Tag: Project

  • ರಾಜ್ಯ ಸರ್ಕಾರದ ಮಹತ್ವದ ‘ಬಡವರು ಬಂಧು’ ಯೋಜನೆಗೆ ಚಾಲನೆ

    ರಾಜ್ಯ ಸರ್ಕಾರದ ಮಹತ್ವದ ‘ಬಡವರು ಬಂಧು’ ಯೋಜನೆಗೆ ಚಾಲನೆ

    ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವ ಮೈತ್ರಿ ಸರ್ಕಾರದ ಮಹತ್ವದ ‘ಬಡವರ ಬಂಧು’ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇಂದು ಚಾಲನೆ ನೀಡಲಿದ್ದಾರೆ.

    ಗುರುವಾರ ಬೆಳಗ್ಗೆ 11 ಗಂಟೆಗೆ ನಗರದ ಯಶವಂತಪುರದ ಎಪಿಎಂಸಿ ಯಾರ್ಡ್ ನಲ್ಲಿ ಮುಖ್ಯಮಂತ್ರಿಗಳು ‘ಬಡವರ ಬಂಧು’ ಯೋಜನೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರು ನಗರವೊಂದರಲ್ಲೇ ಮೊದಲ ದಿನವೇ 53 ಸಾವಿರ ವರ್ತಕರಿಗೆ ನೆರವು ನೀಡಲಾಗುವುದು. ಈಗಾಗಲೇ ರಾಜ್ಯಾದ್ಯಂತ ಬಡವರ ಬಂಧು ಯೋಜನೆಯಡಿ ಸಾಲಕ್ಕಾಗಿ ಭಾರಿ ಬೇಡಿಕೆ ಬಂದಿದೆ. ಈ ಯೋಜನೆಯಿಂದ ಖಾಸಗಿ ಲೇವಾದೇವಿದಾರರ ಮೀಟರ್ ಬಡ್ಡಿ ದಂಧೆಯ ಮೇಲೆ ಕಡಿವಾಣ ಬೀಳುತ್ತದೆ ಎಂದು ಹೇಳಲಾಗುತ್ತಿದೆ.

    ಇದಲ್ಲದೇ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬಡವರ ಬಂಧು ಯೋಜನೆಗೆ ಒಂದೊಂದು ನೋಡಲ್ ಬ್ಯಾಂಕ್ ಗುರುತಿಸಲಾಗುತ್ತದೆ. ಈ ಬ್ಯಾಂಕುಗಳು ಆಯಾ ಜಿಲ್ಲೆಗಳಲ್ಲಿನ ಸಾಲ ಸೌಲಭ್ಯದ ಬ್ಯಾಂಕ್‍ಗಳನ್ನು ಸೂಚಿಸುತ್ತವೆ. ಬೆಂಗಳೂರಿನಲ್ಲಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್, ಜನತಾ ಕೋ-ಆಪರೇಟಿವ್ ಬ್ಯಾಂಕ್ ಹಾಗೂ ಬೆಂಗಳೂರು ಡಿಸಿಸಿ ಬ್ಯಾಂಕ್‍ಗಳನ್ನು ನೋಡಲ್ ಬ್ಯಾಂಕ್‍ಗಳಾಗಿ ಗುರುತಿಸಲಾಗಿದೆ. ಈ ಬ್ಯಾಂಕ್‍ಗಳು ಮೊಬೈಲ್ ಸರ್ವಿಸ್ ವ್ಯಾನ್‍ಗಳನ್ನು ಹೊಂದಲಿವೆ. ಸಣ್ಣ ವರ್ತಕರು ಬೆಳಗ್ಗೆ ಸಾಲ ಪಡೆದು ಸಂಜೆ ವಾಪಸ್ ಮಾಡಬಹುದಾಗಿದೆ.

    ಏನಿದು ಬಡವರ ಬಂಧು ಯೋಜನೆ?
    ವರ್ತಕರಿಗೆ ಶೂನ್ಯ ಬಡ್ಡಿದರದಲ್ಲಿ 10 ಸಾವಿರ ರೂ.ವರೆಗೆ ಸಾಲ ನೀಡುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಮೀಟರ್ ಬಡ್ಡಿ ದಂಧೆಗೆ ಶಾಶ್ವತ ಪರಿಹಾರ ನೀಡುವ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಬಡ್ಡಿ, ಸಾಲದ ಶೂಲಕ್ಕೆ ಸಿಲುಕಿರುವ ಜನರ ನೆರವಿಗೆ ಬರಲು ‘ಬಡವರ ಬಂಧು’ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಇಂದ ಬೀದಿ ಬದಿ ವ್ಯಾಪಾರಿಗಳಿಗೆ ಇನ್ನು ಮುಂದೆ ಬಡ್ಡಿಯೇ ಇಲ್ಲದ ದಿನದ ಸಾಲ ಲಭ್ಯವಾಗಲಿದೆ. ಇದನ್ನೂ ಓದಿ: ಬೀದಿ ಬದಿ ವ್ಯಾಪಾರಿಗಳಿಗೆ ಇನ್ಮುಂದೆ ಸಿಗಲಿದೆ ಬಡ್ಡಿಯೇ ಇಲ್ಲದ ದಿನದ ಸಾಲ: ಏನಿದು ಬಡವರ ಬಂಧು ಯೋಜನೆ? ಯಾರು ಅರ್ಹರು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ – ಸಕಲೇಶಪುರ ಭೂ ಕುಸಿತಕ್ಕೆ ಎತ್ತಿನಹೊಳೆ ಯೋಜನೆಯ ಅಣೆಕಟ್ಟುಗಳೇ ಕಾರಣವೇ?

    ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ – ಸಕಲೇಶಪುರ ಭೂ ಕುಸಿತಕ್ಕೆ ಎತ್ತಿನಹೊಳೆ ಯೋಜನೆಯ ಅಣೆಕಟ್ಟುಗಳೇ ಕಾರಣವೇ?

    ಮಂಗಳೂರು: ಪಶ್ಚಿಮ ಘಟ್ಟಗಳಲ್ಲಿ ಅಲ್ಲಲ್ಲಿ ಭೂಕುಸಿತ ಆಗುತ್ತಿರುವುದಕ್ಕೆ ಎತ್ತಿನಹೊಳೆ ಯೋಜನೆ ಹೆಸರಲ್ಲಿ ಅಣೆಕಟ್ಟುಗಳನ್ನು ಕಟ್ಟಿದ್ದೇ ಕಾರಣ ಎನ್ನುವುದು ಪರಿಸರ ತಜ್ಞರ ಮಾತು. ಹೀಗಾಗಿ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡಲು ಸಕಲೇಶಪುರ ವ್ಯಾಪ್ತಿಯ ಎಂಟು ಕಡೆ ನಿರ್ಮಿಸಲಾಗುತ್ತಿರುವ ಅಣೆಕಟ್ಟು ಪ್ರದೇಶಕ್ಕೆ ತೆರಳಿ ನೋಡಿದಾಗ, ಅಲ್ಲಿ ಭೂಕುಸಿತ ಆಗಿರುವುದು ಕಂಡುಬಂದಿದೆ.

    ಅಣೆಕಟ್ಟು ನಿರ್ಮಾಣಕ್ಕಾಗಿ ಗುಡ್ಡ ಅಗೆದಿರುವ ಪ್ರದೇಶದಲ್ಲಿ ಕುಸಿತ ಆಗಿದ್ದಲ್ಲದೆ, ಆಸುಪಾಸಿನ ಬೆಟ್ಟಗಳ ಮಧ್ಯೆಯೂ ಭೂಮಿ ಕುಸಿಯುತ್ತಿರುವುದು ಬೆಳಕಿಗೆ ಬಂದಿದೆ. ನೇತ್ರಾವತಿ ಉಗಮಗೊಳ್ಳುವ ಪ್ರದೇಶಗಳಲ್ಲಿಯೇ ಈ ಅಣೆಕಟ್ಟುಗಳಿದ್ದು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸುತ್ತಿರುವುದು, ಗುಡ್ಡ ಅಗೆದಿರುವುದು ದುರಂತಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯ ಜನ ಹೇಳಿದ್ದಾರೆ.

    ಬಯಲು ಸೀಮೆಗೆ ನೀರು ಹರಿಸಲು ಹಾಕಿರುವ ಪೈಪ್ ಲೈನ್ ಕೂಡ ಕುಸಿದು ಬಿದ್ದಿದೆ. ಕನಿಷ್ಠ ಪಿಲ್ಲರ್ ಕೂಡ ಇಲ್ಲದೆ ಹಾಕಿರುವ ಪೈಪ್ ಲೈನ್ ಬೇಜವಾಬ್ದಾರಿಯ ಕಾಮಗಾರಿ ಅನ್ನುವುದಕ್ಕೆ ಸಾಕ್ಷ್ಯ ಹೇಳುತ್ತಿದೆ. ಸಕಲೇಶಪುರದ ಮಾರನಹಳ್ಳಿಯಲ್ಲಿ ಬೃಹತ್ ಪಂಪ್ ಹೌಸ್ ಕಾಮಗಾರಿ ನಡೆಯುತ್ತಿದೆ. ಅಲ್ಲಿಯೂ ಗುಡ್ಡ ಕುಸಿಯುತ್ತಿದ್ದು, ಆತಂಕದಲ್ಲಿಯೇ ಕೆಲಸಗಾರರು ಕೆಲಸದಲ್ಲಿ ನಿರತರಾಗಿದ್ದಾರೆ.

    ಅವೈಜ್ಞಾನಿಕ ಯೋಜನೆಯಿಂದ ಸಕಲೇಶಪುರದಲ್ಲಿಯೂ ಕೊಡಗಿನ ಮಾದರಿಯಲ್ಲೇ ಭೂಕುಸಿತ ಆಗುವ ಭಯ ಸ್ಥಳೀಯರಲ್ಲಿದೆ. ಹೀಗಾಗಿ ಎತ್ತಿನಹೊಳೆ ಯೋಜನೆಯನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಸಕಲೇಶಪುರ ವಿಭಾಗಾಧಿಕಾರಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಚ್‍ಎನ್ ವ್ಯಾಲಿ ಯೋಜನೆ ನಿಲ್ಲಿಸಲೂ ಯಾರಿಂದಲೂ ಸಾಧ್ಯವಿಲ್ಲ – ಶಾಸಕ ಸುಧಾಕರ್

    ಎಚ್‍ಎನ್ ವ್ಯಾಲಿ ಯೋಜನೆ ನಿಲ್ಲಿಸಲೂ ಯಾರಿಂದಲೂ ಸಾಧ್ಯವಿಲ್ಲ – ಶಾಸಕ ಸುಧಾಕರ್

    ಚಿಕ್ಕಬಳ್ಳಾಪುರ: ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಹೆಬ್ಬಾಳ-ನಾಗವಾರ(ಎಚ್‍ಎನ್) ವ್ಯಾಲಿ ಯೋಜನೆ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಈ ಯೋಜನೆಯನ್ನು ಯಾರಿಂದಲೂ ನಿಲ್ಲಿಸಲೂ ಸಾಧ್ಯವಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹೇಳಿದ್ದಾರೆ.

    ಎಚ್‍ಎನ್ ವ್ಯಾಲಿ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂದು ಗಂಟೆ ಅವಧಿಯಲ್ಲಿ ಶುದ್ಧೀಕರಿಸದ ನೀರನ್ನ ಲಕ್ಷ್ಮೀಸಾಗರ ಕೆರೆಗೆ ಬಿಟ್ಟಿದ್ದಾರೆ. ಇದನ್ನೇ ಕೆಲವರು ರಾಜಕೀಯ ಆಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಯೋಜನೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

    ಈಗಾಗಲೇ ಕೆರೆಗೆ ಹರಿಸಲಾಗುತ್ತಿರುವ ನೀರನ್ನು 2 ಹಂತದಲ್ಲಿ ಶುದ್ಧೀಕರಿಸಲಾಗುತ್ತಿದೆ. 3ನೇ ಹಂತದಲ್ಲಿ ಶುದ್ಧೀಕರಣ ನಡೆಸಲು ಸಿಎಂ ಅವರಿಗೆ ಮನವಿ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಈ ಕುರಿತ ಆದೇಶವನ್ನು ಸಿಎಂ ಘೋಷಣೆ ಮಾಡುವ ಭರವಸೆ ಇದೆ. ಯಾವುದೇ ಅಭಿವೃದ್ಧಿ ಯೋಜನೆ ಎಂದೂ ದುಡ್ಡು ಮಾಡುವ ಯೋಜನೆ ಆಗುವುದಿಲ್ಲ. ಎತ್ತಿನ ಹೊಳೆ ಯೋಜನೆಗೆ ಈ ಬಾರಿ ಹೆಚ್ಚಿನ ಅನುದಾನ ನೀಡುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಹೀಗಾಗಿ ಎಚ್ ಎನ್ ವ್ಯಾಲಿ ಯೋಜನೆ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ಸರ್ಕಾರದ ಪರ ವಕೀಲರು ಸಮರ್ಪಕ ವಾದ ಮಂಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದು.

    ಕಳೆದ ತಿಂಗಳು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀ ಸಾಗರ ಕೆರೆಗೆ ಕೋರಮಂಗಲ ಚಲ್ಲಘಟ್ಟ ವ್ಯಾಲಿ ನೀರು ಹರಿಸಿದ್ದರಿಂದ ನೀರಿನಲ್ಲಿ ನೊರೆ ಕಾಣಿಸಿಕೊಂಡು ಜಿಲ್ಲೆಯ ಜನರಲ್ಲಿ ಆಂತಕ ಸೃಷ್ಟಿಸಿತ್ತು. ಇದಾದ ಬಳಿಕ ಕೆಲ ಹೋರಾಟಗಾರರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ನೀರಿನ ಗುಣಮಟ್ಟ ಕುರಿತು ಶಂಕೆ ವ್ಯಕ್ತಪಡಿಸಿ ನೀರು ಹರಿಸದಂತೆ ತಡೆಯಾಜ್ಞೆ ತಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಡೆಡ್‍ಲೈನ್ ಒಳಗೆ ಬುಲೆಟ್ ರೈಲು ಯೋಜನೆ ಕಂಪ್ಲೀಟ್ ಆಗೋದು ಡೌಟ್!

    ಡೆಡ್‍ಲೈನ್ ಒಳಗೆ ಬುಲೆಟ್ ರೈಲು ಯೋಜನೆ ಕಂಪ್ಲೀಟ್ ಆಗೋದು ಡೌಟ್!

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಮುಂಬೈ ಅಹಮದಾಬಾದ್ ನಡುವೆ ಸಂಚರಿಸಲಿರುವ ದೇಶದ ಮೊದಲ ಬುಲೆಟ್ ರೈಲು ಯೋಜನೆ ನಿಗದಿತ ಅವಧಿಯೊಳಗಡೆ ಪೂರ್ಣಗೊಳ್ಳುವುದು ಅನುಮಾನ ಎನ್ನುವ ಮಾತು ಈಗ ಕೇಳಿಬಂದಿದೆ.

    ಹಣ್ಣು ಬೆಳೆಗಾರರಿಂದ ಭಾರೀ ಪ್ರತಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆಗೆ ಬೇಕಾದ ಭೂಮಿಯನ್ನು ಡಿಸೆಂಬರ್ ಒಳಗೆ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಎಂದು ಈ ಯೋಜನೆಯಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಪ್ರಧಾನಿಗಳ ಸಚಿವಾಲಯ ಪ್ರತಿವಾರ ಬುಲೆಟ್ ರೈಲು ಯೋಜನೆಯ ಪ್ರಗತಿಯನ್ನು ಪರಿಶೀಲಿಸುತ್ತಿದ್ದು, ಮಹಾರಾಷ್ಟ್ರದ ಸಪೋಟ ಹಾಗೂ ಮಾವು ಬೆಳೆಗಾರರ ಜೊತೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ(ಜೈಕಾ)ಗೆ ಅಧಿಕಾರಿಗಳು ನೀಡಿದ್ದಾರೆ.

    108 ಕಿ.ಮೀ ಹಳಿ ನಿರ್ಮಿಸಲು ಜಾಗವನ್ನು ಸ್ವಾಧೀನ ಪಡಿಸಬೇಕಿದೆ. ಪ್ರತಿಭಟನಾಕಾರರ ಜೊತೆ ಜನ ಪ್ರತಿನಿಧಿಗಳು ಕೈ ಜೋಡಿಸಿದ್ದರಿಂದ ಕೆಲವು ತಿಂಗಳಿಂದ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು ಅಧಿಕಾರಿಗಳಿಗೆ ತಲೆನೋವಾಗಿದೆ.

    ಈ ಹಣ್ಣಿನ ತೋಟವನ್ನು ಬೆಳೆಸಲು ಮೂರು ದಶಕಗಳ ಕಾಲ ಶ್ರಮಪಟ್ಟಿದ್ದೇನೆ. ಈಗ ಬಿಟ್ಟುಕೊಡುವಂತೆ ಹೇಳುತ್ತಿದ್ದಾರೆ. ನನ್ನ ಇಬ್ಬರು ನಿರುದ್ಯೋಗಿ ಮಕ್ಕಳಲ್ಲಿ ಒಬ್ಬರಿಗೆ ಉದ್ಯೋಗ ಕೊಡುವ ಭರವಸೆ ಕೊಟ್ಟಲ್ಲಿ ಬಿಟ್ಟು ಕೊಡುತ್ತೇನೆ ಎಂದು 62 ವರ್ಷದ ಸಪೋಟ ಬೆಳೆಗಾರ ದಶರತ್ ಪುರವ್ ಹೇಳಿದ್ದಾರೆ.

    ಯೋಜನೆಯನ್ನು ಮುಂದಿನ ತಿಂಗಳು ಜೈಕಾ ಪರಿಶೀಲಿಸಲಿದ್ದು, ಈ ಅವಧಿಯ ಒಳಗಡೆ ಸ್ವಾಧೀನ ಪ್ರಕ್ರಿಯೆ ಮುಗಿದಿರಬೇಕು. ಭೂಮಿ ಸ್ವಾಧೀನವಾಗದೇ ಇದ್ದಲ್ಲಿ ಯೋಜನೆಗೆ ಬೇಕಾದ ಸಾಲ ಬಿಡುಗಡೆ ಮಾಡಲು ಜೈಕಾ ತಡ ಮಾಡುವ ಸಾಧ್ಯತೆಗಳಿವೆ ಎಂದು ಹೆಸರು ಹೇಳಲು ಇಚ್ಚಿಸದ ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ.

    ನಮ್ಮ ಮಾರ್ಗದರ್ಶಿಯ ಪ್ರಕಾರ ಪರಿಸರ ಹಾಗೂ ಸಾಮಾಜಿಕವಾಗಿ ಭಾರತ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಪರಿಗಣಿಸಿ ಒಪ್ಪಂದಕ್ಕೆ ಸಹಿ ಹಾಕುತ್ತೇವೆ ಎಂದು ಜೈಕಾ ವಕ್ತಾರೆ ತಿಳಿಸಿದ್ದಾರೆ.

    2022ಕ್ಕೆ ಸ್ವತಂತ್ರ ಸಿಕ್ಕಿ 75 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಆಗಸ್ಟ್ 15 ರಂದು ಯೋಜನೆ ಲೋಕಾರ್ಪಣೆ ಮಾಡಲು ಭಾರತ ಪ್ರಯತ್ನ ನಡೆಸುತ್ತಿದೆ. ಈ ಕಾರಣಕ್ಕೆ ಜಪಾನ್ ನ ಸಾರಿಗೆ ಅಧಿಕಾರಿಗಳ ಜೊತೆ ಇದೇ ತಿಂಗಳು ಭಾರತ ಮಾತುಕತೆಯನ್ನು ನಿಗದಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಯೋಜನೆಯ ಒಟ್ಟು ಮೊತ್ತ 1.14 ಲಕ್ಷ ಕೋಟಿ ರೂ. ಆಗಿದ್ದು, ಭಾರತ ಪಡೆದುಕೊಳ್ಳುವ ಸಾಲಕ್ಕೆ ಜಪಾನ್ 50 ವರ್ಷಕ್ಕೆ 0.1% ಬಡ್ಡಿ ವಿಧಿಸಿದೆ. ಮೇಕ್ ಇನ್ ಇಂಡಿಯಾ ಆಶಯದ ಸಫಲತೆಗೆ ಈ ಯೋಜನೆ ಬಹಳ ಮುಖ್ಯವಾಗಿದ್ದು ತ್ವರಿತಗತಿಯಲ್ಲಿ ಯೋಜನೆಯನ್ನು ಮುಗಿಸುವುದರಲ್ಲಿ ಕೇಂದ್ರ ಸರ್ಕಾರ ಉತ್ಸುಕವಾಗಿದೆ.

    ಭಾರತದಲ್ಲಿ ಯಾವುದೇ ಯೋಜನೆಗೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು ಕಷ್ಟದ ಕೆಲಸ ಎಂದು ರಾಷ್ಟ್ರೀಯ ಹೈ ಸ್ಪೀಡ್ ರೈಲು ಕಾರ್ಪೋರೇಷನ್ ಲಿಮಿಟೆಡ್(ಎನ್ ಹೆಚ್ ಆರ್ ಸಿ ಎಲ್) ವಕ್ತಾರ ಧನಂಜಯ್ ಕುಮಾರ್ ಹೇಳಿದ್ದಾರೆ.