Tag: Print

  • ಕಳೆದ ವರ್ಷ ಒಂದೇ ಒಂದು 2 ಸಾವಿರ ರೂ. ನೋಟು ಮುದ್ರಣವಾಗಿಲ್ಲ

    ಕಳೆದ ವರ್ಷ ಒಂದೇ ಒಂದು 2 ಸಾವಿರ ರೂ. ನೋಟು ಮುದ್ರಣವಾಗಿಲ್ಲ

    – ಚಲಾವಣೆಯಲ್ಲಿರುವ ನೋಟಿನ ಪ್ರಮಾಣ ಇಳಿಕೆ
    – ವಾರ್ಷಿಕ ವರದಿಯಲ್ಲಿ ಆರ್‌ಬಿಐ ಮಾಹಿತಿ

    ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಒಂದೇ ಒಂದು 2 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಮುದ್ರಿಸಿಲ್ಲ ಎಂದು ರಿಸರ್ವ್‌ ಬ್ಯಾಂಕ್‌ ಹೇಳಿದೆ.

    2019-20ರ ವಾರ್ಷಿಕ ವರದಿಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಚಲಾವಣೆಯ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ತಿಳಿಸಿದೆ.

    2018ರ ಮಾರ್ಚ್ ಅಂತ್ಯಕ್ಕೆ ದೇಶದಲ್ಲಿ 2 ಸಾವಿರ ರೂ. ಮುಖಬೆಲೆಯ 33,632 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದರೆ 2019ರ ಮಾರ್ಚ್‌ ಅಂತ್ಯಕ್ಕೆ ಈ ಸಂಖ್ಯೆ 32,910 ಲಕ್ಷಕ್ಕೆ ಇಳಿಕೆಯಾಗಿತ್ತು. 2020ರ ಮಾರ್ಚ್‌ ಅಂತ್ಯಕ್ಕೆ ಇದು 27,398 ಲಕ್ಷಕ್ಕೆ ಇಳಿಕೆಯಾಗಿದೆ.

    2018ರ ಮಾರ್ಚ್‌ ಅಂತ್ಯಕ್ಕೆ ಚಲಾವಣೆಯಲ್ಲಿರುವ ನೋಟುಗಳ ಪೈಕಿ 2 ಸಾವಿರ ರೂ. ನೋಟುಗಳ ಪಾಲು ಶೇ. 3.3ರಷ್ಟಿತ್ತು. 2020ರ ಮಾರ್ಚ್‌ ಅಂತ್ಯಕ್ಕೆ ಈ ಪ್ರಮಾಣ ಶೇ.2.4ಕ್ಕೆ ಇಳಿದಿದೆ.

    ಮೌಲ್ಯದ ಆಧಾರದಲ್ಲಿ ನೋಡುವುದಾದರೆ 2018ರಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳ ಪಾಲು ಶೇ.37.3 ರಷ್ಟಿತ್ತು. 2019ರಲ್ಲಿ ಇದು ಶೇ.31.2ಕ್ಕೆ ಇಳಿಕೆಯಾದರೆ ಮಾರ್ಚ್‌ 2020ರಲ್ಲಿ ಇದು ಶೇ.22.6ಕ್ಕೆ ಕುಸಿದಿದೆ.

    ವರದಿಯಲ್ಲಿ 200 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳ ಸಂಖ್ಯೆ ಏರುತ್ತಲೇ ಸಾಗಿದೆ ಎಂದು ಹೇಳಿದೆ. 2018-19ರಲ್ಲಿ 500 ರೂ. ಮುಖಬೆಲೆಯ 1,147 ಕೋಟಿ ನೋಟುಗಳನ್ನು ಮುದ್ರಿಸಿದ್ದರೆ 2019-20ರಲ್ಲಿ ಇದು 1,200 ಕೋಟಿಗೆ ಏರಿಕೆಯಾಗಿದೆ.

    10, 50, 200, 500 ರೂ. ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಏರಿಕೆಯಾಗಿದೆ. 20, 100 ಮತ್ತು 2,000 ರೂಪಾಯಿ ನಕಲಿ ನೋಟುಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ.

     

    ಹಿಂದೆಯೇ ಹೇಳಿತ್ತು:
    ದೇಶದಲ್ಲಿನ ಕಪ್ಪುಹಣ ಮತ್ತು ಭಯೋತ್ಪಾದನೆಗೆ ಬ್ರೇಕ್ ಹಾಕುವ ಉದ್ದೇಶದಿಂದ, ನೋಟು ನಿಷೇಧ ನಿರ್ಧಾರದ ಸಮಯದಲ್ಲಿ ಚಲಾವಣೆಗೆ ತಂದಿದ್ದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ಹಂತ ಹಂತವಾಗಿ ಕಡಿಮೆ ಮಾಡಲಿದೆ ಎಂದು ಹಣಕಾಸು ಸಚಿವಾಲಯ ಕಳೆದ ವರ್ಷದ ಜನವರಿಯಲ್ಲಿ ಮಾಹಿತಿ ನೀಡಿತ್ತು.

    ನವೆಂಬರ್ 8, 2016ರಲ್ಲಿ ನೋಟ್ ನಿಷೇಧ ಸಂದರ್ಭದಲ್ಲಿ ಆರ್‌ಬಿಐ 2 ಸಾವಿರ ರೂ.ನಷ್ಟು ದೊಡ್ಡ ಮೊತ್ತದ ನೋಟುಗಳನ್ನು ಹಣಕಾಸು ಕೊರತೆಯನ್ನು ಭರಿಸುವ ಉದ್ದೇಶದಿಂದ ಚಲಾವಣೆಗೆ ತಂದಿತ್ತು.

    ಈ ದೊಡ್ಡ ಮೊತ್ತದ ನೋಟು ಕಾಳಧನಿಕರಿಗೆ ಶತ್ರುವಾಗಿ ಪರಿಣಮಿಸುವ ಬದಲಾಗಿ ಸ್ನೇಹಿಯಾಗಿ ಮಾರ್ಪಾಡಾಗತೊಡಗಿವೆ. ಹೆಚ್ಚು ಮೌಲ್ಯ ಹೊಂದಿರುವ ಕಾರಣಕ್ಕೆ ಈ ಮುಖಬೆಲೆಯ ನೋಟ್‍ಗಳನ್ನು ಸುಲಭವಾಗಿ ಶೇಖರಿಸಿ ಇಡಬಹುದು ಮತ್ತು ಸಾಗಿಸಬಹುದು ಅಂತ ಕಾಳಧನಿಕರು ಉಪಾಯ ಮಾಡಿದ್ದಾರೆ. ಆದರಿಂದ ಈ ನೋಟುಗಳನ್ನು ಹೆಚ್ಚು ಶೇಖರಿಸಿಡುತ್ತಿದ್ದಾರೆ ಎಂಬ ಶಂಕೆ ಬಂದ ಹಿನ್ನೆಲೆಯಲ್ಲಿ ಆರ್‌ಬಿಐ ಹಂತಹಂತವಾಗಿ 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸುತ್ತಿದೆ.

    ಮಾರ್ಚ್ 2017ರ ಅಂತ್ಯದಲ್ಲಿ 328 ಕೋಟಿ ರೂ. 2 ಸಾವಿರ ಮುಖಬೆಲೆಯ ನೋಟುಗಳು ದೇಶದಲ್ಲಿ ಚಲಾವಣೆಯಾಗಿತ್ತು. ಬಳಿಕ ಮಾರ್ಚ್ 2018ರ ಅಂತ್ಯದಲ್ಲಿ ಈ ಸಂಖ್ಯೆ 336 ಕೋಟಿಗೆ ಏರಿಕೆಯಾಗಿತ್ತು. ಆರಂಭದಲ್ಲಿ ಶೇ.86ರಷ್ಟು 2 ಸಾವಿರ ನೋಟುಗಳು ಚಲಾವಣೆಯಲ್ಲಿದ್ದವು.

  • ಅಂದು ಅಡಿಡಾಸ್ ಎಂದು ಕೈಯಾರೇ ಬರೆಯುತ್ತಿದ್ದೆ, ಇಂದು ಅಡಿಡಾಸ್ ಶೂನಲ್ಲೇ ನನ್ನ ಹೆಸರು ಪ್ರಿಂಟ್ – ಹಿಮಾದಾಸ್

    ಅಂದು ಅಡಿಡಾಸ್ ಎಂದು ಕೈಯಾರೇ ಬರೆಯುತ್ತಿದ್ದೆ, ಇಂದು ಅಡಿಡಾಸ್ ಶೂನಲ್ಲೇ ನನ್ನ ಹೆಸರು ಪ್ರಿಂಟ್ – ಹಿಮಾದಾಸ್

    – ಅಡಿಡಾಸ್ ಕಂಪನಿಯ ಶೂಗಳ ಮೇಲೆ ಹಿಮಾದಾಸ್ ಹೆಸರು
    – ಬಾಲ್ಯದ ಕಷ್ಟದ ದಿನಗಳನ್ನು ನೆನಪಿಸಿದ ಹಿಮಾದಾಸ್

    ನವದೆಹಲಿ: ಕ್ರೀಡಾಪಟುಗಳಿಗಾಗೇ ವಿಶೇಷ ಬಗೆಯ ಶೂ ತಯಾರಿಸುವ ಅಡಿಡಾಸ್ ಕಂಪನಿ ಭಾರತದ ಓಟಗಾರ್ತಿ ಹಿಮಾದಾಸ್ ಅವರ ಹೆಸರನ್ನು ತಮ್ಮ ಕಂಪನಿಯ ಬ್ರ್ಯಾಂಡೆಡ್ ಕಸ್ಟಮ್-ನಿರ್ಮಿತ ಶೂ ಮೇಲೆ ಪ್ರಿಂಟ್ ಮಾಡಲು ತೀರ್ಮಾನ ಮಾಡಿದೆ.

    ತಮ್ಮ ಕಂಪನಿಯ ಬ್ರ್ಯಾಂಡೆಡ್ ಕಸ್ಟಮ್ ಶೂ ಮೇಲೆ ಹಿಮಾದಾಸ್ ಹೆಸರನ್ನು ಪ್ರಿಂಟ್ ಮಾಡುವುದಾಗಿ ಅಡಿಡಾಸ್ ಭಾನುವಾರ ಹೇಳಿಕೊಂಡಿದೆ. ಇದಾದ ನಂತರ ತಮ್ಮ ಹಿಂದಿನ ದಿನಗಳನ್ನು ನೆನೆದುಕೊಂಡಿರುವ ಹಿಮಾದಾಸ್, ಒಂದು ಕಾಲದಲ್ಲಿ ನಾನು ಉಪಯೋಗಿಸುತ್ತಿದ್ದ ಮಮೂಲಿ ರನ್ನಿಂಗ್ ಶೂಗಳ ಮೇಲೆ ನಾನೇ ಅಡೀಡಸ್ ಎಂದು ಬರೆಯುತ್ತಿದೆ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಹಿಮಾದಾಸ್ ಮೊದಲು ನಾನು ಶಾಲಾ ದಿನಗಳಲ್ಲಿ ಓಡಲು ಆರಂಭಿಸಿದಾಗ ಬರಿಗಾಲಿನಲ್ಲಿ ಓಡುತ್ತಿದ್ದೆ. ಆದರೆ ಮೊದಲು ನಾನು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಹೋದಾಗ ನಮ್ಮ ತಂದೆ ಸ್ಪೈಕ್ ಶೂಗಳನ್ನು ತಂದುಕೊಟ್ಟರು. ಅದೂ ಯಾವುದೇ ಕಂಪನಿ ಆಥವಾ ಬ್ರ್ಯಾಂಡೆಡ್ ಶೂ ಆಗಿರಲಿಲ್ಲ. ಆದರೆ ಅದರ ಮೇಲೆ ನಾನು ನನ್ನ ಕೈಯಾರೆ ಅಡಿಡಾಸ್ ಎಂದು ಬರೆದುಕೊಂಡಿದ್ದೆ ಎಂದು ತನ್ನ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

    ಹಿಮಾದಾಸ್ ಅವರು ಭಾರತದ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರು ಜೊತೆ ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದಿದ್ದು, ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಧಿ ಎಂಬುದು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆ ಎಂಬುದು ನಮಗೆ ಯಾರಿಗೂ ಗೊತ್ತಿಲ್ಲ. ಒಂದು ಕಾಲದಲ್ಲಿ ನನ್ನ ಶೂಗಳ ಮೇಲೆ ನಾನೇ ಅಡಿಡಾಸ್ ಎಂದು ಬರೆದುಕೊಳ್ಳುತ್ತಿದ್ದೆ. ಇಂದು ಅದೇ ಕಂಪನಿ ನನ್ನ ಹೆಸರನ್ನು ಅವರ ಬ್ರ್ಯಾಂಡೆಡ್ ಶೂ ಮೇಲೆ ಪ್ರಿಂಟ್ ಮಾಡುತ್ತಿದೆ ಎಂದು ಹಿಮಾದಾಸ್ ಹೇಳಿದ್ದಾರೆ.

    ಒಂದು ಕಾಲದಲ್ಲಿ ಶೂ ಇಲ್ಲದೇ ಬರಿಗಾಲಿನಲ್ಲಿ ಓಡುತ್ತಿದ್ದ ಹಿಮಾದಾಸ್ ಫಿನ್ಲೆಂಡ್‍ನಲ್ಲಿ ನಡೆದ 2018 ರ ವಿಶ್ವ ಅಂಡರ್ -20 ಚಾಂಪಿಯನ್‍ಶಿಪ್‍ನಲ್ಲಿ 400 ಮೀಟರ್ ಸ್ಪರ್ಧೆ ಯಲ್ಲಿ ಚಿನ್ನ ಗೆದ್ದರು. ನಂತರ ಅವರನ್ನು ಜರ್ಮನಿಯ ಉನ್ನತ ಬ್ರ್ಯಾಂಡ್ ಕಂಪನಿ ಅಡಿಡಾಸ್ ತನ್ನ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿತ್ತು. ಈಗ ತಮ್ಮ ಕಂಪನಿಯ ಕಸ್ಟಮ್-ನಿರ್ಮಿತ ಶೂಗಳ ಮೇಲೆ ಆಕೆಯ ಹೆಸರನ್ನು ಪ್ರಿಂಟ್ ಮಾಡಲು ಮುಂದಾಗಿದೆ.

    ಇದೇ ವೇಳೆ ಇಂಡೋನೇಷ್ಯಾದಲ್ಲಿ ನಡೆದ 2018ರ ಏಷ್ಯನ್ ಕ್ರೀಡಾಕೂಟದ ನಂತರ ಜನರು ಹಿಂದೆಂದಿಗಿಂತಲೂ ಹೆಚ್ಚು ಅಥ್ಲೆಟಿಕ್ಸ್ ಅನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ ಎಂದು ಹಿಮಾದಾಸ್ ಹೇಳಿದ್ದಾರೆ. ಹಿಮಾದಾಸ್ ಅವರು ಏಷ್ಯನ್ ಕ್ರೀಡಾಕೂಟದಲ್ಲಿ 400 ಮೀಟರ್ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಮಹಿಳೆಯರ 400 ಮೀಟರ್ ಮತ್ತು ಮಿಶ್ರ 400 ಮೀಟರ್ ರಿಲೇ ರೇಸ್‍ಗಳಲ್ಲಿ ತಲಾ ಒಂದು ಚಿನ್ನದ ಪದಕವನ್ನು ಗೆದ್ದಿದ್ದರು.

    ನಾನು ಮುಂದೆ ನಡೆಯುವ ಟೋಕಿಯೋ ಒಲಿಂಪಿಕ್ಸ್ ಕಡೆ ಗಮನ ಹರಿಸಿದ್ದು ಅಭ್ಯಾಸ ನಡೆಸುತ್ತಿದ್ದೇನೆ. ಕೊರೊನಾ ಬಂದಿರುವುದಿರಂದ ನನಗೆ ಇದಕ್ಕೆ ಹೆಚ್ಚಿನ ಸಮಯ ಸಿಕ್ಕಿದೆ. ಸ್ಪರ್ಧೆಯಲ್ಲಿ ನಾವು ಓಡುವಾಗ ಅಭಿಮಾನಿಗಳು ನಮ್ಮ ಹೆಸರನ್ನು ಜೋರಾಗಿ ಕೂಗಿದರೆ ನಮಗೆ ಓಡಲು ಹೆಚ್ಚಿನ ಶಕ್ತಿ ಸಿಗುತ್ತದೆ ಎಂದು ಹಿಮಾ ತಿಳಿಸಿದ್ದಾರೆ. ಜೊತೆಗೆ ಕ್ರಿಕೆಟ್ ದಂತಕಥೆ ಸಚಿನ್ ಅವರು ನನ್ನ ರೋಲ್ ಮಾಡೆಲ್ ಆಗಿದ್ದು, ಅವರನ್ನು ಭೇಟಿಯಾದ ಕ್ಷಣ ನನ್ನ ಜೀವನದ ಅತ್ಯುತ್ತಮ ಕ್ಷಣವಾಗಿದೆ ಎಂದು ದಾಸ್ ಹೇಳಿದ್ದಾರೆ.

  • ಈ ವರ್ಷ ಒಂದೇ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಪ್ರಿಂಟ್-ಪಿಯು ಬೋರ್ಡ್ ನಿಂದ ಗೊಂದಲದ ಆದೇಶ

    ಈ ವರ್ಷ ಒಂದೇ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಪ್ರಿಂಟ್-ಪಿಯು ಬೋರ್ಡ್ ನಿಂದ ಗೊಂದಲದ ಆದೇಶ

    ಬೆಂಗಳೂರು: ದ್ವಿತೀಯ ಪಿಯುಸಿ ಮಕ್ಕಳಿಗೆ ಈ ಬಾರಿ ಒಂದೇ ಭಾಷೆಯ ಪ್ರಶ್ನೆ ಪತ್ರಿಕೆ ಸಿಗುತ್ತೆ. ಪೇಪರ್ ಉಳಿಸುವ ಜೊತೆ ಸೆಕ್ಯೂರಿಟಿ ಫ್ಯೂಚರ್ ಹೆಸರಲ್ಲಿ ಪ್ರಶ್ನೆ ಪತ್ರಿಕೆಯನ್ನು ಒಂದೇ ಭಾಷೆಯಲ್ಲಿ ಮುದ್ರಣ ಮಾಡಲು ಪಿಯು ಬೋರ್ಡ್ ಆದೇಶ ಹೊರಡಿಸಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.

    ಪಿಯು ಪ್ರಶ್ನೆ ಪತ್ರಿಕೆ ಲೀಕಾಸುರರಿಂದ ಪಿಯು ಬೋರ್ಡ್‍ನ ಮಾನ-ಮರ್ಯಾದೆ ಮೂರು ಕಾಸಿಗೆ ಹರಾಜಾಗಿತ್ತು. ಯಾವಾಗ ಪಿಯು ಬೋರ್ಡ್ ನಿರ್ದೇಶಕರಾಗಿ ಶಿಖಾ ಮೇಡಂ ಬಂದರೋ ಪಿಯು ಬೋರ್ಡ್‍ನಲ್ಲಿದ್ದ ಭ್ರಷ್ಟ ವ್ಯವಸ್ಥೆಗೆ ಬ್ರೇಕ್ ಹಾಕಿ, ಕಳೆದ ವರ್ಷ ಪಾರದರ್ಶಕವಾಗಿ ಪರೀಕ್ಷೆ ನಡೆಸಿ ಶಹಬ್ಬಾಸ್ ಗಿರಿ ಪಡೆದಿದ್ದರು. ಪ್ರತಿ ವರ್ಷ ಪ್ರಶ್ನೆ ಪತ್ರಿಕೆಗಳು ಕನ್ನಡ, ಇಂಗ್ಲಿಷ್ ನಲ್ಲಿ ಮುದ್ರಣ ಮಾಡಲಾಗುತಿತ್ತು. ಆದರೆ ಈ ವರ್ಷದಿಂದ ಕೇವಲ ಒಂದೇ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಮುದ್ರಣ ಮಾಡಲು ನಿರ್ಧರಿಸಲಾಗಿದೆ.

    ಈ ಬದಲಾವಣೆ ಬಗ್ಗೆ ಪಿಯು ಬೋರ್ಡ್ ನಿರ್ದೇಶಕಿ ಶಿಖಾ ಅವರನ್ನು ಕೇಳಿದರೆ, ಈ ಹಿಂದೆ ಪರೀಕ್ಷಾ ಅಕ್ರಮಗಳು ನಡೆದಿವೆ. ಹೀಗಾಗಿ ಅಕ್ರಮಗಳಿಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಎರಡು ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆ ಪ್ರಿಂಟ್ ಮಾಡೋದರಿಂದ ಪೇಪರ್ ಗೆ ಹೆಚ್ಚು ಖರ್ಚಾಗುತ್ತೆ ಎನ್ನುವ ಸ್ಪಷ್ಟನೆ ಸಿಕ್ಕಿದೆ. ಇನ್ನು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಟೆಕ್ನಿಕಲ್ ವರ್ಡ್‍ಗಳನ್ನು ಸೂಕ್ತ ರೀತಿಯಲ್ಲಿ ಪ್ರಿಂಟ್ ಮಾಡುತ್ತಿದ್ದೀವಿ ಎಂದು ಶಿಖಾ ತಿಳಿಸಿದ್ದಾರೆ.

    ಯುಪಿಎಸ್‍ಸಿ, ಕೆಪಿಎಸ್‍ಸಿ, ಸಿಇಟಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯನ್ನು ಎರಡು ಭಾಷೆಗಳಲ್ಲಿ ಪ್ರಿಂಟ್ ಮಾಡುತ್ತಾರೆ. ಪರೀಕ್ಷಾ ಅಕ್ರಮ ತಡೆಯೋಕೆ ಕೋಟಿ ಕೋಟಿ ಖರ್ಚು ಮಾಡೋ ಪಿಯು ಬೋರ್ಡ್, ಜಸ್ಟ್ ಪೇಪರ್ ಉಳಿಸೋಕೆ ಎಂದು ಇಂತಹ ನಿಯಮ ತಂದಿರೋದು ವಿದ್ಯಾರ್ಥಿಗಳಿಗೆ ಆತಂಕ ತಂದಿದೆ.