Tag: price hike

  • ಹಿಟ್ಲರ್‌ಗಿಂತ ಮೋದಿ ಕೆಟ್ಟದಾಗಿ ವರ್ತಿಸ್ತಿದ್ದಾರೆ, ಸಹಿಸಿಕೊಳ್ಳಲು ಸಾಧ್ಯವಿಲ್ಲ: ದಿನೇಶ್ ಗುಂಡೂರಾವ್

    ಹಿಟ್ಲರ್‌ಗಿಂತ ಮೋದಿ ಕೆಟ್ಟದಾಗಿ ವರ್ತಿಸ್ತಿದ್ದಾರೆ, ಸಹಿಸಿಕೊಳ್ಳಲು ಸಾಧ್ಯವಿಲ್ಲ: ದಿನೇಶ್ ಗುಂಡೂರಾವ್

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್‌ಗಿಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಹೆಚ್ಚು ದಿನ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

    ಪೆಟ್ರೋಲ್, ಗ್ಯಾಸ್ ದರ ಹೆಚ್ಚಳ ಖಂಡಿಸಿ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಕಾಂಗ್ರೆಸ್ ನಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ದಬ್ಬಾಳಿಕೆಯ ಮೂಲಕ ದೇಶ ಆಳುತ್ತಿದ್ದಾರೆ. ಪೆಟ್ರೋಲ್ ಗೆ ಆಗಿರುವ ಬೆಲೆ ಏರಿಕೆಯಲ್ಲಿ 33 ರೂ. ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ವಿದೇಶದಲ್ಲಿ ಬೆಲೆ ಕಡಿಮೆ ಆಗಿದ್ದರೂ ದುಡ್ಡು ಮಾಡಿಕೊಳ್ಳಲು ಕೇಂದ್ರ ಸರ್ಕಾರ ತೆರಿಗೆ ಜಾಸ್ತಿ ಮಾಡಿದೆ. ಎಲ್ಲಾ ಬೆಲೆ ಹೆಚ್ಚು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಪ್ರಧಾನಿ ಮೋದಿ ಹಿಟ್ಲರ್ ಗಿಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಹೆಚ್ಚು ದಿನ ಸಹಿಸಿಕೊಳ್ಳಲು ಆಗುವುದಿಲ್ಲ. ದೇಶ ತಪ್ಪು ದಾರಿಯಲ್ಲಿ ಹೋಗುತ್ತಿದೆ. ಒಗ್ಗೂಡಿಸುವುದು ಕಾಂಗ್ರೆಸ್ ಕಾರ್ಯಕರ್ತರ ಜವಾಬ್ದಾರಿಯಾಗಿದೆ. ಎಲ್ಲರೂ ಸೇರಿ ಒಟ್ಟಾಗಿ ಜನರಿಗೋಸ್ಕರ ಹೋರಾಟ ಮಾಡೋಣ ಎಂದು ಕರೆ ನೀಡಿದರು.

    ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಲಜ್ಜೆಗೆಟ್ಟ ಸರ್ಕಾರ ಇದು. ಪೆಟ್ರೋಲ್, ಡಿಸೇಲ್ ಹಾಕಿಸಿಕೊಳ್ಳಲು ದುಡ್ಡಿಲ್ಲ. ಡಿಸಿಎಂ ಲಕ್ಷ್ಮಣ್ ಸವದಿ ಡಿಸೇಲ್ ಕಳ್ಳತನ ಮಾಡುತ್ತಿದ್ದಾರೆ. ಬಿಎಂಟಿಸಿ ಡಿಪೋದಿಂದ ಕಾರಿಗೆ ಡಿಸೇಲ್ ಹಾಕಿಸುತ್ತಿದ್ದಾರೆ. ಯಾಕಂದ್ರೆ ಡಿಸೇಲ್, ಪೆಟ್ರೋಲ್ ಹಾಕಿಸಿಕೊಳ್ಳಲು ದುಡ್ಡಿಲ್ಲ. ದಿನೇ ದಿನೇ ತೈಲ ಬೆಲೆ ಏರಿಸುತ್ತಿದ್ದಾರೆ. ಇದೊಂದು ಲಜ್ಜೆಗೆಟ್ಟ ಸರ್ಕಾರ ಎಂದು ಡಿಸಿಎಂ ಲಕ್ಷ್ಮಣ್ ಸವದಿ ವಿರುದ್ಧ ಹರಿಹಾಯ್ದರು.

    ಇಂತಹ ಲಜ್ಜೆಗೆಟ್ಟ ಸರ್ಕಾರವನ್ನು ನಾವು ನೋಡೇ ಇರಲಿಲ್ಲ. ಮೋದಿ ಇಷ್ಟು ದೊಡ್ಡ ಗಡ್ಡ ಬಿಟ್ಟಿರೋದು ರವೀಂದ್ರನಾಥ್ ಟ್ಯಾಗೋರ್ ತರ ಕಾಣೋಕೆ. ಬಂಗಾಳದಲ್ಲಿ ಚುನಾವಣೆ ಇದೆ. ಹೀಗಾಗಿ ಗಡ್ಡ ಬಿಡುತ್ತಿದ್ದಾರೆ. ಬಹಳ ಸ್ಟ್ರಾಂಗ್, 56 ಇಂಜಿನ ಎದೆ ಇರೋ ಮೋದಿ ಅಂತಾರೆ. ಹೌದು 56 ಇಂಚಿನ ಎದೆ ಇದ್ರೆನೆ ರೈತರಿಗೆ ಹೊಡಿಯೊಕಾಗೋದು, ದರ ಜಾಸ್ತಿ ಮಾಡೋಕಾಗೋದು, ಯುವಕರಿಗೆ ಹೊಡಿಯೋಕಾಗೋದು ಎಂದು ಆಕ್ರೊಶ ವ್ಯಕ್ತಪಡಿಸಿದರು.

    ಪ್ರತಿಭಟನಾ ಸ್ಥಳದಲ್ಲಿಯೇ ಕೈ ಕಾರ್ಯಕರ್ತರು ಅಡುಗೆ ಮಾಡಿ ಅಣಕು ಪ್ರದರ್ಶನ ಮಾಡಿದರು. ಪೂರಿ, ಪಲಾವ್ ಮಾಡಿ ಗಮನ ಸೆಳೆದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಆಗಮಿಸಿ, ಕಾಂಗ್ರೆಸ್ ನಾಯಕರ ಮನವಿ ಸ್ಬೀಕರಿಸಿದರು.

  • ಅಗತ್ಯ ವಸ್ತುಗಳ ದರ ಗಗನಕ್ಕೆ- ಪ್ರಧಾನಿ ಮಧ್ಯ ಪ್ರವೇಶಕ್ಕೆ ದೀದಿ ಒತ್ತಾಯ

    ಅಗತ್ಯ ವಸ್ತುಗಳ ದರ ಗಗನಕ್ಕೆ- ಪ್ರಧಾನಿ ಮಧ್ಯ ಪ್ರವೇಶಕ್ಕೆ ದೀದಿ ಒತ್ತಾಯ

    ಕೋಲ್ಕತ್ತಾ: ಅಕ್ರಮ ದಾಸ್ತಾನು ನಿಯಂತ್ರಿಸಿ, ಸರಬರಾಜು ಹೆಚ್ಚಿಸಿ ಹಾಗೂ ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆಯನ್ನು ತಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ತುರ್ತು ಮಧ್ಯ ಪ್ರವೇಶಿಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

    ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಅವರು, ಆಲೂಗಡ್ಡೆ ಹಾಗೂ ಈರುಳ್ಳಿ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳ ಬೆಲೆಯನ್ನು ನಿಯಂತ್ರಿಸುವ ರಾಜ್ಯಗಳ ಅಧಿಕಾರವನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಈ ವಿಚಾರದ ಗಂಭೀರತೆಯನ್ನು ಅರಿತು ನಾನು ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಮನವಿ ಮಾಡುತ್ತಿದ್ದೇನೆ. ಅಕ್ರಮ ದಾಸ್ತಾನು ನಿಯಂತ್ರಿಸಿ, ಸರಬರಾಜು ಹೆಚ್ಚಿಸಿ ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಹಬದಿಗೆ ತರಬೇಕು. ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ನಿಯಂತ್ರಿಸಿ ಇಲ್ಲವೇ ಕೃಷಿ ಉತ್ಪನ್ನಗಳ ಉತ್ಪಾದನೆ, ಪೂರೈಕೆ, ವಿತರಣೆ ಹಾಗೂ ಮಾರಾಟ ಮಾಡುವ ರಾಜ್ಯ ಸರ್ಕಾರಗಳ ಹಕ್ಕನ್ನು ಮರು ಸ್ಥಾಪಿಸಿ ಎಂದು ಆಗ್ರಹಿಸಿದ್ದಾರೆ. ಒಟ್ಟು ನಾಲ್ಕು ಪುಟಗಳ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಮತಾ ಬ್ಯಾನರ್ಜಿ ಬರೆದಿದ್ದಾರೆ.

    ಕೃಷಿ ಸರಕುಗಳ ಉತ್ಪಾದನೆ, ಪೂರೈಕೆ, ವಿತರಣೆ ಹಾಗೂ ಮಾರಾಟದ ಮೇಲೆ ತಮ್ಮ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ರೂಪಿಸಲು ರಾಜ್ಯಗಳಿಗೆ ಅನುಮತಿ ನೀಡಿ ಎಂದು ಅವರು ಒತ್ತಾಯಿಸಿದ್ದಾರೆ. ಆಲೂಗಡ್ಡೆ ಹಾಗೂ ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯುವ ಶಕ್ತಿ ರಾಜ್ಯ ಸರ್ಕಾರಗಳಿಗೆ ಇಲ್ಲವಾಗಿದೆ. ಇದರಿಂದಾಗಿ ಸಾಮಾನ್ಯ ಜನರು ನಿರಂತರ ನೋವು ಅನುಭವಿಸುತ್ತಿದ್ದು, ನಾವು ಮೂಕ ಪ್ರೇಕ್ಷಕರಾಗಿ ಕುಳಿತುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.

    ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಖಾದ್ಯ ತೈಲಗಳು, ಈರುಳ್ಳಿ, ಆಲೂಗಡ್ಡೆ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ ಎಂದು ಮಮತಾ ಬ್ಯಾನರ್ಜಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

  • ತಿಂಗಳಿಗೆ 160 ರೂ.ಗೆ 16 ಜಿಬಿ ಡೇಟಾ ಸಿಗುತ್ತಿರುವುದು ದುರಂತ – ಏರ್‌ಟೆಲ್‌ ಮುಖ್ಯಸ್ಥ

    ತಿಂಗಳಿಗೆ 160 ರೂ.ಗೆ 16 ಜಿಬಿ ಡೇಟಾ ಸಿಗುತ್ತಿರುವುದು ದುರಂತ – ಏರ್‌ಟೆಲ್‌ ಮುಖ್ಯಸ್ಥ

    ನವದೆಹಲಿ: ವಿಶ್ವದಲ್ಲೇ ಕಡಿಮೆ ಬೆಲೆಗೆ ಸಿಗುತ್ತಿದ್ದ ಡೇಟಾ ಮುಂದಿನ ದಿನಗಳಲ್ಲಿ ದುಬಾರಿಯಾಗಲಿದೆ ಎಂಬುದನ್ನು ಏರ್‌ಟೆಲ್‌ ಮುಖ್ಯಸ್ಥ ಸುನಿಲ್‌ ಭಾರ್ತಿ ಮಿತ್ತಲ್‌ ಸೂಚ್ಯವಾಗಿ ಹೇಳಿದ್ದಾರೆ.

    ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಿಂಗಳಿಗೆ 160 ರೂ. ದರದಲ್ಲಿ 16 ಜಿಬಿ ಡೇಟಾ ಲಭ್ಯವಾಗುತ್ತಿರುವುದು ದುರಂತ ಎಂದು ನೇರವಾಗಿಯೇ ಹೇಳಿದ್ದಾರೆ.

    ಈಗ ನೀವು ಪೂರ್ಣವಾಗಿ 1.6 ಜಿಬಿ ಡೇಟಾವನ್ನು ಬಳಕೆ ಮಾಡುತ್ತಿರೋ ಇಲ್ಲವೋ ಗೊತ್ತಿಲ್ಲ. ಆದರೆ ದರದ ಲೆಕ್ಕಾಚಾರ ಹಾಕಿದರೆ ನೀವು ಹೆಚ್ಚು ದರ ಪಾವತಿಸಲು ಸಿದ್ಧರಾಗಿ. ನಾವು ಅಮೆರಿಕ ಯುರೋಪ್‌ನಲ್ಲಿ ಇರುವಂತೆ 50-60 ಅಮೆರಿಕ ಡಾಲರ್‌ ಏರಿಕೆ ಆಗಬೇಕೆಂದು ಹೇಳುತ್ತಿಲ್ಲ. ಆದರೆ ತಿಂಗಳಿಗೆ 2 ಡಾಲರ್‌ ಬೆಲೆಯಲ್ಲಿ 16 ಜಿಬಿ ನೀಡುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

     

    ಓರ್ವ ಗ್ರಾಹಕನಿಂದ ಕಂಪನಿಗೆ ಸಿಗುವ ಸರಾಸರಿ ಆದಾಯವನ್ನು ಎಆರ್‌ಪಿಯು ಎಂದು ಕರೆಯಲಾಗುತ್ತದೆ. ನಮಗೆ ಎಆರ್‌ಪಿಯುನಿಂದ 300 ರೂ. ಬಂದರೆ ಸಹಾಯವಾಗುತ್ತದೆ. ಟೆಲಿಕಾಂ ಒಂದೇ ಉದ್ಯಮವಲ್ಲ. ಡಿಜಿಟಲ್‌ ಕ್ಷೇತ್ರದಲ್ಲೂ ಹೂಡಿಕೆ ಮಾಡಬೇಕು. ಕಂಪನಿ ಉಳಿಯಬೇಕಾದರೆ ಡೇಟಾ ಬೆಲೆ ಏರಿಕೆ ಅನಿವಾರ್ಯ ಎಂದು ಎಂದು ಹೇಳಿದರು.

    ಜೂನ್‌ 30ಕ್ಕೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ ಏರ್‌ಟೆಲ್‌ 157 ರೂ. ಎಆರ್‌ಪಿಯು ಗಳಿಸಿತ್ತು. ಬಹಳ ಕಠಿಣ ಸಮಯದಲ್ಲಿ ನಾವು ಸೇವೆ ನೀಡಿದ್ದೇವೆ. ಅಷ್ಟೇ ಅಲ್ಲದೇ 5ಜಿ, ಅಪ್ಟಿಕಲ್‌ ಕೇಬಲ್‌, ಸಬ್‌ಮರೀನ್‌ ಕೇಬಲ್‌ಗಳಿಗೆ ಹೂಡಿಕೆ ಮಾಡಲು ಎಆರ್‌ಪಿಯು ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.

     

     

    ಕೋವಿಡ್‌ 19 ನಿಂದಾಗಿ‌ ಕಳೆದ 6 ತಿಂಗಳಿನಲ್ಲಿ ಡಿಜಿಟಲ್‌ ಕಂಟೆಂಟ್‌ ಬಳಕೆ ಹೆಚ್ಚಾದ ಕಾರಣ ಎವರೆಜ್‌ ರೆವೆನ್ಯೂ ಪರ್‌ ಯೂಸರ್(ಎಆರ್‌ಪಿಯು) 200 ರೂ. ಗಿಂತಲೂ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮಿತ್ತಲ್‌ ಹೇಳಿದ್ದಾರೆ.

    ಏರ್‌ಟೆಲ್‌ ಅತೀ ಹೆಚ್ಚಿನ ಎಆರ್‌ಪಿಯು ಹೊಂದಿದ್ದು ಪ್ರತಿ ಗ್ರಾಹಕನಿಂದ ಪ್ರತಿ ತಿಂಗಳು ಸರಾಸರಿ 157 ರೂಪಾಯಿ ಆದಾಯ ಸಂಗ್ರಹಿಸುತ್ತಿದೆ. ಜಿಯೋ 140 ರೂ., ವೊಡಾಫೋನ್‌ 114 ರೂ. ಎಆರ್‌ಪಿಯು ಗಳಿಸುತ್ತಿದೆ.

    ಎಜಿಆರ್‌ ಶುಲ್ಕ ವಿಚಾರವಾಗಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನ ಎಜಿಆರ್‌ ಆದೇಶದಿಂದ ಏರ್‌ಟೆಲ್‌ಗೆ ಬಹಳ ಸಮಸ್ಯೆಯಾಗಿದೆ. ಆದರೂ ನಾವು ಸ್ವಲ್ಪ ಪ್ರಮಾಣ ಹಣ ಪಾವತಿಸಿ ಬಗೆ ಹರಿಸಲು ಯತ್ನಿಸಿದ್ದೇವೆ. ಈ ಹಣ ಪಾವತಿಯಿಂದಾಗಿ ನಮಗೆ 4ಜಿ, 5ಜಿ ನೆಟ್‌ವರ್ಕ್‌ ಹೂಡಿಕೆಗೆ ಸಮಸ್ಯೆಯಾಗಿದೆ ಎಂದು ತಿಳಿಸಿದರು.

    ಭಾರತಿ ಏರ್‌ಟೆಲ್‌ ಎಜಿಆರ್‌ ಶುಲ್ಕವಾಗಿ 43,980 ಕೋಟಿ ರೂ.ಪಾವತಿಸಬೇಕಿದ್ದು, ಸದ್ಯ 18,004 ಕೋಟಿ ರೂ. ಪಾವತಿಸಿದೆ. ಈಗ ಕಂಪನಿ ಉಳಿದ ಮೊತ್ತವನ್ನು ಪಾವತಿಸಲು 15 ವರ್ಷ ಸಮಯವನ್ನು ಕೇಳಿದೆ.

    ವೊಡಾಫೋನ್‌ ಐಡಿಯಾ 58,254 ಕೋಟಿ ರೂ. ಪಾವತಿಸಬೇಕಿದ್ದು, ಈಗ 7,854 ಕೋಟಿ ರೂ. ಎಜಿಆರ್‌ ಶುಲ್ಕ ಪಾವತಿಸಿದೆ. ಏರ್‌ಟೆಲ್‌ನಂತೆ ವೊಡಾಫೋನ್‌ ಉಳಿದ 50,400 ಕೋಟಿ ರೂ. ಪಾವತಿಸಲು 15 ವರ್ಷ ಸಮಯ ನೀಡುವಂತೆ ಕೇಳಿಕೊಂಡಿದೆ.

    ಏನಿದು ಎಜಿಆರ್?
    ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಕಳೆದ ವರ್ಷ ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

    ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

  • ಕೊರೊನಾ ರಣಕೇಕೆಯ ಮಧ್ಯೆ ತೈಲ ಬೆಲೆ ಏರಿಕೆ ಖಂಡಿಸಿ ಬೆಂಗ್ಳೂರಲ್ಲಿ ಕಾಂಗ್ರೆಸ್‌ ಪ್ರತಿಭಟನೆ

    ಕೊರೊನಾ ರಣಕೇಕೆಯ ಮಧ್ಯೆ ತೈಲ ಬೆಲೆ ಏರಿಕೆ ಖಂಡಿಸಿ ಬೆಂಗ್ಳೂರಲ್ಲಿ ಕಾಂಗ್ರೆಸ್‌ ಪ್ರತಿಭಟನೆ

    – ಕೆಪಿಸಿಸಿ ಕಚೇರಿಗೆ ಸೈಕಲ್‌ನಲ್ಲಿ ಬಂದ ನಾಯಕರು
    – ಸಾಮಾಜಿಕ ಅಂತರ ನಿಯಮ ಪಾಲನೆ ಉಲ್ಲಂಘನೆ
    – ಕ್ವೀನ್ಸ್‌ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌

    ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಮಧ್ಯೆ ಕಾಂಗ್ರೆಸ್‌ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಬೀದಿಗೆ ಇಳಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ.

    ಅಧ್ಯಕ್ಷ ಡಿಕೆ ಶಿವಕುಮಾರ್ , ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನೂರಾರು ಕಾರ್ಯಕರ್ತರು ಸೈಕಲ್‌ ತುಳಿದ ಪರಿಣಾಮ ಕೆಪಿಸಿಸಿ ಕಚೇರಿ ಇರುವ ಕ್ವೀನ್ಸ್‌ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಆಗಿತ್ತು. ಸಾಮಾಜಿಕ ಅಂತರದ ನಿಯಮವೇ ಉಲ್ಲಂಘನೆ ಆಗಿತ್ತು.

    ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಬೈಕನ್ನು ಚಟ್ಟಕ್ಕೆ ಕಟ್ಟಿ ಎತ್ತಿಕೊಂಡು ಹೋಗಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ನೂರಾರು ಜನ ಭಾಗವಹಿಸಿದ್ದರಿಂದ ಟ್ರಾಫಿಕ್ ಜಾಮ್‌ನಲ್ಲಿ ಅಂಬುಲೆನ್ಸ್‌ ಸಿಲುಕಿತ್ತು.ಎಲೆಕ್ಟ್ರಿಕ್ ವಿತ್ ಪೆಡಲ್ ಸೈಕಲ್ ನಲ್ಲಿ ಡಿಕೆಶಿಗೆ ನೂರಾರು ಕಾರ್ಯಕರ್ತರು ಸಾಥ್‌ ನೀಡಿದರು.

    ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ 130 ಡಾಲರ್ ಇತ್ತು. ಆಗಲೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಗೆ ಕಾಂಗ್ರೆಸ್‌ ಸರ್ಕಾರ 2.41 ಲಕ್ಷ ಕೋಟಿ ರೂ ಸಬ್ಸಿಡಿ ನೀಡುತ್ತಿತ್ತು. ಈಗ ಕಚ್ಚಾ ತೈಲದ ಬ್ಯಾರೆಲ್ ಗೆ ಬೆಲೆ 40 ಡಾಲರ್ ಆಸುಪಾಸು ಇದೆ. ಈಗ ತೈಲ ಬೆಲೆ 25 ರೂ. ಲೀಟರ್ ಗೆ ಮಾರಬೇಕು. ಕೇಂದ್ರ ಸರ್ಕಾರ ಒಂದು ರೂ. ಸಬ್ಸಿಡಿ ನೀಡುತ್ತಿಲ್ಲ. ಅಬಕಾರಿ ಸುಂಕ ಏರಿಸಿದ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದು ಟೀಕಿಸಿದರು.

    ಆರು ವರ್ಷದಲ್ಲಿ ಅಬಕಾರಿ ಸುಂಕದಿಂದ ಕೇಂದ್ರ ಸರ್ಕಾರಕ್ಕೆ 18 ಲಕ್ಷ ಕೋಟಿ ರೂ. ಆದಾಯ ಬಂದಿದೆ. ಕೊರೋನಾ ಸಂದರ್ಭದಲ್ಲಿ ದಿನಾ ಪೆಟ್ರೋಲ್, ಡೀಸೆಲ್ ದರ ಹೆಚ್ಚು ಮಾಡುತ್ತಿದ್ದಾರೆ. ಇದನ್ನು ಖಂಡಿಸಿ‌ ಇವತ್ತು ಸೈಕಲ್ ಜಾಥಾ ಮಾಡ್ತಿದ್ದೇವೆ. ಕೇಂದ್ರ ಸರ್ಕಾರದ ಕಚೇರಿಗಳ ಎದುರು ಎರಡು ಗಂಟೆ ಇವತ್ತು ಪ್ರತಿಭಟನೆ ಮಾಡುತ್ತೇವೆ. ಕೊರೊನಾ ನಿರ್ವಹಣೆಯಲ್ಲೂ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿದ್ದು ಈ ವೈಫಲ್ಯ ವಿರುದ್ಧ ಪ್ರತ್ಯೇಕವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.

  • ಇಂದು ಮತ್ತೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

    ಇಂದು ಮತ್ತೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

    – 11ದಿನಗಳಿಂದ ಏರುತ್ತಿರುವ ದರ

    ನವದೆಹಲಿ: ದೇಶದಲ್ಲಿ ಕಳೆದ 11 ದಿನಗಳಿಂದ ಪೆಟ್ರೋಲ್, ಡೀಸಲ್ ಬೆಲೆ ಏರುತ್ತಲೇ ಇದ್ದು, 11ನೇ ದಿನವಾದ ಇಂದು ಪೆಟ್ರೋಲ್ ಬೆಲೆ 55 ಪೈಸೆ ಹಾಗೂ ಡೀಸೆಲ್ 69 ಪೈಸೆ ಹೆಚ್ಚಳವಾಗಿದೆ. ಈ ಮೂಲಕ ಕೇವಲ 11 ದಿನಗಳಲ್ಲಿ ಪೆಟ್ರೋಲ್ ಬೆಲೆ 6 ರೂ. ಹಾಗೂ ಡೀಸೆಲ್ 6.49 ರೂ.ಗಳಷ್ಟು ಹೆಚ್ಚಳವಾಗಿದೆ.

    ಕಳೆದ 11 ದಿನಗಳಲ್ಲಿ ಪ್ರತಿ ದಿನ 20 ಪೈಸೆಯಿಂದ 80 ಪೈಸೆ ವರೆಗೂ ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಳ ಮಾಡಲಾಗಿದೆ. ಬೆಲೆ ಹೆಚ್ಚಳದಿಂದಾಗಿ ಜನ ಕಂಗಾಲಾಗಿದ್ದಾರೆ. ಮೊದಲೆ ಕೆಲಸ ಸರಿಯಾಗಿ ಸಿಗುತ್ತಿಲ್ಲ. ಕೆಲಸವಿದ್ದರೂ ಸಂಬಳ ಸರಿಯಾಗಿ ಬರುತ್ತಿಲ್ಲ. ಅಲ್ಲದೆ ಇನ್ನೊಂದೆಡೆ ಸಾರ್ವಜನಿಕ ಸಾರಿಗೆ ಸಹ ಸಮರ್ಪಕವಾಗಿಲ್ಲ ಇಂತಹ ಸಂದರ್ಭದಲ್ಲಿ ಇಂಧನ ದರ ಹೆಚ್ಚಿಸಿರುವ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

    ಲಾಕ್‍ಡೌನ್‍ನಿಂದಾಗಿ ತೀವ್ರ ಸಂಕಷ್ಟದಲ್ಲಿರುವ ಜನತೆಗೆ ಇಂಧನ ಬೆಲೆ ಹೆಚ್ಚಾಗಿರುವುದು ಆಕ್ರೋಶಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಈ ಕಿರಿತು ಟೀಕಿಸಿವೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದ ಕುರಿತು ಮಂಗಳವಾರವಷ್ಟೇ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಕೊರೊನಾ ಸಂಕಷ್ಟದ ನಡುವೆ ಜನರಿಗೆ ಬದುಕುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸರಿಯಲ್ಲ, ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿಂಪಡೆಯಿರಿ ಎಂದಿದ್ದಾರೆ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಿದ್ದರೂ, ಸರ್ಕಾರ ಅದರ ಲಾಭವನ್ನು ಜನರಿಗೆ ನೀಡದೆ, ಇಂತಹ ಕಷ್ಟದ ಸಮಯದಲ್ಲಿ ಬೆಲೆ ಏರಿಸಿ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿದ್ದಾರೆ. ತಕ್ಷಣವೇ ಬೆಲೆ ಏರಿಕೆಯನ್ನು ಹಿಂಪಡೆದು ಜನರಿಗೆ ಬೆಲೆ ಇಳಿಕೆಯ ಲಾಭ ನೀಡಬೇಕು ಎಂದು ಆಗ್ರಹಿಸಿದ್ದಾರೆ.

  • ಅಡಿಕೆಗೆ ಬಂತು ಬಂಗಾರದ ಬೆಲೆ – ಕ್ವಿಂಟಲ್‍ಗೆ 40 ಸಾವಿರ ರೂಪಾಯಿಗೂ ಹೆಚ್ಚು ಏರಿಕೆ

    ಅಡಿಕೆಗೆ ಬಂತು ಬಂಗಾರದ ಬೆಲೆ – ಕ್ವಿಂಟಲ್‍ಗೆ 40 ಸಾವಿರ ರೂಪಾಯಿಗೂ ಹೆಚ್ಚು ಏರಿಕೆ

    ಕಾರವಾರ: ಕಳೆದ ನಾಲ್ಕೈದು ವರ್ಷಗಳ ಅಡಿಕೆ ಇತಿಹಾಸದಲ್ಲಿ ಕೆಂಪಡಿಕೆ ಕ್ವಿಂಟಾಲ್ ಒಂದಕ್ಕೆ ಗರಿಷ್ಠ 40 ಸಾವಿರ ರೂಪಾಯಿ ಗಡಿ ದಾಟಿದ್ದು, ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಕೃಷಿಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

    ಮೂರ್ನಾಲ್ಕು ತಿಂಗಳಿಂದ ನಿಧಾನವಾಗಿ ಏರುತ್ತಿದ್ದ ಕೆಂಪಡಿಕೆ ದರವು ಕಳೆದ ಗುರುವಾರದಂದು ಶಿರಸಿಯ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಒಂದಕ್ಕೆ 40,169 ರೂಪಾಯಿ ಗರಿಷ್ಠ ದರ ದಾಖಲಿಸಿ, ಕಳೆದ ನಾಲ್ಕೈದು ವರ್ಷಗಳಲ್ಲೇ ಉತ್ತಮ ದರವಾಗಿ ಗುರುತಿಸಿಕೊಂಡಿದೆ. 1 ವಾರದ ಹಿಂದೆ 38ರಿಂದ 39 ಸಾವಿರದ ಆಸುಪಾಸಿದ್ದ ಅಡಿಕೆ ದರ ಈಗ 40 ಸಾವಿರ ರೂಪಾಯಿ ಗಡಿದಾಟಿದ್ದು, ಹಂಗಾಮಿಗೆ ಸರಿಯಾಗಿ ಉತ್ತಮ ದರದ ನಿರೀಕ್ಷೆಯಲ್ಲಿದ್ದ ಅಡಕೆ ಬೆಳೆಗಾರರು ಇದರಿಂದ ಖುಷಿಯಾಗಿದ್ದಾರೆ.

    2014-15ರಲ್ಲಿ ಕೆಂಪಡಿಕೆ ಕ್ವಿಂಟಾಲ್ ಒಂದಕ್ಕೆ 81 ಸಾವಿರ ರೂಪಾಯಿ ಗಡಿ ದಾಟಿತ್ತು. 2018 ಹಾಗೂ 2019ರಲ್ಲಿ ಸರಾಸರಿ 32 ಸಾವಿರ ರೂಪಾಯಿ ಕ್ವಿಂಟಾಲ್ ಒಂದಕ್ಕೆ ಗರಿಷ್ಠ ದರ ಲಭಿಸಿತ್ತು. ಇದೀಗ ಮತ್ತೆ ದರ ಏರಿಕೆಯಾಗಿದ್ದು, ಬೆಳೆಗಾರರು ಇನ್ನಷ್ಟು ದರ ಏರುವ ನಿರೀಕ್ಷೆಯಲ್ಲಿದ್ದಾರೆ. ಕೆಲ ವರ್ಷಗಳ ಹಿಂದೆ ಕ್ವಿಂಟಾಲ್‍ಗೆ 80 ಸಾವಿರ ರೂಪಾಯಿ ಬೆಲೆ ಕಂಡಿದ್ದ ಬೆಳೆಗಾರರು, ಈಗ ಕನಿಷ್ಠ 50 ಸಾವಿರ ರೂಪಾಯಿ ದಾಟಬಹುದು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

    ಬೆಳೆ ಕಡಿಮೆ:
    ಕಳೆದ ವರ್ಷದ ಅಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಶೇ. 50ರಷ್ಟು ಅಡಿಕೆ ಬೆಳೆ ಕಡಿಮೆಯಾಗಿತ್ತು. ಅದರ ಜೊತೆಗೆ ಕೊಳೆ ರೋಗವೂ ಬಾಧಿಸಿದ ಪರಿಣಾಮ ಕೆಲವು ಕಡೆಗಳಲ್ಲಿ ಶೇ. 80ರಷ್ಟು ಬೆಳೆ ನಾಶವಾಗಿದ್ದು, ತಾಲೂಕಿನಲ್ಲಿ ಈ ಬಾರಿ ಅಡಿಕೆ ಬೆಳೆ ಕುಂಠಿತವಾಗಿದೆ. ಇದರ ಪರಿಣಾಮ ಅಡಿಕೆ ದರ ಇನ್ನೂ ಏರುವ ನಿರೀಕ್ಷೆಯನ್ನು ವ್ಯಾಪಾರಸ್ಥರು ವ್ಯಕ್ತಪಡಿಸಿದ್ದು, ಕೃಷಿಕರಿಗೆ ಹೆಚ್ಚಿನ ಅನುಕೂಲ ಆಗುವ ಸಾಧ್ಯತೆಗಳಿದೆ ಎನ್ನಲಾಗಿದೆ.

    ಯಲ್ಲಾಪುರದಲ್ಲಿ ಉತ್ತಮ ಬೆಲೆ:
    ಯಲ್ಲಾಪುರ ಮಾರುಕಟ್ಟೆಯಲ್ಲಿ ಕೆಂಪಡಿಕೆಗೆ ಉತ್ತಮ ದರ ಲಭ್ಯವಾಗಿದೆ. ಶಿರಸಿ ಮಾರುಕಟ್ಟೆಗಿಂತ ಹೆಚ್ಚಿನ ದರದಲ್ಲಿ ವ್ಯಾಪಾರವಿರುವ ಯಲ್ಲಾಪುರದಲ್ಲಿ 43 ಸಾವಿರ ರೂಪಾಯಿಗಳಿಗೂ ಅಧಿಕ ದರವನ್ನು ರೈತರು ಕಂಡಿದ್ದಾರೆ. ಯಲ್ಲಾಪುರದಲ್ಲಿಯೂ ಅತಿಯಾದ ಮಳೆಯಿಂದ ಬೇಡ್ತಿ ನದಿ ನೀರು ಅಕ್ಕಪಕ್ಕದಲ್ಲಿರುವ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಈಗ ಉತ್ತಮ ದರ ಬಂದಿರುವುದರಿಂದ ಕೃಷಿಕರ ಮೊಗದಲ್ಲಿ ನಗು ಮೂಡಿದೆ.

  • ನಂದಿನಿ ಹಾಲು, ಮೊಸರಿನ ಬೆಲೆ ಏರಿಕೆ – ರೈತರಿಗೆ ಸ್ವೀಟ್ ಗ್ರಾಹಕರಿಗೆ ಶಾಕ್ ಕೊಟ್ಟ ಸರ್ಕಾರ

    ನಂದಿನಿ ಹಾಲು, ಮೊಸರಿನ ಬೆಲೆ ಏರಿಕೆ – ರೈತರಿಗೆ ಸ್ವೀಟ್ ಗ್ರಾಹಕರಿಗೆ ಶಾಕ್ ಕೊಟ್ಟ ಸರ್ಕಾರ

    ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಮಾಡಲು ಕರ್ನಾಟಕ ಹಾಲು ಒಕ್ಕೂಟ (ಕೆ.ಎಂ.ಎಫ್) ನಿರ್ಧಾರ ಮಾಡಿದೆ.

    ಪ್ರತಿ ಲೀಟರಿಗೆ ಎರಡು ರೂ. ಏರಿಕೆ ಮಾಡಲು ಕೆ.ಎಂ.ಎಫ್ ನಿರ್ಧಾರ ಮಾಡಿದೆ. ಹೊಸ ದರ ಫೆಬ್ರವರಿ 1 ರಿಂದ ಜಾರಿಯಾಗಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಇದರೊಂದಿಗೆ 2 ರೂ. ದರ ಏರಿಕೆಯಿಂದ ಬರುವ ಹಣದಲ್ಲಿ 1 ರೂ. ರೈತರಿಗೆ ನೀಡಲು ಸರ್ಕಾರ ತೀರ್ಮಾನ ಮಾಡಿದ್ದು, ರಾಜ್ಯ ರೈತರಿಗೆ ಶುಭ ಸುದ್ದಿ ಕೊಟ್ಟಿದೆ.

    ಬೆಲೆ ಏರಿಕೆ ಇಂದ ಬರುವ 2 ರೂ. ಲಾಭದಲ್ಲಿ 1 ರೂ. ರೈತರಿಗೆ ಕೊಟ್ಟು, ಉಳಿದ ಒಂದು ರೂ. ಅನ್ನು ಆಯಾ ಜಿಲ್ಲಾ ಹಾಲು ಒಕ್ಕೂಟಗಳಿಗೆ ನೀಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ದರ ಏರಿಕೆಯಿಂದ ಲಭಿಸಿದ 1 ರೂಪಾಯಿಯಲ್ಲಿ 40 ಪೈಸೆ ಹಸುಗಳಿಗೆ ಇನ್ಶುರೆನ್ಸ್, 40 ಪೈಸೆ ಹಾಲು ಮಾರಾಟಗಾರರ ಏಜೆಂಟ್‍ಗಳಿಗೆ ಕಮಿಷನ್ ಮತ್ತು ಉಳಿದ 20 ಪೈಸೆ ಒಕ್ಕೂಟಗಳ ಸೆಕ್ರೇಟರಿಗಳಿಗೆ ಕಮಿಷನ್ ನೀಡಲು ಕೆ.ಎಂ.ಎಫ್ ನಿರ್ಧಾರ ಮಾಡಿದೆ ಎನ್ನಲಾಗಿದೆ.

    ಬೆಲೆ ಏರಿಕೆ ವಿಚಾರವಾಗಿ ಇತ್ತೀಚೆಗೆ ಕೆ.ಎಂ.ಎಫ್ ಸಭೆ ನಡೆಸಿದ್ದು, ಈ ಸಭೆಯಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಬೆಲೆಯನ್ನು ಮೂರು ರೂ. ಜಾಸ್ತಿ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿತ್ತು. ಆದರೆ ಮೂರು ರೂ. ಹೆಚ್ಚಳ ಮಾಡಲು ಒಪ್ಪದ ಸರ್ಕಾರ ಎರಡು ರೂ. ಏರಿಕೆ ಮಾಡಲು ಹಸಿರು ನಿಶಾನೆ ತೋರಿದೆ.

  • ಅಡುಗೆ ಅನಿಲ ದರ ಹೆಚ್ಚಳ: ಬೆರಣಿಯಿಂದ ಅಡುಗೆ ಮಾಡಿ ಕಾಂಗ್ರೆಸ್ ಪ್ರತಿಭಟನೆ

    ಅಡುಗೆ ಅನಿಲ ದರ ಹೆಚ್ಚಳ: ಬೆರಣಿಯಿಂದ ಅಡುಗೆ ಮಾಡಿ ಕಾಂಗ್ರೆಸ್ ಪ್ರತಿಭಟನೆ

    ಹುಬ್ಬಳ್ಳಿ: ಅಡುಗೆ ಅನಿಲ ದರ ಹೆಚ್ಚಳ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.

    ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಗಣಿಯ ಬೆರಣಿಗಳಿಂದ ರಸ್ತೆಯಲ್ಲೇ ಚಹಾ ತಯಾರಿಸಿ ಹಂಚುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫಲಕಗಳನ್ನು ಪ್ರರ್ದಶಿಸಿ, ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಒಂದೆಡೆ ಉಚಿತವಾಗಿ ಅಡುಗೆ ಅನಿಲ ವಿತರಿಸುವ ಸರ್ಕಾರ, ಮತ್ತೊಂದೆಡೆ ಬೆಲೆ ಹೆಚ್ಚಳ ಮಾಡಿ ಜನರಿಗೆ ಬರೆ ಎಳೆಯುತ್ತಿದೆ. ಈ ಮೂಲಕ ಒಂದು ಕಡೆಯಿಂದ ಕೊಟ್ಟು ಮತ್ತೊಂದೆಡೆಯಿಂದ ಕಿತ್ತುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹರಿಹಾಯ್ದರು.

    ಈ ವೇಳೆ ಒಲೆ ಹಚ್ಚಲು ಮಹಿಳೆಯರು ಹೆಚ್ಚು ಪ್ರೆಟೋಲ್ ಸುರಿದ ಕಾರಣ ಬೆಂಕಿ ದಗ್ಗನೆ ಹೊತ್ತಿಕೊಂಡಿತು. ಆಗ ಪ್ರತಿಭಟನಾಕಾರರು ಬೆಚ್ಚಿಬೀಳುವಂತಾಯಿತು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಲಿಲ್ಲ. ಪ್ರತಿಭಟನೆಯಲ್ಲಿ ಮಾಜಿ ಸಂಸದ ಐ.ಜಿ.ಸನದಿ. ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ರಾಜಶೇಖರ ಮೆಣಸಿನಕಾಯಿ, ಇಲಿಯಾಸ್ ಮನಿಯಾರ್, ಬಾಬಾಜಾನ್ ಮುದೋಳ, ಇಮ್ರಾನ್ ಯಲಿಗಾರ, ಶರಣಪ್ಪ ಕೊಟಗಿ ಸೇರಿದಂತೆ ಹಲವರು ಇದ್ದರು.

  • ಕೇಂದ್ರ ಬಜೆಟ್: ಯಾವುದು ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪೂರ್ಣ ಮಾಹಿತಿ

    ಕೇಂದ್ರ ಬಜೆಟ್: ಯಾವುದು ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ 2018ನೇ ಸಾಲಿನ ಕೇಂದ್ರ ಬಜೆಟ್ ಇಂದು ಮಂಡಿಸಿದ್ದು, ಅಬಕಾರಿ ಸುಂಕವನ್ನು ಏರಿಸಿದ ಕಾರಣ ಕೆಲವು ಆಮದುಗೊಂಡ ಉತ್ಪನ್ನಗಳ ಬೆಲೆ ಏರಿಕೆಯಾಗಲಿದ್ದು, ಮತ್ತಷ್ಟು ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಲಿದೆ.

    ಆಮದು ಮಾಡಿಕೊಳ್ಳಲಾಗುವ ಮೊಬೈಲ್ ಫೋನ್, ಟಿ.ವಿ ಸೆಟ್, ಡಿಜಿಟಲ್ ಕ್ಯಾಮೆರಾಗಳು, ಮೈಕ್ರೋವೇವ್ ಓವೆನ್, ಎಲ್‍ಇಡಿ ಬಲ್ಬ್ ಗಳು ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆಯಾಗಲಿದೆ.

    ಮೊಬೈಲ್ ಫೋನ್ ಮೇಲಿನ ಅಬಕಾರಿ ಸುಂಕವನ್ನು 15% ನಿಂದ 20% ಗೆ ಏರಿಸಲಾಗಿದೆ. ಅಲ್ಲಿಗೆ ಆ್ಯಪಲ್ ಐಫೋನ್‍ಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದ್ದು, ಭಾರತದಲ್ಲೇ ಉತ್ಪಾದಿಸುವ ಮೊಬೈಲ್ ಫೋನ್‍ಗಳ ಬೆಲೆಗೆ ಅಂತರ ಹೆಚ್ಚಲಿದೆ.

    ತಜ್ಞರ ಪ್ರಕಾರ ಐಫೋನ್ ದರದ ಮೇಲೆ 2ರಿಂದ 3 ಸಾವಿರ ರೂ. ಹೆಚ್ಚಾಗಲಿದೆ. ಉದಾಹರಣೆಗೆ ಐಫೋನ್ ಎಕ್ಸ್ ಮಾಡಲ್‍ನ ಫೋನ್ ಈಗ 89 ಸಾವಿರ ರೂ. ಇದ್ದು, ಕಂಪೆನಿ ತೆರಿಗೆ ಏರಿಕೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಿದ್ರೆ ಫೋನ್ ಬೆಲೆ 92 ಸಾವಿರ ರೂ. ಗೆ ಏರಿಕೆಯಾಗುವ ಸಾಧ್ಯತೆಯಿದೆ.

    ಟಿ.ವಿ ಸೆಟ್ ಬೆಲೆಗಳೂ ಕೂಡ ಏರಿಕೆಯಾಗಲಿದ್ದು, ಸ್ಕ್ರೀನ್ ಗಾತ್ರಕ್ಕೆ ಅನುಗುಣವಾಗಿ ಈಗಿರುವ ಬೆಲೆಗಿಂತ ಹೆಚ್ಚಾಗಲಿದೆ. 10 ಸಾವಿರ ರೂ. ಬೆಲೆಯ 20 ಲೀಟರ್ ಮೈಕ್ರೋವೇವ್ ಓವೆನ್ ಬೆಲೆ ಮೇಲೆ 500 ರೂ. ಹೆಚ್ಚಾಗುವ ಸಾಧ್ಯತೆಯಿದೆ. ಈ ಎಲ್ಲಾ ಬೆಲೆಗಳು ಅಂದಾಜು ಮೊತ್ತವಾಗಿದ್ದು ನಿರ್ದಿಷ್ಟ ಬೆಲೆ ಏರಿಕೆ ಎಷ್ಟೆಂದು ಸಂಸ್ಥೆಗಳು ಲೆಕ್ಕ ಮಾಡಬೇಕಿದೆ.

    ಆಮದು ತೆರಿಗೆ ಹೆಚ್ಚಳದಿಂದಾಗಿ ಆ್ಯಪಲ್ ನಂತಹ ಸಂಸ್ಥೆಗಳು ಸ್ಥಳೀಯ ಉತ್ಪಾದನಾ ಯೋಜನೆಗಳ ವೇಗ ಹೆಚ್ಚಿಸಲಿದ್ದು, ಇದರಿಂದ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಗೆ ಪುಷ್ಟಿ ಸಿಕ್ಕಂತಾಗುತ್ತದೆ. ಹಾಗೂ ಸ್ಥಳೀಯ ಉತ್ಪಾದಕರಿಕೆ ಆಮದಿನಿಂದ ಹೆಚ್ಚಿನ ಸುರಕ್ಷತೆ ಸಿಕ್ಕಂತಾಗುತ್ತದೆ ಎಂದು ವರದಿಯಾಗಿದೆ.

    ಮೇಕ್ ಇನ್ ಇಂಡಿಯಾಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. 2017ರ ಹಣಕಾಸು ವರ್ಷದಲ್ಲಿ ಭಾರತ ಸರಿಸುಮಾರು 42 ಬಿಲಿಯನ್ ಡಾಲರ್(ಅಂದಾಜು 2 ಲಕ್ಷ ಕೋಟಿ ರೂ.) ಮೌಲ್ಯದ ಟೆಲಿಕಾಮ್ ವಸ್ತುಗಳು, ಕಂಪ್ಯೂಟರ್ ಹಾರ್ಡ್‍ವೇರ್, ಎಲೆಕ್ಟ್ರಾನಿಕ್ ಘಟಕಗಳು ಮತ್ತು ಸಾಧನಗಳನ್ನ ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ.

    ಇನ್ನು ಕಚ್ಛಾ ಗೋಡಂಬಿ ಮೇಲಿನ ತೆರಿಗೆ 5% ನಿಂದ 2.5 % ಗೆ ಇಳಿಕೆಯಾಗಿದೆ. ಅಂದ್ರೆ ಗೋಡಂಬಿ ಬೆಲೆ ಇಳಿಕೆಯಾಗಲಿದೆ.

  • ಪ್ರತಿ ತಿಂಗಳು 4 ರೂ. ಏರಿಕೆ ಆಗುತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ: 2004ರಿಂದ ಇಲ್ಲಿಯವರೆಗೆ ಎಷ್ಟು ಬೆಲೆ ಏರಿಕೆಯಾಗಿದೆ?

    ಪ್ರತಿ ತಿಂಗಳು 4 ರೂ. ಏರಿಕೆ ಆಗುತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ: 2004ರಿಂದ ಇಲ್ಲಿಯವರೆಗೆ ಎಷ್ಟು ಬೆಲೆ ಏರಿಕೆಯಾಗಿದೆ?

    ನವದೆಹಲಿ: 2018ರ ಮಾರ್ಚ್ ಒಳಗಡೆ ಎಲ್‍ಪಿಜಿ ಸಿಲಿಂಡರ್ ಮೇಲೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗುವುದು ಎಂದು  ಕೇಂದ್ರ ಸರ್ಕಾರ ಹೇಳಿದೆ.

    ಲೋಕಸಭೆಗೆ ಉತ್ತರ ನೀಡಿದ ಕೇಂದ್ರ ಪೆಟ್ರೋಲಿಂಯ ಸಚಿವ ಧರ್ಮೇಂದ್ರ ಪ್ರಧಾನ್, ಸಬ್ಸಿಡಿಯನ್ನು ತೆಗೆದು ಹಾಕಲು ಪ್ರತಿ ತಿಂಗಳು, ಪ್ರತಿ ಸಿಲಿಂಡರ್ ಬೆಲೆಯನ್ನು 4 ರೂ. ಏರಿಸಲಾಗುವುದು ಎಂದು ಅವರು ಹೇಳಿದರು.

    ತೈಲ ಕಂಪೆನಿಗಳಿಗೆ ಪ್ರತಿ ತಿಂಗಳು ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆಯನ್ನು 2 ರೂ. ಏರಿಸಲು 2016ರ ಜುಲೈ 1 ರಿಂದ  ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

    ಪ್ರಸ್ತುತ ಸಬ್ಸಿಡಿ ಸಹಿತ 14.2 ಕೆಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 477.46 ರೂ. ಇದ್ದರೆ ಕಳೆದ ವರ್ಷದ ಜೂನ್ ನಲ್ಲಿ 419. 18 ರೂ. ಇತ್ತು. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 564 ರೂ. ಇದೆ.

    ಪ್ರಸ್ತುತ ದೇಶದಲ್ಲಿ 18.11 ಕೋಟಿ ಜನ ಸಬ್ಸಿಡಿ ಸಹಿತ ಸಿಲಿಂಡರ್ ಬಳಸುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ದೇಶದ 2.5 ಕೋಟಿ ಬಡ ಮಹಿಳೆಯರಿಗೆ ಗ್ಯಾಸ್ ಕನೆಕ್ಷನ್ ನೀಡಲಾಗಿದೆ. 2.66 ಕೋಟಿ ಬಳಕೆದಾರರು ಸಬ್ಸಿಡಿ ರಹಿತ ಸಿಲಿಂಡರ್ ಬಳಸುತ್ತಿದ್ದಾರೆ.

    ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿದ್ದೆ ತಡ ಸಬ್ಸಿಡಿ ಸಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಆಗಸ್ಟ್ ಮೊದಲ ವಾರದಲ್ಲಿ  ಭಾರೀ ಏರಿಕೆಯಾಗಿತ್ತು.   ಕಳೆದ 6 ವರ್ಷದಲ್ಲಿ ಅತಿ ಹೆಚ್ಚು ಏರಿಕೆಯಾಗಿದ್ದು, 14.2 ಕೆಜಿ ತೂಕದ ಸಿಲಿಂಡರ್ ಬೆಲೆ 32 ರೂ. ಏರಿಕೆಯಾಗಿತ್ತು. ದೆಹಲಿಯಲ್ಲಿ ಜಿಎಸ್‍ಟಿ ಜಾರಿಯಾಗುವುದಕ್ಕೂ ಮೊದಲು ಸಬ್ಸಿಡಿ ಸಹಿತ ಪ್ರತಿ ಸಿಲಿಂಡರ್ ಬೆಲೆ 446.65 ರೂ. ಇದ್ದರೆ, ನಂತರ ಈ ಬೆಲೆ 477.46 ರೂ.ಗೆ ತಲುಪಿದೆ.

    ಜೂನ್‍ವರೆಗೆ ಪ್ರತಿ ಸಿಲಿಂಡರ್‍ಗೆ 119.85 ರೂ. ಸಬ್ಸಿಡಿ ಸಿಗುತಿತ್ತು. ಆದರೆ ಹೊಸ ಅಧಿಸೂಚನೆಯಂತೆ ಈಗ 107 ರೂ. ಹಣ ಸಬ್ಸಿಡಿಯಾಗಿ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ. 1 ವರ್ಷದಲ್ಲಿ ಒಂದು ಕುಟುಂಬಕ್ಕೆ 14.2 ಕೆಜಿ ತೂಕದ 12  ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಕೇಂದ್ರ ಸರ್ಕಾರ  ವಿತರಿಸುತ್ತಿದೆ.

    ದೆಹಲಿಯಲ್ಲಿ ಯಾವ ವರ್ಷ ಎಷ್ಟಿತ್ತು?
    ಜನವರಿ 01, 2004 – 241.6 ರೂ.
    ಏಪ್ರಿಲ್ 01, 2005 – 294.75 ರೂ.
    ಮಾರ್ಚ್ 01, 2007 – 294.75 ರೂ.

    ಜೂನ್ 05, 2008 – 346.3 ರೂ.
    ಜನವರಿ 29, 2009 – 279.7 ರೂ.
    ಜನವರಿ 01, 2010 – 281.2 ರೂ.

    ಜೂನ್ 25, 2011 – 399.26 ರೂ.
    ಜುಲೈ 25, 2012 – 399 ರೂ.
    ಜನವರಿ 01, 2013 – 410.5 ರೂ.

    ಜನವರಿ 01, 2014 – 414 ರೂ.
    ಜನವರಿ 01, 2015 – 417.82 ರೂ.
    ಜನವರಿ 01, 2016 – 419.33 ರೂ.

    ಜನವರಿ 01, 2017 – 434. ರೂ.
    ಏಪ್ರಿಲ್ 01, 2017 – 440 ರೂ.
    ಜೂನ್ 01, 2017 – 446 ರೂ.
    ಮಾಹಿತಿ: www.iocl.com