Tag: prisoners

  • ಜೈಲಿನಲ್ಲಿ ರೇಡಿಯೋ- ಖೈದಿಗಳೇ ಆರ್‌ಜೆಗಳು

    ಜೈಲಿನಲ್ಲಿ ರೇಡಿಯೋ- ಖೈದಿಗಳೇ ಆರ್‌ಜೆಗಳು

    – ಗ್ರಂಥಾಲಯ, ಆರೋಗ್ಯ ಮಾಹಿತಿ ಸಹ ಲಭ್ಯ
    – ಖೈದಿಗಳ ಇಷ್ಟದ ಗೀತೆಗಳ ಪ್ರಸಾರ

    ಲಕ್ನೋ: ಜೈಲಿನಲ್ಲಿ ಈಗ ಹೊಸ ಟ್ರೆಂಡ್ ಶುರುವಾಗುತ್ತಿದ್ದು, ಖೈದಿಗಳಿಗೆ ರೇಡಿಯೋ ಜಾಕಿಯಾಗುವ ಅವಕಾಶ ಲಭಿಸುತ್ತಿದೆ.

    ಖೈದಿಗಳನ್ನು ಖಿನ್ನತೆಯಿಂದ ಹಾಗೂ ಮಾನಸಿಕ ಒತ್ತಡದಿಂದ ಹೊರ ತರಲು ಜೈಲಿನಲ್ಲಿ ಸಮುದಾಯ ರೇಡಿಯೋ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದರ ಭಾಗವಾಗಿ ಉತ್ತರ ಪ್ರದೇಶದ ಬಲಂದ್‍ಶಹರ್ ಜಿಲ್ಲೆಯ ಜೈಲು ಅಧಿಕಾರಿಗಳು ಇದೀಗ ರೇಡಿಯೋ ಕೇಂದ್ರ ಪ್ರಾರಂಭಿಸಿದ್ದು, ಖೈದಿಗಳಿಗೆ ಮನರಂಜನೆ ನೀಡಲು ಹಾಗೂ ಅವರನ್ನು ಖಿನ್ನತೆಯಿಂದ ದೂರ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.

    ಖೈದಿಗಳ ಮನಸ್ಥಿತಿ ಬದಲಿಸಲು, ಒತ್ತಡದಿಂದ ಅವರನ್ನು ಹೊರ ತರಲು ನಾವು ಜೈಲು ರೇಡಿಯೋ ಪರಿಚಯಿಸಿದ್ದೇವೆ. ಖೈದಿಗಳ ಅಭಿರುಚಿಗೆ ತಕ್ಕಂತೆ ನಾವು ಹಾಡುಗಳನ್ನು ಪ್ರಸಾರ ಮಾಡುತ್ತೇವೆ ಎಂದು ಜೈಲು ಸುಪರಿಂಟೆಂಡೆಂಟ್ ಓ.ಪಿ.ಕಟಿಯಾರ್ ಮಾಹಿತಿ ನೀಡಿದ್ದಾರೆ.

    ರೇಡಿಯೋ ಉದ್ದೇಶ ಕೇವಲ ಖೈದಿಗಳಿಗೆ ಮನರಂಜನೆ ನೀಡುವುದು ಮಾತ್ರವಲ್ಲ, ಅವರು ರೇಡಿಯೋ ಜಾಕಿಗಳಾಗಲು ಅವಕಾಶ ನೀಡಲಾಗುತ್ತಿದೆ. ಅಲ್ಲದೆ ಭಾರತದ ಇತಿಹಾಸ, ಧರ್ಮ ಹಾಗೂ ಇತಿಹಾಸದ ಸ್ಮಾರಕಗಳ ಕುರಿತು ರೇಡಿಯೋ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ಕಟಿಯಾರ್ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಜೈಲು ಅಧಿಕಾರಿಗಳ ಈ ಕಾರ್ಯಕ್ಕೆ ಖೈದಿಗಳು ಸಹ ಸಂತಸ ವ್ಯಕ್ತಪಡಿಸಿದ್ದು, ರೇಡಿಯೋ ಮಾತ್ರವಲ್ಲದೆ ಜೈಲಿನಲ್ಲಿ ಗ್ರಂಥಾಲಯ ಹಾಗೂ ಇ-ತರಗತಿಗಳ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ.

    ಅಕ್ಟೋಬರ್‍ನಲ್ಲಿ ಆಗ್ರಾ ಜೈಲಿನಲ್ಲಿ ಸಹ ಸಮುದಾಯ ರೇಡಿಯೋವನ್ನು ಪ್ರಾರಂಭಿಸಲಾಗಿದೆ. ಈ ಮೂಲಕ ಜೈಲಿನಲ್ಲಿ ಉತ್ತಮ ವಾತಾವರಣ ನಿರ್ಮಿಸುವುದು. ಅಲ್ಲದೆ ಖೈದಿಗಳಿಗೆ ತಮ್ಮ ವಿವಿಧ ಕೌಶಲ ಹಾಗೂ ಆಸಕ್ತಿಗಳನ್ನು ಪ್ರಸ್ತುತ ಪಡಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ. ಅಲ್ಲದೆ ಠಾಣೆಯನ್ನು ಖೈದಿಗಳೇ ನಿರ್ವಹಿಸುವಂತೆ ಮಾಡಲಾಗಿದೆ. ಈ ರೇಡಿಯೋ ಸ್ಟೇಷನ್‍ನಲ್ಲಿ ಹಾಡುಗಳು ಮಾತ್ರವಲ್ಲದೆ, ಆರೋಗ್ಯ ಸಂಬಂಧಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ರೇಡಿಯೋ ಕೇಳಲು ಪ್ರತಿ ಬಂಧಿಖಾನೆಯಲ್ಲಿ ಸ್ಪೀಕರ್‍ಗಳನ್ನು ಅಳವಡಿಸಲಾಗಿದೆ.

    ಸಮುದಾಯ ರೇಡಿಯೋ ಎಂದರೇನು?
    ಸಮುದಾಯ ರೇಡಿಯೋದಲ್ಲಿ ಸ್ಥಳೀಯರಿಗಾಗಿ ಅವರದ್ದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ. ಇದರಲ್ಲಿ ಭಾಗವಹಿಸುವವರು ಸಹ ಸ್ಥಳೀಯರೇ ಆಗಿರುತ್ತಾರೆ. ಇದು ಸ್ಥಳೀಯರೊಂದಿಗೆ ಸಂಪರ್ಕ ಹೊಂದುವುದು ಹಾಗೂ ಮಾಹಿತಿ ಹಂಚಿಕೊಳ್ಳಲು ಅನುಕೂಲಕರವಾಗಿರುತ್ತದೆ.

  • ಕಾರಾಗೃಹದಲ್ಲಿ ಅಕ್ಷರ ಜ್ಞಾನಾರ್ಜನೆ- ಸಾಕ್ಷರ ಕೈದಿಗಳಿಂದ ಅನಕ್ಷರಸ್ಥ ಕೈದಿಗಳಿಗೆ ಪಾಠ

    ಕಾರಾಗೃಹದಲ್ಲಿ ಅಕ್ಷರ ಜ್ಞಾನಾರ್ಜನೆ- ಸಾಕ್ಷರ ಕೈದಿಗಳಿಂದ ಅನಕ್ಷರಸ್ಥ ಕೈದಿಗಳಿಗೆ ಪಾಠ

    ಕೊಪ್ಪಳ: ಜೀವನದ ಯಾವುದೋ ಒಂದು ಸಮಯದಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಜೈಲು ಸೇರಿದ ಕೈದಿಗಳ ಜೀವನದಲ್ಲಿ ಹೊಸ ಪುಟವನ್ನು ತೆರೆಯುವ ಕೆಲಸವನ್ನು ಕೊಪ್ಪಳದ ಜಿಲ್ಲಾ ಕಾರಾಗೃಹದಲ್ಲಿ ಮಾಡಲಾಗುತ್ತಿದೆ.

    ಜಿಲ್ಲಾ ಕಾರಾಗೃಹದಲ್ಲಿ ಅಕ್ಷರ ಕಲಿಕೆಯ ವಿಶೇಷ ಕಾರ್ಯಕ್ರಮವನು ಹಮ್ಮಿಕೊಳ್ಳಲಾಗಿದೆ. ವಿಶೇಷ ಎಂದರೆ ಕಾರಾಗೃಹದಲ್ಲಿರುವ ಅಕ್ಷರಸ್ಥ ಕೈದಿಗಳಿಂದಲೇ ಅನಕ್ಷರಸ್ಥ ಕೈದಿಗಳಿಗೆ ಪಾಠ ಮಾಡಲಾಗುತ್ತಿದೆ. ನಿತ್ಯ ಅನಕ್ಷರಸ್ಥ ಕೈದಿಗಳಿಗೆ 1 ಗಂಟೆ ಅಕ್ಷರಗಳ ಸಾಮಾನ್ಯ ಜ್ಞಾನ ಹೇಳಿಕೊಡಲಾಗುತ್ತಿದೆ.

    ಜಿಲ್ಲಾ ಕಾರಾಗೃಹದಲ್ಲಿ ಸುಮಾರು 300 ಜನ ವಿಚಾರಣಾಧೀನ ಕೈದಿಗಳಿದ್ದಾರೆ. ಅದರಲ್ಲಿ ಸುಮಾರು 90 ಕ್ಕೂ ಹೆಚ್ಚು ಜನರಿಗೆ ಅಕ್ಷರ ಜ್ಞಾನ ಇಲ್ಲ. ಹೀಗಾಗಿ ಅನಕ್ಷರಸ್ಥ ಕೈದಿಗಳಿಗೆ ಜೈಲಿನಲ್ಲಿರುವ ಅಕ್ಷರಸ್ಥ ಕೈದಿಗಳಿಂದ ಪಾಠ ಮಾಡಿಸಲಾಗುತ್ತಿದೆ. ಪ್ರತಿ 10 ಅನಕ್ಷರಸ್ಥರನ್ನು ಒಂದು ತಂಡ ಮಾಡಿ ನಿತ್ಯ 1 ಗಂಟೆ ಅವರಿಗೆ ಪಾಠ ಮಾಡಲಾಗುತ್ತಿದೆ.

    ಕೈದಿಗಳಿಗೆ ಶಿಕ್ಷಣ ನೀಡುವ ಈ ಕಾರ್ಯಕ್ಕೆ ಜಿಲ್ಲಾ ವಯಸ್ಕ ಶಿಕ್ಷಣ ಇಲಾಖೆ ಕೂಡಾ ಸಾಥ್ ನೀಡಿದ್ದು, ಕೈದಿಗಳಿಗೆ ಅಗತ್ಯ ಪುಸ್ತಕಗಳನ್ನು ನೀಡಿದೆ. ವಿವಿಧ ಅಪರಾಧದಲ್ಲಿ ಭಾಗಿಯಾದ ಬಂದ ಕೈದಿಗಳು ಇಲ್ಲಿಂದ ಹೊರಗಡೆ ಹೋದಾಗ ಅಕ್ಷರ ಕಲಿತು ಹೋಗಲಿ ಎಂಬುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕಾರಾಗೃಹ ಅಧೀಕ್ಷಕರಾದ ಬಿ.ಎಮ್.ಕೊಟ್ರೇಶ್ ತಿಳಿಸಿದ್ದಾರೆ.

    ಮೊದಲಿಗೆ ಅಕ್ಷರ ಜ್ಞಾನ ಹೊಂದಿರುವ ಕೈದಿಗಳಿಗೆ ಕೆಲ ಮಾರ್ಗದರ್ಶನಗಳನ್ನು ನೀಡಿ ಆ ಬಳಿಕ ಇತರೇ ಕೈದಿಗಳಿಗೆ ಕಲಿಸಲು ಕಾರ್ಯಕ್ರಮ ರೂಪಿಸಿದ್ದೇವೆ. ಈ ಕಾರ್ಯಕ್ರಮ ಮೊದಲ ಭಾಗವಾಗಿ 6 ತಿಂಗಳ ಕಾಲ ನಡೆಯಲಿದೆ. ಇದು ಕೈದಿಗಳ ಜೀವನಕ್ಕೆ ನೆರವಾಗಲಿ. ಅಕ್ಷರ ಕಲಿತ ಕೈದಿಗಳು ಮನ ಪರಿವರ್ತನೆ ಮಾಡಿಕೊಂಡು ಹೊಸ ದಾರಿ ರೂಪಿಸಿಕೊಳ್ಳಿ ಎಂಬುವುದು ನಮ್ಮ ಗುರಿಯಾಗಿದೆ ಎಂದರು. ಅಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕರ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

  • ಜೈಲಿನಲ್ಲೂ ಹಗಲು ದರೋಡೆ – ಕೈದಿಗಳನ್ನು ನೋಡಲು ಲಂಚ

    ಜೈಲಿನಲ್ಲೂ ಹಗಲು ದರೋಡೆ – ಕೈದಿಗಳನ್ನು ನೋಡಲು ಲಂಚ

    ಚಾಮರಾಜನಗರ: ಜಿಲ್ಲೆಯಲ್ಲಿರುವ ಜೈಲಿನಲ್ಲಿ ಹಗಲು ದರೋಡೆ ನಡೆಯುತ್ತಿದೆ. ಇಲ್ಲಿನ ಉಪಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳನ್ನು ನೋಡಲು ಹಣ ಕೊಡಲೇಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಲಂಚಕೊಟ್ಟರೆ ಮಾತ್ರ ಕೈದಿಗಳನ್ನು ನೋಡಲು ಅವಕಾಶ ನೀಡಲಾಗುತ್ತೆ. ಇಲ್ಲಿನ ಜೈಲಧಿಕಾರಿಗಳು ಕೈದಿಗಳ ಸಂಬಂಧಿಕರಿಂದ ಹಣ ವಸೂಲಿ ಮಾಡುತ್ತಾರೆ. ಕೈದಿಗಳ ಸಂಬಂಧಿಕರಿಂದ ಹಣ ವಸೂಲಿ ಮಾಡುವ ದೃಶ್ಯಗಳು ಮೊಬೈಲ್ ಕ್ಯಾಮೆರದಲ್ಲಿ ಸೆರೆಯಾಗಿವೆ.

    ಈ ಉಪಕಾರಾಗೃಹದಲ್ಲಿ 125ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಿದ್ದು ಪ್ರತಿ ದಿನ ಸಾವಿರಾರು ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಉಪಕಾರಾಗೃಹದಲ್ಲಿ ಸಿಸಿ.ಕ್ಯಾಮೆರಾಗಳನ್ನು ಅಳವಡಿಸಿದ್ದರೂ ರಾಜಾರೋಷವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಜೈಲ್ ಸೂಪರಿಂಟೆಂಡೆಂಡ್ ವಿಜಯ್ ರೋಡ್ಕರ್ ನಿರಾಕರಿಸಿದ್ದಾರೆ. ತಮಗೇನು ಗೊತ್ತಿಲ್ಲ ಎನ್ನುವ ಹಾರಿಕೆ ಉತ್ತರ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಹೇಳುತ್ತಾರೆ.

  • ಬಾಡೂಟ ತ್ಯಜಿಸಿ ನೆರೆ ಸಂತ್ರಸ್ತರಿಗೆ 10 ಲಕ್ಷ ರೂ. ನೀಡಲು ಕೈದಿಗಳ ನಿರ್ಧಾರ

    ಬಾಡೂಟ ತ್ಯಜಿಸಿ ನೆರೆ ಸಂತ್ರಸ್ತರಿಗೆ 10 ಲಕ್ಷ ರೂ. ನೀಡಲು ಕೈದಿಗಳ ನಿರ್ಧಾರ

    ಬೆಂಗಳೂರು: ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಪ್ರದೇಶದಲ್ಲಿ ಉಂಟಾದ ಪ್ರವಾಹದಿಂದಾಗಿ ಅನೇಕ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ನೆರೆ ಸಂತ್ರಸ್ತರಿಗೆ ರಾಜ್ಯದ ಮೂಲೆ ಮೂಲೆಯಿಂದ ಜನರು ಸಹಾಯ ಹಸ್ತ ಚಾಚುತ್ತಿದ್ದಾರೆ. ಈ ಬೆನ್ನಲ್ಲೇ ಕೈದಿಗಳು ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.

    ಬೆಂಗಳೂರು ಕೇಂದ್ರ ಪರಪ್ಪನ ಅಗ್ರಹಾರ ಕಾರಾಗೃಹದ ಕೈದಿಗಳು ಇಂತಹ ನಿರ್ಧಾರಕ್ಕೆ ಮುಂದಾಗಿದ್ದಾರೆ. ಅವರ ಈ ನಿರ್ಧಾರಕ್ಕೆ ಅಧಿಕಾರಿಗಳು ಮೆಚ್ಚು ವ್ಯಕ್ತಪಡಿಸಿದ್ದು, 10 ಲಕ್ಷ ರೂ.ಯನ್ನು ಸಿಎಂ ಪರಿಹಾರ ನಿಧಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಕೈದಿಗಳು, ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹ ಸ್ಥಿತಿಯನ್ನು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇವೆ. ಪ್ರವಾಹದಿಂದಾಗಿ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿರುವುದು ನೋವು ತಂದಿದೆ. ನೆರೆ ಸಂತ್ರಸ್ತರಿಗೆ ತಮ್ಮಿಂದ ಆಗುವ ಸಹಾಯ ಮಾಡಲು ಮುಂದಾಗಿದ್ದೇವೆ. ಜೈಲಿನಲ್ಲಿ ಪ್ರತಿ ಶುಕ್ರವಾರ ನೀಡುತ್ತಿರುವ ಬಾಡೂಟವನ್ನು ನಾಲ್ಕು ವಾರ ನೀಡುವುದು ಬೇಡ. ಹೀಗೆ ಮಾಡಿದರೆ ಸುಮಾರು 10 ಲಕ್ಷ ರೂ. ಉಳಿತಾಯವಾಗಲಿದ್ದು, ಆ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಬೇಕು ಎಂದು ಕೋರಿದ್ದಾರೆ.

  • ಬರದನಾಡು ರಾಯಚೂರಲ್ಲಿ ಕೈದಿಗಳಿಗೂ ತಟ್ಟಿದ ನೀರಿನ ಬಿಸಿ!

    ಬರದನಾಡು ರಾಯಚೂರಲ್ಲಿ ಕೈದಿಗಳಿಗೂ ತಟ್ಟಿದ ನೀರಿನ ಬಿಸಿ!

    ರಾಯಚೂರು: ಬಿಸಿಲನಾಡು ಎಂದೇ ಖ್ಯಾತಿ ಪಡೆದಿದ್ದ ಜಿಲ್ಲೆಯು ಈಗ ಅಕ್ಷರಶಃ ಬರದನಾಡಾಗಿ ಮಾರ್ಪಟ್ಟಿದ್ದು, ಜಿಲ್ಲಾ ಕಾರಾಗೃಹದಲ್ಲಿರುವ ಕೈದಿಗಳಿಗೆ ಸಹ ನೀರಿನ ಬಿಸಿ ಮುಟ್ಟಿದೆ.

    ಹೌದು, ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ಜಿಲ್ಲೆಯಲ್ಲಿ ಹರಿದರೂ, ಜನರಿಗೆ ಕುಡಿಯಲು ಮಾತ್ರ ನೀರಿಲ್ಲ. ಜನ-ಜಾನುವಾರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಇದರ ಜೊತೆ ಜಿಲ್ಲೆಯಲ್ಲಿರುವ ಕಾರಾಗೃಹದ ಕೈದಿಗಳು ಸಹ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

    ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಟಿವಿ, ಚೆಸ್, ಕೇರಂ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಮಾಡಲಾಗಿದೆ. ಆದರೆ ಇಲ್ಲಿನ ಕೈದಿಗಳು ಹಾಗೂ ಸಿಬ್ಬಂದಿಗಳ ಕ್ವಾಟರ್ಸ್ ಗಳಿಗೆ ನಿತ್ಯ ನೀರು ಒದಗಿಸುವುದು ಜೈಲರ್‍ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಾರಾಗೃಹಕ್ಕೆ ಸುಮಾರು ವರ್ಷಗಳಿಂದ ನೀರುಣಿಸುತ್ತಿದ್ದ ಬೋರ್‍ವೆಲ್ ಇಂಗಿ ಹೋಗಿದ್ದು, ಹೊಸದಾಗಿ 300 ಅಡಿ ಕೊರೆದರೂ ನೀರು ಬೀಳುತ್ತಿಲ್ಲ.

    ನಗರಸಭೆ ನಗರಕ್ಕೆ ಸರಿಯಾಗಿ ನೀರು ಕೊಡಲಾಗದೇ ಅಸಹಾಯಕ ಸ್ಥಿತಿಯಲ್ಲಿದೆ. ಹೀಗಾಗಿ ಒತ್ತಾಯ ಪೂರ್ವಕವಾಗಿ ನಗರಸಭೆಯಿಂದ ನಿತ್ಯ ಟ್ಯಾಂಕರ್ ಮೂಲಕ ಕಾರಾಗೃಹಕ್ಕೆ ನೀರಿನ ಸರಬರಾಜು ಮಾಡಲಾಗುತ್ತಿದೆ. 240 ಪುರುಷರು 20 ಮಹಿಳೆಯರನ್ನ ಬಂಧಿಸಿಡಬಹುದಾದ ಕಾರಾಗೃಹದಲ್ಲಿ ಸದ್ಯ 201 ಕೈದಿಗಳಿದ್ದಾರೆ. ಇದರಲ್ಲಿ 13 ಜನ ಮಹಿಳಾ ಕೈದಿಗಳಿದ್ದಾರೆ. ಜೈಲಿನಲ್ಲಿ ನೀರಿನ ಸಂಪ್ ಇದ್ದರೂ ಸರಿಯಾಗಿ ನೀರು ಬಾರದ ಕಾರಣ ನಿತ್ಯ-ಕರ್ಮಗಳು ಹಾಗೂ ಕುಡಿಯಲು ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ದಿನನಿತ್ಯ ಕಾರಾಗೃಹದ ಮುಂದೆ ನಗರಸಭೆ ವಾಟರ್ ಟ್ಯಾಂಕ್ ಯಾವಾಗಲೂ ನಿಂತಿರುತ್ತದೆ.

    ಅರ್ಧ ಕಿ.ಮೀ ದೂರದಿಂದ ನಗರಸಭೆ ರೈಸಿಂಗ್ ಲೈನ್ ಸಂಪರ್ಕವನ್ನು ಪಡೆದಿದ್ದರೂ, ನಿತ್ಯ ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಾಗಿದೆ. ನಗರಕ್ಕೆ ನೀರು ಒದಗಿಸುತ್ತಿದ್ದ ರಾಂಪುರ ಕೆರೆ ಒಣಗಿರುವುದರಿಂದ ಸಂಪೂರ್ಣ ರಾಯಚೂರು ಜಿಲ್ಲೆ ಬಾಯಾರಿ ಕುಳಿತಿದೆ. ಕೈದಿಗಳು ಮಾತ್ರವಲ್ಲದೆ ಕಾರಾಗೃಹ ಸಿಬ್ಬಂದಿ ಸಹ ನೀರಿನ ಸಮಸ್ಯೆಯನ್ನ ಎದುರಿಸುತ್ತಿದ್ದು, ನಗರಸಭೆ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುಂಬೈನಲ್ಲಿ ನಾಟಕದ ಮೂಲಕ ಪ್ರೇಕ್ಷಕರ ಮನ ಗೆದ್ದ ಕರ್ನಾಟಕದ ಕೈದಿಗಳು

    ಮುಂಬೈನಲ್ಲಿ ನಾಟಕದ ಮೂಲಕ ಪ್ರೇಕ್ಷಕರ ಮನ ಗೆದ್ದ ಕರ್ನಾಟಕದ ಕೈದಿಗಳು

    ಬೆಂಗಳೂರು: ಕೈದಿಗಳ ಮನ ಪರಿವರ್ತನೆಗೆ ಜೈಲಿನಲ್ಲಿ ವಿವಿಧ ಕಲೆ, ಶಿಕ್ಷಣ, ಶ್ರಮ ಹಾಗೂ ಅಧ್ಯಯನಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ. ಈ ರೀತೀಯ ಪ್ರೋತ್ಸಾಹ ಪಡೆದುಕೊಂಡ ಕರ್ನಾಟಕದ ಕೈದಿಗಳು ಮುಂಬೈನಲ್ಲಿ ನಾಟಕದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ.

    ಮುಂಬೈನ ಮೈಸೂರು ಅಸೋಸಿಯೇಷನ್ ಎರಡು ದಿನಗಳ ನಾಟಕೋತ್ಸವ ಆಯೋಜಿಸಿತ್ತು. ಇದರ ಅಧ್ಯಕ್ಷತೆಯನ್ನು ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ವಿ ಹೊಸೂರ್ ಅವರು ವಹಿಸಿಕೊಂಡಿದ್ದರು. ಈ ನಾಟಕೋತ್ಸವದಲ್ಲಿ ಕರ್ನಾಟಕದ ಕೈದಿಗಳು ಭಾಗವಹಿಸಿ ಸಾಹಿತಿಗಳಾದ ಜಯಂತ್ ಕಾಯ್ಕಿಣಿ ಹಾಗೂ ಚಂದ್ರಶೇಖರ್ ಕಂಬಾರ ಅವರು ರಚಿಸಿದ ನಾಟಕ ಪ್ರದರ್ಶನ ಮಾಡಿದ್ದಾರೆ.

    ನಾಟಕ ಪ್ರದರ್ಶನದ ಮೊದಲ ದಿನ (ಶನಿವಾರ) ಸಾಹಿತಿ ಜಯಂತ್ ಕಾಯ್ಕಿಣಿ ರಚಿಸಿರುವ ಹಾಗೂ ಹುಲಿಗೆಪ್ಪ ಕಟ್ಟಿಮನಿ ನಿರ್ದೇಶಿಸಿದ ‘ಜೊತೆಗಿರುವನು ಚಂದಿರ’ ನಾಟಕ ಪ್ರದರ್ಶನವನ್ನು ಕೈದಿಗಳು ನೀಡಿದರು. ಇದಕ್ಕೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಅಷ್ಟೇ ಪ್ರಮಾಣದಲ್ಲಿ ಭಾನುವಾರ ಪ್ರದರ್ಶನ ಕಂಡ ಚಂದ್ರಶೇಖರ್ ಕಂಬಾರ ಅವರು ರಚಿಸಿದ ‘ಸಂಗ್ಯಾ ಬಾಳ್ಯ’ ನಾಟಕ ಅದ್ಭುತವಾಗಿ ಹೊರ ಹೊಮ್ಮಿತು.

    ಈ ನಾಟಕ ಪ್ರದರ್ಶನದಲ್ಲಿ ಕರ್ನಾಟಕದ ಒಟ್ಟು ಐವತ್ತು ಮಂದಿ ಪಾಲ್ಗೊಂಡಿದ್ದರು. ಅವರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 30 ಮಂದಿ ಕೈದಿಗಳು ಹಾಗೂ ಜೈಲಿಂದ ಬಿಡುಗಡೆ ಆಗಿರುವವರು ಕೂಡ ನಾಟಕದಲ್ಲಿ ಇದ್ದರು. ಕರ್ನಾಟಕ ಕಾರಾಗೃಹ ಇಲಾಖೆ ಹಾಗೂ ಮುಂಬೈನ ಕಾರಾಗೃಹ ಅಧಿಕಾರಿಗಳ ಸಹಕಾರದಿಂದ ಎರಡು ನಾಟಕೋತ್ಸವ ಯಶಸ್ವಿಯಾಗಿ ಪ್ರದರ್ಶನ ಕಂಡವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೈಲು ಕೈದಿಗಳಿಗೂ ಐಷಾರಾಮಿ ಸೌಲಭ್ಯ- ಎಸ್‍ಪಿಯಿಂದ ಕೂಲರ್, ಮೊಬೈಲ್, ಎಲ್‍ಇಡಿ ಟಿವಿ ಜಪ್ತಿ

    ಜೈಲು ಕೈದಿಗಳಿಗೂ ಐಷಾರಾಮಿ ಸೌಲಭ್ಯ- ಎಸ್‍ಪಿಯಿಂದ ಕೂಲರ್, ಮೊಬೈಲ್, ಎಲ್‍ಇಡಿ ಟಿವಿ ಜಪ್ತಿ

    ಬಳ್ಳಾರಿ: ತಪ್ಪು ಮಾಡಿ ಶಿಕ್ಷೆ ಅನುಭವಿಸಿ ಕೈದಿಗಳ ಮನ ಪರಿವರ್ತನೆ ಮಾಡುವ ಕೇಂದ್ರವಾಗಬೇಕಾದ ಜೈಲುಗಳು ಇಂದು ಐಷಾರಾಮಿ ಸ್ಥಳಗಳಾಗಿವೆ ಎಂಬ ಆರೋಪ ಕೇಳಿಬರುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಜೈಲಿನಲ್ಲಿ ಕೈದಿಗಳಿಗೆ ಐಷಾರಾಮಿ ಸೌಲಭ್ಯ ನೀಡುತ್ತಿರುವ ಘಟನೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

    ಜೈಲುಗಳು ಅಂದ್ರೆ ಕೈದಿಗಳ ಮನ ಪರಿವರ್ತನಾ ಕೇಂದ್ರ ಅಂತಾರೆ. ಆದ್ರೆ ಇತ್ತೀಚಿಗೆ ಜೈಲುಗಳು ಸಹ ಐಷಾರಾಮಿ ಜೀವನದ ಒಂದು ಭಾಗ ಎನ್ನುವಂತಾಗಿ ಬಿಟ್ಟಿದೆ. ಇದಕ್ಕೆ ಬಳ್ಳಾರಿ ಜಿಲ್ಲಾ ಕೇಂದ್ರ ಕಾರಾಗೃಹ ಸಾಕ್ಷಿಯಾಗಿದೆ.

    ಇಲ್ಲಿ ಶಿಕ್ಷೆ ಅನುಭವಿಸಬೇಕಾದ ಕೈದಿಗಳ ಸೆಲ್ ನಲ್ಲಿ ಕೂಲರ್, ಎಲ್ ಇ ಡಿ ಟಿವಿ, ಮೊಬೈಲ್, ಗಾಂಜಾ, ಬಿಡಿ ಸಿಗರೇಟ್ ಸೇರಿದಂತೆ ಎಲ್ಲ ವಸ್ತುಗಳು ದೊರೆತಿವೆ. ಬಳ್ಳಾರಿಯ ನೂತನ ಎಸ್ ಪಿ ಅರುಣ ರಂಗರಾಜನ್ ದಿಢೀರ್ ದಾಳಿ ಮಾಡಿದ ವೇಳೆ ಕೈದಿಗಳ ಬಳಿಯಿದ್ದ 14 ಮೊಬೈಲ್, 3 ಎಲ್ ಇ ಡಿ ಟಿವಿ ಸೆಟ್ ಅಪ್ ಬಾಕ್ಸ್, 3 ಕೂಲರ್, ಬೀಡಿ, ಸಿಗರೇಟ್, ಗಾಂಜು ಪೊಟ್ಟಣಗಳನ್ನು ಜಪ್ತಿ ಮಾಡಿದ್ದಾರೆ.

    ಜೈಲಿನ ಮೇಲೆ ದಾಳಿ ಮಾಡಿದ ಎಸ್‍ಪಿ ಅರುಣ್ ರಂಗರಾಜನ್ ಸಂಜೆ ವೇಳೆಗೆ ಡಿವೈಎಸ್ಪಿಗಳು, ಡಿಎಆರ್ ಆರ್ಪಿಐ, ಸಿಪಿಐಗಳು ಸೇರಿದಂತೆ 50ಕ್ಕೂ ಪೊಲೀಸರಿಂದ ಎಲ್ಲ ಕೈದಿಗಳ ಸೆಲ್ ಗಳನ್ನು ಪರಿಶೀಲನೆ ಮಾಡಿ ಐಷಾರಾಮಿ ಜೀವನಕ್ಕಾಗಿ ಬಳಸುತ್ತಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ ಅಕ್ರಮವಾಗಿ ಜೈಲಿನೊಳಗೆ ವಸ್ತುಗಳನ್ನು ತಂದ ಕೈದಿಗಳ ವಿರುದ್ಧ ದೂರು ದಾಖಲು ಮಾಡಲು ಆದೇಶ ನೀಡಿದ್ದಾರೆ.

  • ಸನ್ನಡತೆ ಆಧಾರದಲ್ಲಿ ರಾಜ್ಯಾದ್ಯಂತ 108 ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ

    ಸನ್ನಡತೆ ಆಧಾರದಲ್ಲಿ ರಾಜ್ಯಾದ್ಯಂತ 108 ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ

    ಬೆಂಗಳೂರು: ತಮಗೆ ಅರಿತೊ ಅರಿಯದೆ ಮಾಡಿದ ತಪ್ಪಿನಿಂದಾಗಿ ಜೈಲು ಸೇರಿದ್ದ ಜೈಲು ಹಕ್ಕಿಗಳಿಗೆ ಬುಧವಾರ ಬಿಡುಗಡೆ ಭಾಗ್ಯ ಲಭಿಸಿದೆ. ರಾಜ್ಯಾದ್ಯಂತ 12 ವರ್ಷಗಳ ಮೇಲ್ಪಟ್ಟು ಸೆರೆವಾಸ ಅನುಭವಿಸಿದ್ದ 108 ಸಜಾ ಬಂಧಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ 50 ಬಂಧಿಗಳು ಬಿಡುಗಡೆಗೊಂಡಿದ್ದಾರೆ. ಇದರಲ್ಲಿ 80 ವರ್ಷ ಮೇಲ್ಪಟ್ಟ 5 ಜನ ಬಂಧಿಗಳು ಇರುವುದು ವಿಶೇಷವಾಗಿದೆ.

    ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕಳೆದ 12 ವರ್ಷಕ್ಕೂ ಹೆಚ್ಚು ಮೇಲ್ಪಟ್ಟು ಬಂಧಿಯಾಗಿದ್ದ ಹಲವು ಖೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಗೊಳಿಸಲಾಗಿದೆ. ಈ ಕುರಿತು ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಬಂಧಿಗಳಿಗೆ ಬಿಡುಗಡೆ ಪತ್ರ ವಿತರಿಸಿದರು.

    ಪರಪ್ಪನ ಅಗ್ರಹಾರ ಜೈಲಿನಿಂದ 45 ಪುರುಷ ಹಾಗೂ 5 ಮಹಿಳಾ ಸಜಾ ಬಂಧಿಗಳಿಗೆ ಬಿಡುಗಡೆ ಭಾಗ್ಯ ಕಲ್ಪಿಸಲಾಗಿದೆ. ಜೀವನ ಪರ್ಯಂತ ಜೈಲಿನಲ್ಲಿ ಕಾಲ ಕಳೆಯುವುದು ಎಂದುಕೊಂಡಿದ್ದ ಬಂಧಿಗಳಿಗೆ ರಾಜ್ಯ ಸರ್ಕಾರದ ಈ ನಿರ್ಧಾರ ಮತ್ತೆ ಅವರ ಬಾಳಿಗೆ ಪುನರ್ಜನ್ಮ ನೀಡಿದಂತಾಗಿದೆ.

    ಈ ಬಗ್ಗೆ ಬಿಡುಗಡೆಗೊಂಡ ಬಂಧಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ಬಿಡುಗಡೆಯಾದ ಬಂಧಿಯೊಬ್ಬರು ಮಾತನಾಡಿ ನಾವು ಒಂದು ಕ್ಷಣ ಮೈ ಮರೆತು ಕೋಪದ ಕೈಗೆ ಬುದ್ಧಿ ಕೊಟ್ಟಿದ್ದರಿಂದ ಇಷ್ಟು ವರ್ಷ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಪರಿವರ್ತನೆ ಹೊಂದಿದ್ದೇವೆ. ನಮ್ಮ ದಶಾವತಾರದ ಜೀವನದಲ್ಲಿ 9 ಅವತಾರಗಳನ್ನು ಜೈಲಿನಲ್ಲೇ ಕಳೆದಿದ್ದು ಇನ್ನೊಂದು ಅವತಾರವನ್ನು ಇನ್ನು ಒಳ್ಳೆ ರೀತಿಯಲ್ಲಿ ಕಳೆಯುವುದಾಗಿ ತಿಳಿಸಿದ್ದಾರೆ.

  • ಬಗೆದಷ್ಟೂ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಯಲು: ಇಲ್ಲಿ ಎಣ್ಣೆ ಪಾರ್ಟಿ ಖುಲ್ಲಂಖುಲ್ಲಾ, ಜೈಲು ವಾರ್ಡನ್ ಎದುರೇ ಇಸ್ಪೀಟ್ ಆಟ

    ಬಗೆದಷ್ಟೂ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಯಲು: ಇಲ್ಲಿ ಎಣ್ಣೆ ಪಾರ್ಟಿ ಖುಲ್ಲಂಖುಲ್ಲಾ, ಜೈಲು ವಾರ್ಡನ್ ಎದುರೇ ಇಸ್ಪೀಟ್ ಆಟ

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಸಿಕ್ಕಿದೆ.

    ಶುಕ್ರವಾರದಂದು ಛಾಪಾಕಾಗದ ವಂಚಕ ಅಬ್ದುಲ್ ಕರೀಂ ತೆಲಗಿಗೆ ಸಿಗ್ತಿರೋ ಐಶಾರಾಮಿ ಟ್ರೀಟ್‍ಮೆಂಟ್ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಎಕ್ಸ್ ಕ್ಲೂಸಿವ್ ವಿಡಿಯೋ ಪ್ರಸಾರವಾಗಿತ್ತು. ಇದೀಗ ಇದಕ್ಕಿಂತಲೂ ಭಯಾನಕವಾದ ಮತ್ತೊಂದು ದೃಶ್ಯ ಲಭ್ಯವಾಗಿದೆ. ಜೈಲು ಅಕ್ರಮಗಳ ಬಗ್ಗೆ ಉಪ ನಿರೀಕ್ಷಕಿ ರೂಪಾ ವರದಿ ನೀಡಿದ ನಂತರ ಬಗೆದಷ್ಟೂ ಪರಪ್ಪನ ಅಗ್ರಹಾರದ ಜೈಲಿನ ಕರ್ಮಕಾಂಡ ಬಯಲಾಗ್ತಿದೆ.

    ಇದನ್ನೂ ಓದಿ:ಎಲ್‍ಇಡಿ ಟಿವಿ,ಕುಷನ್ ಬೆಡ್, ಮಿನರಲ್ ವಾಟರ್- ಪರಪ್ಪನ ಅಗ್ರಹಾರದಲ್ಲಿ ವಂಚಕ ತೆಲಗಿಗೆ ರಾಜಮರ್ಯಾದೆ

    ಪರಪ್ಪನ ಅಗ್ರಹಾರ ಕೇವಲ ಸೆಂಟ್ರಲ್ ಜೈಲಲ್ಲ, ಜೂಜು ಅಡೆಯೂ ಹೌದು. ಇಲ್ಲಿ ರಾಜಾರೊಷವಾಗಿಯೇ ಇಸ್ಪೀಟ್ ಆಡಲಾಗ್ತಿದೆ. ಜೈಲು ವಾರ್ಡನ್ ಮುಂದೆಯೇ ಇಸ್ಪೀಟ್ ಆಟ ಖುಲ್ಲಂಖುಲ್ಲಾ ನಡೆಯುತ್ತಿದೆ. ಬಾಜಿ ಕಟ್ಟಿ ಹೇಗೆ ಇಸ್ಪೀಟ್ ಆಟ ಆಡ್ತಾರೆ ಅನ್ನೋದನ್ನ ಈ ದೃಶ್ಯಾವಳಿಯಲ್ಲಿ ನೋಡಬಹುದು.

    ಇಸ್ಪೀಟ್ ಅಷ್ಟೇ ಅಲ್ಲ ಇಲ್ಲಿ ಕೈದಿಗಳು ಮದ್ಯಪಾನ ಕೂಡ ಮಾಡ್ತಾರೆ. ಸಜಾ ಬಂಧಿಗಳು ಮದ್ಯಪಾನ ಮಾಡ್ತಿರೋದು ವಿಡಿಯೋದಲ್ಲಿ ಸೆರೆಯಾಗಿದೆ.

    ಇದನ್ನೂ ಓದಿ: ಪದೇ ಪದೇ ಮಾಧ್ಯಮಗಳ ಮುಂದೆ ಹೋಗುವ ಅಧಿಕಾರಿಗಳಿಗೆ ನೋಟಿಸ್: ಸಿಎಂ

    ಇದನ್ನೂ ಓದಿ:ಶಶಿಕಲಾಗೆ ಕಿಚನ್ ಅಲ್ಲದೇ ಜೈಲಿನಲ್ಲಿದೆ ವಿಶೇಷ ವಿಸಿಟಿಂಗ್ ರೂಂ!

    ಇದನ್ನೂ ಓದಿ: ನನಗೆ ಮಾತ್ರ ನೋಟಿಸ್ ನೀಡಿ ಟಾರ್ಗೆಟ್ ಮಾಡಿದ್ದು ಯಾಕೆ: ಸಿಎಂಗೆ ರೂಪಾ ಪ್ರಶ್ನೆ

    https://www.youtube.com/watch?v=fSPNd2X6E-4&feature=youtu.be

    https://www.youtube.com/watch?v=ZN8zHv5J7aU&feature=youtu.be

  • ಮಂಗಳೂರು: ಜಿಲ್ಲಾ ಕಾರಾಗೃದಿಂದ ವಿಚಾರಣಾಧೀನ ಕೈದಿ ಪರಾರಿ

    ಮಂಗಳೂರು: ಜಿಲ್ಲಾ ಕಾರಾಗೃದಿಂದ ವಿಚಾರಣಾಧೀನ ಕೈದಿ ಪರಾರಿ

    ಮಂಗಳೂರು: ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ವಿಚಾರಣಾಧೀನ ಕೈದಿಯೊಬ್ಬ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದಾನೆ. ಎರಡು ವರ್ಷಗಳ ಹಿಂದೆ ಅತ್ಯಾಚಾರ ಯತ್ನ ಮತ್ತು ಕಳವು ಪ್ರಕರಣದಲ್ಲಿ ಬಂಧಿಯಾಗಿದ್ದ ಕೈದಿ ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ.

    ಜಿನ್ನಪ್ಪ ಪರವ ಜೈಲಿನಿಂದ ಪರಾರಿಯಾದ ಕೈದಿ. ಜಿನ್ನಪ್ಪ ಬೆಳ್ತಂಗಡಿ ತಾಲೂಕಿನ ಬೆಳ್ಳಾಲು ಗ್ರಾಮದ ನಿವಾಸಿ. ಇಂದು ಬೆಳಗಿನ ಜಾವ ಮೂರು ಗಂಟೆಯ ಸಮಯದಲ್ಲಿ ಕಾರಾಗೃಹದ ಕಾವಲು ಪೊಲೀಸರು ನಿದ್ದೆ ಹೋದ ಸಂದರ್ಭದಲ್ಲಿ ಹಳೆಯ ಜೈಲಿಗೆ ಹೋಗಿ ಗೋಡೆ ಹಾರಿ ವಿದ್ಯುತ್ ಕಂಬದ ಮೂಲಕ ಇಳಿದು ತಪ್ಪಿಸಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.

    ಎರಡು ವರ್ಷಗಳ ಹಿಂದೆ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಬೆಳ್ತಂಗಡಿ ಪೊಲೀಸರು 2015 ಅಗಸ್ಟ್ 25 ರಂದು ಜಿನ್ನಪ್ಪನನ್ನು ಬಂಧಿಸಿದ್ದರು. ನಂತರ ಆತನನ್ನು ವಿಚಾರಣಾಧೀನ ಕೈದಿಯಾಗಿ ಮಂಗಳೂರು ಕಾರಾಗೃಹದಲ್ಲಿ ತನಿಖೆಗೆ ಒಳಪಡಿಸಲಾಗಿತ್ತು. ಜಿನ್ನಪ್ಪ ಜೈಲಿನಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.

    ಇಂದು ಬೆಳಗ್ಗೆ ಪೊಲೀಸ್ ಸರ್ಪಗಾವಲು ಇದ್ರೂ ಜಿನ್ನಪ್ಪ ಪರಾರಿಯಾಗಿದ್ದು, ಪೊಲೀಸರ ಕರ್ತವ್ಯಲೋಪದ ಬಗ್ಗೆ ಭಾರೀ ಟೀಕೆಗೆ ವ್ಯಕ್ತವಾಗಿದೆ. ಜೈಲಿನೊಳಗೇ ಭೂಗತ ಪಾತಕಿಗಳಿಬ್ಬರ ಹತ್ಯೆ, ಭೂಗತ ಚಟುವಟಿಕೆ, ಕೈದಿಗಳಿಗೆ ಗಾಂಜಾ ಪೂರೈಕೆ ಮೂಲಕ ಕುಖ್ಯಾತಿಗೀಡಾಗಿದ್ದ ಮಂಗಳೂರಿನ ಕಾರಾಗೃಹ ಇದೀಗ ಕೈದಿ ಪರಾರಿಯಾಗುವ ಮೂಲಕ ಮತ್ತೊಂದು ಕಳಂಕವನ್ನು ಮೈಮೇಲೆ ಎಳೆದುಕೊಂಡಿದೆ.