್ತಿದ್ದಾಗ ತೋಮರ್ ಗೆ ಮತ್ತೊಂದು ಫೋನ್ ಕಾಲ್ ಬಂದಿದ್ದು, ತೋಮರ್ ಮಗಳು ಸ್ನಾನದ ಕೋಣೆಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದರು.

    ಆ ಸುದ್ದಿ ಕೇಳಿಯೂ, ದುಃಖದ ಸನ್ನಿವೇಶದಲ್ಲೂ ಕರ್ತವ್ಯವನ್ನು ಮರೆಯದೆ ತೋಮರ್ ಗಾಯಗೊಂಡು ರಸ್ತೆಯಲ್ಲಿ ಒದ್ದಾಡುತ್ತಿದ್ದ ವ್ಯಕ್ತಿಯನ್ನು ಕಾಪಾಡಲು ಸ್ಥಳಕ್ಕೆ ಧಾವಿಸಿದರು. ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಿ ಆತನ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ ನಂತರ ಮನೆಗೆ ತೆರಳಿದರು.

    ತೋಮರ್ ಮಗಳಿಗೆ 27 ವರ್ಷ ವಯಸ್ಸಾಗಿತ್ತು. ಒಂದು ವರ್ಷದ ಹಿಂದಷ್ಟೆ ಮದುವೆಯಾಗಿದ್ದರು. ಅವರು ಮೀರತ್ ಬಕ್ಸಾರ್ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಶೌಚಕ್ಕೆ ಹೋಗಿದ್ದಾಗ ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

    ಸತ್ತಿದ್ದು ಮಗಳೇ ಆದರೂ, ಆ ಸಮಯದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಬದುಕಿಸುವುದೇ ತಮಗೆ ಮುಖ್ಯವಾಗಿತ್ತು. ಆದ್ದರಿಂದ ನಾನು ಹೋಗಿ ಅವರನ್ನು ಕಾಪಾಡಿದ್ದೇನೆ. ನಾನು ಅಸಾಧಾರಣವಾಗಿ ಏನನ್ನೋ ಮಾಡಿದ್ದೇನೆ ಎಂದು ನಾನು ಯೋಚಿಸುವುದಿಲ್ಲ ಎಂದು ತೋಮರ್ ಹೇಳಿದ್ದಾರೆ.

    ತೋಮರ್ ಅವರ ಕರ್ತವ್ಯ ನಿಷ್ಠಗಾಗಿ ಅವರನ್ನು ಸನ್ಮಾನಿಸಲಾಗಿದೆ. ಜೊತೆಗೆ ಇತ್ತೀಚೆಗೆ ಸಹರಾನ್ಪುರದ ಡಿಐಜಿ ಶರದ್ ಸಚನ್ ಮತ್ತು ಎಸ್‍ಎಸ್‍ಪಿ ಬಬ್ಲೂ ಕುಮಾರ್ ಕೂಡ ತೋಮರ್ ಅವರಿಗೆ ಸನ್ಮಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸದ್ಯ ದುಃಖದಲ್ಲಿರೋ ತೋಮರ್ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಪೊಲೀಸ್ ನಿರ್ದೇಶಕ ಒ.ಪಿ.ಸಿಂಗ್ ಭರವಸೆ ನೀಡಿದ್ದಾರೆ.

  • ಎರಡು ಹುಲಿಗಳ ನಡುವೆ ಸಿಕ್ಕಿಹಾಕಿಕೊಂಡ ಬೈಕ್ ಸವಾರರು – ನಂತರ ಏನಾಯ್ತು? ವಿಡಿಯೋ ನೋಡಿ

    ಎರಡು ಹುಲಿಗಳ ನಡುವೆ ಸಿಕ್ಕಿಹಾಕಿಕೊಂಡ ಬೈಕ್ ಸವಾರರು – ನಂತರ ಏನಾಯ್ತು? ವಿಡಿಯೋ ನೋಡಿ

    ಮುಂಬೈ: ಎರಡು ಹುಲಿಗಳ ನಡುವೆ ಸಿಕ್ಕಿಹಾಕಿಕೊಂಡ ಬೈಕ್ ಸವಾರರಿಬ್ಬರೂ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಈ ಕುರಿತ ವಿಡಿಯೋ ಒಂದು ವೈರಲ್ ಆಗಿದ್ದು, ನಾಲ್ಕು ನಿಮಿಷಗಳ ಅವಧಿಯ ಈ ದೃಶ್ಯಗಳಲ್ಲಿ ಬೈಕ್ ಸವಾರರ ಮುಂದೆ ಹಾಗೂ ಹಿಂದೆ ಏಕಕಾಲದಲ್ಲಿ ಹುಲಿಗಳು ಪ್ರತ್ಯಕ್ಷವಾಗಿದೆ. ಹುಲಿಗಳ ನಡುವೆ ಸಿಕ್ಕ ಬೈಕ್ ಸವಾರರು ಅಲ್ಲಿಂದ ಓಡಲು ಯತ್ನಿಸದೆ ಭಯದಿಂದ ಅಲುಗಾಡದೇ ನಿಂತಿದ್ದಾರೆ. ಆದರೆ ಬೈಕ್ ಹಿಂಬದಿ ಕುಳಿತ್ತಿದ್ದ ವ್ಯಕ್ತಿ ಮಾತ್ರ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ.

    ಈ ವೇಳೆ ಎರಡು ಹುಲಿಗಳು ಬೈಕ್ ಸಮೀಪ ತೆರಳಿ ಘರ್ಜಿಸಿವೆ, ನಂತರ ಕೆಲ ನಿಮಿಷಗಳ ಕಾಲ ಬೈಕ್ ಸುತ್ತಲು ಗಂಭೀರ್ಯದಿಂದ ನಡೆದಾಡಿದೆ. ಹುಲಿಗಳು ನಡೆದಾಡುವ ವೇಳೆ ಕಾರೊಂದು ಬಂದಿದ್ದು, ಕಾರಿನಲ್ಲಿದ್ದ ವ್ಯಕ್ತಿ ಮೊಬೈಲ್ ನಲ್ಲಿ ಈ ಎಲ್ಲ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ. ಕೊನೆಗೆ ಕಾರನ್ನು ಸವಾರರ ಬಳಿ ವೇಗವಾಗಿ ಚಲಾಯಿಸುವ ಮೂಲಕ ಅವರನ್ನು ರಕ್ಷಿಸಿದ್ದಾನೆ.

    ಈ ಘಟನೆ ಎಲ್ಲಿ ನಡೆದಿದೆ ಎನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ಮಾಧ್ಯಮಗಳು ನಾಗ್ಪುರದ ಉಮ್ರೆಡ್ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ವರದಿ ಮಾಡಿವೆ.

    ವಿಶ್ವದಲ್ಲಿ ಭಾರತ ಅತ್ಯಂತ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶವಾಗಿದ್ದು, 2014 ರ ಹುಲಿ ಗಣತೀಯ ಪ್ರಕಾರ ದೇಶದಲ್ಲಿ 2,226 ಹುಲಿಗಳು ವಾಸಿಸುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ 500 ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ. 2019 ಮಧ್ಯದ ವೇಳೆಗೆ ಹುಲಿಗಳ ಸಂಖ್ಯೆ 3,000 ಸಾವಿರ ದಾಟುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಅಂದಾಜಿಸಿದೆ.

  • ಆಹಾರ ಅರಸಿ ಗ್ರಾಮಕ್ಕೆ ಬಂದ ಜಿಂಕೆಯ ರಕ್ಷಣೆ

    ಆಹಾರ ಅರಸಿ ಗ್ರಾಮಕ್ಕೆ ಬಂದ ಜಿಂಕೆಯ ರಕ್ಷಣೆ

    ಮಂಡ್ಯ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಜಿಂಕೆಯನ್ನು ಗ್ರಾಮಸ್ಥರು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿರುವ ಘಟನೆ ಜಿಲ್ಲೆ ನಾಗಮಂಗಲ ತಾಲೂಕಿನ ಕೆಸವಿನಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿ ಜಿಂಕೆಯೊಂದು ಬೆಳಗ್ಗೆಯಿಂದ ಆಹಾರ ಅರಸಿ ಅಡ್ಡಾಡುತ್ತಿತ್ತು. ಗ್ರಾಮದಲ್ಲಿ ಜಿಂಕೆ ಸುತ್ತಾಡುತ್ತಿರುವುದನ್ನು ಗ್ರಾಮದ ನಾಯಿಗಳು ನೋಡಿ ಬೊಗಳಲಾರಂಭಿಸಿದ್ದವು. ನಾಯಿಗಳು ಬೊಗಳುವುದನ್ನು ನೋಡಿ ಗ್ರಾಮಸ್ಥರು ಜಿಂಕೆಗೆ ಯಾವುದೇ ರೀತಿಯ ಅನಾಹುತ ಆಗಬಾರದೆಂದು ರಕ್ಷಿಸಿ ಜಿಂಕೆಯನ್ನು ಹಿಡಿದು ಕಟ್ಟಿಹಾಕಿದ್ದಾರೆ.

    ಗ್ರಾಮಸ್ಥರು ನಂತರ ಮೇಲುಕೋಟೆ ವಲಯ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಮೇಲುಕೋಟೆ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಜಿಂಕೆಯನ್ನು ವಶಕ್ಕೆ ಪಡೆದಿದ್ದಾರೆ.