Tag: property

  • ಆಸ್ತಿ ವಿವಾದದಿಂದ 4 ವರ್ಷದ ಕಂದಮ್ಮನನ್ನು ಕೊಂದು ಆರೋಪಿ ಎಸ್ಕೇಪ್

    ಆಸ್ತಿ ವಿವಾದದಿಂದ 4 ವರ್ಷದ ಕಂದಮ್ಮನನ್ನು ಕೊಂದು ಆರೋಪಿ ಎಸ್ಕೇಪ್

    ಬೆಳಗಾವಿ: ಆಸ್ತಿಗಾಗಿ ಅಣ್ಣ- ತಮ್ಮಂದಿರು ಕಿತ್ತಾಡಿಕೊಂಡಿರುವುದು, ಬಡಿದಾಡಿಕೊಂಡಿರುವುದನ್ನು ನೋಡಿದ್ದೇವೆ. ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿ ವಿವಾದವನ್ನು ಬಗೆಹರಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಆಸ್ತಿ ವಿವಾದದ ವಿಚಾರದಲ್ಲಿ ಇಲ್ಲೋರ್ವ ಪಾಪಿ ಮುಗ್ಧ ಕಂದಮ್ಮನನ್ನು ಬಲಿ ಪಡೆದುಕೊಂಡಿದ್ದಾನೆ.

    ಆಸ್ತಿ ವಿವಾದದ ಹಿನ್ನೆಲೆ ನಾಲ್ಕು ವರ್ಷದ ಬಾಲಕನನ್ನು ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಸಮೀಪದ ಹಾರೂಗೊಪ್ಪ ಗ್ರಾಮದಲ್ಲಿ ಜರಗಿದೆ. ಕೊಲೆಯಾದ ಮಗುವನ್ನು ವಿರೇಶ ಸಂಕಣ್ಣ(4) ಎಂದು ಗುರುತಿಸಲಾಗಿದೆ. ಈ ಮುಗ್ಧ ಕಂದಮ್ಮನನ್ನು ಈರಪ್ಪ ಬಸಪ್ಪ ಸಂಕಣ್ಣ ಎಂಬವನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

    ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮುರಗೋಡ ಠಾಣೆಯ ಪೊಲೀಸರು, ಆಸ್ತಿ ವಿವಾದದಿಂದಲೇ ಆರೋಪಿ ಈರಪ್ಪ ಬಸಣ್ಣ ಮಗುವನ್ನು ಹತ್ಯೆಗೈದಿದ್ದಾನೆ ಎಂದು ತಿಳಿಸಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಲು ಆರಂಭಿಸಿದ್ದಾರೆ.

  • ಗಂಡ-ಹೆಂಡತಿ ಆಸ್ತಿ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

    ಗಂಡ-ಹೆಂಡತಿ ಆಸ್ತಿ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

    – ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪತಿ

    ಯಾದಗಿರಿ: ಗಂಡ-ಹೆಂಡತಿ ನಡುವೆ ನಡೆದ ಆಸ್ತಿ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಗಾಜಕೂಟ ಗ್ರಾಮದಲ್ಲಿ ನಡೆದಿದೆ.

    ನರಸಮ್ಮ (40) ಕೊಲೆಯಾದ ಹೆಂಡತಿಯಾಗಿದ್ದು, ಈಕೆಯನ್ನು ಗಂಡ ಭೀಮಣ್ಣ (45) ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ನರಸಮ್ಮ ಭೀಮಣ್ಣನ ಎರಡನೆಯ ಹೆಂಡತಿ. ಮೊದಲ ಹೆಂಡತಿ ಮೃತಪಟ್ಟ ಹಿನ್ನೆಲೆಯಲ್ಲಿ ಭೀಮಣ್ಣ, ನರಸಮ್ಮಳನ್ನು ಎರಡನೇಯ ಮದುವೆಯಾಗಿದ್ದ. ಮೊದಲ ಹೆಂಡತಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಮಕ್ಕಳಿಗೆ ಆಸ್ತಿ ನೀಡುವ ವಿಚಾರವಾಗಿ ಭೀಮಣ್ಣ ಮತ್ತು ನರಸಮ್ಮನ ನಡುವೆ ಆಗಾಗ ಜಗಳವಾಗುತ್ತಿತ್ತು. ನಿನ್ನೆ ತಡ ರಾತ್ರಿ ಜಗಳ ತಾರಕಕ್ಕೇರಿ ನರಸಮ್ಮಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

    ಕೊಲೆ ಮಾಡಿ ಪರಾರಿಯಾಗುತ್ತಿದ್ದ ಭೀಮಣ್ಣನನ್ನು ಗ್ರಾಮಸ್ಥರು ಹಿಡಿದು ರಾತ್ರಿಯಿಡಿ ಮರಕ್ಕೆ ಕಟ್ಟಿಹಾಕಿ ಶಿಕ್ಷೆ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಭೀಮಣ್ಣನನ್ನು ಮರದಿಂದ ಬಿಡಿಸಿ ಠಾಣೆಗೆ ಕರೆದುಕೊಂಡ ಹೋಗಿದ್ದಾರೆ. ಈ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.

    ಗುರುಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೆಲಿಪ್ಯಾಡ್ ಇರುವ ಜಾಗ ನಮ್ಮದು, ಅದಕ್ಕೆ ಬೋರ್ಡ್ ಹಾಕಿದ್ದೇವೆ: ಪ್ರಮೋದಾದೇವಿ

    ಹೆಲಿಪ್ಯಾಡ್ ಇರುವ ಜಾಗ ನಮ್ಮದು, ಅದಕ್ಕೆ ಬೋರ್ಡ್ ಹಾಕಿದ್ದೇವೆ: ಪ್ರಮೋದಾದೇವಿ

    ಮೈಸೂರು: ಲಲಿತ್ ಮಹಲ್ ಹೆಲಿಪ್ಯಾಡ್ ಜಾಗ ಸರ್ಕಾರದ್ದಲ್ಲ ನಮ್ಮದು. ನಾವು ಯಾರಿಗೂ ತೊಂದರೆ ಕೊಡಲ್ಲ. ನಮ್ಮ ಆಸ್ತಿಯನ್ನು ನಾವು ಸುರಕ್ಷತೆ ಮಾಡುತ್ತಿದ್ದೇವೆ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.

    ಲಲಿತ್ ಮಹಲ್ ಹೆಲಿಪ್ಯಾಡ್ ಜಾಗ ವಿವಾದದ ಕುರಿತು ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ಹೈಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಹೆಲಿಪ್ಯಾಡ್ ಇರುವ ಜಾಗ ನಮ್ಮದು. ಆ ಜಾಗದಲ್ಲಿ ಯಾರೋ ಹೊರಗಿನವರು ಬೇಲಿ ಹಾಕುವುದನ್ನು ಗಮನಿಸಿದ್ದೇವೆ. ಹೀಗಾಗಿ ನಮ್ಮ ಜಾಗವನ್ನು ನಾವು ಭದ್ರ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಬೋರ್ಡ್ ಹಾಕಿಸಿದ್ದೇವೆ. ಯಾರಿಗೋ ತೊಂದರೆ ಕೊಡಬೇಕು ಅನ್ನುವುದು ನಮ್ಮ ಉದ್ದೇಶ ಅಲ್ಲ. ಅಲ್ಲದೆ ಯಾರ ಓಡಾಟವನ್ನೂ ನಿರ್ಬಂಧಿಸಿಲ್ಲ. ಅಗತ್ಯಬಿದ್ದರೆ ಮುಂದೆಯೂ ಹೆಲಿಪ್ಯಾಡ್ ಬಳಸಿಕೊಳ್ಳಲಿ ಎಂದು ಸ್ಪಷ್ಟಪಡಿಸಿದರು.

    ಲಲಿತ್ ಮಹಲ್ ಹೆಲಿಪ್ಯಾಡ್ ಜಾಗ ಸರ್ಕಾರದ್ದಲ್ಲ ನಮ್ಮದು. ಬಿ ಖರಾಬ್(ಹಸು ಮೇಯುವ ಸ್ಥಳ) ಅಂತ ಎಲ್ಲೂ ಇಲ್ಲ. ಅದು ಅರಮನೆಗೆ ಸೇರಿದ ಜಾಗ, ಹರ್ಷಗುಪ್ತ ಜಿಲ್ಲಾಧಿಕಾರಿಯಾಗಿದ್ದ ವೇಳೆ ಬಿ ಖರಾಬ್ ಎಂದು ಶುರುವಾಯಿತು. ಬಳಿಕ ವಸ್ತ್ರದ್ ಬಂದ ವೇಳೆ ಅದು ಅರಮನೆ ವಂಶಸ್ಥರಿಗೆ ಸೇರಿದ್ದು ಎಂದು ತೀರ್ಪು ಕೊಟ್ಟಿದ್ದರು. ಬಳಿಕ ಡಿಸಿಯಾಗಿ ಶಿಖಾ ಬಂದ ವೇಳೆ ಸರ್ಕಾರಿ ಭೂಮಿ ಎಂದು ತೀರ್ಪು ಕೊಟ್ಟರು. ಇದನ್ನು ಪ್ರಶ್ನಿಸಿ ನಾವು ಹೈಕೋರ್ಟ್ ಮೊರೆ ಹೋಗಿದ್ದೆವು. ಜೂನ್ 19 ರಂದು ಹೈಕೋರ್ಟ್ ಅರಮನೆ ವಂಶಸ್ಥರಿಗೆ ಸೇರಿದ ಭೂಮಿ ಎಂದು ತೀರ್ಪು ಕೊಟ್ಟಿತ್ತು. ಇದನ್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಸರ್ಕಾರದ ಅರ್ಜಿಯನ್ನು ಕಳೆದ ಡಿಸೆಂಬರ್ 19 ರಂದು ವಜಾ ಮಾಡಿದೆ ಎಂದು ವಿವರಿಸಿದರು.

    ಮೈಸೂರು, ಬೆಂಗಳೂರು ಅರಮನೆಗಳ ವ್ಯಾಜ್ಯ ವಿಚಾರದಲ್ಲಿ ಎಲ್ಲ ಸರ್ಕಾರಗಳೂ ತೊಂದರೆ ಕೊಟ್ಟಿವೆ. ಈಗಿನ ಸರ್ಕಾರ ತಟಸ್ಥವಾಗಿದೆ. ನಮ್ಮ ಆಸ್ತಿಗಳ ವಿಚಾರದಲ್ಲಿ ಎಲ್ಲ ಸರ್ಕಾರಗಳೂ ತೊಂದರೆ ಕೊಟ್ಟಿವೆ. ಕೆಲವು ಸರ್ಕಾರಗಳು ಜಾಸ್ತಿ ತೊಂದರೆ ಕೊಟ್ಟಿವೆ. ಕೆಲ ಸರ್ಕಾರಗಳು ಕಡಿಮೆ ತೊಂದರೆ ಕೊಟ್ಟಿವೆ. ಯಾವುದೇ ಸರ್ಕಾರ ಅಥವಾ ವ್ಯಕ್ತಿಯನ್ನು ನಾನು ದೂಷಿಸುವುದಿಲ್ಲ. ಬೆಂಗಳೂರು ಮತ್ತು ಮೈಸೂರು ಅರಮನೆ ಮಾಲೀಕತ್ವದ ವಿಚಾರ ಸುಪ್ರೀಂ ಕೋರ್ಟ್‍ನಲ್ಲಿ ಬಾಕಿ ಇದೆ. ಮುಂಬೈ ಪಾಪರ್ಟಿ ಓನರ್ಸ್ ಅಸೋಸಿಯೇಶನ್ ಸುಪ್ರೀಂ ಕೋರ್ಟ್‍ನಲ್ಲಿ ವ್ಯಾಜ್ಯ ಹೂಡಿದೆ. ಈ ಪ್ರಕರಣದಲ್ಲಿ 9 ನ್ಯಾಯಾಧೀಶರ ಸಂವಿಧಾನ ಪೀಠ ತೀರ್ಪು ನೀಡಬೇಕಿದೆ. ಆ ತೀರ್ಪು ಆಧರಿಸಿ ನಮ್ಮ ವ್ಯಾಜ್ಯಗಳು ಇತ್ಯರ್ಥ ಆಗಬೇಕಿದೆ. ನಾವು ದೆಹಲಿಯಲ್ಲಿ ಇದ್ದರೆ ವ್ಯಾಜ್ಯಗಳು ಬೇಗ ಬರೆಹರಿಯುತ್ತಿದ್ದವು. ಮೈಸೂರಿನಲ್ಲೇ ಇರುವುದರಿಂದ ವಿಳಂಬ ಆಗುತ್ತಿರಬಹುದು ಎಂದರು.

    ರಾಜಕೀಯ ನನಗೆ ಸೂಟ್ ಆಗುತ್ತೆ. ಆದರೆ ರಾಜಕೀಯಕ್ಕೆ ನಾನು ಸೂಟ್ ಆಗುವುದಿಲ್ಲ. ಈ ಹಿಂದೆಯೂ ಹಲವಾರು ಬಾರಿ ಸ್ಪಷ್ಟನೆ ಕೊಟ್ಟಿದ್ದೇನೆ. ಪದೇ ಪದೇ ಅದನ್ನೇ ಹೇಳೋದಿಕ್ಕೆ ಇಷ್ಟ ಇಲ್ಲ. ಆಡಳಿತ ನಡೆಸುವುದಕ್ಕೆ ನನಗೆ ಕಷ್ಟ ಆಗಲ್ಲ. ಆದರೆ ರಾಜಕೀಯಕ್ಕೆ ನಾನು ಸೂಟ್ ಆಗಲ್ಲ. ಹೀಗಾಗಿ ನಾನು ರಾಜಕೀಯಕ್ಕೆ ಹೋಗಲ್ಲ ಎಂದು ಹೇಳಿದರು.

  • ಅರ್ಧ ಆಸ್ತಿಯನ್ನು ಪ್ರೀತಿಯ ಸಾಕು ನಾಯಿ ಹೆಸರಿಗೆ ವಿಲ್ ಬರೆದ ರೈತ

    ಅರ್ಧ ಆಸ್ತಿಯನ್ನು ಪ್ರೀತಿಯ ಸಾಕು ನಾಯಿ ಹೆಸರಿಗೆ ವಿಲ್ ಬರೆದ ರೈತ

    – ನಾಯಿ ತಮ್ಮ ಬಗ್ಗೆ ಕಾಳಜಿ ವಹಿಸಿದ್ದೆ ಕ್ರಮ
    – ಮಕ್ಕಳ ವರ್ತನೆಯಿಂದ ಬೇಸತ್ತು ನಾಯಿ ಹೆಸರಿಗೆ ಆಸ್ತಿ

    ಭೋಪಾಲ್: ಹಿರಿಯ ರೈತರೊಬ್ಬರು ತಮ್ಮ ಅರ್ಧ ಆಸ್ತಿಯನ್ನು ನಾಯಿಯ ಹೆಸರಿಗೆ ವಿಲ್ ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಮಧ್ಯಪ್ರದೇಶದ ಚಿಂದ್ವಾರಾದ ರೈತ ನಾರಾಯಣ ವರ್ಮ(50) ತಮ್ಮ ಅರ್ಧ ಆಸ್ತಿಯನ್ನು ನಾಯಿಯ ಹೆಸರಿಗೆ ವಿಲ್ ಬರೆದಿದ್ದಾರೆ. ಮಕ್ಕಳ ದುರ್ವರ್ತನೆಯಿಂದ ಬೇಸತ್ತು ಹಿರಿಯ ರೈತ ಈ ನಿರ್ಧಾರ ಕೈಗೊಂಡಿದ್ದಾರೆ. ನಾಯಿಯು ನನಗೆ ಮಗನಿದ್ದಂತೆ. ಹೀಗಾಗಿ ನನ್ನ ಅರ್ಧ ಆಸ್ತಿಯನ್ನು ಅವನ ಹೆಸರಿಗೆ ಬರೆದಿದ್ದೇನೆ ಎಂದು ಹೇಳಿದ್ದಾರೆ.

    ನಾರಾಯಣ ವರ್ಮ ಅವರು ಅರ್ಧ ಆಸ್ತಿಯನ್ನು ತಮ್ಮ ಎರಡನೇ ಪತ್ನಿ ಚಂಪಾ ಹೆಸರಿಗೆ ಬರೆದಿದ್ದು, 50 ವರ್ಷದ ರೈತನ ಬಳಿ ಒಟ್ಟು 18 ಎಕರೆ ಭೂಮಿ ಇದೆ.

    ಹೆಂಡತಿ, ನಾಯಿ ನನ್ನನ್ನು ನೋಡ್ಕೋಳ್ತಾರೆ
    ಮಕ್ಕಳ ದುರ್ವರ್ತನೆಯಿಂದ ನಾರಾಯಣ ಅವರು ಬೇಸತ್ತಿದ್ದು, ಹೀಗಾಗಿ ತಮ್ಮ ಅರ್ಧ ಆಸ್ತಿಯನ್ನು ಪ್ರೀತಿಯ ಸಾಕು ನಾಯಿ ಜಾಕಿ ಹೆಸರಿಗೆ ಬರೆದಿದ್ದಾರೆ. ಪತ್ನಿ ಹಾಗೂ ನಾಯಿ ನನ್ನ ಬಗ್ಗೆ ಕಾಳಜಿ ವಹಿಸಿದ್ದಾರೆ. ಹೀಗಾಗಿ ನಾನು ಅವರಿಗೆ ಹತ್ತಿರವಾಗಿದ್ದೇನೆ. ನಾನು ಸತ್ತ ಮೇಲೆ ನನ್ನ ಎರಡನೇ ಪತ್ನಿ ಚಂಪಾ ಹಾಗೂ ಪ್ರೀತಿಯ ಸಾಕು ನಾಯಿ ಜಾಕಿ ನನ್ನ ಎಲ್ಲ ಆಸ್ತಿಯನ್ನು ಸಮನಾಗಿ ಪಡೆಯಬೇಕೆಂದು ಬಯಸುತ್ತೇನೆ. ನಾಯಿಯನ್ನು ನೋಡಿಕೊಳ್ಳುವ ವ್ಯಕ್ತಿ ನಾನು ಅದಕ್ಕಾಗಿ ಮೀಸಲಿಟ್ಟ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುತ್ತಾನೆ ಎಂದು ವಿಲ್ ಬರೆದಿದ್ದಾರೆ.

    ರೈತ ನಾರಾಯಣ ವರ್ಮಾ ಅವರ ಮೊದಲ ಪತ್ನಿಯನ್ನು ಧನ್ವಂತರಿ ವರ್ಮಾ ಎಂದು ಗುರುತಿಸಲಾಗಿದೆ. ಇವರಿಗೆ ಮೂರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದಾನೆ. ಅಲ್ಲದೆ ಎರಡನೇ ಪತ್ನಿ ಚಂಪಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಯಾರಿಗೂ ಆಸ್ತಿ ಬರೆಯದೆ ನಾಯಿ ಹಾಗೂ ತಮ್ಮ ಎರಡನೇ ಪತ್ನಿಗೆ ಮಾತ್ರ ಆಸ್ತಿ ಬರೆದಿದ್ದಾರೆ.

  • 10 ಕೋಟಿ ಬೆಲೆಯ ಆಸ್ತಿ ಅಡವಿಟ್ಟ ಸೋನು ಸೂದ್

    10 ಕೋಟಿ ಬೆಲೆಯ ಆಸ್ತಿ ಅಡವಿಟ್ಟ ಸೋನು ಸೂದ್

    – ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಕ್ರಮ

    ಮುಂಬೈ: ಲಾಕ್‍ಡೌನ್ ವೇಳೆ ವಲಸೆ ಕಾರ್ಮಿಕರಿಗೆ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಬಾಲಿವುಡ್ ನಟ ಸೋನು ಸೂದ್ ನೆರವಾಗಿದ್ದರು. ಈ ಕುರಿತು ಸಾಕಷ್ಟು ಮೆಚ್ಚುಗೆ ಸಹ ವ್ಯಕ್ತವಾಗಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸೋನು ಸೂದ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು 10 ಕೋಟಿ ರೂ.ಆಸ್ತಿಯನ್ನು ಅಡವಿಟ್ಟಿದ್ದಾರೆ.

    ಮುಂಬೈನ ವಿವಿಧ ಪ್ರದೇಶಗಳಲ್ಲಿರುವ 8 ಆಸ್ತಿಗಳನ್ನು ಸೋನು ಸೂದ್ ಅಡವಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು 10 ಕೋಟಿ ರೂ. ಅವಶ್ಯವಿದ್ದಿದ್ದರಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಸಾಲ ಪಡೆಯಲು ಜುಹು ಪ್ರದೇಶದಲ್ಲಿನ ಆಸ್ತಿಗಳನ್ನು ಅಡವಿಟ್ಟಿದ್ದು, 2 ಅಂಗಡಿ ಹಾಗೂ 6 ಫ್ಲ್ಯಾಟ್‍ಗಳನ್ನು ಅಡವಿಟ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಸೆಪ್ಟೆಂಬರ್ 15ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ನವೆಂಬರ್ 24ರಂದು ರಿಜಿಸ್ಟರ್ ಆಗಿದೆ. ಈ ದಾಖಲೆಯನ್ನಾಧರಿಸಿ ವರದಿ ಮಾಡಲಾಗಿದ್ದು, ಇಸ್ಕಾನ್ ದೇವಸ್ಥಾನದ ಬಳಿ ಎ.ಬಿ.ನಾಯರ್ ರಸ್ತೆಯಲ್ಲಿರುವ ಕಟ್ಟಡವನ್ನು ಸಹ ಅಡಮಾನ ಇಡಲಾಗಿದೆ. ಸಾಲ ಪಡೆಯಲು 5 ಲಕ್ಷ ರೂ.ಗಳ ನೋಂದಣಿ ಮೊತ್ತವನ್ನು ಸಹ ಪಾವತಿಸಲಾಗಿದೆ.

    ಆಸ್ತಿಗಳು ಸೋನು ಸೂದ್ ಹಾಗೂ ಅವರ ಪತ್ನಿ ಮಾಲೀಕತ್ವದಲ್ಲೇ ಇರುತ್ತವೆ. ಪ್ರತಿ ತಿಂಗಳು ಬಾಡಿಗೆಯನ್ನು ಸಹ ಪಡೆಯಬಹುದು. ಆದರೆ 10 ಕೋಟಿ ರೂ.ಗಳ ಸಾಲಕ್ಕೆ ಬಡ್ಡಿ ಹಾಗೂ ಅಸಲನ್ನು ಪಾವತಿಸಬೇಕಾಗುತ್ತದೆ.

    ತಮ್ಮ ಸಹಾಯದ ಗುಣಗಳ ಮೂಲಕವೇ ಲಾಕ್‍ಡೌನ್ ಸಮಯದಲ್ಲಿ ಹೀರೋ ಆಗಿದ್ದ ಸೋನು ಸೂದ್, ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ನೂರಾರು ವಲಸೆ ಕಾರ್ಮಿಕರು ಅವರ ಊರುಗಳಿಗೆ ತೆರಳಲು ಸಹಾಯ ಮಾಡಿದ್ದಾರೆ. ಅಲ್ಲದೆ ಮಕ್ಕಳ ಓದಿಗೆ, ಹಲವರಿಗೆ ಸರ್ಜರಿ ಸೇರಿದಂತೆ ವಿವಿಧ ರೀತಿಯ ಸಹಾಯವನ್ನು ಮಾಡಿದ್ದಾರೆ. ಈ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ.

    ಇತ್ತೀಚೆಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್‍ಡಿಪಿ)ದ ಭಾಗವಾಗಿ ಪ್ರತಿಷ್ಠಿತ ಎಸ್‍ಡಿಜಿ ಸ್ಪೆಷಲ್ ಮಾನವೀಯ ಕಾರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಮೂಲಕ ವಿಶ್ವಸಂಸ್ಥೆ ಮಟ್ಟದಲ್ಲಿ ಸಹ ಸೋನು ಸೂದ್ ಗುರುತಿಸಿಕೊಂಡಿದ್ದು, ಇದೀಗ ಸಹಾಯ ಮಾಡಲು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ತಮ್ಮ ಆಸ್ತಿಗಳನ್ನೇ ಅಡವಿಟ್ಟು ಕಷ್ಟದಲ್ಲಿರುವವರಿಗೆ ಸ್ಪಂದಿಸಲು ಮುಂದಾಗಿದ್ದಾರೆ.

  • ಹಾಸನದಲ್ಲಿ ಡ್ರೋನ್ ಸರ್ವೇ- ಹದಿನೈದು ದಿನದ ಕೆಲಸ ಆರು ಗಂಟೆಯಲ್ಲಿ ಮುಕ್ತಾಯ

    ಹಾಸನದಲ್ಲಿ ಡ್ರೋನ್ ಸರ್ವೇ- ಹದಿನೈದು ದಿನದ ಕೆಲಸ ಆರು ಗಂಟೆಯಲ್ಲಿ ಮುಕ್ತಾಯ

    – ಅರ್ಧ ಗಂಟೆಯಲ್ಲಿ 2 ಸಾವಿರ ಎಕರೆ ಸರ್ವೇ

    ಹಾಸನ: ಹತ್ತು ಮನೆಗಿಂತ ಹೆಚ್ಚು ಜನವಸತಿ ಇರುವ ಜಾಗದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಡ್ರೋನ್ ಮೂಲಕ ಸರ್ವೇ ಮಾಡಲಾಗುತ್ತಿದ್ದು, ಇದರಿಂದ ಸಮಯ ಉಳಿತಾಯವಾಗುತ್ತಿದೆ. ಅಲ್ಲದೆ ಸಾರ್ವಜನಿಕರಿಗೆ ಅನುಕೂಲ ಆಗಲಿದೆ ಎಂದು ಭೂದಾಖಲೆಗಳ ಉಪನಿರ್ದೇಶಕಿ ಹೇಮಲತಾ ತಿಳಿಸಿದ್ದಾರೆ.

    ಈ ಕುರಿತು ಮಾತನಾಡಿದ ಅವರು, ಅತ್ಯಾಧುನಿಕ ಡ್ರೋನ್ ಮೂಲಕ ದಿನಕ್ಕೆ 5 ರಿಂದ ಎಂಟು ಹಳ್ಳಿ ಸರ್ವೇ ಮಾಡಿ ಮುಗಿಸಬಹುದು. 10 ರಿಂದ 15 ದಿನದಲ್ಲಿ ಮಾಡಬಹುದಾದ ಕೆಲಸವನ್ನು ಡ್ರೋನ್ ಮೂಲಕ ಕೇವಲ ಐದು ಗಂಟೆಯಲ್ಲಿ ಮಾಡಿ ಮುಗಿಸಬಹುದಾಗಿದೆ. ಅರ್ಧ ಗಂಟೆಯಲ್ಲಿ ಸುಮಾರು 2 ಸಾವಿರ ಎಕರೆ ಸರ್ವೇ ಮಾಡಬಹುದಾಗಿದೆ. ಇದರಿಂದ ಸಮಯ ಉಳಿತಾಯವಾಗಲಿದೆ. ಅಲ್ಲದೆ ಸಾರ್ವಜನಿಕರಿಗೂ ಒಂದೇ ಕಾರ್ಡ್ ನಲ್ಲಿ ತಮ್ಮ ಆಸ್ತಿಯ ಎಲ್ಲ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.

    ಹವಾಮಾನ ವ್ಯತ್ಯಾಸ ಇದ್ದಾಗ ಡ್ರೋನ್ ಹಾರಿಸಿ ಸರ್ವೇ ಮಾಡಲು ಸಾಧ್ಯ ಆಗಲ್ಲ. ಡ್ರೋನ್ ಸರ್ವೇ ನಂತರ ಪಂಚಾಯಿತಿಯಲ್ಲಿರುವ ದಾಖಲೆ, ಆನ್‍ಗ್ರೌಂಡ್ ದಾಖಲೆ ಎಲ್ಲವನ್ನೂ ಪರಿಶೀಲನೆ ನಡೆಸಿ ನಂತರ ಆಸ್ತಿ ಕಾರ್ಡ್ ನೀಡಲಾಗುವುದು. ಹಾಸನದಲ್ಲಿ ಇನ್ನೂ ಐದಾರು ತಿಂಗಳು ಡ್ರೋನ್ ಸರ್ವೆ ಕಾರ್ಯ ನಡೆಯಲಿದೆ ಎಂದು ಭೂದಾಖಲೆಗಳ ಉಪನಿರ್ದೇಶಕಿ ಹೇಮಲತಾ ತಿಳಿಸಿದ್ದಾರೆ.

    ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಆರ್‍ಡಿಪಿಆರ್ ಇಲಾಖೆ, ಕಂದಾಯ ಇಲಾಖೆ, ಸರ್ವೇ ಆಫ್ ಇಂಡಿಯಾ ಮೂರು ಇಲಾಖೆಯ ಸಹಭಾಗಿತ್ವದೊಂದಿಗೆ ಹಾಸನದಲ್ಲಿ ಡ್ರೋನ್ ಮೂಲಕ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಡ್ರೋನ್ ಮೂಲಕ ಜನವಸತಿ ಪ್ರದೇಶದ ಫೋಟೊಗ್ರಫಿಕ್ ಇಮೇಜ್ ತೆಗೆದುಕೊಂಡು ನಕ್ಷೆ ತಯಾರಿಸಲಾಗುತ್ತೆ. ನಂತರ ಪ್ರಾಪರ್ಟಿ ಕಾರ್ಡ್ ಜನರೇಟ್ ಮಾಡುತ್ತಾರೆ. ಇದನ್ನು ಜನರಿಗೆ ನೀಡುತ್ತಾರೆ ಎಂದು ತಿಳಿಸಿದರು.

    ಆಸ್ತಿ ಕಾರ್ಡನ್ನು ಪರಿಶೀಲನೆ ಮಾಡಿ, ಸಮಸ್ಯೆ ಇದ್ದಲ್ಲಿ ಸರಿಪಡಿಸಲಾಗುತ್ತೆ. ಇದರಿಂದಾಗಿ ಸಾರ್ವಜನಿಕರಿಗೆ ಅವರ ಒಡೆತನದ ನಕ್ಷೆ ಮತ್ತು ದಾಖಲಾತಿ ಒಂದೇ ಕಾರ್ಡ್‍ನಲ್ಲಿ ಸಿಗಲಿದೆ.ವಿಭಾಗ ಮಾಡಿಕೊಳ್ಳುವಾಗ, ಬ್ಯಾಂಕ್‍ಗಳಲ್ಲಿ ಲೋನ್ ಪಡೆಯುವಾಗ ಒಂದೇ ಕಾರ್ಡ್‍ನಲ್ಲಿ ಎಲ್ಲ ಮಾಹಿತಿ ಸಿಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಭೂದಾಖಲೆಗಳ ಉಪನಿರ್ದೇಶಕಿ ಹೇಮಲತಾ ಮನವಿ ಮಾಡಿದ್ದಾರೆ.

  • ಜೈಲಲ್ಲಿರುವ ಶಶಿಕಲಾಗೆ ಐಟಿ ಶಾಕ್ – 2 ಸಾವಿರ ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಜೈಲಲ್ಲಿರುವ ಶಶಿಕಲಾಗೆ ಐಟಿ ಶಾಕ್ – 2 ಸಾವಿರ ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಚೆನ್ನೈ: ಅಕ್ರಮ ಆಸ್ತಿಗಳಿಕೆ ಕೇಸ್‍ನಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಲ್ಲಿರುವ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್‍ಗೆ ಆದಾಯ ತೆರಿಗೆ ಇಲಾಖೆ ಬಿಗ್ ಶಾಕ್ ನೀಡಿದೆ.

    ಶಶಿಕಲಾಗೆ ಸಂಬಂಧಿಸಿದ 2000 ಕೋಟಿ ಮೌಲ್ಯದ ಆಸ್ತಿಯನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇಳವರಸಿ, ಸುಧಾಕರನ್‍ಗೆ ಸೇರಿದ ಆಸ್ತಿಗಳನ್ನು ಸೀಜ್ ಮಾಡಲಾಗಿದೆ. ಸಿರುತ್ತಾವೂರ್, ಕೊಡನಾಡಿನಲ್ಲಿರುವ 300 ಕೋಟಿ ಮೌಲ್ಯದ ಆಸ್ತಿಯೂ ಇದ್ರಲ್ಲಿ ಸೇರಿದೆ. ಈ ಸಂಬಂಧ ಪ್ರಕಟಣೆ ಬಿಡುಗಡೆ ಮಾಡಿರುವ ಐಟಿ ಇಲಾಖೆ, ಜಯಲಲಿತಾ ಆಪ್ತೆ ಶಶಿಕಲಾ ಅವರಿಗೆ ಸೇರಿದ್ದ 2 ಸಾವಿರ ಕೋಟಿ ರೂ. ಮೌಲ್ಯಸ ಆಸ್ತಿ ಮಾಡಿಕೊಂಡಿರುವುದಾಗಿ ತಿಳಿಸಿದೆ.

    ತಮಿಳುನಾಡು, ಪುದುಚೇರಿಯಲ್ಲಿ ಶಶಿಕಲಾ, ಪತಿ ನಟರಾಜನ್ ಹಾಗೂ ಸಂಬಂಧಿಗಳಿಗೆ ಸೇರಿದ್ದ ಹಲವಾರು ಸ್ಥಳಗಳ ಮೇಲೆ 2017ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ 1,500 ಕೋಟಿ ರೂಪಾಯಿ ಆದಾಯ ತೆರಿಗೆ ವಂಚನೆ ಪತ್ತೆಯಾಗಿತ್ತು. ಅಲ್ಲದೇ 7 ಕೋಟಿ ರೂಪಾಯಿ ನಗದು, 5 ಕೋಟಿ ಮೌಲ್ಯದ ಆಭರಣಗಳನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಇದನ್ನೂ ಓದಿ: ಪರಪ್ಪನ ಅಗ್ರಹಾರದಿಂದ ಶಶಿಕಲಾ ಬಿಡುಗಡೆ ದಿನಾಂಕ ಫಿಕ್ಸ್

    ಮುಂದಿನ ವರ್ಷದ ಜನವರಿಯಲ್ಲಿ ಶಶಿಕಲಾ ಜೈಲಿಂದ ರಿಲೀಸ್ ಆಗಲಿದ್ದಾರೆ. ಶಶಿಕಲಾ ಬಿಡುಗಡೆಯ ಕುರಿತು ನರಸಿಂಹ ಮೂರ್ತಿ ಅವರು ಸಲ್ಲಿಸಲಾಗಿದ್ದ ಆರ್‍ಟಿಐ ಅರ್ಜಿಗೆ ಜೈಲಾಧಿಕಾರಿಗಳು ಉತ್ತರ ನೀಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜೈಲು ಶಿಕ್ಷೆಯೊಂದಿಗೆ 10 ಕೋಟಿ ರೂ. ದಂಡ ವಿಧಿಸಿದೆ. ಈ ಮೊತ್ತವನ್ನು ಶಶಿಕಲಾ ಪಾವತಿ ಮಾಡಿದರೆ ಅವರ ಬಿಡುಗಡೆಗೆ ಅವಕಾಶವಿದೆ. ಇಲ್ಲವಾದರೆ ಮತ್ತೆ ಒಂದು ವರ್ಷ ಶಶಿಕಲಾ ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಪೆರೋಲ್ ದಿನಗಳನ್ನು ಲೆಕ್ಕಾಚಾರ ಮಾಡಿದರೂ ಅವರ ಬಿಡುಗಡೆ ದಿನಾಂಕ ಬದಲಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಈ ಹಿಂದೆ ಲಭಿಸಿತ್ತು.

  • ಸರಸ, ವಿರಸ, ಸಾಮರಸ್ಯ ಇದ್ದರೆ ಸಂಸಾರ – ಘಟನೆಯ ಬಗ್ಗೆ ಕಲ್ಯಾಣ್ ಸ್ಪಷ್ಟನೆ

    ಸರಸ, ವಿರಸ, ಸಾಮರಸ್ಯ ಇದ್ದರೆ ಸಂಸಾರ – ಘಟನೆಯ ಬಗ್ಗೆ ಕಲ್ಯಾಣ್ ಸ್ಪಷ್ಟನೆ

    – ನಾನು, ನನ್ನ ಹೆಂಡ್ತಿ ಚೆನ್ನಾಗಿದ್ದೀವಿ

    ಬೆಳಗಾವಿ: ಪ್ರತಿಯೊಂದು ಸಂಸಾರದಲ್ಲೂ ಜಗಳ ನಡೆಯುತ್ತದೆ. ಸರಸ, ವಿರಸ, ಸಾಮರಸ್ಯ ಇದ್ದರೆ ಅದು ಸಂಸಾರ. ನಮ್ಮ ಸಂಸಾರ ಚೆನ್ನಾಗಿದೆ ಎಂದು ಪ್ರೇಮಕವಿ ಕೆ.ಕಲ್ಯಾಣ್ ತಮ್ಮ ದಾಂಪತ್ಯ ಜೀವನದ ಬಗ್ಗೆ ಸ್ಪಷ್ಟಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಕಲ್ಯಾಣ್, ನಮ್ಮ ತಂದೆ ತೀರಿಕೊಂಡು 14 ವರ್ಷ ಆಗಿದೆ. ನಮ್ಮ ತಾಯಿ ಎರಡೂವರೆ ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಅಲ್ಲಿಯತನಕ ನಾವೆಲ್ಲರೂ ಒಟ್ಟಿಗೆ ಇದ್ವಿ, ಆಮೇಲೆ ನಾನು, ನನ್ನ ಹೆಂಡತಿ ಒಟ್ಟಿಗೆ ಬೇರೆ ಮನೆಯಲ್ಲಿ ವಾಸಮಾಡುತ್ತಿದ್ವಿ. ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಪತ್ನಿಯ ಪೋಷಕರು ವಾಸಮಾಡುತ್ತಿದ್ದರು. ವಯಸ್ಸಾದರೂ ಯಾಕೆ ಬೇರೆ ಇರಬೇಕು ಎಂದು ನಮ್ಮ ಮನೆಗೆ ಕರೆದುಕೊಂಡು ಬಂದು ಒಟ್ಟಿಗೆ ವಾಸ ಮಾಡುತ್ತಿದ್ದೆವು ಎಂದರು.

    ಮೊದಲಿಗೆ ನಾನು ನನ್ನ ಹೆಂಡತಿ ಚೆನ್ನಾಗಿದ್ದೀವಿ. ನಮ್ಮಿಬ್ಬರಲ್ಲಿ ಯಾವುದೇ ಪರಸ್ಪರ ಗೊಂದಲಗಳಿಲ್ಲ. ನನ್ನ ಪತ್ನಿ ಬೆಳಗಾವಿಯವರು ನಾವಿಬ್ಬರು ಮದುವೆಯಾಗಿ 15 ವರ್ಷ ಆಗಿದೆ. ಪ್ರತಿಯೊಬ್ಬರ ಸಂಸಾರದಲ್ಲೂ ಸಣ್ಣಪುಟ್ಟ ಏಳು ಬೀಳುಗಳು ಆರೋಪಗಳಿರುತ್ತವೆ. ಸರಸ, ವಿರಸ, ಸಾಮರಸ್ಯ ಇದ್ದರೇನೆ ಅದು ಸಂಸಾರ. ನಮ್ಮ ಸಂಸಾರನೂ ಚೆನ್ನಾಗಿದೆ ಎಂದು ಸ್ಪಷ್ಟಪಡಿಸಿದರು.

    ಅತ್ತ, ಮಾವ ಬಂದ ಒಂದು ವಾರಕ್ಕೆ ಗಂಗಾ ಕುಲಕರ್ಣಿಯನ್ನು ಅಡಿಗೆ ಕೆಲಸಕ್ಕಾಗಿ ನೇಮಿಸಿಕೊಳ್ಳಲಾಗಿತ್ತು. ಆದರೆ ಆಕೆಯ ನಡವಳಿಕೆ ನನಗೂ ನನ್ನ ಪತ್ನಿಗೂ ಇಷ್ಟವಾಗಿರಲಿಲ್ಲ. ಅಲ್ಲದೇ ಆಕೆಯ ಬಂದ 4-5 ದಿನಗಳಲ್ಲಿ ಪತ್ನಿ, ಅತ್ತೆ, ಮಾವ ಯಾಕೋ ಸೈಲೆಂಟ್ ಆದರು. ನನಗೆ ಏನೋ ನಿಗೂಢತೆ ರೀತಿ ಕಾಣಿಸುತ್ತಿತ್ತು. ಒಂದು ದಿನ ಮಧ್ಯರಾತ್ರಿ ಅತ್ತೆ ದೇವರ ಮನೆಯಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ದೀಪ ಹಚ್ಚಿಕೊಂಡು ಬೆಳಗ್ಗೆ ಸುಮಾರು 3 ಗಂಟೆಯವರೆಗೂ ಪೂಜೆ ಮಾಡಲು ಶುರು ಮಾಡಿದರು. ಆಗ ಗಂಗಾ ಕುಲಕರ್ಣಿಯ ಸಲಹೆಯಂತೆ ಪೂಜೆ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಾಯಿತು.

    ಪದೇ ಪದೇ ನನಗೆ ಗೊತ್ತಿರುವ ಗುರೂಜಿ ಇದ್ದಾರೆ. ಅವರ ಆಶೀರ್ವಾದ ಪಡೆದುಕೊಂಡರೆ ಒಳ್ಳೆದಾಗುತ್ತದೆ ಎಂದು ಗಂಗಾ ಕುಲಕರ್ಣಿ ಹೇಳುತ್ತಿದ್ದರು. ಒಮ್ಮೆ ಆ ವ್ಯಕ್ತಿಗೆ ಫೋನ್ ಮಾಡಿ ಕೊಟ್ಟಿದ್ದರು. ಆತನ ಹೆಸರು ಶಿವನಂದ ವಾಲಿ. ಪೂಜೆ ಮಾಡಿಸಲು ಹೇಳಿದ್ರು, ನಾನು ಒಪ್ಪಲಿಲ್ಲ. ಆದರೆ ನಮ್ಮ ಅತ್ತೆಯವರು ಗುರೂಜಿ ಜೊತೆ ಗಂಟೆಗಟ್ಟಲೇ ಫೋನಿನಲ್ಲಿ ಮಾತನಾಡುತ್ತಿದ್ದರು. ಜನವರಿ 9 ರಂದು ರಾತ್ರಿ ಬೆಳಗಾವಿಗೆ ಹೋಗಿ ಬರುತ್ತೇವೆ ಎಂದು ಪತ್ನಿ, ಅತ್ತೆ, ಮಾವ ಮೂವರು ಹೋದರು. ಆದರೆ ಜನವರಿ 10ರಂದು ಪತ್ನಿಯ ಫೋನ್ ಸ್ವಿಚ್ ಆಫ್ ಆಗಿತ್ತು. ಕೊನೆಗೆ ಜನವರಿ 17 ರಂದು ಬೆಳಗಾವಿಗೆ ಬಂದು ನೋಡಿದೆ. ಆಗ ಅತ್ತೆ ನನ್ನ ಪತ್ನಿಯನ್ನು ಭೇಟಿ ಮಾಡಲು ಬಿಡಲಿಲ್ಲ. ಅಲ್ಲಿಯೂ ಗಂಗಾ ಕುಲಕರ್ಣಿ ಹೇಳಿದಂತೆ ಪೂಜೆ ಮಾಡುತ್ತಿದ್ದರು ಎಂದು ಕಲ್ಯಾಣ್ ತಿಳಿಸಿದರು.

    ಒಂದು ದಿನ ಮೂವರು ಮನೆ ಖಾಲಿ ಮಾಡಿಕೊಂಡು ಬೇರೆ ಕಡೆ ಹೋಗಿದ್ದರು. ಆ ಮನೆಯಲ್ಲಿ ಗಂಗಾ ಕುಲಕರ್ಣಿ, ಶಿವನಂದ ವಾಲಿ ಪೂಜೆ ಮಾಡಲು ಶುರು ಮಾಡಿದ್ದರು. ಈ ವಿಚಾರ ಗೊತ್ತಾಗಿ ಬರುವಷ್ಟರಲ್ಲಿ ಆ ಮನೆಯನ್ನು ಖಾಲಿ ಮಾಡಿ ಬೇರೆ ಕಡೆ ಹೋಗಿದ್ದಾರೆ ಎಂದು ನನಗೆ ಗೊತ್ತಾಯಿತು. ಬೆಂಗಳೂರಿನ ಬಂದು ಎಲ್ಲ ಕಡೆ ಹುಡುಕಿದೆ. ಆಗ ಮೂವರು ಪತ್ತೆಯಾದರು. ಆದರೆ ಈ ವೇಳೆ ನನ್ನ ಪತ್ನಿಯನ್ನು ಮಾತನಾಡಲು ಬಿಡದೆ ರೂಮಿಗೆ ಕರೆದುಕೊಂಡು ಹೋದರು. ಆಕೆಯ ಕತ್ತಲ್ಲಿ ನಾನು ಕಟ್ಟಿದ್ದ ತಾಳಿಯೂ ಇರಲಿಲ್ಲ. ನನ್ನ ಪತ್ನಿ ಬೇರೆ ಅಪರಿಚಿತರ ಜೊತೆ ಮಾತನಾಡುವ ರೀತಿ ಮಾತಾಡಿದರು.

    ಅಲ್ಲದೇ ನನ್ನ ಪತ್ನಿಯ ತಾಯಿ ಸಂಬಂಧಿಕರಿಗೆ ಫೋನ್ ಮಾಡಿ ಲಕ್ಷಾಂತರ ಹಣಬೇಕು ಎಂದು ಕೇಳಿದ್ದಾರೆ. ಪೂಜೆ ಮಾಡಿಸಬೇಕು, ಇಲ್ಲವಾದರೆ ನಮ್ಮ ಪ್ರಾಣಕ್ಕೆ ಅಪಾಯ ಇದೆ. ಹಣವನ್ನು ಗುರೂಜಿಗೆ ಕೊಡಬೇಕು ಎಂದು ಹಣ ಕೇಳಿದ್ದಾರೆ. ಒಂದು ದಿನ ನನ್ನ ಪತ್ನಿಯ ಅಕೌಂಟ್‍ನಿಂದ ಏಕಾಏಕಿ 1.20 ಲಕ್ಷ ಹಣ ಶಿವಾನಂದ ವಾಲಿಗೆ ಅಕೌಂಟ್‍ಗೆ ವರ್ಗಾವಣೆಯಾಗಿದೆ. ಸಂಬಂಧಿಕರ ಬಳಿ ಪಡೆದಿದ್ದ ಹಣವನ್ನ ಶಿವಾನಂದ ವಾಲಿಗೆ ಕೊಟ್ಟಿದ್ದಾರೆ. ಅಲ್ಲದೇ ಬೆಳಗಾವಿಯಲ್ಲಿ ಅತ್ತೆ, ಮಾವ ಹೆಸರಿನಲ್ಲಿದ್ದ ಆಸ್ತಿಯೂ ಕೂಡ ಶಿವಾನಂದ ವಾಲಿಗೆ ವರ್ಗಾವಣೆ ಆಗಿದೆ ಎಂದರು.

    ಇದ್ದಕ್ಕಿದ್ದಂತೆ ಎಲ್ಲರ ಫೋನ್ ಸ್ವಿಚ್ ಆಫ್ ಆಗಿತ್ತು. ಮೂರು ತಿಂಗಳಿನಿಂದ ಸಂಬಂಧಿಕರ ಸಂಪರ್ಕದಲ್ಲೂ ಇರಲಿಲ್ಲ. ನನ್ನ ಪತ್ನಿಯ ಕುಟುಂಬಸ್ಥರ ಜೊತೆ, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ನಾನು ದೂರು ದಾಖಲಿಸಿರುವೆ. ದೂರಿನಲ್ಲಿ ನನ್ನ ಅತ್ತೆ, ಮಾವ ಕಾಣಿಸಿಕೊಳ್ಳುತ್ತಿಲ್ಲ. ನಮ್ಮ ಕುಟುಂಬಕ್ಕೆ ಸಂಬಂಧ ಇಲ್ಲದ ವ್ಯಕ್ತಿಗೆ ಆಸ್ತಿ, ಹಣ ಎಲ್ಲವನ್ನೂ ಬರೆದುಕೊಟ್ಟಿರುವ ಬಗ್ಗೆ ಹೇಳಿದ್ದೇನೆ. ದೂರು ನೀಡಿದ 48 ಗಂಟೆಯ ಒಳಗೆ ಅತ್ತೆ, ಮಾವ, ಪತ್ನಿ ಪತ್ತೆಯಾಗಿದ್ದಾರೆ. ಶಿವಾನಂದ ವಾಲಿ, ಗಂಗಾ ಕುಲಕರ್ಣಿ ಒಂದೇ ದಿನ ಫೋನ್ ಸ್ವಿಚ್ ಆಪ್ ಮಾಡಿದ್ದಾರೆ. ಅತ್ತೆ ಮಾವನಿಗೆ ವಯಸ್ಸಾಗಿದೆ. ಹೀಗಾಗಿ ಅವರು ಕಾಣಿಸಿಕೊಳ್ಳದ ಕಾರಣ ದೂರು ನೀಡಿದ್ದೆ. ಶಿವಾನಂದ ವಾಲಿ ಬಂಧನ ಆಗುತ್ತಿದ್ದಂತೆ ನನ್ಮ ಪತ್ನಿ ನನ್ನ ವಿರುದ್ಧ ಆರೋಪಗಳನ್ನ ಮಾಡಿದ್ದಾರೆ ಎಂದು ನಡೆದ ಘಟನೆಯ ಬಗ್ಗೆ ಕೆ.ಕಲ್ಯಾಣ್ ವಿವರವಾಗಿ ತಿಳಿಸಿದರು.

  • ಊಟ ಮುಗಿಸಿ ಮಲಗಲು ಹೋದವ ನೇಣಿಗೆ ಶರಣು

    ಊಟ ಮುಗಿಸಿ ಮಲಗಲು ಹೋದವ ನೇಣಿಗೆ ಶರಣು

    – ನನ್ನ ಸಾವಿಗೆ ಚಿಕ್ಕಪ್ಪ, ಚಿಕ್ಕಮ್ಮನೇ ಕಾರಣ

    ಕೋಲಾರ: ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನಿಂದ ನನಗೆ ಅನ್ಯಾಯವಾಗಿದೆ. ನನ್ನ ಸಾವಿಗೆ ಇವರೇ ಕಾರಣ ಎಂದು ಆಡಿಯೋ, ಡೆತ್‍ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲೂಕಿನ ಮದನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಂಜುನಾಥ್ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ರಾತ್ರಿ ಊಟ ಮುಗಿಸಿಕೊಂಡು ಮಲಗಲೆಂದು ಹೋದವನು ನೇಣಿಗೆ ಶರಣಾಗಿದ್ದಾನೆ. ಅಲ್ಲದೆ ತನ್ನ ಸಾವಿಗೆ ಚಿಕ್ಕಪ್ಪನಾದ ರಮೇಶ್ ಹಾಗೂ ಚಿಕ್ಕಮ್ಮಳಾದ ಅಶ್ವಥಮ್ಮ ಕಾರಣ ಎಂದು ಡೆತ್‍ನೋಟ್ ಬರೆದಿಟ್ಟಿದ್ದಾನೆ. ಜೊತೆಗೆ ವಾಯ್ಸ್ ರೆಕಾರ್ಡ್ ಮಾಡಿ ವಾಟ್ಸಪ್ ಮೂಲಕ ತನ್ನ ಸ್ನೇಹಿತರಿಗೆ ಮೆಸೇಜ್ ಕಳುಹಿಸಿದ್ದಾನೆ. ನಂತರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಮಂಜುನಾಥ್ ಚಿಕ್ಕಂದಿನಲ್ಲಿಯೇ ತನ್ನ ತಂದೆ ತಾಯಿಯನ್ನ ಕಳೆದುಕೊಂಡು, ತನ್ನ ಚಿಕ್ಕಪ್ಪ ರಮೇಶ್ ಹಾಗೂ ಸಹೋದರಿಯರ ಆಶ್ರಯದಲ್ಲಿ ಬೆಳೆದಿದ್ದ. ಎಸ್‍ಎಸ್‍ಎಲ್‍ಸಿ ನಂತರ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಸಹೋದರಿಯರಿಗೆ ನೆರವಾಗುವುದರೊಂದಿಗೆ ತನ್ನ ಚಿಕ್ಕಪ್ಪ ರಮೇಶ್ ಸಹಾಯದಿಂದ ಜಮೀನನ್ನ ಮಾರಿ ಅಕ್ಕಂದಿರ ಮದುವೆ ಸಹ ಮಾಡಿದ್ದನು. ಸ್ವಂತ ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ.

    ಬೆಂಗಳೂರಿನಲ್ಲಿ ಹೋಟೆಲ್ ನಡೆಸುತ್ತಿದ್ದ ಈತ ಕೊರೊನಾ ಲಾಕ್‍ಡೌನ್‍ನಿಂದಾಗಿ ಗ್ರಾಮಕ್ಕೆ ಬಂದಿದ್ದನು. ತಮಗಿರುವ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದ. ಈ ವೇಳೆ ತನಗೆ ಆಸ್ತಿ ಎಷ್ಟಿದೆ ಎಂದು ಸರ್ವೇ ಮಾಡಿಸಲು ಮುಂದಾದಾಗ ತನ್ನ ಚಿಕ್ಕಪ್ಪನಿಂದ ತನಗೆ ಬರಬೇಕಿದ್ದ ಆಸ್ತಿಯಲ್ಲಿ ಮೋಸ ಆಗಿದೆ ಎಂದು ಗೊತ್ತಾಗಿದೆ. ಅಲ್ಲದೆ ಜಮೀನು ಹಂಚಿಕೆಯಲ್ಲಿ ತನ್ನ ಚಿಕ್ಕಪ್ಪ ರಮೇಶ್ ಹಾಗೂ ಚಿಕ್ಕಮ್ಮ ಅಶ್ವಥಮ್ಮ ಕಡಿಮೆ ನೀಡಿ ಮೋಸ ಮಾಡಿದ್ದಾರೆಂದು ತಿಳಿದುಕೊಂಡಿದ್ದಾನೆ. ಆಗಾಗ ಇದೇ ವಿಚಾರಕ್ಕೆ ಚಿಕ್ಕಪ್ಪನ ಜೊತೆ ಜಗಳವಾಡುವುದರೊಂದಿಗೆ ಸಾಕಷ್ಟು ಮನನೊಂದಿದ್ದ ಎನ್ನಲಾಗಿದೆ.

    ಮಂಜುನಾಥ್ ಈ ಕುರಿತು ನಮ್ಮ ಜೊತೆ ನೋವನ್ನ ಹಂಚಿಕೊಂಡಿದ್ದನು. ಕಳೆದ ಮೂವತ್ತು ವರ್ಷಗಳಿಂದ ಚಿಕ್ಕಪ್ಪನನ್ನೇ ನಂಬಿದ್ದ. ಇದೀಗ ತಾನು ನಂಬಿಕೆ ಇಟ್ಟಿದ್ದ ಚಿಕ್ಕಪ್ಪನಿಂದಲೇ ಮೋಸವಾಗಿದೆ ಎಂದು ಮನನೊಂದ ಮಂಜುನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಜುನಾಥನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಸ್ನೇಹಿತರು ಒತ್ತಾಯಿಸಿದ್ದಾರೆ.

    ಈ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ: ಪ್ರಶಾಂತ್ ಸಂಬರಗಿ

    ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ: ಪ್ರಶಾಂತ್ ಸಂಬರಗಿ

    – ಫೈಲ್ ಹಿಡಿದು ಸಿಸಿಬಿ ಕಚೇರಿಗೆ ಸಂಬರಗಿ

    ಬೆಂಗಳೂರು: ಶಾಸಕ ಜಮೀರ್ ಅಹಮ್ಮದ್ ಅವರ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತೇನೆ ಎಂದು ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಯವರು ಹೇಳಿದ್ದಾರೆ.

    ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ ಹಿನ್ನೆಲೆ ಪ್ರಶಾಂತ್ ಸಂಬರಿಗಿ ಇಂದು ವಿಚಾರಣೆಗೆ ಹಾಜಾರಾಗಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸತ್ಯಕ್ಕೆ ಆಯಸ್ಸು ಜಾಸ್ತಿ ಇದೆ. ಇಂದು ಸತ್ಯದ ದೀಪ ಬೆಳಗುತ್ತಿದ್ದೇನೆ ಎಂದು ಹೇಳಿದ್ದಾರೆ.

    ಸರ್ಕಾರಕ್ಕೆ ತೆರಿಗೆ ಕಟ್ಟುವ ನಾನು ಇವತ್ತು ಸರ್ಕಾರಕ್ಕೆ ಇನ್ನೊಂದು ಆದಾಯವನ್ನು ತಂದು ಕೊಡುತ್ತೇನೆ. ಜಮೀರ್ ಅವರ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ. ಜಮೀರ್ ಅಹಮ್ಮದ್ ಖಂಡಿತ ಅವರ ಆಸ್ತಿಯನ್ನು ಸರ್ಕಾರಕ್ಕೆ ನೀಡಬೇಕಾಗುತ್ತೆ. ಅದಕ್ಕೆ ಸಂಬಂಧಿಸಿದ ದಾಖಲಾತಿಗಳು ನನ್ನ ಬಳಿ ಇದೆ ಎಂದು ಫೈಲ್ ತೋರಿಸಿದ ಪ್ರಶಾಂತ್ ಸಂಬರಗಿ, ಸಿಸಿಬಿ ಕಚೇರಿಗೆ ತೆರಳಿದ್ದಾರೆ. ಇದನ್ನು ಓದಿ: ಹಿಂದೆ ಹೇಳಿದ್ದ 3 ಸ್ಫೋಟಕ ಒಗಟುಗಳಲ್ಲಿ ಮೂರು ಸತ್ಯವಾಗಿದೆ – ಪ್ರಶಾಂತ್‌ ಸಂಬರಗಿ

    ಈ ಹಿಂದೆ ಮಾತನಾಡಿದ್ದ ಸಂಬರಗಿ, ಜಮೀರ್ ಅವರು ಕಳೆದ ವರ್ಷ ಜೂನ್ ತಿಂಗಳಲ್ಲಿ ಶ್ರೀಲಂಕಾದ ರಾಜಧಾನಿ ಕೊಲಂಬೋಗೆ ನಟಿ ಸಂಜನಾ ಜೊತೆ ಹೋಗಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಜಮೀರ್ ಅಹಮ್ಮದ್, ನನ್ನ ಮೇಲೆ ಕೇಳಿ ಬಂದಿರುವ ಆರೋಪ ಸಾಬೀತಾದರೆ, ನಾನು ಸಂಜನಾ ಜೊತೆ ಕೊಲಂಬೋಗೆ ಹೋಗಿದ್ದರೆ ನಾನು ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದು ಕೊಡುತ್ತೇನೆ ಎಂದು ಹೇಳಿದ್ದರು.

    ಇದಕ್ಕೂ ಮುನ್ನಾ ಮಾತನಾಡಿದ್ದ ಅವರು, ನಾನು ದಾಖಲೆ ಇಟ್ಟುಕೊಂಡೇ ಮಾತನಾಡುತ್ತೇನೆ. ನಾನು ಸಂಜನಾ ಜೊತೆಯಲ್ಲೇ ಜಮೀರ್ ಶ್ರೀಲಂಕಾಗೆ ಹೋಗಿದ್ದಾರೆ ಎಂದು ಹೇಳಿಲ್ಲ. ಆದರೆ 2019ರ ಜೂನ್ 8, 9, 10ರಂದು ಜಮೀರ್ ಅಹ್ಮದ್ ಎಲ್ಲಿದ್ದರು? ಅವರು ಶ್ರೀಲಂಕಾದಲ್ಲಿ ಇದ್ದರೋ ಇಲ್ಲವೋ ಎನ್ನುವುದನ್ನು ಹೇಳಲಿ. ನನಗೆ ಜಮೀರ್ ಉತ್ತರ ನೀಡುವ ಅಗತ್ಯವಿಲ್ಲ. ಜನತೆ ಪಾಸ್‍ಪೋರ್ಟ್ ತೋರಿಸಿದರೆ ಸಾಕು. ನನ್ನ ಒಂದು ಸಣ್ಣ ಪ್ರಶ್ನೆಗೆ ಉತ್ತರ ನೀಡಲಿ ಎಂದು ಸವಾಲು ಎಸೆದಿದ್ದರು.

    ಜೊತೆಗೆ ನನ್ನನ್ನು ಕಾಜಿಪಿಂಜಿ ಎಂದು ಕರೆಯುತ್ತಾರೆ. ಆದರೆ ನಾನು ಕಾಜಿಪಿಂಜಿ ಅಲ್ಲ. ಕಾನೂನು ಗೊತ್ತಿರುವ ನಾನು ಒಬ್ಬ ಜನ ಪ್ರತಿನಿಧಿಯ ವಿರುದ್ಧ ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡುವುದಿಲ್ಲ. ನನ್ನ ವಿರುದ್ಧ ಈಗ ಸುಳ್ಳು ಕೇಸ್ ಹಾಕಿದ್ದಾರೆ. ಈ ರೀತಿ ಕೇಸ್ ಬೀಳುತ್ತದೆ ಎಂಬುದು ನನಗೆ ಮೊದಲೇ ಗೊತ್ತಿತ್ತು. ಇದರ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದ್ದರು.