Tag: prime minister modi

  • ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಕೈ ಹಿಡಿಯಲಿದ್ದರಾ ಅಡ್ವಾಣಿ ಆಪ್ತ

    ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಕೈ ಹಿಡಿಯಲಿದ್ದರಾ ಅಡ್ವಾಣಿ ಆಪ್ತ

    -ಅಮಿತ್ ಶಾ, ಮೋದಿ ಜೋಡಿ ವಿರುದ್ಧ ಅಸಮಾಧಾನ!

    ನವದೆಹಲಿ: ಬಿಜೆಪಿ ಪಕ್ಷದ ಹಿರಿಯ ಮುಖಂಡ ಹಾಗೂ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಚಂದನ್ ಮಿತ್ರ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಾರೆ ಎನ್ನಲಾಗಿದೆ.

    ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಮುಂದಾಳತ್ವದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ವಾರ್ಷಿಕ ಬೃಹತ್ ಸಮಾವೇಶವನ್ನು ಶನಿವಾರ ಆಯೋಜನೆ ಮಾಡಿದ್ದು, ಈ ವೇಳೆ ಹಲವು ಹೊಸ ನಾಯಕರು ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ.

    ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಜೋಡಿಯ ಕುರಿತು ಅಸಮಾಧಾನ ಹೊಂದಿರುವ ಚಂದನ್ ಮಿತ್ರ, ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರದೊಂದಿಗೆ ಬಿಜೆಪಿ ಕೆಲ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿ ಪತ್ರವನ್ನು ಬರೆದಿದ್ದಾರೆ. ಆದರೆ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತರಾ ಎಂಬುವುದರ ಬಗ್ಗೆ ಈವರೆಗೂ ಚಂದನ್ ಮಿತ್ರ ಹಾಗೂ ತೃಣಮೂಲ ಕಾಂಗ್ರೆಸ್ ಯಾವುದೇ ಸ್ಪಷ್ಟನೆ ನೀಡಿಲ್ಲ.

    ಚಂದನ್ ಮಿತ್ರ ಪತ್ರಕರ್ತರಾಗಿ ವೃತ್ತಿಜೀವನ ಆರಂಭಿಸಿದ್ದ ಅವರು ಸದ್ಯ ಪತ್ರಿಕೆಯೊಂದರ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ ವಾರ್ಷಿಕ ಸಮಾರಂಭದ ವೇಳೆ ಹಲವು ನಾಯಕರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. ಒಂದೊಮ್ಮೆ ಚಂದನ್ ಮಿತ್ರ ಅವರು ತೃಣಮೂಲ ಕಾಂಗ್ರೆಸ್‍ಗೆ ಸೇರ್ಪಡೆಯಾದರೆ, 2019 ರ ಲೋಕಾಸಭೆ ಚುನಾವಣೆಗೆ ಸಿದ್ಧತೆಯಲ್ಲಿರುವ ಬಿಜೆಪಿ ಪಕ್ಷಕ್ಕೆ ಭಾರೀ ಹಿನ್ನೆಡೆಯಾಗಲಿದೆ ಎನ್ನಲಾಗಿದೆ. ಅಂದಹಾಗೇ ಚಂದನ್ ಮಿತ್ರ ಅವರು ಬಿಜೆಪಿಗೆ ರಾಜೀನಾಮೆ ನೀಡಲು ಪಕ್ಷದಲ್ಲಿ ಅವರನ್ನು ನಿರ್ಲಕ್ಷ್ಯ ಮಾಡಿರುವುದೇ ಕಾರಣ ಎನ್ನಲಾಗಿದೆ. 2016 ರಲ್ಲಿ ಮಿತ್ರ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಹೂಗ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು.

  • ಮುಸ್ಲಿಂ ಸಮುದಾಯದ ಪುರುಷರಿಗಷ್ಟೇ ಕಾಂಗ್ರೆಸ್ ಸೀಮಿತವೇ: ಮೋದಿ ಪ್ರಶ್ನೆ

    ಮುಸ್ಲಿಂ ಸಮುದಾಯದ ಪುರುಷರಿಗಷ್ಟೇ ಕಾಂಗ್ರೆಸ್ ಸೀಮಿತವೇ: ಮೋದಿ ಪ್ರಶ್ನೆ

    ನವದೆಹಲಿ: ಕಾಂಗ್ರೆಸ್ ಪಕ್ಷ ಕೇವಲ ಮುಸ್ಲಿಂ ಸಮುದಾಯದ ಪುರುಷರಿಗಷ್ಟೇ ಸೀಮಿತವಾಗಿದೇಯಾ ಎಂದು ಪ್ರಶ್ನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಉತ್ತರ ಪ್ರದೇಶದ ಅಜಂಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿದ್ದರೆ ಅದು ಅವರಿಗೆ ಬಿಟ್ಟಿದ್ದು. ಆದರೆ ಕಾಂಗ್ರೆಸ್ ಮುಸ್ಲಿಂ ಪುರುಷರಿಗೆ ಮಾತ್ರ ಸೀಮಿತವಾಗಿದೆಯಾ? ಏಕೆಂದರೆ ತ್ರಿವಳಿ ತಲಾಕ್, ನಿಖಾ ಹಲಾಲ ವಿರುದ್ಧ ಮುಸ್ಲಿಂ ಮಹಿಳೆಯರು ಹೋರಾಟ ನಡೆಸುವ ಸಂದರ್ಭದಲ್ಲಿ ನೀವು ಅವರ ಪರ ನಿಲ್ಲಲಿಲ್ಲ ಎಂದು ಆರೋಪಿಸಿದರು.

    ಇದೇ ವೇಳೆ ಬಿಎಸ್‍ಪಿ ಹಾಗೂ ಸಮಾಜವಾದಿ ಪಕ್ಷದ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿ, ಕೆಲವು ಪಕ್ಷಗಳು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಪಾಲನೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಸರ್ಕಾರ ರೂಪಿಸುತ್ತಿರುವ ಯೋಜನೆಗಳು ಎಲ್ಲರ ಅಭಿವೃದ್ಧಿಗಾಗಿ ಎಂಬ ಅಂಶವನ್ನೇ ಮರೆತಿದ್ದಾರೆ. ಇಂತಹ ಪಕ್ಷಗಳು ಕೇವಲ ತಮ್ಮ ಕುಟುಂಬ, ಆಪ್ತರ ಅಭಿವೃದ್ಧಿಗಾಗಿ ಮಾತ್ರ ಹೆಚ್ಚಿನ ಗಮನಹರಿಸುತ್ತವೆ. ದಲಿತರು ಹಾಗೂ ಹಿಂದುಳಿದವರನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಪರಸ್ಪರ ಆರೋಪ ಮಾಡುತ್ತಿದ್ದ ಅವರು ಇಂದು ಮೋದಿಯನ್ನು ಎದುರಿಸಲು ಒಂದಾಗಿದ್ದರೆ ಎಂದು ವಾಗ್ದಾಳಿ ನಡೆಸಿದರು.

    2019 ರ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಎರಡು ದಿನಗಳ ಹಿಂದೆಯಷ್ಟೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಕಾಂಗ್ರೆಸ್ ಕೇವಲ ಕೋಮುಭಾವನೆಯನ್ನು ಮುಂದಿಟ್ಟು ಚುನಾವಣೆ ಎದುರಿಸಲು ಮುಂದಾಗಿದೆ ಎಂದು ಆರೋಪಿಸಿದ್ದರು.

     

  • ವಿಶ್ವ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಪದಕ ತಂದುಕೊಟ್ಟ ಹಿಮಾ ದಾಸ್ ಚಿರತೆಯ ಓಟದ ವಿಡಿಯೋ ನೋಡಿ

    ವಿಶ್ವ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಪದಕ ತಂದುಕೊಟ್ಟ ಹಿಮಾ ದಾಸ್ ಚಿರತೆಯ ಓಟದ ವಿಡಿಯೋ ನೋಡಿ

    ನವದೆಹಲಿ: ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪರ ಮೊದಲ ಚಿನ್ನದ ಪದಕ ಗೆದ್ದ ಹಿಮಾ ದಾಸ್ ಇತಿಹಾಸ ಸೃಷ್ಟಿಸಿದ್ದಾರೆ.

    ಗುರುವಾರ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದರು. 18 ನೇ ವರ್ಷದ ಹಿಮಾ ದಾಸ್ 400 ಮೀಟರ್ ಓಟವನ್ನು 51.46 ಸೆಕೆಂಡ್ ಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.

    ಸ್ಪರ್ಧೆಯಲ್ಲಿ ಗೆಲುವು ಪಡೆದ ಬಳಿಕ ಮಾತನಾಡಿರುವ ಹಿಮಾ ದಾಸ್, ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿರುವುದು ಸಂತಸ ತಂದಿದೆ. ನನಗೆ ಬೆಂಬಲ ನೀಡಿದ ಎಲ್ಲಾ ಭಾರತೀಯರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ.

    ಹೇಮಾ ದಾಸ್ ಚಿರತೆಯಂತೆ ಓಡಿದ ವಿಡಿಯೋವನ್ನು ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಸದ್ಯ ಹಿಮಾ ದಾಸ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವು ಗಣ್ಯರು ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

    ಅಂದಹಾಗೇ ಹಿಮಾದಾಸ್ ಅವರು ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 51.46 ಸೆಕೆಂಡ್ ಗಳಲ್ಲಿ ಓಟವನ್ನು ಪೂರ್ಣಗೊಳಿಸಿದ್ದು, ಆದರೆ ಕಳೆದ ತಿಂಗಳು ಗುವಾಹತಿಯಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಕೇವಲ 51.13 ಸೆಕೆಂಡ್ ಗಳಲ್ಲಿ 400 ಮೀಟರ್ ದೂರವನ್ನು ಕ್ರಮಿಸಿದ್ದರು.

     

  • ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿಯಿಂದ ಹಿಮಾದಾಸ್ ಗೆ ಅಭಿನಂದನೆ

    ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿಯಿಂದ ಹಿಮಾದಾಸ್ ಗೆ ಅಭಿನಂದನೆ

    ನವದೆಹಲಿ: ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪರ ಮೊದಲ ಚಿನ್ನದ ಪದಕ ಗೆದ್ದ ಭಾರತೀಯ ಮಹಿಳೆ ಹಿಮಾ ದಾಸ್ ಅವರನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

    ಕೋವಿಂದ್ ಮತ್ತು ಪ್ರಧಾನಿ ಮೋದಿ ಅವರು ಹಿಮಾದಾಸ್ ಗೆ ಟ್ವಿಟ್ಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇದು ಅಸ್ಸಾಂ ಮತ್ತು ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದು ಕೋವಿಂದ್ ಹೇಳಿದ್ದಾರೆ. ಇನ್ನು ದಾಸ್ ಗೆಲುವು ಮುಂದಿನ ವರ್ಷಗಳಲ್ಲಿ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

    ಅಷ್ಟೇ ಅಲ್ಲದೇ “ವಿಶ್ವ ಅಂಡರ್ -20 ಚಾಂಪಿಯನ್ ಶಿಪ್ ನಲ್ಲಿ 400 ಮೀಟರ್ ಚಿನ್ನದ ಪದಕ ಗೆದ್ದ ನಮ್ಮ ಸಂವೇದನೆಯ ಸ್ಪ್ರಿಂಟ್ ತಾರೆ ಹಿಮಾ ದಾಸ್ ಗೆ ಅಭಿನಂದನೆಗಳು. ಇದು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮೊಟ್ಟಮೊದಲ ಟ್ರ್ಯಾಕ್ ಚಿನ್ನವಾಗಿದೆ. ಇದು ಅಸ್ಸಾಂ ಮತ್ತು ಭಾರತ ಹೆಮ್ಮೆ ಪಡುವ ಸಂಗತಿಯಾಗಿದೆ. ಈಗ ಹಿಮಾ ಒಲಿಂಪಿಕ್ ವೇದಿಕೆಯ ಬೇಕಾನ್ಸ್ ಆಗಿದ್ದಾರೆ” ಎಂದು ಕೋವಿಂದ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

    “ವಿಶ್ವ ಯು20 ಚಾಂಪಿಯನ್ ಶಿಪ್ ನಲ್ಲಿ 400 ಮೀಟರ್ ನಲ್ಲಿ ಐತಿಹಾಸಿಕ ಚಿನ್ನವನ್ನು ಗೆದ್ದ ಕ್ರೀಡಾಪಟು ಹಿಮಾ ದಾಸ್ ಅವರಿಂದ ಭಾರತವು ಹೆಮ್ಮೆಯಿಂದ ಖುಷಿಪಟ್ಟಿದೆ. ಹಿಮಾ ದಾಸ್ ಅವರ ಈ ಸಾಧನೆಯು ಮುಂದಿನ ವರ್ಷಗಳಲ್ಲಿ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ. ಹಿಮಾ ದಾಸ್ ಗೆ ಅಭಿನಂದನೆಗಳು” ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.

    ಗುರುವಾರ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ 18 ನೇ ವಯಸ್ಸಿನಲ್ಲಿ ಹಿಮಾ ದಾಸ್ ಚಿನ್ನದ ಪದಕ ಗೆದ್ದು ದೇಶದ ಇತಿಹಾಸವನ್ನು ಬರೆದಿದ್ದಾರೆ. 400 ಮೀಟರ್ ಓಟದ ಸ್ಪರ್ಧೆಯಲ್ಲಿ ದಾಸ್ 51.46 ಸೆಕೆಂಡ್ ಗಳಲ್ಲಿ ಓಟವನ್ನು ಪೂರ್ಣಗೊಳಿಸುವ ಮೂಲಕ ಅಗ್ರಸ್ಥಾನಗಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

  • 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನೇ ಬದಲಿಸಬೇಕು- ವೀರಪ್ಪ ಮೊಯ್ಲಿ

    2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನೇ ಬದಲಿಸಬೇಕು- ವೀರಪ್ಪ ಮೊಯ್ಲಿ

    ಬೆಂಗಳೂರು: 2019 ರ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಪ್ರಧಾನಿ ಮೋದಿಯನ್ನೆ ಬದಲಾಯಿಸಬೇಕೆಂಬ ಕೂಗು ಕೇಳಿ ಬರುತ್ತಿದೆ ಎಂದು ಲೋಕಸಭಾ ಸದಸ್ಯ ವೀರಪ್ಪ ಮೊಯ್ಲಿ  ಹೇಳಿದ್ದಾರೆ.

    ಚಿಕ್ಕಬಳ್ಳಾಪುದಲ್ಲಿ ಮಾತನಾಡಿದ ಅವರು ನೋಟು ಅಮಾನ್ಯೀಕರಣದಿಂದ ದೇಶದ ಅರ್ಥಿಕ ಪರಿಸ್ಥಿತಿ ಆಧೋಗತಿಗೆ ತಲುಪಿದೆ. ಎಫ್‍ಡಿಐ ಕಡಿಮೆ ಆಗಿ, ರೂಪಾಯಿ ಮೌಲ್ಯ ಕನಿಷ್ಠ ಮಟ್ಟದಲ್ಲಿದೆ. ಹಾಗಾಗಿ 2019 ರ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಮೋದಿಯನ್ನೆ ಬದಲಾಯಿಸಬೇಕೆಂಬ ಕೂಗು ಕೇಳಿ ಬರುತ್ತಿದೆ ಎಂದು ಹೇಳಿದರು.

    ದೇಶದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿಷ್ಕ್ರೀಯವಾಗಿದೆ. ನೋಟು ಬ್ಯಾನ್ ನಿಂದ ಕಪ್ಪು ಹಣಕ್ಕೆ ಕಡಿವಾಣ ಹಾಕಲಾಗಿಲ್ಲ. ನೋಟು ಅಮಾನ್ಯೀಕರಣ ಕೂಡ ಕಪ್ಪು ಹಣವನ್ನು ಬಿಳಿ ಹಣ ಮಾಡುವ ಯೋಜನೆಯಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

    ಪ್ರಧಾನಿ ನೆರೇಂದ್ರ ಮೋದಿ ನೇತೃತ್ವದ ಸರ್ಕಾರ ಭಾಷಣದ ಸರ್ಕಾರ. ಅದು ಕೇವಲ ಆಶ್ವಾಸನೆಗಳನ್ನು ಕೊಡುವ ಸರ್ಕಾರ ಎಂದು ಕಿಡಿ ಕಾರಿದರು.

    ದೇಶದಲ್ಲಿನ ಕಪ್ಪುಹಣವನ್ನು ಹೊರತರುವ ದೃಷ್ಟಿಯಿಂದ ಮೋದಿ ನೇತೃತ್ವದ ಸರ್ಕಾರ ನೋಟು ಅಮಾನ್ಯೀಕರಣ ಮಾಡಿತು. ಆದರೆ ದೇಶದಲ್ಲಿ ಕಪ್ಪು ಹಣ ಈಗಲೂ ಹೆಚ್ಚಾಗುತ್ತಿದೆ. ಇನ್ನು ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತರುವುದಾಗಿ ಮೋದಿ ಹೇಳಿದ್ದರು. ಆದರೆ ಕಪ್ಪುಹಣ ತರುವ ಬದಲು ಮತ್ತೆ ದೇಶದಲ್ಲಿ ಕಪ್ಪುಹಣ ಹೆಚ್ಚಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

  • ರಾಮನಗರ ರೈತರ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್!

    ರಾಮನಗರ ರೈತರ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್!

    ರಾಮನಗರ: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಮಣ್ಣು ಆರೋಗ್ಯ ಅಭಿಯಾನದ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಮನಗರ ಜಿಲ್ಲೆಯ ಆಯ್ದ ಫಲಾನುಭವಿ ರೈತರ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ರು.

    ಮಾಗಡಿ ತಾಲೂಕಿನ ಚಂದುರಾಯನಪಾಳ್ಯದಲ್ಲಿರುವ ಕೃಷಿ ಕ್ಷೇತ್ರದಲ್ಲಿ ವೀಡಿಯೋ ಕಾನ್ಪರೆನ್ಸ್ ನಡೆಸಲಾಯಿತು. ರೈತರ ಜೊತೆ ಕನ್ನಡದಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮಸ್ಕಾರ, ಹೇಗಿದ್ದೀರಿ? ನಿಮ್ಮ ಊರಿನಲ್ಲಿ ಎಲ್ಲರೂ ಚೆನ್ನಾಗಿದ್ದಾರಾ? ಕೃಷಿ ಹೇಗೆ ಮಾಡ್ತಿದ್ದೀರಿ? ಎಂದು ರೈತರನ್ನು ಉದ್ದೇಶಿಸಿ ಕನ್ನಡದಲ್ಲಿಯೇ ಪ್ರಶ್ನಿಸಿದ್ದಾರೆ. ಇದು ನೆರೆದಿದ್ದ ರೈತರ ಅಚ್ಚರಿಗೂ ಕಾರಣವಾಯಿತು.

    ಮಣ್ಣಿನ ಫಲವತ್ತತೆ, ಮಣ್ಣು ಪರೀಕ್ಷೆ ಹಾಗೂ ಕೃಷಿ ನಡೆಸುವ ರೀತಿ, ಯಾವ ಯಾವ ಬಗೆಯ ಕೃಷಿ ಮಾಡುತ್ತೇವೆ ಅಂತಾ ರೈತರು ಪ್ರಧಾನಿ ಮೋದಿಯವರಿಗೆ ರೈತರು ವಿವರಣೆ ನೀಡಿದರು. 100 ಕ್ಕೂ ಹೆಚ್ಚು ರೈತರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದರು. ಆದರೆ 5 ಜನ ರೈತರ ಜೊತೆ ಮಾತ್ರ ಸಂವಾದ ನಡೆಸಲು ಸಾಧ್ಯವಾಯಿತು.

  • ರೈತರ ಸಾಲ ಮನ್ನಾ: ಕೇಂದ್ರದ ಸಹಕಾರ ಕೇಳಿದ ಸಿಎಂ ಕುಮಾರಸ್ವಾಮಿ

    ರೈತರ ಸಾಲ ಮನ್ನಾ: ಕೇಂದ್ರದ ಸಹಕಾರ ಕೇಳಿದ ಸಿಎಂ ಕುಮಾರಸ್ವಾಮಿ

    ನವದೆಹಲಿ: ಕರ್ನಾಟಕದಲ್ಲಿ 85 ಲಕ್ಷ ಜನ ರೈತರು ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ರೈತರ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರ ಸಿದ್ಧವಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಬೆಂಬಲ ನೀಡಬೇಕು ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

    ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ನೀತಿ ಆಯೋಗದ ಸಭೆಯ ಮಾತನಾಡಿದ ಅವರು, ಕರ್ನಾಟಕದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಬಾರಿಗೆ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಿದ್ದೇನೆ. ಹೊಸ ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸಲಿದೆ. ಈ ಬಗ್ಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಿದ್ದೇವೆ. ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಂಸ್ಥೆಗಳ ಬೆಂಬಲ ರಾಜ್ಯಕ್ಕೆ ಬೇಕು. ರಾಜ್ಯದಲ್ಲಿ 85 ಲಕ್ಷ ಮಂದಿ ರೈತರು ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ಬರಗಾಲದ ಕಾರಣದಿಂದ ರೈತರು ಮತ್ತಷ್ಟು ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ರಾಜ್ಯಗಳಿಗೆ ಕೇಂದ್ರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

    ಇದೇ ವೇಳೆ ನಾವು ಹಲವು ರಾಜಕೀಯ ಸಿದ್ಧಾಂತಗಳನ್ನು ಗೌರವಿಸುತ್ತೇವೆ ಎಂದು ಹೇಳಿದ ಎಚ್‍ಡಿಕೆ, ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರಕಾರದ ಜೊತೆ ಕೈ ಜೋಡಿಸುತ್ತೇವೆ. ಕೇಂದ್ರ ಸರ್ಕಾರಕ್ಕೆ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡುತ್ತೇವೆ. ಕೃಷಿ ವಲಯದಲ್ಲಿ ದೇಶ ಸಮಸ್ಯೆ ಎದುರಿಸುತ್ತಿದ್ದು, ಹಳ್ಳಿಗಾಡಿನಲ್ಲಿ 70% ರಷ್ಟು ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಕೃಷಿ ಕ್ಷೇತ್ರದ ಬೆಳವಣಿಗೆ ರೈತರಿಗೆ ಲಾಭದಾಯಕ ಆದಾಯ ಸಿಗುತ್ತಿಲ್ಲ. ಗ್ರಾಮೀಣ ಭಾಗದ ಋಣಭಾರ ಸರ್ಕಾರದ ಮೇಲಿದೆ. ಈ ಬಿಕ್ಕಟ್ಟು ನಿಭಾಯಿಸಲು ಒಟ್ಟಾಗಿ ಕೆಲಸ ಮಾಡಬೇಕಿದೆ. ರೈತರ ಋಣಭಾರ ತಗ್ಗಿಸಲು ಗಣನೀಯ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಸಿದ್ಧವಿದೆ. ರಾಜ್ಯ ಸರ್ಕಾರಕ್ಕೆ ಪ್ರಯತ್ನಕ್ಕೆ ಕೇಂದ್ರ ಸಹಕಾರ ನೀಡಬೇಕು ಎಂದರು.

    ಕಳೆದ 16 ವರ್ಷಗಳಲ್ಲಿ 13 ವರ್ಷ ಬರಗಾಲ ಎದುರಿಸಿದ್ದೇವೆ. ಪ್ರಾಕೃತಿಕ ವಿಕೋಪಗಳನ್ನು ಗಮನದಲ್ಲಿರಿಸಿ ನೀತಿ ರಚಿಸಬೇಕಿದೆ. ಜಲ ಸಂರಕ್ಷರಣೆ ಉತ್ತೇಜಿಸುವ ಕೆಲಸ ನೀತಿ ಆಯೋಗ ಮಾಡಬೇಕಿದೆ. ರಾಜ್ಯದಲ್ಲಿ ನೀರಿನ ಸಮಸ್ಯೆ ನೀಗಿಸಲು ಕೆರೆ ಸಂಜೀವಿನಿ ಯೋಜನೆ ಹಮ್ಮಿಕೊಂಡಿದ್ದೇವೆ. ಜಲ ದಶಕ ಎಂದು ಪರಿಗಣಿಸಿ ಸಂರಕ್ಷಣೆಗೆ ಪಣತೊಡಬೇಕಿದೆ. ಕೇಂದ್ರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದೇವೆ. ಹಿಂದುಳಿದ ಜಿಲ್ಲೆಗಳಿಗೆ ನೂರು ಕೋಟಿ ಕೇಂದ್ರದ ಅನುದಾನ ಅಗತ್ಯವಿದ್ದು, ಎನ್‍ಡಿಆರ್ ಎಫ್ ಅನುದಾನದಲ್ಲಿ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಬೇಕಿದೆ. ಪ್ರಾಕೃತಿಕ ವಿಕೋಪದಿಂದ ನಾಲ್ಕು ವರ್ಷದಲ್ಲಿ ರಾಜ್ಯಕ್ಕೆ 70 ಸಾವಿರಕೋಟಿ ನಷ್ಟ ಉಂಟಾಗಿದ್ದು, ಇಪ್ಪತ್ತು ಸಾವಿರ ಕೋಟಿ ಪರಿಹಾರ ನೀಡುವ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಕೇವಲ 5 ಸಾವಿರ ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ ಎಂದು ವಿವರಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಾಲ್ಕನೇ ಬಾರಿಗೆ ನಡೆಯುತ್ತಿರುವ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ಹಾಗೂ ಕೇಂದ್ರ ಸಚಿವರು ಮತ್ತು ತಜ್ಞರು ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಬಾರಿಯ ಸಭೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಿತು. ಅಲ್ಲದೇ ಕೇಂದ್ರ ಸರ್ಕಾರದ ಪ್ರಮುಖ ಮಹಾತ್ವಾಕಾಂಕ್ಷೆಯ ಯೋಜನೆಗಳಾದ ಆಯುಷ್ಮಾನ್ ಭಾರತ, ರಾಷ್ಟ್ರೀಯ ಪೋಷಕಾಂಶ ಅಭಿಯಾನ, ಇಂದ್ರಧನುಷ್‍ನಂತಹ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಯಿತು. ಕರ್ನಾಟಕದಿಂದ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಹಾಗೂ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಭಾಗಿದ್ದಾರೆ.

    ಅರುಣ್ ಜೇಟ್ಲಿ ಹಿಂದೆ ಹೇಳಿದ್ದೇನು?
    ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಸಹಕಾರಿ ಬ್ಯಾಂಕಗಳಲ್ಲಿನ ಸಾಲಮನ್ನಾ ಮಾಡಿ ರಾಷ್ಟ್ರೀಕೃತ ಬ್ಯಾಂಕಗಳ ಸಾಲಮನ್ನಾ ಮಾಡಲು ಕೇಂದ್ರಕ್ಕೆ ಕೋರಿದ್ದರು. ಆದರೆ ಈ ವೇಳೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯ ಸರ್ಕಾರಗಳ ಬೇಡಿಕೆಗೆ ಕುರಿತು ಪ್ರತಿಕ್ರಿಯೆ ನೀಡಿ, ಸಾಲಮನ್ನಾ ಮಾಡಬೇಕೋ? ಬೇಡವೋ ಎನ್ನುವುದು ರಾಜ್ಯ ಸರ್ಕಾರದ ತೀರ್ಮಾನಕ್ಕೆ ಬಿಟ್ಟ ವಿಚಾರ. ಕೇಂದ್ರ ಸರ್ಕಾರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೆ ಹಣಕಾಸಿನ ನೆರವು ನೀಡುವುದಿಲ್ಲ. ಈ ವಿಚಾರವನ್ನು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇವೆ, ಇದನ್ನು ಬಿಟ್ಟು ಹೊಸದಾಗಿ ಏನು ಹೇಳುವುದಿಲ್ಲ ಎಂದು 2017 ಜೂನ್ ಮೂರನೇ ವಾರದಲ್ಲಿ ತಿಳಿಸಿದ್ದರು.

    ಆರ್ ಬಿಐ ಏನು ಹೇಳುತ್ತೆ?
    ರೈತರ ಸಾಲಮನ್ನಾ ಮಾಡಿದರೆ ಹಣಕಾಸು ಸ್ಥಿತಿ ಬಿಗಡಾಯಿಸಬಹುದು. ದೇಶದ ಆರ್ಥಿಕ ಸ್ಥಿತಿ ಕೈ ತಪ್ಪಿ ಹೋಗಬಹುದು. ಈ ಯೋಜನೆಗಳನ್ನು ಪ್ರಕಟಿಸುವ ಮೊದಲು 100 ಬಾರಿ ಯೋಚಿಸಬೇಕು ಎಂದು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಆರ್ ಬಿಐ ಗವರ್ನರ್ ಉರ್ಜಿತ್ ಪಟೇಲ್ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು.

    https://www.facebook.com/CMofKarnataka/photos/pcb.1711066348941822/1711061452275645/?type=3&theater

  • ಮಾಧ್ಯಮಗಳ ವಿರುದ್ಧ ಮಾಜಿ ಕೈ ಶಾಸಕ ವಸಂತ ಬಂಗೇರ ಕಿಡಿ

    ಮಾಧ್ಯಮಗಳ ವಿರುದ್ಧ ಮಾಜಿ ಕೈ ಶಾಸಕ ವಸಂತ ಬಂಗೇರ ಕಿಡಿ

    ಮಂಗಳೂರು: ಸಮಾಜವನ್ನು ತಿದ್ದುವಂತಹ ಮಾಧ್ಯಮಗಳು ಮೋದಿ ಪರವಾಗಿ ಕೆಲಸ ಮಾಡುತ್ತಿವೆ. ಈ ಮೂಲಕ ತಮ್ಮನ್ನು ಮೋದಿಗೆ ಮಾರಿಕೊಂಡಿದ್ದಾರೆ. ಇದರಿಂದ ಈ ದೇಶವನ್ನು ಹದೋಗತಿಗೆ ಕೊಂಡ್ಯೊತ್ತೀರಿ. ಮೋದಿ ಇದ್ದರೆ ಈ ದೇಶ ಸರ್ವನಾಶವಾಗುತ್ತದೆ ಅಂತ ಮಾಜಿ ಶಾಸಕ ವಸಂತ ಬಂಗೇರ ಕಿಡಿಕಾರಿದ್ದಾರೆ.

    ಈ ಪ್ರಜಾಪ್ರಭುತ್ವವನ್ನು ಕಗ್ಗೋಲೆ ಯಾರು ಮಾಡುತ್ತಾರೆ ಅವರು ಬದುಕಬಾರದು. ಪತ್ರಿಕೆ ಮತ್ತು ಟಿವಿಯವರು ಕೂಡ ಬದುಕಬಾರದು. ನಾನು ಪತ್ರಿಕೆಗೆ ಮತ್ತು ಟಿವಿಗೆ ಗೌರವ ಕೊಡುವುದಿಲ್ಲ. ನಾನು ಗೌರವ ಕೊಟ್ಟರೆ ನೀಚನಾಗುತ್ತೇನೆ ಎಂದು ಕೋಪದಿಂದ ಹೇಳಿದ್ದಾರೆ. ಇದನ್ನೂ ಓದಿ: ಕೆಲಸ ಮಾಡದಿದ್ರೆ ಜಿಲ್ಲೆಯವನಾದ್ರೂ ಸುಮ್ಮನೆ ಬಿಡೋದಿಲ್ಲ- ಅಧಿಕಾರಿಗೆ ಮಾಜಿ ಶಾಸಕ ಧಮ್ಕಿ

    ಗುರುವಾರ ಚಾರ್ಮಾಡಿ ಘಾಟ್ ರಸ್ತೆ ವೀಕ್ಷಣೆಗೆ ತೆರಳಿ ತನ್ನ ಬೆಂಬಲಿಗರ ಎದುರಲ್ಲಿಯೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಮಾಧ್ಯಮಗಳ ಮೇಲೂ ದರ್ಪ ತೋರಿಸಿ ಮಾಧ್ಯಮಗಳ ವಿರುದ್ಧವೂ ಕೆಂಡಾಮಂಡಲರಾಗಿದ್ದಾರೆ.

    ವಸಂತ ಬಂಗೇರ ಅಧಿಕಾರದಲ್ಲಿ ಇರುವಾಗಲೂ ದರ್ಪದಿಂದಲೇ ಕುಖ್ಯಾತಿ ಪಡೆದಿದ್ದು, ಸೋಲಿನ ಬಳಿಕವೂ ದರ್ಪ ಮುಂದುವರಿಸಿರೋದು ಚರ್ಚೆಗೆ ಗ್ರಾಸವಾಗಿದೆ.

  • ಮಗನಿಗೆ ಚಾಲೆಂಜ್, ಈಗ ಅಪ್ಪನ ಕಸರತ್ತು!

    ಮಗನಿಗೆ ಚಾಲೆಂಜ್, ಈಗ ಅಪ್ಪನ ಕಸರತ್ತು!

    ಬೆಂಗಳೂರು: ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಫಿಟ್ ನೆಸ್ ಚಾಲೆಂಜ್ ಹಾಕಿದ್ದರು. ಆದರೆ ಈಗ ಮಗನಿಗೆ ಚಾಲೆಂಜ್ ಹಾಕಿದ್ದರಿಂದ ಈಗ ಅಪ್ಪ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ನ ವರಿಷ್ಠ ಅಧಿಕಾರಿ ಎಚ್.ಡಿ. ದೇವೇಗೌಡರು ಕಸರತ್ತು ಮಾಡುತ್ತಿದ್ದಾರೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದು ಅಧಿಕಾರಕ್ಕೆ ಸಹ ಬಂದಾಗಿದೆ. ಈಗ ಮತ್ತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ `ಆರೋಗ್ಯ’ದ ಅಖಾಡಕ್ಕಿಳಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ದೇವೇಗೌಡರು ಯೋಗಾಭ್ಯಾಸ ನಿಲ್ಲಿಸಿದ್ದರು. ಆದರೆ ಹೆಚ್‍ಡಿಕೆಗೆ ಮೋದಿ ಸವಾಲು ಹಾಕುತ್ತಿದ್ದಂತೆ ಮತ್ತೆ ಯೋಗಾಭ್ಯಾಸ ಶುರು ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಸವಾಲಿಗೆ ಟಾಂಗ್ ನೀಡಿ ಉತ್ತರ ಕೊಟ್ಟ ಎಚ್‍ಡಿಕೆ

    ಜೂನ್ 21ರ ಯೋಗ ದಿನದಂದು ದೇವೇಗೌಡರಿಂದ ಮೆಗಾ ಯೋಗಾ ಶೋ ನಡೆಯಲಿದೆ. ಶ್ರೀಜಯ ಸರಸ್ವತಿ ಯೋಗಾ ಕೇಂದ್ರದಿಂದ ಯೋಗ ಗುರು ಕಾರ್ತಿಕ್ ಪಟೇಲ್ ರಿಂದ ದೇವೇಗೌಡರ ಯೋಗ ಶೋ ಆಯೋಜನೆಗೊಂಡಿದೆ. ಪ್ರತಿದಿನ ಬೆಳಗ್ಗೆ 7.30 ರಿಂದ 8.30ರ ತನಕ ದೇವೇಗೌಡರು ಯೋಗಾಭ್ಯಾಸ ಮಾಡುತ್ತಿದ್ದಾರೆ.

    ಏನಿದು ಫಿಟ್ ನೆಸ್ ಚಾಲೆಂಜ್:
    ಕೇಂದ್ರ ಯುವಜನ ಮತ್ತು ಮತ್ತು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಮೇ 22ರಂದು,“ನಾನು ಫಿಟ್ ಆದ್ರೆ ದೇಶ ಫಿಟ್ (#HumFitTohIndiaFit) ನೀವು ನಿಮ್ಮ ಫಿಟ್ನೆಸ್ ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿ” ಎಂದು ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಅವರಿಗೆ ಫಿಟ್ ನೆಸ್ ಚಾಲೆಂಜ್ ಹಾಕಿ ಟ್ವೀಟ್ ಮಾಡಿದ್ದರು.

    ವಿರಾಟ್ ಕೊಹ್ಲಿ ಸವಾಲು ಸ್ವೀಕರಿಸಿದ ನಂತರ ಅದನ್ನು ಪ್ರಧಾನಿ ಮೋದಿಯವರಿಗೆ ಸವಾಲು ಹಾಕಿದ್ದರು. ನಂತರ ಕೊಹ್ಲಿಯವರ ಸವಾಲನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಫಿಟ್ನೆಸ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಸವಾಲನ್ನು ಸ್ವೀಕರಿಸಿದ ಮೋದಿಯವರು ಸಿಎಂ ಕುಮಾರಸ್ವಾಮಿ ಹಾಗೂ ಅಂತರಾಷ್ಟ್ರೀಯ ಟೆಬಲ್ ಟೆನ್ನಿಸ್ ಆಟಗಾರ್ತಿ ಮಣಿಕ ಬಾತ್ರಾ ಅವರಿಗೆ ಚಾಲೆಂಜ್ ನೀಡಿದ್ದರು.

    ಮೋದಿಯವರು ತಮ್ಮ ಫಿಟ್ನೆಸ್ ವಿಡಿಯೋ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿದ್ದರು. ಮೋದಿ ವಿಡಿಯೋ ಹಾಕಿ ಅದ್ದಕ್ಕೆ, “ಇದು ನನ್ನ ಬೆಳಗ್ಗಿನ ವ್ಯಾಯಾಮಗಳು. ಯೋಗ ಹೊರತಾಗಿ ಪಂಚಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಹಾಗೂ ಆಕಾಶದಿಂದ ಪ್ರೇರಣೆಗೊಂಡು ನಾನು ಟ್ರ್ಯಾಕ್‍ಗಳ ಮೇಲೆ ನಡೆಯುತ್ತೇನೆ. ಇದರ ಜೊತೆ ನಾನು ಉಸಿರಾಟದ ವ್ಯಾಯಾಮವನ್ನು ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದರು.

    ವಿಡಿಯೋ ಅಪ್ಲೋಡ್ ಮಾಡಿದ ನಂತರ ಮೋದಿ ಅವರು ಕರ್ನಾಟಕ ಮುಖ್ಯಮಂತ್ರಿ ಶ್ರೀ ಹೆಚ್.ಡಿ ಕುಮಾರಸ್ವಾಮಿ ಹಾಗೂ ಭಾರತದ ಹೆಮ್ಮೆಯ ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಅವರಿಗೆ ಈ ಚಾಲೆಂಜ್ ನೀಡಿದ್ದರು.

  • ಪೇಜಾವರ ಶ್ರೀಗಳು ಮೋದಿ ಸರ್ಕಾರವನ್ನ ಟೀಕಿಸಿಲ್ಲ: ಸೊಗಡು ಶಿವಣ್ಣ

    ಪೇಜಾವರ ಶ್ರೀಗಳು ಮೋದಿ ಸರ್ಕಾರವನ್ನ ಟೀಕಿಸಿಲ್ಲ: ಸೊಗಡು ಶಿವಣ್ಣ

    ತುಮಕೂರು: ಪೇಜಾವರ ಶ್ರೀಗಳು ಮೋದಿ ಸರ್ಕಾರ ಕುರಿತು ಸಲಹೆ ನೀಡಿದ್ದಾರೆಯೇ ಹೊರತು ಟೀಕೆ ಮಾಡಿಲ್ಲ ಅಂತಾ ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.

    ಕೇಂದ್ರ ಸರ್ಕಾರ ಪ್ರಣಾಳಿಕೆಯಲ್ಲಿ ಹೇಳಿದ ಕಾರ್ಯಕ್ರಮಗಳು ಬೇಗನೇ ಜಾರಿ ಮಾಡುವಂತೆ ಪೇಜಾವರ ಶ್ರೀಗಳು ಸಲಹೆ ನೀಡಿದ್ದಾರೆ. ಶ್ರೀಗಳ ಸಲಹೆಯನ್ನು ಟೀಕೆ ರೂಪದಲ್ಲಿ ಬಿಂಬಿಸಲಾಗುತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಮೋದಿಯವರ ಅಚ್ಛೇ ದಿನ್ ಇನ್ನೂ ಪರಿಣಾಮಕಾರಿ ಆಗಬೇಕಿದೆ: ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ

    ಪರಮ ಪೂಜ್ಯರ ಬಗ್ಗೆ ಮೋದಿಯವರಿಗೆ ಎಲ್ಲರಿಗಿಂತ ಹೆಚ್ಚಿನ ಗೌರವ ಇದೆ. ದೇಶ, ಧರ್ಮದ ಬಗ್ಗೆ, ಅನಾದಿಕಾಲದಿಂದ ಇದ್ದ ನಂಬಿಕೆ ಉಳಿಸಿ ಬೆಳೆಸಿಕೊಂಡು ಬಂದ ಮಹಾನುಭಾವರು ಪೇಜಾವರ ಶ್ರೀಗಳು, ಅಂಥವರ ಸಲಹೆಯನ್ನೇ ಟೀಕೆ ಎಂದು ಭ್ರಮಿಸಿ ತರಾವರಿ ಹೇಳಿಕೆ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ರು.

    ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶ್ರೀಮಠದ ಒಡನಾಡಿ ಕೆ.ಎಸ್.ಈಶ್ವರಪ್ಪನವರು ಕೇಂದ್ರ ಸರ್ಕಾರದ ಯೋಜನೆ ಕುರಿತು ಶ್ರೀಗಳಿಗೆ ಮಾಹಿತಿ ನೀಡಬೇಕಿತ್ತು. ಈ ಇಬ್ಬರೂ ಮಾಹಿತಿ ನೀಡುವ ಕೆಲಸ ಮಾಡಿಲ್ಲ. ಹಾಗಾಗಿ ಶ್ರೀಗಳು ಮಾಹಿತಿ ಕೊರತೆಯಿಂದ ಈ ಹೇಳಿಕೆ ನೀಡಿದ್ದಾರೆ ಎಂದು ಸೊಗಡು ಸಮರ್ಥಿಸಿಕೊಂಡಿದ್ದಾರೆ.

    ಈ ಹಿಂದೆ ರಾಯಚೂರಿನಲ್ಲಿ ಮಾತನಾಡಿದ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಮೋದಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಆರ್ಥಿಕತೆ ಸುಧಾರಣೆಯನ್ನು ಹೆಚ್ಚು ಮಾಡುವುದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಮಾಡಿದ್ದಾರೆ. ಅಲ್ಲದೇ ಶ್ರೀಮಂತರಿಗೂ ಭ್ರಷ್ಟಾಚಾರ ಮಾಡಲಾಗದಂತಹ ಸನ್ನಿವೇಶವನ್ನು ನಿರ್ಮಿಸಿದ್ದಾರೆ. ಆದರೆ ಅಚ್ಚೆದಿನ್ ಇನ್ನೂ ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ. ಈ ಕಾರ್ಯವನ್ನು ಬೇಗ ಮಾಡಲಿ ಎಂಬ ಉದ್ದೇಶದಿಂದ ಹೇಳಿದ್ದಾಗಿ ತಿಳಿಸಿದ್ದರು.