Tag: prathima prasad

  • ಬೌದ್ಧ ಧರ್ಮದ ವಿಧಿ-ವಿಧಾನದಂತೆ ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ

    ಬೌದ್ಧ ಧರ್ಮದ ವಿಧಿ-ವಿಧಾನದಂತೆ ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ

    ಮೈಸೂರು: ಅನಾರೋಗ್ಯದಿಂದ ಮೃತಪಟ್ಟ ಸಂಸದ ವಿ.ಶ್ರೀನಿವಾಸ್ ಪ್ರಸಾದ್ (Srinivasa Prasad) ಅವರ ಅಂತ್ಯಕ್ರಿಯೆ ಅಶೋಕಪುರಂನ ಡಾ.ಬಿ.ಆರ್ ಅಂಬೇಡ್ಕರ್ ಟ್ರಸ್ಟ್ ಆವರಣದಲ್ಲಿ ಬೌದ್ಧ ಧರ್ಮದ ವಿದಿ-ವಿಧಾನದಂತೆ ನೆರವೇರಿತು.

    ಅಂತ್ಯಕ್ರಿಯೆ (Srinivasa Prasad Funeral) ವೇಳೆ ಬೆಂಗಳೂರಿನ ಮಹಾಬೋಧಿಯ ಆನಂದ ಬಂತೇಜಿ, ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಕಲ್ಯಾಣಸಿರಿ ಬಂತೇಜಿ ನೇತೃತ್ವದಲ್ಲಿ ವಿಧಿ-ವಿಧಾನಗಳು ನೆರವೇರಿತು. ಈ ವೇಳೆ ಸುಮಾರು 15ಕ್ಕೂ ಹೆಚ್ಚು ಬೌದ್ಧ ಬಿಕ್ಕುಗಳಿಂದ ಪ್ರಾರ್ಥನೆ ಸಲ್ಲಿಸಲಾಯಿತು. ಬೌದ್ಧ ಬಂತೇಜಿಗಳಿಗೆ ವಸ್ತ್ರದಾನ, ಹಣ್ಣುಗಳ ಅರ್ಪಣೆ, ಪುಣ್ಯಾನುಮೋದನೆ ಬಳಿಕ ಕುಟುಂಬಸ್ಥರು ಗೌರವ ಸಲ್ಲಿಸಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದನ್ನೂ ಓದಿ: ಮರೆಯಾದ ನಿಷ್ಕಳಂಕ ರಾಜಕಾರಣಿ – ಸಿಎಂ, ಡಿಸಿಎಂ ಸೇರಿದಂತೆ ಗಣ್ಯರಿಂದ ಶ್ರೀನಿವಾಸ್ ಪ್ರಸಾದ್ ಅಂತಿಮ ದರ್ಶನ

    ಅಂತ್ಯಕ್ರಿಯೆಗೂ ಮುನ್ನ ಅಶೋಕಪುರಂನ ಪ್ರಮುಖ ರಸ್ತೆಗಳಲ್ಲಿ ಮೃತರ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಈ ವೇಳೆ ಸಾವಿರಾರು ಜನ ಸೇರಿದ್ದು, ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿತ್ತು. ಅಂತ್ಯಕ್ರಿಯೆಗೂ ಮುನ್ನ ಸಚಿವ ಮಹದೇವಪ್ಪ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೈಸೂರು – ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ವಡೆಯರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ.

    ಮೈಸೂರಿನ ಅಶೋಕಪುರಂನ ಶ್ರೀನಿವಾಸ ಪ್ರಸಾದ್ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ನಂಜನಗೂಡು ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. ಕೇಂದ್ರ ಮತ್ತು ರಾಜ್ಯದಲ್ಲಿ ಒಮ್ಮೆ ಸಚಿವರಾಗಿ ಕೆಲಸ ಮಾಡಿ ಕಳೆದ ತಿಂಗಳು ರಾಜಕೀಯ ನಿವೃತ್ತಿ ಪಡೆದು ವಿಶ್ರಾಂತಿ ಜೀವನ ಆರಂಭಿಸಿದ್ದರು. ಶ್ರೀನಿವಾಸ್ ಪ್ರಸಾದ್ ಅವರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಇದನ್ನೂ ಓದಿ: ಶ್ರೀನಿವಾಸ್‌ ಪ್ರಸಾದ್‌ ವಿಧಿವಶ – ಪ್ರಭಾವಿ ದಲಿತ ನಾಯಕನ ರಾಜಕೀಯ ಏಳು-ಬೀಳಿನ ಹಾದಿ ಹೇಗಿತ್ತು?

  • ಮಂಗಳವಾರ ಶ್ರೀನಿವಾಸ್‌ ಪ್ರಸಾದ್‌ ಅಂತ್ಯಕ್ರಿಯೆ

    ಮಂಗಳವಾರ ಶ್ರೀನಿವಾಸ್‌ ಪ್ರಸಾದ್‌ ಅಂತ್ಯಕ್ರಿಯೆ

    ಮೈಸೂರು: ಇಂದು ವಿಧಿವಶರಾಗಿರುವ ಶ್ರೀನಿವಾಸ್‌ ಪ್ರಸಾದ್ (Srinivas Prasad) ಅವರ ಅಂತ್ಯಕ್ರಿಯೆ ಮಂಗಳವಾರ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ‌ ಮಗಳು ಪ್ರತಿಮಾ ಪ್ರಸಾದ್‌ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇಂದು ಮಧ್ಯಾಹ್ನ 1 ಗಂಟೆ ತನಕ ಮನೆಯಲ್ಲಿ ಅಂತಿಮ ನಮನ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ನಂತರ ಅಶೋಕಪುರಂನ ಎನ್ ಟಿ ಎಂ ಶಾಲೆ ಆವರಣದಲ್ಲಿ ಅಂತಿಮ ನಮನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

    ಇಂದು ರಾತ್ರಿ ಇಡೀ ಅಂತಿಮ ನಮನಕ್ಕೆ ಅವಕಾಶ ನೀಡಲಾಗುತ್ತದೆ. ನಾಳೆ ಬೆಳಗ್ಗೆ 10 ಗಂಟೆಗೆ ಅಶೋಕಪುರಂ ನಲ್ಲಿ ಮೆರವಣಿಗೆಯ ಬಳಿಕ ಮಧ್ಯಾಹ್ನ 1 ಗಂಟೆ ಗೆ ಅಂತ್ಯಕ್ರಿಯೆ ನಡೆಸುವ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಾಮಾಜಿಕ ನ್ಯಾಯದ ಹರಿಕಾರ ಪ್ರಸಾದ್‌ – ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಹೆಚ್‌ಡಿಡಿ ಸಂತಾಪ

  • ಸಾವಾದ್ರೂ ನಗುನಗುತ್ತಾ ಬೀಳ್ಕೊಡಿ ಅಂತಾ ತಂದೆ ಯಾವಾಗ್ಲೂ ಹೇಳ್ತಾ ಇದ್ರು: ಶ್ರೀನಿವಾಸ್ ಪ್ರಸಾದ್ ಮಗಳು

    ಸಾವಾದ್ರೂ ನಗುನಗುತ್ತಾ ಬೀಳ್ಕೊಡಿ ಅಂತಾ ತಂದೆ ಯಾವಾಗ್ಲೂ ಹೇಳ್ತಾ ಇದ್ರು: ಶ್ರೀನಿವಾಸ್ ಪ್ರಸಾದ್ ಮಗಳು

    – ಮೈಸೂರಿನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಬೆಂಗಳೂರು: ನಮ್ಮ ತಂದೆ ಯಾವಾಗಲೂ ಸಂತೋಷವಾಗಿದ್ರು. ಅವರು ಸಾವಾದ್ರೂ ನಗುನಗುತ್ತಲೇ ಕಳಿಸಿಕೊಡಿ ಅಂತಾ ಹೇಳಿದ್ರು. ಅದೇ ರೀತಿ ಯಾವುದೇ ಅಹಿತಕರ ಘಟನೆಗಳು ಆಗದಂತೆ ನಮ್ಮ ತಂದೆಯನ್ನ ಸಂತೋಷದಿಂದ ಬಿಳ್ಕೋಡೋಣ ಎಂದು ಶ್ರೀನಿವಾಸ್ ಪ್ರಸಾದ್ (V Srinivas Prasad) ಪುತ್ರಿ ಪ್ರತಿಮಾ ಪ್ರಸಾದ್ (Prathima Prasad) ಮನವಿ ಮಾಡಿಕೊಂಡರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ತಂದೆಯ ಆರೋಗ್ಯ ಗಂಭೀರವಾಗಿತ್ತು. ಎಲ್ಲಾ ವೈದ್ಯರು ಅವರನ್ನ ಗುಣಪಡಿಸಲು ಶ್ರಮ ಪಟ್ಟಿದ್ದಾರೆ. ಇವತ್ತು ಪ್ರಯತ್ನ ಕೈಗೂಡದೆ ನಮ್ಮನ್ನು ಅಗಲಿದ್ದಾರೆ. ಇವತ್ತು ಮೈಸೂರಿನ ಜಯಲಕ್ಷ್ಮಿಪುರಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುತ್ತೆ. ಇಡೀ ದಿನ ಅಂತಿಮ ದರ್ಶನ ಮನೆಯಲ್ಲೆ ಇರುವುದಿಲ್ಲ. ಒಂದು ಸಾರ್ವತ್ರಿಕ ಜಾಗ ನಿರ್ಧಾರ ಮಾಡಿ ಅಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತೆ ಎಂದರು.

    ಇಂದು ನುಕಿನ ಜಾವ 1:20 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ಸೋಮವಾರ ಆರೋಗ್ಯ ಏರುಪೇರಾಗಿತ್ತು. ಹಾಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ವಿ. ಆರೋಗ್ಯ ಸುಧಾರಿಸಿದ್ದರಿಂದ ಡಿಸ್ಚಾರ್ಜ್ ಮಾಡಿಸಿದ್ವಿ. ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕರೆದುಕೊಂಡು ಬಂದ್ವಿ. ಅವರಿಗೆ ಹೈಲಿ ಡಯಾಬಿಟಿಸ್ ಸಮಸ್ಯೆ ಇತ್ತು. 11 ವರ್ಷದ ಹಿಂದೆ ಅವರಿಗೆ ರಿನಲ್ ಟ್ರಾನ್ಸ್ ಪ್ಲಾಂಟ್ ಆಗಿತ್ತು. ಅದನ್ನೂ ಫೈಟ್ ಮಾಡಿದ್ದರು. ಆದರೆ ಇಂದು ಅವರನ್ನು ಉಳಿಸಿಕೊಳ್ಳೋದಕ್ಕೆ ಬಹಳ ಪ್ರಯತ್ನವನ್ನ ವೈದ್ಯರು ಮಾಡಿದ್ರು. ಆದರೆ ವಿಧಿ ಹೀಗೆ ಮಾಡಿದೆ ಎಂದು ಹೇಳಿದರು.

    2000 ಇಸವಿಯಿಂದ ಅವರು ಮಣಿಪಾಲ್ ಆಸ್ಪತ್ರೆಯಲ್ಲೇ ಏನೇ ಅದ್ರೂ ಚಿಕಿತ್ಸೆ ಪಡೆಯುತ್ತಿದ್ರು. ಆಗಿನಿಂದ ಈ ಆಸ್ಪತ್ರೆ ಮೇಲೆ ಅವ್ರಿಗೆ ಬಹಳ ನಂಬಿಕೆ ಇತ್ತು ಎಂದ ಅವರು, ಆಸ್ಪತ್ರೆಯ ಎಲ್ಲ ವೈದ್ಯರಿಗೂ ಧನ್ಯವಾದಗಳನ್ನು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ

    ಇತ್ತೀಚೆಗೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ರು. ಆದ್ರೆ ತಮ್ಮ ಜರ್ನಿಯಿಂದಲೇ ನಿವೃತ್ತಿ ತೆಗೆದುಕೊಳ್ಳುತ್ತಾರೆ ಅಂದುಕೊಂಡಿರಲಿಲ್ಲ. ಇದು ಬಹಳ ದುಃಖಕರವಾದ ವಿಷಯ, ಇದು ಕರ್ನಾಟಕ ಜನತೆಗೆ ಬಿಗ್ ಲಾಸ್. ಎಲ್ಲಾ ಜನಾಂಗದ ನಾಯಕರಾಗಿದ್ರು ಎಂದು ತಿಳಿಸಿದರು.