Tag: President Ramanath kovind

  • ರಾಷ್ಟ್ರಪತಿಗಳಿಗೆ ಶ್ರೀ ರಾಮಾಯಣ ದರ್ಶನಂ, ಪರ್ವ ಕಾದಂಬರಿ ನೀಡಿದ ಸುನಿಲ್ ಕುಮಾರ್

    ರಾಷ್ಟ್ರಪತಿಗಳಿಗೆ ಶ್ರೀ ರಾಮಾಯಣ ದರ್ಶನಂ, ಪರ್ವ ಕಾದಂಬರಿ ನೀಡಿದ ಸುನಿಲ್ ಕುಮಾರ್

    ಬೆಂಗಳೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜ್ಯ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದರು.

    ರಾಜಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸುನಿಲ್ ಕುಮಾರ್ ಅವರು ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಇಂಗ್ಲಿಷ್ ಅನುವಾದಿತ ಪುಸ್ತಕ ಹಾಗೂ ಡಾ.ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂಬರಿಯ ಇಂಗ್ಲಿಷ್ ಅನುವಾದಿತ ಕೃತಿಯನ್ನು ರಾಷ್ಟ್ರಪತಿಯವರಿಗೆ ಕೊಡುಗೆಯಾಗಿ ನೀಡಿದರು. ಇದನ್ನೂ ಓದಿ: ವಿಕ್ರಮಾದಿತ್ಯ ನೌಕೆಯಲ್ಲಿ ನಾವ್‌-ಇಕ್ಯಾಶ್‌ ಕಾರ್ಡ್‌ ಸೇವೆಗೆ ಚಾಲನೆ

    ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು. ಈ ವೇಳೆ ಪರಸ್ಪರ ಕುಶಲೋಪರಿ ಮಾತನಾಡಿ, ಸಚಿವರು ವಿಶೇಷ ಉಡುಗೊರೆಗಳನ್ನು ರಾಷ್ಟ್ರಪತಿಗಳಿಗೆ ನೀಡಿದ್ದಾರೆ. ರಾಷ್ಟ್ರಪತಿ ಕೋವಿಂದ್ ಅವರು ಸಹ ಅಷ್ಟೇ ಸಂತೋಷದಿಂದ ಸ್ವೀಕರಿಸಿದ್ದಾರೆ.

  • ರಾಷ್ಟ್ರಪತಿ ಆಗಮನ- ಬಿಳಿಗಿರಿರಂಗನ ಬೆಟ್ಟಕ್ಕೆ ಎರಡು ದಿನ ನಿರ್ಬಂಧ, ವಾಯುಸೇನೆಯಿಂದ ಪರಿಶೀಲನೆ

    ರಾಷ್ಟ್ರಪತಿ ಆಗಮನ- ಬಿಳಿಗಿರಿರಂಗನ ಬೆಟ್ಟಕ್ಕೆ ಎರಡು ದಿನ ನಿರ್ಬಂಧ, ವಾಯುಸೇನೆಯಿಂದ ಪರಿಶೀಲನೆ

    ಚಾಮರಾಜನಗರ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಿಲ್ಲಾ ಪ್ರವಾಸ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಅಂಗರಕ್ಷಕರು ಜಿಲ್ಲೆಗೆ ಆಗಮಿಸಿದ್ದು, ಕಟ್ಟೆಚ್ಚರ ವಹಿಸಿದ್ದಾರೆ. ಅಲ್ಲದೇ ಪೊಲೀಸರಿಗೂ ಕೆಲ ಸೂಚನೆಗಳನ್ನು ಕೊಟ್ಟಿದ್ದಾರೆ.

    ರಾಷ್ಟ್ರಪತಿಗಳ ಅಂಗ ರಕ್ಷಕರು ಇಂದು ವಾಯುಸೇನೆ ಹೆಲಿಕಾಪ್ಟರ್ ಮೂಲಕ ಚಾಮರಾಜನಗರ ಮತ್ತು ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿದ್ದು, ಮೂರು-ನಾಲ್ಕು ಬಾರಿ ಹೆಲಿಕಾಪ್ಟರ್ ಮೂಲಕ ಹಾರಾಟ ನಡೆಸಿ ಸಕಲ ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: RSS ನ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ- ಬಿಜೆಪಿ ವಿರುದ್ಧ ಎಚ್‍ಡಿಕೆ ವಾಗ್ದಾಳಿ

    ಈಗಾಗಲೇ ಚಾಮರಾಜನಗರ ಮೆಡಿಕಲ್ ಕಾಲೇಜು ಮತ್ತು ಬಿಳಿಗಿರಿರಂಗನ ಬೆಟ್ಟ ಸಮೀಪ ನಿರ್ಮಾಣವಾಗಿರುವ ಹೆಲಿಪ್ಯಾಡ್ ಗಳನ್ನು ಪರಿಶೀಲಿಸಿದ್ದು, ರಸ್ತೆ ಮಾರ್ಗದಲ್ಲೂ ಸೈನಿಕರು ಟ್ರಯಲ್ ನಡೆಸಿದ್ದಾರೆ. ಬಿಳಿಗಿರಿರಂಗನ ಬೆಟ್ಟ ದೇವಾಲಯಕ್ಕೆ ರಾಷ್ಟ್ರಪತಿಗಳ ಖಾಸಗಿ ಭೇಟಿಯಾಗಿರುವುದರಿಂದ ಪತ್ರಕರ್ತರ ಪ್ರವೇಶಕ್ಕೆ ಅಂದು ನಿರ್ಬಂಧ ಹೇರಲಾಗಿದೆ.

    ಸಾರ್ವಜನಿಕರಿಗೆ ನಿರ್ಬಂಧ
    ಚಾಮರಾಜನಗರ ಜಿಲ್ಲೆಗೆ ರಾಷ್ಟ್ರಪತಿ ಭೇಟಿ ಹಿನ್ನಲೆ ಅ.6 ಮತ್ತು 7 ರಂದು ಬಿಳಿಗಿರಿರಂಗನಬೆಟ್ಟಕ್ಕೆ ಸಾರ್ವಜನಿಕರು, ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅ.7ರಂದು ವಡ್ಡಗೆರೆ ಹೆಲಿಪ್ಯಾಡ್, ಬಿಳಿಗಿರಿರಂಗನ ಬೆಟ್ಟ, ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 15 ಕಿ.ಮೀ. ವ್ಯಾಪ್ತಿಯಲ್ಲಿ ಮಾನವರಹಿತ ಏರ್ ಕ್ರಾಫ್ಟ್ ಬಳಕೆ, ಏರ್ ಬಲೂನ್ ಗಳ ಹಾರಾಟ, ಬ್ಯಾನರ್ ಬಂಟಿಂಗ್ಸ್ ಅಳವಡಿಕೆ ನಿಷೇಧ ಮಾಡಲಾಗಿದೆ.

  • ರಾಮ ಮಂದಿರ ಭೂಮಿ ಪೂಜೆ ಇಡೀ ದೇಶದ ಹೆಮ್ಮೆ: ರಾಷ್ಟ್ರಪತಿ ಕೋವಿಂದ್

    ರಾಮ ಮಂದಿರ ಭೂಮಿ ಪೂಜೆ ಇಡೀ ದೇಶದ ಹೆಮ್ಮೆ: ರಾಷ್ಟ್ರಪತಿ ಕೋವಿಂದ್

    ನವದೆಹಲಿ: ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ನೆರವೇರಿರುವುದು ಇಡೀ ದೇಶಕ್ಕೆ ಹೆಮ್ಮೆಯನ್ನುಂಟು ಮಾಡಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    74ನೇ ಸ್ವಾತಂತ್ರ್ಯ ದಿನಾಚರಣೆ ಮುನ್ನಾದಿನ ಶುಕ್ರವಾರ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ನೆರವೇರಿರುವುದು ಇಡೀ ದೇಶಕ್ಕೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಕೊಂಡಾಡಿದ್ದಾರೆ.

    ಇದೇ ವೇಳೆ ಗಡಿ ವಾಸ್ತವ ರೇಖೆಯುದ್ದಕ್ಕೂ ತಮ್ಮ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ಭಾರತೀಯ ಸಶಸ್ತ್ರ ಪಡೆಗಳನ್ನು ರಾಷ್ಟ್ರಪತಿಗಳು ಶ್ಲಾಘಿಸಿದರು. ಅಲ್ಲದೆ ಗಲ್ವಾನ್ ವ್ಯಾಲಿಯಲ್ಲಿ ಹುತಾತ್ಮರಾದ ಯೋಧರಿಗೆ ಇಡೀ ದೇಶ ಗೌರವ ಸಲ್ಲಿಸುತ್ತದೆ ಎಂದು ಹೇಳಿದರು.

    ಕೊರೊನಾ ಸೋಂಕಿನ ಹಿನ್ನೆಲೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ಗಣ್ಯರ ಪಟ್ಟಿಯನ್ನು ರಾಷ್ಟ್ರಪತಿ ಭವನ ಕಡಿಮೆ ಮಾಡಿದೆ. ಸುಮಾರು 90 ಜನ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಧೀಶರಾದ ಶರದ್ ಬೊಬ್ಡೆಯವರನ್ನು ಆಹ್ವಾನಿಸಲಾಗಿದೆ.

    ಮಧ್ಯಾಹ್ನದ ಕಾರ್ಯಕ್ರಮದಲ್ಲಿ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ, ನೌಕಾ ಸೇನೆ ಮುಖ್ಯಸ್ಥ ಕರಮ್‍ವೀರ್ ಸಿಂಗ್, ವಾಯು ಸೇನೆ ಮುಖ್ಯಸ್ಥ ಆರ್‍ಕೆಎಸ್ ಭದೌರಿಯಾ ಅವರನ್ನು ಆಹ್ವಾನಿಸಲಾಗಿದೆ.

  • ನಾಗರಿಕತ್ವ ಮಸೂದೆಗೆ ರಾಷ್ಟ್ರಪತಿ ಸಹಿ, ದೇಶಾದ್ಯಂತ ಜಾರಿ

    ನಾಗರಿಕತ್ವ ಮಸೂದೆಗೆ ರಾಷ್ಟ್ರಪತಿ ಸಹಿ, ದೇಶಾದ್ಯಂತ ಜಾರಿ

    – ಬಿಜೆಪಿ ಶಾಸಕರ ಮನೆ, ಸರ್ಕಾರಿ ಕಚೇರಿಗಳಿಗೆ ಬೆಂಕಿ
    – ಅನಿರ್ದಿಷ್ಟಾವಧಿ ಕರ್ಫ್ಯೂ, ಇಂಟರ್‌ನೆಟ್ ಸ್ಥಗಿತ

    ನವದೆಹಲಿ: ಈಶಾನ್ಯ ಭಾರತದಲ್ಲಿ ದಂಗೆಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಈ ಮೂಲಕ ಮಸೂದೆಯು ಕಾಯ್ದೆ ರೂಪ ಪಡೆದುಕೊಂಡಿದ್ದು, ಮಧ್ಯರಾತ್ರಿಯಿಂದಲೇ ವಿವಾದಿತ ಕಾನೂನು ದೇಶಾದ್ಯಂತ ಜಾರಿ ಆಗಿದೆ.

    ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ 2014ರೊಳಗೆ ವಲಸೆ ಬಂದಿರುವ ಹಿಂದೂ, ಕ್ರಿಶ್ಚಿಯನ್, ಬೌದ್ಧ, ಜೈನ ಮತ್ತು ಪಾರ್ಸಿ ಮತಸ್ಥರಿಗೆ ಭಾರತದ ಪೌರತ್ವವನ್ನು ನೀಡಲಾಗುತ್ತದೆ. ಭಾರೀ ಚರ್ಚೆಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಮಸೂದೆ ಬುಧವಾರ ರಾಜ್ಯಸಭೆಯಲ್ಲಿ ಅಂಗೀಕಾರವಾಗಿತ್ತು. ರಾಜ್ಯ ಸಭೆಯಲ್ಲಿ ಮಸೂದೆಯ ಪರವಾಗಿ 125 ಮತ್ತು ವಿರೋಧವಾಗಿ 105 ಮತಗಳು ಬಿದಿದ್ದವು. ಇತ್ತ ಲೋಕಸಭೆಯಲ್ಲಿ ಸೋಮವಾರ ಪೌರತ್ವ ತಿದ್ದುಪಡಿ ಮಸೂದೆ 311 ಮತಗಳಿಂದ ಪಾಸ್ ಆಗಿತ್ತು. ಇದನ್ನೂ ಓದಿ: ರಾಜ್ಯಸಭೆಯಲ್ಲಿಯೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ

    ಇತ್ತ ಪೌರತ್ವ ಕಾನೂನಿನ ವಿರುದ್ಧ ಅಸ್ಸಾಂನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಗೋಲಿಬಾರ್ ಗೆ ಇಬ್ಬರು ಪ್ರಾಣಬಿಟ್ಟಿದ್ದು, ಆಕ್ರೋಶದ ಬೆಂಕಿ ನೆರೆ ಮೇಘಾಲಯ ರಾಜ್ಯಕ್ಕೂ ವ್ಯಾಪಿಸಿದೆ. ಚಬುವಾದಲ್ಲಿ ಅಸ್ಸಾಂ ಬಿಜೆಪಿ ಶಾಸಕ ಬಿನೋದ್ ಹಜಾರಿಕಾ ಮನೆಗೆ ಪ್ರತಿಭಟನಕಾರರು ಬೆಂಕಿ ಹಾಕಿದ್ದಾರೆ. 10 ಜಿಲ್ಲೆಗಳಲ್ಲಿ ಮೊಬೈಲ್ ಮತ್ತು ಬ್ರಾಡ್‍ಬ್ಯಾಂಡ್ ಇಂಟರ್‌ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದ್ದು, ರಾಜಧಾನಿ ಗುವಾಹಟಿ ಮತ್ತು ದಿಬ್ರುಗಢದಲ್ಲಿ ಕರ್ಫ್ಯೂ ಮುಂದಿವರಿಸಲಾಗಿದೆ. ಇದನ್ನೂ ಓದಿ: ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಪಾಸ್ – ಪರ 311, ವಿರುದ್ಧ 80 ಮತ

    ತಿನ್ಸುಕಿಯಾ ಜಿಲ್ಲೆಯಲ್ಲಿ ಇವತ್ತು ಸಂಜೆ ಐದು ಗಂಟೆವರೆಗೂ ಕರ್ಫ್ಯೂ ವಿಧಿಸಲಾಗಿದ್ದು, ಗ್ರಾಮ ಪಂಚಾಯತಿ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ. ಮೇಘಾಲಯದಲ್ಲಿ ಅಂಗಡಿಗಳು, ವಾಹನಗಳು ಬೆಂಕಿಗಾಹುತಿಯಾಗಿದೆ. ತ್ರಿಪುರಾ ಸಿಎಂ ಬಿಪ್ಲಬ್‍ದೇಬ್ ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆಯ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪೌರತ್ವ ಕಾನೂನು ವಿರುದ್ಧ ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಇತ್ತ ದೆಹಲಿಯಲ್ಲಿರುವ ಇಂಡಿಯಾ ಗೇಟ್ ಎದುರು ರಾತ್ರಿ ಭಾರೀ ಪ್ರತಿಭಟನೆ ನಡೆದಿದೆ. ಇದನ್ನೂ ಓದಿ: ಪೌರತ್ವ ತಿದ್ದುಪಡಿ ಮಸೂದೆಯ ಪ್ರತಿ ಹರಿದು ಹಾಕಿದ ಓವೈಸಿ

  • ರಾಷ್ಟ್ರಪತಿಗಳ ಸರಳತೆಗೆ ಸಾಕ್ಷಿಯಾದ ಉತ್ಕಲ್ ವಿಶ್ವವಿದ್ಯಾಲಯ

    ರಾಷ್ಟ್ರಪತಿಗಳ ಸರಳತೆಗೆ ಸಾಕ್ಷಿಯಾದ ಉತ್ಕಲ್ ವಿಶ್ವವಿದ್ಯಾಲಯ

    ಭುವನೇಶ್ವರ: ಸರಳತೆಗೆ ಹೆಸರುವಾಸಿಯಾಗಿರುವ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಇದೀಗ ಶಿಷ್ಟಾಚಾರ ಬದಿಗೊತ್ತಿ ತಮ್ಮ ಸ್ನೇಹಿತನನ್ನು ಮಾತನಾಡಿಸುವ ಮೂಲಕ ಸುದ್ದಿಯಾಗಿದ್ದಾರೆ.

    ಒಡಿಶಾ ಭುವನೇಶ್ವರದ ಉತ್ಕಲ್ ವಿಶ್ವವಿದ್ಯಾಲಯದ ಪ್ಲಾಟಿನಂ ಜ್ಯೂಬಿಲಿ ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ವೀರಭದ್ರ ಸಿಂಗ್ ಅವರು ಕಂಡಿದ್ದಾರೆ. ಈ ವೇಳೆ ತಮ್ಮ ಸ್ನೇಹವನ್ನು ನೆನೆದು, ಶಿಷ್ಟಾಚಾರವನ್ನು ಬದಿಗೊತ್ತಿ ಹತ್ತಿರದಿಂದಲೇ ಮಾತನಾಡಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಪ್ರೇಕ್ಷಕರ ಸಾಲಿನಲ್ಲಿ ಬಿಳಿ ತುರ್ಬಾನ್ ಧರಿಸಿ ಕುಳಿತಿದ್ದ ಸಿಂಗ್ ಅವರನ್ನು ಕೋವಿಂದ್ ಅವರು ಗುರುತಿಸಿದ್ದಾರೆ. ನಂತರ ಸುಮಾರು 12 ವರ್ಷಗಳ ಹಿಂದಿನ ಸ್ನೇಹವನ್ನು ನೆನೆದಿದ್ದಾರೆ. ಆಗ ಕಾರ್ಯಕ್ರಮ ಮುಗಿದ ನಂತರ ವೇದಿಕೆ ಮೇಲಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಿಂಗ್ ಅವರನ್ನು ವೇದಿಕೆ ಮೇಲೆ ಕರೆದಿದ್ದಾರೆ. ನಂತರ ಕೋವಿಂದ್ ಹಾಗೂ ಸಿಂಗ್ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಸಿಂಗ್ ಅವರೊಂದಿಗೆ ಕೋವಿಂದ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಈ ಕುರಿತು ಸಿಂಗ್ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದು, 12 ವರ್ಷಗಳ ನಂತರ ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿಯಾದೆ. ಕೋವಿಂದ್ ಅವರೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ನನಗೆ ಸಿಕ್ಕಿತ್ತು. 2000-2006ರ ನಡುವೆ ನಾವಿಬ್ಬರೂ ರಾಜ್ಯಸಭಾ ಸದಸ್ಯರಾಗಿದ್ದೆವು. ಆ ಸಮಯದಲ್ಲಿ ನಾವಿಬ್ಬರೂ ಎಸ್‍ಸಿ-ಎಸ್‍ಟಿ ಸಮಿತಿಯ ಸದಸ್ಯರಾಗಿದ್ದೆವು. ಕನಿಷ್ಟ ಎರಡು ವರ್ಷಗಳ ಕಾಲ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ ಎಂದು ವಿವರಿಸಿದರು.

    ರಾಷ್ಟ್ರಪತಿಗಳಿಗೆ ಗುಲಾಬಿ ನೀಡಿ ಶುಭ ಕೋರಿದೆ. ಶಿಷ್ಟಾಚಾರದ ಹಿನ್ನೆಲೆ ಹೆಚ್ಚು ಸಮಯ ಕಳೆಯಲಾಗಲಿಲ್ಲ. ರಾಷ್ಟ್ರಪತಿ ಭವನಕ್ಕೆ ಬರುವಂತೆ ಕೋವಿಂದ್ ಆಹ್ವಾನಿಸಿದ್ದಾರೆ ಎಂದು ತಿಳಿಸಿದರು. ಸಿಂಗ್ ಅವರು ಮಾಜಿ ಸಂಸದರಾಗಿದ್ದು, ರಾಜ್ಯದಲ್ಲಿ ಸಚಿವರಾಗಿ ಸಹ ಕೆಲಸ ಮಾಡಿದ್ದಾರೆ. ಉತ್ಕಲ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದು, ಇದೇ ವಿಶ್ವವಿದ್ಯಾಲಯದಲ್ಲಿ 1965 ರಿಂದ 1967ರ ವರೆಗೆ ಅಭ್ಯಾಸ ಮಾಡಿದ್ದಾರೆ.

  • ಪೇಜಾವರಶ್ರೀ ಮಧ್ವಪೀಠವೇರಿ 80 ವರ್ಷ ಪೂರ್ಣ- ರಾಷ್ಟ್ರಪತಿ ಕೋವಿಂದ್, ಉಮಾಭಾರತಿಯಿಂದ ಗುರುವಾರ ಗುರುವಂದನೆ

    ಪೇಜಾವರಶ್ರೀ ಮಧ್ವಪೀಠವೇರಿ 80 ವರ್ಷ ಪೂರ್ಣ- ರಾಷ್ಟ್ರಪತಿ ಕೋವಿಂದ್, ಉಮಾಭಾರತಿಯಿಂದ ಗುರುವಾರ ಗುರುವಂದನೆ

    ಉಡುಪಿ: ಅಷ್ಟಮಠದ ಹಿರಿಯಶ್ರೀಗಳಾದ ಪೇಜಾವರ ಶ್ರೀಗಳು ಮಧ್ವಪೀಠವೇರಿ 80 ವರ್ಷ ಪೂರ್ಣಗೊಂಡಿದ್ದು, ಸ್ವತಃ ರಾಷ್ಟ್ರಪತಿಗಳು ಹಾಗೂ ಶ್ರೀಗಳ ಶಿಷ್ಯೆ ಕೇಂದ್ರ ಸಚಿವೆ ಉಮಾಭಾರತಿಯವರು ಗುರುವಂದನೆ ಮಾಡಲಿದ್ದು ಉಡುಪಿಯಲ್ಲಿ ಕಾರ್ಯಕ್ರಮದ ಸಿದ್ಧತೆ ಜೋರಾಗಿದೆ.

    ಪೇಜಾವರ ಶ್ರೀಗಳು ಬ್ರಾಹ್ಮಣ ಯತಿಯಾದ್ರೂ ದಲಿತ ಕೇರಿಗೆ ಹೋದ ಕ್ರಾಂತಿಕಾರಿ. ಸರ್ವಸಂಘ ಪರಿತ್ಯಾಗಿಯಾದ್ರೂ ರಾಜಕೀಯ ಪಂಡಿತ. ಪ್ರಪಂಚ ಅರಿಯದ ವಯಸ್ಸಿನಲ್ಲಿ ಪೀಠವೇರಿ ಸನ್ಯಾಸಿಯಾದ್ರು ಶ್ರೀ ಪೇಜಾವರ ಶ್ರೀಗಳು. 80 ವರ್ಷದ ಹಿಂದೆ ಇವರ ಹೆಸರು ವೆಂಕಟರಮಣ. ಆಗಿನ್ನೂ ಅವರು 8 ವರ್ಷದ ಬಾಲಕ. ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಪುಟ್ಟ ಬಾಲಕನಿಗೆ ಅದೇನು ಕನಸಿತ್ತೋ, ಮುಂದೇನು ಆಗಬೇಕೆಂಬ ಮನಸ್ಸಿತ್ತೋ ಗೊತ್ತಿಲ್ಲ. ಆದ್ರೆ ಮಧ್ವಾಚಾರ್ಯರಿಂದ ಸ್ಥಾಪಿತವಾದ ಅಷ್ಟಮಠಗಳ ಪೈಕಿ ಒಂದಾಗ ಪೇಜಾವರ ಮಠಕ್ಕೆ ಉತ್ತರಾಧಿಕಾರಿಯಾಗಿ ಧೀಕ್ಷೆ ಕೊಡಲಾಯ್ತು. ಬಳಿಕ ಮಾಣಿ ವೆಂಕಟರಮಣ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರಾದರು.

    ಪೇಜಾವರ ಸ್ವಾಮೀಜಿ ಸನ್ಯಾಸಿಯಾಗಿ 80 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗುರುವಂದನಾ ಕಾರ್ಯಕ್ರಮ ನೆರವೇರುತ್ತಿದೆ. ಆದರಿಂದ ಪೇಜಾವರಶ್ರೀ ಶಿಷ್ಯೆ ಉಮಾಭಾರತಿ ಗುರುವಂದನೆ ಮಾಡಲಿದ್ದಾರೆ. ಡಿಸೆಂಬರ್ 27ರಂದು ನಡೆಯುವ ಕಾರ್ಯಕ್ರಮಕ್ಕೆ ಭಾರತದ ಪ್ರಥಮ ಪ್ರಜೆ ರಾಮನಾಥ ಕೋವಿಂದ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ, ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ ಆಚಾರ್ಯ ಸ್ವಾಮೀಜಿಯವರ ಎಂಬತ್ತನೇ ಸನ್ಯಾಸ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ.

    ಪೇಜಾವರ ಶ್ರೀಗಳಿಗೆ ಈಗ 89 ವಯಸ್ಸು. ಹೆಸರಿಗೆ 89, ಆದ್ರೆ ಶ್ರೀಗಳ ಓಡಾಟ, ಚುರುಕುತನ, ಪೂಜೆ, ಯೋಗ, ಭಾಷಣ, ಪ್ರವಚನ ಕೇಳಿದ್ರೆ ಇನ್ನೂ ಮೂವತ್ತೊಂಬತ್ತು ಅನ್ನಿಸುತ್ತದೆ. ಕಾವಿ ಉಟ್ಟು ಕೇವಲ ಧಾರ್ಮಿಕವಾಗಿ ತೊಡಗಿಸಿಕೊಳ್ಳದೆ ಸಾಮಾಜಿಕ ಚಟುವಟಿಕೆಯಲ್ಲೂ ಪೇಜಾವರಶ್ರೀ ಮುಂಚೂಣಿಯಲ್ಲಿದ್ದಾರೆ. 60ರ ದಶಕದಲ್ಲಿ ದಲಿತ ಕೇರಿಗೆ ಭೇಟಿಕೊಟ್ಟು ಅಸ್ಪೃಶ್ಯತೆಯನ್ನು ಹೋಗಲಾಡಿಸುವ ದಿಟ್ಟ ಹೆಜ್ಜೆಯನ್ನು ಶ್ರೀಗಳು ಇಟ್ಟಿದ್ದರು. ಬ್ರಾಹ್ಮಣರಿಂದ ವಿರೋಧ ಬಂದರೂ, ಲೆಕ್ಕಕ್ಕೆ ತೆಗೆದುಕೊಳ್ಳದೆ ಮುಂದುವರಿದವರು. ಇತ್ತೀಚಿನ ಮಡೆಸ್ನಾನಕ್ಕೆ ಪರಿಹಾರ ನೀಡಿ ಪರ್ಯಾಯ ಸಂದರ್ಭದಲ್ಲಿ ಇಫ್ತಾರ್ ಕೂಟ ಮಾಡಿ ವಿರೋಧ ಕಟ್ಟಿಕೊಂಡ ಶ್ರೀಗಳು, ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸುತ್ತಾ, ಉಡುಪಿ ಕೃಷ್ಣನಿಗೆ ಅತೀಹೆಚ್ಚು ಪೂಜೆ ಮಾಡಿದ ಸಂತ ಎಂಬ ಕೀರ್ತಿಗೂ ಸ್ವಾಮೀಜಿ ಪಾತ್ರವಾಗಿದ್ದಾರೆ. ರಾಮಮಂದಿರ ನಿರ್ಮಾಣ ಆಗಬೇಕೆಂಬ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪೇಜಾವರ ಶ್ರೀಗಳಿಗೆ ಇದೀಗ ತನ್ನ ಶಿಷ್ಯೆ ಹಾಗೂ ದೇಶದ ಮೊದಲ ಪ್ರಜೆಯಿಂದ ಸನ್ಯಾಸದ 80ನೇ ವರ್ಷದ ಸಂದರ್ಭ ಗುರುವಂದನೆಯಲ್ಲಿ ಪಡೆಯಲ್ಲಿದ್ದಾರೆ.

    ಪಲಿಮಾರು ವಿದ್ಯಾಧೀಶತೀರ್ಥ ಸ್ವಾಮೀಜಿ ಅವರು ಮಾತನಾಡಿ, ಹಿರಿಯ ಶ್ರೀಗಳಿಗೆ ನಮ್ಮ ಪರ್ಯಾಯ ಸಂದರ್ಭದಲ್ಲಿ 80ರ ಗುರುವಂದನೆ ನಡೆಯುತ್ತಿರುವುದು ಮನಸ್ಸಿಗೆ ಬಹಳ ಖುಷಿ ಕೊಟ್ಟಿದೆ. ಅವರ ನೂರನೇ ಗುರುವಂದನಾ ಕಾರ್ಯಕ್ರಮ ನೋಡುವ ಅವಕಾಶವನ್ನು ಭಗವಂತ ಕರುಣಿಸಲಿ. ಕೃಷ್ಣಮಠಕ್ಕೆ ರಾಷ್ಟ್ರಪತಿಗಳು ಆಗಮಿಸಲಿದ್ದು ದೇವರ ದರ್ಶನ ಮತ್ತು ಅವರ ಗೌರವಕ್ಕೆ ಸಿದ್ಧತೆ ನಡೆಸಿದ್ದೇವೆ ಎಂದರು.

    ಪೇಜಾವರಶ್ರೀಗಳಿಗೆ ದೇಶಾದ್ಯಂತ ಭಕ್ತರಿದ್ದಾರೆ. ಬಾಬ್ರಿ ಮಸೀದಿ ಧ್ವಂಸ, ಸಂವಿಧಾನ ತಿದ್ದುಪಡಿ ಮುಂತಾದ ಕೆಲ ಘಟನೆಗಳ ನಂತರ ಅವರನ್ನು ಟೀಕಿಸುವವರೂ ಹೆಚ್ಚಿದ್ದಾರೆ. ಒಟ್ಟಿನಲ್ಲಿ ಸನ್ಯಾಸ ಜೀವನದಲ್ಲಿ 80 ವರ್ಷಗಳನ್ನು ಪೂರೈಸಿರುವುದು ಹಾಗೂ ಸಮಾಜದ ಎಲ್ಲಾ ವರ್ಗಗಳನ್ನು ಮುಟ್ಟುವುದು ಸಾಮಾನ್ಯ ವಿಷಯವಲ್ಲ. 1940ರಿಂದ ಪೀಠವನ್ನು ನಿಭಾಯಿಸಿಕೊಂಡು ಬಂದು ಈಗಲೂ ಪ್ರಸಿದ್ಧರಾಗಿರುವುದು ಸುಲಭದ ಮಾತಲ್ಲ ಅನ್ನುವುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯಂಶವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv