Tag: privatebus

  • 30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಬೆಂಕಿಗಾಹುತಿ

    30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಬೆಂಕಿಗಾಹುತಿ

    ರಾಮನಗರ: ಪ್ರವಾಸಿಗರನ್ನು ಕರೆತಂದಿದ್ದ ಬಸ್ಸೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕ್ಷಣಾರ್ಧದಲ್ಲೇ ಬೆಂಕಿಗೆ ಆಹುತಿಯಾಗಿರುವ ಘಟನೆ ರಾಮನಗರ ತಾಲೂಕಿನ ಪಾದರಹಳ್ಳಿ ಸಮೀಪದಲ್ಲಿ ನಡೆದಿದೆ.

    ಬೆಂಗಳೂರಿನಿಂದ ಪ್ರವಾಸಿಗರನ್ನು ಕರೆದುಕೊಂಡು ರಾಮನಗರ ತಾಲೂಕಿನ ಪಾದರಹಳ್ಳಿ ಸಮೀಪದಲ್ಲಿನ ಶಿಲ್ಹಾಂದರ ರೆಸಾರ್ಟ್ ಬಳಿ ಖಾಸಗಿ ಒಡೆತನದ ಎಸ್.ಆರ್.ಎಸ್ ಮಾಲೀಕತ್ವದ ಬಸ್ಸಿನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ.

    ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಎಚ್ಚೆತ್ತ ಚಾಲಕ ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ. ಬಳಿಕ ಬಸ್ಸಿಗೆ ಸಂಪೂರ್ಣವಾಗಿ ಬೆಂಕಿ ಆವರಿಸಿದ್ದು ಕ್ಷಣಾರ್ಧಲ್ಲಿಯೆ ಬಸ್ ಸುಟ್ಟು ಕರಕಲಾಗಿದೆ.

    ಘಟನೆ ನಡೆದ ಸ್ಥಳದ ಸಮೀಪದಲ್ಲಿನ ಶಿಲ್ಹಾಂದರ ರೆಸಾರ್ಟಿಗೆ ಪ್ರವಾಸಿಗರು ಬಂದಿದ್ದರು ಎನ್ನಲಾಗಿದೆ. ಬಸ್ಸಿನಲ್ಲಿ ಸುಮಾರು 30 ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಎಲ್ಲರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ಸಿಗೆ ಬೆಂಕಿ ಆವರಿಸಿ ಹೊತ್ತಿ ಉರಿಯುತ್ತಿರುವ ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.

    ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಆಧಾರ್‌ಕಾರ್ಡ್‌ ಮಾಡಿಸಲು ಹೋಗುವಾಗ ಅಪಘಾತ- ನಾಲ್ವರ ದುರ್ಮರಣ

    ಆಧಾರ್‌ಕಾರ್ಡ್‌ ಮಾಡಿಸಲು ಹೋಗುವಾಗ ಅಪಘಾತ- ನಾಲ್ವರ ದುರ್ಮರಣ

    – ಆಟೋ ಚಕ್ರ ಕಳಚಿ ಬಸ್ ಗೆ ಡಿಕ್ಕಿ
    – 7 ಮಂದಿಗೆ ಗಂಭೀರ ಗಾಯ

    ಚಿಕ್ಕಬಳ್ಳಾಪುರ: ಆಟೋ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಬಳಿ ನಡೆದಿದೆ.

    ಹಸೀನಾ(30), ಸಾನಿಯಾ(17), ಮಕ್ಕಳಾದ ಶಾಜಿಯಾ(8) ಹಾಗೂ ಜೋಯಾ(5) ಮೃತರು. ಇವರೆಲ್ಲರೂ ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ನಿವಾಸಿಗಳಾಗಿದ್ದು, ಆಧಾರ್ ಕಾರ್ಡ್ ಮಾಡಿಸಲು ದೇವನಹಳ್ಳಿ-ದೊಡ್ಡಬಳ್ಳಾಪುರ ಮಾರ್ಗ ಮಧ್ಯೆ ಚಪ್ಪರಕಲ್ಲು ಬಳಿಯಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನಕ್ಕೆ ಆಟೋ ಮೂಲಕ ತೆರಳಿದ್ದರು.

    ಈ ವೇಳೆ ಮಾರ್ಗ ಮಧ್ಯೆ ಗುಂಡಿ ತಪ್ಪಿಸಲು ಹೋದಾಗ ಆಟೋ ಚಕ್ರವೊಂದು ಕಳಚಿದೆ. ಪರಿಣಾಮ ಬಸ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಆಟೋದಲ್ಲಿ ಒಟ್ಟು 11 ಮಂದಿ ಇದ್ದು ನಾಲ್ವರು ಮೃತಪಟ್ಟರೆ, ಉಳಿದ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ದೇವನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ನಾಲ್ವರನ್ನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಅಪಘಾತದಿಂದಾಗಿ ಆಟೋ ಸಂಪೂರ್ಣ ಜಖಂಗೊಂಡಿದ್ದು ಸ್ಥಳಕ್ಕೆ ಭೇಟಿ ನೀಡಿದ್ದ ವಿಶ್ವನಾಥಪುರ ಪಿಎಸ್ ಐ ಮಂಜುನಾಥ್ ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸಿ ಅಪಘಾತಕ್ಕೀಡಾದ ಆಟೋವನ್ನು ಸ್ಥಳಾಂತರ ಮಾಡಿಸಿದ್ದಾರೆ.

    ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮ ಪಂಚಾಯ್ತಿ ತಮ್ಮ ಊರುಗಳಲ್ಲೇ ಮಾಡಿದರೆ ಅವರು ಆಧಾರ್ ಕಾರ್ಡ್ ಮಾಡಿಸಲು ಡಿಸಿ ಕಚೇರಿಯತ್ತ ಬರುತ್ತಿರಲಿಲ್ಲ. ಈ ಅಪಘಾತ ಆಗುವ ಸಂಭವವೂ ಇರುತ್ತಿರಲಿಲ್ಲ ಎಂದು ಮೃತರು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.